Sunday, March 10, 2024

ಸೇತುವೆಯಂತಹ ಸಿನಿಮಾಗಳಿಗೆ ಹಾಕಿದ ನಾಂದಿ 1964 (ಅಣ್ಣಾವ್ರ ಚಿತ್ರ ೫೭/೨೦೭)

ಮಸಾಲೆ ಚಿತ್ರಗಳಲ್ಲಿ ಸಂದೇಶ ಇರೋಲ್ಲ.. ಸಂದೇಶವುಳ್ಳ ಸಿನೆಮಾಗಳಲ್ಲಿ ಮಸಾಲೆ ಇರೋಲ್ಲ ಅಂತ ಇನ್ನೂ ಮಾತುಗಳು ಆರಂಭವಾಗದ ಅಥವ ಅಷ್ಟೊಂದು ಚಾಲ್ತಿಯಲ್ಲಿರದ ಮಾತುಗಳ ಕಾಲವದು.. ಒಂದು ಸಂಕೀರ್ಣ ಸಮಸ್ಯೆಯನ್ನು ಒಂದು ಚಿತ್ರರೂಪದಲ್ಲಿ ತರಬಹುದು.. ಜೊತೆಯಲ್ಲಿ ಎಲ್ಲರಿಗೂ ನಿಲುಕುವ ಸಿನಿಮಾ ಮಾಡಬಹುದು ಎಂದು ತೋರಿಸಿದ ಅಥವ ಅಂತಹ ಸಿನಿಮಾಗಳಿಗೆ ನಾಂದಿ ಹಾಡಿದ ಚಿತ್ರ "ನಾಂದಿ"

ಕಥೆ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದು ಎನ್ ಎಲ್ ಲಕ್ಷ್ಮೀನಾರಾಯಣ.. ಆರ್ ಎನ್ ಜಯಗೋಪಾಲ್ ಶ್ರದ್ದೆಯಿಂದ ಸಂಭಾಷಣೆ ಮತ್ತು ಹಾಡುಗಳನ್ನು ರಚಿಸಿದ್ದಾರೆ.. ಮತ್ತು ಆರ್ ಎನ್ ಕೃಷ್ಣಪ್ರಸಾದ್ ಛಾಯಾಗ್ರಹಣ ಮಾಡಿದ್ದಾರೆ. ಶ್ರವಣ ಸಮಸ್ಯೆ ಇರುವ ಕಥಾವಸ್ತುವಿಗೆ ಸಂಗೀತ ಬೇಕೇ ಎಂದಾಗ ಹೌದು ಬೇಕು ಎಂದು ತಮ್ಮ ಪ್ರತಿಭೆಯನ್ನು ಒರೆ ಹಚ್ಚಿ ಸಂಗೀತ ನೀಡಿರುವುದು ವಿಜಯಭಾಸ್ಕರ್. 

ಶ್ರೀ ಭಾರತೀ ಚಿತ್ರ ಲಾಂಛನದಲ್ಲಿ ವಾದಿರಾಜ್ ಜವಾಹರ್ ನಿರ್ಮಾಪಕರು.. ಈ ರೀತಿಯ ಚಿತ್ರಗಳನ್ನು ನಿರ್ಮಾಣ ಮಾಡಲು ಧೈರ್ಯ ಬೇಕು.. ಆ ಧೈರ್ಯ ಮಾಡಿದ್ದಾರೆ..  ಮತ್ತು ಯಶಸ್ವೀ ಕೂಡ ಆಗಿದ್ದಾರೆ. 

ಈ ಚಿತ್ರ ಅಂತರ ರಾಷ್ಟ್ರೀಯ ಚಲನಚಿತ್ರೋತ್ಸವಗಳಲ್ಲಿ ಪ್ರದರ್ಶನಗೊಂಡ ಚಿತ್ರ ಎಂಬ ಹೆಗ್ಗಳಿಕೆ  ನಿರ್ಮಾಪಕ ನಿರ್ದೇಶಕರ ಪರಿಶ್ರಮಕ್ಕೆ ಸಾರ್ಥಕತೆ ಕೊಟ್ಟಿದೆ. 

ಆ ಕಾಲದ ಪ್ರಸಿದ್ಧ ನಟನಟಿಯರು ಶ್ರದ್ದೆಯಿಂದ ನಟಿಸಿದ ಚಿತ್ರವಿದು. ರಾಜಕುಮಾರ್, ಕಲ್ಪನಾ, ದಿನೇಶ್, ಬಾಲಕೃಷ್ಣ, ಜಯಶ್ರೀ , ಸೋರಟ್ ಅಶ್ವಥ್, ಹರಿಣಿ, ಗಣಪತಿ ಭಟ್, ಹನುಮಂತಾಚಾರ್, ಆರ್ ಟಿ ರಾಮ, ಶಾಂತಮ್ಮ, ಉದಯಕುಮಾರ್ ಅಭಿನಯಸಿದ್ದಾರೆ. 

ರಾಜಕುಮಾರ್ 


ಸೋರಟ್ ಅಶ್ವಥ್ 

ಬಾಲಣ್ಣ  ದಿನೇಶ್ 

ಬಾಲಣ್ಣ 

ಹರಿಣಿ 

ಜಯಶ್ರೀ 

ಕಲ್ಪನಾ 


ಸೋರಟ್ ಅಶ್ವಥ್ ಮತ್ತು ಶಾಂತಮ್ಮ 

ಉದಯಕುಮಾರ್ 

ನಿರ್ಮಾಪಕ ವಾದಿರಾಜ್ 


ಸರಳ ಚಿತ್ರಕತೆ.. ಆದರೆ ಅದಕ್ಕೆ ಕೊಟ್ಟಿರುವ ಮತ್ತು ನಿರೂಪಣೆ ವಿಶಿಷ್ಟ. ಸರಕಾರಿ ಶಾಲೆಯ ಅಧ್ಯಾಪಕ ವರ್ಗವಾಗಿ ತನ್ನ ಮಡದಿಯ ಜೊತೆ ಬರುತ್ತಾನೆ.. ಆ ಊರಿನ ನೆರೆಹೊರೆಯವರು ಮತ್ತು ಆತನ ಶಾಲೆಯ ಸಹೋದ್ಯೋಗಿಗಳು ಸಂಸಾರ ನೆಲೆಗೊಳ್ಳಲು ಸಹಾಯಮಾಡುತ್ತಾರೆ. 

ಪತಿಪತ್ನಿಯರ ಸಂಸಾರ ಚೆನ್ನಾಗಿರುತ್ತೆ.. ಹೆಂಡತಿ ಗರ್ಭ ಧರಿಸಿ.. ಮಗುವನ್ನು ಹೆತ್ತು ಅಸುನೀಗುತ್ತಾಳೆ. ಮಗುವನ್ನು ನೋಡಿಕೊಳ್ಳೋಕೆ ಪಕ್ಕದ ಮನೆಯ ಒಡತಿ ಸಹಾಯ ಮಾಡುತ್ತಿರುತ್ತಾರೆ.. ಆದರೆ ಅವರ ಯಜಮಾನರಿಗೆ ಬೇರೆ ಊರಿಗೆ ವರ್ಗವಾದದ್ದರಿಂದ ವಿಧಿಯಿಲ್ಲದೇ ಮಗುವನ್ನು ನೋಡಿಕೊಳ್ಳಲು ಮಾತು ಆಡಲು ಬಾರದ.. ಕಿವಿ ಕೇಳದ, ಮದುವೆಯಾಗದ ತರುಣಿಯನ್ನು ಮದುವೆ ಮಾಡಿಕೊಳ್ಳುತ್ತಾರೆ. ಆದರೆ ವಿಧಿ ಅಲ್ಲೂ ಆಟವಾಗುತ್ತದೆ.. 

ಕಿವಿ ಕೇಳದ ಮಡದಿ ಮಗುವನ್ನು ಶ್ರದ್ದೆಯಿಂದ ನೋಡಿಕೊಳ್ಳುತ್ತಿದ್ದರು, ಮನೆಯಲ್ಲಿ ಅಪಘಾತವಾಗಿ ಮಗು ಉರಿಯುವ ಬೆಂಕಿಯಲ್ಲಿ ಸಿಕ್ಕಿ ಸತ್ತು ಹೋಗುತ್ತದೆ. ಇದು ಆಕೆಯ ಮನಸ್ಸಿಗೆ ಬಹಳ ಘಾಸಿ ಮಾಡುತ್ತದೆ.. ಮತ್ತೆ ಬದುಕು ಮರಳಿ ಹಾದಿಗೆ ಬರುತ್ತದೆ.. ಆಕೆ ಗರ್ಭಿಣಿಯಾಗಿ ಮಗುವಿಗೆ ಜನನ ನೀಡುತ್ತಾಳೆ.. ಮಗುವಿಗೆ ಶ್ರವಣ ಸಮಸ್ಯೆ ಇರುವುದಿಲ್ಲ.. ಆದರೆ ವಿಪರೀತ ಜ್ವರ ಬಂದು.. ಆ ಜ್ವರದ ತಾಪಕ್ಕೆ ಮಗುವಿಗೆ ಶ್ರವಣ ಸಮಸ್ಯೆ ಬರುತ್ತದೆ.. 

ಆಗ ಆತನ ಅಧ್ಯಾಪಕ ಮಿತ್ರರ ಸಲಹೆಯಂತೆ ಪಟ್ಟಣದಲ್ಲಿ ಕಿವುಡು ಮೂಗರ ಶಾಲೆಯಲ್ಲಿ ತರಭೇತಿ ಪಡೆದು.. ಅದನ್ನು ತನ್ನ ಮಡದಿ ಮತ್ತು ಮಗುವಿನ ಮೇಲೆ ಪ್ರಯೋಗ ಮಾಡಿ.. ಸಫಲನಾಗುತ್ತಾನೆ.. ಮತ್ತೆ ತುಟಿ ಚಾಲನೆಯಿಂದ ಮಾತನ್ನು ಗ್ರಹಿಸಿ ಮಾತಾಡಬಹುದು ಎಂಬ ಪ್ರಯತ್ನದಲ್ಲಿ ಯಶಸ್ವಿಯಾಗುತ್ತಾನೆ

ಈ ಕಥೆಯನ್ನು ಒಂದು ದೃಶ್ಯಕಾವ್ಯದ ಮೂಲಕ ಕಟ್ಟಿ ಕೊಟ್ಟಿದ್ದಾರೆ ನಿರ್ದೇಶಕರು. 

ರಾಜಕುಮಾರ್ ಇಲ್ಲಿ ಅತ್ಯಂತ ಸಂಯಮ ಪಾತ್ರದಲ್ಲಿ ಅದ್ಭುತವಾಗಿ ನಟಿಸಿದ್ದಾರೆ ಅನ್ನೋದಕ್ಕಿಂತ ತಾವೇ ಪಾತ್ರವಾಗಿದ್ದಾರೆ.. ಪ್ರತಿಯೊಂದು ದೃಶ್ಯವನ್ನು ಅರೆದು ಕುಡಿದಂತೆ ಅಭಿನಯಿಸಿರುವ ಅವರ ಪ್ರತಿಭೆಗೆ ಎಷ್ಟು ಹೊಗಳಿಕೆ ಸಲ್ಲಿಸಿದರು ಕಡಿಮೆಯೇ.. ಕಚ್ಚೆ ಪಂಚೆ, ಕೋಟು ಪೇಟದಲ್ಲಿ ಸುಂದರವಾಗಿ ಕಾಣುವ ಅವರು.. ಪಟ್ಟಣದ ದಿರಿಸಿನಲ್ಲೂ ಕೂಡ ಅಷ್ಟೇ ಮುದ್ದಾಗಿ ಕಾಣುತ್ತಾರೆ. 

ತನ್ನ ಮಗು ಬೆಂಕಿ ಅಪಘಾತದಲ್ಲಿ ಸತ್ತು ಹೋಗಿದೆ.. ಅದಕ್ಕೆ ಕಾರಣ ತನ್ನ ಕಿವಿ ಕೇಳದ ಮಡದಿ ಎಂದು ಗೊತ್ತಾದಾಗ ಅವರ ಅಭಿನಯ ಸೊಗಸು. 

ಮಡದಿಗೆ ಮತ್ತು ಮಗುವಿಗೆ ಪಾಠ ಹೇಳಿಕೊಡುವಾಗಿನ ಅವರ ಶ್ರದ್ಧೆ ಇಷ್ಟವಾಗುತ್ತದೆ.. ಹಾಡೊಂದ ಹಾಡುವೆ ನೀ ಕೇಳು ಮಗುವೇ ಅದ್ಭುತ ಅಭಿನಯ ಅವರದ್ದು. 

ಬಾಲಣ್ಣ ಇಲ್ಲಿ ಅಂತಹ ಗಮನಾರ್ಹ ಪಾತ್ರವಲ್ಲದಿದ್ದರೂ ಐದು ರೂಪಾಯಿ ಕೊಡಿ ಅಂತ ತನ್ನ ಸಹೋದ್ಯೋಗಿಗಳ ಬಳಿ ಕೇಳುವ ದೃಶ್ಯದಲ್ಲಿ ಇಷ್ಟವಾಗುತ್ತಾರೆ. ತಮ್ಮ ಕಷ್ಟ ಕಾರ್ಪಣ್ಯಗಳನ್ನು ಹೇಳಿಕೊಳ್ಳುತ್ತಾ, ತಮಗೆ ತೋಚಿದ ರೀತಿಯಲ್ಲಿ ಪರಿಹಾರ ಹೇಳುತ್ತಾ ಹೋಗುವ ಅವರ ಅಭಿನಯ ಸೊಗಸು.. ಶಾಲೆಯ ಮಾಸ್ತರಾಗಿ ತರಗತಿಯಲ್ಲಿ ನಿದ್ದೆ ಹೊಡೆಯುತ್ತಾ ಬೇಜವಾಬ್ಧಾರಿತನದಿಂದ ಮಾತಾಡುವ ಅವರ ಅಭಿನಯ ಸೊಗಸು. 

ನಾಯಕಿಯ ತಂದೆಯಾಗಿ ಕೆಲವು ದೃಶ್ಯಗಳಲ್ಲಿ ಕಾಣುವ ಸೋರಟ್ ಅಶ್ವಥ್.. ಆಕೆಯ ಮಡದಿ ಶಾಂತಮ್ಮ.. 

ಸಹೋದ್ಯೋಗಿಯಾಗಿ ಮತ್ತು ಕಿವುಡು ಮೂಗರ ಶಾಲೆಯ ಬಗ್ಗೆ ಮಾಹಿತಿ ಕೊಡುವ ಪಾತ್ರದಲ್ಲಿ ದಿನೇಶ್ ಈ ಚಿತ್ರದಿಂದ ಕರುನಾಡ ಚಿತ್ರರಂಗಕ್ಕೆ ಕಾಲಿಟ್ಟಿದ್ದಾರೆ. 

ಉದಯಕುಮಾರ್ ಅತಿಥಿ ಪಾತ್ರದಲ್ಲಿ ಬಂದು ಹೋಗುತ್ತಾರೆ. ಹಾಗೆಯೇ ನೆರೆಹೊರೆಯ ಗಯ್ಯಾಳಿಯಾಗಿ ಆರ್ ಟಿ ರಮ, ಸಹೋದ್ಯೋಗಿಗಳಾಗಿ ಹನುಮಂತಾಚಾರ್, ಗಣಪತಿ ಭಟ್ ಗಮನಸೆಳೆಯುತ್ತಾರೆ. 

ಮುಖ್ಯ ಪಾತ್ರ ಮಡದಿ ಮಗುವನ್ನು ಬಿಟ್ಟು ಹೋದಾಗ ನೆರೆಹೊರೆಯವರಾಗಿ ಮಗುವನ್ನು ನೋಡಿಕೊಳ್ಳುವ ಹಾಗೆ ಇನ್ನೊಂದು ಮದುವೆ ಮಾಡಿಕೊಳ್ಳಿ ಎಂದು ಸಲಹೆ ನೀಡುವ ಪಾತ್ರದಲ್ಲಿ ಜಯಶ್ರೀ ಇಷ್ಟವಾಗುತ್ತಾರೆ. 

ಎರಡು ಪಾತ್ರ.. ನಾಯಕನ ಬದುಕಿನ ತಿರುವಿಗೆ ಕಾರಣವಾಗುವ ಪಾತ್ರಗಳು ಹರಿಣಿ ಮತ್ತು ಕಲ್ಪನಾ. 

ಚಿತ್ರದ ಮೊದಲ ಭಾಗದಲ್ಲಿ ಕಲ್ಪನಾ ಕಥೆಯ ಓಘಕ್ಕೆ ತಕ್ಕ ಅಭಿನಯ ನೀಡಿದ್ದಾರೆ.. ವೀಣೆ ನುಡಿಸುವಾಗ.. ನಾಯಕ ನಾಯಕಿಯ ಚಿತ್ರ ತೆಗೆಯಲು ಕ್ಯಾಮೆರಾ ತೆಗೆದಾಗ ಕೊಡುವ ಭಂಗಿ, ತನ್ನ ಮನೆಯನ್ನು ಸಜ್ಜುಗೊಳಿಸುವಾಗ ಅವರ ಅಭಿನಯ ಸೊಗಸು 

ಚಿತ್ರದ ಎರಡನೇ ಭಾಗದಲ್ಲಿ ಮಾತನಾಡದ, ಕಿವಿ ಕೇಳದ ಪಾತ್ರವಾಗಿ ಹರಿಣಿ ಭಾವಾಭಿನಯ ಸೊಗಸಾಗಿದೆ. ಮಾತನಾಡದ ಪಾತ್ರವಾಗಿದ್ದರಿಂದ ಮುಖಾಭಿನಯವೇ, ಭಾವಾಭಿನಯವೇ ಪ್ರಮುಖವಾಗಿರುವುದರಿಂದ ಆಕೆಯ ಅಭಿನಯ ಸೊಗಸಾಗಿದೆ. 

ಸಂಗೀತ ಈ ಚಿತ್ರದ ಆತ್ಮ ಅನ್ನಬಹುದು.. ಪ್ರತಿ ದೃಶ್ಯಕ್ಕೂ ವಿಜಯಭಾಸ್ಕರ್ ಅವರ ಸಂಗೀತ, ಮತ್ತು ಹಿನ್ನೆಲೆ ಸಂಗೀತ ಅತಿ ಅದ್ಭುತವಾಗಿದೆ. ಸಿನೆಮಾದ ದೃಶ್ಯಕ್ಕೂ ನೀಡಿರುವ ಹಾಡಿನ ಸಂಗೀತಕ್ಕೂ ವಿಭಿನ್ನವಾಗಿ ನಿಲ್ಲುತ್ತದೆ.. ಅನೇಕ ದೃಶ್ಯಗಳನ್ನು ತಮ್ಮ ಅದ್ಭುತ ಸಂಗೀತದ ಕ್ರೀಯಾಶೀಲತೆಯಲ್ಲಿ ಮೇಲಕ್ಕೆ ಏರಿಸಿದ್ದಾರೆ.  ಅದರ ಒಂದು ಉದಾಹರಣೆ ಕಿವಿ ಕೇಳದ ಹರಿಣಿ ಮನೆಯಲ್ಲಿನ ವೀಣೆಯನ್ನು ಮೀಟುವಾಗ ಅಲ್ಲಿ ನಿಶ್ಯಬ್ಧವಿದೆ . ಹರಿಣಿಗೆ ಕಿವಿ ಕೇಳದೆ ಇದ್ದರೂ, ವೀನೆಯನ್ನು ಮೀಟಿದಾಗ ಆ ಕಂಪನದ ಅನುಭವಾಗುತ್ತೆ, ಆದರೆ ಶಬ್ದ ಕೇಳಿಸದೇ ಅವರ ಮುಖಾಭಿನಯ ಅದ್ಭುತ.  ಪಕ್ಕದ ಕೋಣೆಯಲ್ಲಿನ ರಾಜಕುಮಾರ್ ಅವರಿಗೆ ವೀಣೆಯ ಸದ್ದು ಕೇಳಿಸುತ್ತದೆ.. ಆದರೆ ಮತ್ತೆ ಹರಿಣಿಯನ್ನು ತೋರಿಸಿದಾಗ ಅಲ್ಲಿ ರಾಜಕುಮಾರ್ ಇರುತ್ತಾರೆ ಆಗ ವೀಣೆ ಸದ್ದು ಕೇಳುತ್ತದೆ. ಕ್ರಿಯಾಶೀಲತೆ ವಿಜಯಭಾಸ್ಕರ್ ಅವರ ಪ್ರತಿಭೆ ಸೂಪರ್ ಎನಿಸುತ್ತದೆ. 

ಹಾಡುಗಳು ಸೊಗಸಾಗಿವೆ 
೧.  ನಮ್ಮ ತಾಯಿ ಭಾರತಿ - ಪಿ ಬಿ ಶ್ರೀನಿವಾಸ್ 
೨. ಚಂದ್ರಮುಖಿ ಪ್ರಾಣಸಖಿ - ಎಸ್ ಜಾನಕೀ, ಬೆಂಗಳೂರು ಲತಾ 
೩. ಹಾಡೊಂದ ಹಾಡುವೆ - ಪಿ ಬಿ ಶ್ರೀನಿವಾಸ್ 
೪. ಉಡುಗೊರೆಯೊಂದ ತಂದ - ಎಸ್ ಜಾನಕೀ
೫. ಸತ್ಯಕೆ ಎಂದಿಗೂ ಜಯವೆಂಬ - ಪಿ ಬಿ ಶ್ರೀನಿವಾಸ್, ಎಸ್ ಜಾನಕೀ
೬. ನಮ್ಮ ಪಾಪ ಮುದ್ದು ಪಾಪ - ಎಲ್ ಆರ್ ಈಶ್ವರಿ 

ಇಡೀ ಚಿತ್ರದ ಕಪ್ತಾನ ನಿರ್ದೇಶಕರು ಎನ್ ಎಲ್ ಲಕ್ಹ್ಮೀನಾರಾಯಣ .. ಅವರ ಪರಿಶ್ರಮ ಪ್ರತಿ ದೃಶ್ಯದಲ್ಲೂ ಅವರ ಕಲಾತ್ಮಕತೆ.. ಇಡೀ ಚಿತ್ರತಂಡವನ್ನು ಸಮರ್ಥವಾಗಿ ದುಡಿಸಿಕೊಂಡು ಸಾರ್ಥಕ ಚಿತ್ರವನ್ನು ನೀಡಿದ್ದಾರೆ. 

ಮತ್ತೊಂದು ಚಿತ್ರದ ಮೂಲಕ ಬರುವೆ.. 

Saturday, February 17, 2024

ಅನ್ನಪೂರ್ಣೇಶ್ವರಿಯಂತಹ ಅನ್ನಪೂರ್ಣ (1964 (ಅಣ್ಣಾವ್ರ ಚಿತ್ರ ೫೬/೨೦೭)

ಕರುನಾಡು ಚಿತ್ರರಂಗದ ಅಷ್ಟೇ ಏಕೆ  ದಕ್ಷಿಣ ಭಾರತ ಚಿತ್ರರಂಗದ ಅಮ್ಮ  ಎಂದೇ ಅಷ್ಟರ ಹೊತ್ತಿಗೆ ಖ್ಯಾತರಾಗಿದ್ದ ಪಂಡರಿಬಾಯಿ  ಅವರ ಪಾಂಡುರಂಗ ಪ್ರೊಡಕ್ಷನ್ಸ್ ಅವರ ಲಾಂಛನದಲ್ಲಿ ತಯಾರಾದ  ಚಿತ್ರವಿದು. ತಮಿಳು ಸಿನಿಮಾದ ಕನ್ನಡ ಅವತರಣಿಕೆಯಾಗಿದ್ದ ಈ ಸಿನೆಮಾದ ವಿಶೇಷತೆ  ಬಾಲಕೃಷ್ಣ ಅವರ ಅತ್ಯದ್ಭುತ ಅಭಿನಯ. ಕಿರುಚಾಡದೆ, ಕೂಗಾಡದೆ ಖಳ ಛಾಯೆ ಹೊತ್ತು ಅಭಿನಯಿಸಬಹುದು ಎಂದು ತೋರಿಸಿದ್ದಾರೆ . 


ಅಜಾಗರೂಕತೆಯಿಂದ ಸಿಡಿದ ಬಂದೂಕಿನ ಗುಂಡು ಯಾರಿಗೂ ಹಾನಿ ಮಾಡದಿದ್ದರೂ, ಅದರ ಲಾಭ ಪಡೆದು ಬಂದೂಕು ಹೊಂದಿದ್ದವನನ್ನು ಕಾಡಿಸಿ ಪೀಡಿಸಿ ಹಣ ಸುಲಿಯುವ ಪಾತ್ರ.  ದೃಶ್ಯದಲ್ಲಿಯೂ ಸಿಗರೇಟಿನ ಧೂಮ ಹೊರಹಾಕುತ್ತಾ ತುಸುವೇ ನಗುತ್ತಾ ಆದರೆ ತಾನು ಮಾಡಬೇಕಾದ ಕೆಲಸ, ತಾನು ಆಡಬೇಕಾದ ಮಾತನ್ನು ನಾಟಕೀಯವಾಗಿ ಮಾತಾಡುತ್ತಾ ಕಾಡಿಸಿ ಪೀಡಿಸುವುದೇ ಹಣಗಳಿಸುವ ಹಾದಿ, ಬದುಕುವ ದಾರಿ ದಾರಿ ಎಂದು ನಂಬಿ ಬದುಕುವ ಅವರ ಪಾತ್ರಾಭಿನಯ ಅದ್ಭುತ. 

ಬಾಲಕೃಷ್ಣ  ಇಷ್ಟವಾಗುತ್ತಾರೆ ಏಕೆ ಎಂದು ಕೇಳಿದರೆ ಅವರ ನೂರಾರು ಚಿತ್ರಗಳನ್ನು ಎಳೆ ಎಳೆಯಾಗಿ ಬಿಡಿಸಿ ಹೇಳುವ  ಚಿತ್ರಗಳಲ್ಲಿ ಇದು ಒಂದು

ಚಿತ್ರದ ನಿರ್ಮಾಪಕಿ ತಾನೇ ಆಗಿದ್ದರೂ ಉಳಿದವರ ಪಾತ್ರ ಪೋಷಣೆಗೆ ಅಗತ್ಯವಿರುವಂತೆ ಚಿತ್ರಕತೆಯಲ್ಲಿ ಸ್ಥಳ ಕೊಟ್ಟಿರುವ ಪಂಡರಿಬಾಯಿ ಅವರ ಮನಕ್ಕೆ ಒಂದು ಸಲಾಂ. 


ಅಶ್ವಥ್ ಹಾಗೂ ಪಂಡರಿಬಾಯಿಯವರ ಅಭಿನಯ ಈ ಚಿತ್ರದ ಹೈಲೈಟ್. ಸಂಯಮ ಪಾತ್ರಧಾರಿಯಾಗಿ, ನಂತರ ಚಿತ್ರ ಮುಂದುವರೆದಂತೆ ಅದಕ್ಕೆ ತಕ್ಕ ಹಾಗೆ ಅಭಿನಯ ನೀಡಿರುವ ಈ ಕಲಾವಿದರು ಕರುನಾಡ ಚಿತ್ರರಂಗದ ಅತಿ ಉತ್ತಮ ಪೋಷಕ ಪಾತ್ರಧಾರಿಗಳು. 


ಅಶ್ವಥ್ ಆ ಸೂಟುಬೂಟುಗಳಲ್ಲಿ ಮುದ್ದಾಗಿ ಕಾಣುತ್ತಾರೆ . ಸಂಭಾಷಣೆ ಹೇಳುವ ವೈಖರಿ, ಅದಕ್ಕೆ ಬೇಕಾದ ಮುಖಭಾವ, ತಾನು ಸೋತೆ ಎಂದು ತಿಳಿದಾಗ ಅವರ ಅಭಿನಯ ಸೊಗಸು. 

ಪಂಡರಿಬಾಯಿ ಇಡೀ ಚಿತ್ರವನ್ನು  ಹೆಗಲ ಮೇಲೆ ಹೊತ್ತು ನಿಂತಿದ್ದಾರೆ. ಕತೆ ಅವರ ಪಾತ್ರದ ಪಾತ್ರದ ಸುತ್ತಲೇ ಸುತ್ತುವುದರಿಂದ ಸಿನೆಮಾದ ಉದ್ದಕ್ಕೂ ಅವರು ಕಾಣಸಿಗುತ್ತಾರೆ. ಬದಲಾಗುವ ವಯೋಮಾನಕ್ಕೆ ತಕ್ಕಂತೆ ಅಭಿನಯವನ್ನು ಒಗ್ಗಿಸಿಕೊಂಡಿದ್ದಾರೆ.  ಪ್ರತಿ ಮಾತುಗಳನ್ನು ಅಳೆದು ತೂಗಿ ಮಾತಾಡುವ ಶೈಲಿ ಸೊಗಸು.     






ಉಳಿದಂತೆ ಅತಿಥಿ ಪಾತ್ರದಲ್ಲಿ ಕಲ್ಯಾಣ್  ಕುಮಾರ್, ಕಥೆಗೆ ಮುಖ್ಯ ತಿರುವು ಕೊಡುವ ಬಾಲಕೃಷ್ಣ ಅವರ ಸುಳಿಯಲ್ಲಿ  ಹಾಕಿಕೊಂಡು ಚಿತ್ರ ಕಥೆಗೆ ಮುಖ್ಯ ತಿರುವುದು ಕೊಡುವ ರತ್ನಾಕರ್ ಪಾತ್ರ. ಆರ್ ಟಿ ರಮಾ  ಪುಟ್ಟ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಾರೆ. 

ಆರ್ ನಾಗೇಂದ್ರ ರಾಯರು, ರಮಾದೇವಿ, ವಿ ನಾಗಯ್ಯ, ಮೈನಾವತಿ  ಮುಖ್ಯ ಪಾತ್ರದಲ್ಲಿ ಕಾಣುತ್ತಾರೆ. 

ಹಳ್ಳಿಯಲ್ಲಿ ಸಾಗುವ ಬಸ್ಸು ಅಂಕು  ಡೊಂಕು ರಸ್ತೆಗಳನ್ನು ದಾಟುವ ತನಕ ಮೆಲ್ಲಗೆ ಸಾಗುತ್ತ ಮುಖ್ಯ ಹೆದ್ದಾರಿಗೆ ಬಂದಾಗ ಬಸ್ಸು ತನ್ನ ವೇಗವನ್ನು ಹೆಚ್ಚಿಸಿಕೊಳ್ಳುವಂತೆ ವಿರಾಮದ ನಂತರದ  ನಿಮಿಷಗಳ ತನಕ ಚಿತ್ರಕತೆ ಆರಾಮಾಗಿ ಸಾಗುತ್ತಿರುತ್ತದೆ. ಮುಖ್ಯ ನಾಯಕನ ಪ್ರವೇಶ ಆಗೋದು  ಒಂದೂವರೆ ಘಂಟೆ ಆದಮೇಲೆ. ಆಗ ಬರುವ ರಾಜಕುಮಾರ್ ಚಿತ್ರದ ವೇಗವನ್ನು ಹೆಚ್ಚಿಸಿ ತಮ್ಮ ಮೇಲೆ ಚಿತ್ರವನ್ನು ಎಳೆದುಕೊಳ್ಳುವಂಥಹ ಅಭಿನಯ ನೀಡಿದ್ದಾರೆ. 




"ಮೆಲ್ಲ ಮೆಲ್ಲನೆ ಬಂದನೆ ಗೋಪಮ್ಮ ಕೇಳೇ" ಎನ್ನುವ ಎನ್ನುವ ಹಾಡಿಗೆ ಅವರು ಮಾಡುವ ಅಭಿನಯ ಸೊಗಸಾಗಿದೆ. ಪರದೇಶದಲ್ಲಿ ಓದಿ ಬಂದು, ನಂತರ ತನ್ನ ಅಪ್ಪ ಅಮ್ಮ ನೋಡಿದ ಹುಡುಗಿಯನ್ನು ಒಪ್ಪಿಕೊಂಡು ಹಾಡಿ  ಕುಣಿದಾಡುವ ದೃಶ್ಯಗಳು ಸುಂದರ. ಅಷ್ಟರ ಹೊತ್ತಿಗೆ ಸುಮಾರು  ಐವತ್ತಕ್ಕೂ ಹೆಚ್ಚು ಸಿನೆಮಾಗಳಲ್ಲಿ ನಾಯಕನಾಗಿ ನಟಿಸಿದ್ದರೂ, ಈ ಸಿನಿಮಾದಲ್ಲಿ ಭಾಗಶಃ ಉಪನಾಯಕನ ಸ್ಥಾನವಿದ್ದರೂ ಯಾವುದೇ ಹಮ್ಮು ಬಿಮ್ಮು ಇಲ್ಲದೆ ಅಭಿನಯ ನೀಡಿದ್ದಾರೆ. ರಾಜಕುಮಾರ್ ಇಷ್ಟವಾಗೋದು ಇದಕ್ಕಾಗಿಯೇ. ಚಿತ್ರದಲ್ಲಿ ತಮ್ಮ ಪಾತ್ರಕ್ಕೆ ಪ್ರಾಮುಖ್ಯತೆ ಇರಲಿ ಬಿಡಲಿ ತನಗೆ ನೀಡಿರುವ ಪಾತ್ರ, ಅದರ ಪೋಷಣೆ ಅಷ್ಟೇ ಅವರ ತಲೆಯಲ್ಲಿ ಕೂತಿರುತ್ತೆ ಅನ್ನೋದಕ್ಕೆ ಈ ಚಿತ್ರ ಉದಾಹರಣೆ. 

ಚಿ ಉದಯಶಂಕರ್ ಈ ಚಿತ್ರದ ಎಲ್ಲಾ ಹಾಡುಗಳನ್ನು ರಚಿಸಿದ್ದಾರೆ. ಅವರ ತಂದೆ ಚಿ ಸದಾಶಿವಯ್ಯ ಸಂಭಾಷಣೆ ಒದಗಿಸಿದ್ದಾರೆ.  ರಾಜನ್ ನಾಗೇಂದ್ರ ಅವರ ಸಂಗೀತ ಸಂಯೋಜನೆಯಲ್ಲಿ ಎಲ್ಲಾ ಹಾಡುಗಳು ಸೊಗಸಾಗಿವೆ .  





ಕನ್ನಡವೇ ತಾಯ್ನಾಡು - ಪಿ ಬಿ ಶ್ರೀನಿವಾಸ್ -
 (ಈ ಹಾಡಿನಲ್ಲಿ ವಿಜಯಭಾಸ್ಕರ್,  ರಾಜನ್ ನಾಗೇಂದ್ರ ಅವರು ಕಾಣುತ್ತಾರೆ)
ಅಂದ ಚಂದದ ಹೂವೆ - ಪಿ ಲೀಲಾ ಮತ್ತು ಟಿ ಆರ್ ಜಯದೇವ್ 
ಹೃದಯ ವೀಣೆ ಮಿಡಿಯೇ ತಾನೇ - ಪಿ ಬಿ ಶ್ರೀನಿವಾಸ್ 
ಚೆಲುವಿನ ಸಿರಿಯೆ - ಎ ಎಲ್ ರಾಘವನ್ 
ಕೃಷ್ಣ ಬಿಡು ಬಿಡು ಕೋಪವ - ಎಸ್ ಜಾನಕೀ 

ಆರ್ ಮಧು ಅವರ ಛಾಯಾಗ್ರಹಣವಿದ್ದ ಈ ಚಿತ್ರವನ್ನು ಸಂಕಲನ ಮಾಡಿ ನಿರ್ದೇಶನದ ರೂವಾರಿ ಆರೂರು ಪಟ್ಟಾಭಿಯವರದ್ದು. 

ಪ್ರತ್ಯಕ್ಷವಾದರೂ ಪ್ರಮಾಣಿಸಿ ನೋಡು ಎಂಬ ನಾಣ್ಣುಡಿಯನ್ನು ಎತ್ತಿ ಹಿಡಿಯುವ ಈ ಚಿತ್ರ ರಾಜಕುಮಾರ್ ಅವರ ಅನೇಕಾನೇಕ ಉತ್ತಮಚಿತ್ರಗಳಲ್ಲಿ ಇದು ಒಂದು (ಅವರು ಮಾಡಿದ್ದೆಲ್ಲ ಉತ್ತಮೋತ್ತಮ ಚಿತ್ರಗಳೇ)

Sunday, February 4, 2024

ಮನ ಮನವನ್ನು ಗಟ್ಟಿಯಾಗಿಟ್ಟುಕೊಂಡಾಗ ಮನೆ ಎಂದಿಗೂ ಮುರಿಯೋದಿಲ್ಲ - ಮುರಿಯದ ಮನೆ (1964 (ಅಣ್ಣಾವ್ರ ಚಿತ್ರ ೫೫/೨೦೭)

ಕೆಲವೊಮ್ಮೆ ಹೀಗಾಗುತ್ತದೆ.. ರಸ್ತೆಗಳು ಏರು ಪೆರು ಇರುತ್ತದೆ.. ಹತ್ತಿದ ಮೇಲೆ ಇಳಿಯುತ್ತದೆ.. ಇಳಿದ ಮೇಲೆ ಹತ್ತುತ್ತದೆ. ಆದರೆ ಆ ಅನುಭವ ಸೊಗಸಾಗಿರುತ್ತದೆ.. ಕಳೆದ ಕೆಲವು ಚಿತ್ರಗಳು ರಾಜಕುಮಾರ್ ಅವರ ಪ್ರತಿಭೆಯನ್ನು ಉತ್ತಮವಾಗಿ ಉಪಯೋಗಿಸಿಕೊಂಡಿದ್ದವು.. ಆದರೆ ಅವರ ಪ್ರತಿಭೆಯನ್ನು ಪೂರ್ಣ ಪ್ರಮಾಣದದಲ್ಲಿ ಬಳಸಿಕೊಳ್ಳುವ ಶಕ್ತಿ ಕಥೆಯಲ್ಲಿ ಇತರ ಪಾತ್ರಗಳಿಗೆ ಇದ್ದಷ್ಟು ರಾಜಕುಮಾರ್ ಅವರ ಪಾತ್ರಕ್ಕೆ ಇರಲಿಲ್ಲ..  ಆದರೂ ಅವರ ಪಾತ್ರದ ಬಗ್ಗೆ ಅವರ ಶ್ರದ್ಧೆ ನಿಜಕ್ಕೂ ಶ್ಲಾಘನೀಯವಾಗಿತ್ತು.. 


ಮುರಿಯದ ಮನೆ.. ರಾಜಕುಮಾರ್ ಅವರು ಮತ್ತೆ ಪೂರ್ಣ ಪ್ರಮಾಣದಲ್ಲಿ ಫಾರಂ ಗೆ ಬಂದ ಚಿತ್ರ.. ಹಳ್ಳಿಯ ಹೈದನಾಗಿ, ಆರೋಗ್ಯವಾಗಿದ್ದರೂ ಬಾಲ್ಯದಲ್ಲಿ ಆದ ಅಪಘಾತದಿಂದ ಅವರ ಒಂದು ಕೈ ಒಂದು ಕಾಲು ಸ್ವಾಧೀನ ತಪ್ಪಿರುತ್ತದೆ.. ಕುಂಟುತ್ತಾ ನೆಡೆಯುವುದೇ ಬದುಕಾಗಿರುತ್ತದೆ. ಆ ಅಂಗವಿಹೀನತೆಯನ್ನು ಚಿತ್ರದುದ್ದಕ್ಕೂ ಅಭಿನಯಿಸುವ ಮತ್ತು ಒಂದು ದೃಶ್ಯವೂ ಕೂಡ ಅದರಲ್ಲಿ ಅವರ ನೆಡೆ ಬದಲಾಗೋದಿಲ್ಲ.. ಕೈಯ ಬೆರಳು ತಿರುಟಿಕೊಂಡಿರೋದು ಹಾಗೆ ಇಟ್ಟುಕೊಂಡು ಚಿತ್ರದುದ್ದಕ್ಕೂ ಅಭಿನಯಿಸಿದ್ದಾರೆ. ನೆಡೆಯುವಾಗ ಒಂದು ಕಾಲನ್ನು ಹಿಂಗಾಲಿನಿಂದಲೇ ನೆಡೆಯುವುದು ಅದ್ಭುತವಾಗಿದೆ. ಪಾತ್ರದೊಳಗೆ ತನ್ಮಯತೆಯಿಂದ ನುಗ್ಗುವುದು ಮತ್ತು ಅದರಲ್ಲಿ ಯಶಸ್ವಿಯಾಗಿರೋದು ಅವರ ಕಲೆಯ ಮೇಲಿನ ಶ್ರದ್ಧೆಯನ್ನು ತೋರಿಸುತ್ತದೆ. 


ಹಳ್ಳಿಯ ಮಾತಿನ ದಾಟಿ, ಅದರ ಅನುಭವ.. ಹಳ್ಳಿಯಲ್ಲಿ ಕಾಣುವ ಅನ್ಯಾಯವನ್ನು ಪ್ರತಿಭಟಿಸುವ ರೀತಿ ಪಕ್ಕ ಪರಾಕಾಯ ಪ್ರವೇಶ ಮಾಡಿದ್ದಾರೆ. ಚಿತ್ರದುದ್ದಕ್ಕೂ ಬಹುಶಃ ಪ್ರತಿದೃಶ್ಯದಲ್ಲಿಯೂ ಕಾಣುವ ರಾಜಕುಮಾರ್ ಅವರ ಅಭಿನಯವನ್ನು ನೋಡುವುದೇ ಒಂದು ಹಬ್ಬ.. ಪ್ರತಿದೃಶ್ಯದಲ್ಲಿಯೂ ಅವರ ಅಭಿನಯ ಒಂದು ಪಾಠಶಾಲೆ ಎನ್ನಬಹುದು.. ನಗು, ಅಳು, ಸಿಟ್ಟು, ಬೇಸರ, ಕೂಗಾಟ ಎಲ್ಲವೂ ಪಶ್ಚಿಮಘಟ್ಟಗಳಲ್ಲಿ ಪ್ರತಿ ತಿರುವಿನಲ್ಲೂ ಬದಲಾಗುವ ಹವಾಮಾನದಂತೆ ಅವರ ಅಭಿನಯ ಸೊಗಸಾಗಿದೆ. 

ಅವರು ತಾನು ಹೆಳವ ತನಗೆ ಯಾರು ಹೆಣ್ಣು ಕೊಡುತ್ತಾರೆ.. ಆ ಹೆಣ್ಣಿನ ಬಾಳನ್ನು ಯಾಕೆ ಹಾಳು ಮಾಡಬೇಕು ಎನ್ನುವುದನ್ನು ನಿರೂಪಿಸಲು ಅತ್ತ ಕಡೆಯಿಂದ ಇತ್ತ ಕಡೆ ಇತ್ತಕಡೆಯಿಂದ ಅತ್ತ ಕಡೆ ಓಡಾಡಿ ತೋರಿಸುವ ಅಭಿನಯ ಮಂತ್ರಮುಗ್ಧರನ್ನಾಗಿಸುತ್ತದೆ. ಅವರ ದೊಡ್ಡಮ್ಮನ ಪಾತ್ರಧಾರಿ ಪಾಪಮ್ಮ ರಾಜಕುಮಾರ್  ಅವರ ಅಂಗವಿಹೀನತೆಯನ್ನು ಎತ್ತಿ ತೋರಿಸುತ್ತಾ ಹುಟ್ಟುವ ಮಗು ಕೂಡ ಹಾಗೆ ಇರುತ್ತದೆ ಎನ್ನುವ ಮಾತನ್ನು ನೆನಪಿಸಿಕೊಂಡು ಆಗ ತಾನೇ ಜನಿಸಿದ ಮಗುವನ್ನು ನೋಡಲು ಬಂದು ಮೊದಲು ಆ ಮಗುವಿನ ಕೈಯನ್ನು ಕಾಲನ್ನು ಎತ್ತಿ ಪರೀಕ್ಷಿಸುವ ದೃಶ್ಯದಲ್ಲಿ ಅಕ್ಷರಶಃ ಕಣ್ಣೀರಾಗುತ್ತಾರೆ. ಅಂತಿಮ ದೃಶ್ಯದಲ್ಲಿ ವಿದ್ಯುತ್ ಹರಿದು ಕೈ ಕಾಲು ಎರಡೂ ಸರಿಹೋದಾಗ ಅಬ್ಬಬ್ಬಾ ಎಂದು ಕುಣಿಯುವ ಪರಿ ಸೂಪರ್.. 

ಒಟ್ಟಿನಲ್ಲಿ ಇದೊಂದು ರಾಜಕುಮಾರ್ ಅವರ ಚಿತ್ರವಾಗಿದೆ ಎಂದು ಅದ್ಭುತವಾಗಿ ತೋರಿಸಿದ್ದಾರೆ. 

ಅಶ್ವಥ್ ಹಳ್ಳಿಯ ಗೌಡನ ಪಾತ್ರದಲ್ಲಿ ಪ್ರತಿಕ್ಷಣವೂ ಮನೆಯ ಯಜಮಾನ ಹೇಗಿರಬೇಕು.. ಹೇಗೆ ಎಲ್ಲರನ್ನೂ ಸಲಹಬೇಕು.. ಒಡಹುಟ್ಟಿದ ಕುಟುಂಬವನ್ನು ಹೇಗೆ ಕಾಪಾಡಬೇಕು ಎಂದು ಅದ್ಭುತವಾಗಿ ತೋರಿಸಿದ್ದಾರೆ. ಹೆಂಡತಿ ಘಟವಾಣಿಯಾಗಿದ್ದರೂ ತಾನು ತನ್ನ ಸಹೋದರನ ಕುಟುಂಬವನ್ನು ಆತನ ಮನೆಯ ಸದಸ್ಯರನ್ನೂ ಉಪಚರಿಸಿಯುವ ರೀತಿ, ಕ್ಷೇಮವನ್ನು ನೋಡಿಕೊಳ್ಳುವ ರೀತಿ ಸುಂದರವಾಗಿದೆ. ಘಟವಾಣಿ ಹೆಂಡತಿಗೆ ಒಮ್ಮೆ ಮಚ್ಚಿನಿಂದ ಹೊಡೆಯಲು ಹೋಗುವುದು.. ಇನ್ನೊಮ್ಮೆ ಹೆಂಡತಿ ತನ್ನನ್ನು ದರದರನೆ ಎಳೆದುಕೊಂಡು ಹೋಗುವಾಗ ಎಡವಿ ಬೀಳುವ ಹಾಗೆ ಅಭಿನಯಿಸೋದು ಆಹಾ..  ಪ್ರತಿಕ್ಷಣವೂ ತಮ್ಮ ಮನೆಗೆ ಮಿಡಿಯುವ ಅವರ ಮನಸ್ಸು.. ಅಭಿನಯ ನಿಜಕ್ಕೂ ಚಿತ್ರದುದ್ದಕ್ಕೂ ಗಮನಾರ್ಹವಾಗಿದೆ. 

ಪಾಪಮ್ಮ ಘಟವಾಣಿ ಎಂದರೆ ಹೀಗಿರಬೇಕು ಎಂದು ಪ್ರತಿದೃಶ್ಯದಲ್ಲೂ ಕಾಡುತ್ತಾರೆ. ಗಂಡನ ಪಾತ್ರಧಾರಿ ಅಶ್ವಥ್ ಅವರನ್ನು ಹುರಿದು ಮುಕ್ಕುವ ಪಾತ್ರ ಅದ್ಭುತವಾಗಿದೆ.. ಇತ್ತ ಕಡೆ ನಗೆ ಹುಟ್ಟಿಸುತ್ತದೆ. ಇತ್ತ ಕಡೆ ಅಣ್ಣನ ಮಗನ ಕುಹಕ ಮಾತುಗಳು, ಮತಿಹೀನ ಉಪಾಯಗಳು, ಮನೆಮುರಿಯುವ ಸಾಧಕಗಳು ಎಲ್ಲವನ್ನೂ ಕೇಳಿಕೊಂಡು ಅದರ ಪ್ರಕಾರ ರಾಕ್ಷಸಿಯಾಗುವ ಪಾತ್ರದಲ್ಲಿ ಪಾಪಮ್ಮ ಮಸ್ತ್ ಅಭಿನಯ ನೀಡಿದ್ದಾರೆ. ಅದರಲ್ಲೂ ಮೊದಲ ದೃಶ್ಯದಲ್ಲಿ ತಮ್ಮ ತವರುಮನೆಯ ಹೆಮ್ಮೆಯನ್ನು ಹೇಳುವ ಉದ್ದನೆಯ ಸಂಭಾಷಣೆಯನ್ನು ಒಂದೇ ದೃಶ್ಯದಲ್ಲಿ ಚಿತ್ರೀಕರಿಸುವ ರೀತಿ ಮತ್ತು ಅವರ ಅಭಿನಯ ಅದ್ಭುತ. 

ಸಾಮಾನ್ಯ ಅಬ್ಬರಿಸುವ ಖಳನ ಪಾತ್ರ.. ನಾಯಕನ ಪಾತ್ರದಲ್ಲಿ   ಕಾಣುತಿದ್ದ ಉದಯಕುಮಾರ್ ಅವರು ಇಲ್ಲಿ ಬಹುತೇಕ ಸೌಮ್ಯ ಪಾತ್ರ.. ಬೇಡ ಬೇಡವೆಂದರೂ ಮದುವೆಯಾಗುವ ನಿರ್ಧಾರ ಹೊತ್ತ ಮಗನನ್ನು ದಂಡಿಸುವಾಗ ಮಾತ್ರ ಉದಯಕುಮಾರ್ ಅಬ್ಬರಿಸುವ ಪರಿ ಸೊಗಸು. ಇಡೀ ಚಿತ್ರದಲ್ಲಿ ಸೌಮ್ಯವಾಗಿಯೇ ಮಾತಾಡುವ ಉದಯಕುಮಾರ್ ಅವರ ಅಭಿನಯವೂ ಸುಂದರ. 


ಕನ್ನಡಿಗರ ಚಿತ್ರ ಪ್ರೇಮಿಗಳ ತಾಯಿ ಪಂಡರೀಬಾಯಿಯವರು ಮಮತಾಮಯಿ ಪಾತ್ರ. ಒಬ್ಬ ಮಗ ಅಂಗವಿಹೀನ.. ಇನ್ನೊಬ್ಬ ಮಗ ಹೆತ್ತ ಕರುಳಿಗೆ ಬೆಂಕಿ ಇಡುವ ಇನ್ನೊಬ್ಬ ಮಗ.. ಜೊತೆಗೆ ನಾದಿನಿಯ ರಾಕ್ಷಸೀ ಪ್ರವೃತ್ತಿ.. ಈ ಎಲ್ಲವನ್ನೂ ಮೇಳೈಸಿಕೊಂಡು ಸಂಯಮದ ಅಭಿನಯದ ನೀಡಿರುವುದು ಗಮನಾರ್ಹ. ತನ್ನ ಅಂಗವೀಹಿನ ಮಗನನ್ನು ತನ್ನ ನಾದಿನಿ ಪಾಪಮ್ಮ ಶಪಿಸಿದಾಗ ಕಣ್ಣೀರಾಗುವ ಅವರ ಪಾತ್ರ ಮನಸ್ಸನ್ನು ಕರಗಿಸುತ್ತದೆ. 



ತಮ್ಮನ ಪಾತ್ರಧಾರಿ ಮತ್ತು ಆತನ ಮಡದಿಯ ಪಾತ್ರಧಾರಿಗಳು ಸಿನಿಮಾದ ಕಥೆಗೆ ತಕ್ಕಂತೆ ಪಾತ್ರಾಭಿನಯ ಮಾಡಿದ್ದಾರೆ.. 


ನರಸಿಂಹ ರಾಜು ಇಲ್ಲಿ ಒಂದು ರೀತಿಯಲ್ಲಿ ಅತಿಥಿ ಪಾತ್ರ.. ಸದಾ ಅವರ ಯಜಮಾನರ ಸುತ್ತಲೇ ಸುತ್ತುವ ಮಾಸ್ಟರ್ ಮಾಸ್ಟರ್ ಎನ್ನುವುದಕ್ಕೆ ಸೀಮಿತವಾಗಿದೆ.. ಮತ್ತು ಕೆಲವು ಮಾತುಗಳು ಆ ಸಂದರ್ಭಕ್ಕೆ ನಗು ಉಕ್ಕಿಸುತ್ತದೆ... ಆದರೆ ಅವರ ಯಜಮಾನರ ಅಬ್ಬರದಲ್ಲಿ ಇವರ ಮಾತುಗಳು ಗೌಣವಾಗುತ್ತವೆ.. 

ಜಯಂತಿ ಸಂಯಮದ ಪಾತ್ರ.. ಇತ್ತ ಅತ್ತೆ ಮಾವರನ್ನು ಸಂಭಾಳಿಸುತ್ತ, ಪತಿರಾಯನ ಅಂಗವಿಹೀನತೆಯನ್ನು ಆತನಿಗೆ ಬೇಸರವಾಗದಂತೆ ನೋಡಿಕೊಳ್ಳುವ ರೀತಿ, ಸಂಯಮದ ರೀತಿಯಲ್ಲಿ ಮಾತಾಡುವ, ಕೆಲವು ದೃಶ್ಯಗಳಲ್ಲಿ ಕಣ್ಣಲ್ಲಿಯೇ ಮಾತಾಡುವ ರೀತಿ ಇಷ್ಟವಾಗುತ್ತದೆ. ತನ್ನ ಪತಿಗೆ ಚಿಕಿತ್ಸೆ ನೀಡಿದರೆ ಗುಣಮುಖರಾಗುತ್ತಾರೆ ಎನ್ನುವಾಗ ಅವರ ಮುಖಾಭಿನಯ ಸೊಗಸಾಗಿದೆ. 


ಬಾಲಣ್ಣ.. ಅಬ್ಬಬ್ಬಾ ಒಂದು ವಿಶ್ವವಿದ್ಯಾಲಯ ಬೆಳೆಯುತ್ತಿರುವ ಸೂಚನೆ ಈ ಚಿತ್ರದಲ್ಲಿ.. ಕಣ್ತೆರೆದು ನೋಡು, ಚಂದವಳ್ಳಿಯ ತೋಟ ಈ ಚಿತ್ರಗಳಲ್ಲಿ ಅದ್ಭುತವಾಗಿ ತಮ್ಮ ಪ್ರತಿಭೆಯನ್ನು ಮೆರೆದಿದ್ದ ಬಾಲಣ್ಣಇಲ್ಲಿಯೂ ಕೂಡ ಅದ್ಭುತವಾಗಿ ಮಿಂಚಿದ್ದಾರೆ. ನಗರದ ಥಳುಕು ಬಳುಕು ಮಾತುಗಳು ನ್ಯಾಯ ನಾಜೂಕು, ಸದಾ ಹೊಗೆ ಬಿಡುತ್ತಾ ಅತ್ತೆ ಅತ್ತೆ ಎಂದು ಮಾತಾಡುವ.. ಬಟ್ಲರ್ ಅಂತ ಕಿರುಚುವ ಶೈಲಿ.. ಆ ಹೋತನ ಗಡ್ಡ.. ವಯ್ಯಾರದ ನೆಡೆನುಡಿ.. ಮಾತು ಮಾತಿನಲ್ಲಿಯೂ ಟೋಪಿ ಹಾಕುವ ಮನೋಭಾವದ ರೀತಿ.. ಅದ್ಭುತವಾಗಿದ್ದಾರೆ.. 

"ಜಾಸ್ತಿ ಹಲ್ಲು ಉಜ್ಜಬೇಡ ಬ್ರದರ್ ದೇವರು ಕೊಟ್ಟಿರುವ ಪಾಲಿಶ್ ಹೊರಟುಹೋಗುತ್ತೆ"

"ನನಗೆ ಮೊದಲೇ ಗೊತ್ತಿದ್ದರೆ.. ಬೊಂಬಾಯಿಯಲ್ಲಿ ತಲೆಮಾಸಿದವನಿಗೆ ನಿನ್ನ ಕೊಟ್ಟು ಮದುವೆ ಮಾಡಿಸುತ್ತಿದ್ದ .. ಈ ರೀತಿಯ ಕೋಳಿ ಜುಟ್ಟಿನ ಮಂಗನಿಗೆ ನಿನ್ನ ಮಗಳನ್ನು ಕೊಡಬೇಡ ಅಂತ ನಿನ್ನ ಅಪ್ಪನಿಗೆ ಹೇಳ್ತಾ ಇದ್ದೆ"

"ಕಂತೆ ಕಂತೆ ನೋಟು ಗೋಣಿಚೀಲದಲ್ಲಿ ಇಟ್ಟಿದ್ದೀನಿ.. ಅದು ವಿದೇಶಿ ನೋಟುಗಳು.. ಎಕ್ಸ್ಚೇಂಜ್ ತೊಂದರೆ"

"ಅತ್ತೆ ಮೊದಲೇ ಹೇಳಿದ್ದೆ .. ಮಾವನ ತಲೆ ಕತ್ತರಿಸು ತಲೆ ಕತ್ತರಿಸು ಅಂತ"

"ಆಕಾಶದಲ್ಲಿ ವಿಮಾನ ಬಿಡ್ತಾರೆ.. ನೀರಿನಲ್ಲಿ ಹಡಗು ತೇಲಿ ಬಿಡ್ತಾರೆ.. ನೀವು ಗಂಟಲಲ್ಲಿ ಹುಯ್ಗಡುಬು ಬಿಡ್ತೀರಾ"

ಮನೆ ಭಾಗವಾಗುವಾಗ.. ಪಾತ್ರೆ ಪರಟಿಗಳನ್ನು ಆಯ್ದು ಆಯ್ದು ಚೆನ್ನಾಗಿ ಗಟ್ಟಿಯಾಗಿ ದೊಡ್ಡದಾಗಿರುವುದನ್ನು ತನ್ನ ಮನೆಗೆ ಇಟ್ಟುಕೊಂಡು ಸುಮಾರಾಗಿರುವುದನ್ನು ಆ ಮನೆಗೆ ಕೊಡುವ ದೃಶ್ಯ ಸಕತ್.. 

ಸಂಭಾಷಣಕಾರ ಬರೆದಿದ್ದಕ್ಕೆ ತಮ್ಮ ಪ್ರತಿಭೆಯನ್ನು ಸೇರಿಸಿ ಹೇಳುವ ಅವರ ಶೈಲಿ ಸೂಪರ್ ಸೂಪರ್.. 

ಹೀಗೆ ಹತ್ತಾರು ಬಾಲಣ್ಣ ವಾರ ಸಂಭಾಷಣೆಗಳು ಚಿತ್ರಕ್ಕೆ ಮಜಬೂತಾದ ಲಹರಿ ಕೊಡುತ್ತದೆ .

ಇಡೀ ಚಿತ್ರ ಈ ಮೇಲೆ ಹೇಳಿದ ಪಾತ್ರಗಳ ಸುತ್ತಲೇ ಸುತ್ತುವುದರಿಂದ.. ಕಥೆ ಆರಾಮಾಗಿ ಸಾಗುತ್ತದೆ.. ಮತ್ತೆ ಅದರ ತಿರುವುಗಳು ಅರ್ಥವಾಗುತ್ತಾ ಹೋಗುತ್ತದೆ..

ಎಂ ಎಎಸ್  ಸೊಲೈಮಲೈ ಅವರ ಕಥೆ ತಮಿಳಿನಲ್ಲಿ ಸಿನೆಮಾವನ್ನು ಆಧರಿಸಿ ತಯಾರಾದ ಚಿತ್ರವಿದು. ಇದನ್ನು ಕರ್ನಾಟಕ ಫಿಲಂಸ್ ಲಾಂಛನದಲ್ಲಿ ಜಿ  ಎಚ್ ವೀರಣ್ಣ, ಸಿ ಆರ್ ಬಸವರಾಜು ಎಸ್ ಗುರುನಾಥ್ ಸಹಭಾಗಿತ್ವದಲ್ಲಿ ತಯಾರಾದ ಈ ಸಿನೆಮಾಕ್ಕೆ ಸಂಗೀತ ನೀಡಿರುವವರು ವಿಜಯ ಕೃಷ್ಣಮೂರ್ತಿ, ಛಾಯಾಗ್ರಹಣ ಆರ್ ಮಧು ಮತ್ತೆ ನಿರ್ದೇಶನ ವೈ ಆರ್ ಸ್ವಾಮಿ ಅವರದ್ದು. 

ಗಾಯಕರ ತಂದೆ ಈ ಚಿತ್ರದಲ್ಲಿದೆ.. ಆದರೆ ಹಾಡುಗಳಿಗಿಂತ ಸಂಭಾಷಣೆ ಮತ್ತು ನಿರೂಪಣೆ ಸೊಗಸಾಗಿರುವುದರಿಂದ ಹಾಡುಗಳು ಕಥೆಯ ಓಘಕ್ಕೆ ತಕ್ಕ ಹಾಗೆ ಇದೆ. ಪಿ ಬಿ ಶ್ರೀನಿವಾಸ್, ಘಂಟಸಾಲ, ರಾಘವ, ಸುಶೀಲ, ಎಲ್ ಆರ್ ಈಶ್ವರಿ... ಇದ್ದಾರೆ. 

ಈ ಚಿತ್ರದ ಮುಖ್ಯ ಅಂಶ ಸಂಭಾಷಣೆ - ಅದರ ಹೊಣೆ ಹೊತ್ತಿರುವುದು ಕು ರ ಸೀ ಅವರದ್ದು.. ಬಾಲಣ್ಣ ಅವರ ಸಂಭಾಷಣೆ ನಿಜಕ್ಕೂ ಶಿಳ್ಳೆ ಗಿಟ್ಟಿಸುತ್ತದೆ. ಸಂಭಾಷಣೆ ಜೊತೆಗೆ ಹಾಡುಗಳು ಕೂಡ ಕು ರ ಸೀ ಅವರದ್ದೇ. 

ಒಂದು ಉತ್ತಮ ಸಂಸಾರ ಹೇಗೆ ಮೂರನೇ ವ್ಯಕ್ತಿಯ ಕುಯುಕ್ತಿಯಿಂದ ಹಾಳಾಗುತ್ತದೆ ಹಾಗೆಯೇ ಸಂಸಾರದ ಯಜಮಾನ ಗಟ್ಟಿಯಾಗಿ ನಿಂತಾಗ ಅದೇ ಮನೆ ಹೇಗೆ ಉಳಿಯುತ್ತದೆ ಎಂಬುದೇ ಈ ಚಿತ್ರದ ಸಾರ.. ಮತ್ತು ಅದನ್ನು ನಿರೂಪಿಸುವಲ್ಲಿ ಚಿತ್ರದ ನಿರ್ದೇಶಕ ಹಾಗೂ ಪಾತ್ರಧಾರಿಗಳು ಯಶಸ್ವಿಯಾಗಿದ್ದಾರೆ. 

Saturday, January 20, 2024

ಕಂಡ ಕನಸ್ಸನ್ನು ಮಾಡಿದ ಪ್ರತಿಜ್ಞೆಯನ್ನು ನೆನಪಿಸುವ ಪ್ರತಿಜ್ಞೆ (1964 (ಅಣ್ಣಾವ್ರ ಚಿತ್ರ ೫೪/೨೦೭)


ಎಲ್ಲರ ಬದುಕಲ್ಲೂ ನೆಡೆಯುವ ಘಟನೆಗಳೇ ಸಿನೆಮಾವಾಗುತ್ತವೆಯೋ, ಅಥವ ಸಿನಿಮಾದ ದೃಶ್ಯಗಳು ನಮ್ಮ ಬದುಕಲ್ಲಿ ಬರುತ್ತವೆಯೋ.. ಇದೊಂದು ರೀತಿ ಬೀಜ ವೃಕ್ಷ, ಕೋಳಿ ಮೊಟ್ಟೆ ಕಥೆ ಇದ್ದ ಹಾಗೆ. ಯಾವುದು ಮೊದಲು ಯಾವುದು ನಂತರ ಯಾರಿಗೂ ಅರಿವಿಗೆ ಬರುವುದಿಲ್ಲ, ಬರಿ ಚರ್ಚೆಗಷ್ಟೇ ಸೀಮಿತವಾಗಿರುತ್ತದೆ. 

ಬಾಲ್ಯದಲ್ಲಿ ಕಂಡ ಒಂದು ಕನಸು, ಒಂದು ಆಸೆ.. ಬಡವರಿಗೆ ಉಚಿತ ಖಚಿತ ವೈದ್ಯಕೀಯ ಸೌಲಭ್ಯ ಸಿಗುವಂತೆ ಮಾಡಬೇಕು ಎನ್ನುವ ಹಂಬಲ ಹೊತ್ತ ಬಾಲಕ.. ತನ್ನ ತಂದೆಯರ ಅಪರಿಮಿತ ನಿಸ್ವಾರ್ಥ ಕೃಪಾಚಾಯೆಯಲ್ಲಿ ವೈದ್ಯಕೀಯ ಪರೀಕ್ಷೆಯಲ್ಲಿ ಗೆದ್ದು ವೈದ್ಯನಾಗುತ್ತಾನೆ. 




ಆದರೆ ನಗರದ ವ್ಯಾಮೋಹ, ಓದುವಾಗ ನೆಡೆಯುವ ಕೆಲವು ಕೀಟಲೆ ಪ್ರಸಂಗಗಳು, ಆತನನ್ನು ಒಬ್ಬ ಸಿರಿವಂತ ಹುಡುಗಿಗೆ ಪರಿಚಯ ಮಾಡಿಕೊಳ್ಳುವ ಸಂದರ್ಭ ಒದಗಿಬರುತ್ತದೆ, ನಂತರ ಈತನ ಪ್ರತಿಭೆಯನ್ನು ಅರಿತ ಆ ಸಿರಿವಂತ ಮನೆಯ ಯಜಮಾನಿ, ತನ್ನ ಮಗಳನ್ನು ಆತನಿಗೆ ಕಟ್ಟಿ, ವೈದ್ಯಕೀಯ ವೃತ್ತಿಯಲ್ಲಿ ಬೆಳೆಯುವಂತೆ ಮಾಡುವುದೇ ಅಷ್ಟೇ ಅಲ್ಲದೆ, ಆತನ ತಂದೆಯ ತಾಯಿಯರು ಈತನನ್ನು ಭೇಟಿ ಮಾಡುವ ಅಥವ ಯೋಗಕ್ಷೇಮ ತಿಳಿಸುವ ಎಲ್ಲಾ ಮಾಹಿತಿಗಳಿಂದ ದೂರವಿಡುತ್ತಾಳೆ. ಮತ್ತೆ ಆತನಿಗೆ ತನ್ನ ತಂದೆ ತಾಯಿಯರು ಹೇಳದೆ ಕೇಳದೆ ತಾನು ಮದುವೆ ಮಾಡಿಕೊಂಡದ್ದು ಕೋಪತರಿಸಿದೆ, ಹಾಗಾಗಿ ಬೇಸರವಾಗಿ ತೀರ್ಥಯಾತ್ರೆಗೆ ಹೋಗಿದ್ದೇವೇ ಅಂತ ಸುಳ್ಳು ಸುಳ್ಳು ತಂತಿ ಕೊಟ್ಟು..  ಒಂದು ರೀತಿಯಲ್ಲಿ ಶಾಶ್ವತ ಬಿರುಕು ತಂದಿಡುತ್ತಾಳೆ. ಅದನ್ನೇ ನಂಬಿಕೊಂಡ ಈತ, ಪೂರ್ಣ ನಗರ ಜೀವನದ ಆಡಂಬರಕ್ಕೆ ಮರುಳಾಗಿ ತನ್ನ ಹೆತ್ತರವರನ್ನು ನೋಡಲು ಹೋಗೋದೇ ಇಲ್ಲ .. ಆದರೆ ಅವರ ವಾತ್ಸಲ್ಯ, ಅವರ ಅಪರಿಮಿತ ಪ್ರಯತ್ನದಿಂದ ತಾನು ವೈದ್ಯನಾದೆ ಎನ್ನುವುದನ್ನು, ಬಾಲ್ಯದ ಅಚ್ಚಳಿಯದ ನೆನಪುಗಳನ್ನು ಪದೇ ಪದೇ ಮೆಲುಕು ಹಾಕುತ್ತ ತನ್ನ ಮಡದಿಗೆ ಹೇಳುತ್ತಿರುತ್ತಾನೆ. 

ಮಗನ ಅರಿವಿಲ್ಲದ ತಿರಸ್ಕಾರದ ಘಟನೆಗಳಿಂದ ನೊಂದ ಅಪ್ಪ ಅಸು ನೀಗುತ್ತಾನೆ.. ಗಂಡನಿಲ್ಲದ ಮಡದಿ, ತನ್ನ ಮಗನ ಮನೆಯಲ್ಲಿ ಮಗುವನ್ನು ನೋಡಿಕೊಳ್ಳುವ ಆಯಾ ಆಗಿ ಕೆಲಸಕ್ಕೆ ಸೇರಿಕೊಂಡು, ಕಡೆ ಪಕ್ಷ ತನ್ನ ಮೊಮ್ಮಗುವನ್ನಾದರೂ ಲಾಲನೆ ಪಾಲನೆ ಮಾಡುವ ಅವಕಾಶ ಪಡೆಯುತ್ತಾಳೆ. 


ಪರಿಸ್ಥಿತಿ, ಈಕೆಯ ತನ್ನ ತಾಯಿ ಎಂದು ತಿಳಿದು, ಜೀವನದಲ್ಲಿ ನೆಡೆದ ಘಟನೆಗಳು ಹೇಗೆ ತನ್ನನ್ನು ಕುರುಡನ್ನಾಗಿ ಮಾಡಿತ್ತು ಎಂದು ಹಳಿಹಳಿಯುತ್ತ ಮತ್ತೆ ತನ್ನ ಬಾಲ್ಯದ ಪ್ರತಿಜ್ಞೆ ನೆನಪಿಸಿಕೊಂಡು, ಮರಳಿ ತನ್ನ ಹಳ್ಳಿಯ ಬದುಕಿಗೆ ಹಿಂದಿರುಗುತ್ತಾನೆ, ಜೊತೆಗೆ ಆತನ ಮಡದಿ, ಹಾಗು ಆಕೆಯ ಸಿರಿವಂತ ತಾಯಿಯೂ ಬದಲಾಗುತ್ತಾರೆ. 

ಇದು ಕಥಾ ಹಂದರ. 


ತಂದೆ ತಾಯಿಯರ ಪಾತ್ರದಲ್ಲಿ ಅಶ್ವಥ್ ಹಾಗೂ ಪಂಡರಿಬಾಯಿಯವರ ಅಭಿನಯ ಅದ್ಭುತವಾಗಿದೆ. ಆ ಸಂತಸ, ಸಿಟ್ಟು, ಬೇಸರ, ಮಮತೆ, ಪ್ರೀತಿ ಎಲ್ಲವನ್ನೂ ಸಂಭಾಷಣೆ ಹೇಳುವಲ್ಲಿ, ಹಾಗೂ ಅದನ್ನು ಅಭಿನಯಿಸುವಲ್ಲಿ ಯಶಸ್ವಿಯಾಗಿದ್ದಾರೆ. ಅಶ್ವಥ್, ತನ್ನ ಮಗನ ವಿದ್ಯಾಭ್ಯಾಸಕ್ಕೆ ದುಡ್ಡು ಹೊಂದಿಸುವ ಪ್ರಯತ್ನದಲ್ಲಿ ರಾತ್ರಿ ಹೆಚ್ಚುವರಿ ಕೆಲಸ ಮಾಡುವಾಗ ತೋರುವ  ಸುಸ್ತು, ಮತ್ತೆ ತಡರಾತ್ರಿ ಮರದ ಬೊಂಬೆಗಳನ್ನು ಮಾಡುವ ಕೆಲ್ಸದಲ್ಲಿ ತೋರುವ ತಾದ್ಯಾತ್ಮತೆ, ಅದೇ ರೀತಿ ಮಗ ತಮ್ಮನ್ನು ಕಡೆಗಣಿಸಿ, ಬರಿ ದುಡ್ಡು ದುಡ್ಡು ಕಳಿಸಿ ಅಂತ ಕೇಳುವ ಪತ್ರ ಓದುತ್ತಾ ಸಿಟ್ಟು ಮಾಡಿಕೊಳ್ಳೋದು, ನಂತರ ಹೆಂಡತಿಗೆ ಹೇಳದೆ, ರಾತಿ ಕೆಲಸ ಮಾಡಲು ಹೋಗುವುದು.. ಮಗನ ಮನೆಯ ಕಾವಲುಗಾರ ಕುತ್ತಿಗೆ ಹಿಡಿದು ದಬ್ಬಿಸಿಕೊಳ್ಳುವಾಗ ದಬ್ ಅಂತ ಗೇಟಿನ ಹೊರಗೆ ಬೀಳುವ ಪಾತ್ರದ ಅಭಿನಯ ಬಹಳ ನೈಜತೆಯಿಂದ ಕೂಡಿದೆ

ಅಶ್ವಥ್ ಅವರಿಗೆ ತಕ್ಕಂತೆ ಪಂಡರಿಬಾಯಿ ಮಮತಾಮಯಿ. ಆ ಪ್ರೀತಿ, ಮಮತೆ, ಮಗ ತಮ್ಮನ್ನು ಅಲಕ್ಷ್ಯಮಾಡಿದ್ದಾನೆ ಎನ್ನುವುದನ್ನು ಕೆಲವು ಪ್ರಸಂಗಗಳಿಂದ ಅರಿತುಕೊಂಡರೂ, ತಾಯಿ ಕರುಳು ಮಗನ ಪ್ರೀತಿಗೆ ಅವನ ಏಳಿಗೆಗೆ ಹಂಬಲಿಸುತ್ತದೆ. ಆ ಪಾತ್ರದಲ್ಲಿ ಅಕ್ಷರಶಃ ತಾಯಿಯೇ ಆಗಿದ್ದರೆ. 


ಜಯಂತಿ, ಅತಿ ಮುದ್ದಾಗಿ ಕಾಣುತ್ತಾರೆ.  ಸುಂದರ ಅಭಿನಯ

ನರಸಿಂಹರಾಜು ನಾಯಕನನ್ನು ನಗರವ್ಯಾಮೋಹಕ್ಕೆ ಒಗ್ಗಿಕೊಳ್ಳುವಂತೆ ಮಾಡುವ ಪಾತ್ರದಲ್ಲಿ ಅಭಿನಯ ಸುಂದರವಾಗಿದೆ. ಹೆಚ್ಚಿನ ಹಾಸ್ಯ ದೃಶ್ಯಗಳಿಗೆ ಅವಕಾಶವಿಲ್ಲವಾದರೂ, ಇರುವ ದೃಶ್ಯಗಳಲ್ಲಿಯೇ ಅವರ ಅಭಿನಯ ಚಿತ್ರಕ್ಕೆ ತಕ್ಕ ಹಾಗೆ ಇದೆ. 


ಜಯ ನರಸಿಂಹರಾಜುವಿನ ಗೆಳತೀ, ಮಡದಿಯಾಗಿ ಸಲೀಸಾದ ಅಭಿನಯ 

ರಮಾದೇವಿ ಕರುನಾಡಿನ ಗಯ್ಯಾಳಿ ಅತ್ತೆ, ಅಮ್ಮನ ಪಾತ್ರದಲ್ಲಿ ಪರಕಾಯ ಪ್ರವೇಶ ಮಾಡಿದ್ದಾರೆ. 


ಗಣಪತಿ ಭಟ್, ನಾಯಕನ ಮನೆಯ ಹಿತಚಿಂತಕನಾಗಿ ಸಣ್ಣ ಪಾತ್ರವಾದರೂ ಆರಂಭದಲ್ಲಿ ಮತ್ತು ಕೊನೆಯಲ್ಲಿ ಅವರ ಅಭಿನಯ ಸೊಗಸು. 


ಇನ್ನೂ ಕಥಾನಾಯಕ ರಾಜಕುಮಾರ್.  ಈ ರೀತಿಯ ಪಾತ್ರಗಳಲ್ಲಿಯೂ ತಾನು ಅಭಿನಯಸಬಲ್ಲೆ ಎನ್ನುವುದನ್ನು ಶ್ರದ್ದೆಯಿಂದ ಕೂಡಿದ ಅಭಿನಯದಲ್ಲಿ ಮೂಡಿಸಿದ್ದಾರೆ. ಮೆಲ್ಲಗೆ ಉತ್ತುಂಗಕ್ಕೆ ಏರುತ್ತಿರುವ ವಾರ ಸಿನೆಮಾಯಾನದಲ್ಲಿ ಈ ರೀತಿಯ ಪಾತ್ರ ಕೊಂಚ ಖಳಛಾಯೆ ಇರುವ ಪಾತ್ರ ಅಂದರೆ ಪರಿಸ್ಥಿತಿಯ ಕೈಗೊಂಬೆಯಾಗಿ ತನ್ನ ಹೆತ್ತರವರಿಂದ  ದೂರವಾಗುವ, ಅವರ ಕಷ್ಟದಲ್ಲಿ ತಾನು ಭಾಗಿಯಾಗದೆ, ಅವರ ಉಪಕಾರ ಮಾತ್ರ ನೆನೆಯುತ್ತ, ಅವರ ಯೋಗಕ್ಷೇಮ ನೋಡಿಕೊಳ್ಳಲು ಆಗದ ಪಾತ್ರ. ಸಾಮಾನ್ಯ ರಾಜಕುಮಾರ್ ಅವರ ಸಿನೆಮಾಗಳ ಕಥಾವಸ್ತುವಿನಲ್ಲಿ ಈ ರೀತಿಯ ನಾಯಕನ ಧೋರಣೆ ಇರುವುದು ಕಡಿಮೆ, ಆದರೆ ಅದನ್ನು ಅಭಿನಯಿಸುವಾಗ ಅವರು ತೋರುವ ಶ್ರದ್ಧೆ ಅನನ್ಯ. ಹಳ್ಳಿ ಉಡುಪಿನಲ್ಲಿ ಎಷ್ಟು ಮುದ್ದಾಗಿ ಕಾಣುತ್ತಾರೆಯೋ ಅಷ್ಟೇ ಚೆಲುವಾಂತ ಚೆನ್ನಿಗನಾಗಿ ಪಟ್ಟಣದ ದಿರುಸಿನಲ್ಲಿಯೂ ಮಿಂಚುತ್ತಾರೆ. ಅವರ ಸಂಭಾಷಣೆ ವೈಖರಿ, ಆ ನಸು ನಗು ಎಲ್ಲವೂ ಸೊಗಸು. 


\ಇದೊಂದು ಉತ್ತಮಚಿತ್ರವಾಗಿದೆ. ಆದರೆ ತಂತ್ರಜಾನದ ಇತಿಮಿತಿ ಸುಮಾರು ದೃಶ್ಯಗಳನ್ನು ನುಂಗಿಹಾಕಿದೆ. ಜಾಲತಾಣದಲ್ಲಿ ಸಿಗುವ ಚಿತ್ರ, ಸಿಡಿಯೂ ಕೂಡ ಅದೇ ಆಗಿದೆ. ಕಥೆಗೆ ಕೆಲವೊಮ್ಮೆ ಲಿಂಕ್ ಸಿಗುವುದು ಕಷ್ಟ ಎನಿಸುತ್ತದೆ. ಆದ್ರೆ ಪ್ರಖ್ಯಾತ ನಿರ್ಮಾಪಕ ನಿರ್ದೇಶಕ ವಿಕ್ರಂ ಪ್ರೊಡಕ್ಷನ್ಸ್ ಮಾಲೀಕ ಬಿಸ್ ಎಸ್ ರಂಗ ಚಿತ್ರವಾಗಿರುವುದರಿಂದ ಚಿತ್ರದ ಬಗ್ಗೆ ನಿರೀಕ್ಷೆ ಹೆಚ್ಚಿರುತ್ತದೆ. ಆದರೆ ತುಂಡಾದ ದೃಶ್ಯಗಳು ಕತೆಯನ್ನು ಒಟ್ಟುಗೂಡಿಸಲು ಕೊಂಚ ಒದ್ದಾಡುತ್ತದೆ. 

ಶ್ರೀಮತಿ ಶಾಮಲಾದೇವಿ ಅವರ ಕಥೆಯನ್ನು ಚಿತ್ರಕ್ಕೆ ಸಂಭಾಷಣೆ ಹಾಡುಗಳನ್ನು ಕೊಟ್ಟು ಸಿದ್ಧಪಡಿಸಲು ನೆರವಾಗಿರೋದು ಚಿ. ಸದಾಶಿವಯ್ಯ. ಸಂಗೀತ ಎಸ್ ಹನುಮಂತಾಚಾರ್. ಗಾಯಕರ ದಂಡೇ ಈ ಚಿತ್ರದ ಹಾಡುಗಳಲ್ಲಿ ಇದೆ. ಛಾಯಾಗ್ರಹಣದ ಹೊಣೆ ಬಿ ಎಸ್ ರಂಗ ಅವರದ್ದು. 

ಆಸ್ಪತ್ರೆಯ ದೃಶ್ಯಗಳನ್ನು ನೈಜವಾಗಿ ತೋರಿಸುವಲ್ಲಿ ಸಹಕರಿಸಿದ ತಂಡಕ್ಕೆ ಕೃತಜ್ಞತೆ ಸಲ್ಲಿಸಿರುವುದು ಗಮನ ಸೆಳೆಯುತ್ತದೆ. ಹಾಗೆ ಮಾಹಿತಿಗಳ ಪ್ರಕಾರ ರಾಜಕುಮಾರ್ ಅವರು ಮೊತ್ತ ಮೊದಲ ಬಾರಿಗೆ ವೈದ್ಯನ ಪಾತ್ರದಲ್ಲಿ ಅಭಿನಯಿಸಿದ್ದಾರೆ. 


ಬೆಳೆದು ಬಂದ ಹಾದಿಯನ್ನು ಎಷ್ಟೇ ಕಷ್ಟಬಂದರೂ ಮರೆಯಬಾರದು ಎಂದು ನಿರೂಪಿಸುವ ಚಿತ್ರ ಪ್ರತಿಜ್ಞೆ. 

Sunday, January 14, 2024

ಎಲ್ಲೆಡೆ ಇರುವ ಶಿವನ ಮಹಿಮೆ ಸಾರುವ ಶಿವಗಂಗೆ ಮಹಾತ್ಮೆ (1964 (ಅಣ್ಣಾವ್ರ ಚಿತ್ರ ೫೩/೨೦೭)

ಅನೇಕ ಬಾರಿ ಹೀಗಾಗುತ್ತದೆ. ತಯಾರು ಮಾಡಿದ ಅಡಿಗೆ, ಪ್ರಯತ್ನ ಸೊಗಸಾಗಿರುತ್ತದೆ.. ಆದರೆ ಅದು ಆಸಕ್ತರ ಕೈ ಸೇರುವ ಹೊತ್ತಿಗೆ ಮೊಟಕಾಗಿ ರುಚಿಸದೆ ಹೋಗಬಹುದು ಅಥವ ಇನ್ನೂ ಬೇಕು ಅನಿಸುವಾಗಲೇ ಖಾಲಿ ಕೂಡ ಆಗಿರಬಹುದು. 

ಶಿವಗಂಗೆ ಮಹಾತ್ಮೆ ಚಿತ್ರ ಭಕ್ತಿರಸ ಆಧಾರಿತ ಚಿತ್ರ. ಶಿವಗಂಗೆಯ ಸ್ಥಳ ಪುರಾಣ, ಅದರ ವಿಶೇಷತೆ, ಶಿವ ಸಾನಿಧ್ಯವಾದ ಸ್ಥಳ ಹೀಗೆ ಹತ್ತಾರು ವಿಶೇಷಣಗಳ ವಿಚಾರಗಳ ಕಥಾ ಹಂದರ ಹಿನ್ನೆಲೆಯಲ್ಲಿ ತಯಾರಾದ ಚಿತ್ರವಿದು. 

ಸೋರಟ್ ಅಶ್ವಥ್ ಅವರ ಕಥೆ ಸಂಭಾಷಣೆ ಹಾಡುಗಳು 

ಜಿ ಕೆ ರಘು ಅವರ ಸಂಗೀತ 

ಎಸ್ ಮಣಿ ಅವರ ಛಾಯಾಗ್ರಹಣ 

ತಿಮ್ಮರಾಯಪ್ಪ ಅವರ ನಿರ್ಮಾಣದಲ್ಲಿ 

ಗೋವಿಂದಯ್ಯ ನಿರ್ದೇಶಿಸಿದ ಚಿತ್ರವಿದು. 


ರಾಜಕುಮಾರ್,  ಹರಿಣಿ, ಉದಯಕುಮಾರ್, ಅಶ್ವಥ್, ಜಯಶ್ರೇ, ಬಾಲಕೃಷ್ಣ, ಜಯ, ರತ್ನಾಕರ್, ರಾಜಶ್ರೀ  ಅವರ ತಾರಾಗಣದಲ್ಲಿ ತಯಾರಾದ ಚಿತ್ರದ ಹೂರಣವಿಶ್ಟೆ. 








ರಾಜಮನೆತನದವರಾದರೂ ರಾಜಕುಮಾರ್ ಗುಡಿಸಿಲಿನಲ್ಲಿ ಬೆಳೆಯುತ್ತಾರೆ. ತಾಯಿ ಜಯಶ್ರೀ ಅವರಿಗೆ ಕಣ್ಣುಗಳು ಕಾಣದಾಗಿರುತ್ತದೆ. ಅಪ್ಪನಾದ ಅಶ್ವಥ್ ಕಾರಣಾಂತರಗಳಿಂದ ಎರಡನೇ ಮದುವೆಯಾಗಿದ್ದರೋ ಆಕೆಯ ಮಡದಿ ರಾಜ್ಯವನ್ನು ಕಬಳಿಸಬೇಕು ಎಂಬ ಕುಟಿಲನೀತಿಯ ಕುತಂತ್ರಿ ಸೇನಾಪತಿ ಉದಯಕುಮಾರ್ ಜೊತೆಗೂಡಿ ವಿಷವ್ಯೂಹ ರಚಿಸಿರುತ್ತಾಳೆ. 

ರಾಜನನ್ನು ಮುಗಿಸಿ, ರಾಜ್ಯವನ್ನು ಸೇನಾಪತಿಯ ಜೊತೆ ಅನುಭವಿಸಬೇಕು ಎನ್ನುವ ಅವಳ ಯೋಜನೆಗೆ ಅಡ್ಡಿಯಾಗಿರೋದು ಮಂತ್ರಿಯ ನಿಷ್ಠೆ ಹಾಗೂ ಆತನ ಮುಂದಾಲೋಚನೆ. ಕುತಂತ್ರ ಮಾಡಿ ಮಹಾರಾಜನನ್ನೇ ಕೊಂದಿದ್ದಾನೆ ಎನ್ನುವ ಸುಳ್ಳು ಆರೋಪ ಹೊರಿಸಿ ಮಂತ್ರಿಯನ್ನು ಕಾರಾಗೃಹಕ್ಕೆ ಕಳಿಸುತ್ತಾರೆ. ಇತ್ತ ಮಹಾರಾಜನನ್ನೂ ಕೂಡ ಸತ್ತಿದ್ದಾನೆ ಎಂದು ಪ್ರಜೆಗಳಿಗೆ ನಂಬಿಸಿ, ಆತನನ್ನು ಬಂಧನದಲ್ಲಿಟ್ಟಿರುತ್ತಾರೆ. 

ಇತ್ತ ರಾಜಕುಮಾರ್ ಪಾತ್ರ ತನ್ನ ತಾಯಿಗೆ ಅಂಧತ್ವವನ್ನು ನಿವಾರಣೆಮಾಡುವ ತೀರ್ಥ ಶಿವಗಂಗೆಯಲ್ಲಿ ಸಿಗುತ್ತದೆ ಎನ್ನುವ ಗುರುವಿನ ಮಾತಿನ ಮೂಲಕ ಶಿವಗಂಗೆಗೆ ತೆರಳುತ್ತಾನೆ. 

ಇತ್ತ ಸೇನಾಪತಿಯು ಮಂತ್ರಿಯ ಮಗಳು ಹರಿಣಿಯನ್ನು ಹೆದರಿಸಿ, ಜೊತೆಗೆ ಅವಳ ಮನೆಗೆ ಬೆಂಕಿ ಹಚ್ಚಿಸಿ ಅವಳನ್ನು ಕಾಡುಪಾಲಾಗುವಂತೆ ಮಾಡುತ್ತಾನೆ. ಇತ್ತ ರಾಜಕುಮಾರ್ ಅವರ ಅಮ್ಮ ಜಯಶ್ರೀ ಇರುವ ಗುಡಿಸಲಿಗೂ ಬೆಂಕಿ ಹಚ್ಚಿಸಿ ಆಕೆಯನ್ನು ಕಾಡುಪಾಲಾಗುವಂತೆ ಮಾಡುತ್ತಾನೆ. 

ಸೇನಾಪತಿಯ ಬಲಗೈ ಬಾಲಕೃಷ್ಣ ಉಪಾಯಮಾಡಿ ಮಂತ್ರಿಯನ್ನು ಸೆರೆಯಿಂದ ಬಿಡಿಸುತ್ತಾನೆ ಮಂತ್ರಿಯು ಮಹಾರಾಜನು ಇರುವ ಜಾಗವನ್ನು ಪತ್ತೆ ಮಾಡಿ ಆತನನ್ನು ಬಿಡಿಸುತ್ತಾನೆ. ಆದರೆ ಮತಿಕಳೆದುಕೊಂಡ ಮಹಾರಾಜ ಕಾಡಿನಲ್ಲಿ ಅಲೆಯುತ್ತಾ ಜಯಶ್ರೀ ಮತ್ತು ಹರಿಣಿಯು ಇರುವ ಸ್ಥಳಕ್ಕೆ ಬರುತ್ತಾರೆ. 

ಇತ್ತ ಬಹು ಸಾಹಸಮಾಡಿ, ಶಿವಗಂಗೆಯಿಂದ ಪುಣ್ಯ ತೀರ್ಥವನ್ನು ತಂದು, ಅದರ ಶಕ್ತಿಯಿಂದ ಜಯಶ್ರೀ ಅವರಿಗೆ ಅಂಧತ್ವ ನಿವಾರಣೆಯಾಗುತ್ತದೆ ಮತ್ತು ಮಹಾರಾಜನಿಗೆ ಸ್ಮೃತಿ ಬರುತ್ತದೆ. ತನ್ನ ಹೆಂಡತಿಯನ್ನು ಮಗನನ್ನು ಗುರುತು ಹಿಡಿಯುತ್ತಾರೆ.  ಜೊತೆಗೆ ರಾಜಕುಮಾರ್ ಸೇನಾಪತಿ ಉದಯಕುಮಾರ್ ಜೊತೆ ಹೋರಾಡಿ ಮಂತ್ರಿಯನ್ನು ರಕ್ಷಿಸಿ, ಆತನ ಮಗಳು ಹರಿಣಿಯನ್ನು ವರಿಸುತ್ತಾನೆ, 

ಆದರೆ ತಂತ್ರಜ್ಞಾನದ ಕಸಿವಿಯಿಂದ ಅನೇಕ ದೃಶ್ಯಗಳು ತುಂಡಾಗಿವೆ, ಕತೆ ಪೂರ್ಣಪ್ರಮಾಣವಾಗಿ ಬಿತ್ತರವಾಗುವ ಹಾಗೆ ಕಾಣಿಸೋಲ್ಲ. ಮಧ್ಯೆ ಮಧ್ಯೆ ದೃಶ್ಯಗಳು ತುಂಡಾಗಿರುವುದರಿಂದ ಕಥೆಯ ಓಘಕ್ಕೆ ಅಡ್ಡಿ ಅನಿಸುತ್ತದೆ. ಪೂರ್ಣ ಚಿತ್ರವನ್ನು ನೋಡಿದ ಮೇಲೆ ಕಥಾಹಂದರ ಅರ್ಥವಾಗುತ್ತದೆ. 

ರಾಜಕುಮಾರ್ ಅವರ ಪಾತ್ರ ಇಪ್ಪತ್ತು ನಿಮಿಷಗಳಿಗೂ ಹೆಚ್ಚಿಲ್ಲ. ಸುಮಾರು ೧೨೬ ನಿಮಿಷಗಳ ಚಿತ್ರದಲ್ಲಿ ಅರ್ಧಘಂಟೆಗೂ ಕಡಿಮೆ ರಾಜಕುಮಾರ್ ಅವರ ಪಾತ್ರವನ್ನು ನೋಡಬಹುದು. ಆದರೆ ಅವರಿಗೆ ತಿಳಿದಿತ್ತೋ ಇಲ್ಲವೇ ಗೊತ್ತಿಲ್ಲ. ಅವರ ದೃಶ್ಯಗಳಲ್ಲಿ ಅವರ ಅಭಿನಯಕ್ಕೆ ಪೂರ್ಣ ಅಂಕ ಸಿಗುತ್ತದೆ. ಕಥಾವಸ್ತು ಅವರ ಅಭಿನಯವನ್ನು ಪೂರ್ಣಪ್ರಮಾಣದಲ್ಲಿ ಹಿಡಿದಿಡಲು ಸಹಕಾರಿಯಾಗಿಲ್ಲವಾದರೂ, ಚೆಲುವಿನ ಮುಖ, ಆ ಸಂಭಾಷಣೆ ಹೇಳುವ ವೈಖರಿ, ಹಿರಿಕಿರಿಯರ ಜೊತೆ ಸಲೀಸಾದ ಅಭಿನಯ ಈ ಚಿತ್ರದ ಪ್ಲಶ್ ಪಾಯಿಂಟ್. 

ಕೆಲವೇ ದೃಶ್ಯಗಳಾದರೂ ಅಶ್ವಥ್, ಜಯಶ್ರೀ ಅಭಿನಯ ಸೊಗಸಾಗಿದೆ

ಉದಯಕುಮಾರ್ ಈ ಚಿತ್ರದಲ್ಲಿ ವಿಜೃಂಭಿಸಿದ್ದಾರೆ. ಸಾಧುವಿನ ದೃಶ್ಯದಲ್ಲಿ ತುಂಬಾ ಸೊಗಸಾಗಿ ಕಾಣುತ್ತಾರೆ ಉಳಿದಂತೆ ಹರಿಣಿ, ರತ್ನಕರ್, ಬಾಲಕೃಷ್ಣ, ಜಯ ಪಾತ್ರಕ್ಕೆ ತಕ್ಕ ಅಭಿನಯ ನೀಡಿದ್ದಾರೆ 

ಹಾಡುಗಳಿಗೆ ಪಿಬಿಶ್ರೀನಿವಾಸ್, ಎಸ್ ಜಾನಕಿ, ಎಲ್ ಆರ್ ಈಶ್ವರಿ, ಜಿಕೆವೆಂಕಟೇಶ್, ಪೀಠಾಪುರಂ ನಾಗೇಶ್ವರರಾವ್ ದನಿ ನೀಡಿದ್ದಾರೆ. 

ರಾಜಕುಮಾರ್ ಅವರ ಚಿತ್ರಗಳ ವಿಶೇಷತೇ ಅವರ ದಣಿವರಿಯದ ಅಭಿನಯ..