Friday, December 19, 2014

ಕಥೆಗಳ ಸಂಗಮ ಹಾಗೆಯೇ ಭಾವ ಸಂಗಮ ಕೂಡ - ಕಥಾಸಂಗಮ (1976)

ಉತ್ಸಾಹದ ಚಿಲುಮೆಯಾಗಿದ್ದಾಗ ಕಣ್ಣಿಗೆ ಕಾಣುವ ಚಿಕ್ಕ ಚಿಕ್ಕ ರತ್ನಗಳು ಮುತ್ತುಗಳಾಗುತ್ತವೆ. ಈ ವಾಕ್ಯದ ಸತ್ಯದರ್ಶನ ನಮಗೆ ಮಾಡಿಸಿದ್ದು ಪುಟ್ಟಣ್ಣ ಅವರ ಕಥಾಸಂಗಮ ಚಿತ್ರ.  ಲೇಖಕರೆ ಹೇಳುವಂತೆ ನನ್ನ ಸಣ್ಣ ಕಥೆಯನ್ನು ಆರಿಸಿ ಚಿತ್ರ ಮಾಡಿದ್ದಾರೆ. ಅದನ್ನು ಬೆಳ್ಳಿತೆರೆಯ ಮೇಲೆ ಹೇಗೆ ತರುತ್ತಾರೆ ಎನ್ನುವ ಕುತೂಹಲ ನನಗೂ ಇದೆ ಎಂದು,

ಪುಟ್ಟಣ್ಣ ಅವರ ತಾಖತ್ ಇದ್ದದ್ದು ಮನಸ್ಸಿಗೆ ಹಿಡಿಸುವ ಕಥೆಗಳನ್ನು ಲೇಖನಗಳನ್ನು ಹುಡುಕುವುದು ಮತ್ತು ಅದು ಕಾಡಿದರೆ ಅದನ್ನು ಚಿತ್ರಕ್ಕೆ ಅಳವಡಿಸುವುದು.

ಇಂಥಹ ಒಂದು ಅಭೂತಪೂರ್ವ ಘಟನೆ ನಡೆದದ್ದು ೧೯೭೬ ಇಸವಿಯಲ್ಲಿ.  ಹೊರಜಗತ್ತಿಗೆ ಸಾಮಾನ್ಯ ಅನ್ನಿಸುವ ಚಿಕ್ಕ ಚಿಕ್ಕ ಕತೆಗಳನ್ನು ಹುಡುಕಿ ಆರಿಸಿ ಅದನ್ನು ಬೆಳ್ಳಿತೆರೆಯ ಮೇಲೆ ಉತ್ತು ಬಿತ್ತು ಬೆಳಗಿಸಿದ್ದು ಕಥಾಸಂಗಮ ಎನ್ನುವ ಒಂದು ಪುಷ್ಪಮಾಲಿಕೆಯಲ್ಲಿ.


ಸಾಮಾನ್ಯ ಪುಟ್ಟಣ್ಣ ಅವರ ಚಿತ್ರಗಳಲ್ಲಿ ಪಾತ್ರಗಳು, ಕಲಾವಿದರು ಕಾಡುತ್ತಾರೆ. ಆದರೆ ಇಲ್ಲಿ ಕಾಡುವುದು ಕಲಾವಿದರಾದರೂ.. ಅದರ ಗಾಢತೆಯಿಂದ ಕಾಡುವುದು ಆ ಕಲಾವಿದರು ನಿರ್ವಹಿಸಿದ ಪಾತ್ರಗಳು ಮತ್ತು ಅದರ ಪೋಷಣೆ.

ವರ್ಧಿನಿ ಆರ್ಟ್ಸ್ ಪಿಕ್ಕ್ಚರ್ಸ್ ಲಾಂಛನದಲ್ಲಿ ಸಿ ಎಸ್ ರಾಜ ಅವರ ನಿರ್ಮಾಣದಲ್ಲಿ ತಯಾರಾದ ಈ ಚಿತ್ರಕ್ಕೆ ಹಾಡುಗಳನ್ನು ಬರೆದದ್ದು ಪುಟ್ಟಣ್ಣ ಅವರ ಜೀವದ ಗೆಳೆಯ ವಿಜಯನಾರಸಿಂಹ.. ಸಂಗೀತ ಪ್ರಾಣ ಸ್ನೇಹಿತ ವಿಜಯಭಾಸ್ಕರ್. ಮೂರು ಹಾಡುಗಳಲ್ಲಿ  ಒಂದನ್ನು ಪಿ ಬಿ ಶ್ರೀನಿವಾಸ್ ಮತ್ತು ಉಳಿದ ಎರಡನ್ನು ಕಸ್ತೂರಿ ಶಂಕರ್ ತಮ್ಮ ಕೋಮಲ ಕಂಠದಲ್ಲಿ ಸೊಗಸಾಗಿ ಹಾಡಿದ್ದಾರೆ. ಕಪ್ಪು ಬಿಳುಪು ವರ್ಣದಲ್ಲಿ ಇಡಿ ಚಿತ್ರವನ್ನು ಸೆರೆಹಿಡಿದದ್ದು ಹರಿದಾಸ್.

ಮಾನವನ ವಿಭಿನ್ನ ಮುಖಗಳ, ಭಾವಗಳ, ಅಂತಃಕರಣ ಎಲ್ಲವನ್ನು ನವಿರಾದ ಬಟ್ಟೆಯ ಹಾಗೆ ತಮ್ಮ ಕಥೆಗಳಲ್ಲಿ ತುಂಬಿದ್ದನ್ನು ಅಷ್ಟೇ ಜೋಪಾನ ವಾಗಿ ಕಥೆಯ ಮತ್ತು ಲೇಖಕರ ಆಶಯಕ್ಕೆ ಭಂಗ ಬರದಂತೆ ಅಷ್ಟೇ ಸುಂದರಾದ ರಂಗವಲ್ಲಿ ಹಾಕಿ ಚಿತ್ರಕಥೆ ಬರೆದು ನಿರ್ದೇಶನ ಮಾಡಿದವರು ಪುಟ್ಟಣ್ಣ ಕಣಗಾಲ್.

ಆರಂಭದಲ್ಲಿ ಲೇಖಕರನ್ನು ತೆರೆಯ ಮೇಲೆ ಬರುವಂತೆ ಮಾಡಿ, ಅವರ ಕಿರುಪರಿಚಯ ಮಾಡಿಕೊಟ್ಟು, ಅವರನ್ನು ಮಾತಾಡಲು ತೆರೆಯನ್ನು ಬಿಟ್ಟುಕೊಟ್ಟು ತಾವು ಲೇಖಕರನ್ನು ಎಷ್ಟು ಆದರಿಸುತ್ತಿದ್ದರು ಎನ್ನುವುದನ್ನು ಸೂಕ್ಷವಾಗಿ ತೋರಿದ್ದಾರೆ. ಅದಕ್ಕಿಂತ ಕೊಂಚ ಮೊದಲು ಕನ್ನಡ ಸಾಹಿತ್ಯ ಭಂಡಾರವನ್ನು ಪರಿಚಯಿಸುತ್ತಾ ಅನೇಕಾನೇಕ ಲೇಖಕ/ಕಿಯರನ್ನು ಅವರ ಭಾವಚಿತ್ರಗಳ ಮೂಲಕ ತೋರುವುದು ಒಂದು ವಿಭಿನ್ನ ಸಂಪ್ರದಾಯಕ್ಕೆ ನಾಂದಿ ಹಾಡಿದ್ದಾರೆ.

ಶ್ರೀ ಗಿರೆಡ್ಡಿ ಗೋವಿಂದರಾಜು ಅವರ "ಹಂಗು" ಎನ್ನುವ ಪುಟ್ಟ ಕಥೆಯನ್ನು ಪರಿಣಾಮಕಾರಿಯಾಗಿ ಮೂಡಿಸಲು ಪುಟ್ಟಣ್ಣ ಅವರಿಗೆ ಕೈ ಜೋಡಿಸಿರುವುದು ಜಿ ಕೆ ಗೋವಿಂದರಾವ್, ಲೋಕನಾಥ್.

ತನ್ನ ಸ್ವಾರ್ಥಕ್ಕೆ, ತನಗೆ ಬೇಕಾದ ಕೆಲಸ ಮಾಡಿಸಿಕೊಳ್ಳಲು ಪ್ರೊಫೆಸರ್ ಅವರನ್ನು ಬಳಸಿಕೊಳ್ಳಲು ಹೋರಾಡುವ/ಕಾಡಿಸುವ ಪಾತ್ರದಲ್ಲಿ ಲೋಕನಾಥ್ ಗಮನ ಸೆಳೆಯುತ್ತಾರೆ. ರಾಗವಾಗಿ ಮಾತಾಡುತ್ತ, ಧ್ವನಿಯನ್ನು ಕೇಳಿದರೆ ಸಿಟ್ಟು ಬರುವಂತೆ ಮೈ ಕೈ ಪರಚಿಕೊಳ್ಳುವಂತೆ ಮಾಡಬಲ್ಲ ಪಾತ್ರವನ್ನು ಅಚ್ಚುಕಟ್ಟಾಗಿ ಅಭಿನಯಿಸಿದ್ದಾರೆ. ಇಲ್ಲಿ ಗೆಲ್ಲುವುದು ಅವರ ಪಾತ್ರವೇ ಆದರೂ ಆ ಪಾತ್ರದ ಸುತ್ತಲೂ ನಿಲ್ಲುವ ಇತರ ಪಾತ್ರಗಳು ಗಮನಾರ್ಹ ಕೊಡುಗೆ ನೀಡಿದ್ದಾವೆ.

ಒಣಗಿ ಹೋದ ಮರದ ಹಿನ್ನೆಲೆಯಲ್ಲಿ ನಿಂತ ಅಪ್ಪ, ಲೋಹದ ಬಲೆಯ ಹಿಂದೆ ನಿಂತ ತನ್ನ ತಂಗಿ, ಖಾಯಿಲೆ ಇಂದ ನರಳುತ್ತಿರುವ ಮಗು, ಔಷದಿ ತರಲು ಬೇಕಾಗುವ ಹಣಕ್ಕೆ ಪಕ್ಕದ ಮನೆಯಿಂದ ಸಾಲ ತರುವೆ ಎನ್ನುವ ಮಡದಿ, ಇಡಿ ಸನ್ನಿವೇಶಕ್ಕೆ ಯಜಮಾನರಾಗುವ ಗೋವಿಂದರಾವ್ ಗಮನ ಸೆಳೆಯುತ್ತಾರೆ. ತನ್ನ ಧ್ಯೇಯ ಒಂದು ಕಡೆ, ಸಂಸಾರದ ಚಿಕ್ಕ ಪುಟ್ಟ ಸಮಸ್ಯೆಗಳನ್ನು ಬಗೆಹರಿಸಬೇಕಾದರೆ ತಾನು ನಂಬಿರುವ ಸಿದ್ಧಾಂತಗಳನ್ನು ಗಾಳಿಗೆ ತೂರಿಬಿಡಬೇಕಾದ ಧ್ವಂಧ್ವ ಇವುಗಳನ್ನು ಗುರುತರವಾಗಿ ಪ್ರದರ್ಶನ ಮಾಡಿದ್ದಾರೆ ತಮ್ಮ ಅಭಿನಯದ ಮೂಲಕ.

ಇಷ್ಟವಾಗುವ ದೃಶ್ಯ.. ಸಾಹುಕಾರ ತನ್ನ ಕೆಲಸ ಮಾಡಿಸಿಕೊಳ್ಳಲು ಪ್ರೊಫೆಸರ್ ಮನೆಗೆ ನುಗ್ಗಿ ಅವರಿಗೆ ಬೇಕಾದ ಅನುಕೂಲತೆ ಮಾಡಿಕೊಟ್ಟು ಹೋದ ಮೇಲೆ.. ಸುಮ್ಮನೆ ಯೋಚನೆ ಮಾಡುತ್ತಾ ಕೂರುವ ಪ್ರೊಫೆಸರ್ ತಲೆಯ ಮೇಲೆ ನೆರಳಿನಲ್ಲಿ ಎರಡು ಕೈಗಳು ಇವರನ್ನು ಆವರಿಸಿಕೊಳ್ಳುತ್ತಾ ಬರುವಂತೆ ತೋರುವ ದೃಶ್ಯ.

ಕಡೆಯ ದೃಶ್ಯದಲ್ಲಿ ಉತ್ತರ ಪತ್ರಿಕೆ ಅವರನ್ನು ಓಡಿಸಿಕೊಂಡು ಬರುವುದು, ಮತ್ತು ಸಾಹುಕಾರ ಹಿಂದೆ ಓಡಿ ಬರುತ್ತಾ, ಗಹಗಹಿಸಿ ನಗುತ್ತಾ ನನ್ನ ಹಂಗೇಕೆ ನಿಮಗೆ ಒಂದು ನಾಲ್ಕು ಮಾರ್ಕ್ಸ್ ಹಾಕಿಬಿಡಿ ಎನ್ನುವುದು.. ಭ್ರಷ್ಟಾಚಾರದ ವಿರೋಧಿಯಾದರೂ ಪರಿಸ್ಥಿತಿ ಆ ನಂಬಿಕೆಯನ್ನು ಹೇಗೆ ಬದಲಾಯಿಸಲು ಕಾಡುತ್ತಾ ಬರುತ್ತದೆ ಎನ್ನುವುದೇ ಇದರ ಕಥಾವಸ್ತು.
*******************
ಹಂಗು ಮಾನವನನ್ನು ಮುಲಾಜಿಗೆ ಸಿಕ್ಕಿಸಿ.. ಪರಿಸ್ಥಿತಿಯನ್ನು ಬಲೆಯಂತೆ ಹೆಣೆದು ಸಿಕ್ಕಿಸುವ ಪ್ರಯತ್ನವಾದರೆ.. ಶ್ರೀಮತಿ ವೀಣಾ ಅವರ "ಅತಿಥಿ" ಪರಿಸ್ಥಿತಿ ಅನುಕೂಲವಾಗಿದ್ದರೂ ತಾ ಅಂದುಕೊಂಡ ವಿಚಿತ್ರ ಆದರ್ಶಗಳು ಹೇಗೆ ಬದುಕಿನ ಸುಖವನ್ನು ಹಿಂಡಿ ಹಿಪ್ಪೆ ಮಾಡಿ ಮನಸ್ಸನ್ನು ಮುದುಡಿ ಹಾಕುತ್ತದೆ ಎಂಬುದನ್ನು ಸಾಂಕೇತಿಕವಾಗಿ ಕಥೆಯ ಮೂಲಕ ಹೇಳುತ್ತದೆ.

ರೂಪ, ಯೌವನ ಮನಷ್ಯನ್ನು ಗರ್ವಿ ಅಥವಾ ತಾ ಅಂದುಕೊಂಡಿದ್ದು ಸರಿ ಎನ್ನುವ ಒಂದು ಪೊಳ್ಳು ಪೊರೆಯನ್ನು ಸೃಷ್ಟಿಸಿರುತ್ತದೆ. ಅದರಲ್ಲಿಯೂ ಆ ಪೊರೆ ಹೆಣ್ಣಲ್ಲಿ ಇದ್ದರೆ, ಅದು ಇನ್ನು ಕಾಡುತ್ತದೆ. ಯೌವನ ಕಾಲದಲ್ಲಿ ಗಂಡಸರು ಎಂದರೆ ಹಾಗೆ ಹೀಗೆ ಎನ್ನುವ ಒಂದು  ಮಿಥ್ಯ ವಲಯವನ್ನು ಸೃಷ್ಟಿಸಿಕೊಂಡು ಜೇಡ ತಾ ಕಟ್ಟಿದ ಬಲೆಯೊಳಗೆ ಕೆಲವೊಮ್ಮೆ ತಾನೇ ಸಿಕ್ಕಿಕೊಂಡು ಹೊರಬರಲಾರದೆ ತವಕಿಸುವ ಹುಳುವಂತೆ ಆಗಿ ಬಿಡುತ್ತದೆ.

ನೋಡುವ ನೋಟ ಸರಿಯಾಗಿ ಇರಬೇಕು ಎನ್ನುವುದು ನಿಜವಾದರೂ, ಎಲ್ಲಿ ನೋಡುತ್ತಿದ್ದೇವೆ ಎನ್ನುವುದು ಮುಖ್ಯವಾಗುತ್ತದೆ, ಈ ಮಾತನ್ನು ಪುಷ್ಠಿಕರಿಸುವ ಸಂಭಾಷಣೆ ಇಲ್ಲಿ ಕಾಣುತ್ತದೆ.
"ಪಶ್ಚಿಮ ದಿಕ್ಕಿನತ್ತ ಬಾಗಿಲು ತೆರೆದಿಟ್ಟುಕೊಂಡು ನೋಡಿದರೆ ಬರಿ ಸೂರ್ಯ ಮುಳುಗೋದು ಮಾತ್ರ ಕಾಣುತ್ತದೆ. ಪೂರ್ವ ದಿಕ್ಕಿನತ್ತ ನೋಡ್ರಿ ಗಂಡಸು ಏನು ಎಂದು ಅರ್ಥವಾಗುತ್ತದೆ"

ನಿರ್ಧಾರ ತೆಗೆದುಕೊಳ್ಳುವಾಗ.. ಕೂತಲ್ಲಿಯೇ ಕೂರೋಲ್ಲ, ನಿಂತಲ್ಲಿಯೇ ನಿಲ್ಲೋಲ್ಲ.. ಆದರೆ ಜಾಗಬದಲಾಯಿಸಿದಾಕ್ಷಣ ನಿರ್ಧಾರವೂ ಬದಲಾಗಲೇ ಬೇಕಿಲ್ಲ ಎನ್ನುವುದು ಈ ಸಂಭಾಷಣೆಯಲ್ಲಿ ಇಣುಕುತ್ತದೆ.

"ಜಾಗ ಬದಲಾಯಿಸಿದಾಗ ನಿರ್ಧಾರವೂ ಬದಲಾಯಿಸುತ್ತೀರಿ ಎಂದುಕೊಂಡೆ.. ಆದರೆ ಮತ್ತೆ ಅದೇ ಜಾಗದಲ್ಲಿ ಹೋಗಿ ಕೂತ್ರಿ"
ಒಂದು ಮಾತಲ್ಲಿಯೇ ಮುಗಿಸಬಹುದಾದ ದೃಶ್ಯವನ್ನು ಕಥಾನಾಯಕಿ ನಾಲ್ಕು ಕಲ್ಲಿನ ಬೆಂಚುಗಳಲ್ಲಿ ಕೆಲ ಕ್ಷಣ ಕೂತು ಎದ್ದು ಬರುವುದು ಮತ್ತು ಕಡೆಯಲ್ಲಿ ತನ್ನ ಹಳೆ ನಿರ್ಧಾರವೇ ಸರಿ ಎಂಬ ತೀರ್ಮಾನಕ್ಕೆ ಬರುವುದು ಈ ದೃಶ್ಯದ ಸಾರಾಂಶ. ದೃಶ್ಯ ಸಂಯೋಜನೆ ಇಷ್ಟವಾಗುತ್ತದೆ.

ಪ್ರೀತಿ ಪ್ರೇಮ ಅನುರಾಗ ಇವೆಲ್ಲ ಬದುಕಿಗೆ ಉತ್ಸಾಹ ತುಂಬುವ ಚೇತನಗಳು ಎನ್ನುವುದನ್ನು "ಕಾಳಿದಾಸನ ಕಾವ್ಯಲಹರಿಗೆ" ಹಾಡಿನಲ್ಲಿ ಪಿ ಬಿ ಶ್ರೀನಿವಾಸ್ ಪರಿಣಾಮಕಾರಿಯಾಗಿ ಹೇಳಿದ್ದಾರೆ.
ಗಂಡಿನ ಹಂಗಿಲ್ಲದೆ ನಾ ಬದುಕಿ ತೋರಿಸುತ್ತೇನೆ ಎನ್ನುವ ನಾಯಕಿಯ ಮಾತಿಗೆ ನಾಯಕ ಹೇಳುವ ಮಾತುಗಳು ಇಷ್ಟವಾಗುತ್ತವೆ.

"ನೀವು.. ಇದನ್ನು ಸಾಧಿಸಬಹುದು.. ಗೆಲ್ಲಲೂ ಬಹುದು, ಆದರೆ ಗಂಡು ಹೆಣ್ಣಿನ ಮಧುರ ಪ್ರೇಮದಲ್ಲಿ ಸುಪ್ತವಾದ ಒಂದು ಅವ್ಯಕ್ತ ಆನಂದವನ್ನು ಕಳೆದುಕೊಳ್ಳುತ್ತೀರಿ" ಸೂಪರ್ ಸಂಭಾಷಣೆ.

ಕಡೆಯಲ್ಲಿ.. "ಈ ಜೀವನಕ್ಕೆ ನಾ ಅತಿಥಿಯಾಗಿ ಬಂದವಳೇ" ಎನ್ನುವ ಮಾತು ನಿರ್ಧಾರಗಳನ್ನು ಕಾಲಕಾಲಕ್ಕೆ ಸರಿಯಾಗಿ ತೆಗೆದುಕೊಳ್ಳಬೇಕು ಇಲ್ಲವೇ ತುಕ್ಕು ಹಿಡಿದ ಕಬ್ಬಿಣದಂತಾಗುತ್ತದೆ ಎನ್ನುವ ಸಂದೇಶ ಹೇಳುತ್ತದೆ.

ಈ ಭಾಗದ ಚಿತ್ರದಲ್ಲಿ ಸರೋಜಾದೇವಿ ಮತ್ತು ಕಲ್ಯಾಣ್ ಕುಮಾರ್ ಅವರ ಜುಗಳಬಂಧಿ ಇಷ್ಟವಾಗುತ್ತದೆ, ಸೇರಿಗೆ ಸವ್ವಾ ಸೇರು ಎನ್ನುವಂತೆ ಇರುವ ಸಂಭಾಷಣೆಗಳು ಮನಕ್ಕೆ ತಾಕುತ್ತದೆ.

                                                         *******************

ಕಣ್ಣಿದ್ದು ಪರಿಸ್ಥಿತಿಗೆ ಬಲಿಪಶುವಾಗಿ ಹಂಗಿಗೆ ಬೀಳುವ ಕತೆಯಾದರೆ.. ಹೃದಯವಿದ್ದೂ ಪರಿಸ್ಥಿಯನ್ನು ಸರಿಯಾಗಿ ನೋಡದೆ ಅತಿಥಿಯಾದೇ ಎನ್ನುವ ನೋವಲ್ಲಿ ನಿಲ್ಲುವ ನಾಯಕಿ ಇನ್ನೊಂದು ಕತೆಯಾಗುತ್ತಾರೆ. 

ಶ್ರೀ ಈಶ್ವರ ಚಂದ್ರ ಅವರ "ಮುನಿತಾಯಿ" ಕತೆಯಲ್ಲಿ ಜೀವನದ ಆನಂದವನ್ನು ಅನುಭವಿಸಲು ಕೆಲವರಿಗೆ ಕಣ್ಣು ಬೇಕು ಕೆಲವರಿಗೆ ಕಣ್ಣು ಬೇಡ.. ಆದರೆ  ಹೃದಯ ವೈಶಾಲ್ಯತೆ ಬೇಕು ಎಂಬ ಮಾತನ್ನು ಹೇಳುತ್ತದೆ..

ಹುಟ್ಟು ಕುರುಡಿಯಾಗಿದ್ದರೂ ಮನದ ಕಣ್ಣುಗಳಿಂದ ಲೋಕವನ್ನು ನೋಡುವ ಕಥಾನಾಯಕಿ.. ತನ್ನೆಲ್ಲ ಕೆಲಸವನ್ನು ತಾನೇ ಮಾಡಿಕೊಳ್ಳುವಷ್ಟು ಶಕ್ತಳಾಗಿರುತ್ತಾಳೆ. ಹೃದಯವೈಶಾಲ್ಯವುಳ್ಳ ನಾಯಕ ಅವಳಿಗೆ ಬಾಳು ಕೊಡುತ್ತಾನೆ.

ಕಣ್ಣಿದ್ದು ಕುರುಡರು ಅನ್ನುವ ಮಾತಿನಂತೆ.. ಲೋಕವನ್ನು ಕಣ್ಣಿಗೆ ಕಾಣುವಂತೆ ನೋಡುವ ಕಾಮಾಲೆ ಕಣ್ಣಿನ ಕೆಲ ಮಂದಿ ಹೇಗೆ ಮನದ ಕೊಳವನ್ನು ರಾಡಿ ಮಾಡುತ್ತಾರೆ ಎನ್ನುವುದೇ ಕಥಾ ವಸ್ತು.

"ಓ ದ್ಯಾವ್ರೆ ನಿನ್ನ ಅಂದ ಚಂದವೇನೋ" ಈ ಹಾಡು ಎರಡು ಕಾರಣಕ್ಕೆ ಗಮನ ಸೆಳೆಯುತ್ತದೆ.
೧. ಕಣ್ಣು ಕಾಣದ ಹೆಣ್ಣು ತಾ ಕಂಡಿದ್ದೇನೆ ಎನ್ನುವಂತೆ ವರ್ಣಿಸುವ ಹಾಡು ಒಮ್ಮೆ ಬಂದರೆ.. ಇನ್ನೊಮ್ಮೆ ಕಾಣದ ದೇವರನ್ನು ಕಂಡಿದ್ದೇನೆ ಎನ್ನುವಂತೆ ಅವನಿಗೆ ಕೃತಜ್ಞತೆ ಸಲ್ಲಿಸುವ ರೀತಿಯಲ್ಲಿ ಇನ್ನೊಮ್ಮೆ ಬರುತ್ತದೆ
೨. ಕಸ್ತೂರಿ ಶಂಕರ್ ಅವರ ಮಧುರ ಧ್ವನಿ ಈ ಹಾಡನ್ನು ಇನ್ನಷ್ಟು ಮೇಲಕ್ಕೆ ಏರಿಸಿದೆ.

ನೋಡಬಾರದ ದೃಶ್ಯವನ್ನು ನೋಡುವಂತೆ ಮನಸ್ಸು ಪ್ರಚೋಧಿಸಿದಾಗ.. ಬೇಡ ಬೇಡ ಅನ್ನುತ್ತಲೇ ಕಣ್ಣಲ್ಲೇ ಭಾವನೆ ವ್ಯಕ್ತ ಪಡಿಸುವ ಉಮೇಶ್ ಈ ಚಿತ್ರದ ಮುಖ್ಯ ಪಾತ್ರ. ಬಹುಶಃ ನನಗೆ ಅನ್ನಿಸಿದಂತೆ ಒಂದು ಮಸಾಲೆ ದೃಶ್ಯವನ್ನು ಅಶ್ಲೀಲವಾಗಿ ಚಿತ್ರಿಸದೆ ಅದ್ಭುತವಾಗಿ ಕಣ್ಣಿನ ಭಾವದಲ್ಲಿಯೇ ಚಿತ್ರಿಸಿರುವುದು ಇದೆ ಮೊದಲು.. ಈ ದೃಶ್ಯ ಸಂಯೋಜನೆಗೆ ಪುಟ್ಟಣ್ಣ ಅವರಿಗೆ ಸಲಾಂ ಹೇಳಲೇ ಬೇಕು.
ಇದೆ ರೀತಿಯಲ್ಲಿ ರಜನಿಕಾಂತ್ ಕೂಡ ಹಾಗೆಯೇ ಅಭಿನಯಿಸಿದ್ದಾರೆ. ಮನಸ್ಸು ಒಮ್ಮೆ ಹಾಗೆ ಝಲ್ ಎನ್ನಿಸುತ್ತದೆ. ಅರೆ ಚಲನಚಿತ್ರಗಲ್ಲಿ ಅಶ್ಲೀಲ ಎನ್ನಿಸಬಹುದಾದ ದೃಶ್ಯಗಳನ್ನು ತನ್ನ ಕಸುಬುದಾರಿಕೆಯಿಂದ ಈ ಮಟ್ಟಕ್ಕೆ ಅದ್ಭುತವಾಗಿ ಚಿತ್ರಿಕರಿಸಬಹುದಾದರೆ ಅಶ್ಲೀಲತೆ ಎನ್ನುವುದೇ ಈ ಪ್ರಪಂಚದಲ್ಲಿ ದೃಶ್ಯ ಮಾಧ್ಯಮದಲ್ಲಿ ಇರಲಾರದು ಎನ್ನಿಸುತ್ತದೆ.

ಕಡೆಯಲ್ಲಿ ಕಥಾನಾಯಕ ಹೇಳುವ ಮಾತು "ಅಹಲ್ಯೆಯನ್ನು ತಪ್ಪು ದಾರಿಗೆ ಎಳೆದದ್ದು ದೇವೇಂದ್ರ ಅವನಿಗೆ ಶಾಪ ಕೊಟ್ಟರು ಗೌತಮರು ಅದು ಸರಿ... ಜೊತೆಯಲ್ಲಿ ತಪ್ಪೇ ಮಾಡಿರದ ಅಹಲ್ಯೆಗೂ ಶಾಪ ಕೊಟ್ಟರು.. ಆದರೆ ನಾ ಆ ತಪ್ಪು ಮಾಡೋಲ್ಲ. ನಿನಗೆ ಶಾಪ ಕೊಡೋಲ್ಲ.. ಬದಲಿಗೆ ತಪ್ಪು ಮಾಡಿದವನಿಗೆ ಶಿಕ್ಷೆ ಕೊಡುತ್ತೇನೆ" ಅದ್ಭುತ ಮಾತುಗಳು.

ಈ ಭಾಗದ ಚಿತ್ರ ಇಷ್ಟವಾಗೋದು..

  • ಕುರುಡಿ ಅಂದರೆ ಹೀಗೆ ಇರುತ್ತಾರೆ.. ಮತ್ತೆ ನಟಿ ಆರತಿ ಕುರುಡಿಯೇ ಎನ್ನುವಷ್ಟು ನೈಜತೆಯಿಂದ ಮುನಿತಾಯಿ ಪಾತ್ರದಲ್ಲಿ ಅಭಿನಯಿಸಿರುವ ಆರತಿ. 
  • ಕುರುಡಿಯನ್ನು ಗೋಳು ಹುಯ್ದು ಕೊಂಡು ಅವಳ ಪರಿಸ್ಥಿತಿಯನ್ನು ಬಂಡವಾಳ ಮಾಡಿಕೊಳ್ಳುವ ತಿಮ್ಮರಾಯಿ ಪಾತ್ರದಲ್ಲಿ ಎಂ ಎಸ್ ಉಮೇಶ್. ಬಹುಶಃ ತಿಮ್ಮರಾಯಿ ಪಾತ್ರ ಅವರ ಚಿತ್ರ ಜೀವನದ ಅತ್ಯುತ್ತಮ ಪಾತ್ರದಲ್ಲಿ ಮೊದಲಿಗೆ ನಿಲ್ಲುತ್ತದೆ 
  • ರಜನಿಕಾಂತ್ ಮೊದಲಬಾರಿಗೆ ತೆರೆಗೆ ಬಂದ ಈ ಚಿತ್ರದಲ್ಲಿ ಅವರ ಚಿಕ್ಕ ಸ್ಟೈಲ್ ಇಷ್ಟವಾಗುತ್ತದೆ.  
  • ಗಂಗಾಧರ್, ಸಂಪತ್ ಅವರ ಪಾತ್ರಗಳಿಗೆ ಅಚ್ಚುಕಟ್ಟಾಗಿ ಜೀವ ತುಂಬಿದ್ದಾರೆ. 
ಕಣ್ಣಿದ್ದು ಹಂಗಿಗೆ ಸಿಕ್ಕಿ ಹಾಕಿಕೊಳ್ಳುವರು ಹಂಗು ಕಥಾವಸ್ತುವಲ್ಲಿ ಸಿಕ್ಕರೆ,  ಕಣ್ಣಿದ್ದು ಹೃದಯವಿಲ್ಲದೆ ಜೀವನದಲ್ಲಿ ನೋವು ಅನುಭವಿಸುವರು "ಅತಿಥಿ" ಭಾಗದಲ್ಲಿ ಕಾಡುತ್ತಾರೆ, ಕಣ್ಣಿಲ್ಲದೆ ಇದ್ದರೂ ಮಾಡದ ತಪ್ಪಿಗೆ ಹೃದಯ ಕಣ್ಣಿರುವವವರ ಕ್ಷಮೆ ಸಿಗುವ ಸುಂದರ ನೋಟವನ್ನು "ಮುನಿತಾಯಿ" ಪ್ರಸಂಗದಲ್ಲಿ ಕಾಣುತ್ತೇವೆ. 


ಇಡಿ ಚಿತ್ರ ನಿಂತಿರುವುದು ಸಂಭಾಷಣೆಯ ಮೇಲೆ.. ಅದರ ಕೀರ್ತಿ ಸಂಭಾಷಣಕಾರ ಯೋಗಾನರಸಿಂಹ ಮೂರ್ತಿ ಅವರಿಗೆ ಸಲ್ಲುತ್ತದೆ.

ಒಂದು ಕಥೆಯನ್ನು ಹಲವು ಬಗೆಯಲ್ಲಿ ಹೇಳುವುದು ನೋಡಿದ್ದೇವೆ.. ಆದರೆ ಇಲ್ಲಿ ವಿವಿಧ ಕಥೆಯನ್ನು ಸರಿಯಾಗಿ ಹೊಂದಿಸಿ, ಮತ್ತು ಅದನ್ನು ಅನುಕ್ರಮವಾಗಿ ಜೋಡಿಸಿ ಮುತ್ತಿನ ಸರ ಪೋಣಿಸಿರುವ ರೂವಾರಿ "ಪುಟ್ಟಣ್ಣ" ಅವರಿಗೆ ಮನದಲ್ಲಿ ವಂದಿಸುತ್ತದೆ ತ್ರಿವೇಣಿ ಕತೆಯ ಸಮಾಗಮ ಅದುವೇ ಕಥಾಸಂಗಮ!

Friday, December 12, 2014

ವಾಣಿಯ ಝೇಂಕಾರ.. "ತಣ್ಣನೆ"ಯ ಧ್ವನಿ ಅದೇ ಅದೇ ಉಪಾಸನೆ (1974)

ನನಗೆ ಮೊದಲಿಂದಲೂ ಕೆಲವು (ಅಲ್ಲ ಅಲ್ಲ ಅಲ್ಲ ಹಲವು ಎಂದರೆ ಸರಿ) ವಿಷಯಗಳ ಬಗ್ಗೆ ಹುಚ್ಚು.. ಕೆಲವು ಧ್ವನಿಗಳು, ಸ್ಥಳಗಳು, ಚಿತ್ರಗಳು, ಹಾಡುಗಳು ಹೀಗೆ.. ಯಾಕೆ ಇಷ್ಟ ಎಂದರೆ ಹೇಳೋಕೆ ಆಗೋಲ್ಲ.. ಆದರೆ ಅದರ ಬಗ್ಗೆ ಒಂದು ರೀತಿಯ ಹುಚ್ಚು ಮನಸಲ್ಲೇ ಆಲದ ಮರವಾಗಿ ಬೇರೂರಿಬಿಡುತ್ತವೆ..

ನನ್ನ ಬಾಲ್ಯದ ದಿನಗಳಲ್ಲಿ ಎಂಭತ್ತರ ದಶಕದ ಆರಂಭದಲ್ಲಿ ದೂರದರ್ಶನದಲ್ಲಿ ಪ್ರಸಾರವಾಗಿದ್ದ "ಉಪಾಸನೆ" ಚಿತ್ರ ನೋಡಿ ಬೆಕ್ಕಸ ಬೆರಗಾಗಿದ್ದೆ. ಯಾಕೋ ಅರಿಯದೆ ನಾ ಪುಟ್ಟಣ್ಣ ಅವರ ಚಿತ್ರಗಳ ಹುಚ್ಚನ್ನು ಆಗಲೇ ಹತ್ತಿಸಿಕೊಂಡಿದ್ದೆ. 

ಹಾಗೆಯೇ.. ಈ ಚಿತ್ರದಲ್ಲಿ ಬರುವ ಕನ್ಯಾಕುಮಾರಿ ಸ್ಥಳದ  ಬಗ್ಗೆಯೂ ಕೂಡ.. ಆ ಜಾಗ ನೋಡಲೇ ಬೇಕು.. ಮತ್ತೆ ಹೋದಾಗ ಅಲ್ಲಿ ನನ್ನ ಮಡದಿ ಮತ್ತು ಮಗು ಇರಲೇ ಬೇಕು ಎನ್ನುವ ಹಠ ನನಗೆ ಸುಮಾರು ಹತ್ತು ವರ್ಷದ ಹುಡುಗನಾಗಿದ್ದಾಗಲೇ ಬಂದಿತ್ತು. (ಉತ್ಪ್ರೇಕ್ಷೆ ಖಂಡಿತ ಅಲ್ಲಾ.. ನನ್ನ ಆಸೆಗಳು....  ಹುಚ್ಚುಗಳು ಹೀಗೆಯೇ ಇರುತ್ತವೆ). 

ಈ ಚಿತ್ರ ಹಲವಾರು ಕಾರಣಗಳಿಗೆ ಮನಸ್ಸಿಗೆ ನುಗ್ಗುತ್ತದೆ. 


ಉಪಾಸನೆ ಸೀತಾರಾಮ್ ಎಂದೇ ಹೆಸರಾದ ಸೀತಾರಾಮ್ ಅವರ ಮೃದು ಮಾತು ಚಿತ್ರದ್ದುದ್ದಕ್ಕು ಕಾಡುತ್ತದೆ. ತಾಯಿ, ಮಗು, ಶಾರದೆ ಎನ್ನುವಾಗ ಅವರ ಧ್ವನಿಯಲ್ಲಿ ಬರುವ ಕಂಪನ, ಮಧುರ ಮಿಡಿತ, ತುಡಿತ ಬಹಳ ಕಾಡುತ್ತದೆ. ಅತ್ಯಮೋಘ ಅಭಿನಯ ನೀಡಿರುವ ಅವರು ಚಿತ್ರದ ಯಶಸ್ಸಿನ ಬಹು ಪಾಲನ್ನು ಆಕ್ರಮಿಸಿಕೊಳ್ಳುತ್ತಾರೆ. ಶರೀರ ಶಾರೀರ ಎರಡರ ಅಭಿನಯ ಸೊಗಸಾಗಿದೆ. ಅವರ ಮತ್ತು ಆರತಿಯ ಜುಗಲಬಂದಿ ಬಹುವಾಗಿ ಇಷ್ಟಪಡುವ ಹಾಗೆ ಅಭಿನಯಿಸಿದ್ದಾರೆ.
"ವಾಣಿ"ಜಯರಾಂ ಅವರ ತುಂಟ ಧ್ವನಿ ಇನ್ನೊಂದು ರೀತಿಯಲ್ಲಿ ಕಾಡುತ್ತದೆ. "ಭಾವವೆಂಬ ಹೂವು ಅರಳಿ" ಈ ಹಾಡಿನಲ್ಲಿ ಅವರು "ಅರಳಿ" ಎನ್ನುವಾಗ ಅವರ ಧ್ವನಿ ಕೇಳಲೇ ಒಂದು ಹಿತ. ಚಿ ಉದಯಶಂಕರ್ ಅವರ ಸರಳ ಸಾಹಿತ್ಯಕ್ಕೆ ಚಂದದ ಮೆರುಗು ವಾಣಿಯಮ್ಮ ಅವರ ಗಾಯನ.   "ಭಾವಯ್ಯ ಭಾವಯ್ಯ"   ಎನ್ನುವ ಎರಡು ಬಗೆಯ ಭಿನ್ನ ಹಾಡುಗಳಲ್ಲಿ ಬರುವ ತುಂಟತನದ ಧ್ವನಿ, ಆ ತಮಾಷೆ ಬೀರುವ ಪದಗಳ ಜೋಡಣೆ, ಅದಕ್ಕೆ ಜೀವ ತುಂಬಿರುವ ಇವರ ಗಾಯನ ಸೊಗಸಾಗಿದೆ. ಎರಡು ಹಾಡನ್ನು ರಚಿಸಿರುವ ಆರ್ ಏನ್ ಜಯಗೋಪಾಲ್ ಅವರ ಸಾಹಿತ್ಯ ಮನಸ್ಸೆಳೆಯುವುದು ಹಾಸ್ಯ ಮಿಶ್ರಿತ ಪದಗಳ ಪುಂಜಗಳಿಂದ. 

ನೀವು ಹಾಡುತ್ತಾ ಇರಿ ನಾ ಬರುತ್ತೇನೆ ಎಂದು ಕಾದು ಹೇಳಿ..  ನಂತರ ಬಂದು..  ಮೂರು ಹಾಡುಗಳಲ್ಲಿ ಇಡಿ ಚಿತ್ರವನ್ನೇ ನುಂಗಿ ಬಿಡುವ ಅತ್ಯುತ್ತಮ ಗಾಯಕಿ ಜಾನಕಿಯಮ್ಮ ಮನಸ್ಸನ್ನೇ ಕದ್ದು ಬಿಡುತ್ತಾರೆ. "ಆಚಾರವಿಲ್ಲದ ನಾಲಿಗೆ" ಪುರಂದರದಾಸರ ಸಾಹಿತ್ಯವನ್ನು ಅಚ್ಚುಕಟ್ಟಾಗಿ ಹಾಡುವ ಇವರು.. ಭಾರತದ ತುತ್ತ ತುದಿ ಕನ್ಯಾಕುಮಾರಿಯ ಬಗ್ಗೆ ವಿಜಯನಾರಸಿಂಹ ಅವರ "ಭಾರತ ಭೂಶಿರ ಮಂದಿರ ಸುಂದರಿ" ಸುಮಧುರ ಸಾಹಿತ್ಯವನ್ನು ಹಾಡುವಾಗ ಸಾಕ್ಷಾತ್ ಶಾರದೆಯೇ ಆಗಿ ಬಿಟ್ಟಿದ್ದಾರೆ. ಎರಡು ಹಾಡನ್ನು ಉಚ್ಹ ಸ್ಥಾಯಿಯಲ್ಲಿ ಹಾಡಿರುವ ಜಾನಕಿಯಮ್ಮ ಅಬ್ಬಬ್ಬ ಎನ್ನಿಸಿಬಿಡುತ್ತಾರೆ.  ಅಮೋಘ ಗಾಯನದ ಪ್ರತಿಭೆ ಜಾನಕಿಯಮ್ಮ ಅವರ ಧ್ವನಿಯಲ್ಲಿ ಜೋಗದ ಜಲಪಾತದ ರಭಸ, ಲಾಲಿತ್ಯ, ಮಧುರತೆ ಎಲ್ಲವೂ ಬಂದಿಯಾಗಿಬಿಟ್ಟಿವೆ. 

ಸುಗಮ ಸಂಗೀತ ಕ್ಷೇತ್ರದಲ್ಲಿ ಹೆಸರು ಮಾಡಿದ್ದ ಬಿ ಕೆ ಸುಮಿತ್ರ ಅವರ "ಸಂಪಿಗೆ ಮರದ ಹಸಿರೆಲೆ ನಡುವೆ" ಗೀತೆ ಸರಳ ಸಾಹಿತ್ಯದಿಂದ ಗಮನ ಸೆಳೆಯುತ್ತದೆ. ಜೊತೆಯಲ್ಲಿ ಆರ್ ಏನ್ ಜಯಗೋಪಾಲ್ ಅವರು ಚಿಕ್ಕ ಚಿಕ್ಕ ಮಕ್ಕಳು ಉಲಿಯುವ ಪದಗಳನ್ನು ತಂದು ಜೋಡಿಸಿ ಹೆಣೆದಿರುವ ಈ ಹಾಡು ಇಷ್ಟವಾಗುತ್ತದೆ. 

ಆರತಿ ಗಂಧದ ಕೊರಡಿನ ಹಾಗೆ ಅಭಿನಯವನ್ನು ತೇಯ್ದು .. ಈ ಚಿತ್ರ ಗೆದ್ದರೆ ನಾ ಗೆಲ್ಲುವೆ ಎನ್ನುವಂತೆ ತಮ್ಮ ಅಭಿನಯದ  ಶಕ್ತಿಯನ್ನು ತೇಯ್ದು .. ಈ ಪಾತ್ರಕ್ಕೆ ಅಭಿನಯಿಸಲೆಂದೇ ನಾ ಹುಟ್ಟಿದ್ದೇನೆ ಎನ್ನುವಂತೆ ಛಲ ತುಂಬಿಕೊಂಡು ನಟಿಸಿದ್ದಾರೆ ,  ಅಲ್ಲ ಅಲ್ಲ ಆ ಪಾತ್ರವೇ ಆಗಿ ಹೋಗಿದ್ದಾರೆ. ಹಾಡುಗಳಲ್ಲಿ ಅವರು ತೋರುವ ಶ್ರದ್ಧೆ, ಸಂಭಾಷಣೆ ಹೇಳುವಾಗ ಅವರು ತೋರುವ ಚೈತನ್ಯ, ಕೆಲವೊಮ್ಮೆ ಮಾತೆ ಬೇಡ ಎನ್ನಿಸುವ ದೃಶ್ಯಗಳಲ್ಲಿ ಕಣ್ಣಲ್ಲೇ ತೋರುವ ಭಾವ (ತಂಗಿ ಮತ್ತು ಗಂಡನನ್ನು ಕೋಣೆಯ ಒಳಗೆ ಸೇರಿಸಿ.. ಬಾಗಿಲನ್ನು ಹಾಕಿ ಹೊರ ಬರುವ ದೃಶ್ಯದಲ್ಲಿ) ಆಹಾ ಆಹಾ ಹೇಳಿದಷ್ಟು ಸೊಗಸು. ಸಮುದ್ರದ ಅಲೆಗಳನ್ನು ನೋಡುವಾಗ ಒಂದು ಅಲೆ ಹೋದರೆ ಇನ್ನೊಂದು ಬರುವಂತೆ, ಒಂದು ದೃಶ್ಯದಲ್ಲಿ ಅಬ್ಬಾ ಎನ್ನಿಸುತ್ತ ಮುಂದಿನ ದೃಶ್ಯ ನೋಡಿದಾಗ ಅರೆ ಅರೆ ಇದು ಇನ್ನು ಸೊಗಸು ಅನ್ನಿಸುತ್ತದೆ. ಇಡಿ ಚಿತ್ರದಲ್ಲಿ ಸರಿ ಸುಮಾರು ಪ್ರತಿಯೊಂದು ದೃಶ್ಯದಲ್ಲಿ ಕಾಣಿಸಿಕೊಳ್ಳುವ ಆರತಿ ಅಭಿನಯ ಅವರ ಚಿತ್ರ ಜೀವನದಲ್ಲಿನ ಅತ್ಯುತ್ತಮ ಅಭಿನಯ ಎನ್ನುತ್ತೇನೆ.  (ರಂಗನಾಯಕಿ ಚಿತ್ರವಿದೆ!!!!)

ಚಿತ್ರಜ್ಯೋತಿ ಲಾಂಛನದಲ್ಲಿ ರಾಶಿ ಸಹೋದರ ನಿರ್ಮಾಣದಲ್ಲಿ ತಯಾರಾದ ಈ ಚಿತ್ರ ದೇವಕಿ ಮೂರ್ತಿ ಎನ್ನುವವರ ಅದೇ ಹೆಸರಿನ ಕಥೆಯನ್ನು ಆಧರಿಸಿತ್ತು.  ಈ ಕಥೆಗೆ ಸಂಭಾಷಣೆಯ ಪೋಷಾಕು ತೊಡಿಸಿದವರು ನವರತ್ನರಾಂ ಅವರು. ಎಸ್ ವಿ ಶ್ರೀಕಾಂತ್ ಸುಂದರ ಭಾವುಕ ದೃಶ್ಯಗಳನ್ನು ಜೊತೆಯಲ್ಲಿ ಅದ್ಭುತ ಸ್ಥಳ ಕನ್ಯಾಕುಮಾರಿಯನ್ನು ಅಚ್ಚುಕಟ್ಟಾಗಿ ಚಿತ್ರೀಕರಿಸಿದ್ದಾರೆ. ಭಾರತ ಭೂಶಿರ ಹಾಡನ್ನು ಒಳಾಂಗಣದಲ್ಲಿ ಚಿತ್ರೀಕರಿಸಿ ಆರತಿಯವರ ಮುಖವನ್ನು ಹೊಳೆಯುವ ಪಾದರಸದಂತೆ, ಜೊತೆಯಲ್ಲಿ ಕ್ಯಾಮೆರ ಒಂದು ಚೂರು ಕದಲದೆ ಬರಿ ಮುಖವನ್ನು ತೋರಿಸುವ ಅದ್ಭುತ ಛಾಯಾಗ್ರಹಣ ಇವರದು. ಮತ್ತೆ ಭಾವುಕ ಸನ್ನಿವೇಶಗಳಿಗೆ ತಕ್ಕಂತೆ ಕ್ಯಾಮೆರ ಓಡಾಡುವ, ಇಲ್ಲವೇ ಸುತ್ತವ, ಇಲ್ಲವೇ ಜೋಕಾಲಿಯಂತೆ  ತೂಗುವ ವಿಭಿನ್ನ ತಂತ್ರ ಈ ಚಿತ್ರದಲ್ಲಿ ಮಾಡಿದ್ದಾರೆ. ಪುಟ್ಟಣ್ಣ ಕಣಗಾಲ್ ಅವರ ಕ್ರಿಯಾಶೀಲತೆಗೆ ಸಾಕ್ಷಿ. 

ಪುಟ್ಟಣ್ಣ ಅವರ ಜೀವದ ಗೆಳೆಯ ವಿಜಯಭಾಸ್ಕರ್ ಈ ಚಿತ್ರದ ಆತ್ಮ ಎನ್ನಲೇ ಬೇಕು. ಪ್ರತಿ ಹಾಡಿಗೂ ವಿಭಿನ್ನ ಸಂಗೀತ, ಜೊತೆಯಲ್ಲಿ ಚಿತ್ರದುದ್ದಕ್ಕೂ ಬರುವ ಹಿನ್ನೆಲೆ ವೀಣೆಯ ನಾದ ಶ್ಯಾಮಲಾ ಸ್ವಾಮೀ ಅವರದು. ವಿಜಯಭಾಸ್ಕರ ಅವರ ರಾಗ ಸಂಯೋಜನೆ ಅಮೋಘ ಅದ್ಭುತ ಎನ್ನಲೇ ಬೇಕು. ಭಾರತ ಭೂಶಿರ ಎಷ್ಟು ಬಾರಿ ಕೇಳಿದರೂ ಹೊಸದು ಎನ್ನಿಸಲು ಅವರ ಸಂಗೀತವೆ ಕಾರಣ. 

ಹೊಟ್ಟೆಕಿಚ್ಚಿನ ಗುರುವಾಗಿ ಮುಸುರಿ ನಗೆ ಮೀಟುತ್ತಾರೆ. ಅವರು ಬಂದು ಹೋಗುವ  ಐದಾರು ದೃಶ್ಯಗಳಲ್ಲಿ ತಮ್ಮ ಪ್ರತಿಭೆಯನ್ನು ಹೊರತಂದಿದ್ದಾರೆ.
 "ಗೊತ್ರಿ ನನಗೆ ಗೊತ್ರಿ ನೀವು ಹೀಗೆ ಹೇಳ್ತೀರಾ ಅಂತ ನನಗೆ ಗೊತ್ರಿ" 
"ಭಾರತದ ತಮಟೆ ವಾದ್ಯದಿಂದ ಹಿಡಿದು ಪರದೇಶದ ಪಿಯಾನೋ ತನಕ ಬರುತ್ತೆ ಕಣಯ್ಯಾ"
"ತಂಬೂರಿಗೆ ಕಮಾನ್ ಹಾಕೋದು ಇದ್ದೆ ಇದೆ ಕಣಯ್ಯಾ.. ಮೊದಲು ಪಿಟೀಲಿಗೆ ಕಮಾನು ಹಾಕು.. ಆಮೇಲೆ ತಂಬೂರಿಗೆ  ಕಮಾನು ಹಾಕಿ ಕಮಾಲ್ ನೋಡೋಣ"
ಹೀಗೆ ಚಿಕ್ಕ ಚಿಕ್ಕ ಮಾತುಗಳು ಅಂಗೀಕ ಅಭಿನಯದಿಂದ ಮನಸ್ಸು ಗೆಲ್ಲುತ್ತಾರೆ ಮುಸುರಿ ಕೃಷ್ಣಮೂರ್ತಿ. 

ಸದಾ ಒಲಾಡುತ್ತಲೇ, ಹಿಪ್ಪಿ ಕೂದಲು ಬಿಟ್ಟು ವಿಚಿತ್ರ ಅಭಿನಯ ಕೊಡುವ ಶಿವಾರಂ, ನಗೆ ಮೀಟುತ್ತಾರೆ.  ಪುಟ್ಟಣ್ಣ ಅವರ ಹಲವಾರು ಚಿತ್ರದಲ್ಲಿ  ಪಾತ್ರ ಮಾಡಿರುವ ಶಿವರಾಂ, ಪ್ರತಿ ಚಿತ್ರದಲ್ಲೂ ಏನಾದರೂ ಹೊಸ ತರಹ ಅಂಗೀಕ ಅಭಿನಯ, ಒಂದು ಪಂಚಿಂಗ್ ಸಂಭಾಷಣೆ ತರುತ್ತಾರೆ. ಅವರ ಹಾಸ್ಯಭರಿತ ಸಂಭಾಷಣೆ ಕೇಳುವುದೇ ಒಂದು ಮಜಾ.  ಇದರ ಒಂದು ಒಂದು ಝಲಕ್ "ಸಂಗೀತದಲ್ಲಿರುವ ಉತ್ತರಾದಿ, ದಕ್ಷಿಣಾದಿ, ಪೂರ್ವಾದಿ, ಪಶ್ಚಿಮಾದಿ, ಪಾಶ್ಚಾತ್ಯಾದಿ ಸಂಗೀತ ಪ್ರಕಾರಗಳನ್ನು ಕಲಸಿ, ಬೆರೆಸಿ, ಪ್ರೇಕ್ಷಕರನ್ನು ನಲಿಸಿ, ಕುಣಿಸಿ, ತಣಿಸಿ,ಬೆದರಿಸಿ ಸ್ಟನ್ ಮಾಡಬೇಕೆಂಬುದೇ ಈ ಶಂಕರಾಭರಣನ ಲೈಫ್ ಆಂಬಿಶನ್ "

ಸಂಗೀತದ ಎಲ್ಲಾ ಸಿದ್ಧ ಸೂತ್ರಗಳು ಗೊತ್ತು ಎಂದು ಜಂಬ ಕೊಚ್ಚುತ್ತಾ ಪೇಚಿಗೆ ಸಿಕ್ಕಿ ಹಾಕಿಕೊಳ್ಳುವ ಅಶ್ವಥ್ ಅವರ ಅಭಿನಯ ಚಿತ್ರದ ಹೈ ಲೈಟ್.  ತುಂಬಾ ಗಂಭೀರ ಪಾತ್ರ ಮಾಡುವ ಅಶ್ವಥ್ ಹಾಸ್ಯ ಪಾತ್ರಗಳಲ್ಲೂ ನಾ ಗೆಲ್ಲಬಲ್ಲೆ ಎಂದು ತೋರುತ್ತಾರೆ. ನಾಗರಹಾವಿನ ಚಾಮಯ್ಯ ಮೇಷ್ಟ್ರು, ಶುಭಮಂಗಳದ ಉಬ್ಬಸದ ವೈದ್ಯರು, ಇಲ್ಲಿ ತಮಾಷೆ ಬೀರುವ ಸಂಗೀತದ ಆರಾಧಕ.... ಆಶಾ ಎಷ್ಟು ವಿಭಿನ್ನ ಅಭಿನಯದ ನಟರು ಇವರು.  ಪ್ರತಿಯೊಂದು ಸಂಭಾಷಣೆಯಲ್ಲೂ "ಬೇಕಾದ್ರೆ ನನ್ನ ಹೆಂಡತೀನ ಕೇಳಿ" ಮಾತು ಇಷ್ಟವಾಗುತ್ತದೆ. ಅಂತಿಮ ದೃಶ್ಯಗಳಲ್ಲಿ ತೊಳಲಾಡುವ ಅವರ ಅಭಿನಯ ನಿಜಕ್ಕೂ ಇಷ್ಟವಾಗುತ್ತದೆ. 

ಆದವಾನಿ ಲಕ್ಷ್ಮೀದೇವಿ, ಲೀಲಾವತಿ ತಮ್ಮ ಪಾತ್ರಗಳಲ್ಲಿ ಲೀನವಾಗಿದ್ದಾರೆ.. ಆದವಾನಿ ಲಕ್ಷ್ಮೀದೇವಿ ತಾಯಿ ಮಮತೆ ತೋರುವ ಕರುಣಾಮಯಿ ಆದರೆ, ಲೀಲಾವತಿ ಕೆಲವೊಮ್ಮೆ ಅಮ್ಮನ ಕರುಣಾಳು ಪಾತ್ರ, ಹಲವೆಡೆ ಅತ್ತೆ ಎನ್ನುವ ಗತ್ತು ಎರಡನ್ನು ಮಿಶ್ರಣಗೊಳಿಸಿರುವ ಅಭಿನಯ ತಾಕುತ್ತದೆ. 

ವೆಂಕಟರಾವ್ ತಲಗೇರಿ ಅಪ್ಪನ ಪಾತ್ರದಲ್ಲಿ ಛಾಪು ಒತ್ತುತ್ತಾರೆ, ಉದ್ವೇಗವಿಲ್ಲದ ನಿಧಾನ ರೀತಿಯ ಸಂಭಾಷಣೆ,ಆ ಧ್ವನಿ, ಅಪ್ಪ ಎನ್ನುವ ಜವಾಬ್ಧಾರಿಯ ಗುಣ ಮೈ ಎತ್ತಿದಂತೆ ಅಭಿನಯ ನೀಡಿದ್ದಾರೆ. ಅದರಲ್ಲೂ ಕಡೆಯಲ್ಲಿ ಸಂಗೀತದ ಗುರುಗಳಿಗೆ ಅವರ ಶಿಷ್ಯೆ ಕಚೇರಿ ಮಾಡಬಾರದೆಂದು ಹೇಳಿ ಎಂದು ಕೇಳಿಕೊಳ್ಳುವ ದೃಶ್ಯ ಸೂಪರ್. 

ಚಿಕ್ಕ ಚೊಕ್ಕ ಪಾತ್ರದಲ್ಲಿ ಎಂ ಏನ್ ಲಕ್ಷ್ಮೀದೇವಿ ಮತ್ತು ವಜ್ರಮುನಿ ಗಮನಸೆಳೆಯುತ್ತಾರೆ. 

ಇಡಿ ಚಿತ್ರ ಸಂಗೀತದ ರಥದ ಮೇಲೆ ಸಾಗುತ್ತದೆ. ವಿಜಯಭಾಸ್ಕರ್ ಅವರು ತಮ್ಮ ಛಾಯೆಯನ್ನು ಈ ಚಿತ್ರದಲ್ಲಿ ಒತ್ತಿಬಿಟ್ಟಿದ್ದಾರೆ. ಅವರ  ಸಂಗೀತವನ್ನು ಹೊರಗೆ ತೆಗೆದು ಈ ಚಿತ್ರವನ್ನು ನೋಡಿದರೆ ಬಹಳ ಸಪ್ಪೆ ಎನ್ನಿಸುತ್ತದೆ. ಆದರೆ ಸಂಗೀತ ಕಲಾವಿದರ ಅಭಿನಯವನ್ನು ನುಂಗದೆ, ಅವರ ಅಭಿನಯಕ್ಕೆ ಹೊಳಪು ಕೊಡುವ ರತ್ನವಾಗಿರುವುದು ವಿಶೇಷ. 

ಈ ಚಿತ್ರದಲ್ಲಿ ಸಂಗೀತವನ್ನು ಪ್ರಧಾನವಾಗಿ ಇಟ್ಟುಕೊಂಡು ರೂಪಿಸಿರುವ ಚಿತ್ರ. ಆರತಿಯೇ ಈ ಚಿತ್ರದ ಕೇಂದ್ರ ಬಿಂದು. ಅವರ ಸುತ್ತಲೇ ಇಡಿ ಚಿತ್ರ ಸುತ್ತುತ್ತದೆ.  ಬರುವ ಪಾತ್ರಗಳು ಅವರ ಸಂಗೀತದ ಆಸಕ್ತಿಯ ಬಗ್ಗೆ ಪುರಸ್ಕಾರ ಇಲ್ಲಾ ತಿರಸ್ಕಾರ  ತೋರುವಂತೆ ಅಭಿನಯಿಸಿವೆ. ರೇಡಿಯೋ ರಂಗಮ್ಮ, ಮುಸುರಿ, ವಜ್ರಮುನಿ, ಲಕ್ಷ್ಮೀದೇವಿ, ಕೊಂಚ ಹೊತ್ತು ಶಿವರಾಂ ಎಲ್ಲರೂ ಅವರ ಸಂಗೀತದ ಆಸಕ್ತಿಗೆ  ಬರೆ ಎಳೆಯುವಂತೆ ಮಾಡಿದರೆ, ಸೀತಾರಾಮ್, ವೆಂಕಟರಾವ್, ಲಕ್ಷ್ಮೀದೇವಿ, ಲೀಲಾವತಿ, ಅಶ್ವತ್, ಮತ್ತು ನಾಯಕನಾಗಿ ಅಭಿನಯಿಸಿರುವ ಗೋವಿಂದರಾವ್ ಮಣ್ಣೂರ್ ಮುದ್ದಾಗಿ ಕಾಣುವುದಷ್ಟೇ ಅಲ್ಲದೆ ಸಂಗೀತಕ್ಕೆ ಪ್ರೋತ್ಸಾಹ ಕೊಡುವಲ್ಲಿ ಗಮನ ಸೆಳೆಯುವ ಕೊಡುಗೆ ಕೊಟ್ಟಿದ್ದಾರೆ. 

ಸಂಗೀತವನ್ನು ವೃತ್ತ ಎಂದು ಭಾವಿಸಿ ಅದನ್ನು  ಚಿತ್ರಿಸಲು ಹೊರಟರೆ ಅಲ್ಲಿ ಕೇಂದ್ರ ಬಿಂದು ಆರತಿ, ಪರಿಧಿಯಲ್ಲಿ ಕಾಣುವ, ಬರುವ ಪಾತ್ರಗಳೇ ಮಿಕ್ಕವು. ಗುರು ಪಾತ್ರ ಮಾತ್ರ ಪರಿಧಿಯೊಳಗೆ ಬರುತ್ತಾರೆ ಹೊರತು ಮಿಕ್ಕವರೆಲ್ಲಾ ಪರಿಧಿಯ ಹೊರಗೆ ನಿಲ್ಲುತ್ತಾರೆ,. ಇಂಥಹ ಒಂದು ಅನುಭವ ಕೊಡುವ ಈ ಚಿತ್ರ ಪುಟ್ಟಣ್ಣ ಕಣಗಾಲ್ ಅವರ ಚಿತ್ರಗಳಲ್ಲಿ ಒಂದು ರತ್ನವಾಗಿ ನಿಲ್ಲಲು ಸಹಾಯ ಮಾಡಿವೆ. 

ಪುಟ್ಟಣ್ಣ ಕಣಗಾಲ್, ದೇವಕಿ ಮೂರ್ತಿಅವರ ಕಥೆಯನ್ನು ಅಚ್ಚುಕಟ್ಟಾಗಿ ಚಿತ್ರಕಥೆಗೆ ಅಳವಡಿಸಿಕೊಂಡು ಎಲ್ಲೂ ಬೇಸರಬಾರದಂತೆ, ಸಂಗೀತ ಬಲ್ಲವರೂ, ಬಾರದಿರುವವರು ಕೂಡ ನೋಡಿ ಮೆಚ್ಚಿ ತಲೆದೂಗುವಂತೆ ಚಿತ್ರಿಕರಿಸಿರುವುದು ಅವರ ಅದ್ಭುತ ಪ್ರತಿಬೆಗೆ ಸಾಕ್ಷಿ. 

೧. ಚಿತ್ರದ ಆರಂಭ ಪುಟ್ಟಣ್ಣ ಅವರ ಚಿತ್ರಗಳಲ್ಲಿ ಯಾವಾಗಲು ವಿಶೇಷ, ಅಲ್ಲಿಯ ಚಿತ್ರದ ಸಂದೇಶದ ಒಂದು ಝಲಕ್ ಕೊಟ್ಟಿರುತ್ತಾರೆ.  ಸಂಗೀತ ಸಾಧಕರ ಚಿತ್ರಗಳ ಹಿನ್ನೆಲೆಯಲ್ಲಿ, ವಾದ್ಯಗಳ ಚಿತ್ರಗಳ ಜೊತೆಯಲ್ಲಿ ಆರಂಭವಾಗುವ ಟೈಟಲ್ ಕಾರ್ಡ್ ಗಮನ ಸೆಳೆಯುತ್ತದೆ. ಸಂಗೀತಕ್ಕೆ ತಮ್ಮನ್ನೇ ಅರ್ಪಿಸಿಕೊಂಡ ಮಹಾನ್ ಚೇತನಗಳ ದರ್ಶನ ಆರಂಭದಲ್ಲೇ ಮಾಡಿಸುತ್ತಾರೆ. 

೨. ಹಲವಾರು ದೃಶ್ಯಗಳಲ್ಲಿ, ಕಲಾವಿದರ ಅಭಿನಯದಲ್ಲಿ ತಳಮಳ, ಆತಂಕ, ಅನುಮಾನ, ಹುಯ್ದಾಟ ಇವನ್ನು ಚಿತ್ರಿಕರಿಸುವಾಗ ಕ್ಯಾಮೆರವನ್ನು ತೂಗಡಿಸಿ, ಅಲುಗಾಡಿಸಿ, ಇಲ್ಲವೇ ಅತ್ತಾ ಇತ್ತಾ ತೂರಾಡುವ ಶೈಲಿಯಲ್ಲಿ ಉಪಯೋಗಿಸಿದ್ದಾರೆ. ಕಲಾವಿದರ ಅಭಿನಯಕ್ಕೆ ಇನ್ನಷ್ಟು ಸಾಂಧ್ರತೆ ಹೆಚ್ಚಾಗಲು ಸಹಕಾರಿಯಾಗಿದೆ.  

೩. ಶಾರದೆಯ ಮದುವೆ ವಿಷಯ ಬಂದಾಗ.. ನೆರಳಿನಲ್ಲಿ ಅವಳ ವೀಣೆಯನ್ನು ಕಿತ್ತುಕೊಂಡು, ಅದನ್ನು ಬಿಸಾಡುವ ದೃಶ್ಯ, ಅವಳ ಮನಸ್ಸಲ್ಲೇ ನಡೆಯುತ್ತಿರುವ ತಳಮಳವನ್ನು ಸೂಕ್ಷ್ಮವಾಗಿ ವಿವರಿಸಿದ್ದಾರೆ. ಇದು ಅವರ ಜಾಣ್ಮೆಗೆ ಹಿಡಿದ ಕನ್ನಡಿ. ನೂರಾರು ಮಾತುಗಳಲ್ಲಿ ಹೇಳಬೇಕಾದ ದೃಶ್ಯವನ್ನು ಕೇವಲ ಕೆಲವೇ ಕ್ಷಣಗಳಲ್ಲಿ ತಲುಪಿಸುವ ಅವರ ಕ್ರಿಯಾಶೀಲತೆಗೆ ನಮನ. 

೪. ಸ್ವಾಮೀ ವಿವೇಕಾನಂದರ ಅಮರವಾಣಿಯ ಧ್ಯೋತಕವಾಗಿ ರೂಪಿಗೊಂಡಿರುವ ಕನ್ಯಾಕುಮಾರಿಯಲ್ಲಿನ ಅವರ ಸುಂದರ ದೇವಾಲಯದ ಸುಂದರ ಪರಿಸರದಲ್ಲಿ ಚಿತ್ರೀಕರಣ ಮಾಡಿರುವುದು ಬಹಳ ಇಷ್ಟವಾಗುತ್ತದೆ. ಬಹುಶಃ ಈ ಚಿತ್ರವೇ ಮೊದಲು ಅಲ್ಲಿ ಚಿತ್ರೀಕರಣ ಮಾಡಿದ್ದು ಅನ್ನಿಸುತ್ತದೆ.

5. ಇಡಿ ಚಿತ್ರದಲ್ಲಿ ಒಂದು ಅಂಶ ಎದ್ದು ಕಾಣುತ್ತದೆ, ಆರಂಭದಿಂದಲೂ ತುಂಟಿ, ತರಲೆ ಮಾಡುವ ಪಾತ್ರದಲ್ಲಿ ಮೂಡಿಬರುವ ಶಾರದೆಯ ತಂಗಿ ಪಾತ್ರ (ಜಿ ವಿ ಶಾರದ) ಮದುವೆಯ ನಂತರ ಗಂಭೀರ ಪಾತ್ರಕ್ಕೆ ನುಗ್ಗುವುದು, ಹಾಗೆಯೇ ಅಶ್ವತ್ ಚಿತ್ರದುದ್ದಕ್ಕೂ ಶಾರದೆಯ ಪರವಾಗಿ ನಿಲ್ಲುವ ಅವರು ಕಡೆಯ ದೃಶ್ಯಗಳಲ್ಲಿ ಶಾರದೆಗೆ ವಿರುದ್ಧವಾಗಿ ನಿಲ್ಲುವುದು. ಇಂಥಹ ವೈರುಧ್ಯ ಪಾತ್ರಗಳಲ್ಲಿನ ಅಭಿನಯವನ್ನು ಹೊರತೆಗೆಯುವಲ್ಲಿ ಪುಟ್ಟಣ್ಣ ಅವರ ಯಾವಾಗಲು ಸಿದ್ಧ ಹಸ್ತರಾಗಿದ್ದರು.

೬." ಭಾರತ ಭೂಶಿರ ಮಂದಿರ ಸುಂದರಿ" ಹಾಡನ್ನು ಗುರುಗಳ ಮನೆಯಲ್ಲಿ ಚಿತ್ರೀಕರಿಸಿರುವ ಶೈಲಿ, ಆರತಿ ಮುಖವನ್ನು ಮಾತ್ರ ಸ್ಟಡಿ ಕ್ಯಾಮೆರಾದಲ್ಲಿ ತೋರಿಸಿ, ಅದನ್ನು ಕೇಳಲೆಂದು ಬಂದ ಮಂದಿಯನ್ನು ತೋರಿಸುವಾಗ ಆ ದೃಶ್ಯಗಳು ತೂಗಾಡುತ್ತ ಇರುವಂತೆ ಚಿತ್ರೀಕರಿಸಿದ್ದಾರೆ. ಸಂಗೀತದ ಶಕ್ತಿಯನ್ನು ತೋರಿಸುವ ಒಂದು ವಿಭಿನ್ನ ರೀತಿ. ರಾಮಚಂದ್ರ ಶಾಸ್ತ್ರೀ ಅವರು ಆ ಹಾಡಿನಲ್ಲಿ ಬಂದು ಹೋದರೂ ಅವರು ಹೇಳುವ ಮಾತು "ಅನಂತ ಶಾಸ್ತ್ರಿಗಳೇ ಹೃದಯ ಹಿಂಡುವ ನಿಮ್ಮ ಶಿಷ್ಯಳ ಸಂಗೀತ ಎಲ್ಲರ ಮನವನ್ನು ತಣಿಸಲಿ.. " ಇಷ್ಟವಾಗುತ್ತದೆ.

೭. ಹಲವಾರು ಪ್ರಶಸ್ತಿಗಳನ್ನು ಬಾಚಿಕೊಂಡ ಈ ಚಿತ್ರ ಇಂದಿಗೂ ಸಂಗೀತಮಯ ಚಿತ್ರ ಎಂದಾಗ ಮೊದಲಿಗೆ ಬಂದು ನಿಲ್ಲುತ್ತದೆ.

ಉಪಾಸನೆ ಒಂದು ಚಿತ್ರರತ್ನವಾಗಿ ನಿಲ್ಲಲು ಎಲ್ಲರ ಪರಿಶ್ರಮದ ಅಗತ್ಯ ಇದೆ. ಇಡಿ ಚಿತ್ರವನ್ನು ಹೆಗಲಿಗೆ ಜೋತು ಹಾಕಿಕೊಂಡು ಚಿತ್ರಿಸಿರುವ ಪುಟ್ಟಣ್ಣ ಕಣಗಾಲ್ ಧ್ವನಿ ಎಂಬ ಒಂದು ಚಿಕ್ಕ ಸಂಗತಿಯನ್ನು ಇಟ್ಟುಕೊಂಡು ತಣ್ಣನೆ ಮಧುರ ಅನುಭವ ಕೊಡುವ ಚಿತ್ರವನ್ನಾಗಿ ಕೊಟ್ಟಿದ್ದಾರೆ. ಅದಕ್ಕೆ ನಮ್ಮ ಅದ್ಭುತ ನಿರ್ದೇಶಕರಿಗೆ ಒಂದು ಸಲಾಂ ಹೇಳೋಣ.. !!!

Tuesday, December 2, 2014

ಮಂಗಳಕರವಾದ ಶುಭಮಂಗಳ (1975)

ನೂಲಿನ ಉಂಡೆಯನ್ನು ನಿಧಾನವಾಗಿ ಬಿಡಿಸುತ್ತಾ ಹೋದಹಾಗೆ. ನೂಲಿನ ಉದ್ದವೂ ವಿಸ್ತರಿಸುತ್ತಾ ಹೋಗುತ್ತದೆ. ಹಾಗೆಯೇ ಒಂದು ಸಣ್ಣ ಎಳೆಯನ್ನು ನಿಧಾನವಾಗಿ ಹರಡುತ್ತಾ ಹೋದ ಹಾಗೆ ಅದರ ಹರಿವು ಅರಿವಾಗುತ್ತಾ ಹೋಗುತ್ತದೆ,

ಪುಟ್ಟಣ್ಣ ಕಣಗಾಲ್ ಕೂಡ ಹಾಗೆ.. ಒಂದು ಸಣ್ಣ ಛಲವನ್ನು ಹೊತ್ತು ಚಿತ್ರರಂಗಕ್ಕೆ ಬಂದರು. ಚಲನ ಚಿತ್ರದ ಎಲ್ಲಾ ಪ್ರಾಕಾರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡರು. ಇದರ ಫಲಿತಾಂಶ ಪ್ರತಿ ಚಿತ್ರದಲ್ಲಿಯೂ ಹೊಸ ವಿಷಯ, ಹೊಸ ಸಂದೇಶ, ಹೊಸ ಬಗೆಯ ತಾಣ, ಹೊಸ ಲಯ ಎಲ್ಲವೂ ಹೊಸದು

ಅವರ ಎಲ್ಲಾ ಚಿತ್ರಗಳನ್ನು ಸಾಲು ಸಾಲು ನಿಲ್ಲಿಸಿದರೆ ಒಂದಕ್ಕಿಂತ ಒಂದು ವಿಭಿನ್ನ., ಅದು ಅವರು ಕನ್ನಡಾಂಬೆಯ ಪೂಜೆಗೆ ಸಲ್ಲಿಸುವ ವಿವಿಧ ಪುಷ್ಪ ನಾಮಾವಳಿ,

ಇಂದು ಅವರ ಜನುಮದಿನ.. ಶುಭಾಪ್ರದವಾಗಿಯೇ ಇರುತ್ತದೆ ಎನ್ನುವುದಕ್ಕೆ ಅವರ ಶುಭಮಂಗಳ ಚಿತ್ರದ ಮೂಲಕ ಅವರ ಚರಣಕ್ಕೆ ಅರ್ಪಿಸುತ್ತಿರುವ ಈ ಮಾಲಿಕೆ ಸಾಕ್ಷಿ,

ಹುಟ್ಟು ಹಬ್ಬದ ಶುಭ ಕೋರುವ ಮೂಲಕ ಈ ಲೇಖನ ಮಾಲಿಕೆಯನ್ನು ಮುಂದುವರೆಸುತ್ತಿದ್ದೇನೆ... ಬನ್ನಿ ಕಡಲ ಕಿನಾರೆಯಲ್ಲಿ ಸ್ನೇಹದ ಕಡಲಲ್ಲಿ ಮೀಯೋಣ....


 ಶ್ರೀನಿಧಿ ಪ್ರೊಡಕ್ಷನ್ಸ್  ಲಾಂಛನದಲ್ಲಿ ತಯಾರಾದ ಈ ಚಿತ್ರ ತಯಾರಾದದ್ದು ಕರಾವಳಿಯ ಮಡಿಲಲ್ಲಿ. ಕರಾವಳಿಯ ಸುಂದರ ದೃಶ್ಯಗಳನ್ನು ಇಡಿ ಚಿತ್ರದಲ್ಲಿ ಕಾಡುವಂತೆ ಸೆರೆ ಹಿಡಿದಿರುವುದು ಛಾಯಾಗ್ರಾಹಕ ಎನ್ ಜಿ ರಾವ್.

ಸ್ನೇಹದ ಮಹತ್ವವನ್ನು ಸಾರುವ ಈ ಚಿತ್ರದ ಆರಂಭ ಸೊಗಸಾಗಿದೆ.  ಸ್ನೇಹದ ಉಗಮ ಯಾರಿಗೂ ಅರಿವಾಗುವುದಿಲ್ಲ. ಒಂದು ಸಣ್ಣ ನೋಟ, ಒಂದು ಸಣ್ಣ ನಗು, ಒಂದು ಸಣ್ಣ ಮುನಿಸು ಸ್ನೇಹಕ್ಕೆ ನಾಂದಿ ಹಾಡುತ್ತದೆ. ಹಾಗೆಯೇ ಚಿತ್ರದ ಆರಂಭ ಒಂದು ಸಣ್ಣ ಝರಿಯಿಂದ ಶುರುವಾಗಿ ಚಿತ್ರದ ಹೆಸರು ತಾರಾಗಣ ಎಲ್ಲವನ್ನು ತೋರಿಸುತ್ತಾ ಹೋಗುತ್ತಾರೆ. ಹಾಗೆ ಮುಂದುವರಿದಂತೆಯೇ ಝರಿ, ಸಣ್ಣ ತೊರೆಯಾಗುತ್ತದೆ, ನದಿಯಾಗುತ್ತದೆ, ಬೆಟ್ಟದಿಂದ ಧುಮುಕಿ ಜಲಪಾತವಾಗುತ್ತದೆ, ಕಣಿವೆಯಲ್ಲಿ ಹರಿಯುತ್ತದೆ, ಸಮುದ್ರ ಸೇರುತ್ತದೆ. ಸ್ನೇಹದ ಮಹತ್ವ ತೋರಿಸುವುದಕ್ಕಾಗಿ ಎಷ್ಟು ಸೊಗಸಾದ ವಿಧಾನ ಅನುಸರಿಸಿದ್ದಾರೆ ನಮ್ಮ ಪುಟ್ಟಣ್ಣ,

ಶ್ರೀಮತಿ ವಾಣಿಯವರ ಕಾದಂಬರಿಯ ಒಂದು ಎಳೆಯನ್ನು ಹಿಡಿದು ಈ ಚಿತ್ರವನ್ನು ಮಾಡಿದ್ದರೂ ಅದರ ಸಂಪೂರ್ಣ ಕಾಣಿಕೆ ಕಾದಂಬರಿಕಾರ್ತಿಗೆ ಅರ್ಪಿಸುವುದು ಅವರ ದೊಡ್ಡತನ ತೋರುತ್ತದೆ.

ಸಂಬಂಧಿಕರಾಗಿದ್ದರು ಸ್ನೇಹದ ಅಡಿಪಾಯದ ಮೇಲೆ ಅರಳುವ ನಾಯಕ ನಾಯಕಿಯ ಜೀವನ ಎಲ್ಲೋ ಹುಟ್ಟಿ, ಎಲ್ಲೋ ಹರಿದು, ಸ್ನೇಹದ ಸುಂದರ ಹಂತ ಮಿಲನದಲ್ಲಿ ನಿಲ್ಲುತ್ತದೆ. ಎಷ್ಟು ವಿವಿಧಬಗೆಯ ಯೋಚನೆ ಈ ಕಥಾ ಹಂದರದ್ದು.

ಒಂದು ಹೆಣ್ಣು ಮನಸ್ಸು ಹೇಗೆ ಭಾವನೆಗಳಿಗೆ ಅರಳುತ್ತದೆ, ರೋಷದ ಮಾತುಗಳಿಗೆ ಕೆರಳುತ್ತದೆ ಎನ್ನುವುದು ಚಿತ್ರದುದ್ದಕ್ಕೂ ನಾಯಕಿಯ ಎರಡು ಜಡೆಯಲ್ಲಿ ಬಿಂಭಿತವಾಗಿದೆ.

ಇಲ್ಲಿ ಪ್ರತಿಪಾತ್ರಗಳು ಅಭಿನಯಿಸಿಲ್ಲ ಬದಲಾಗಿ ನಟರೆ ಪಾತ್ರಗಳಾಗಿದ್ದಾರೆ,  ಪುಟ್ಟಣ್ಣ ಅವರು ಮತ್ತೆ ಕೆಲವೇ ನಟ ನಟಿಯರ ತಾರಾಗಣದಲ್ಲಿ ಈ ಚಿತ್ರವನ್ನು  ಚಿತ್ರಿಸಿದ್ದಾರೆ.

ಸಂಗೀತ ವಿಜಯಭಾಸ್ಕರ್ ಅವರ ಭದ್ರ ಕೋಟೆಯಲ್ಲಿ ನಿಂತರೆ, ಛಾಯಾಗ್ರಹಣ  ಎನ್ ಜಿ ರಾವ್ ಅವರ ಸಾರಥ್ಯಕ್ಕೆ ಸಿದ್ಧವಾಗಿರುತ್ತದೆ, ಸೊಗಸಾದ ಸಂಭಾಷಣೆಯ ಕತೃಗಳು ಹಾಸ್ಯ ಪಿತಾಮಹ ಬಿChi, ಜೊತೆಯಲ್ಲಿ ಯೋಗಾನರಸಿಂಹ ಮೂರ್ತಿ.

ತಂದೆಯ ಕೆಲವು  ರೋಷ ಸೇಡು ಹಠದ ಗುಣಗಳನ್ನು ಬಳುವಳಿಯಾಗಿ ಪಡೆದ ನಾಯಕಿ ತನ್ನ ಸ್ವಾಭಿಮಾನ, ಹಠ, ಛಲಕ್ಕೆ ಜೋತು ಬಿದ್ದು ಪಾತ್ರ ನಿರ್ವಹಿಸುತ್ತಾಳೆ. ಜೀವನದ ಕಡಲಿನಲ್ಲಿ ಸ್ನೇಹದ ತರಂಗಗಳು ಬಡಿದು ಬಡಿದು ಅವಳ ಸಿಟ್ಟು ರೋಷ ಹಠ ಇವನ್ನು ಕಮ್ಮಿ ಮಾಡುತ್ತಾ ಸ್ನೇಹದ ಸಂಕೋಲೆಗೆ ಶರಣಾಗುತ್ತಾಳೆ.

ಆರತಿ " ಹೇಮಾ"ಳನ್ನು ಆಲಂಗಿಸಿ ಮುದ್ದಾಡಿ ಅಪ್ಪಿಕೊಂಡು ಅವಳೊಳಗೆ ತೂರಿಕೊಂಡು ಬಿಟ್ಟಿದ್ದಾರೆ. ಇಡಿ ಚಿತ್ರದುದ್ದಕ್ಕೂ ಹೇಳುವ "ಪ್ರಭಾಕರ" ಶಬ್ದ ಅವರ ದನಿಯಲ್ಲೇ ಕೇಳಬೇಕು. ಪ್ರತಿ ದೃಶ್ಯದಲ್ಲೂ ಆವರಿಸಿಕೊಳ್ಳುತ್ತಾ ಹೋಗುವ ಅವರು.. ಅವರಿರಿರದೆ ಚಿತ್ರವಿಲ್ಲ ಎನ್ನುವಷ್ಟು ಕಾಡುತ್ತಾರೆ.

  • ಕಾರನ್ನು ಓದಿಸಿ ಪ್ರಭಾಕರನನ್ನು ಗೋಳು ಹುಯ್ದು ಕೊಳ್ಳುವ ದೃಶ್ಯ 
  • ಲೆಖ್ಖ ಲೆಖ್ಖ ಎನ್ನುತ್ತಾ ಪ್ರತಿ ಬಾರಿಯೂ ಗಲಾಟೆ ಮಾಡುವ ದೃಶ್ಯ 
  • ಇಷ್ಟು ದೊಡ್ಡ ಜಗತ್ತಲ್ಲಿ ನನಗೊಬ್ಬಳಿಗೆ ಜಾಗ ಇರೋಲ್ವೆ.. ಎನ್ನುವಾಗ ಹತಾಶೆ ಕಂಡರೂ ಸ್ವಲ್ಪ ಬಿಗುಮಾನ ಇರುವ ಮಾತುಗಳು 
  • ತಿಮ್ಮ, ಮೂಗ ನಮ್ಮ ಮನೆ ಆಳಲ್ಲ ನನ್ನ ಒಡಹುಟ್ಟಿದವರು ಎನ್ನುವ ಅವರ ಮಾತಿನ ಧಾಟಿ ಸೂಪರ್ 
  • ಕೆಲಸ ಸಿಕ್ಕಿ ಸಂಬಳ ತಂದು ಪ್ರಭಾಕರನನ್ನು ಛೇಡಿಸುವ ದೃಶ್ಯ "ಈ ಶತಮಾನದ ಮಾದರಿ ಹೆಣ್ಣು" ಹಾಡುತ್ತಾ ಪ್ರಭಾಕರನ ಬರುವಿಕೆಗೆ ಕಾಯುವ ಅಭಿನಯ 
  • ಪ್ರಭಾಕರನ ಸ್ನೇಹಕ್ಕೆ ಸೋತು ತನ್ನ ಕೊನೆಗೆ ಬಂದಾಗ ಅಪ್ಪನ ಭಾವ ಚಿತ್ರವನ್ನು ಮಡಚಿಟ್ಟು ಇಂಥಹ ಸ್ನೇಹಕ್ಕೆ ನಾ ಹೇಗಪ್ಪ ಸೋಲದಿರಲಿ ಎನ್ನುವಾಗ ಕಣ್ಣೀರಾಗುತ್ತೇವೆ
  • ಒಂದು ಸನ್ನಿವೇಶದಲ್ಲಿ ಪ್ರಭಾಕರ ಹೇಮಾಳ ಮೇಲೆ ಅನುಮಾನ ಪಟ್ಟು ಅವಮಾನಿಸಿದಾಗ. ಅಳುತ್ತಾ ಕೂತಾಗ .. ತಪ್ಪನ್ನು ಅರಿತ ಪ್ರಭಾಕರ ಕ್ಷಮೆ ಕೇಳುತ್ತಾ ಕಣ್ಣಲ್ಲಿ ನೀರು ತುಂಬಿ ಕೊಂಡಾಗ.. ಅಳುತ್ತ ಇದ್ದ ಹೇಮಾ, ತುಸು ಮುನಿಸಿನಲ್ಲಿ... ಸ್ವಲ್ಪವೇ ನಗುತ್ತಾ.. "ಅದ್ಯಾಕೋ ಪ್ರಭಾಕರ ಅಳ್ತೀಯ ಹೆಣ್ಣಿಗರಾಮ.. " ಈ ದೃಶ್ಯ ಸೂಪರ್. ಒಂದು ಕಡೆ ಅಳು, ಕೋಪ, ಸ್ನೇಹಿತನಿಗೆ ಬೇಸರವಾಯ್ತು ಎನ್ನುವ ಭಾವ ಎಲ್ಲವೂ ಮೇಳೈಸಿ ತೋರಿಸಿರುವ ಅವರ ಭಾವ ಸೂಪರ್ 
  •  ಪ್ರಭಾಕರನ ಮನೆ ತನ್ನ ಹೆಸರಿಗೆ ಇದೆ ಎಂದು ಗೊತ್ತಾದ ಮೇಲೆ.. ಪ್ರಭಾಕರ ಆ ಮನೆಯನ್ನು ಬಿಟ್ಟು ಹೋಗುತ್ತೇನೆ ಎಂದಾಗ.. ಇಲ್ಲೇ ಇರು ಎಂದು ಒತ್ತಾಯ ಮಾಡುತ್ತಾಳೆ... ಆಗ ಹೆಣ್ಣಾದ ನಿನಗೆ ಸ್ವಾಭಿಮಾನ ಇದೆ.. ಗಂಡಾದ ನನಗೆ ಸ್ವಾಭಿಮಾನ ಸತ್ತು ಹೋಗಿದೆಯ ಎಂದಾಗ ಕಪಾಳಕ್ಕೆ ಹೊಡೆಯುವ ಶಬ್ದ ಜೊತೆಯಲ್ಲಿ ಹೇಮಾಳ ಅಭಿನಯ. 
ಒಟ್ಟಿನಲ್ಲಿ ಇಡಿ ಚಿತ್ರವನ್ನು ತನ್ನ ಭುಜದ ಮೇಲೆ ಹೊತ್ತು ಸಾಗಿರುವ ಪರಿ ಆರತಿ ಹೇಮಾಳ ಪಾತ್ರವನ್ನು ಅಭಿನಯಿಸೋಕೆ ಜನ್ಮ ತಾಳಿದ್ದಾರೆ ಅನ್ನುವಷ್ಟು ಇಷ್ಟವಾಗುತ್ತಾರೆ. 

ಶ್ರೀನಾಥ್ ಪ್ರಭಾಕರನ ಪಾತ್ರದಲ್ಲಿ ಇಳಿದು ಬಿಟ್ಟಿದ್ದಾರೆ.. ನಾಯಕನಾಗಿ ಮೊದಲ ದೊಡ್ಡ ಚಿತ್ರ ಇದು. ನಂತರ ಪುಟ್ಟಣ್ಣ ಅವರ ಸುಮಾರು ಚಿತ್ರಗಳಲ್ಲಿ ಮಿನುಗಿದ್ದಾರೆ. ಹೇಮಾಳ ಜೊತೆಯಲ್ಲಿನ ಜಗಳ, ತಮಾಷೆ, ಸ್ನೇಹ ಎಲ್ಲವು ಸೂಪರ್. ಅವರ ಜೀವನದ ಒಂದು ಭಾಗವೇ ಆಗಿ ಹೋದ "ಸ್ನೇಹದ ಕಡಲಲ್ಲಿ ನೆನಪಿನ ದೋಣಿಯಲಿ" ಹಾಡು ಸುಂದರವಾಗಿದೆ. ಹೇಮಾಳ ಪ್ರತಿ ಸಂಭಾಷಣೆಗೂ ತಕ್ಕ ಪ್ರತಿಯುತ್ತರ ಕೊಡುತ್ತ ಹೋಗುವ ಅವರ ಪಾತ್ರದ ಹರಿವು ಇಷ್ಟವಾಗುತ್ತದೆ. ಸ್ನೇಹಕ್ಕೆ ಸ್ನೇಹದ ಮನಸ್ಸಿಗೆ ಮನಸೋಲುವ ಅಭಿನಯ ಸುಂದರವಾಗಿದೆ 


ತಿಮ್ಮನ ಪಾತ್ರದಲ್ಲಿ ನಟ ಶಿವರಾಂ ಕೆಲವೊಮ್ಮೆ ನಗಿಸುತ್ತಾರೆ, ಕೆಲವೊಮ್ಮೆ ಮನಸ್ಸಿಗೆ ತಾಕುತ್ತಾರೆ.. "ಹೇಮವ್ವ ಪ್ರಭಾಕರಪ್ಪ ನಿಮ್ಮನ್ನು ಬಚಾಯಿಸಿದರು.. ಎನ್ನುವಾಗ ಕಣ್ಣೀರು ತುಂಬಿಕೊಳ್ಳುತ್ತಾರೆ.. ಸೂರ್ಯಂಗೂ ಚಂದ್ರಂಗೂ ಹಾಡಿನಲ್ಲಿ ಹೇಮಾ ಮತ್ತು ಪ್ರಭಾಕರನನ್ನು ಸೇರಿಸಲು ಪಡುವ ಪಾಡು ಇಷ್ಟವಾಗುತ್ತದೆ. "ಸಮುದ್ರದಲ್ಲಿ ಈ ಪಾಟಿ ನೀರೈತೆ.. ಕುಡಿಯೋಕೆ ಒಂದು ನೀರು ಸಿಗುತ್ತಾ ಹೇಳಿ" ಎನ್ನುವಾಗ ತಿಮ್ಮ ಅನುಭವಿ ರೀತಿಯಲ್ಲಿ ಮಾತಾಡುತ್ತ ಹೋಗುವ ಪಾತ್ರ ಇಷ್ಟವಾದರೆ, ಮನೆಯ ಫೌಂಟನ್ ನಲ್ಲಿ ಸ್ನಾನ ಮಾಡುವಾಗ, ಊಟ ಮಾಡಿದಮೇಲೆ ಹಣ್ಣಿನ ತಟ್ಟೆಯನ್ನು ಎತ್ತಿಕೊಂಡು ಹೋಗುವಾಗ ನಗೆ ಉಕ್ಕಿಸುತ್ತಾರೆ.

ಮೂಗನ ಪಾತ್ರದಲ್ಲಿ ಅಂಬರೀಶ್.. ಅಬ್ಬಾ ಎನ್ನಿಸುತ್ತಾರೆ ಇಡಿ ಚಿತ್ರದಲ್ಲಿ ತಿಮ್ಮನ ನೆರಳಾಗೆ ಇರುವ ಈ ಪಾತ್ರ.. ಹೇಮಾ ಕೆಲಸ ಮಾಡುವ ಅಂಗಡಿಯಲ್ಲಿ ಆ ಅಂಗಡಿಯ ಯಜಮಾನರ ಮಕ್ಕಳು ಅವಳನ್ನು ಪೀಡಿಸಿದರು ಎಂದು ತಿಳಿದಾಗ ರೋಷ ವೇಷದಲ್ಲಿ ಬಂದು ತಿಮ್ಮನ ಕಣ್ಣೀರನ್ನು ಒರೆಸಿ ಅಂಗಡಿಗೆ ನುಗ್ಗಿ ಬಡಿಯುವ ದೃಶ್ಯ ಇಷ್ಟವಾಗುತ್ತದೆ. ಈ ದೃಶ್ಯದಲ್ಲಿ ಹೇಮಾ ತನ್ನ ಕಷ್ಟವನ್ನು ಹೇಳಿಕೊಳ್ಳಲು ಮೂಗನನ್ನು ಆರಿಸಿಕೊಳ್ಳುವುದು.. ಭಾವ ವ್ಯಕ್ತ ಪಡಿಸಿಕೊಳ್ಳೋಕೆ ಮಾತಲ್ಲ ಮುಖ್ಯ ಭಾವ ಮತ್ತು ಭಾವನೆ ಮುಖ್ಯ ಎಂದು ತೋರಿಸುತ್ತದೆ.  ಯಾಕೆ ಅಂದ್ರೆ ಈ ದೃಶ್ಯದಲ್ಲಿ ಮಾತು ಬರುವ ಎಲ್ಲರೂ ಹೇಮಾ ತಪ್ಪು ಮಾಡಿದ್ದಾಳೆ ಎಂದೇ ನಂಬಿರುತ್ತಾರೆ.. ಮೂಗ ಒಬ್ಬನೇ ಅರ್ಥ ಮಾಡಿಕೊಳ್ಳಲು ಪ್ರಯತ್ನ ಪಡುವುದು. ಪುಟ್ಟಣ್ಣ ಇಂಥಹ ಸಂಕೀರ್ಣ ಪಾತ್ರ ಸೃಷ್ಟಿಸುವುದರಲ್ಲಿ ಎತ್ತಿದ ಕೈ. ಅಂಬರೀಶ್ ಇಡಿ ಚಿತ್ರದಲ್ಲಿ ಇಷ್ಟವಾಗುತ್ತಾರೆ.

ಪುಟ್ಟಣ್ಣ ನವರ ನಾಗರಹಾವು ಚಿತ್ರದಲ್ಲಿ ಅಬ್ಬರಿಸಿದ್ದ ಚಾಮಯ್ಯ ಮೇಷ್ಟ್ರು ಈ ಚಿತ್ರದಲ್ಲಿ ಅಶ್ವತ್ ವೈದ್ಯರ ಚಿಕ್ಕ ಚೊಕ್ಕ ಪಾತ್ರದಲ್ಲಿ ಬಂದು ನಗಿಸುತ್ತಾರೆ. ಪುಟ್ಟಣ್ಣ ಅವರ ಚಿತ್ರಗಳನ್ನು ನಿರಾಕರಿಸಲು ಸಾಧ್ಯವೇ ಇಲ್ಲ ಎನ್ನುವ ಹಂತ ಅಶ್ವಥ್ ಅವರ ಚಿಕ್ಕ ಪಾತ್ರವನ್ನು ಒಪ್ಪಿಕೊಳ್ಳುವುದರ ಮೂಲಕ ತೋರಿಸುತ್ತಾರೆ .

ಆದ್ರೆ ರೀತಿಯಲ್ಲಿ ಸೀತಾರಾಂ ಚಿಕ್ಕ ಪಾತ್ರವಾದರೂ ಮುಂದೆ ಉಪಾಸನೆ ಚಿತ್ರದಲ್ಲಿ ಗಮನ ಸೆಳೆಯುವಂಥಹ ಅಭಿನಯ ನೀಡಿ ಮನಗೆಲ್ಲುತ್ತಾರೆ. ಹೀಗೆ ಕಲಾವಿದರಿಗೆ ಅವರ ಆಳವನ್ನು ತೋರಿಸುತ್ತಾ ಅವರ ಪ್ರತಿಭೆಯನ್ನು ಹೊರ ತೆಗೆಯುವ ಶಕ್ತಿ ಪುಟ್ಟಣ್ಣ ಅವರಿಗೆ ಕರಗತವಾಗಿತ್ತು.

ಈ ಚಿತ್ರದ ಹಾಡುಗಳು ಅಜರಾಮರ..

"ಈ ಶತಮಾನದ ಮಾದರಿ ಹೆಣ್ಣು" ವಾಣಿ ಜಯರಾಂ "ಹೆಣ್ಣು" ಎನ್ನುವ ಪದವನ್ನು ಉಲಿಯುವ ರೀತಿ ಸೂಪರ್. ವಿಜಯನಾರಸಿಂಹ ಅವರ ಸಾಹಿತ್ಯವನ್ನು ಎತ್ತರದ ಸ್ಥಾಯಿಯಲ್ಲಿ ಹಾದಿ ಮನ ಗೆದ್ದಿದ್ದಾರೆ ವಾಣಿ ಜಯರಾಂ.

"ಸ್ನೇಹದ ಕಡಲಲ್ಲಿ ನೆನಪಿನ ದೋಣಿಯಲಿ" ಸ್ನೇಹದ ಮಹತ್ವ, ಬಾಲ್ಯದ ಹುಡುಗಾಟ ಎಲ್ಲವನ್ನು ಕಲಸಿ ಬರೆದಿರುವ ಚಿ ಉದಯಶಂಕರ್ ಸ್ನೇಹಕ್ಕೆ ಒಂದು ಹಾಡು ಎಂದಾಗ ಈ ಹಾಡೇ ನೆನಪಿಗೆ ಬರುವುದು. ಎಸ್ ಪಿ ಬಾಲಸುಬ್ರಮಣ್ಯಂ ಅವರು ಜೀವ ತುಂಬಿ ಹಾಡಿದ್ದಾರೆ. ಶ್ರೀನಾಥ್ ಅವರ ಅನೇಕ ಗೀತೆಗಳನ್ನು ಹಾಡಿರುವ ಇವರಿಬ್ಬರ ಸ್ನೇಹಕ್ಕೆ ಮುನ್ನುಡಿ ಈ ಹಾಡಾಯಿತು.

ಕನಸ್ಸಲ್ಲಿ ಕಂಡು ಬರುವ "ಶುಭ ಮಂಗಳ ಸುಮೂಹೂರ್ತವೆ" ವಾಣಿ ಜಯರಾಂ ಮತ್ತು ಪಿ ಬಿ ಶ್ರೀನಿವಾಸ್ ಗಮನಸೆಳೆಯುತ್ತಾರೆ. ಕಣಗಾಲ್ ಪ್ರಭಾಕರ್ ಶಾಸ್ತ್ರಿಯವರ ಸಾಹಿತ್ಯವನ್ನು ಅಷ್ಟೇ ಮುದ್ದಾಗಿ ಚಿತ್ರಿಸಿರುವ ಶೈಲಿ ಪಟಾಕಿ ಸಿಡಿಮದ್ದು ಇಲ್ಲದೆ ಬರಿ ಹೂಬಾಣಗಳ ಮಧ್ಯೆ ಸುಂದರವಾಗಿ ಮೂಡಿ ಬಂದಿದೆ.

ಮಲ್ಪೆಯ ಕಡಲ ತೀರದ "ಸೈಂಟ್ ಮೇರಿಸ್" ಸುಂದರ ದ್ವೀಪದಲ್ಲಿ ಚಿತ್ರಿಸಿರುವ ಹಾಡು "ನಾಕೊಂದ್ಲ ನಾಕು" ಎಂ ಎನ್ ವ್ಯಾಸರಾವ್ ಅವರ ತುಂಟ ಸಾಹಿತ್ಯ, ಜೊತೆಯಲ್ಲಿ ಪ್ರಕೃತಿಯ ವಿಹಂಗಮ ಬಣ್ಣನೆ ಇಷ್ಟವಾಗುತ್ತದೆ. ಎಸ್ ಪಿ ಬಾಲಸುಬ್ರಮಣ್ಯಂ ಮತ್ತೆ ತುಂಟ ತನದ ಈ ಹಾಡಿಗೆ ದನಿಯಾಗುತ್ತಾರೆ.

ಪುಟ್ಟಣ್ಣ ಅವರು ಪ್ರತಿಭೆಗಳನ್ನು ಹೇಗೆ ಹುಡುಕುತ್ತಿದ್ದರು ಎನ್ನುವುದಕ್ಕೆ ಉತ್ತಮ ಸಾಕ್ಷಿ "ಸೂರ್ಯಂಗೂ ಚಂದ್ರಂಗೂ" ಹಾಡು. ನಿರ್ದೇಶಕ ರವಿ ಅವರ ದಪ್ಪ ದನಿಯಲ್ಲಿ ಹಾಡಿಸಿರುವ ಈ ಹಾಡು ಇಷ್ಟವಾಗುವುದು ಅದರ ಸಾಹಿತ್ಯ, ಹಳ್ಳಿಯ ಶೈಲಿಯಲ್ಲಿಯೇ ಹಾಡಿರುವ ಬಗೆ, ಜೊತೆಯಲ್ಲಿ ಶಿವರಾಂ ಅವರ ಅಭಿನಯ. ಎಂ ಎನ್ ವ್ಯಾಸರಾವ್ ಅವರ ಅರ್ಥ ಗರ್ಭಿತ ಸಾಹಿತ್ಯ ಮನಗೆಲ್ಲುತ್ತದೆ.

ಇನ್ನೊಬ್ಬ ಸುಂದರ ನಟ ಆರ್ ನಾಗೇಂದ್ರ ರಾಯರ ಮಗ ಸುದರ್ಶನ್ ಅವರ ಸಿರಿ ಕಂಠ ದಲ್ಲಿ ಮೂಡಿರುವ ಗೀತೆ "ಹೂವೊಂದು ಬಳಿ ಬಂದು" ಹಾಡಿಗೆ ಒಂದು ಭಾವುಕ ಚೌಕಟ್ಟು ಒದಗಿಸುವಲ್ಲಿ ಈ ಹಾಡು ಗಾಯನ ತನ್ನ ಕಾಣಿಕೆ ಸಲ್ಲಿಸುತ್ತದೆ. ವಿಜಯನಾರಸಿಂಹ ಅವರ ಸುಂದರ ಪದಗಳ ಜಾದೂ ಶ್ರೀನಾಥ್ ಅವರ ಅಭಿನಯ ಈ ಹಾಡಿಗೆ ಮೆರುಗು ತಂದಿದೆ.

ಇಡಿ ಚಿತ್ರದಲ್ಲಿ ಸ್ನೇಹದ ಕಡಲಿನ ಮೇಲೆ ತೇಲಿಸುವಂತೆ ಅನುಭವ ಕೊಡುವ ಸಂಗೀತ ವಿಜಯಭಾಸ್ಕರ್ ಅವರದ್ದು. ಪ್ರತಿ ಹಾಡಿಗೂ ಪ್ರತಿ ಸನ್ನಿವೇಶಕ್ಕೂ ವಿಭಿನ್ನ ರೀತಿಯಲ್ಲಿ ಸಂಗೀತ ತುಂಬುತ್ತಾ ಜೀವ ತುಂಬುವ ಅವರ ಸಂಗೀತ ಈ ಚಿತ್ರದ ಉತ್ತಮ ಯಶಸ್ಸಿಗೆ ಕಾರಣವಾಗಿತ್ತು. ಅದ್ಭುತ ಗೆಳೆತನ ವಿಜಯಭಾಸ್ಕರ್, ಪುಟ್ಟಣ್ಣ ಮತ್ತು ವಿಜಯನಾರಸಿಂಹ ಅವರದ್ದು. ಈ ಗೆಳೆತನದ ಅಪಾರ ಶಕ್ತಿ ಈ ಚಿತ್ರದ ಯಶಸ್ಸಿಗೆ ದುಡಿದಿದೆ.

ಗುರುಗಳೇ ಇಂಥಹ ಸ್ನೇಹದ ಕಡಲಲ್ಲಿ ನಮ್ಮನ್ನು ತೇಲಿಸಿ ಸಾಗಿಸಿರುವ ಈ ಚಿತ್ರದ ನುಡಿ ನಮನದ ಜೊತೆಯಲ್ಲಿ ನಿಮಗೆ ಹುಟ್ಟು ಹಬ್ಬದ ಶುಭಾಶಯಗಳನ್ನು ನಿಮ್ಮ ಅಭಿಮಾನಿ ಬಳಗದ ಮೂಲಕ ಕೋರುತ್ತಿದ್ದೇವೆ.  ಶುಭಮಂಗಳಕರ ನೆನಪುಗಳೊಂದಿಗೆ ಮತ್ತೊಂದು ಚಿತ್ರದ ಜೊತೆಯಲ್ಲಿ ಬರುವೆ.






Monday, November 24, 2014

ಎಡವಿದರೆ ಕಲ್ಲು ಗುಡ್ಡವೇ.. ಎಡಕಲ್ಲು ಗುಡ್ಡದ ಮೇಲೆ (1973)

ಪುಟ್ಟಣ್ಣ ಯಾಕೆ ಇಷ್ಟ ಆಗ್ತಾರೆ.. ಕಾರಣ ಹುಡುಕುತ್ತಾ ಹೋದ ಹಾಗೆ ಶರಧಿಯಲ್ಲಿ ಕಪ್ಪೆ ಚಿಪ್ಪು ಹುಡುಕಿದ ಹಾಗೆ.. ಒಂದು ಸಿಕ್ಕಾಗ ಇನ್ನೊಂದು ಕಾಣುತ್ತದೆ. ಅರೆ ಇದು ಚೆನ್ನಾಗಿದೆ ಅಂತ ಇನ್ನೊಮ್ಮೆ ಕಣ್ಣರಳಿಸಿದರೆ ಇನ್ನೊಂದು ಸೊಗಸಾಗಿ ಕಾಣುತ್ತದೆ.

ಅವರ ಬೆಳ್ಳಿಮೋಡದಿಂದ ನಾಗರಹಾವು ಚಿತ್ರದವರೆಗೆ ಬರೆದ ನಂತರ ಹಿಂದೆ ತಿರುಗಿ ನೋಡಿದರೆ ಒಂದು ರೀತಿ ಸಂತೃಪ್ತಿ, ಮುಂದೆ  ಆನಿಸಿ ನೋಡಿದರೆ ಇನ್ನೊಂದು ಬಗೆಯ ರತ್ನಗಳು ಹೊಳೆಯುತ್ತಿವೆ.

ಭಾರತಿಸುತ ಅವರ ಸುಧಾ ವಾರಪತ್ರಿಕೆಯ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಅದೇ ಹೆಸರಿನ ಕಾದಂಬರಿಯನ್ನು ಚಿತ್ರಕಥೆ ಬರೆದು ನಿರ್ದೆಶಿಸಿದ್ದಾರೆ ಪುಟ್ಟಣ್ಣ ಕಣಗಾಲ್.

ಶ್ರೀಕಾಂತ್ & ಶ್ರೀಕಾಂತ್ ಎಂಟರ್ಪ್ರೈಸಸ್ ಲಾಂಛನದಲ್ಲಿ ತಯಾರಾದ ಈ ಚಿತ್ರ ೧೯೭೩  ತೆರೆಯನ್ನು ಅಲಂಕರಿಸಿತು. ಒಂದು ರೀತಿಯ ವಿಚಿತ್ರ ಅನ್ನಿಸುವಷ್ಟು ಕಥೆಗೆ ಹೂರಣ ತುಂಬಿ ನಟಿಸಿದ್ದು ಅಭಿನಯ ಶಾರದೆ ಜಯಂತಿ. ಪ್ರವರ್ಧಮಾನಕ್ಕೆ ಬರುತ್ತಿದ್ದ ಆರತಿ, ಎಡಕಲ್ಲು ಗುಡ್ಡ ಚಂದ್ರಶೇಖರ್ ಎಂದೇ ಖ್ಯಾತರಾಗಿದ್ದ ಚಂದ್ರು, ಶರಪಂಜರ, ನಾಗರಹಾವು ಚಿತ್ರಗಳಲ್ಲಿ ಚಮತ್ಕಾರಿ ಅಭಿನಯ ನೀಡಿ, ಜೊತೆಯಲ್ಲಿ ಗೆಜ್ಜೆ ಪೂಜೆ ಚಿತ್ರವನ್ನು ನಿರ್ಮಿಸಿದ್ದ ಶಿವರಾಂ ಮತ್ತು ಪೋಷಕ ಪಾತ್ರದಲ್ಲಿ ರಂಗ.

ಇಡಿ ಚಿತ್ರದಲ್ಲಿ ಆವರಿಸಿಕೊಂಡಿರುವುದು ಈ ಐದೇ ಮಂದಿ. ಇವರುಗಳನ್ನೇ ಕೇಂದ್ರವಾಗಿತ್ತು ಕೊಂಡು ಎಲ್ಲೂ ಬೇಸರ ತರಿಸದೇ ಚಿತ್ರವನ್ನು ಮಾಡಿ ಗೆದ್ದವರು ಪುಟ್ಟಣ್ಣ ಎಂಬ ಮಾಂತ್ರಿಕ ನಿರ್ದೇಶಕ.

ನರೇಂದ್ರ ಬಾಬು ಅವರ ಸಂಭಾಷಣೆ, ಎಸ್ ವಿ ಶ್ರೀಕಾಂತ್ ಅವರ ಛಾಯಾಗ್ರಹಣ, ಸಂಗೀತ ನಿಧಿ ಎಂ ರಂಗರಾವ್ ಇವರಿಂದ ಕೂಡಿದ ಈ ಚಿತ್ರಕ್ಕೆ ಸೊಗಸಾದ ಹಾಡುಗಳನ್ನು ಬರೆದವರು ಕಣಗಾಲ್ ಪ್ರಭಾಕರ್ ಶಾಸ್ತ್ರೀ, ವಿಜಯನಾರಸಿಂಹ, ಆರ್ ಎನ್ ಜಯಗೋಪಾಲ್, ನರೇಂದ್ರಬಾಬು.  ಹಾಡುಗಳಿಗೆ ದನಿಯಾದವರು ಪಿ ಸುಶೀಲ, ಎಸ್ ಪಿ ಬಾಲಸುಬ್ರಮಣ್ಯಂ, ಎಸ್ ಜಾನಕಿ.

ಈ ಚಿತ್ರ ಮನಸ್ಸೆಳೆಯುವುದು ಈ ಕಾರಣಗಳಿಂದ

೧. ಕಾಮ ಎಂಬ ಅರಿಷಡ್ವರ್ಗದ ಪ್ರಮುಖ  ವೈರಿಯನ್ನು ಕೇಂದ್ರ ಕಥಾ ವಸ್ತುವಾಗಿದ್ದರೂ ಇಡಿ ಪರಿವಾರ ಒಟ್ಟು ಕೂತು ನೋಡಬಹುದಾದ ಚಿತ್ರ ಮಾಡಿದ್ದು
೨. ಜಯಂತಿ ಆಗಲೇ ಪ್ರಸಿದ್ಧ ತಾರೆ ಎಂದು ಹೆಸರು ಮಾಡಿದ್ದರು, ಈ ರೀತಿಯ ಒಂದು ಸಂಕೀರ್ಣ ಪಾತ್ರವನ್ನು ಒಪ್ಪಿ ನಟಿಸಿದ್ದು
೩. ರಂಗ ಅವರ ಚಿತ್ರ ಜೀವನದಲ್ಲಿ ಒಂದು ವಿಭಿನ್ನ ಚಿತ್ರವಾಗಿ ಮೂಡಿ ಬಂದದ್ದು.
೪. ಪುಟ್ಟಣ್ಣ ಅವರು ಮೊದಲಬಾರಿಗೆ ಕರುನಾಡಿನಿಂದ ಒಂದು ಕಾಲನ್ನು ಹೊರಗೆ ಇತ್ತು ಕೇರಳದ ವೈನಾಡಿನಲ್ಲಿರುವ ಎಡಕಲ್ಲು ಗವಿಯಲ್ಲಿ ಕೆಲವು ಸನ್ನಿವೇಶಗಳನ್ನು ಚಿತ್ರಿಸಿದ್ದು.

ಚಿತ್ರದ ಹೆಸರು, ತಾರಾಗಣ, ತಾಂತ್ರಿಕ ವರ್ಗವನ್ನು ತೋರಿಸುವ ಜೊತೆಯಲ್ಲಿ ಅರಿಷಡ್ವರ್ಗಗಳ ಬಗ್ಗೆ ಕಿರು ಮಾತನ್ನು ಹೇಳಿ, ಜೊತೆಯಲ್ಲಿ ಪುರುಷ ಗೊಂಬೆಗಳನ್ನ ಪೂರಕವಾಗಿ ತೋರಿಸಿ ಚಿತ್ರದ ಆರಂಭದಲ್ಲೇ ತಾನು ಹೇಳ ಹೊರಟಿರುವ ಸಂದೇಶವನ್ನು ಸಾರಿ ಸಾರಿ ಹೇಳಿದ್ದಾರೆ.

ಕಾಮತುರಣಾಂ ನಲಜ್ಜಂ ನಭಯಂ ಇನ್ನು ಮೂಲಕ ಚಲನ ಚಿತ್ರ ಆರಂಭವಾಗುತ್ತದೆ.

"ವಿರಹ ನೂರು ನೂರು ತರಹ" ಹಾಡು ಸಾಹಿತ್ಯ, ಸಂಗೀತ ಮತ್ತು ಛಾಯಗ್ರಹಣದಿಂದ ಮನಗೆದ್ದರೆ. ಪಿ ಸುಶೀಲ ಮತ್ತು ಜಯಂತಿ ಪ್ರೇಕ್ಷಕರಿಗೆ ಹೇಳುತ್ತಾರೆ.. ಇರಿ ಸರ್ ನಮ್ಮ ಕಡೆಯೂ ಗಮನಿಸಿ ಅಂತ.
ಅದ್ಭುತ ಗಾಯನ ಸುಶೀಲಮ್ಮ ಅವರದಾದರೆ, ಅದಕ್ಕೆ ಪೈಪೋಟಿ ನೀಡುವಂತೆ ಜಯಂತಿ (ಇರಿ ಸ್ವಲ್ಪ ಸಮಯ ತಡೆದುಕೊಳ್ಳಿ ಲೇಖನದ ಮುಂದಿನ ಭಾಗದಲ್ಲಿ ಜಯಂತಿ ಅವರ ಬಗ್ಗೆ ಬರೆದಿದ್ದೇನೆ) ಅಭಿನಯದ ಮೂಲಕ ತೆರೆದಿಡುತ್ತಾರೆ. ವಿಜಯನಾರಸಿಂಹ ಅಕ್ಷರಶಃ ಪದಗಳ ಗಾರುಡಿಗ. ಭಾವಾಂತರಂಗದಲ್ಲಿ ಅಲ್ಲೋಲ ಕಲ್ಲೋಲಾ ಎನ್ನುವಾಗ ಕೊಳದ ನೀರಲ್ಲಿ ಮೋಡವನ್ನು ತೋರಿಸಿ ನೀರಿನ ಅಲಗಾಡುವಿಕೆಯನ್ನು ಕದಡಿದ ಮನಸ್ಸಿಗೆ ಹೋಲಿಸಿರುವ ಸನ್ನಿವೇಶ ಒಂದು ಅದ್ಭುತ ಸಂಯೋಜನೆ.

ತಮ್ಮ ದೇಹದ ಬಯಕೆಯನ್ನು ತೋಡಿ ಕೊಂಡಾಗ ರಂಗ ಹೇಳುವ ನಿಜಾಂಶ..  ನಂತರ ಉರಿಯುತ್ತಿದ್ದ ಬೆಂಕಿಗೆ ಜಯಂತಿ ನೀರು ತಂದು ಸುರಿಯುವ ದೃಶ್ಯ ಸೂಪರ್.

ಅಡ್ಡ ಬಡ್ದ ಬೈಕ್ ಓಡಿಸುತ್ತಾ ಬರುವ ಚಂದ್ರು ಮೊದಲ ದೃಶ್ಯದಲ್ಲಿಯೇ ಆತನ ಗುಣವನ್ನು ತೋರಿಬಿಡುತ್ತಾರೆ. ರಸ್ತೆಯಲ್ಲಿ ಓಡಿಸದೇ ಸಿಕ್ಕ ಮೈದಾನದಲ್ಲಿ ಇಷ್ಟ ಬಂದಾ ಹಾಗೆ ಓಡಿಸುವ ಮೂಲಕ ತಾನು ಯಾರ ಹಂಗಿಗೂ ಸಿಗದ ಮನುಷ್ಯ ಎಂಬ ತರ್ಕವನ್ನು ತೋರಿಬಿಡುತ್ತಾರೆ. ವಿಚಿತ್ರ ವೇಷಭೂಷಣ, ಮಾತು ಮಾತಿಗೂ "ಇದೆ ಫಸ್ಟ್ ಟೈಮ್" ಎನ್ನುವ ಪದವನ್ನು ಸೇರಿಸೋದು, ಈ ಪಾತ್ರ ಒಂದು ವಿಭಿನ್ನವಾಗಿ ರೂಪುಗೊಳ್ಳಲು ಸಹಾಯ ಮಾಡಿದೆ.

"ಗುಂಡಿನ ಮತ್ತೆ ಗಮ್ಮತ್ತು ಅಳತೆ ಮೀರಿದರೆ ಆಪತ್ತು" ಎಸ್ ಪಿ  ಈ ಹಾಡನ್ನು ಪಕ್ಕ ಕುಡುಕರ ಶೈಲಿಯಲ್ಲಿಯೇ ಹಾಡಿದ್ದಾರೆ. ನರೇಂದ್ರ ಬಾಬು ಅವರ ಸಾಹಿತ್ಯಕ್ಕೆ ಅಚ್ಚುಕಟ್ಟಾದ ನಟನೆ ಶಿವರಾಂ ಅವರದು. ಇವರು ಪ್ರತಿ ಸಂಭಾಷಣೆಯಲ್ಲಿ "ಗಮ್ಮತ್ತು, ಲಿಮಿಟ್ ಎನ್ನುವ ಪದಗಳನ್ನು ಉಪಯೋಗಿಸುತ್ತಲೇ ಹೇಳುವ ಮಾತು "ನಾ ಹೇಳಿದ ಹಾಗೆ ಕೇಳು.. ಆದರೆ ನಾ ಮಾಡಿದಂತೆ ಮಾಡಬೇಡ"..  ಉಪದೇಶ ಯಾರು ಹೇಳುತ್ತಾರೆ ಅನ್ನೊಂದು ಮುಖ್ಯ ಅಲ್ಲಾ ಏನು ಹೇಳುತ್ತಾರೆ ಅನ್ನೊಂದು ಮುಖ್ಯ ಎಂದು ತೋರಿಸುತ್ತಾರೆ.

ಇವರಿಬ್ಬರು ರಂಗ ಅವರ ಮನೆಗೆ ಪರಿಚಯ ಆದ ಮೇಲೆ ಚಿತ್ರ ಶುರುವಾಗುತ್ತೆ.  ದೊಡ್ಡ ದೊಡ್ಡ ಬಂಗಲೆಯಲ್ಲಿ ಒಂಟಿ ತನ.. ,ಸಾಹುಕಾರನನ್ನು ಸಾಹುಕಾರರ ಹಾಗೆ ಮಾಡದೆ ಬಯಕೆಯಲ್ಲಿ ದಟ್ಟ ದರಿದ್ರ ಸ್ಥಿತಿಗೆ ತಳ್ಳುತ್ತದೆ ಅನ್ನುವ ಮಾರ್ಮಿಕ ಸಂದೇಶ . ಎಲ್ಲಾ ಇದೆ ಏನೂ ಇಲ್ಲ ಅನ್ನಿಸುವ ವಿಚಿತ್ರ ಸನ್ನಿವೇಶ.

ಮನೆಯ ಯಜಮಾನನಿಗೆ ಹೇಳದೆ ಮಾಡುವ ಕೆಲಸ ಜೀವನದ ದಾರಿಯನ್ನು  ಹೇಗೆ ತಪ್ಪಿಸುತ್ತದೆ ಎನ್ನುವುದಕ್ಕೆ ಚಂದ್ರು ಜೊತೆಯಲ್ಲಿ ಜಯಂತಿ ಎಡಕ್ಕಲ್ಲು ಗುಡ್ಡಕ್ಕೆ ಹೋಗುತ್ತಾ "ಸಂತೋಷ ಆಹಾ ಸಂಗೀತ" ಹಾಡಿನಲ್ಲಿ ಎಸ್ಪಿ ಮತ್ತು ಪಿ ಸುಶೀಲ ಅವರ ಹಾಡುಗಾರಿಕೆ ಮತ್ತು ವಿಜಯನಾರಸಿಂಹ ಅವರ ಸಾಹಿತ್ಯ ಗಮನ ಸೆಳೆಯುತ್ತದೆ.

ಚುಟುಕಾಗಿ ಎಡಕಲ್ಲು ಗುಡ್ಡವನ್ನು ತೋರಿಸುವ ಈ ಹಾಡಿನಲ್ಲಿ ಮತ್ತು ನಂತರದ ದೃಶ್ಯದಲ್ಲಿ ಸಾವಿರಾರು ವರ್ಷಗಳ ಹಿಂದೆ ಬಂಡೆಗಳಲ್ಲಿನ ಕೆತ್ತನೆ ಗಮನ ಸೆಳೆಯುತ್ತದೆ. ಮಾನವನ ಆದಿ ಕಾಲದಿಂದಲೂ ಈ ಕಾಮ ಎನ್ನುವ ಸಮಸ್ಯೆ ಸಮಸ್ಯೆಯಾಗಿಯೇ ಉಳಿದಿದೆ ಎನ್ನುವ ಮಾತು ನಿಜ ಅನ್ನಿಸುತ್ತದೆ.

ತಪ್ಪು ಹೆಜ್ಜೆ ಇಡಲು ಮುನ್ನುಗುವ ಆ ಕ್ಷಣವನ್ನು ಬಣ್ಣ ಬಣ್ಣಗಳ ಬೆಳಕಿನ ಸಹಾಯದಿಂದ ಬಿಂಬಿತವಾಗುವ ದೃಶ್ಯ ಅಮೋಘ ಕಲ್ಪನೆ. ಇಲ್ಲಿಯೂ ಕೂಡ ಅಶ್ಲೀಲ ಎನ್ನಿಸುವ ದೃಶ್ಯವನ್ನು ನಾಗರೀಕ ಪ್ರಜ್ಞೆಯಿಂದ ಬರಿ ಸಾಂಕೇತಿಕವಾಗಿ ಕಡಲಿನ ಅಲೆಗಳ ಅಬ್ಬರ, ಎಲೆಯಿಂದ ಜಿನುಗುವ ನೀರಿನ ಬಿಂದು ಹೀಗೆ ಸಾಂಕೇತಿಕವಾಗಿ ಚಿತ್ರೀಕರಿಸಿದ್ದಾರೆ.

ಜೀವನದ ಹಾದಿಯಲ್ಲಿ ತಪ್ಪು ಹೆಜ್ಜೆಯನ್ನಿಟ್ಟು ಬಂದ ಮೇಲೆ ತನ್ನ ಗಂಡನಿಗೆ ಆ ವಿಷಯ ಹೇಳಲಾಗದೆ ತೊಳಲಾಡುವ ದೃಶ್ಯವನ್ನು ಕ್ಯಾಮೆರ ನಿಧಾನವಾಗಿ ಓಲಾಡುತ್ತಾ ಜಯಂತಿಯ ಹಿಂದೆ ಹೋಗುವ ರೀತಿ ತೋರಿರುವುದು ಮತ್ತೊಮ್ಮೆ ಪುಟ್ಟಣ್ಣ ಅವರ ಹಿಡಿತ ನಿರ್ದೇಶಕರ ಸ್ಥಾನದ ಮೇಲೆ ಎಷ್ಟು ಉನ್ನತ ಮಟ್ಟದಲ್ಲಿದೆ ಎಂದು ತೋರಿಸುತ್ತದೆ.

ಊರಿನ ಮನೆಯಲ್ಲಿ ಸಂಸಾರದ ವಿಷಯವನ್ನು ರಂಗ ಅವರ ಬಳಿ ನ್ಯಾಯ ತೀರ್ಮಾನ ಮಾಡಲು ಬಂದಾಗ.. ಬಯಕೆಯನ್ನು ತೃಪ್ತಿ ಪಡಿಸದ ಗಂಡಿನ ಬಳಿ ಜೀವನ ಮಾಡುವುದು ವ್ಯರ್ಥ ಎಂದು ಊರಿನ ಜನರೇ ತೀರ್ಮಾನ ತೆಗೆದುಕೊಳ್ಳುತ್ತಾರೆ. ಅಂಥಹ ಸಂದರ್ಭದಲ್ಲಿ ರಂಗ ತನ್ನ ಜೀವನವನ್ನು ತುಲನೆ ಮಾಡಿ.. ಜಯಂತಿ ತನ್ನ ಬಾಳಿನ ದೇವತೆ ಎಂದು ಅವಳ ತಲೆಯ ಮೇಲೆ ಹೂವನ್ನು ಹಾಕುತ್ತಾರೆ.  ತಾನು ನಿಜ ಎಂದು ನಂಬಿದ್ದ ನಂಬಿಕೆಗೆ ಬದ್ಧನಾಗಿ ಇರುವುದು ಮತ್ತು ತನ್ನ ಹೆಂಡತಿ ಹಾದಿ ತಪ್ಪಿರುವುದರ ಬಗ್ಗೆ ಸ್ವಲ್ಪವೂ ಅರಿವಿರದೆ ನಡೆದುಕೊಳ್ಳುವ ಈ ದೃಶ್ಯ ನಂಬಿದ ಸತ್ಯವೆ ಒಳ್ಳೆಯದು ಅನ್ನಿಸುತ್ತದೆ.

ಇವುಗಳ ಗಡಿಬಿಡಿಯ ಮಧ್ಯೆ ಬರುವ ಆರತಿ ಪಾತ್ರ ತುಂಬಾ ವಿಭಿನ್ನವಾಗಿ ಮೂಡಿ ಬಂದಿದೆ. ಜಯಂತಿ ಎಡವಿ ಬೀಳುವ ಪಾತ್ರದಲ್ಲಿ ಅಭಿನಯಿಸಿದ್ದರೆ.. ಆರತಿ ಎಡವಿ ಬಿದ್ದವರನ್ನು ತಡವಿ ಎತ್ತುವ ಪಾತ್ರದಲ್ಲಿ ಬಂದಿದ್ದಾರೆ. ಚಂದ್ರು ಆರತಿಯ ಮೇಲೆ ಕಣ್ಣು ಹಾಕಿದಾಗ ಬಗ್ಗದೆ ಚೇಡಿಸುತ್ತಾ ಸಾಗುವ "ಸನ್ಯಾಸಿ ಸನ್ಯಾಸಿ ಅರ್ಜುನ ಸನ್ಯಾಸಿ" ಹಾಡು ಋತುವಿನ ಬದಲಾವಣೆಯಲ್ಲಿಯೂ ಬಯಕೆಗಳ ಪಾತ್ರ ಹಿರಿದು ಎಂದು ಹಾಡುತ್ತಾ ಹೋಗುತ್ತಾರೆ. ಎಸ್ ಜಾನಕಿಯಮ್ಮನವರ ಕೋಮಲ ಸ್ವರ ಆರ್ ಎನ್ ಜಯಗೋಪಾಲ್ ಅವರ ಸುಲಲಿತ ಸಾಹಿತ್ಯ, ಆರತಿಯ ಅವರ ಅಭಿನಯ ಈ ಹಾಡಿನ ಬೆಡಗು ಹೆಚ್ಚಿಸಿದೆ.

ಕೊಡವ ಸಂಸ್ಕೃತಿಯ ಮದುವೆಯ ಒಂದು ಚಿಕ್ಕ ಝಲಕ್ ಇಲ್ಲಿ ಮೂಡಿ ಬಂದಿದೆ. "ಯಾವೂರವ್ವ ಇವ ಯಾವೂರವ್ವ" ಹಾಡಿನಲ್ಲಿ ಕಣಗಾಲ್ ಪ್ರಭಾಕರ್ ಶಾಸ್ತಿ ಅವರ ಸಾಹಿತ್ಯದಲ್ಲಿ ಮಡಿಕೇರಿ ಸುತ್ತ ಮುತ್ತಲ ಅನೇಕ ಪೇಟೆ ಹಳ್ಳಿಗಳ ಹೆಸರುಗಳನ್ನ ತಂದು ಹಾಡಿನಲ್ಲಿ ಕೂರಿಸಿರುವುದು  ವಿಶೇಷ. ಜಾನಕಿಯಮ್ಮ ಅವರ ಕಂಠದಲ್ಲಿ, ಆರತಿಯವರ ವ್ಯಯ್ಯಾರದ ನೃತ್ಯವೇ ಸೊಗಸು.

ಎಡಕಲ್ಲು ಗುಡ್ಡಕ್ಕೆ ಚಂದ್ರು ಆರತಿಯನ್ನು ಕರೆದೊಯ್ದಾಗ ಅಲ್ಲಿ ಆರತಿ ತೋರುವ ಧೈರ್ಯ, ಮನಸ್ಥಿತಿ ಇಂದಿನ ಪೀಳಿಗೆಗೆ ಒಂದು ದಾರಿ ದೀಪ ಎನ್ನಿಸುತ್ತದೆ.  ಎಡವಲು ಅವಕಾಶ ಹೇರಳವಾಗಿದ್ದರೂ ಮನೋ ಬಲ ಸಿದ್ಧಿಸಿದ್ದಾಗ ಇಂಥಹ ಚಿಕ್ಕ ಚಿಕ್ಕ ಉನ್ಮಾದಗಳಿಗೆ ಬಲಿಯಾಗಲು ಸಾಧ್ಯವೇ ಇಲ್ಲ.

ತನ್ನ ಅಕ್ಕಳನ್ನು ಮರಳಿ ದಾರಿಗೆ ತರುವ ಪ್ರಯತ್ನ "ನಿಲ್ಲು ನಿಲ್ಲೇ ಪತಂಗ ಬೇಡ ಬೇಡ ಬೆಂಕಿಯ ಸಂಗ" ವಿಜಯನಾರಸಿಂಹ ಪದಗಳ ಮಹಲನ್ನೇ ಕಟ್ಟಿದ್ದಾರೆ. ಅದ್ಭುತ ಸಾಹಿತ್ಯ, ಅಮೋಘ ಗಾಯನ.  ಆರತಿಯವರ ಅಭಿನಯ, ಜಯಂತಿ ಅವರ ತೊಳಲಾಟ ಸೂಪರ್.

ಅಂತಿಮ ದೃಶ್ಯದಲ್ಲಿ ತನ್ನ ಎಲ್ಲಾ ಎಡವಿದ ಪ್ರಸಂಗಗಳನ್ನು ಜಯಂತಿ ತನ್ನ ಗಂಡನಿಗೆ ಹೇಳುತ್ತಾ ತಪ್ಪನ್ನು ಒಪ್ಪಿಕೊಳ್ಳುವಾಗ ಕ್ಯಾಮೆರ ಓಲಾಟ ಜಯಂತಿಯ ಮನಸ್ಥಿತಿಯನ್ನು ನಿಖರವಾಗಿ ಬಿಂಬಿಸುತ್ತದೆ. ಒಂದು ಚಿಕ್ಕ ಚಿಕ್ಕ ದೃಶ್ಯಗಳಲ್ಲಿ ಕೂಡ ಪುಟ್ಟಣ್ಣ ತೋರುತ್ತಿದ್ದ ಜಾದೂ ಗಮನಸೆಳೆಯುತ್ತದೆ.  ಜೊತೆಯಲ್ಲಿಯೇ ಸಂಸಾರದ ಗುಟ್ಟನ್ನು ಹೇಳುವೆ ಎಂದು ಬೆದರಿಸುವ ಚಂದ್ರು ಮನೆಗೆ ಬಂದಾಗ ಅವರ ನೆರಳನ್ನು ಭೂತಾಕಾರವಾಗಿ ದೊಡ್ಡದಾಗಿ ತೋರಿಸುವ ಮೂಲಕ ಬಯಕೆ ಚಿಕ್ಕ ಗಾತ್ರದಲ್ಲಿ ಬಂದರೂ ಅದು ಹೊತ್ತು ತರುವ ಸಮಸ್ಯೆ ಭೂತಾಕಾರವಾಗಿ ನಿಲ್ಲುತ್ತದೆ ಮತ್ತು ಕಾಡುತ್ತದೆ ಎಂದು ತೋರಿದ್ದಾರೆ. ಉತ್ತಮ ನೆರಳು ಬೆಳಕಿನ ಸಂಯೋಜನೆ.
*****
ಜಯಂತಿ ಈ ಚಿತ್ರದ ನಾಯಕಿ, ಕಣ್ಣಲ್ಲೇ ಅವರು ಕಾರುವ ಬಯಕೆಯ ಭಾವ, ನಾಜೂಕಿನ ಸನ್ನಿವೇಶಗಳಲ್ಲಿ ತನಗಿಂತಲೂ ಕಿರಿಯ ನಟ ಚಂದ್ರುವಿನ ಜೊತೆಯಲ್ಲಿನ ಅಭಿನಯ ವಾಹ್ ಎನ್ನಿಸುತ್ತದೆ. ಈ ಚಿತ್ರದುದ್ದಕ್ಕೂ ಕಣ್ಣುಗಳಿಗೆ ಕಾಡಿಗೆ ತುಸು ಹೆಚ್ಚಾಗಿಯೇ ಬಳಸಿದ್ದಾರೆ. ಕಾಮಾಲೆ ಕಣ್ಣಿಗೆ ಕಾಣೋದೆಲ್ಲಾ ಹಳದಿ ಎನ್ನುವ ಹಾಗೆ, ಈ ತೀಕ್ಷ್ಣ ಕಾಡಿಗೆ ಕಣ್ಣುಗಳು ಅವರ ಬಯಕೆ, ಮನಸ್ಥಿತಿ ಎಲ್ಲವನ್ನು ಸೂಚ್ಯವಾಗಿ ತೋರಿಸುತ್ತದೆ.

ವಿರಹ ನೂರು ನೂರು ತರಹ ಹಾಡಿನಲ್ಲಿ ಕಣ್ಣು ಮುಖದಲ್ಲೇ ವ್ಯಕ್ತ ಪಡಿಸುವ ಆ ಕಾಮದ ಬಯಕೆ, ಕೆಲವು ದೃಶ್ಯಗಳಲ್ಲಿ ಕಣ್ಣಲ್ಲೇ ಕಾರುವ ರೋಷ, ಜಿಗುಪ್ಸೆ, ತನ್ನ ತಂಗಿ ಆರತಿಯನ್ನು ಬಲೆಗೆ ಎಳೆದುಕೊಳ್ಳುತ್ತಿದ್ದಾನೆ ಎಂದು ಅರಿವಾದಾಗ ಅದನ್ನು ತಡೆಯಲು ಪ್ರಯತ್ನ ಪಡುವ ಅಭಿನಯ (ಅಡಿಗೆ ಮನೆಯ ಹತ್ತಿರ ಚಂದ್ರುವಿಗೆ ಹೋಗು ಎಂದು ಹೇಳುವ ದೃಶ್ಯ) ಅದ್ಭುತ.

ಆ ಧ್ವನಿ, ಆ ನೋಟ, ವೇಷ ಭೂಷಣ ಎಲ್ಲವನ್ನೂ ಸೇರಿಸಿಕೊಂಡು ನಿಖರವಾಗಿ ಜಯಂತಿ ಆ ಪಾತ್ರದೊಳಗೆ ನುಗ್ಗಿಬಿಟ್ಟಿದ್ದಾರೆ

ಆರತಿ ಉತ್ತರಾರ್ಧದಲ್ಲಿ ಬಂದರು ತಮ್ಮ ಪಾಲನ್ನು ಸರಿಯಾಗಿಯೇ ಗುರುತಿಸಿಕೊಂಡಿದ್ದಾರೆ. ಮನೊಧೈರ್ಯಕ್ಕೆ ಇನ್ನೊಂದು ಹೆಸರಾಗುವ ಪಾತ್ರ ಅವರದು. ಪ್ರತಿ ಹಂತದಲ್ಲೂ ತಮ್ಮ ಇರುವಿಕೆಯನ್ನು ತೋರುವ ಅವರ ಅಭಿನಯ ಸೊಗಸಾಗಿದೆ.

ಪೋಷಕ ಪಾತ್ರದಲ್ಲಿ ಬರುವ ರಂಗ, ತೊಳಲಾಡುವ ಪಾತ್ರದಲ್ಲಿ ಅಚ್ಚುಕಟ್ಟಾಗಿ ನಟಿಸಿದ್ದಾರೆ. ತನ್ನ ಹೆಂಡತಿ ಜಾರಿದ್ದಾಳೆ ಎಂದು ಅವಳೇ ತಪ್ಪನ್ನು ಒಪ್ಪಿಕೊಂಡಾಗ... ಪ್ರೇಮದ ಮೇಲೆ ಕಾಮ ಜಯ ಸಾಧಿಸಿದ ಹೊತ್ತು ಎಂದು ಹೇಳಿ ಇಡಿ ಸನ್ನಿವೇಶವನ್ನು ತಿಳಿಗೊಳಿಸುತ್ತಾರೆ.. ಕಡೆಗೆ ಕೇಳುವ ಪ್ರಶ್ನೆ ನಿನಗೆ ಬೇಕಿರುವುದು ಕಾಮವೋ ಪ್ರೇಮವೋ... ಅನ್ನುವಾಗ ಅವರ ಮುಖಭಾವ, ಅಭಿನಯ ಇಷ್ಟವಾಗುತ್ತದೆ.

ಚಂದ್ರು.. ಆಹಾ ಏನು ಹೇಳಲಿ ಈ ಪಾತ್ರದ ಬಗ್ಗೆ. ಇವರು ನಟಿಸಬೇಕಾಗಿದ್ದು ಘಟಾನುಘಟಿಗಳ ಮಧ್ಯೆ. ಅಷ್ಟರಲ್ಲಿಯೇ ಜಯಂತಿ, ಆರತಿ, ಶಿವರಾಂ, ರಂಗ ತಮ್ಮ ಛಾಪನ್ನು ಚಿತ್ರರಂಗದಲ್ಲಿ ಮೂಡಿಸಿದ್ದರು. ಅವರುಗಳ ಮಧ್ಯೆ ತುಂಟ ದಾರಿ ತಪ್ಪಿದ ಹುಡುಗನಾಗಿ ಅಭಿನಯಿಸುವುದು ಸವಾಲೇ ಸರಿ. ಜಯಂತಿಯ ಪಾತ್ರವನ್ನು ಮೋಹಿಸುವ ಸನ್ನಿವೇಶ, ರಂಗ ಅವರ ಬಳಿ ಕೂಗುತ ಮಾತಾಡುವ ಪರಿ, ಶಿವರಾಂ ಅವರನ್ನು ಬಯ್ದು ದೂರ ಅಟ್ಟುವ ದೃಶ್ಯ, ಆರತಿ ಜೊತೆಯಲ್ಲಿನ ಅಭಿನಯ ಎಲ್ಲವಕ್ಕೂ ಪಕ್ಕ ಪ್ಲೇ ಬಾಯ್ ರೂಪ ಕೊಟ್ಟಿದ್ದಾರೆ. ವೇಷಭೂಷಣಗಳು, ಮಾತಿನ ಚಟಾಕಿ "ಇದೆ ಫಸ್ಟ್ ಟೈಮ್" ಅವರ ಪಾತ್ರವನ್ನ ಇನ್ನಷ್ಟು ಸೊಗಸು ಮಾಡಿವೆ.

ಶಿವರಾಂ ಒಂದು ಚಿಕ್ಕ ಚಿಕ್ಕ ಪಾತ್ರವೇ ಆದರೂ.. ಗಮ್ಮತ್ತು, ನಿಯತ್ತು, ಲಿಮಿಟ್ ಈ ಪದಗಳಲ್ಲೇ ಅವರ ಸಂಭಾಷಣೆ ಆರಂಭ ಇಲ್ಲಾ ಮುಕ್ತಾಯ.. ತನ್ನ ವಯಸ್ಸಿಗೂ ಮೀರಿದ ಪಾತ್ರವಾದರೂ ಅಭಿನಯದಲ್ಲಿ ಗೆದ್ದಿದ್ದಾರೆ.

ಕಾಮ ಕ್ಷಣ ಮಾತ್ರ.. ಪ್ರೇಮ ಎಲ್ಲಾ ಸಮಯಕ್ಕೂ ಎನ್ನುವ ಸುಂದರ ನೀತಿಯನ್ನು ಹೇಳುತ್ತಾ ಜಾರಿ ಬಿದ್ದರೆ ಅದಕ್ಕೆ ಸಾವೇ ಗುರಿ ಎನ್ನುವುದನ್ನು ಜಯಂತಿ ಮತ್ತು ಚಂದ್ರುವಿನ ಪಾತ್ರದ ಅವಸಾನದಲ್ಲಿ ತೋರಿದ್ದಾರೆ. ಗಂಡ ಜಾರಿ ಹೋದ ಹೆಂಡತಿಯನ್ನು ಸ್ವೀಕರಿಸುತ್ತೇನೆ ಎಂದು ಹೇಳಿದರು.. ತಪ್ಪು ಮಾಡಿದ್ದಕ್ಕೆ ಸಾವೇ ಪ್ರಾಯಶ್ಚಿತ್ತ ಎಂದು ತನ್ನನ್ನೇ ಕೊನೆಗಾಳಿಸುವ ಆ ದೃಶ್ಯದಲ್ಲಿ ತಪ್ಪು ಮಾಡಬೇಡಿ. ಮಾಡಿದರೆ ಆ ನೊಂದು ಬೆಂದು ಬಾಳುವ ಬದಲು ಮರೆಯಾಗಿ ಹೋಗಿ ಎನ್ನುತ್ತದೆ ಸಂದೇಶ. ಈ ಮಾತುಗಳು ಚರ್ಚೆ ಒಳಪಡಬಹುದಾದರೂ ಆ ಕಾಲ ಘಟ್ಟದಲ್ಲಿ ಇದು ಒಂದು ಅಪರಾಧ ಎನ್ನುತ್ತಿದ್ದ ಕಾಲದಲ್ಲಿ ಈ ರೀತಿಯ ಅಂತ್ಯ ಈ ಚಿತ್ರದಲ್ಲಿ ಬಂದದ್ದು ಸರಿ ಅನ್ನಿಸುತ್ತದೆ.

ಒಂದು ಸುಂದರ ಕಥೆಯನ್ನು ಅಷ್ಟೇ ಅಚ್ಚುಕಟ್ಟಾಗಿ ತೆರೆ ಮೇಲೆ ತರುವುದು ಮತ್ತು ಅಲ್ಲಿ ವಿಚಿತ್ರ ಸನ್ನಿವೇಶಗಳನ್ನು ಕೂಡ ಎಲ್ಲರೂ ಕೂತು ನೋಡುವ ಹಾಗೆ ಹೆಣೆಯುವುದು ನಿರ್ದೇಶಕರ ತಾಕತ್ತು. ಅಂಥಹ ಒಂದು ಸವಾಲಿನಲ್ಲಿ ಗೆಜ್ಜೆ ಪೂಜೆ, ನಾಗರಹಾವು ಚಿತ್ರಗಳಲ್ಲಿ ಗೆದ್ದಿದ್ದ ಪುಟ್ಟಣ್ಣ ಅವರು ಈ ಚಿತ್ರದಲ್ಲಿ ತಮ್ಮ ನಿರ್ದೇಶಕರ ಶಕ್ತಿಯನ್ನು ಪರಿಣಾಮಕಾರಿ ನಿರೂಪಿಸಿದ್ದಾರೆ. ಒಂದು ವಯಸ್ಕರ ಚಿತ್ರ ಆಗಬಹುದಿದ್ದ ಈ ಕಥೆಯನ್ನು ಸುಲಲಿತವಾಗಿ ಬರಿ ಸಾಂಕೇತಿಕ ದೃಶ್ಯಗಳಲ್ಲಿ ಮಾತ್ರ ಆ ಭಾವವನ್ನು ತೋರಿಸಿ ಚಿತ್ರ ರೂಪಿಸಿರುವುದು "ಎಡಕಲ್ಲು ಗುಡ್ಡದ ಮೇಲೆ" ಚಿತ್ರ ಒಂದು ರತ್ನವಾಗಿ ಮಾರ್ಪಟ್ಟಿರುವುದಕ್ಕೆ ಸಾಕ್ಷಿ. ಪುಟ್ಟಣ್ಣ ಕಣಗಾಲ್ ಗುರುಗಳೇ ನಿಮಗೆ ನಮೋ ನಮಃ. 

Thursday, November 20, 2014

ಕಸ್ತೂರಿ ಕಪ್ಪು ಆದರೆ ನಿವಾಸದ ಯಜಮಾನನ ಮನಸ್ಸು ವರ್ಣಮಯ!! (1971)

ತೇನ್ ಸಿಂಗ್ ಗೌರಿಶಂಕರ ತುತ್ತ ತುದಿಯಲ್ಲಿ ನಿಂತಾಗ ಸಂಭ್ರಮದ ವಿಷಯವಾಗಿತ್ತು.. ನೀಲ್ ಆರ್ಮ್ ಸ್ಟ್ರಾಂಗ್ ಚಂದ್ರಲೋಕಕ್ಕೆ ಪಾದ ಇಟ್ಟಾಗ ಸಂತಸವಿತ್ತು.. ಕಾರಣ ತಂತ್ರಜ್ಞಾನ, ಮನುಷ್ಯನ ಅಂಕೆ ಶಂಕೆಗಳು ಒಂದು ಹಂತದಲ್ಲಿ ತನ್ನ ಹತೋಟಿಯಲ್ಲಿದ್ದಾಗ.. ಹೌದು ಇವೆಲ್ಲ ನೆಡೆದು ಒಂದು ನಲವತ್ತು ವರ್ಷಗಳ ಮೇಲೆ ಆಯಿತು.

ಅಕ್ಕಿ ಒಂದು ಕೆ. ಜಿ. ಗೆ ಒಂದು ರೂಪಾಯಿಗಿಂತ ಕಮ್ಮಿ ಇದ್ದ ಕಾಲ.. ಇಂದು ಒಂದು ನೂರು ರೂಪಾಯಿಗೆ ಕೊಂಚ ಕಮ್ಮಿ ಇದೆ.. ಹಾಗೆ ಮಾನವನ ಆಸೆ, ದುರಾಸೆ, ಅಸೂಯೆ, ಸ್ವಾರ್ಥ ಮುಂಚೆಗಿಂತಲೂ ದುಪ್ಪಟ್ಟು ಆಗುತ್ತಲೇ ಇದೆ... ಕಮ್ಮಿಯಾಗುತ್ತಾ ಸಾಗಿದೆ ಜೀವನ ಮೌಲ್ಯಗಳು . 

ಇವೆಲ್ಲ ಮಾತು ಯಾಕೆ ಅಂದಿರಾ.. ಕಸ್ತೂರಿ ನಿವಾಸ ಚಿತ್ರದ ವರ್ಣಮಯ ರೂಪವನ್ನು ನೋಡಿ ಬಂದ ಮೇಲೆ ಅನ್ನಿಸಿದ ಮಾತುಗಳು. 

ಈ ಚಿತ್ರದ ಜೀವಾಳ ಉತ್ತರಾರ್ಧದಲ್ಲಿದೆ. ಅಣ್ಣಾವ್ರಿಗೆ ಗಡ್ಡ ಮೂಡಿ ಬಂದ ಮೇಲೆ ಅವರ ಅಭಿನಯ ವಾಹ್ ವಾಹ್ ಅನ್ನಿಸುತ್ತದೆ. 
ಸಂಭಾಷಣೆ ವೈಖರಿ, ಜೀವನದಲ್ಲಿ ಹಣಕಾಸಿನ ವಿಷಯದಲ್ಲಿ ಜಾರು ಹಾದಿಯಲ್ಲಿದ್ದರೂ ತಾ ನಂಬಿಕೊಂಡಿದ್ದ ಆದರ್ಶ, ಹಿರಿಯ ತಲೆಮಾರಿನವರು ಹಾಕಿಕೊಟ್ಟ ಸಂಸ್ಕಾರ ಇವುಗಳನ್ನು ಕಾಪಾಡಲು ಹೋರಾಡುವ ಪಾತ್ರದಲ್ಲಿ ಅಣ್ಣಾವ್ರು ತಲ್ಲೀನರಾಗಿ ಬಿಡುತ್ತಾರೆ. 

ಮೈಯನೆ ಹಿಂಡಿ ನೊಂದರು ಕಬ್ಬು ಸಿಹಿಯ ಕೊಡುವುದು..
ತೇಯುತಲಿದ್ದರು ಗಂಧದ ಪರಿಮಳ ತುಂಬಿ ಬರುವುದು 
ತಾನೇ ಉರಿದರು ದೀಪವು ಮನೆಗೆ ಬೆಳಕ ಕೊಡುವುದು 
ದೀಪ ಬೆಳಕ ಕೊಡುವುದು.. 

ಇಡಿ ಚಿತ್ರದ ಜೀವಾಳ ಈ ನಾಲ್ಕು ಸಾಲಿನಲ್ಲಿ ಬರೆದಿದ್ದಾರೆ ಸಾಹಿತ್ಯ ರತ್ನ ಚಿ ಉದಯಶಂಕರ್.. ಹಾಗೂ ಇಡಿ ಚಿತ್ರಕ್ಕೆ ತಳಹದಿ ಈ ಮೇಲಿನ ಸಾಲುಗಳು. 

ಈ ಸಾಲುಗಳಿಗೆ ಅಣ್ಣಾವ್ರ ಅಭಿನಯ ನೋಡಿಯೇ ಆನಂದ ಪಡಬೇಕು.. ಆ ಕುರುಚಲು ಗಡ್ಡ.. ಕಪ್ಪು ಕೋಟು ಪ್ಯಾಂಟು.. ಮೆಲ್ಲಗೆ ಹಾರುವ ಕೂದಲು.. ಮುಖದಲ್ಲಿ ಮಾಸದ ನಗೆ.. ಜೀವನದ ಕಷ್ಟಗಳು ಹಿಂಡಿ ಹಿಪ್ಪೆ ಮಾಡುತ್ತಿದ್ದರು ಕಣ್ಣಲ್ಲಿ ಹೊಳಪು .. ಮೊಗದಲ್ಲೂ ನಗು .. ಒಮ್ಮೆಲೇ ಹಾಗೆ ಜೀವನದ ಕಷ್ಟಗಳಿಗೆ ಸೆಟೆದು ನಿಂತಾಗ.. ಕಷ್ಟಗಳು ಸೆಟೆದು ನಮ್ಮಿಂದ ದೂರ ನಿಲ್ಲುತ್ತವೆ ಅನ್ನಿಸಿಬಿಟ್ಟಿತು. 



ಅಣ್ಣಾವ್ರ ಅಭಿನಯ ಕೆಲವು ಸೂಪರ್ ಸೂಪರ್ ಅನ್ನಿಸುವ ತುಣುಕುಗಳು 
  • ಮೇಲೆ ಹೇಳಿದ ಸನ್ನಿವೇಶ 
  • ಲೀಲಾ.. ತನ್ನ ಮದುವೆಯ ಬಗ್ಗೆ ವಿಷಯ ಹೇಳಿದಾಗ, ತನ್ನ ಆಸೆಗೆ ತಣ್ಣೀರು ಬಿತ್ತು ಎಂದು ಗೊತ್ತಾದ ಮೇಲೆ, ಮೆಟ್ಟಿಲು ಹತ್ತುತ್ತಾ ಮನೆ ಕೆಲಸದ ರಾಮಯ್ಯನಿಗೆ "ಪೂರ್ ಫೆಲೋ.. ಪೂರ್ ಫೆಲ್ಲೋ.. " ಅನ್ನುತ್ತಾ ಅರ್ಧ ನಗುತ್ತಾ ಕಣ್ಣಲ್ಲಿ ನೀರು ತುಂಬಿಕೊಂಡು ಹೋಗುವ ದೃಶ್ಯ 
  • ಪ್ರಭು ಲೀಲಾ ನನ್ನಲ್ಲಿ ಏನೋ ಬೇಡಲು ಬಂದಿದ್ದಾಳೆ.. ನನ್ನ ಹತ್ತಿರ ಇರುವ ವಸ್ತುವನ್ನು ಮಾತ್ರ ಕೇಳಲಿ
  • ಕಸ್ತೂರಿ ನಿವಾಸದ ವಂಶದಲ್ಲಿ ಇದುವರೆಗೂ ಇಲ್ಲ ಎಂದು ಹೇಳಿಲ್ಲ.. ನನ್ನ ಬಾಯಲ್ಲಿ ಇಲ್ಲ ಎಂದು ಹೇಳಿಸಲು ನನ್ನನ್ನು ಬದುಕಿಸಿದ್ದೀಯ ಪ್ರಭು 
  • "ಆಡಿಸಿ ನೋಡು ಬೀಳಿಸಿ ನೋಡು" ಸಂತಸ ಮತ್ತು ದುಃಖದ ಎರಡು ಹಾಡಿಗೆ ಅಭಿನಯ.. ಅದರಲ್ಲೂ ದುಃಖದ ಛಾಯೆಯ ಗೀತೆಗೆ. ಕಣ್ಣೀರನ್ನು ಒರೆಸಿಕೊಳ್ಳುತ್ತಾ ನಡೆಯುತ್ತಾ ಸಾಗುವ ದೃಶ್ಯ ಮನಕಲಕುತ್ತದೆ. 
  • ಉಂಗುರ ತೆಗೆದು ಕೊಟ್ಟ ಮೇಲೆ ಅಶ್ವಥ್ ಹತ್ತಿರ ಬಂದು.. ಅದೃಶ್ಯ ಉಂಗುರದ ಹರಳಲ್ಲಿ ಇರೋಲ್ಲ.. ಅಂತ ಹೇಳಿ ಹಣೆಯ ಮೇಲೆ ಗೆರೆ ಎಳೆದು ತೋರಿಸುತ್ತಾರೆ. ಸೂಪರ್ ಸೂಪರ್ 

ಇನ್ನು ಕೆ ಎಸ್ ಅಶ್ವಥ್ ಈ ಚಿತ್ರಕ್ಕೆ ಬಂಗಾರದ ಕಳಸ.. ಅಷ್ಟೊತ್ತಿಗೆ ಅಪಾರ ಹೆಸರು ಗಳಿಸಿದ್ದ ಈ ನಟ ರತ್ನ.. ಮನೆ ಆಳಿನ ಪಾತ್ರದಲ್ಲಿ ವೈಭವಯುತ ನಟನೆ ನೀಡಿದ್ದಾರೆ.. 
  • ಅಣ್ಣಾವ್ರು ಲೀಲಾಳ ಹತ್ತಿರ ಫೋನಿನಲ್ಲಿ ಪ್ರೀತಿಯಿಂದ ಮಾತಾಡುವಾಗ ಅಶ್ವಥ್ ಕೊಡುವ ನೋಟ
  • ಬುದ್ಧಿ.. ಉಂಗುರ ತೆಗೆಯಬಾರದಿತ್ತು.. ಎಂದು ಕಳಕಳಿಯಾಗಿ ಹೇಳುವ ಮಾತು 
  • ಊಟ ಚೆನ್ನಾಗಿತ್ತು ಅಂತ ಹೇಳಿ ತಿಂದ್ರಲ್ಲವ್ವ.. ಅದೇ ಪಾರಿವಾಳ ಮಾರಿ ಬಂದ ಹಣದಲ್ಲಿ ಸಾಮಾನು ತಂದು ಮಾಡಿದ ಅಡಿಗೆ 
  • ಮನೆ ಕಸ್ಕಂಡ್ರಿ, ಆಸ್ತಿ ಕಸ್ಕಂಡ್ರಿ, ಅಂತಸ್ತು ಕಸ್ಕಂಡ್ರಿ, ಪದವಿ ಕಸ್ಕಂಡ್ರಿ.. ಕಡೆಗೆ ಪಾರಿವಾಳ ಕಸ್ಕಳಕ್ಕೂ ಬಂದ್ಬಿಟ್ರಿ.. ಹೊಗ್ರವ್ವ ಇನ್ನೇನು ಕಸಕಳಕ್ಕೆ ಬಂದ್ರಿ.. 
  • ಜೋರಾಗಿ ಕೈ ಮುಗಿದು .. "ಇಬ್ಬರೂ ಅನಾಥರನ್ನು ತಂದು ಸಾಕಿದ್ರು.. ನೀವು ಮತ್ತು ಚಂದ್ರಪ್ಪ.. ಇಬ್ಬರೂ ಸರಿಯಾಗಿ ಮಾಡಿದ್ರಿ"
  • ಅಣ್ಣಾವ್ರು ಪಾರಿವಾಳವನ್ನು ಹದ್ದಿನ ಮೇಲೆ ಛೂ ಬಿಡಲು ಹೋದಾಗ.. ಅವರನ್ನು ತಡೆದು ಹದ್ದಿಗೆ ಕಲ್ಲು ಹೊಡೆಯುತ್ತಾ ಹೇಳುವ ಸಂಭಾಷಣೆ 
  • ಚಿತ್ರದುದ್ದಕ್ಕೂ ಬೆನ್ನು ಬಾಗಿಸಿ ನಡೆಯುತ್ತಾ ಮನೋಜ್ಞ ಅಭಿನಯ ನೀಡಿದ್ದಾರೆ. ತನ್ನ ಧಣಿಯನ್ನು ನೆರಳಂತೆ ಕಡೆಯ ತನಕ ಕಾಯುವ ಪಾತ್ರ ನಿಜಕ್ಕೂ ಅದ್ಭುತ. 
ಬಾಲಣ್ಣ ತನ್ನ ವಿಚಿತ್ರ ಸಂಭಾಷಣೆ ಮೂಲಕ ತನ್ನ ಇರುವನ್ನು ತೋರುತ್ತಾರೆ.  ಪ್ರಾಸಬದ್ಧ ಮಾತುಗಳು, ಅಂಗೀಕ ಅಭಿನಯ, ಮುಖದ ಭಾವ .  ಚಿತ್ರದ ಮೊದಲರ್ಧದಲ್ಲಿ ಮಿಂಚುತ್ತಾರೆ. ಉತ್ತಾರಾರ್ಧದಲ್ಲಿ ಮೆಲ್ಲಗೆ ಚಂದ್ರುವನ್ನು ಎತ್ತಿ ಕಟ್ಟಲು ಉಪಾಯ ಮಾಡುವ ಪಾತ್ರದಲ್ಲಿ ಮಿನುಗುತ್ತಾರೆ. 

ಕಪ್ಪು ಬಿಳುಪಿನಲ್ಲಿ ಜಯಂತಿ ಹೊಳೆಯುತ್ತಾರೆ.. ಇನ್ನು ವರ್ಣ ಜಾಲದಲ್ಲಿ ಅಬ್ಬಾ ಎಷ್ಟು ಸುಂದರ.. ಅದ್ಭುತ ಕಂಗಳು, ಭಾವ ಉಕ್ಕಿಸುವ ನಟನೆ ಇಷ್ಟವಾಗುತ್ತಾರೆ, 
ಚಿಕ್ಕ ಚೊಕ್ಕ ಪಾತ್ರದಲ್ಲಿ.. ಒಂದು ಹಾಡಿಗೆ, ಒಂದು ದೃಶ್ಯಕ್ಕೆ ಬರುವ ಆರತಿ, "ನೀ ಬಂದು ನಿಂತಾಗ" ಹಾಡಿನಲ್ಲಿ ಎಲ್ಲರ ಮನದಲ್ಲಿ ಛಾಪು ಒತ್ತಿ ಬಿಟ್ಟಿದ್ದಾರೆ. 
ರಾಜಾಶಂಕರ್ ಆ ಕಾಲದ ಉತ್ತಮ ಪೋಷಕ ನಟ, ಸ್ಪುರದ್ರೂಪಿ, ದಟ್ಟ ಹುಬ್ಬುಗಳಿಂದ ಹೆಸರಾಗಿದ್ದ ಈತ, ಅಣ್ಣಾವ್ರ ಅನೇಕ ಚಿತ್ರಗಳಲ್ಲಿ ಕಾಯಂ ನಟ. ಉತ್ತಮ ಅಭಿನಯ ನೀಡಿದ್ದಾರೆ.. ಅದರಲ್ಲೂ ತನ್ನ ತಪ್ಪಿನ ಅರಿವಾಗಿ ಅಣ್ಣಾವ್ರ ಮುಂದೆ ಕ್ಷಮೆ ಕೇಳುವ ದೃಶ್ಯದಲ್ಲಿ ಮನಗೆಲ್ಲುತ್ತಾರೆ. 

ಕಪ್ಪು ಬಿಳುಪಿನ ಆ ಕಾಲದಲ್ಲಿ ಜನರ ಮನಸ್ಸು ನಿರ್ಮಲವಾಗಿತ್ತು, ಈ ರೀತಿಯ ಚಿತ್ರ, ನಾಯಕ ಉದಾರಿ, ಧರ್ಮ ನಿಷ್ಠ, ಇಂಥಹ ಉದಾತ್ತ ಪಾತ್ರಗಳಿಂದ ಕೂಡಿದ ನಾಯಕ, ಅಥವಾ ಕಥಾವಸ್ತು ಕಡಿಮೆ ಬರುತ್ತಿದ್ದ ಕಾಲದಲ್ಲಿ ಅಚಾನಕ್ ಈ ಚಿತ್ರ ಬಂದಾಗ ಪ್ರೇಕ್ಷಕರು ಹುಚ್ಚೆದ್ದು ನೋಡಿ ಸಂತಸ ಪಟ್ಟಿದ್ದರು. ಚಿತ್ರಕಥೆಯನ್ನು ತರ್ಕದ ಕತ್ತರಿಗೆ ಸಿಳುಕಿಸಿದಾಗ ಪೇಲವ ಅನ್ನಿಸಬಹುದು. ಹಾಗೆ ನೋಡಿದರೆ ಚಲನ ಚಿತ್ರಗಳೇ ಒಂದು ಭ್ರಮೆ, ಚಿತ್ರ ವಿಚಿತ್ರ ತರ್ಕಗಳಿಗೆ ಉತ್ತರಗಳೇ ಇಲ್ಲ. 

ಈ ತರ್ಕದ ತಲೆಯನ್ನು ತೆಗೆದಿಟ್ಟು ಉತ್ತಮ ಸಂಭಾಷಣೆ, ಸಾಹಿತ್ಯ, ಹಾಡುಗಳು, ಅಭಿನಯ, ಕಣ್ಣು ಕೋರೈಸುವ ಬಣ್ಣ ಬಣ್ಣದ ಪಾತ್ರಗಳು ತೆರೆಯ ಮೇಲೆ ಬಂದು ಮನ ಬೆಳಗುವುದನ್ನು ನೋಡಲು ಖಂಡಿತ ಚಿತ್ರ ಮಂದಿರಕ್ಕೆ ಹೋಗಲೇ ಬೇಕು. 



ಕೆ ಸಿ ಎನ್ ಕುಟುಂಬ ಕನ್ನಡ ಚಿತ್ರರಂಗದಲ್ಲಿ ಸಾಧನೆಯ ಶಿಖರವನ್ನೇ ಮೂಡಿಸಿದೆ. ಅಂಥಹ ಇನ್ನೊಂದು ಪ್ರಯತ್ನ ಕಸ್ತೂರಿ ನಿವಾಸದ ಕೃತಿಯನ್ನು ಬಣ್ಣದಲ್ಲಿ ಅದ್ದಿ ತೆಗೆದದ್ದು. ಒಂದು ಅದ್ಭುತ ಶ್ರಮ ಇಡಿ ಚಿತ್ರದ ಪ್ರತಿಯೊಂದು ಅಂಚಿನಲ್ಲೂ  ನೋಡಬಹುದು. ಆ ಕಾಲದ ವರ್ಣವನ್ನು ಗಮನದಲ್ಲಿಟ್ಟುಕೊಂಡು ತಯಾರಾದ ಈ ವರ್ಣಮಯ ಶ್ರಮ ಕೊಟ್ಟ ಹಣಕ್ಕೆ ಖಂಡಿತ ಮೋಸ ಮಾಡುವುದಿಲ್ಲ. 

ಹೋಗಿ ಬನ್ನಿ ಕನ್ನಡ ಚಿತ್ರಗಳ ಅಭಿಮಾನಿಗಳೇ.. ಕಸ್ತೂರಿ ಕಪ್ಪು ನಿಜ.. ಆದರೆ ಈ ಕಸ್ತೂರಿ ವರ್ಣಮಯ... !!!

Sunday, November 16, 2014

ಸ್ಪೆಷಾಲಿಟಿ... ಪುಟ್ಟಣ್ಣ ಸ್ಪೆಷಾಲಿಟಿ - ನಾಗರಹಾವು (1972)

ಬಹುಶಃ ಭವಿಷ್ಯ ಹೇಳುವವರು ಕೂಡ ಊಹಿಸಿರಲಿಕ್ಕಿಲ್ಲ..

ಸಾವಿರದ ಒಂಬೈನೂರ ಎಪ್ಪತ್ತೆರಡನೆ ಇಸವಿಯಲ್ಲಿ ಒಂದು  ಉಲ್ಕೆ ಕನ್ನಡದ ಬೆಳ್ಳಿತೆರೆಗೆ ಅಪ್ಪಳಿಸಿತು..

ಅದುವೇ ಪುಟ್ಟಣ್ಣ ಕಣಗಾಲ್ ಒಂದು ವಿಭಿನ್ನ ಪಥ ತುಳಿದ ಪರ್ವ ಕಾಲ.. ಹಿಂದೆ ಮಾಡಿದ ಚಿತ್ರಗಳು ರತ್ನಗಳಾಗಿದ್ದರೆ... ಈ ಚಿತ್ರದ ನಂತರ ಮಾಡಿದ ರತ್ನಗಳು ಚಿತ್ರರತ್ನಗಳಾದವು. 

ಎನ್ ವೀರಾಸ್ವಾಮಿ ಆ ಕಾಲದ ಈ ಕಾಲದ ಎಲ್ಲಾ ಕಾಲದ ಹೆಮ್ಮೆಯ ನಿರ್ಮಾಪಕರು. ಅವರು ಪುಟ್ಟಣ್ಣ ಅವರ ಜೊತೆಯಲ್ಲಿ ಕೈಗೂಡಿಸಿದ ಮೇಲೆ ಸಣ್ಣ ಸಣ್ಣ ಕಲ್ಲುಗಳು ಹೊಳೆಯುತ್ತವೆ. ಈಶ್ವರಿ ಲಾಂಛನದಲ್ಲಿ ತಯಾರಾದ ಈ ಚಿತ್ರ  ಬೆಳ್ಳಿ ತೆರೆಯನ್ನು ಬೆಳಗಿದ್ದೆ ಅಲ್ಲದೆ ಅನೇಕ ತಾರೆಗಳನ್ನು ಚಮಕಾಯಿಸಿತು. 

ಚಿತ್ರದ ಹೆಸರನ್ನು ತೋರಿಸುವ ಟೈಟಲ್ ಕಾರ್ಡ್ ಮೊದಲಾಗಿ ಗಮನಸೆಳೆಯುತ್ತದೆ.. ನಿಗಿ ನಿಗಿ ಉರಿಯುವ ಕಾಯುವ ಚಿತ್ರದುರ್ಗದ ಬಂಡೆಗಳು, ಉರಿಯುತ್ತಿರುವ ಸೂರ್ಯ, ಮೋಡದೊಳಗೆ ಮರೆಯಾಗಲು ಹೊಂಚು ಹಾಕುತ್ತಿರುವ ದೃಶ್ಯದ ಮಧ್ಯದಿಂದ ಮೂಡಿ ಬರುತ್ತದೆ "ನಾಗರಹಾವು" ಚಿತ್ರದ ಹೆಸರು. 



ಉರಿಯುವ ಸೂರ್ಯನು ಮೋಡಗಳ ಸಹವಾಸದಿಂದ ತಂಪಾಗಿ ಕಂಗೊಳಿಸುತ್ತಾನೆ.. ಕಾಯುವ ಬಂಡೆಗಳು ಕೂಡ ಆ ಹೊತ್ತು ವಿರಮಿಸಿಕೊಳ್ಳುತ್ತವೆ.. ಆದರೆ ಮತ್ತೆ ಸೂರ್ಯ ಬಿರುಬಿಸಿಲು ಕೊಡಲು ಶುರುಮಾಡಿದ ಎಂದರೆ.. ಬಂಡೆಗಳು ಕೆಂಪಾಗುತ್ತವೆ.. 

ಎಂಥಹ ತರ್ಕ ಬದ್ಧ ದೃಶ್ಯ.. ಮಾನವನ ರೋಷವೇಷ.. ಸಿಟ್ಟು ಸೆಡವು, ಕೋಪ ತಾಪ ಎಲ್ಲವೂ ಪ್ರೀತಿ ವಿಶ್ವಾಸ ಎಂಬ ಮೋಡದ ಸಂಘಕ್ಕೆ ಬಂದರೆ ತಂಪಾಗುತ್ತದೆ. ಸಮಾಜಮುಖಿಯಾಗುತ್ತಾನೆ.. ಆದರೆ ಆ ಮೋಡಗಳ ಆಲಿಂಗನ ಸಿಗದೇ.. ಆ ಮೋಡಗಳನ್ನು ಚದುರಿಸುವ ಬಿರುಗಾಳಿ ಎನ್ನುವ ಸ್ವಾರ್ಥ, ಹಳದಿ ಕಣ್ಣಿನಲ್ಲಿ ನೋಡುವ ಮಂದಿ ಇದ್ದಾಗ ಆ ಬಿರುಗಾಳಿಗೆ ಒಳಗಿರುವ ರೋಷಾಗ್ನಿ ಹತ್ತಿ ಉರಿದು ಬಾಳನ್ನೇ ಸುಡುತ್ತದೆ. 

ರಾಮಾಚಾರಿ ಪಾತ್ರವನ್ನು ಚೆನ್ನಾಗಿ ಅರಿತ ಚಾಮಯ್ಯ ಮೇಷ್ಟ್ರು ಉರಿಯುವ ರಾಮಚಾರಿಗೆ ಮೋಡವಾಗಿ ನಿಲ್ಲುತ್ತಾರೆ, ಅದರ ಜೊತೆಯಲ್ಲಿ ನಿಲ್ಲುವ ಮಾರ್ಗರೆಟ್.. ಆದರೆ ಇವರ ಶ್ರಮವನ್ನು ತರಗೆಲೆಯಂತೆ ತೋರಿಸಿ ಬಿಡುವ ಪಾತ್ರಗಳಲ್ಲಿ ಮಿಕ್ಕವರು ಮಿಂಚುತ್ತಾರೆ. 

ಇಡಿ ಚಿತ್ರವನ್ನು ಹೆಗಲ ಮೇಲೆ ಹೊತ್ತು ನಡೆಸಿರುವವರು ಪುಟ್ಟಣ್ಣ. ಪ್ರತಿ ವಿಭಾಗದಿಂದ ಮೈ ಮುರಿಯುವಂತೆ ಕೆಲಸ ತೆಗೆಸಿ, ತಮ್ಮ ಮನದಲ್ಲಿ ಮೂಡಿದ ಶ್ರೀ ತ ರಾ ಸುಬ್ಬರಾಯರ ತ್ರಿವಳಿ ಕಾದಂಬರಿಗಳಾದ ನಾಗರಹಾವು, ಒಂದು ಗಂಡು ಎರಡು ಹೆಣ್ಣು, ಸರ್ಪಮತ್ಸರ ಇವನ್ನು ಜತನವಾಗಿ ಕೂಡಿಸಿ ಚಿತ್ರಕಥೆ ನಿರ್ದೇಶನ ಮಾಡಿದ್ದಾರೆ.

ಚಿತ್ರದುರ್ಗದ ಬಿರು ಬಿಸಿಲನ್ನು, ಕಾಯುವ ಬಂಡೆಗಳನ್ನು, ಒರಟು ಒರಟು ಪ್ರದೇಶವನ್ನು ಅಚ್ಚುಕಟ್ಟಾಗಿ ತೋರಿಸಿದ್ದಾರೆ ಛಾಯಾಗ್ರಾಹಕ ಚಿಟ್ಟಿಬಾಬು. ಚಿತ್ರದ ಅರ್ಧ ಭಾಗ ಚಿತ್ರದುರ್ಗದ ದುರ್ಗಮ ಕೋಟೆಯ ಪರಿಸರದಲ್ಲಿ ನಡೆದರೂ ಒಂದು ಬಾರಿತೋರಿಸಿದ ಪರಿಸರವನ್ನು ಇನ್ನೊಮ್ಮೆ ಅದೇ ಕೋನದಲ್ಲಿ ತೋರಿಸದೆ ಬೇರೆಯದೇ ಅನ್ನಿಸುವಂತೆ ಛಾಯಾಗ್ರಾಹಕ ತಮ್ಮ ಕೈಚಳಕ ತೋರಿದ್ದಾರೆ. 

ಪುಂಗಿಯ ನಾದವನ್ನು ಚಿತ್ರದುದ್ದಕ್ಕೂ ಉಪಯೋಗಿಸಿರುವ ಸಂಗೀತ ಮಾಂತ್ರಿಕ ವಿಜಯಭಾಸ್ಕರ್ ಕೊಟ್ಟಿರುವ ಸಂಗೀತ ಕಾಡುತ್ತಲೇ ಇರುತ್ತವೆ. ನಟ ಶಿವರಾಂ ಒಂದು ಸಂದರ್ಶನದಲ್ಲಿ ಹೇಳಿದಂತೆ ರಾಮಾಮಚಾರಿ ಜೀವನದಲ್ಲಿ ಮಾರ್ಗರೆಟ್ ಹೋಗಿ ಅಲಮೇಲು ಬರುವ ದೃಶ್ಯದಲ್ಲಿ ಉಪಯೋಗಿಸಿರುವ ಪಾಶ್ಚಾತ್ಯ ಸಂಗೀತ ಮತ್ತು ಭಾರತೀಯ ಸಂಗೀತ ಅವರ ಪ್ರತಿಭೆಗೆ ಸಾಕ್ಷಿ.  ಹಿನ್ನೆಲೆ ಸಂಗೀತ ಮತ್ತು  ಹಾಡುಗಳಿಗೆ ಸಂಗೀತ ಸಂಯೋಜನೆ ಬಹಳ ಬಹಳ ಕಾಡುತ್ತದೆ. 

ಉರಿಯುವ ರಾಮಾಚಾರಿಯ ಸ್ವಭಾವಕ್ಕೆ ಶಾಂತ ಸ್ವಭಾವದ ಬಳುಕುವ ಬಳ್ಳಿ ಅಲಮೇಲು ಕರಗಿ ನೀರಾಗುವ ಹಾಡು "ಕರ್ಪೂರದ ಗೊಂಬೆ ನಾನು" ಗಾಯಕಿ ಪಿ ಸುಶೀಲ ಅವರ ಕಂಚಿನ ಕಂಠ ಈ ಹಾಡನ್ನು ಇನ್ನಷ್ಟು ಎತ್ತರಕ್ಕೆ ಒಯ್ಯುತ್ತದೆ.  ಸಾಹಿತಿ ಆರ್ ಏನ್ ಜಯಗೋಪಾಲ್ ಪದಗಳ ಬಂಡೆಗಳನ್ನೇ ಪೋಣಿಸಿದ್ದಾರೆ. ಹಾಡಿಗೆ ಸಂಗೀತ ಅದ್ಭುತ. ವಾಣಿವಿಲಾಸ ಸಾಗರ, ಒರಟು ಒರಟು ಚಿತ್ರದುರ್ಗದ ಬಂಡೆಗಳು, ದೇವಸ್ಥಾನಗಳು ಇವುಗಳ ಜೊತೆಯಲ್ಲಿ ಮೂಡಿ ಬಂದ ಹಾಡು ಸೂಪರ್. ಆರತಿ ಕಡೆಯಲ್ಲಿ ಕರ್ಪೂರ ಆರಿ ಹೋಗುವಾಗ ನೃತ್ಯ ಮಾಡುವ ಕರ್ಪೂರದ ದೀಪದಂತೆ.. ಅವರ ಭಾವನೆಗಳನ್ನು ಮುಖದಲ್ಲಿಯೇ ತೋರುವುದು ... ಬಹಳ ನಾಜೂಕಾಗಿ ಹೆಣೆದಿದ್ದಾರೆ ಈ ದೃಶ್ಯವನ್ನು. 

ರಾಮಾಚಾರಿಯ ಸ್ವಭಾವವನ್ನು ತೆರೆಗೆ ಅಪ್ಪಳಿಸುವ ರೀತಿಯಲ್ಲಿ ಬಿಂಬಿಸುವ "ಹಾವಿನ ದ್ವೇಷ ಹನ್ನೆರಡು ವರುಷ" ಎಸ್ ಪಿ ಬಾಲಸುಬ್ರಮಣ್ಯಂ ಅವರ ಅಮೋಘ ಕಂಠ ಸಿರಿಯಲ್ಲಿ ಅನಾವಾರಣಗೊಂಡಿದೆ.ಕಾಲೇಜಿನಲ್ಲಿ ಮಾರ್ಗರೆಟ್ ಅವಮಾನ ಮಾಡಿದಳು ಎನ್ನುವ ಕೋಪಕ್ಕೆ ಶುರುವಾಗುವ ಹಾಡು ದುರ್ಗದ ಪ್ರದೇಶಗಳಲ್ಲಿ ಓಡಾಡಿಸಿ ಚಿತ್ರೀಕರಿಸಿದ್ದಾರೆ. ಆ ಹಾಡಿಗೆ ಬೇಕಾದ ರೋಷ ದ್ವೇಷ ಆವೇಗ ಎಲ್ಲವನ್ನು ಮೇಳೈಸಿ ಕೊಂಡು ಹಾಡಿದ ಗಾಯಕ,  ವಿಷ್ಣು ಅವರ ಸರಿಸುಮಾರು ಎಲ್ಲ ಚಿತ್ರಗಳಲ್ಲಿಯೂ ಕಾಯಂ ಗಾಯಕ ಆಗಿಬಿಟ್ಟರು.  ಹಾವಿನ ಬುಸುಗುಟ್ಟಿವಿಕೆಯನ್ನು ಹಾಡಿನ ಸಂಗೀತದಲ್ಲಿ ಉಪಯೋಗಿಸಿರುವ ರೀತಿ ಸೂಪರ್.  ಸಾಹಿತಿ ಆರ್ ಏನ್ ಜಯಗೋಪಾಲ್ ಅಕ್ಷರಶಃ ಬೆಂಕಿ ಚೆಂಡಿನಿಂದಲೇ ಈ ಹಾಡನ್ನು ಬರೆದಿದ್ದಾರೆ ಅನ್ನಿಸುತ್ತದೆ

ಜೀವನದಲ್ಲಿ ಮಾರ್ಗರೆಟ್ ಅಥವಾ ಅಲಮೇಲು ಎನ್ನುವ ಗೊಂದಲ ದೂರಮಾಡಿಕೊಂಡ ರಾಮಾಚಾರಿಯ ಕಣ್ಣಿನಲ್ಲಿ ಮೂಡಿ ಬರುವ ಹಾಡು "ಬಾರೆ ಬಾರೆ ಚಂದದ ಚಲುವಿನ ತಾರೆ". ಪಿ ಬಿ ಶ್ರೀನಿವಾಸ್ ಈ ಹಾಡನ್ನು ಜೀವದ ಹಾಡು ಎನ್ನುವಂತೆ ಹಾಡಿದ್ದಾರೆ. ಪುಸ್ತಕದಲ್ಲಿ ಓದಿದ ನೆನಪು.. ಸ್ಲೋ ಮೋಶನ್ ಎನ್ನುವ ಛಾಯಾಗ್ರಾಹಕ ಕಲೆಯನ್ನು ಮೊದಲ ಬಾರಿಗೆ ಈ ಚಿತ್ರಕ್ಕೆ ಅಳವಡಿಸಿದರು ಎಂದು. ಇಡಿ ಹಾಡಿನಲ್ಲಿ ವಿಷ್ಣುವಿನ ಚಲನೆ ಮಾಮೂಲಿ ವೇಗದಲ್ಲಿದ್ದಾರೆ.. ಆರತಿಯ ಅಭಿನಯದ ಭಾಗ ಪೂರ ಸ್ಲೋ ಮೋಶನ್. ಎರಡು ವಿಭಿನ್ನ ಧಾಟಿಯಲ್ಲಿ ಚಿತ್ರೀಕರಣ. ವಿಷ್ಣು ಪಾತ್ರ ವೇಗಕ್ಕೆ ಹೆಸರಾಗಿದ್ದರೆ.. ಆರತಿಯ ಪಾತ್ರ ನಿಧಾನ, ಸಂಯಮವನ್ನು ತೋರಿಸುತ್ತದೆ. ವಿಜಯನಾರಸಿಂಹ ಅವರ ಸರಳ ಪದಗಳ ಜೋಡಣೆ ಈ ಹಾಡನ್ನು ಇನ್ನಷ್ಟು ವಿಶೇಷ ಎನ್ನಿಸುವಂತೆ ಮಾಡಿದೆ. 

ಪುಟ್ಟಣ್ಣ ಅವರಿಗೆ ನಾಡು ನುಡಿ ಪರಿಚಯ, ಇತಿಹಾಸ, ಅಭಿಮಾನ ಎಲ್ಲವೂ ಬೆಟ್ಟದಷ್ಟಿತ್ತು.. ಅವರ ಪ್ರತಿ ಚಿತ್ರದಲ್ಲೂ ಸಂದರ್ಭ ಸಿಕ್ಕಾಗೆಲ್ಲ ಅವರ ಅಭಿಮಾನವನ್ನು ಹಾಡುಗಳಿಂದ, ಸಂಭಾಷಣೆಗಳಿಂದ ಹರವಿಬಿಡುತ್ತಿದ್ದರು . ಅಂಥಹ ಒಂದು ಅಭೂತಪೂರ್ವ ಅವಕಾಶ ದುರ್ಗದ ಓಬವ್ವನ ಹಾಡು. ಮನೆಮಾತಾಗಿರುವ ಈ ಹಾಡನ್ನು ಸಾಹಿತಿ ಚಿ ಉದಯಶಂಕರ್ ಒಂದು ಸಾಂಧರ್ಭಿಕ ಘಟನೆಯನ್ನು "ಕನ್ನಡ ನಾಡಿನ ವೀರ ರಮಣಿಯ"  ಕನ್ನಡ ನಾಡೆ ಎದೆ ಉಬ್ಬಿಸುವಂತೆ ಬರೆದಿದ್ದಾರೆ. ಸಂಗೀತ, ಸಾಹಿತ್ಯ, ಚಿತ್ರಿಸಿರುವ ರೀತಿ ಸೊಗಸಾಗಿದೆ.  

ಕೆಲವೊಮ್ಮೆ ಚಿಕ್ಕ ಚಿಕ್ಕ ಉಲ್ಕೆಗಳು ಪರಿಣಾಮಕಾರಿಯಾಗಿ ತಮ್ಮ ಪ್ರಭಾವ ಬೀರುತ್ತವೆ. ಕೆಲವೇ ನಿಮಿಷಗಳಲ್ಲಿ ಮೂಡಿಬರುವ ಈ ಹಾಡಿನಲ್ಲಿ ಜಯಂತಿ ಕರುನಾಡಿನ ಓಬವ್ವನ ರೂಪದಲ್ಲಿಯೇ ನಿಂತು ಬಿಟ್ಟಿದ್ದಾರೆ. ಅದ್ಭುತ ಅಭಿನಯ. ಆ ಗತ್ತು, ರೋಷ, ಶಕ್ತಿ, ಧೈರ್ಯ.. ಒಬವ್ವಳನ್ನೇ ಆವಹಿಸಿಕೊಂಡು ಈ ಪಾತ್ರ ಮಾಡಿದ್ದಾರೆ. 

 ಎರಡು ಧರ್ಮ ಒಂದಾಗುವುದರ ಬಗ್ಗೆ ದೊಡ್ಡ ಚರ್ಚೆ ಮಾಡುವುದರ ಬದಲು ಅದನ್ನೇ ಒಂದು ಸುಂದರ ಗೀತೆಯನ್ನಾಗಿ ಮಾಡಿಬಿಟ್ಟರೆ ಅಂಥಹ ಸಂದರ್ಭ "ಸಂಗಮ ಸಂಗಮ ಅನುರಾಗ ತಂದ ಸಂಗಮ" ಹಾಡು. ಇಡಿ ಹಾಡಿನ ಚಿತ್ರೀಕರಣ ನೆರಳು ಬೆಳಕಿನ ಮಧ್ಯೆ ನಡೆದಿದೆ. ಕ್ಯಾಮೆರ ಓಡಾಡುತ್ತಲೇ ಇರುತ್ತದೆ. ಎರಡು ಹೃದಯಗಳ ಮಿಲನಕ್ಕೆ ಧರ್ಮದ ನೆರಳು ಬೇಕೇ.. ಅಥವಾ ಬರಿ ಪ್ರೀತಿ ಅನುರಾಗದ ಬೆಳಕು ಸಾಕೆ ಎನ್ನುವ ತರ್ಕವನ್ನು ಹುಟ್ಟು ಹಾಕುತ್ತದೆ. ಸಂಗಮ ಎನ್ನುವ ಪದವನ್ನೇ ಒಟ್ಟಾಗಿ ಇಟ್ಟುಕೊಂಡು ಸುಂದರ ಸಾಹಿತ್ಯ ಬರೆದದ್ದು ವಿಜಯನಾರಸಿಂಹ. 

ಕೆಲವೊಮ್ಮೆ ಮನೆಯವರು ಯಾವುದೋ ಆವೇಗದಲ್ಲಿ ಮಾಡುವ ನಿರ್ಧಾರ ಮಗಳ ಭವಿಷ್ಯವನ್ನೇ ಬಲಿ ಹಾಕಿಬಿಡುತ್ತದೆ. ಅಂಥಹ ಸಮಯದಲ್ಲಿ ಮತ್ತೆ ತನ್ನವರು ಸಿಕ್ಕಾಗ ತನ್ನ ವೇದನೆಯನ್ನು ಕೇಳಿದಾಗ.. ಮನಸ್ಸು ಕರಗಿ ನೀರಾಗುತ್ತದೆ. ಒಂದು ಹಿನ್ನೋಟವನ್ನು "ಕಥೆ ಹೇಳುವೆ ನನ್ನ ಕಥೆ ಹೇಳುವೆ" ಗೀತೆಯಲ್ಲಿ ತುಂಬಿ.. ಅಶ್ಲೀಲ ಎನ್ನಿಸಬಹುದಾದ ಈ ಘಟನೆಯನ್ನು ಅಷ್ಟೇ ನಾಜೂಕಾಗಿ ಚಿತ್ರಿಕರಿಸುತ್ತಲೇ ಮನಸ್ಸನ್ನು ಕಲಕಿಬಿಡುವ ಹಾಡಾಗಿ ಮೂಡಿಸಿದ್ದಾರೆ ಪುಟ್ಟಣ್ಣ .  ಅಲಮೇಲು ಜೀವನವನ್ನು ಒಂದು ಬಾರಿ ಹಾಗೆ ಝಲಕ್ ಎನ್ನಿಸುವಂತೆ ತೋರಿಸುವ ಈ ಹಾಡು ಚಿತ್ರದ ಹೈಲೈಟ್ ಎನ್ನಬಹುದು. ಜೊತೆಯಲ್ಲಿಯೇ ಅವಳ ಜೀವನದ ಮುಂದಿನ ಭಾಗವನ್ನು ಹೇಳಹೊರಟವಳಿಗೆ ತಡೆದು ಕಣ್ಣೀರಾಗುವ ನಾಯಕ ತನ್ನ ಒರಟು ಹೃದಯದಲ್ಲಿ ಪ್ರೀತಿ ಮಮತೆ ಎಲ್ಲವಕ್ಕೂ ಅವುಗಳದ್ದೇ ಸ್ಥಾನ ಇದೆ ಎಂದು ತೋರುತ್ತಾನೆ. ಚಿ ಉದಯಶಂಕರ್ ಪದಗಳಲ್ಲಿ ಆಟವಾಡಿದ್ದಾರೆ.. 

ಈ ಚಿತ್ರದಲ್ಲಿ ಪುಟ್ಟಣ್ಣ ಅವರ ಹಿಂದಿನ ಚಿತ್ರಗಳಿಗಿಂತ ನಟ ನಟಿಯರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕಥೆಗೆ ಅದು ಪೂರಕವಾಗಿದೆ ಕೂಡ. ಜೊತೆಯಲ್ಲಿ ಈ ದೃಶ್ಯ.. ಅಥವಾ ಈ ಪಾತ್ರ ಬೇಕಿಲ್ಲ ಅನ್ನುವ  ಹಾಗೆ ಇಲ್ಲ. ಎಲ್ಲವೂ ಎಲ್ಲಾ ಪಾತ್ರವೂ ರಾಮಾಚಾರಿಯ ಜೀವನದ ಏಳು ಬೀಳುಗಳನ್ನು ಬಿಂಬಿಸುತ್ತವೆ, ಜೊತೆಯಲ್ಲಿ ಅವನ ಪಾತ್ರಕ್ಕೆ ಒಂದು ನಿರ್ಧಿಷ್ಟ ತಿರುವು ಕೊಡಲು ಸಹಕರಿಸುತ್ತವೆ. 

ರಾಘವೇಂದ್ರ ರಾವ್ ( ರಾಮಾಚಾರಿಯ ತಂದೆಯ ಪಾತ್ರ)
ನಾ ನಿನ್ನ ಮಗ ಎಂದು ಒಂದು ಒಳ್ಳೆಯ ಮಾತು ಆಡಿದ್ದೀರ ಎನ್ನುವ ಪ್ರಶ್ನೆಗೆ.. ಅವರು ಹೇಳುವ ಮಾತು "ನೀ ನನ್ನ ಮಗ ಅಂತ ನನಗೆ ಹೆಸರು ತರುವ ಒಂದು ಒಳ್ಳೆ ಕೆಲಸ ಮಾಡಿದ್ದೀಯ". 
ಇಡಿ ಚಿತ್ರದುದ್ದಕ್ಕೂ ತಂದೆಯ ಪಾತ್ರದಲ್ಲಿ ರಾಮಾಚಾರಿಯ ರೋಷಕ್ಕೆ ಸುರಿವ ತುಪ್ಪವಾಗೆ ಬರುತ್ತಾರೆ. ರಾಮಾಚಾರಿ ಕೆಲಸಕ್ಕೆ ಸೇರಿಕೊಂಡು ಮನೆಗೆ ಅಷ್ಟೋ ಇಷ್ಟೋ ಸಹಾಯ ಮಾಡಲು ಶುರುವಾದಾಗ ಮೆಚ್ಚುಗೆ ಸೂಸುವ ಇವರು.. ತಕ್ಷಣದಲ್ಲೇ ಅವನು ಮಾರ್ಗರೆಟ್ ಜೊತೆಯಲ್ಲಿದ್ದಾನೆ ಎಂದು ಗೊತ್ತಾದಾಗ.. "ನನಗೆ ಮಗನಿಗಿಂತ ಮಠದ ತೀರ್ಥ ಮುಖ್ಯ" "ಕಿರಿಸ್ತಾನದ ಹುಡುಗಿಯನ್ನು ನಾ ಸೊಸೆ ಮಾಡಿಕೊಳ್ಳಲಾರೆ" ಎಂದು ಹೇಳುವ ಮೂಲಕ ರಾಮಾಚಾರಿಯ ಬದುಕಿಗೆ ಮಂಗಳ ಹಾಡಲು ನಿಲ್ಲುತ್ತಾರೆ. ತಂದೆಯ ತೊಳಲಾಟ, ಹಠ ಎರಡನ್ನು ಅಚ್ಚುಕಟ್ಟಾಗಿ ಅಭಿನಯಿಸಿದ್ದಾರೆ.  

ಜಯಶ್ರೀ - (ರಾಮಾಚಾರಿಯ ಅಮ್ಮ)
ಮಗನ ಮೇಲಿನ ವಾತ್ಸಲ್ಯ, ತನ್ನ ಮಗನ ಮೇಲೆ ತನ್ನ ಪತಿರಾಯ ತೋರುವ ತಿರಸ್ಕಾರ ಇವುಗಳ ನಡುವೆ ತೊಳಲಾಡುವ ಪಾತ್ರದ ಅಭಿನಯ ಸುಂದರ. "ಓದಿ ಪರೀಕ್ಷೆಯಲ್ಲಿ ಪಾಸಾಗಿ ಕೆಲಸಕ್ಕೆ ಸೇರಿ ನನಗೆ ಒಂದು ಜರತಾರಿ ಸೀರೆಯನ್ನು ತಂದು ಕೊಡುತ್ತಾನೆ" ಎಂದು ಅಂದುಕೊಂಡಿದ್ದೆ ಎನ್ನುವಾಗ ಮಾತೃ ಪ್ರೇಮ ಹರಡಿಕೊಂಡಿದೆ. ಇವರು ಕೂಡ ಕಿರಿಸ್ತಾನದ ಹುಡುಗಿಯನ್ನುಸೊಸೆಯಾಗಿ ಒಪ್ಪಿಕೊಳ್ಳಲಾರೆ ಎಂದು ಹೇಳುವ ಮೂಲಕ ತಮ್ಮ ಮಗನ ಬದುಕಿಗೆ ಮುಳ್ಳಾಗುತ್ತಾರೆ. 

ಲೋಕನಾಥ - (ಕಾಲೇಜಿನ ಪ್ರಾಂಶುಪಾಲರು)
ವಿದ್ಯೆ ತಲೆಗೆ ಹತ್ತದೆ ಮನೆಯವರ ಒತ್ತಾಯಕ್ಕೆ ಪಾಸಾಗಲೇ ಬೇಕು ಎಂದು ಚೀಟಿಯನ್ನು ಇಟ್ಟುಕೊಂಡು ಬರೆಯುತ್ತಿದ್ದ ರಾಮಾಚಾರಿಯನ್ನು ಹಿಡಿದು ಡಿಬಾರ್ ಮಾಡುವ ಈ ಪಾತ್ರ.. ಉರಿಯುವ ಬೆಂಕಿಗೆ ತುಪ್ಪ ಹಾಕುತ್ತಾರೆ. ಆ ಸೇಡಿಗೆ ರಾಮಾಚಾರಿ ಇವರನ್ನು ಕಂಬಕ್ಕೆ ಕಟ್ಟಿ ತಮ್ಮ ಕೋಪವನ್ನು ತೀರಿಸಿಕೊಳ್ಳುತ್ತಾರೆ. ಚಿಕ್ಕ ಪಾತ್ರವಾದರೂ ರಾಮಾಚಾರಿಯ ಜೀವನಕ್ಕೆ ಒಂದು ತಿರುವು ಕೊಡುವಲ್ಲಿ ಮಹತ್ವ ಪಾತ್ರವಹಿಸುತ್ತಾರೆ. ಮಾರ್ಗರೆಟ್ ಇವರ ಬಳಿ ದೂರು ಕೊಟ್ಟಾಗ ಮೊದಲಿಗೆ ಸಿಡಿದು ಬೀಳುವ ನಂತರ ತಂಪಾಗುತ್ತಾರೆ. ಆದರೆ ಅಷ್ಟೊತ್ತಿಗೆ ರಾಮಾಚಾರಿಯ ದ್ವೇಷ ರೋಷದ ಊರಿಗೆ ಉರುವಲು ಹಾಕಿ ಬಿಟ್ಟಿರುತಾರೆ. 

ಲೀಲಾವತಿ - (ರಾಮಾಚಾರಿಗೆ ಮಾತೃ ವಾತ್ಸಲ್ಯ ತೋರುವ ಸಾಕುತಾಯಿ)
ಮಕ್ಕಳಿಲ್ಲದ ಈ ಪಾತ್ರ ರಾಮಾಚಾರಿಯನ್ನು ಮಗನಿಗಿಂತ ಹೆಚ್ಚು ಪ್ರೀತಿ ತೋರಿಸುತ್ತಾರೆ. ಅವನ ಪ್ರತಿ ಏಳು ಬೀಳುಗಳನ್ನು ತಾಯಿ ಹೃದಯದಿಂದ ಸಂತೈಸುವ ಈ ಪಾತ್ರ.. "ಈ ದಡ್ಡ ಓದಿರುವ ವಿದ್ಯೆಗೆ ಕಲೆಕ್ಟರ್ ಕೆಲಸ ಎಲ್ಲಿ ಸಿಕ್ಕುತ್ತೆ. ಬಸ್ ಸ್ಟಾಂಡ್, ಹೋಟೆಲ್ ನಲ್ಲಿ ಕೂಲಿ ಕೆಲಸ" ಕೊಡಿಸಿ ಎನ್ನುವಾಗ ಹೃದಯವೇ ಹೊರ ಬಂದಂತೆ ಆಗುತ್ತದೆ. ಪ್ರತಿ ಸಂಭಾಷಣೆಗೂ "ದೇವ್ರೇ ದೇವ್ರೇ" ಎನ್ನುತ್ತಾ ಆ ಸಾಕು ತಾಯಿಯ ತಳಮಳ, ಪ್ರೀತಿ, ಮಮತೆ ಹೊರ ಹೊಮ್ಮುವ ಪಾತ್ರ ಒಂದು ರೀತಿಯಲ್ಲಿ ಉರಿಯುವ ರಾಮಾಚಾರಿಯ ಹೃದಯಕ್ಕೆ ತಂಪನ್ನು ಎರೆಯುತ್ತದೆ.  ಅಂತಿಮ ದೃಶ್ಯಗಳಲ್ಲಿ ರಾಮಾಚಾರಿ ಮಾರ್ಗರೆಟ್ ಜೊತೆಯಲ್ಲಿರುವುದನ್ನು ಇವರೇ ನೋಡಿ.. ಮಾರ್ಗರೆಟ್ ಅಮ್ಮನ ಮನೆಯ ಮುಂದೆ ಹಾದಿ ರಂಪ ಬೀದಿ ರಂಪ ಮಾಡಿ ಈ ಸಮಸ್ಯೆ ಬಗೆಹರಿಯುತ್ತೇನೋ ಅನ್ನುವಂಥ ಸಮಸ್ಯೆಯನ್ನು ಕಗ್ಗಂಟಾಗಿ ಮಾಡಿಬಿಡುತ್ತಾರೆ.  ಕೆಲವೊಮ್ಮೆ ಅತಿ ಪ್ರೀತಿ ವಿಶ್ವಾಸ ಮುಳ್ಲಾಗುತ್ತೇನೋ ಎನ್ನುವ ಆತಂಕ ಹೊಮ್ಮಿಸುತ್ತದೆ. 

ಎಂ ಪಿ ಶಂಕರ್ - ಗರಡಿ ಉಸ್ತಾದ್ 
ಪ್ರಾಯಶಃ ಈ ಪಾತ್ರ ಚಿತ್ರದ ದಿಕ್ಕನ್ನು ಬದಲಿಸುತ್ತದೆ ಎನ್ನಿಸುತ್ತದೆ. ಪರೀಕ್ಷೆಯಲ್ಲಿ ನಪಾಸಾದ ರಾಮಾಚಾರಿಗೆ ಊರಿನ ಸಾಹುಕಾರರ ಬಳಿ ಕೆಲಸ ಕೊಡಿಸುತ್ತಾರೆ. ಅವರ ಜೊತೆಯಲ್ಲಿ ಹೋದಾಗ ಅವನಿಗೆ ಅಲಮೇಲುವಿನ ಜೀವನದ ದುರ್ಗತಿ ಗೊತ್ತಾಗುತ್ತದೆ. ಪೈಲ್ವಾನರ ಗತ್ತು, ನಡೆ, ಮೀಸೆ, ವೇಷಭೂಷಣ, ಎಲ್ಲವೂ ಸೊಗಸಾಗಿದೆ. ಇವ ನಮ್ಮ ಗರಡಿ ಹುಡುಗ ಎಂದು ಎದೆ ತಟ್ಟಿ ಹೇಳಿಕೊಳ್ಳುವ ಇವರು ಜಲೀಲ ರಾಮಾಚಾರಿಯ ಹೊಡೆದಾಟದ ನಂತರ "ನಾವು ನೀವು ಅಣ್ಣ ತಮ್ಮಂದಿರು ಎಂದು ಬಾಳುವಾಗ ಇಂಥಹ ಮಕ್ಕಳು ಹಾಳುಮಾಡುತ್ತವೆ" ಎನ್ನುವಾಗ ಹೌದು ಧರ್ಮ ಜಾತಿ ಎಂದಿಗೂ ಬಡಿದಾಡಿ ಎಂದು ಹೇಳುವುದಿಲ್ಲ ಬದಲಿಗೆ ಅದನ್ನು ಪಾಲಿಸದ ಕೆಲವು ಕಿಡಿಗೇಡಿಗಳಿಂದ ಊರು ಹಾಳಾಗುತ್ತದೆ. ಆಹಾ ಎಂಥಹ ಮಾತು. ರಾಮಾಚಾರಿ ಚಿತ್ರದಲ್ಲಿ ಅತಿ ಗೌರವಿಸುವ ಎರಡು ಪಾತ್ರಗಳಲ್ಲಿ ಇವರು ಒಬ್ಬರು. 


ರಾಮಚಂದ್ರ ಶಾಸ್ತ್ರಿ - ಪ್ರತಿಮಾ ದೇವಿ - (ಅಲಮೇಲು ಅಪ್ಪ ಅಮ್ಮ)
ರಾಮಾಚಾರಿಯನ್ನು ಪೋಲಿ ಪುಂಡ ಎಂದೇ ಮಾತಾಡಿಸುವ ಇವರು.. ತಮ್ಮ ಮಗಳು ಅವನಿಗೆ ಹೃದಯ ಕೊಟ್ಟಿದ್ದಾಳೆ ಎನ್ನುವಾಗ ಇವರಿಬ್ಬರ ಅಭಿನಯ ಸೂಪರ್. ಆ ಪೋಲಿಗೆ ಮಗಳನ್ನು ಕೊಡುವ ಬದಲು ಹಾಳು ಬಾವಿಗೆ ದೂಡುತ್ತೇನೆ ಎನ್ನುವ ಮನಸ್ಥಿತಿಯನ್ನು ಇಟ್ಟುಕೊಂಡ ಇವರಿಬ್ಬರೂ ಯಾವುದೇ ಕಾರಣದಲ್ಲೂ ಬಗ್ಗುವುದಿಲ್ಲ. ಸಮಾಜಕ್ಕೆ ಹೆದರಿಕೊಂಡೇ ಬಾಳಬೇಕು ಎನ್ನುವ ಮಾತು ಎಷ್ಟು ನಿಜ. ಗಡಿಬಿಡಿಯಲ್ಲಿ ತೆಗೆದುಕೊಳ್ಳುವ ನಿರ್ಧಾರ ರಾಮಾಚಾರಿಯ ಜೀವನನ್ನಷ್ಟೇ ಅಲ್ಲಾ ಅಲಮೇಲು ಜೀವನವನ್ನು ತಲೆಬುಡ ಮಾಡಿಬಿಡುತ್ತದೆ. ಈ ನಿರ್ಧಾರವೇ ಚಿತ್ರಕ್ಕೆ ಅನೇಕ  ತಿರುವು ಕೊಡುತ್ತದೆ. "ಹೋಗಿ ಹೋಗಿ  ಮೇಷ್ಟ್ರೇ  ನಿಮಗೇನು ಗೊತ್ತು ಹೆತ್ತವರ ಸಂಕಟ" ಮನಕಲಕುವ ಮಾತುಗಳು. 

ಶುಭ - ಮಾರ್ಗರೆಟ್ ಪಾತ್ರ 
ಸಿರಿತನದ ಗತ್ತು, ಸುಂದರಿ ಎನ್ನುವ ಹಮ್ಮು ಹೊಂದಿರುವ ಈ ಪಾತ್ರ ಕಾಲೇಜಿನಲ್ಲಿ ತನ್ನ ರೂಪಕ್ಕೆ ಮರುಳಾಗುತ್ತಾರೆ ಎನ್ನುವ ಧೋರಣೆ ಹೊಂದಿರುತ್ತಾಳೆ. ಅದಕ್ಕೆ  ತಕ್ಕಂತೆ ಕೆಲ ಹುಡುಗರು ಇವಳ ಮುಂದೆ ಹಲ್ಲುಕಿರಿಯುತ್ತಾ ನಿಂತಾಗ ಅವರನ್ನು ಮಟ್ಟ ಹಾಕಲು ರಾಮಾಚಾರಿಯನ್ನು ಬಳಸಿಕೊಳ್ಳುತ್ತಾರೆ. ಇದರಿಂದ ಮಾರ್ಗರೆಟ್ ಮತ್ತು ರಾಮಾಚಾರಿಯ ಮಧ್ಯೆ ಜಗಳ ಕದನವಾಗಿ ಹಠವಾದಿಯಾದ ರಾಮಾಚಾರಿಯ ಅವಳ ಮನೆಯಲ್ಲಿ ಗದ್ದಲವೆಬ್ಬಿಸುತ್ತಾನೆ. ನಂತರ ಕಾಲೇಜಿನಲ್ಲಿ ದೂರು.. ಕ್ಷಮಾಪಣೆ ಎಲ್ಲಾ ನಡೆಯುತ್ತದೆ. ಆದರೆ ಅಷ್ಟರಲ್ಲಿಯೇ ಮೊದಲೇ ಪುಂಡ ಎಂಬ ಬಿರುದಾಂಕಿತ ರಾಮಾಚಾರಿಯ ಎದೆಯಲ್ಲಿ ಬಂಧಿಸಲಾಗದ ಉರಿ ಶುರುವಾಗಿರುತ್ತದೆ. ಈ ಪಾತ್ರ ಚಿತ್ರಕ್ಕೆ ಒಂದು ನಿರ್ಧಿಷ್ಟ ತಿರುವು ಕೊಡುತ್ತದೆ. ಜೊತೆಯಲ್ಲಿ ರಾಮಾಚಾರಿಯ ಜೀವನದಲ್ಲಿ ಬಿರುಗಾಳಿ ಎಬ್ಬಿಸಿರುತ್ತಾಳೆ. 

ಧೀರೇಂದ್ರ ಗೋಪಾಲ್ -  ತುಕಾರಾಂ 
ತನ್ನ ಗಡುಸು ರಾಗವಾದ ಸಂಭಾಷಣೆಗಳಿಂದಲೇ ಪ್ರಸಿದ್ಧಿಗೆ ಬಂದ ಈ ನಟ.. ಈ ಚಿತ್ರದಲ್ಲಿ ಚಿಕ್ಕ ಚೊಕ್ಕ ಪರಿಣಾಮಕಾರಿಯಾದ ಪಾತ್ರ ಮಾಡಿದ್ದಾರೆ. ರಾಮಾಚಾರಿ-ಮಾರ್ಗರೆಟ್ ಪಾತ್ರಗಳ ಮಧ್ಯೆ ಉರಿ ಎಬ್ಬಿಸುವ, ಮತ್ತೆ ಇದಕ್ಕೆ ಇನ್ನಷ್ಟು ಮಸಾಲೆ ಬೆರೆಸಿ ರಾಮಾಚಾರಿಯ ಜೀವನಕ್ಕೆ ಹೊಗೆ ಎಬ್ಬಿಸುವ ಕೆಲಸ ಮಾಡುತ್ತಾರೆ. 

ಎಂ ಎನ್ ಲಕ್ಷ್ಮೀದೇವಿ - ಮಾರ್ಗರೆಟ್ ಅಮ್ಮ 
ಜೀವನದಲ್ಲಿ ಹಣ ಹಣ ಹಣ ಹಣವೇ ಮುಖ್ಯ ಎನ್ನುವ ಈ ಪಾತ್ರ.. ಮಗಳನ್ನು ಮುಂದೆ ಇಟ್ಟುಕೊಂಡು ಜೀವನವನ್ನು ಅನುಭವಿಸಬೇಕು ಎನ್ನುವ ಸಿದ್ಧಾಂತ ಇರುವ ಈಕೆ.. ರಾಮಾಚಾರಿಯನ್ನು ಯಾವುದೇ ಕಾರಣಕ್ಕೂ ಒಪ್ಪಿಕೊಳ್ಳಲಾರೆ ಎನ್ನುತ್ತಾಳೆ. ಏನಾದರೂ ಮದುವೆ ಆದ್ರೆ.. ಮಾರ್ಗರೆಟ್ ಗೆ ವಿಷ ಕೊಡಿಸಿ ರಾಮಾಚಾರಿಯೇ ಕೊಂದು ಹಾಕಿದ ಎಂದು ಹೇಳಿ ಅವನನ್ನು ಕೂನಿ ಮಾಡಿಸುತ್ತೇನೆ ಎನ್ನುತ್ತಾಳೆ. ಈ ಹಠ ಮಾರ್ಗರೆಟ್ ಅಲ್ಲೂ ಇರುವುದರಿಂದ ಅವನ ಬದುಕಿಗೆ ಮತ್ತಷ್ಟು ಮಾರಕವಾಗಿಬಿಡುತ್ತಾರೆ. 

ವಜ್ರಮುನಿ, ರಂಗ, ಮತ್ತು ಇನ್ನೋರ್ವ ಸಾಹುಕಾರ 
ಊರಿನ ಸಾಹುಕಾರರಾದ ಇವರು ಮಾಡುವ ಕೆಟ್ಟ ಕೆಲಸಗಳಿಗೆ ಹೆಸರಾಗಿರುತ್ತಾರೆ. ರಾಮಾಚಾರಿಯನ್ನು ಬೆಂಗಳೂರಿಗೆ ಕರೆದೊಯ್ಯುವ ಇವರು ಚಿತ್ರಕ್ಕೆ ಒಂದು ಬಿರುಕು ಒದಗಿಸುತ್ತಾರೆ. ಅಲ್ಲಿಯೇ ಅಲಮೇಲು ಕಾಣಸಿಗುತ್ತಾಳೆ ವ್ಯೆಶ್ಯಯ ರೂಪದಲ್ಲಿ. ರಾಮಾಚಾರಿ ಇಡಿ ಚಿತ್ರದಲ್ಲಿ ಕಣ್ಣೀರಲ್ಲಿ ಕರಗುವ ದೃಶ್ಯಕ್ಕೆ ಇವರೇ ಕಾರಣಗುತ್ತಾರೆ 

ಶಕ್ತಿ ಪ್ರಸಾದ್ - ನಾಯ್ಡು ಅಂಕಲ್ 
ಮಾರ್ಗರೆಟ್ ಅಮ್ಮನಿಗೆ ಒಂದು ವಿಚಿತ್ರ ರೀತಿಯ ಸಂಬಂಧ ಹೊಂದಿದ ವ್ಯಕ್ತಿಯ ಪಾತ್ರ ಇದು. ಮಾರ್ಗರೆಟ್ ಹಾದಿ ತಪ್ಪಿದ್ದಾಳೆ ಎನ್ನುವ ಅವಳ ಅಮ್ಮನ ಆರೋಪಕ್ಕೆ ಮಣಿದು ರಾಮಾಚಾರಿಗೆ ಬುದ್ದಿ ಕಲಿಸೋಕೇ ಬಂದು ಕಡೆಗೆ ಅವರಿಬ್ಬರನ್ನು ಒಂದು ಮಾಡುತ್ತೇನೆ ಎಂದು ಹೇಳಿ ಹೋಗುತ್ತಾನೆ. ಇದು ಒಂದು ಚಿಕ್ಕ ಪಾತ್ರ. ಮಾರ್ಗರೆಟ್ ಗೆ ಧೈರ್ಯ ತುಂಬಲು ಬಂದಂಥಹ ಪಾತ್ರ ಎನ್ನಿಸುತ್ತದೆ. 

ಇನ್ನೂ ಇಡಿ ಚಿತ್ರಕ್ಕೆ ನಾಲ್ಕು ದಿಕ್ಕುಗಳು ಈ ಕೆಳಕಂಡ ನಾಲ್ಕು ಪಾತ್ರಗಳು 

ಅಂಬರೀಶ್ - ಜಲೀಲ 
ಅಲಮೇಲುವನ್ನು ರೇಗಿಸುತ್ತಾ ಅವಳನ್ನು ಒಲಿಸಿಕೊಳ್ಳಲು ಬರುವ ಈ ಪಾತ್ರ ಎರಡೇ ದೃಶ್ಯದಲ್ಲಿ ಬಂದು ಹೋಗುತ್ತಾರೆ. ಆದರೆ ಈ ಎರಡು ದೃಶ್ಯ ಚಿತ್ರದ ಓಟವನ್ನೇ ಬದಲಿಸಿಬಿಡುತ್ತದೆ. ಇವನನ್ನು ಮಟ್ಟ ಹಾಕಲು ರಾಮಾಚಾರಿ ಬರುತ್ತಾನೆ ಇದರ ಹಿನ್ನೆಲೆ ಜಲೀಲನಿಗೆ ಬುದ್ದಿ ಕಲಿಸಿದರೆ ಅಲಮೇಲು ನಿನಗೆ ಎನ್ನುವ ಪಂಥ ಇರುತ್ತದೆ. ಇದೆ ಈ ಚಿತ್ರಕ್ಕೆ ತಿರುವು. 

ಶಿವರಾಂ - ಸ್ಪೆಷಾಲಿಟಿ ಶಿವರಾಂ - ವರದ 
ಇದೊಂದು ವಿಶೇಷ ಪಾತ್ರ. ಜೀವನದಲ್ಲಿ ತಮಾಷೆಯೇ ಮುಖ್ಯ.. ಆ ಸಮಯಕ್ಕೆ ಏನು ಬೇಕೋ ಅಷ್ಟೇ.. ಮುಂದಾಲೋಚನೆ ಇಲ್ಲದೆ ಮಾತಾಡುವ ಪಾತ್ರ. ಪ್ರತಿಮಾತಿಗೂ ಸ್ಪೆಷಾಲಿಟಿ ಸೇರಿಸುವ ಸಂಭಾಷಣೆಯಲ್ಲಿ ಮುಂಚುತ್ತಾರೆ. ಸುಮ್ಮನಿದ್ದ ರಾಮಾಚಾರಿಗೆ ಅಲಮೇಲುವಿನ ಬಗ್ಗೆ ಆಸೆ ಹುಟ್ಟಿಸಿ ಕಡೆಗೆ ಅವನೇ ಆ ಮದುವೆಗೆ ಕಲ್ಲು ಹಾಕಿ ತನ್ನ ತಂಗಿಯ ಜೀವನದ ಅವನತಿಗೆ ಕಾರಣವಾಗುತ್ತಾನೆ. 

ವಿಷ್ಣು - ರಾಮಾಚಾರಿ
ಹಿಂದಿನ ಚಿತ್ರಗಳ ತನಕ ಹೆಣ್ಣು ಮಕ್ಕಳ  ಮನಸ್ಸಿನ ಸೂಕ್ಷಮತೆ ಬಗ್ಗೆ ಚಿತ್ರಗಳನ್ನು ಮಾಡಿದ್ದ ಪುಟ್ಟಣ್ಣ ಕಣಗಾಲ್.. ಅಚಾನಕ್ ಪಥವನ್ನು ಹೊರಳಿಸಿ ಒಂದು ಬೆಂಕಿ ಚಂಡನ್ನೇ ಹೊರ ತರುತ್ತಾರೆ. ಅದಕ್ಕೆ ಬೇಕಿದ್ದ ಎಲ್ಲಾ ಲಕ್ಷಣಗಳನ್ನು ವಿಷ್ಣು ಮೈಮೇಲೆ ಆವಾಹಿಸಿಕೊಂಡು ಅಭಿನಯಿಸಿದ್ದಾರೆ. ಆ ರೋಷದ ಉಕ್ಕುವ ಕಣ್ಣುಗಳು, ಮಾತಿನ ಗಡುಸು ಹೊಂದಿಕೊಂಡಿವೆ. ಇಡಿ ಚಿತ್ರವನ್ನು ತನ್ನ ಅಭಿನಯದ ಮೇಲೆ ಹೊತ್ತು ನಿಲ್ಲುವ ಈ ಪಾತ್ರ ಕೆಲವೊಮ್ಮೆ ಮರುಕ ಹುಟ್ಟಿಸುತ್ತದೆ, ನಗೆ ಉಕ್ಕಿಸುತ್ತದೆ, ಪ್ರೀತಿ ಹುಟ್ಟಿಸುತ್ತದೆ, ದ್ವೇಷ ರೋಷ ಅಂದ್ರೆ ರಾಮಾಚಾರಿ ಎನ್ನುವ ಮಟ್ಟಕ್ಕೆ ತಲುಪಿಸುತ್ತದೆ. 

ಮೇಲೆ ಹೇಳಿದ ಎಲ್ಲಾ ಪಾತ್ರಗಳು ತಮಗೆ ಬೇಕಾದ ರೀತಿಯಲ್ಲಿ ರಾಮಾಚಾರಿಯ ಜೀವನದಲ್ಲಿ ಹೆಜ್ಜೆ ಇಟ್ಟು ಅವನ ಜೀವನದ ಸರೋವರದಲ್ಲಿ ಅಲೆಗಳನ್ನು ಎಬ್ಬಿಸಿ ತಿಳಿ ನೀರನ್ನು ಕದಡಿಬಿಡುತ್ತಾರೆ. 

ವಿಧಿಯ ಆಟದ ಶಿಶು ಅನ್ನುವಂತೆ ಎಲ್ಲರಿಗೂ ಬೇಡ ವ್ಯಕ್ತಿಯಾಗಿ ಪ್ರೀತಿಸುವ ಮನಸ್ಸಿನ ರಾಜನಾಗಿ ಮೆರೆಯುವ ಈ ಪಾತ್ರ ವಿಷ್ಣು ಅವರ ಅಭಿನಯ ಪ್ರಪಂಚದಲ್ಲಿ ಅತ್ಯುತ್ತಮ ಪಟ್ಟ ಪಡೆಯುತ್ತದೆ. 

ಅಲ್ಲಿಯ ತನಕ ಈ ಮಟ್ಟದಲ್ಲಿ ಗುರುಗುಟ್ಟುವ, ಸಿಡಿಯುವ, ಉರಿಯುವ ನಾಯಕ ಬಂದಿರಲಿಲ್ಲ ಬೆಳ್ಳಿ ಪರದೆಯಲ್ಲಿ. ಆ ಪಾತ್ರವನ್ನು ಸಾಕ್ಷಾತ್ಕರಿಸಿದವರು ವಿಷ್ಣು. 
ಚಿತ್ರ ಕೃಪೆ - ಅಂತರ್ಜಾಲ 

ಅಶ್ವತ್ - ಚಾಮಯ್ಯ ಮೇಷ್ಟ್ರು
ಗುರು - ತಂದೆ - ಸ್ನೇಹಿತ ಈ ಮೂರು ಸ್ಥಾನಗಳನ್ನು ಕಲಸಿ, ಬೆರೆಸಿ ಪಾಕ ಹಾಕಿದ ಪಾತ್ರ ಇದು. ಈ ಪಾತ್ರಕ್ಕೆ ಅಶ್ವತ್ ಅಭಿನಯಿಸಿಲ್ಲ ಬದಲಿಗೆ ಅವರೇ ಚಾಮಯ್ಯ ಮೇಷ್ಟ್ರು. 

"ಆ ನಾಗರಹಾವಿಗೆ ನಾನೇ ಗರುಡ ಮಚ್ಚೆ"

"ನನ್ನ ಶಿಷ್ಯ ದೊಡ್ಡ ವ್ಯಕ್ತಿ ದೊಡ್ಡ ವ್ಯಕ್ತಿ"

"ರಾಮಾಚಾರಿಯಂಥಹ ಉರಿಯುವ ಬೆಂಕಿಗೆ ಕೋಪದ ಕಾದೆಣ್ಣೆ ಹಾಕಬೇಡಿ"

"ನಿನಗೆ ಧರ್ಮರಾಯ ಲಾಂಚನವಾಗಬೇಕೆ ಹೊರತು ದುರ್ಯೋಧನ ಅಲ್ಲ"

"ನಿಮಗೆ ಗೊತ್ತಿಲ್ಲ ನಾ ಹಾಕಿದ ಗೆರೆಯನ್ನು ರಾಮಾಚಾರಿ ಎಂದು ದಾಟುವುದಿಲ್ಲ"

ಇವೆಲ್ಲಾ ಕೆಲವು ತುಣುಕುಗಳು..

ಮನದಾಳಕ್ಕೆ ಮೆಟ್ಟಿಲು ಇಳಿದು ಹೋಗೊಲ್ಲಾ ಇವರ ಪಾತ್ರ.. ಒಂದೇ ಸಾರಿ ಮನದ ಸರೋವರಕ್ಕೆ ಧುಮುಕಿಯೇ ಬಿಡುತ್ತಾರೆ. 
(ಈ ಪಾತ್ರದ ಬಗ್ಗೆ ಬಹಳ ಬರೆಯಲು ಹೋಗಿಲ್ಲ.. ಕಾರಣ ಚಿತ್ರ ಜಗತ್ತಿನ ಪಾತ್ರಗಳ ಬಗ್ಗೆ ಬರೆಯುವೆ.. ಅಲ್ಲಿ ಮಿನುಗುತ್ತಾರೆ ನಮ್ಮ ಹೆಮ್ಮೆಯ ಚಾಮಯ್ಯ ಮೇಷ್ಟ್ರು!.  ನಾ ತುಂಬಾ ಇಷ್ಟ ಪಡುವ ಕೆ ಎಸ್ ಅಶ್ವತ್ ಅವರ ಚಿತ್ರ ಪ್ರಪಂಚದ ಪಾತ್ರಗಳ ಬಗ್ಗೆ ಮುಂದೆ ಬರೆಯುವೆ.. ಜೊತೆಯಲ್ಲಿ ಚಾಮಯ್ಯ ಮೇಷ್ಟ್ರು ಪಾತ್ರವೇ ಮೊದಲು)

ಚಿತ್ರ ಕೃಪೆ - ಅಂತರ್ಜಾಲ 
ಅಶ್ವತ್ ಅವರ ಅಭಿನಯಕ್ಕೆ ಈ ಚಿತ್ರ ಲೇಖನ ಅರ್ಪಿತ 

*************************************
ನಾಗರಹಾವು ಚಿತ್ರ ತುಂಬಾ ಕಾಡುವುದು ಚಾಮಯ್ಯ ಮೇಷ್ಟ್ರ ಅಭಿನಯ, ರಾಮಾಚಾರಿಯ ಆಕ್ರೋಶ, ವರದಾ ಪಾತ್ರದ ಸ್ಪೆಷಾಲಿಟಿ, ದುರ್ಗವನ್ನು ಅಚ್ಚುಕಟ್ಟಾಗಿ ತೋರಿಸುವ ರೀತಿ. ಚಿತ್ರದುರ್ಗ ನೋಡಬೇಕೆಂದರೆ ನಾಗರಹಾವು ಚಿತ್ರ ನೋಡಿ ಸಾಕು ಎನ್ನುವಷ್ಟರ ಮಾತಿಗೆ ಪ್ರಸಿದ್ಧಿಯಾಗಿದೆ. 

ಒಂದು ವಸ್ತುವನ್ನು ಜಗತ್ತು ಹೇಗೆಲ್ಲ ನೋಡಬಹುದು, ಮತ್ತು ಹೇಗೆಲ್ಲ ಅದರ ಬೆಳವಣಿಗೆಗೆ ಅಡ್ಡಿ ಅಥವಾ ಸಹಕಾರಿ ಆಗಬಹುದು ಎನ್ನುವ ಒಂದು ಸತ್ವ ಈ ಚಿತ್ರದಲ್ಲಿ ಮೂಡಿ ಬಂದಿದೆ. ವಿವೇಕದ ಲೇಖನಿಗೆ ನಮ್ಮ ಹಣೆಬರಹವನ್ನು ತಿದ್ದುವ ಶಕ್ತಿ ಇಲ್ಲದೆ ಹೋದರು.. ಹಣೆಬರಹದ ದಿಕ್ಕನ್ನು ಇನ್ನಷ್ಟು ತೀಕ್ಷ್ಣಗೊಳಿಸುವ ಶಕ್ತಿ ಇದೆ ಎನ್ನುವ ಮಾತು ನಿಜಕ್ಕೂ ಹೌದು. ಇಲ್ಲಿ ಎಲ್ಲಾ ಪಾತ್ರಗಳು ವಿವೇಕಸಹಿತವಾಗಿ ಯೋಚಿಸಿ.. ಸ್ವಲ್ಪ ತಾಳ್ಮೆಯಿಂದ ವರ್ತಿಸಿದ್ದರೆ ರಾಮಾಚಾರಿಯ ಜೀವನ ಸುಂದರ ಹೂ ಬನವಾಗುತ್ತಿತ್ತು ಅನ್ನಿಸುತ್ತದೆ. 

ಒಂದು ಕಾದಂಬರಿಯನ್ನು ಚಿತ್ರ ಮಾಡುವುದೇ ಸಾಹಸ.. ಮೊದಲೇ ಬಂಧಿತವಾಗಿದ್ದ ಮೂರು ಮೂರು ಕಾದಂಬರಿಗಳನ್ನು ಜೋಡಿಸಿ ಹೊಂದಿಸಿ ಬೆಳ್ಳಿ ತೆರೆಗೆ ಬೇಕಾದ ರೀತಿಯಲ್ಲಿ ಅಳವಡಿಸಿಕೊಂಡು, ಮನೋಜ್ಞ ಸಂಭಾಷಣೆ, ಹಾಡುಗಳು, ಸಂಗೀತ ಸರಿಯಾದ ಹದದಲ್ಲಿ ಬೆರೆಸಿ ಒಂದು ಅನರ್ಘ್ಯ ರತ್ನ ನೀಡಿದ್ದಾರೆ. 

ಚಿತ್ರ ಕೃಪೆ - ಅಂತರ್ಜಾಲ

ಈ ಲೇಖನ ಮಾಲಿಕೆ ಅವರ ಚಿತ್ರಗಳ ಬಗ್ಗೆ ಆದರೂ.. ನಟರ, ತಂತ್ರಜ್ಞರ ಬಗ್ಗೆ ಹೆಚ್ಚು ಹೆಚ್ಚು ಬರೆದಿದ್ದೇನೆ. ಆದರೆ ನಿರ್ದೇಶಕ ಚಿತ್ರದ ಹಡಗಿನ ಕಪ್ತಾನ ಎನ್ನುವ ಮಾತನ್ನು ಕಲ್ಲಿನಲ್ಲಿ ಕೆತ್ತಿ ನಿರೂಪಿಸಿದವರು ಪುಟ್ಟಣ್ಣ ಕಣಗಾಲ್. ಇಡಿ ಪಾತ್ರಗಳನ್ನೂ ತಾವು ಮನದಲ್ಲಿ ಕಟ್ಟಿಕೊಂಡು ಅದಕ್ಕೆ ರೂಪ ಕೊಟ್ಟು ಅಭಿನಯ ಹೇಳಿಕೊಟ್ಟು, ಎಲ್ಲರ ಬಳಿಯೂ ೧೦೦ ಕ್ಕೆ ನೂರು ಶ್ರಮ ತೆಗೆಸಿದ ಈ ಕಪ್ತಾನರಿಗೆ ಲೇಖನಗಳ ಮಾಲಿಕೆಯೇ ನಮ್ಮ ಕೃತಜ್ಞತೆಗಳು, ಧನ್ಯವಾದಗಳು ಮತ್ತು ಅಭಿನಂದನೆಗಳು!!!

Saturday, November 1, 2014

ಕನ್ನಡ ಜನರ ಔದಾರ್ಯದಂತೆ ... ಸಾಕ್ಷಾತ್ಕಾರ (1971)

ಸುಮಾರು ಇಪ್ಪತ್ತು ವರ್ಷಗಳ ಹಿಂದೆ, ನನ್ನ ಅಣ್ಣ ಆಗಿನ VCP ನಲ್ಲಿ ಸಾಕ್ಷಾತ್ಕಾರ ಚಿತ್ರವನ್ನು ಒಬ್ಬನೇ ನೋಡಿ ಸುಮಾರು ದಿನಗಳು ಮಾತೆ ಆಡದಂತೆ ಮೌನವಾಗಿದ್ದ. ಯಾಕೋ ಅಂತ ಕೇಳಿದರೆ ಆ ಚಿತ್ರ ತುಂಬಾ ಕಾಡುತ್ತದೆ.. ನೀ ಆ ಚಿತ್ರವನ್ನು ಒಮ್ಮೆ ನೋಡು ಆಮೇಲೆ ನಿನಗೆ ಗೊತ್ತಾಗುತ್ತೆ ಅಂದ.

ಒಮ್ಮೆ ನೋಡಿದೆ, ನಾ ಮೂಕ ಹಕ್ಕಿಯ ಹಾಗೆ ಆಗಿಬಿಟ್ಟೆ.

ಬಿ ಮಲ್ಲಿಕ್ ಅವರ ಮಲ್ಲಿಕ್ ಪ್ರೊಡಕ್ಷನ್ಸ್ ಅವರ ನಿರ್ಮಾಣದಲ್ಲಿ ೧೯೭೧ರಲ್ಲಿ ಬೆಳ್ಳಿತೆರೆಯಲ್ಲಿ ಸಾಕ್ಷಾತ್ಕಾರಗೊಂಡ ಈ ಚಿತ್ರ ಹಲವಾರು ಕಾರಣಗಳಿಗೆ ನಮ್ಮ ಮನದಲ್ಲಿ ಹಸಿರಾಗಿ ನಿಲ್ಲುತ್ತದೆ.


ಚಿತ್ರವನ್ನು ಚಿಕಮಗಳೂರು, ಕಳಸ, ಮುಡುಕುತೊರೆ ಮುಂತಾದ ಸುಂದರ ತಾಣಗಳಲ್ಲಿ ಮೂಡಿ ಬಂದ ಈ ಚಿತ್ರಕ್ಕೆ ಆರಂಭಿಕ ದೃಶ್ಯದಲ್ಲಿ ಕನ್ನಡದ ಚೇತನ ಅ ನ ಕೃಷ್ಣರಾಯರು ಬಂದು ಶುಭ ಹಾರೈಸುವುದು, ಜೊತೆಯಲ್ಲಿಯೇ ಚಿತ್ರರಂಗದ ಶೋ ಮ್ಯಾನ್ ಎಂದೇ ಹೆಸರಾದ ರಾಜ್ ಕಪೂರ್, ಮತ್ತು ಭಾರತ ಚಿತ್ರರಂಗದ ಸಿಂಹ ಪೃಥ್ವಿರಾಜ್ ಕಪೂರ್ ಇವರನ್ನೆಲ್ಲ ಸಾಕ್ಷಾತ್ಕರಿಸಿಕೊಂಡ ದೃಶ್ಯ ನೆನಪಾಗಿ ನಿಲ್ಲುತ್ತದೆ.

ಕನ್ನಡ ಚಿತ್ರರಂಗದ ಭೀಷ್ಮ ಆರ್ ನಾಗೇಂದ್ರರಾಯರು, ನನ್ನ ನೆಚ್ಚಿನ ಬಾಲಕೃಷ್ಣ, ಕಪ್ಪು ಬಿಳುಪಿನ ವರ್ಣದಲ್ಲೂ ಮುಗ್ಧವಾಗಿ ಕಾಣುವ ಜಮುನ, ಕಂಚಿನ ಕಂಠದ ವಜ್ರಮುನಿ, ಇಡಿ ಚಿತ್ರದಲ್ಲಿ ಮೃದುವಾಗಿ ಮಾತಾಡಿ ವಿಶಿಷ್ಟ ಅಭಿನಯ ನೀಡಿರುವ ರಾಜ್, ಚಿಕ್ಕ ಚಿಕ್ಕ ಪಾತ್ರದಲ್ಲಿ ನರಸಿಂಹರಾಜು ಮತ್ತು  ಉಳಿದ ಸಹಕಲಾವಿದರು  ಚಿತ್ರಕ್ಕೆ ಬೇಕಾದ ವರ್ಣವನ್ನು ತಂದು ಕೊಟ್ಟಿದ್ದಾರೆ.

ಈ ಚಿತ್ರದಲ್ಲಿ ಎದ್ದು ಕಾಣುವುದು ಈ ಮಹಾನ್ ಕಲಾವಿದರು

ಪೃಥ್ವಿರಾಜ್ ಕಪೂರ್:


ದೊಡ್ಡ ದೇಹ, ದೊಡ್ಡ ಶಾರೀರ, ಮಾತು, ಅಂಗೀಕ ಅಭಿನಯ ವಾಹ್ ವಾಹ್.

ಇಡಿ  ಪಾತ್ರವನ್ನು ಅವರ ಧ್ವನಿಯಲ್ಲಿಯೇ ಅಭಿನಯಿಸಿರುವುದು ಪುಟ್ಟಣ್ಣ ಅವರು ಕನ್ನಡ ನುಡಿ, ನೆಲಕ್ಕೆ ತೋರಿಸುತ್ತಿದ್ದ ಅಭಿಮಾನ.

"ಒಲವೆ ಜೀವನ ಸಾಕ್ಷಾತ್ಕಾರ" ಈ ಮಾತುಗಳನ್ನು ಹೇಳುವಾಗ ಅವರ ಧ್ವನಿ

"ಆದಷ್ಟು ಬೇಗ ಮನುಷ್ಯನಾಗಬೇಕು ಉಮಾ ಮಹೇಶ್ವರನಾಗಬೇಕು"

"ಒಲವಿನ ಬಲವೇ ದೈವ ಬಲ"

ಎಲ್ಲರೂ ಈ ಮನೆಯಿಂದ ಹೊರತು ಹೋದರೆ ಏನು ಉಳಿಯುತ್ತದೆ ಎನ್ನುವ ಅವರ ಶ್ರೀಮತಿ ಪ್ರಶ್ನೆಗೆ ಅವರು ಕೊಡುವ ಉತ್ತರ
"ಸತ್ಯ ಧರ್ಮ ಮನುಷ್ಯತ್ವ" 

ಹೆಂಡತಿ ಅವರ ಮಾತು ಕೇಳದೆ ಮನೆ ಬಿಟ್ಟು ಹೋಗುವಾಗ ಅವರು ಕೂಗುವ "ತಾಯೇ" ನಿಜಕ್ಕೂ ಒಮ್ಮೆ ನಾನೇ ಬೆಚ್ಚಿ ಬಿದ್ದೆ. ರೋಮಾಂಚನ ಮತ್ತು ಭೀತಿ ಎರಡರ ಮಧ್ಯದ ಸ್ಥಿತಿ ನನ್ನದು ಆಗ.

"ನನ್ನ ಮನೆ ಬಾಗಿಲು ದೊಡ್ಡದಾಗಿ ತೆರೆದಿದೆ
ಬರುವವರಿಗೆ ಸ್ವಾಗತ ಸುಸ್ವಾಗತ
ಹೋಗೋರಿಗೆ" ಎಂದು ಹೇಳಿ ಎರಡು ಕೈಯನ್ನು ಎತ್ತಿ ಮುಗಿಯುತ್ತಾರೆ. ಇಡಿ ದೃಶ್ಯದಲ್ಲಿ ಅವರು ಓಡಾಡುವ ಪರಿ, ಅದಕ್ಕೆ ಕೊಡುವ ಗಂಭೀರತೆ ಮನಸ್ಸೆಳೆಯುತ್ತದೆ. ಒಂದು ದೃಶ್ಯವನ್ನು ಇನ್ನಷ್ಟು ಶ್ರೀಮಂತಗೊಳಿಸುವ ಕಲೆ ಪುಟ್ಟಣ್ಣ ಅವರಿಗೆ ಸಿದ್ಧಿಸಿತ್ತು.

"ಮಡದಿಯೇ ಮನೆ ದೇವತೆ"

"ಈ ಪ್ರಪಂಚದಲ್ಲಿ ತನ್ನ ಹೆಂಡತಿಯನ್ನು ಕರೆದುಕೊಂಡು ಬಾರೋ ಅಂತ ಹೇಳುವ ದೌರ್ಭಾಗ್ಯ ಯಾವ ಅಪ್ಪನಿಗೂ ಬಾರದಿರಲಿ" ಕಣ್ಣಿನಲ್ಲಿ ಮಡುಗಟ್ಟಿದ ದುಃಖ ಧ್ವನಿಯಲ್ಲಿ ನಡುಕ, ವಾಹ್ ಸೂಪರ್ ಸೂಪರ್

ಹತಾಶರಾಗಿ ಅರಳಿ ಕಟ್ಟೆಯ ಬಳಿ ಕೂತಿದ್ದಾಗ ತನ್ನ ಸ್ನೇಹಿತ ಬಾರೋ ಮನೆಗೆ ಹೋಗೋಣ ಅಂತ ಹೇಳುವ ಮಾತು
"ಮನೆ  ಮಡದಿ, ಮಕ್ಕಳು ಎಲ್ಲಾ ನಶ್ವರ
ಈಶ್ವರನೊಬ್ಬನೆ ಶಾಶ್ವತ"

ಸ್ನೇಹಿತ "ಸ್ಥಳ ಬದಲಾದರೆ ನಿನ್ನ ಮನಸ್ಸು ತಿಳಿಯಾಗುತ್ತದೆ ನಡಿ ಶೃಂಗೇರಿಗೆ ಹೋಗೋಣ" ಅಂದಾಗ ಮಗುವಿನ ತರಹ ಅಭಿನಯ ಕೊಡುತ್ತಾ "ಶೃಂಗೇರಿಗೆ!.. ಹಾ ಹೋಗೋಣ" ಎಂದು ಎದ್ದು ನಿಲ್ಲುವಾಗ ಆ ಬೃಹತ್ ದೇಹದಲ್ಲಿ ಒಂದು ಪುಟಾಣಿ ಮಗು ಕಾಣುತ್ತದೆ.

ಅವರ ಅಂತಿಮ ದೃಶ್ಯದಲ್ಲಿ ತಮ್ಮ ಮಗನಿಗೆ ಬರೆದ ಪತ್ರದ ಸಾರಾಂಶವನ್ನು ಓದುವ ಅವರ  ಧ್ವನಿ
"ಈ ನೆಲದ ಬಾಳು ನಶ್ವರ
ಇಲ್ಲಿ ಒಲವು ಮಾತ್ರ ಅಮರ
ಕಳೆದ ನಿನ್ನೆಗಳಿಗಾಗಿ ಚಿಂತಿಸಬೇಡ 
ಬರುವ ನಾಳೆಗಳಿಗಾಗಿ ಭೀತನಾಗಬೇಡ
ನಿನ್ನ ತಾಯಿಯನ್ನು ದೈವದಂತೆ ಗೌರವಿಸು (ಈ ಮಾತನ್ನು ಹೇಳುವಾಗ "ದೈವ" ಎನ್ನುವ ಪದಕ್ಕೆ ಅವರು ಕೊಡುವ ಒತ್ತು ಸೂಪರ್)
ಜೀವನವನ್ನು ಜೇನಾಗಿ ನೆನೆದು ಸವಿಯುವ ಸಾಧನೆ ಮಾಡು 
ಸತತ ಪ್ರಯತ್ನವೇ ಸಾಧನೆಯ ರಹಸ್ಯ"

ಅವರು ಮಾತುಗಳನ್ನು ತುಸು ನಿಧಾನಗತಿಯಲ್ಲಿ ಜೊತೆಯಲ್ಲಿ ಅದಕ್ಕೆ ಕೊಟ್ಟಿರುವ  ಪ್ರತಿಧ್ವನಿಯೂ ಪರಿಣಾಮಕಾರಿಯಾಗಿ ಅವರ ಅಭಿನಯವನ್ನು ಇನ್ನಷ್ಟು ಹೆಚ್ಚಿಸಲು ಅನು ಮಾಡಿಕೊಟ್ಟಿದೆ. ಅನ್ಯ ಭಾಷೆಯ ನಟನನ್ನು ಕರೆತಂದು ಅವರೇ ಪಾತ್ರಕ್ಕೆ ಧ್ವನಿ ನೀಡುವಂತೆ ಮಾಡಿ, ಅವರಿಂದ ಕಥೆಗೆ ಬೇಕಾದ ರೀತಿಯಲ್ಲಿ ಅಭಿನಯ ಹೊರಗೆ ತೆಗೆದದ್ದು ಪುಟ್ಟಣ್ಣ ಅವರು ನಿರ್ದೇಶನದ ಮಾಧ್ಯಮದ ಮೇಲೆ ಹಿಡಿತವಿದ್ದದ್ದಕ್ಕೆ ಸಾಕ್ಷಿ.

ಹಣೆಯ ಮೇಲಿನ ವಿಭೂತಿ, ನಡುಗುವ ಕಣ್ಣುಗಳು, ಕಂಚಿನ ಕಂಠ, ವಸ್ತ್ರಗಳು ಎಲ್ಲವೂ ಆ ಪಾತ್ರಕ್ಕೆ ಸೊಗಸಾಗಿ ಜೊತೆಯಾಗಿವೆ.


ಆರ್ ನಾಗೇಂದ್ರರಾಯರು

ಕನ್ನಡ ಚಿತ್ರರಂಗದ ಭೀಷ್ಮ ಎಂದೇ ಹೆಸರಾದ ನಾಗೇಂದ್ರರಾಯರು ಪೃಥ್ವಿರಾಜ್ ಅವರಿಗೆ ಸರಿಸಾಟಿಯಾಗಿ ಅಭಿನಯಿಸಿದ್ದಾರೆ.

"ಮಹೇಶ ನಿನಗೆ ಪುಸ್ತಕದ ಜ್ಞಾನ ಹೆಚ್ಚು 
ಮಸ್ತಕದ ಜ್ಞಾನ ಕಮ್ಮಿ"

"ಬೇಡೋ ಕಣೋ.. ನಾನು ನೀನು ಬಾಲ್ಯ ಸ್ನೇಹಿತರು
ನಿನ್ನ ಮನೆ ಬೇರೆ ಅಲ್ಲ ನನ್ನ ಮನೆ ಬೇರೆ ಅಲ್ಲಾ 
ನಿನ್ನ ಹೆಂಡತಿ ಹೇಳಿದಾಗೆ ಅನಿಷ್ಟ ಅಂಗಾರಕ ದೋಷ ಮನೆ, ವಂಶವನ್ನೇ ನಿರ್ನಾಮ ಮಾಡುತ್ತದೆ"

"ಇಂದಿನಿಂದ ನೀವಿಬ್ಬರೂ ಒಲವಿನ ಜೋಡಿಗಳಲ್ಲ 
ಒಲವಿನ ಅಣ್ಣ ತಂಗಿಯರ ಹಾಗೆ ಬಾಳಿ"

ತನ್ನ ಸ್ನೇಹಿತನ ನೆಮ್ಮದಿಗೋಸ್ಕರ ಶೃಂಗೇರಿ ಬಂದು ನದಿಯಲ್ಲಿ ಅರ್ಘ್ಯ ಕೊಡುತ್ತಾ ಮಂತ್ರಗಳನ್ನು ಹೇಳುತ್ತಾ ಮುಖದಲ್ಲಿ ತೋರುವ  ಭಾವ..

"ಮಹೇಶ ಸುಮ್ಮನೆ ಒಲವು ಒಲವು ಅಂತ ಒದ್ದಾಡ್ತಾನೆ.. ಮಾಟ ಮದ್ದು ಮಾಡುವರಿಗೆ ಒಲವಿನ ಮಾತು ಎಲ್ಲಿ ಹೋಗುತ್ತೆ.. "

ಸಲೀಸಾದ ಅಭಿನಯ, ಪೃಥ್ವಿರಾಜ್ ಜೊತೆಯಲ್ಲಿಯೇ ಸರಿಸಾಟಿಯಾದ ಅಭಿನಯ ನೋಡೋದೇ ಕಣ್ಣಿಗೆ ಒಂದು ಹಬ್ಬ.

ಬಾಲಕೃಷ್ಣ ಅರ್ಥಾತ್ ಬಾಲಣ್ಣ 

ಅಕ್ಷರಶಃ ಈ ಚಿತ್ರದಲ್ಲಿ ಛಾಪು ಮೂಡಿಸಿದವರು ಇವರೇ. ಇಡಿ ಚಿತ್ರಕ್ಕೆ ಒಂದು ಮಹತ್ ತಿರುವು ಕೊಟ್ಟು, ತಮ್ಮ ಅಭಿನಯ, ಸಂಭಾಷಣೆ, ಮುಖಭಾವ ಎಲ್ಲದರಲ್ಲಿಯೂ ಖಳ ಅಂದರೆ ಕೂಗಾಡಲೇ ಬೇಕು, ದಪ್ಪ ದಪ್ಪ ಕಣ್ಣುಗಳು, ಮೀಸೆಗಳು, ವಿಚಿತ್ರ ವೇಷಭೂಷಣಗಳು ಇರಬೇಕು ಎನ್ನುವ ಸಿದ್ಧ ಸೂತ್ರವನ್ನು ಬದಿಗಿಟ್ಟ ಚಿತ್ರ ಇದು.  ಎಲ್ಲರ ರೀತಿಯಲ್ಲಿ ಸಹಜವಾಗಿ ಕಾಣುವ ಬಾಲಣ್ಣ ಈ ಚಿತ್ರದಲ್ಲಿ ಮಾಡಿರುವ ಜಾದೂ ಬಗ್ಗೆ ಹೇಳೋಕೆ ಪದಗಳೇ ಸಾಲದು.

"ಆವದಾನಿಗಳೇ ನನ್ನ ಮಗಳು ಸುಮಾ ಮಹೇಶನ ಮದುವೆ ಆಗಬೇಕು.. ನನ್ನ ಭಾವನ ಆಸ್ತಿ ನನಗೆ ಬರಬೇಕು.. ನನ್ನ ಭವನ ಸೊಕ್ಕು ಇಳಿಯಬೇಕು.. "

"ತಗೊಳ್ಳಿ ಕೊಲೆ ಮೊಕ್ಕದಮ್ಮೆಯಲ್ಲಿ ಬಂದ ದುಡ್ಡು... ಕೊಲೆ ಮಾಡಿದವನನ್ನೇ ಗೆಲ್ಲಿಸಿಬಿಟ್ಟೆ ಅದರ ಧರ್ಮ ಕರ್ಮಗಳು ನಿಮಗೆ ಇರಲಿ"

"ನಿನಗೆ ನಿನ್ನಮ್ಮನಹಾಗೆ ಮೈ ಬಂತೆ ಹೊರತು
ನನ್ನ ಹಾಗೆ ಬುದ್ದಿ ಬರಲಿಲ್ಲ"

"ಮಹಾರಾಣಿ ಆಗಿ ಬಾಳೇ ಮಗಳೇ ಅಂದ್ರೆ
ಹಾವ್ರಾಣಿ ಆಗಿ ಹಲ್ಲಿ ನುಂಗ್ತೀನಿ ಅಂತ್ಯಲ್ಲೇ"

"ನಾ ನಂಬಿದೋರಿಗೆ ದ್ರೋಹ ಮಾಡೋನಲ್ಲ
ತಂಬಿಟ್ಟಿಗೆ ಉಪ್ಪು ಬೆರೆಸೋನಲ್ಲಾ"

ಹೀಗೆ ಚಿತ್ರದ ಉದ್ದಕ್ಕೂ ಹೇಳುತ್ತಾ ಬರುವ ಬಾಲಣ್ಣನ ಪಾತ್ರ ಮಾಡೋದೆಲ್ಲ ಅನಾಚಾರವೇ.. ಅದ್ಭುತ ನಟನೆ.

ರಾಜ್ 

ಮೊದಲಿಗೆ ಗಮನಸೆಳೆಯುವುದು ಮುದ್ದಾಗಿ ಕಾಣುವ ಅವರು ಮತ್ತು ವಿದೇಶದಿಂದ ಬರುವ ಮೊದಲ ದೃಶ್ಯದಲ್ಲಿ ತನ್ನ ಓರಗೆಯವರನ್ನು ಯಾವ ಹಮ್ಮು ಬಿಮ್ಮು ಇಲ್ಲದೆ ಮಾತಾಡಿಸುವ ರೀತಿ.

ಅವರ ವೇಷಭೂಷಣಗಳು ಗಮನಸೆಳೆಯುತ್ತದೆ

ಇಡಿ ಚಿತ್ರದಲ್ಲಿ ಒಮ್ಮೆಯೂ ತಾಳ್ಮೆ ಕಳೆದುಕೊಳ್ಳದೆ ಸಂಯಮದಿಂದ ಮಾತಾಡುವ ಅಭಿನಯ.

ತಾನು ಮದುವೆಯಾಗುವ ಹೆಣ್ಣಿನಿಂದ ಹಲವು ಕಾರಣಗಳಿಗಾಗಿ ತನ್ನ ಮನೆಯೇ ಒಡೆದು ತನ್ನ ಬಂಧುಗಳೆಲ್ಲ ದೂರವಾದಮೇಲೆ ಈ ಮನೆ ಏನಾಗಿದೆ ಏನಾಗಬೇಕಿತ್ತು ಎನ್ನುವ ಸರಣಿ ಸಂಭಾಷಣೆಯಲ್ಲಿ ಅವರು ತೋರುವ ಮುಖಭಾವ ಮತ್ತು ಸಂಭಾಷಣೆಯನ್ನು ಹೇಳುವ ರೀತಿ.

ಅಪ್ಪನ ಅಣತಿಯಂತೆ ಅಮ್ಮನನ್ನು ಕರೆದೊಯ್ಯಲು ಬಂದಾಗ ಸಿದ್ಧವಾಗುವ ಅಮ್ಮನನ್ನು ನೋಡಿ ಸಂತಸಗೊಂಡು ಕೂತಿರುತ್ತಾರೆ. ಆದರೆ ಬಾಲಣ್ಣನ ಮಾತನ್ನು ಕೇಳಿ ತನ್ನ ತಾಯಿ "ಅಪ್ಪಾಜಿನೇ ಬಂದು ಕರೆದುಕೊಂಡು ಹೋದರೆ ಬರ್ತೀನಿ" ಎಂದು ಹೇಳಿದ ಮೇಲೆ.. ಒಂದು ಮಾತಾಡದೆ ತಮ್ಮ ಚಡಪಡಿಕೆ ತೋರುವ ಅಭಿನಯ ವಾಹ್ ಎನ್ನಿಸುತ್ತದೆ.

ಬೇರೆ ಯಾರೂ ತನ್ನ ತಾಯಿಯನ್ನು ಗುಂಡಿಟ್ಟು ಕೊಂದ ಮೇಲೆ.. ತಾಯಿಯ ಹತ್ತಿರ ಬಂದಾಗ "ಒಲವು ಒಲವು ಅಂತ ಹೇಳಿ.. ಒಲವಿನ ತಾಯಿಯನ್ನೇ ಬಲಿ ತೆಗೆದುಕೊಂಡೆಯ" ಎಂದು ತನ್ನ ತಾಯಿ ಹೇಳುತ್ತಾ ಕೊನೆ ಉಸಿರು ಎಳೆದಾಗ ರಾಜ್ ಅಭಿನಯ ಸೂಪರ್.

ಜೀವನವೆಲ್ಲ ಒಲವು ಒಲವು ಎಂದು ಹೋರಾಡಿಕೊಂಡು ಬಂದರೂ ತನ್ನ ತಾಯಿಯೇ ತನನ್ನು ತಪ್ಪು ತಿಳಿದುಕೊಂಡಾಗ.. ವಾಹ್ ಅಭಿನಯದಲ್ಲಿನ ತನ್ಮಯತೆ ನಮ್ಮನ್ನು ಸದಾ ಕಾಡುತ್ತದೆ

ಅಂತ್ಯದಲ್ಲಿ ತಮ್ಮ ಅಪ್ಪಾಜಿ ಹೇಳುತ್ತಿದ್ದ ಮಾತುಗಳನ್ನು ಮತ್ತೆ ನೆನಪಿಸಿಕೊಳ್ಳುವ
"ಜೀವನವೇ ಒಂದು ಪಾಠಶಾಲೆ
ಅದರಲ್ಲಿ ಬರುವ ಒಂದೊಂದು ಸನ್ನಿವೇಶವೂ ಪರೀಕ್ಷೆ
ಅದರಲ್ಲಿ ತೇರ್ಗಡೆಯಾದವನಿಗೆ ಮಾತ್ರ ಜೀವನ ಸಾಕ್ಷಾತ್ಕಾರ"

ಅತ್ಯುತ್ತಮ ಸಂಭಾಷಣೆ ಮತ್ತು ಅತ್ಯುತ್ತಮ ಅಭಿನಯ.

******

ನಾಯಕಿ ಜಮುನ ಅವರ ಅಭಿನಯ, ಮುಗ್ಧ ಸೌಂದರ್ಯ, ಸಂಭಾಷಣೆ, ಹಾಡುಗಳಲ್ಲಿ ನೃತ್ಯ ಇಷ್ಟವಾಗುತ್ತದೆ.
"ನಾನು ಅಂಗಾರಕ ದೋಷದ ಹೆಣ್ಣಲ್ಲ" ಎನ್ನುವಾಗ ತನ್ನ ಹಣೆಯ ಮೇಲಿನ ಕಳಂಕ ದೂರವಾದ ಆ ಕ್ಷಣಗಳಿಗೆ ಸಂತಸ ಪಡುವ ಅವರ ಅಭಿನಯ ಮನ ಮುಟ್ಟುತ್ತದೆ.

ಇಡಿ ಚಿತ್ರ ಪುಟ್ಟಣ್ಣ ಅವರ ಅಗ್ರಜ ಕಣಗಾಲ್ ಪ್ರಭಾಕರ ಶಾಸ್ತ್ರಿ ಅವರ ಕೂಸು. ಆರಂಭದಲ್ಲಿಯೇ "ಕಣಗಾಲ್ ಪ್ರಭಾಕರ್ ಶಾಸ್ತ್ರೀ ವಿರಚಿತ" ಎಂದು ತೋರಿಸುವ ಮೂಲಕ ಪುಟ್ಟಣ್ಣ ಪ್ರತಿಯೊಬ್ಬರ ಕಲೆಯನ್ನು, ಮತ್ತು ಅವರ ಶ್ರಮಕ್ಕೆ ತಕ್ಕ ಗುರುತಿಸುವಿಕೆಯನ್ನು ಪಾಲಿಸುತ್ತಿದ್ದದು ಇಷ್ಟವಾಗುತ್ತದೆ.

ಕಥೆ, ಚಿತ್ರಕಥೆ, ಸಂಭಾಷಣೆ, ಹಾಡುಗಳು ಎಲ್ಲವನ್ನೂ ಬರೆದಿರುವ ಕಣಗಾಲ್ ಪ್ರಭಾಕರ್ ಶಾಸ್ತ್ರಿ ಇಡಿ ಚಿತ್ರದುದ್ದಕ್ಕೂ ತಮ್ಮ ಪ್ರತಿಭೆಯನ್ನು ಧಾರೆ ಎರೆದಿದ್ದಾರೆ. ಈ ಚಿತ್ರ ಸಂಭಾಷಣೆ, ಹಾಡುಗಳಿಗೆ ಹೆಸರು ಮಾಡಿತ್ತು.

ಇಂಥಹ ಸುಮಧುರ ಚಿತ್ರಕ್ಕೆ ಛಾಯಾಗ್ರಹಣ ನೀಡಿದ ಶ್ರೀಕಾಂತ್ ಮತ್ತು ಸಂಗೀತ ಮತ್ತು ಮಹೋನ್ನತ ಗೀತೆಗಳನ್ನು ಕೊಟ್ಟ ಎಂ ರಂಗರಾವ್ ಸ್ಮರಣೀಯರು.

ಹಾಡುಗಳ ಬಗ್ಗೆ ಹೇಳಲೇ ಬೇಕು

"ಒಲವೆ ಜೀವನ ಸಾಕ್ಷಾತ್ಕಾರ" ಮೊದಲ ಹಾಡಿಗೆ ದನಿಯಾದವರು ಪಿ ಸುಶೀಲ, ಅಮೋಘ ಗಾಯನ ಜೊತೆಯಲ್ಲಿ
ಹಾಡಿನ ಕಡೆಯಲ್ಲಿ ಬರುವ ಸಾಲುಗಳನ್ನು ಹಾಡುವಾಗ ಅವರ ಧ್ವನಿ ಇಷ್ಟವಾಗುತ್ತದೆ.

"ಒಲವಿನ ಪೂಜೆಗೆ ಒಲವೆ ಮಂದಾರ
ಒಲವೆ ಬದುಕಿನ ಬಂಗಾರ
ಒಲವಿನ ನೆನಪೇ ಹೃದಯಕೆ ಮಧುರ
ಒಲವೇ ದೈವದ ಸಾಕ್ಷಾತ್ಕಾರ"

ಈ ಸಾಲುಗಳು ಮನಸ್ಸನ್ನು ಬಹಳ ಕಾಡುತ್ತವೆ.

ತನ್ನ ಒಲವಿನ ಗೆಳೆಯನ ಮುಂದೆ ಈ ಹಾಡನ್ನು ಹಾಡುತ್ತಾ ಅವನಿಗೆ ಒಲವಿನ ಪುಷ್ಪ ಮಾಲಿಕೆ ಅರ್ಪಿಸಿದ ಮೇಲೆ ರಾಜ್.. ಈ ದೃಶ್ಯವನ್ನು ತನ್ನ ಅಪ್ಪ ಮತ್ತು ಭಾವಿ ಮಾವ ನೋಡಿದರು ಎಂದು ಅರಿವಾದಾಗ ಅಭಿನಯ ಸುಂದರ.

"ಕಾದಿರುವಳು ಕೃಷ್ಣಾ ರಾಧೇ" ತನ್ನ ಬಾಳಿನ ಸಂಗಾತಿಯಾಗಿ ಬರುವುದಕ್ಕೆ ಸಿದ್ಧತೆಯಾಗಿ ಲಗ್ನ ಪತ್ರಿಕೆ ಶಾಸ್ತ್ರದಲ್ಲಿ ಹಾಡುವ ಹಾಡು. ಪಿ ಸುಶೀಲ ಅವರ ಗಾಯನ ಮರುಳು ಮಾಡುತ್ತದೆ. ಜಮುನ ಮೊಗದಲ್ಲಿ ನಾಚಿಕೆ, ಮುಂದಿನ ಜೀವನದ ಆಸೆ ಆಕಾಂಕ್ಷೆಗಳು ಎಲ್ಲವೂ ಮೆಲೈಸಿರುತ್ತದೆ.

"ಜನುಮ ಜನುಮದ ಅನುಬಂಧ" ಈ ಹಾಡಿನಲ್ಲಿ ಪಿ ಬಿ ಶ್ರೀನಿವಾಸ್ ನಮ್ಮ ಮನಸ್ಸನ್ನೇ ಅಪಹರಿಸಿಬಿಡುತ್ತಾರೆ. ಲಯಬದ್ಧವಾದ ಸಂಗೀತ, ಉತ್ತಮ ನೃತ್ಯ ಸಂಯೋಜನೆ ಈ ಹಾಡಿನ ಗರಿಮೆ. ಹಾಡಿನಲ್ಲಿ ಬರುವ "ಕನ್ನಡ.. ಜನರ ಔದಾರ್ಯದಂತೆ ಜನುಮ ಜನುಮದ ಅನುಬಂಧ" ದೃಶ್ಯದಲ್ಲಿ ಗಾಯಕ ಮತ್ತು ನಾಯಕರ ಜುಗಲ್ ಬಂದಿಇಷ್ಟವಾಗುತ್ತದೆ .

"ಫಲಿಸಿತು ಒಲವಿನ ಪೂಜಾ ಫಲ" ಸಂಪ್ರದಾಯ, ಸಂಸ್ಕಾರ, ನಮ್ಮ ಆಚರಣೆಗಳು, ಮದುವೆಯ ಸಂಭ್ರಮ ಎಲ್ಲವನ್ನೂ ಒಟ್ಟಿಗೆ ಒಂದು ಹಾಡಿನಲ್ಲಿ ತಂದಿರುವುದು ವಿಶೇಷ. ಪಿ ಸುಶೀಲ ಗಾಯನದಲ್ಲಿ ಮತ್ತೆ ಮುಂಚೂಣಿಯಲ್ಲಿ ನಿಂತರೆ, ನೃತ್ಯ, ಅಭಿನಯದಲ್ಲಿ ಜಮುನ ಗಮನ ಸೆಳೆಯುತ್ತಾರೆ.

ಅಂತಿಮ ದೃಶ್ಯದ "ಒಲವೆ ಜೀವನ ಸಾಕ್ಷಾತ್ಕಾರ" ಯುಗಳ ಗೀತೆ ಈ ಹಾಡನ್ನು ಮತ್ತೆ ಹಾಡಿನ ಬಗ್ಗೆ ಎಷ್ಟು ಹೇಳಿದರೂ ನನಗೆ ತೃಪ್ತಿ ಸಿಗುವುದಿಲ್ಲ. ಕಾರಣ ಈ ಕೆಳಗಿನಂತೆ

೧. ನಾಯಕಿ ಹಾಡಿದ್ದನ್ನೇ ನಾಯಕ ಮತ್ತೆ ಹಾಡುತ್ತಾನೆ. ಪಿ ಸುಶೀಲ ಅವರ ಧ್ವನಿಯಲ್ಲಿ ಹಾಡು ಸುಂದರವಾಗಿ ಮೂಡಿ ಬಂದಿದೆ. ಪಿ ಬಿ ಶ್ರೀನಿವಾಸ್ ಅವರ ಧ್ವನಿಗೆ ಪ್ರತಿಧ್ವನಿಯನ್ನು ಪರಿಣಾಮಕಾರಿಯಾಗಿ ಕೊಟ್ಟಿದ್ದಾರೆ.
೨. ಸಾಹಿತ್ಯ, ಅಭಿನಯ ಅತ್ಯುತ್ತಮ ಮಟ್ಟದ್ದಾಗಿದೆ
೩. ಇನ್ನೂ ಕ್ಯಾಮೇರ ಕೈಚಳಕ.

  • ಒಂದು ಕ್ಷಣವೂ ಕ್ಯಾಮೆರ ನಿಲ್ಲುವುದಿಲ್ಲ 
  • ಹತ್ತಿರ ಬರುತ್ತದೆ.. ದೂರ ಹೋಗುತ್ತದೆ 
  • ಕ್ಯಾಮೆರಾ ಚಾಲನೆಯ ವೇಗ 
  • ಆ ಬಯಲು ಪ್ರದೇಶವನ್ನೂ ಅಧ್ಬುತವಾಗಿ ಉಪಯೋಗಿಸಿಕೊಂಡಿರುವ ರೀತಿ 
ಇವೆಲ್ಲಾ ಒಂದು ಮಾತನ್ನು ಹೇಳುತ್ತದೆ. ಒಲವು ಬರಿ ಒಂದು ಕಡೆಯಲ್ಲಿ ನಿಲ್ಲುವುದಲ್ಲ, ಅಥವಾ ನಿಂತಿರುವುದಲ್ಲ.. ಓಡಾಡುತ್ತಲೇ, ಒಬ್ಬರಿಂದ ಒಬ್ಬರಿಗೆ ಹರಿಯುತ್ತಲೇ ಇರಬೇಕು. ಆಗಲೇ ಅದರ ಸಾಕ್ಷಾತ್ಕಾರ.  ಕ್ಯಾಮೆರ ಹತ್ತಿರ ಬರುತ್ತದೆ ದೂರ ಹೋಗುತ್ತದೆ.. ಇದರಿಂದ ಒಲವು ಬೇಡಿದಾಗ ಬಂದರೂ.. ನಾವು ಅದನ್ನು ಹಿಡಿದಿಡಲಾಗುವುದಿಲ್ಲ.. ಹಾಗೆಯೇ ದೂರ ಹೋದರು ಮತ್ತೆ ಮತ್ತೆ ಮರಳಿ ಬರುತ್ತಲೇ ಇರುತ್ತದೆ. 


ತನ್ನ ದುರಾಸೆಯ ವೃಕ್ಷಕ್ಕೆ ನೀರೆಯಲು ತನ್ನ ಅಕ್ಕನ ಮನೆಯ ಆಸ್ತಿಯನ್ನು ದೋಚಲು ಹೊಂಚು ಹಾಕುತ್ತಾ, ತನ್ನ ಅಕ್ಕನ ಮಗ ಇಷ್ಟ ಪಡುತ್ತಿದ್ದ ಹೆಣ್ಣಿನ ಜಾತಕದಲ್ಲಿ ದೋಷವಿದೆ ಎಂದು ಸುಳ್ಳು ಹೇಳಿಸಿ.. ಒಲವು ಒಲವು ಎಂದು ಹೇಳುತ್ತಿದ್ದ ಅಪ್ಪನ ಮಗನ ಪ್ರೀತಿ ಅನುಬಂಧವನ್ನು ಲೆಕ್ಕಿಸದೆ, ತನ್ನ ಅಕ್ಕನ ತಲೆಯಲ್ಲಿ ದ್ವೇಷದ ಬೀಜ ಬಿತ್ತಿ ಇಡಿ ಮನೆಯನ್ನು ರಣರಂಗ ಮಾಡುತ್ತಾನೆ. 
ಅಲ್ಲಿಂದ ಶುರುವಾಗುತ್ತದೆ ಧರ್ಮ ಕರ್ಮಗಳ ಹೊಡೆದಾಟ. ಕಡೆಯಲ್ಲಿ ತಾನು ಮಾಡಿದ ಪಾಪ ಶೇಷಗಳು ಸಶೇಷವಾಗದೆ ಈ ಜನ್ಮದಲ್ಲಿಯೇ ಅದಕ್ಕೆ ಪ್ರತಿಫಲ ಸಿಗುತ್ತದೆ ಎನ್ನುವದನ್ನು ಮಾರ್ಮಿಕವಾಗಿ ತೋರಿದ್ದಾರೆ ಈ ಚಿತ್ರದಲ್ಲಿ.

ಇಡಿ ಚಿತ್ರದ ಅದ್ಭುತ ರೂವಾರಿ ಪುಟ್ಟಣ್ಣ ಅದ್ಭುತ ಮಾಂತ್ರಿಕರೆ ಹೌದು. ತಮಗೆ ಅನ್ನಿಸಿದ್ದನ್ನ, ತಮ್ಮ ಮನದಾಳದಲ್ಲಿದ್ದುದ್ದನ್ನು  

ಹಾಗೆಯೇ ತೆರೆಯ ಮೇಲೆ ತಂದಿಡುವ ಅವರ ಶಕ್ತಿಗೆ ಎಷ್ಟು ಧನ್ಯವಾದಗಳನ್ನು ಹೇಳಿದರೂ ಕಡಿಮೆಯೇ. ಅವರ ಚಿತ್ರಗಳು ಅತ್ಯುತ್ತಮ ಗುಣಮಟ್ಟ ಹೊಂದಿರುತ್ತಿದ್ದವು. ಕಾರಣ ಚಲನ ಚಿತ್ರ ವಿಭಾಗದ ಪ್ರತಿ ಹಂತಗಳನ್ನು ಬಲ್ಲವರಾಗಿದ್ದರಿಂದ ಅದರ ಒಳಗೆ ಅಡಗಿರುತ್ತಿದ್ದ ಹೂರಣವನ್ನು ತೆರೆದಿಡಲು ಅನುಕೂಲವಾಗುತ್ತಿತ್ತು.

ಪುಟ್ಟಣ್ಣ ಕಣಗಾಲ್ ಗುರುಗಳೇ ಇಲ್ಲಿಯ ತನಕ ನಿಮ್ಮ ಚಿತ್ರಗಳ ಹರಿವು ಒಂದು ವಿಧದಲ್ಲಿತ್ತು. ಈ ಚಿತ್ರದ ನಂತರ ನಿಮ್ಮ ಆತ್ಮ ವಿಶ್ವಾಸ, ನಿಮ್ಮ ಪ್ರತಿಭೆಯ ಬಗ್ಗೆ ನಿಮಗೆ ಇದ್ದ ನಂಬಿಕೆ ಎಲ್ಲವೂ ಒಟ್ಟುಗೂಡಿಕೊಂಡು ಮುಂದೆ ನೀವು ಬೆಳ್ಳಿತೆರೆಗೆ ಅರ್ಪಿಸಿದ ಚಿತ್ರಗಳೆಲ್ಲವೂ ಒಂದೊಂದು ಮಾಣಿಕ್ಯ ರತ್ನಗಳೇ..

ಅಕ್ಷರಶಃ ಈ ಚಿತ್ರದ ನಂತರ ನೀವೂ ನಿಜವಾಗಿಯೂ ಕನ್ನಡ ಚಿತ್ರರಂಗವನ್ನು ಬೆಳಗಿದ ಚಿತ್ರ ಜ್ಯೋತಿಗಳನ್ನು ಹಚ್ಚಿಡುತ್ತಾ ಬಂದಿರಿ. ನಿಮ್ಮ ಕನ್ನಡಾಭಿಮಾನಕ್ಕೆ, ನೆಲದ ಸಂಪ್ರದಾಯವನ್ನು ಅಚ್ಚುಕಟ್ಟಾಗಿ ಬಿಂಬಿಸಿದ ನಿಮ್ಮ ಪ್ರತಿಭೆ ಶರಣು!!!

Saturday, October 25, 2014

ಒಂದೇ ಒಂದು ಅವಕಾಶ ಕೊಡಬೇಕಿತ್ತು - ಶರಪಂಜರ (1971)

ಒಂದು ಭಾನುವಾರದ ರಾತ್ರಿ.. ಉದಯ ವಾಹಿನಿಯಲ್ಲಿ ಶರಪಂಜರ ಚಿತ್ರ ಶುರುವಾಗಿತ್ತು.. ಎಲ್ಲರೂ ನೋಡುತ್ತಾ ಕೂತಿದ್ದೆವು..
ನೋಡುತ್ತಾ ನೋಡುತ್ತಾ ಒಬ್ಬೊಬ್ಬರೇ ನಿದ್ರಾದೇವಿಯ ಮಡಿಲಿಗೆ ಜಾರಿಕೊಂಡಿದ್ದೆವು..

ನನ್ನ ಸೋದರ ಮಾವ ರಾಜ (ಶ್ರೀಕಾಂತ) ಒಬ್ಬನೇ ಇಡಿ ಚಿತ್ರವನ್ನು ಜಾಹಿರಾತುಗಳ ಮಧ್ಯೆ ನೋಡಿ. ಮಲಗಿದಾಗ ಸರಿ ರಾತ್ರಿ ಯಾಗಿತ್ತು..

ಸೋಮವಾರ ಬೆಳಿಗ್ಗೆ ಯತಾವತ್ತು ನಮ್ಮ ನಿತ್ಯ ಕರ್ಮಗಳತ್ತ ಗಮನ ಹರಿಸುತ್ತಾ ಇದ್ದಾಗ.. ನಿಧಾನವಾಗಿ ಎದ್ದ ರಾಜ.. ರೂಮಿನ ಬಾಗಿಲಿನ ಹತ್ತಿರ ನಿಂತು ತನ್ನ ದೇಶಾವರಿ ನಗೆ ಕೊಡುತ್ತಾ.. "ಒಂದೇ ಒಂದು ಅವಕಾಶ ಕೊಡಬೇಕಿತ್ತು" ಎಂದು ಬೆರಳು ತೋರಿಸುತ್ತಾ ಹೇಳಿದ.. ನಮಗೆ ಆ ಬೆಳಗಿನ ಪುರುಸೊತ್ತಿಲ್ಲದ ಹೊತ್ತಿನ ನಡುವೆಯೂ ಹೊಟ್ಟೆ ಹಿಡಿದುಕೊಂಡು ನಗಲಾರಂಬಿಸಿದೆವು..

ಅಲ್ಲಿನ ಮುಂದೆ ಅವನನ್ನು ಮಾತಾಡಿಸುವಾಗಲೆಲ್ಲಾ .. "ರಾಜ ನನಗೆ ಒಂದೇ ಒಂದು ಅವಕಾಶ ಕೊಡಬೇಕಿತ್ತು" ಎಂದು ಶುರು ಮಾಡುತ್ತಿದ್ದೆ..

ಪುಟ್ಟಣ್ಣ ಚಿತ್ರಗಳನ್ನು ನೋಡುವ ಬಗೆ ಹೇಳಿಕೊಟ್ಟ ರಾಜ.. ನಿನಗೆ ಈ ಲೇಖನ ಅರ್ಪಿತ..

* * * * * * * * * * * * * * * 

ಎಲ್ಲೋ ಪುಸ್ತಕದಲ್ಲಿ ಓದಿದ ನೆನಪು.. ಕಲಾವಿದನಿಗೆ ಸವಾಲು ಅಂದರೆ ಹುಚ್ಚನ ಪಾತ್ರ ಅಥವಾ ಮಾನಸಿಕ ಸ್ಥಿಮಿತವಿರದ ಪಾತ್ರ.. ಪ್ರೇಕ್ಷಕರಿಗೆ ಹುಚ್ಚು ಹಿಡಿಸದೆ.. ನಟನೆ ಎನ್ನುವ ಒಂದು ದಾರದ ನಡಿಗೆಯ ಮೇಲೆ ಜಾರದೆ ಬೀಳದೆ ಅಭಿನಯಿಸುವ ಒಂದು ಪಾತ್ರ. ಅಂಥಹ ಪಾತ್ರವನ್ನು ಸೃಷ್ಟಿಸಿ ಗೆದ್ದ ಶ್ರೀಮತಿ ತ್ರಿವೇಣಿಯವರ ಕಾದಂಬರಿಯನ್ನು ಬೆಳ್ಳಿ ಪರದೆಯ ಮೇಲೆ ಸ್ವಲ್ಪವೂ ಮಾಸದೆ ತಂದವರು ಪುಟ್ಟಣ್ಣ ಕಣಗಾಲ್.. ಗೆರೆದಾಟದೆ ಒಂದು ವೃತ್ತದ ಪರಿಧಿಯಲ್ಲೇ ಅಭಿನಯವನ್ನು ಹೊರಹೊಮ್ಮಿಸಲು ತಮ್ಮ ಸಾಮರ್ಥ್ಯವನ್ನೆಲ್ಲ ಧಾರೆ ಎರೆದು ಎರಕ ಮಾಡಿಕೊಂಡ ಪಾಕವನ್ನು ಕೊಟ್ಟವರು ಮಿನುಗುತಾರೆ ಕಲ್ಪನಾ. 



ಇಂದಿಗೂ ಮಾನಸಿಕ ತೊಳಲಾಟ ಅಂದ ಕೂಡಲೇ  "ಯಾಕೋ ಶರಪಂಜರ ಕಾವೇರಿ ತರಹ ಆಡ್ತೀಯ" ಎನ್ನುವ ಮಾತು ಈ ಚಿತ್ರ ರತ್ನ ತಂದಿಟ್ಟ ಪರಿಣಾಮ ಎಂದರೆ ಖಂಡಿತ ಇದು ಈ ಚಿತ್ರಕ್ಕೆ ಮತ್ತು ಪುಟ್ಟಣ್ಣ ಅವರಿಗೆ ಕೊಡುವ ದೊಡ್ಡ ಗೌರವ ಎನ್ನುವುದು ನನ್ನ ಅಭಿಮತ. 

ವರ್ಧಿನಿ ಆರ್ಟ್ಸ್ ಪಿಕ್ಕ್ಚರ್ಸ್ ಲಾಂಛನದಲ್ಲಿ ಸಿ ಎಸ್ ರಾಜ ಅವರ ನಿರ್ಮಾಣದಲ್ಲಿ ತೆರೆಗೆ ಬಂದ ಚಿತ್ರ ರತ್ನ ಇದು. ಶ್ರೀಮತಿ ತ್ರಿವೇಣಿಯವರ ಶರಪಂಜರ ಎನ್ನುವ ಕಾದಂಬರಿಯನ್ನು ತೆರೆಗೆ ಅಳವಡಿಸಿದ್ದು ನಿರ್ದೇಶಕ ರತ್ನ ಪುಟ್ಟಣ್ಣ. 

ಮೈಸೂರು, ಶ್ರೀರಂಗಪಟ್ಟಣ, ಮಡಿಕೇರಿ, ಚುಂಚನಕಟ್ಟೆಯ  ಸುಂದರ ಮಡಿಲಿನಲ್ಲಿ ಮೂಡಿ ಬಂದ ಚಿತ್ರಕ್ಕೆ ಛಾಯಾಗ್ರಹಣ ಡಿ ವಿ ರಾಜಾರಾಂ ಅವರದ್ದು, ಸಂಗೀತ ವಿಜಯಭಾಸ್ಕರ್ ಮತ್ತು ಸಾಹಿತ್ಯ ವಿಜಯನಾರಸಿಂಹ ಮತ್ತು ಪುಟ್ಟಣ್ಣ ಅವರ ಅಗ್ರಜ ಕಣಗಾಲ್ ಪ್ರಭಾಕರಶಾಸ್ತ್ರಿ ಅವರದ್ದಾಗಿತ್ತು,  ಉತ್ತಮ ಸಾಹಿತ್ಯಕ್ಕೆ ಅಷ್ಟೇ ಉತ್ತಮ ಕಂಠ ನೀಡಿದವರು ಪಿ ಬಿ ಶ್ರೀನಿವಾಸ್ ಮತ್ತು ಪಿ ಸುಶೀಲ.  ಬಂಧನ ಶರಪಂಜರದಲಿ ಬಂಧನ ಎನ್ನುವ ಪುಟ್ಟ ಪುಟ್ಟ ಗೀತೆಯ ಸಾಲುಗಳು ಚಿತ್ರದ ಉತ್ತರಾರ್ಧದಲ್ಲಿ ಪರಿಣಾಮಕಾರಿಯಾಗಿ ಮೂಡಿ ಬಂದಿದೆ ಅದನ್ನು ಹಾಡಿದವರು ಮೈಸೂರು ದೇವದಾಸ್. 

ಈ ಚಿತ್ರಮಾಡಿದಾಗ ಶ್ರೀಮತಿ ತ್ರಿವೇಣಿಯವರು ಇಹಲೋಕದಲ್ಲಿ ಇರಲಿಲ್ಲ.. ಆದರೂ ಸಂಭಾಷಣೆಯ ಫಲಕದಲ್ಲಿ  ತ್ರಿವೇಣಿ ಜೊತೆಯಲ್ಲಿ ಹಂಚಿಕೊಂಡದ್ದು ಸಾಹಿತಿಗಳಿಗೆ ಪುಟ್ಟಣ್ಣ ಅವರು ಕೊಡುತ್ತಿದ್ದ ಗೌರವ ಸೂಚಿಸುತ್ತದೆ. 

ಮುಂದಿನ ಸೀಟ್ ನಲ್ಲಿ ಕಿತ್ತಳೆ ಹಣ್ಣನ್ನು ಬಿಡಿಸಿ ತಿಂದರು.. ಸಿಪ್ಪೆಯ ರಸ ಹಿಂದಿನ ಸೀಟ್ ತನಕ ಹಾರಿತು ಎಂದು ಕೂಗುವ  ನಾಯಕನ ದೃಶ್ಯದಲ್ಲಿಯೇ ಚಿತ್ರದ ತಿರುಳನ್ನು ಬಿಡಿಸಿ ಇಟ್ಟಿದ್ದಾರೆ.  ಸಿಪ್ಪೆ ಸುಲಿದ ಮೇಲೆ ಹಣ್ಣನ್ನು ತಾನೇ ತಿನ್ನುವುದು ಸಿಪ್ಪೆಯ ಹಂಗೇಕೆ, ಸಿಹಿಯಾದ ವಸ್ತುವಿಗೆ ಯಾವಾಗಲೂ ಕಹಿಯಾದ ಒಂದು ಬೇಲಿ ಇರುತ್ತದೆ ಎನ್ನುವ ತರ್ಕದ ಅರಿವಿಲ್ಲದೆ, ನಾಯಕ ನಾಯಕಿಯನ್ನು ಚಿತ್ರದ ದ್ವೀತಿಯ ಭಾಗದಲ್ಲಿ ತಿರಸ್ಕಾರ ನೋಟದಿಂದ ನೋಡುವುದಕ್ಕೆ ಬುನಾದಿ ಹಾಕಿಕೊಡುತ್ತದೆ.. ಹಾಗೆಯೇ ಮದುವೆಗೆ ಆಹ್ವಾನ ನೀಡುವ ಮುಂಚೆ ನಾಯಕನ ಸ್ನೇಹಿತ ಹುಡುಗಿಯ ಬಗ್ಗೆ ಅಷ್ಟೇನೂ ಒಳ್ಳೆ ಅಭಿಪ್ರಾಯ ಕೇಳಿಲ್ಲ ಅಂದಾಗ ನಾಯಕನೇ "ಸೌಂದರ್ಯ ಇದ್ದ ಕಡೆ ಅಪವಾದ ಇದ್ದೆ ಇರುತ್ತದೆ" ಎನ್ನುತ್ತಾನೆ. 

ಆದರೆ ಕಡೆಗೆ ತರ್ಕವನ್ನೆಲ್ಲ ಬದಿಗಿಟ್ಟು ನಾಯಕಿಯ ಜೀವನದಲ್ಲಿ ಬಲವಂತವಾಗಿ ನಡೆದ ಒಂದು ಅಚಾತುರ್ಯವನ್ನೇ ಮನದಲ್ಲಿಟ್ಟುಕೊಂಡು ಸಿಹಿಯಾದ ಹಣ್ಣನ್ನು ತಿನ್ನದೇ ರಸ ಸಿಡಿಸಿ ಕಣ್ಣಿಗೆ ಉರಿ ಕೊಡುವ ಪರ ಸ್ತ್ರೀ ಬಗ್ಗೆ ಮಾತ್ರ ಗಮನ ಕೊಡುವ ಇಡಿ ಚಿತ್ರಣ ಮೊದಲ ದೃಶ್ಯದಲ್ಲಿ ಮೂಡಿ ಬಂದಿದೆ.  

ಇದೆ ತರಹದ ಮಾತನ್ನು ಪುಷ್ಟಿಕರಿಸುವ ನಾಯಕನ ಸ್ನೇಹಿತ ನೋಡೋ "ಬ್ಯೂಟಿ ಜಾಗದಲ್ಲಿ ಬೀಸ್ಟ್ ಇರುತ್ತೆ" ಎನ್ನುವ ಎಚ್ಚರಿಕೆ ಮಾತಿನಲ್ಲಿ ಚಿತ್ರದ ಇನ್ನೊಂದು ಮುಖವನ್ನು ತೆರೆದಿಡುತ್ತಾರೆ. 

ಈ ತರಹದ ಸಾಂಕೇತಿಕ ದೃಶ್ಯಗಳಿಗೆ ಪುಟ್ಟಣ್ಣ ಚಿತ್ರಗಳು ಅತ್ಯುತ್ತಮ ವೇದಿಕೆ. 

ಸಂಪ್ರದಾಯಗಳು ಎಂಬ ಮಾತು ಬಂದಾಗ ಪುಟ್ಟಣ್ಣ ಅದನ್ನು ಬೆಳ್ಳಿ ತೆರೆಗೆ ತರುವ ರೀತಿ ಖುಷಿ ಕೊಡುತ್ತದೆ. ಈ ಚಿತ್ರದಲ್ಲೂ ಮಡಿಕೇರಿಯ ಕೊಡವ ಸಂಸ್ಕೃತಿಯ ಮದುವೆಯ ಶಾಸ್ತ್ರ, ಹಾಗೆಯೇ ನಾಯಕ ನಾಯಕಿಯ ಮದುವೆಯ ಶಾಸ್ತ್ರ ಸಿಕ್ಕ ಪುಟ್ಟ ಪುಟ್ಟ ಘಳಿಗೆಯಲ್ಲಿ ಅನಾವರಣ ಮಾಡಿಬಿಡುತ್ತಾರೆ. 

ಹಾಗೆಯೇ ಸ್ಥಳ ವೈಶಿಷ್ಟ್ಯವನ್ನು ಸಾರುವ "ಇಡಿ ಎಪ್ಪತೆರಡು ಎಕರೆ ತೋಟದಲ್ಲಿ ಇನ್ನೂರ ಎಪ್ಪತೆರಡು ಬಗೆಯ ಕಿತ್ತಳೆ ಇದೆ" ಎನ್ನುತ್ತಾ ಮಡಿಕೇರಿಯ ಕಿತ್ತಳೆ ತೋಟದ ಬಗ್ಗೆ ಅರ್ಧ ನಿಮಿಷದಲ್ಲಿ ವಿವರ ಕೊಡುತ್ತಾರೆ. 

ನಾಯಕಿ ಕಾವೇರಿ ಅಪ್ಪನ ಪಾತ್ರದಲ್ಲಿ ಅಶ್ವತ್ ಮತ್ತು ಅಮ್ಮ ಆದವಾನಿ ಲಕ್ಷಿ ದೇವಿ ಇಬ್ಬರೂ ಅಪ್ಪ ಅಮ್ಮ ಅಂದರೆ ಹೀಗೆ ಇರಬೇಕು ಎನ್ನುವ ಮೇಲ್ಪಂಕ್ತಿಯನ್ನು ಹಲವಾರು ಚಿತ್ರಗಳಲ್ಲಿ ಅಭಿನಯಸಿದ್ದಾರೆ. 
"ಅರೆ ಸುಂದರಮ್ಮ ಎಲ್ಲಾ ವಿಷಯವನ್ನು ಬರೆದಿದ್ದಾರೆ ಈ ಹಣ್ಣಿನ ವಿಚಾರವನ್ನೇ ಬಿಟ್ಟಿದ್ದಾರೆ"
"ಗುಡುಗು ಬಂದ ಮೇಲೆ ಮಳೆ ಬರುವುದು.. ನಾ ಕೂಗಿದಾಗಲೇ ನೀ ತಣ್ಣಗಾಗುವುದು"
"ನಾ ಅಜ್ಜ ಆದರೂ ಪರವಾಗಿಲ್ಲ.. ನೀ ಅಜ್ಜಿ ಆಗಬೇಡ ಕಣೆ" ಅಂದಾಗ ಆಕೆ "ಅರೆ ಇದೊಳ್ಳೆ ಚೆನ್ನಾಯಿತು.. ನೀವು ಅಜ್ಜ ಆದ ಮೇಲೆ ನಾ ಅಜ್ಜಿ ಆಗೋಲ್ವೇ"
"ಅಯ್ಯೋ ನೀ ನಮ್ಮ ಮೊಮ್ಮಗುವಿಗೆ ಅಜ್ಜಿ ಕಣೆ ನನಗಲ್ಲ"
"ನೋಡು ಹಿರಿಯರು ಒಂದು ಕಾಗದ ನೋಡಿದ ಕೂಡಲೇ ಈ ಅರಿಶಿನ ಬಣ್ಣ ನೋಡಿ ಶುಭ ಸಮಾಚಾರವೆ ಹೊರತು ಬೇರೆ ಏನೂ ಎಲ್ಲ ಎನ್ನುವುದನ್ನು ಎಷ್ಟು ಸುಂದರ ಸಂಪ್ರದಾಯ ಮಾಡಿದ್ದಾರೆ"

ಹೀಗೆ ಒಂದು ಸಂಭಾಷಣೆ ಸರಪಳಿಯ ಮೂಲಕ ಗಂಡ ಹೆಂಡತಿಯ ನಡುವೆ ಸೌಹಾರ್ಧ ಸಂಬಂಧ ಇರಬೇಕು ಎನ್ನುವುದನ್ನು ಪ್ರತಿಪಾದಿಸುತ್ತಾರೆ ನಿರ್ದೇಶಕರು. 

ಇನ್ನೂ ಸಂಭಾಷಣೆಯಲ್ಲಿ ಚುರುಕುತನ.. ಚಿಕ್ಕ ಚೊಕ್ಕ ಸಂದೇಶಗಳು ಕಾಣಸಿಗುತ್ತವೆ. 

"ಟೈಪ್ ರೈಟರ್ ನಲ್ಲಿ A ಒತ್ತಿದರೆ A ಬೀಳುತ್ತದೆ
ಆದರೆ ಹಣೆಬರಹದಲ್ಲಿ A ಒತ್ತಿದರೆ B ಬೀಳುವ ಸಂಭವವೇ ಹೆಚ್ಚು ಎನ್ನುವ ಮಾತಲ್ಲಿ ತಾನೊಂದು ನೆನದರೆ ದೈವ ಒಂದು ಬಗೆಯುತ್ತದೆ ಎನ್ನುವ ಮಾತು 

"ಕಾಫಿ ಬೇಡ,  ಕಾಫಿಯಲ್ಲಿ ಕಾ ಜೊತೆಗೆ "ವೇರಿ" ಬಂದರೆ ಫೀ ನಾ ಕೊಡುತ್ತೇನೆ" ಮದುವೆಯ ಹೊಸತರಲ್ಲಿ ಪತಿ ಪತ್ನಿಯರ ಸರಸ ಸಂಭಾಷಣೆಗೆ ಒಂದು ಝಲಕ್. 

"ತುಲಾ ಮಾಸೇತು ಕಾವೇರಿ ಎನ್ನುವ ಶ್ಲೋಕದಿಂದ ಶುರುವಾಗುವ ಕೊಡಗಿನ ಕಾವೇರಿ ಹಾಡು ಮನಸ್ಸಿಗೆ ಮುದ ನೀಡುತ್ತದೆ, ಕೊಡಗಿನ ವೇಷಭೂಷಣಗಳಲ್ಲಿ ಮಿಂಚುವ ನಾಯಕ ನಾಯಕಿ ಇಷ್ಟವಾಗುತ್ತಾರೆ. ಈ ಹಾಡಿನ ಬಗ್ಗೆ ಮಣಿಕಾಂತ್ ಸರ್ ಅವರ ಹಾಡು ಹುಟ್ಟಿದ ಸಮಯ ಅಂಕಣದಲ್ಲಿ ಹೇಳಿದ್ದರು.. ನಾಯಕ ಕಾವೇರಿಯನ್ನು ಹೊಗಳಿದರೆ.. ನಾಯಕಿ ಕರುನಾಡಿನ ಜೀವನದಿ ಕಾವೇರಿ ಬಗ್ಗೆ ಹಾಡುತ್ತಾರೆ ,  ಎರಡರ್ಥ ಇರುವ ಹಾಡು ಇದು. ಪುಟ್ಟಣ್ಣ ಹೇಳಿ ಬರೆಸಿದರು ಈ ಹಾಡನ್ನು ತಮ್ಮ ಅಣ್ಣ ಕಣಗಾಲ್ ಪ್ರಭಾಕರ ಶಾಸ್ತ್ರಿ ಹತ್ತಿರ ಎಂದು ಓದಿದ್ದೇನೆ.

ಈ ಚಿತ್ರ ಕೆಲವೊಮ್ಮೆ ಹಾಸ್ಯ ರಸ ಉಕ್ಕಿಸುತ್ತದೆ.. ಕೆಲವೊಮ್ಮೆ ದುಃಖದ ಛಾಯೆಯನ್ನು ಹೊದ್ದಿಸಿಬಿಡುತ್ತದೆ . 

ಅಶ್ವತ್ ಅವರ ಮಜ್ಜಿಗೆ ಹುಳಿ ಪುರಾಣ, "ಏನು ಅಳಿಯಂದಿರೆ ನೀವು ಹೊದ್ದಿರುವ ವಸ್ತ್ರ ಮಗುಟ ಮಾರುಕಟ್ಟೆಗೆ ಬಂದಿಲ್ವಾ", 
ನಾಯಕ ನಾಯಕಿಯನ್ನು ಹೆರಿಗೆಗೆ ತವರಿಗೆ ಬಿಡಲು ಬಂದಾಗ ಅಶ್ವತ್ ನಾಯಕನ ಮುಖವನ್ನು ನೋಡಿ ಒಮ್ಮೆ ನಗುತ್ತಾರೆ, ನಾಯಕ ಹಾಗೆ ನಕ್ಕಾಗ ಇನ್ನೊಮ್ಮೆ ನಗುತ್ತಾರೆ.. ಹೀಗೆ ಮುಂದುವರೆಯುತ್ತದೆ, ಕಡೆಗೆ ಮನೆಯಲ್ಲಿ ಇರುವ ಎಲ್ಲರೂ ನಗುತ್ತಾರೆ.. "ಅಂತೂ ಕಾವೇರಿಯನ್ನು ತವರಿಗೆ ಕರೆದುಕೊಂಡು ಬಂದ್ರಿ ಅಳಿಯಂದಿರೆ" ಎಂದಾಗ ಕಕ್ಕಾಬಿಕ್ಕಿಯಾಗುವ ನಾಯಕ.

ಗೆಜ್ಜೆ ಪೂಜೆ ಚಿತ್ರದ ನಿರ್ಮಾಪಕರಲ್ಲಿ ಒಬ್ಬರಾದ ಶಿವರಾಂ ಈ ಚಿತ್ರದಲ್ಲಿ ಚಿಕ್ಕ ಚೊಕ್ಕ  ಭಟ್ಟರ ಪಾತ್ರವನ್ನು ಮಾಡಿರುವುದು ಆ ಕಾಲದ ಕಲಾವಿದ, ನಿರ್ಮಾಪಕ, ನಿರ್ದೇಶಕರ ನಡುವೆ ಇರುತ್ತಿದ್ದ ಸಾಮರಸ್ಯವನ್ನು ತೋರಿಸುತ್ತದೆ. 

ಅಡಿಗೆ ಭಟ್ಟರ ಪಾತ್ರದಲ್ಲಿ ಶಿವರಾಂ ನಗೆ ಉಕ್ಕಿಸುತ್ತಾರೆ.. ಕಿಟಕಿ ಕಾಮಾಕ್ಷಮ್ಮ, ಇವರು ಏಕೆ ನನ್ನನ್ನು ಹೀಗೆ ಹೀಗೆ ಪಡೆ ನೋಡುವುದು, ಸದಾ ಅಡಿಕೆ, ಎಲೆ, ಹೊಗೆಸೊಪ್ಪು ತಿನ್ನುತ್ತಾ ಅರ್ಧ ಅರ್ಧ ಮಾತಾಡುವುದು.. ಜೊತೆಯಲ್ಲಿ ನಾಯಕಿ ಮಾನಸಿಕ ಸ್ಥಿಮಿತವನ್ನು ಮತ್ತೆ ಕಳೆದುಕೊಳ್ಳಲು ಈ ಪಾತ್ರವು ಕಾರಣ ಆಗುವುದು ಇವೆಲ್ಲಾ ನೋಡುವಾಗ ಒಂದು ಪಾತ್ರದಲ್ಲಿ ಎಲ್ಲಾ ರಸಗಳನ್ನು ತುಂಬಬಲ್ಲರು ಎನ್ನುವುದಕ್ಕೆ ಉತ್ತಮ ನಿದರ್ಶನ., 

ಸಂಧರ್ಭಕ್ಕೆ ತಕ್ಕ ಹಾಡುಗಳು ಮನಸ್ಸೆಳೆಯುತ್ತದೆ 

"ಉತ್ತರ ಧ್ರುವಧಿಂ " ವರಕವಿ ದ ರಾ ಬೇಂದ್ರೆ ಯವರ ಸುಂದರ ಕವನವನ್ನು ದಂಪತಿಗಳ ಮಧುಚಂದ್ರದ, ಮಧುರ ಮೈತ್ರಿಗೆ ಧ್ಯೋತಕವಾಗಿ ಪಿ ಬಿ ಶ್ರೀನಿವಾಸ್ ಮತ್ತು ಪಿ ಸುಶೀಲ ಬಂದರೆ 

ಉಪಮೆಗಳ ಮಹಾಪೂರ "ಬಿಳಿಗಿರಿ ರಂಗಯ್ಯ ನೀನೆ ಹೇಳಯ್ಯ" ಬಿಳಿಗಿರಿ ರಂಗನ ಬೆಟ್ಟದ ಸುಂದರ ತಾಣವನ್ನು ತೋರಿಸುತ್ತಲೇ, ಮನುಜನ ಭಾವನೆಗಳು ಆಸೆಗಳು ಎಲ್ಲವನ್ನು ಪದಗಳಲ್ಲಿ ತುಂಬಿ ಕೊಟ್ಟಿರುವ ಕಣಗಾಲ್ ಪ್ರಭಾಕರ್ ಶಾಸ್ತ್ರಿಯವರ ಸಾಹಿತ್ಯ ಗಮನ ನೀಡುತ್ತದೆ. ಜೊತೆಯಲ್ಲಿಯೇ ಪಿ ಸುಶೀಲ ಅವರ ಸುಶ್ರಾವ್ಯ ಗಾಯನ.. ಆಹಾ 

ಹಾಡು ಮುಗಿದ ಮೇಲೆ.. ತನ್ನ ಕಚೇರಿಯ ಮಾದಕ ಬೆಡಗಿ ವಿಮಲಾ ಬಗ್ಗೆ ನಾಯಕ ಹೇಳುವ ಮಾತು ಮೇಲೆ ಬಿದ್ದ ಸೂಳೆ ಮೂರು ಕಾಸಿಗೂ ಬೇಡ" ಎನ್ನುವ ನಾಯಕ ಕಡೆಗೆ ಆ ಮೂರು ಕಾಸಿಗೆ ಜೋತು ಬೀಳುವುದು ಮನುಜನ ಅವಕಾಶ ಅವಲಂಬಿತ ಮನಸ್ಸಿನ ಬಗ್ಗೆ ಹೇಳುತ್ತದೆ. 

ಇಡಿ ಚಿತ್ರವನ್ನು ಒಂದು ಬಂಗಾರದ ಚೌಕಟ್ಟಿನಲ್ಲಿ ಪುಟ್ಟಣ್ಣ ಕಟ್ಟಿಕೊಟ್ಟರೆ.. ಆ ಚೌಕಟ್ಟಿನೊಳಗೆ ಮುತ್ತು ರತ್ನಗಳ ಹಾಗೆ ಕೂತು ತಮ್ಮ ಅಭಿನಯ ಸಾಮರ್ಥ್ಯವನ್ನು ಒರೆಗೆ ಹಚ್ಚಿಸಿಕೊಂಡವರು ಈ ಚಿತ್ರದ ಎಲ್ಲಾ ಪಾತ್ರಧಾರಿಗಳು. ಪ್ರತಿ ಪಾತ್ರಕ್ಕೂ ಅದರದೇ ಆದ ಚೌಕಟ್ಟು, ಪ್ರಾಮುಖ್ಯತೆ ಇದೆ. 

ಗಂಗಾಧರ್ ಚೆಲುವಾಂತ ಚಿನ್ನಿಗನ ಹಾಗೆ ಕಂಗೊಳಿಸುತ್ತಾ, ಪ್ರೇಮಯಾಚನೆ ಮಾಡುವುದು, ಮಾವನ ಮನೆಯಲ್ಲಿ ಪಜೀತಿಗೆ ಒಳಗಾಗುವುದು, ನಾಯಕಿ ತನ್ನ ಮಿತಿಯನ್ನು ಕಳೆದುಕೊಂಡಾಗ ತೊಳಲಾಡುತ್ತಾ ಅದರಿಂದ ಹೊರಗೆ ಬರಲಾರದೆ ಅನ್ಯ ಮಾರ್ಗ ಹುಡುಕುವುದು ಈ ದೃಶ್ಯಗಳಲ್ಲಿ ಅಭಿನಯ ನಿಜವಾಗಿದೆ. 

ಅಶ್ವತ್ ಮತ್ತು ಆದವಾನಿ ಲಕ್ಷ್ಮೀದೇವಿ ತಮ್ಮ ಮಕ್ಕಳ ಬಗ್ಗೆ ಕಾಳಜಿ ತೋರಿಸುತ್ತಾ ಅವರಿಬ್ಬರ ನಡೆಯುವ ಸರಸ ಸಂಭಾಷಣೆ 
ಮುದ ನೀಡುತ್ತದೆ. 

ಶರಪಂಜರ ಅಯ್ಯಂಗಾರ್ ಎಂದೇ ಹೆಸರಾದ ಪಾತ್ರಧಾರಿ ಹೇಳುವ ಮಾತು "ಪುರುಷ-ಪ್ರಕೃತಿ ಎರಡು ಒಂದೇ ಕಡೆ ಇದ್ದ ಮೇಲೆ ಸಮಸ್ಯೆ ಉದ್ಭವ" ಎಷ್ಟು ನಿಜ ಈ ಮಾತು 

ಮೋಹ ಪಾಶಕ್ಕೆ ತುತ್ತಾಗಿ ಒಮ್ಮೆಯಾದರೂ ನಾಯಕ ನನ್ನವನಾದರೆ ಸಾಕು ಎನ್ನುವ ವ್ಯಾಮೋಹಿ ಪಾತ್ರದಲ್ಲಿ ರಂಗಭೂಮಿಯ ಕಲಾವಿದೆ ಚಿಂದೋಡಿ ಲೀಲಾ ಗಮನ ಸೆಳೆಯುತ್ತಾರೆ. 



ಇನ್ನೂ ಇಡಿ ಚಿತ್ರವನ್ನು ಅಭಿನಯದಲ್ಲಿಯೇ ನುಂಗಿದ ಕಲ್ಪನಾ ಅವರ ಬಗ್ಗೆ ಹೇಳಲೇ ಬೇಕು
  • ಹಿತವಾದ ಮಧುರವಾದ ಸಂಭಾಷಣೆ ಆರಂಭಿಕ ದೃಶ್ಯಗಳಲ್ಲಿ 
  • ಹಣ್ಣು ಕೊಟ್ಟೆಯೋ ಹೃದಯ ಕೊಟ್ಟೆಯೋ ಅನ್ನುವಾಗ ನಡುಗುವ ಪ್ರೀತಿ ತುಂಬಿದ ಮಾತುಗಳು 
  • ತನ್ನ ಅಪ್ಪ ನಾಯಕ ನಾಯಕಿಯ ಪ್ರೇಮದ ಬಗ್ಗೆ ವಿಚಾರಿಸಿದಾಗ ಗಾಬರಿಗೊಳ್ಳುವ ಅಭಿನಯ 
  • ಮದುವೆಯಾಗಿ ಪತಿರಾಯನ ಮನೆಗೆ ಬಂದ ಮೇಲೆ ತನ್ನ ಅತ್ತೆಗೆ ಪ್ರೀತಿಯಿಂದ ತಂದು ಕೊಟ್ಟ ರೇಡಿಯೋ ಬಗ್ಗೆ ಹೇಳುವಾಗ ಪುಟ್ಟ ಮಗುವಿನ ಹಾಗೆ ಕುಣಿಯುವ ದೃಶ್ಯ
  •  ಶ್ರೀರಂಗಪಟ್ಟಣದ ನದಿ ತೀರದಲ್ಲಿನ ಅಭಿನಯ ಕಣ್ಣೀರು ತರೆಸುತ್ತದೆ. ಸ್ತ್ರೀಯರಿಗೆ ಪ್ರತಿ ತಿಂಗಳೂ ಒಂದು ಮರು ಹುಟ್ಟು ಜೊತೆಯಲ್ಲಿ ಗರ್ಭಿಣಿ ಸ್ಥಿತಿಯಿಂದ ಪಾರಾಗಿ ಹೊರಬರುವುದು ನಿಜಕ್ಕೂ ಇನ್ನೊಂದು ಮರು ಜನ್ಮವೇ ಎಂಬ ಮಾತು ಈ ದೃಶ್ಯದಲ್ಲಿದೆ. ಬರಿ ಭೋಗದ ವಸ್ತುವಾಗಿ ಬಿಂಬಿತವಾಗುವ ಹೆಣ್ಣಿನ ಪಾತ್ರವನ್ನು ಎಷ್ಟು ನಾಜೂಕಾಗಿ ಅವರ ಮನಸ್ಸು ಎಷ್ಟು ನವಿರು.. ಅದಕ್ಕೆ ಸ್ವಲ್ಪ ಘಾಸಿಯಾದರೂ ಮುಂದಿನ ಜೀವನ ನರಕ ಎನ್ನುವ ಭಾವನ್ನು ಈ ಚಿತ್ರ ಹೊರಹಾಕುತ್ತದೆ. 
  • ಅಡಿಗೆ ಭಟ್ಟನ ಜೊತೆಯಲ್ಲಿ ಸಂಭಾಷಣೆ, ಕಿಟಕಿ ಕಾಮಾಕ್ಷಮ್ಮ ತಮ್ಮನ್ನು ತಿರಸ್ಕಾರ ಮಾಡುವಾಗ, ಮಹಿಳ ಸಮಾಜ ಇವರನ್ನು ಹುಚ್ಚಿ ಎಂದಾಗ, ಶೆಟ್ಟರ ಅಂಗಡಿ, ಶಾಲೆಯಲ್ಲಿ ಕಡೆಗೆ ತನ್ನ ಅಪ್ಪ ಮಾತಿಗೆ "ಅದಕ್ಕೆಲ್ಲ ತಲೆಕೆಡಿಸಿಕೊಳ್ಳುತ್ತಾರಾ ಹುಚ್ಚಿ ಹುಚ್ಚಿ" ಎಂದಾಗ ಅವರ ಅಭಿನಯ ವಾಹ್ ಎನ್ನಿಸುತ್ತದೆ 
  • ಇನ್ನೂ "ಹದಿನಾಲ್ಕು ವರುಷ ವನವಾಸದಿಂದ" ವಿಜನಾರಸಿಂಹ ಅವರ ಸಾಹಿತ್ಯಕ್ಕೆ ಅಮೋಘ ಅಭಿನಯ, ತನ್ನ ಕಥೆಯನ್ನು ಸೀತೆಗೆ ಹೋಲಿಸಿಕೊಂಡು ಅಳುತ್ತಾ ಹಾಡುವಾಗ ಕಲ್ಲು ಕರಗುತ್ತದೆ 
  • "ಸಂದೇಶ ಮೇಘ ಸಂದೇಶ" ಹಾಡಿನಲ್ಲಿ ಮಕ್ಕಳ ಜೊತೆಯಲ್ಲಿ ಹಾಡುತ್ತಾ ಕುಣಿಯುತ್ತಾ ತಾನು ಮತ್ತೊಮ್ಮೆ ಹೊಸಬಾಳಿನತ್ತ ಹೆಜ್ಜೆ ಇಡುತ್ತಿದ್ದೇನೆ ಎನ್ನುವ ವಿಜಯನಾರಸಿಂಹ ಅವರ ಸಾಹಿತ್ಯಕ್ಕೆ ತೋರುವ ಭಾವ ಪೂರ್ಣ ನಟನೆ 
  • ತನಗೆ ಹುಚ್ಚು ಹಿಡಿದಿದೆ ಎಂದು ನಿಂತು ಹೋಗುವ ತನ್ನ ತಂಗಿಯ ಮದುವೆಗೆ ಪ್ರಯತ್ನಿಸುವ ದೃಶ್ಯ 
  • ಬಹುಕಾಲ ನೆನಪಲ್ಲಿ ಉಳಿಯುವ ಚಿತ್ರದ ಅಂತಿಮ ದೃಶ್ಯ.. ಅಬ್ಬಾ ನೋಡುಗರ ಎದೆಯನ್ನು ಕಣ್ಣೀರಿನಿಂದ ತೋಯಿಸುತ್ತದೆ. ಎಲ್ಲೋ ಕೇಳಿದ ನೆನಪು.. ಆ ದೃಶ್ಯ ಮುಗಿದ ಮೇಲೂ ಸ್ವಲ್ಪ ಹೊತ್ತು ಅದೇ ಭಾವದಲ್ಲಿ, ಅದೇ ಗುಂಗಿನಲ್ಲಿ  ಕಲ್ಪನಾ ಇದ್ದರೆಂದು.. ಕೆಲವೊಮ್ಮೆ ನೋಡುಗರನ್ನೇ ತಲ್ಲಣ ಗೊಳಿಸುವ ಆಭಿನಯ ಮಾಡಿದ ಅವರನ್ನು ಕೆಲವು ಘಂಟೆಗಳು ಕಾಡಿದ್ದು ಸುಳ್ಳಲ್ಲ ಅನಿಸುತ್ತದೆ. 
ಈ ಚಿತ್ರದ ಸಂಗೀತಬಗ್ಗೆ ಎರಡು ಮಾತೆ ಇಲ್ಲ.. ಪುಟ್ಟಣ್ಣ ಅವರ ನೆಚ್ಚಿನ ಗೆಳೆಯ ವಿಜಯಭಾಸ್ಕರ್ ತಮ್ಮೆಲ್ಲ ಪ್ರತಿಭೆಯನ್ನು ಅವರ ಚಿತ್ರಗಳಿಗೆ ಮೀಸಲಿಟ್ಟಿದ್ದರು. ಪ್ರತಿ ಹಾಡು, ಹಿನ್ನೆಲೆ ಸಂಗೀತ ವಿಭಿನ್ನವಾಗಿರುತ್ತಿತ್ತು. ಈ ಚಿತ್ರದ ಎಲ್ಲಾ ಹಾಡುಗಳು ಇಷ್ಟವಾಗುತ್ತವೆ. 

ಪುಟ್ಟಣ್ಣ ಈ ಚಿತ್ರವನ್ನು ತಮ್ಮ ಎಲ್ಲಾ ಚಿತ್ರಗಳಂತೆ ತಮ್ಮ ಮನಕ್ಕೆ ಹತ್ತಿರವಾಗಿ ಚಿತ್ರೀಕರಿಸಿದ್ದಾರೆ. ಪ್ರತಿಯೊಂದು ದೃಶ್ಯಕ್ಕೆ ಅವರು ಪಟ್ಟ ಪರಿಶ್ರಮ ಎದ್ದು ಕಾಣುತ್ತದೆ. ಯಾವುದನ್ನು ಅವರು ಗೌಣ ಮಾಡಿಲ್ಲ. ಸುಂದರ ಹೊರಾಂಗಣ, ಒಳಾಂಗಣ, ಮನೆಯಲ್ಲಿನ ಎಲ್ಲಾ ಪದಾರ್ಥಗಳು ಅವರ ಶ್ರಮಕ್ಕೆ ಜೊತೆಯಾಗಿ ನಿಂತಿವೆ. 

"ಸಂದೇಶ ಮೇಘ ಸಂದೇಶ" ಎನ್ನುವ ಹಾಡಿಗೆ ನಾಯಕ ನಾಯಕಿಯ ಪ್ರೇಮಾಂಕುರ ಮೂಡಲು ಸಹಾಯ ಮಾಡುವ ಕಿತ್ತಳೆ ಹಣ್ಣನ್ನೇ ರಾಶಿ ರಾಶಿಯಾಗಿ ಸುರಿಸಿ ಚಿತ್ರೀಕರಿಸುವ ಜಾಣ್ಮೆ ಪುಟ್ಟಣ್ಣ ಅವರದು. 

ಮೊದಲ ರಾತ್ರಿ ದೃಶ್ಯದಲ್ಲಿ ಹೂವು, ದೀಪ, ಅಗರಬತ್ತಿಯ ಧೂಪ ತೋರಿಸುವ ಜಾಣ್ಮೆ.. ಹೂವಿನಂತ ನಾಯಕಿಯ ಮನಸ್ಸು, ಒಂದು ಸಂಶಯ ಎನ್ನುವ ಧೂಪದ ಹೊಗೆಗೆ ಸಿಕ್ಕಿ, ದೀಪ ಜ್ವಾಲೆಯಾಗಿ ನಾಯಕಿಯ ಬಾಳನ್ನೇ ಸುಡುವ ಸಾಂಕೇತಿಕ ದೃಶ್ಯ. 


ಮಾನಸಿಕ ಚಿಕಿತ್ಸಾಲಯವನ್ನು ಪರಿಚಯಿಸುತ್ತಾ ಅವರು ಆಡುವ ಕೆಲ ಮಾತುಗಳು ಗಮನ ಸೆಳೆಯುತ್ತದೆ. 

"ನಿಮಗೆ ಕಾರಣ ಮುಖ್ಯವೋ ಅವಳು ಗುಣವಾಗುವುದು ಮುಖ್ಯವೋ" ಎನ್ನುವ ಮಾತುಗಳನ್ನು ವೈದ್ಯರ ಮೂಲಕ ಹೇಳಿಸಿ ಪ್ರತಿ ಘಟನೆಗೂ/ಸಮಸ್ಯೆಗೂ ಒಂದು ಕಾರಣ ಇರುತ್ತದೆ ಆದರೆ ಕಾರಣ ಹುಡುಕಿಕೊಂಡು ಹೋದಾಗ ಮೂಡುವ ಭಾವನೆ ಸಮಸ್ಯೆಯನ್ನು ಇನ್ನಷ್ಟು ಜಟಿಲಗೊಳಿಸುತ್ತದೆ. ಅದರ ಬದಲು ಅದಕ್ಕೆ ಉತ್ತರ ಹುಡುಕಿಕೊಂಡು ನಿವಾರಣೆ ಮಾಡಿಕೊಂಡು ಹೊಸ ಹೆಜ್ಜೆ ಇಡಿ ಎನ್ನುವ ಸಂದೇಶ ಸಾರುವ ಈ ಚಿತ್ರ.. ಚಿತ್ರಜಗತ್ತಿನಲ್ಲಿಯೇ ಒಂದು ಮಹೋನ್ನತ ಕೃತಿ, 

ಇದಕ್ಕೆ ಕಾದಂಬರಿಗಾರ್ತಿ ಶ್ರೀಮತಿ ತ್ರಿವೇಣಿ ಅವರಿಗೂ ಮತ್ತು ಪುಟ್ಟಣ್ಣ ಕಣಗಾಲ್ ಅವರಿಗೂ ಸಹಸ್ರ ಧನ್ಯವಾದಗಳು. 

Monday, October 20, 2014

ಮನದಲ್ಲೇ ಹೆಜ್ಜೆ ಇಟ್ಟು ಕಾಡುವ "ಗೆಜ್ಜೆ ಪೂಜೆ"! (1969)

ಮೊದಲಿಗೆ ಪುಟ್ಟಣ್ಣ ಕಣಗಾಲ್ ಕ್ಷಮೆ ಕೇಳಬೇಕು.. ಅವರು ಚಿತ್ರಿಸಿದ ಎಲ್ಲಾ ಚಿತ್ರಗಳು ಮಾಣಿಕ್ಯವೇ ಆದರೂ, ನನಗೆ ತುಂಬಾ ಹಿಡಿಸಿದ ಚಿತ್ರಗಳನ್ನು ಮತ್ತೆ ಮತ್ತೆ ನೋಡಿ ಅವರ ಬಗ್ಗೆ ಸಿಕ್ಕಾಪಟ್ಟೆ ಅಭಿಮಾನ ಬೆಳೆಸಿಕೊಂಡಿದ್ದೆ. ಗೆಜ್ಜೆ ಪೂಜೆ ಚಿತ್ರ ಮಹಾನ್ ಕೃತಿ ಎಂದು ಎಲ್ಲರ ಮೆಚ್ಚುಗೆಗಳಿಸಿದ್ದರೂ, ಅನೇಕ ಬಾರಿ ಈ ಚಿತ್ರ ನೋಡಿದ್ದರೂ ಯಾಕೋ ನನಗೆ ಇಷ್ಟವಾದ ಚಿತ್ರಗಳೇ ಕಣ್ಣ ಮುಂದೆ ಕುಣಿಯುತ್ತಿದ್ದವು.  

ಅವರ ಕನ್ನಡದ ಎಲ್ಲಾ ಚಿತ್ರಗಳ ಬಗ್ಗೆ ಬರೆಯಲು ಶುರುಮಾಡಿದಾಗ, ಮಾಡಿಕೊಂಡ ಒಂದು ನಿಯಮ, ಬರೆಯುವ ಮೊದಲು ಮತ್ತೊಮ್ಮೆ ಆ ಚಿತ್ರವನ್ನು ನೋಡಬೇಕು, ಚಿಕ್ಕ ಪುಟ್ಟ ಟಿಪ್ಪಣಿ ಮಾಡಿಕೊಂಡು, ಆ ಚಿತ್ರದ ಬಗ್ಗೆ ಬರೆಯಬೇಕು.  

ಅಬ್ಬಾ, ಮೊದಲ ದೃಶ್ಯದಿಂದ ಕಡೆಯ ತನಕ ನೋಡಿದ ಮೇಲೆ, ಸೂಕ್ಷ್ಮವಾಗಿ ಗಮನಿಸು ಎನ್ನುತ್ತಾ ನನ್ನ ಮನಸ್ಸು ಇನ್ನಷ್ಟು ಒಳಹೋಗಲು ಅಣು ಮಾಡಿಕೊಟ್ಟಿತು. ಹಲವಾರು ದೃಶ್ಯಗಳಲ್ಲಿ ಕಣ್ಣಲ್ಲಿ ನೀರು ತುಂಬಿ, ಮೊದಲೇ ಕಪ್ಪು ಬಿಳುಪಿನ ಚಿತ್ರ ಇನ್ನಷ್ಟು ಮಂಜಾಯಿತು. 


ಗುರುಗಳೇ ಪುಟ್ಟಣ್ಣ ಕಣಗಾಲ್ ನಿಮಗೆ ನನ್ನ ಅನಂತ ಧನ್ಯವಾದಗಳು ಇಂತಹ ಸೂಕ್ಷ್ಮ ವಿಚಾರವನ್ನು ಅಶ್ಲೀಲತೆಯ ಸೊಂಕಿಲ್ಲದೆ, ಕೆಟ್ಟ ಪದಗಳ ಬಳಕೆಯಿಲ್ಲದೆ, ಎಲ್ಲಾರು ಒಟ್ಟಾಗಿ ಕೂತು ನೋಡುವ ಚಿತ್ರ ರತ್ನವನ್ನು ಕೊಟ್ಟಿದ್ದಕ್ಕೆ. 

ಒಂದು ವಿಚಿತ್ರ ವಿಚಾರವನ್ನು ಎರಡು ರೀತಿಯಲ್ಲಿ ಹೇಳಬಹುದು.. ಒಂದು ಹೇಳಬಾರದ ರೀತಿಯಲ್ಲಿ.. ಇನ್ನೊಂದು ಹೇಳಬಹುದಾದ ರೀತಿಯಲ್ಲಿ.. ಪುಟ್ಟಣ್ಣ ಯಾವಾಗಲು ಎರಡನೇ ದಾರಿಯಲ್ಲಿ ಹೊರಳಿದವರು ಮತ್ತು ತಮ್ಮ ಛಾಪನ್ನು ಮೂಡಿಸಿದವರು. 

* * * * * * * * * * * * * * * * * * * * * * * * * * * *

ಒಂದು ಚಿತ್ರದ ಆರಂಭದಲ್ಲೇ ಎಷ್ಟು ನಾಜೂಕಾಗಿ ಹೇಳಬೇಕಾದ ವಿಷಯವನ್ನು ಮಾತಿನ ರೂಪದಲ್ಲಿಯೂ, ದೃಶ್ಯರೂಪದಲ್ಲಿಯೂ ಹೇಳಿ ತಮ್ಮ ಮುದ್ರೆಯನ್ನು ಒತ್ತಿ ಬಿಟ್ಟಿದ್ದಾರೆ. ಈ ಚಿತ್ರದಲ್ಲಿ ಹೇಳಬಯಸುವ ಸಮಸ್ಯೆ ಮತ್ತು ಅದರ ಪರಿಣಾಮ ಎಲ್ಲವನ್ನೂ ಸ್ಥೂಲವಾಗಿ ಚಿತ್ರಿಸಿದ್ದಾರೆ. 

ಪುಟ್ಟಣ್ಣ ಅವರ ಮಧುರ ಧ್ವನಿಯಲ್ಲಿ ಪರಿಚಯ ಮಾಡಿಕೊಳ್ಳುವ ಚಿತ್ರ ಹಿನ್ನೆಲೆಯಲ್ಲಿ ಆ ಸಮಸ್ಯೆಯನ್ನು ಹೇಳುತ್ತಾ ಹೋಗಿ ಪಾತ್ರವರ್ಗವನ್ನು ತೋರಿಸುತ್ತಾ ಹೋಗುತ್ತಾರೆ. 

ಸಮಸ್ಯೆಯ ಮೇಲೆ ಬೆಳಕು ಚೆಲ್ಲಲು ತೆಗೆದ ಈ ಚಿತ್ರವನ್ನು ತಯಾರಿಸಿದ್ದು "ಚಿತ್ರಜ್ಯೋತಿ" ಲಾಂಛನದಲ್ಲಿ ಆಹಾ ಎಂಥ ಸುಂದರ ಲಾಂಛನ., ರಾಶಿ ಸಹೋದರರು ಎಂದೇ ಪ್ರಖ್ಯಾತರಾದ ರಾಮ ಮೂರ್ತಿ ಮತ್ತು ನಟ ಶಿವರಾಂ ಅವರ ಪಾಲುದಾರಿಕೆಯಲ್ಲಿ ಮೂಡಿಬಂತು ಈ ಚಿತ್ರ. 

ಶ್ರೀಮತಿ ಎಂ ಕೆ ಇಂದಿರಾರವರ ಇದೆ ಹೆಸರಿನ ಕಾದಂಬರಿ ಅಂದಿನ ಜನಪ್ರಿಯ "ಪ್ರಜಾಮತ" ವಾರ ಪತ್ರಿಕೆಯಲ್ಲಿ ಧಾರಾವಾಹಿ ಹರಿದು ಜನರ ಮನಸ್ಸನ್ನು ಸೂರೆಗೊಂಡಿತ್ತು. ಅವರ ಈ ಕಥೆಗೆ ನವರತ್ನ ರಾಮ್ ಅವರ ಸೊಗಸಾದ ಸಂಭಾಷಣೆ,  ಶ್ರೀಕಾಂತ್ ಅವರ ಸುಂದರ ಛಾಯಾಗ್ರಹಣ ಒದಗಿ ಬಂದರೆ, ವಿಜಯನಾರಸಿಂಹ, ಆರ್ ಏನ್ ಜಯಗೋಪಾಲ್, ಚಿ ಉದಯಶಂಕರ್ ಅವರ ಸುಲಲಿತ ಸಾಹಿತ್ಯ ಹೊಂದಿದ್ದ ಹಾಡುಗಳಿಗೆ ಸಂಗೀತದ ಚೌಕಟ್ಟು ಕೊಟ್ಟವರು ವಿಜಯಭಾಸ್ಕರ್.  ಇಂಥಹ ಒಂದು ಸುಂದರ ತಂಡದ ಸಾರಥ್ಯವಹಿಸಿ ಚಿತ್ರಕಥೆ ಬರೆದು ದಿಗ್ದರ್ಶನ ಮಾಡಿದ ಪುಟ್ಟಣ್ಣ ಸದಾ ಸ್ಮರಣೀಯರು. 

ಈ ಚಿತ್ರದಿಂದ ಲೋಕನಾಥ್ ಮತ್ತು ಆರತಿ ಬೆಳ್ಳಿತೆರೆಗೆ ಪರಿಚಯವಾಗುತ್ತಾರೆ.  

ಲೀಲಾವತಿ ಅಭಿನಯ, ನೋವನ್ನು ನುಂಗಿಕೊಂಡು, ನಗಲಾರದೆ, ಜೀವನ ದೂಕುವ ಶೋಷಿತೆಯ ಪಾತ್ರದಲ್ಲಿ ಮನ ಕಲಕುತ್ತಾರೆ. "ಮಗುವೆ ನಿನ್ನ ಹೂ ನಗೆ ಒಡವೆ ಎನ್ನ ಬಾಳಿಗೆ" ಎನ್ನುವ ಹಾಡಿನಲ್ಲಿ ಅವರ ಅಭಿನಯಕ್ಕೆ ಶಕ್ತಿ ತುಂಬುವುದು ಜಾನಕಿಯಮ್ಮನವರ ಗಾಯನ, ನೋವು ತುಂಬಿಕೊಂಡ ಮನಕ್ಕೆ ಪದಗಳನ್ನು ತುಂಬಿಕೊಟ್ಟ ವಿಜಯನಾರಸಿಂಹ ಅವರ ಸಾಹಿತ್ಯ ಆಹಾ ಮನಕ್ಕೆ ಛತ್ರಿ ಬೇಕೋ ಏನೋ ಅನ್ನಿಸುತ್ತದೆ. ಅಷ್ಟು ಗಾಢವಾಗಿದೆ  ಆ ಗೀತ ದೃಶ್ಯ. 

ಅವರು ಮಗುವಿಗೆ ಹೇಳುವ ಮಾತು "ನೀ ಬದುಕಲು.. ನಾ ಬದುಕಿದ್ದು ಸತ್ತಂತೆ ಬದುಕುತ್ತೇನೆ" ಎನ್ನುವಾಗ ನೋವಿದ್ದರೂ, ತನ್ನ ಮುಂದಿನ ಪೀಳಿಗೆಯನ್ನು ಉಳಿಸಲು ಸೋಲುವ ಮನಸ್ಸು, ಮತ್ತು "ಹಂಚಿ"ಕೊಂಡ ಸಾಹುಕಾರ ಸತ್ತಾಗ ಅಳದೆ ನಾ ಅಳೋಲ್ಲ ಎಂದು ಹೇಳುವಾಗ ಮುಖದಲ್ಲಿ ತೋರುವ ಭಾವನಾ ರಹಿತ ನೋಟ, ಬರಿ ತನುವನ್ನು ಮಾತ್ರ ಹಂಚಿಕೊಂಡ, ಆದರೆ ಮನವನ್ನು ಮುಟ್ಟದ ಆ ಸಾಹುಕಾರರ ಬಗೆಗಿನ ತಿರಸ್ಕಾರ ಸೂಪರ್ ಎನ್ನಿಸುತ್ತದೆ. 

ನೋವಿದ್ದರೂ, ತನ್ನ ಮಗಳ ಜನ್ಮಕ್ಕೆ ಕಾರಣವಾದ ಮನುಷ್ಯ ಸಿಕ್ಕರೂ, ಅವರ ಒಳಿತಿಗಾಗಿ, ಸಮಾಜದಲ್ಲಿ ಅವರಿಗಿರುವ ಹೆಸರಿಗೆ ಮಸಿಬಳಿಯಬಾರದು ಎನ್ನುವ ಮಾತು, ಅದರ ಜೊತೆಯಲ್ಲಿಯೇ ಆ ಮನುಷ್ಯ ಹೇಳುವ ಮಾತು "ನೋಡು ನಾವಿಬ್ಬರು ಅರ್ಧ ಆಯುಷ್ಯ ಕಳೆದಾಗಿದೆ ಇನ್ನೇನಿದ್ದರೂ ಮಕ್ಕಳ ಭವಿಷ್ಯದ ಕಡೆಗೆ ಮಾತ್ರ ನಮ್ಮ ಗಮನ" ಎನ್ನುವ ಮಾತಿನಲ್ಲಿ ಹಿಂದೆ ನಡೆದ ಘಟನೆಯನ್ನು ಅಳಿಸಿ, ಮರೆತು ಮುಂದಕ್ಕೆ ಹೆಜ್ಜೆ ಇಡಿ ಎನ್ನುವ ಸಂದೇಶ ತಾಕುತ್ತದೆ. 

ಕಥೆಗಾರ್ತಿ, ಸಂಭಾಷಣಕಾರ, ನಿರ್ದೇಶಕ ಇವರ ಸಮ್ಮಿಳಿತದಲ್ಲಿ ಮೂಡಿ ಬಂದ ಈ ದೃಶ್ಯ ಅಮೋಘ ಅಮೋಘ.

ಮಗಳು ಎದುರು ಮನೆಯ ಮಗಳ ಮದುವೆಯಲ್ಲಿ ಹಾಡುವ ಹಾಡು "ಪಂಚಮ ವೇದ ಪ್ರೇಮದ ನಾದ" ಜಾನಕಿಯಮ್ಮ ಅವರ ಅಮೋಘ ಧ್ವನಿಯಲ್ಲಿ ಕಿವಿಯಿಂದ ಹೃದಯಕ್ಕೆ ಬಂದು ನಿಂತರೆ, ಸರಳ ಸಾಹಿತ್ಯ ವಿಜಯನಾರಸಿಂಹ ಅವರ ಲೇಖನಿಯಿಂದ ಹೊರಮ್ಮುವ ಪದಗಳಿಗೆ ಸಂಗೀತ ಬರಸೆಳೆದು ಅಪ್ಪಿಕೊಳ್ಳುತ್ತದೆ. 

ಇದೆ ಹಾಡಿನಲ್ಲಿ ಮಗಳ ಭವಿಷ್ಯ ಎತ್ತರಕ್ಕೆ ಏರುತ್ತದೆ ಎನ್ನುವ ಒಂದು ಸಣ್ಣ ಭರವಸೆ ಲೀಲಾವತಿಗೆ ಸಿಕ್ಕಾಗ ಅದನ್ನು ದೃಶ್ಯದಲ್ಲಿ ತೋರಿಸಲು ಕ್ಯಾಮೆರಾ ಚಾಲನೆಯನ್ನು ಹಾಗೆ ಮೇಲಕ್ಕೆ ಏರಿಸುತ್ತಾರೆ. ಇದು ಒಂದು ಅದ್ಭುತ ದೃಶ್ಯ ಕಲ್ಪನೆ. 

ಈ ಹಾಡಿನ ನಂತರ ಕೆಲವೇ ದೃಶ್ಯಗಳ ಬಳಿಕ ಮತ್ತೊಮ್ಮೆ ಮೂಡಿ ಬರುತ್ತದೆ "ಪಂಚಮ ವೇದ ಪ್ರೇಮದ ನಾದ" ಈ ಬಾರಿ ಜೇನು ಸ್ವರದ ಪಿ ಬಿ ಎಸ್ ಸಿರಿ ಕಂಠದಲ್ಲಿ.. 

ಎಲ್ಲಾ  ಪರಿಸ್ಥಿತಿಯಲ್ಲೂ ಅತಿ ಕ್ರಮಣ ಮಾಡುವುದಿಲ್ಲ ಎನ್ನುವ ಧರ್ಮೇಚ ಅರ್ಥೆಚ ಕಾಮೇಚ ನಾತಿ ಚರಿತವ್ಯಃ ಶ್ಲೋಕಕ್ಕೆ   ಧರ್ಮೇಚ ಅರ್ಥೆಚ ಕಾಮೇಚ ನಾತಿಚರಾಮಿ ಎಂಬ ಉತ್ತರ, ಭರವಸೆ ನೀಡುವ ನಾಯಕನ ಮಾತಿಗೆ ಸಂತಸದಿಂದ ನಲಿದಾಡುವ ನಾಯಕಿ ಹಾಡುವ ಹಾಡೇ " ಗಗನವು ಎಲ್ಲೋ ಭೂಮಿಯೂ ಎಲ್ಲೋ" ಎರಡು ಕಾರಣದಿಂದ ಗಮನ 
ಸೆಳೆಯುತ್ತದೆ. 

೧. ಗಗನವು ಎಲ್ಲೋ ಭೂಮಿಯು ಎಲ್ಲೋ ಎನ್ನುವಾಗ ಕ್ಯಾಮೆರಾವನ್ನು ಗರ ಗರ ಎಂದು ಪೂರ್ತಿ ತಿರುಗಿಸಿ ತೋರಿಸುವ ರೀತಿ 
೨. ಆ ಆ ಆಆಅ ಆಆಅ ಆಆ ಆಆಆಅ ಎನ್ನುವಾಗ ಉಸಿರು ಕಟ್ಟಿ ಜಾನಕಿಯಮ್ಮ ಹೇಳುವ ತಾಕತ್.. ರೋಮಾಂಚನ ಗೊಳಿಸುತ್ತದೆ. 

ನಮ್ಮ ಸಂಸ್ಕೃತಿಯನ್ನು ಉಳಿಸಬೇಕು ಬೆಳೆಸಬೇಕು ಎನ್ನುವ ಅದಮ್ಯ ಉತ್ಸಾಹವಿದ್ದ ಪುಟ್ಟಣ್ಣ ಅವರ ಚಿತ್ರಗಳಲ್ಲಿ ಮದುವೆ ಸಮಾರಂಭಗಳಲ್ಲಿ ಬರುವ ಆಚಾರ ವಿಚಾರಗಳನ್ನು ಶಾಸ್ತ್ರೋಕ್ತವಾಗಿ ತೋರಿಸುತ್ತಿದ್ದ ರೀತಿ ಇಷ್ಟವಾಗುತ್ತದೆ. ಈ ಚಿತ್ರದಲ್ಲಿಯೂ ಕೆಲವು ಸಂಸ್ಕೃತ ಮಂತ್ರಗಳಿಗೆ ಅದರ ಅರ್ಥವನ್ನು ಹೇಳಿಸುವುದು ಅವರ ಸಂಸ್ಕಾರ ಹೃದಯವನ್ನು ತೋರಿಸುತ್ತದೆ. 

ಒಂದು ಹಾಡನ್ನು ಬರಿಯ ಸಾಹಿತ್ಯ, ಸಂಗೀತ, ನೃತ್ಯಗಳ ಸಂಗಮ ಅನ್ನಿಸದೆ ಅದನ್ನು ಕೂಡ ಕಥೆಯನ್ನು ಮುಂದಕ್ಕೆ ತರಲು ಸಹಾಯ ಮಾಡುತ್ತಲೇ ತಮ್ಮ ಕಥಾದೃಶ್ಯಗಳನ್ನೂ ಹಾಡಿನಲ್ಲಿ ತೋರಿಸುವಲ್ಲಿ ಸಿದ್ಧ ಹಸ್ತರಾಗಿದ್ದರು ಪುಟ್ಟಣ್ಣ. ಅವರ ಸಾಮರ್ಥ್ಯ "ಹೆಜ್ಜೆ ಹೆಜ್ಜೆಗೂ ಹೊನ್ನೇ ಸುರಿಯಲಿ" ಹಾಡಿಗೆ ಜಾನಕಿಯಮ್ಮ ಮತ್ತೆ ಟೊಂಕ ಕಟ್ಟಿ ನಿಂತು ಹಾಡಿದರೆ, ಅದನ್ನು ಚಿತ್ರೀಕರಿಸಿದ ರೀತಿಗೆ ಪುಟ್ಟಣ್ಣ ಅವರಿಗೆ ಶ್ರೇಯಸ್ಸು ತಲುಪುತ್ತದೆ. ಸಾಹಿತ್ಯ ರತ್ನ ಚಿ ಉದಯಶಂಕರ್ ಅವರ ಪದಗಳ ಬಳಕೆ ಬಹು ಇಷ್ಟವಾಗುತ್ತದೆ. 

ಚಿತ್ರದ ಅಂತಿಮ ಭಾಗದಲ್ಲಿ ವೇಶ್ಯ ಪದ್ಧತಿಯ ಗೆಜ್ಜೆ ಪೂಜೆಯನ್ನು ವಿಸ್ತೃತವಾಗಿ ತೋರಿಸುತ್ತಾ ಅದಕ್ಕೆ ಹಾಡಿನ ಪೋಷಾಕು ಹಾಕುವಲ್ಲಿ ಸುಗಮ ಸಂಗೀತದ ಪ್ರತಿಭೆ ಬಿ ಕೆ ಸುಮಿತ್ರ ಬರುತ್ತಾರೆ. ಅರ್ ಏನ್ ಜಯಗೋಪಾಲ್ ಅವರ ಸಾಹಿತ್ಯ  ಸಿರಿ ಈ ಹಾಡಿಗೆ ಜೀವ ತುಂಬುತ್ತದೆ. 

 ಈ ಚಿತ್ರದಲ್ಲಿ ನಾನು ಇದ್ದೇನೆ ಎಂದು ಸಾರಿ ಸಾರಿ ಹೇಳುವ ಅಭಿನಯ ನಾಲ್ವರದು. 

ನನ್ನ ಮೆಚ್ಚಿನ ಬಾಲಣ್ಣ ಒಂದು ಐದು ದೃಶ್ಯದಲ್ಲಿ ತಮ್ಮ ಟ್ರೇಡ್ ಮಾರ್ಕ್ ಛಾಪನ್ನು ಮೂಡಿಸುತ್ತಾರೆ. ಅವರ ಪಂಚಿಂಗ್ ಮಾತುಗಳು ಬಿಕ್ಕುವ ರೀತಿಯಲ್ಲಿ ಹೇಳುವ ಶೈಲಿ ಆಹಾ ಅದರ ಕೆಲವು ತುಣುಕುಗಳು

೧. ಹೋಟೆಲ್ ಗೆ ಹೋದರೆ ನಮಗೆ ಬೇಕಾಗಿದ್ದು ಅವನೆಲ್ಲೇ ಕೊಡ್ತಾನೆ.. ಅವನು ಮಾಡಿದ್ದು ನಾವು ತಿನ್ನಬೇಕು.. ಎಲ್ಲಯ್ಯ ರವೆ ಇಡ್ಲಿ ಅಂತ ಎಗರ್ಲಾಡಿದರೆ.. ಹೋಗಯ್ಯ ತೀರ್ಥಹಳ್ಳಿ ಜಾತ್ರೆಗೆ ಅಂತಾನೆ 

೨. ಈ ಸಿಗರೆಟ್ ಪ್ಯಾಕೆಟ್, ಅದನ್ನು ಬಿಟ್ಟು ಹೋದ ಆ ಕೈ, ಅದಕ್ಕೆ ಸಂಬಂಧ ಪಟ್ಟ ತಲೆ ಇದು ಯಾವುದು ಅಂತ ನನ್ನ ತಲೆಗೆ ಹೊಳಿತ ಇಲ್ಲವಲ್ಲ 

೩. ನನ್ನ ಸಾವಿತ್ರ್ಹಿ ಹಣೆಯ ಮೇಲೆ ಕ್ವೆಶ್ಚನ್ ಮಾರ್ಕು 
     ತುಟಿಯ ಮೇಲೆ ಡೇಂಜರ್ ಮಾರ್ಕು 
     ಕಣ್ಣಲ್ಲಿ ಹೊಸ ಸ್ಪಾರ್ಕು 
     ಇದೆಲ್ಲ ನನ್ನ ತಲೇಲಿ ಆಗಿದೆಯೋ ಕ್ವೆಶ್ಚನ್ ಮಾರ್ಕು  

೩. ದ್ವಾಪರ ಯುಗದಲ್ಲಿ ದುಶ್ಯಾಸನ ದ್ರೌಪದಿ ಸೀರೆ ಎಳೆದು ಎಳೆದು ಬೆವತು ಹೋದನಂತೆ.. ಈ ಕಲಿಯುಗದಲ್ಲಿ ನನ್ನ ಮೂರನೇ ಹೆಂಡತಿ ಸೀರೆ ಕುಪ್ಪುಸ ಇಸ್ತ್ರಿ ಮಾಡಿ ಕೈ ಸೋತು ಹೋಗಿದೆ 
೪. ತಾಳಿ ಕಟ್ಟಿದೊಳು ಗಾಳಿಲಿ ಬಿಟ್ಟು ಹೋದಳು 
     ಟೈ ಕಟ್ಟಕೊಂಡವ್ನ ಕಂಕುಳಲ್ಲಿ ಇಟ್ಕೊಂಡು ಹೋದಳು 

ಕುಲ ಯಾವುದಾದರೂ ಜ್ಞಾನಕ್ಕೆ ಪರದೆಯಿಲ್ಲ ಎನ್ನುವ ತರ್ಕದ ಅಶ್ವಥ್ ಪಾತ್ರ ಗಮನ ಸೆಳೆಯುತ್ತದೆ. ಪಂಡರಿಬಾಯಿ ಅವರ ಜೊತೆ ಜಗಳ ಬಂದಿ, ಆವಾಗ ಅವರ ಸಂಭಾಷಣ ಶೈಲಿ, ಅಂಗೀಕ ಅಭಿನಯ, ಮುಖದಲ್ಲಿ ಮಾಸದ ನಗು.. ಧರ್ಮೇಚ ಅರ್ಥೆಚ ಮತ್ತು ತೀರ್ಥ ಕೊಡುವಾಗ ಹೇಳುವ ಮಂತ್ರಗಳ ಅರ್ಥ ಅದನ್ನ ಹೇಳುವ ಶೈಲಿ ಆಹಾ ಸೂಪರ್ ಸೂಪರ್.  ವೇಶ್ಯೆ ಕುಲದ ಹೆಣ್ಣು ಮಗಳನ್ನು  ಗೌರವ ಕೊಟ್ಟು ತನ್ನ ಮಗಳಷ್ಟೇ ಪ್ರೀತಿಸುವ ಆ ಪಾತ್ರದಲ್ಲಿ ನುಗ್ಗಿ ಬಿಟ್ಟಿದ್ದಾರೆ. 

ನವಿರಾದ ಅಭಿನಯ, ಹಿತವಾದ ಮಾತು, 
"ಅಮ್ಮ ಅವರು ನಿನಗೆ ಬೆಲೆ ಕೊಟ್ಟಿದ್ದಾರೆಯೇ ಹೊರತು ನಿನ್ನ ಭಾವನೆಗಳಿಗೆ, ನಿನ್ನ ಕಣ್ಣೀರಿಗೆ ಅಲ್ಲಾ"

"ಅಮ್ಮ ಅಪ್ಪಾಜಿ ಸತ್ತು ಹೋದರು ಎನ್ನುವ ಸುದ್ಧಿ ಕೇಳಿದರೂ ... " 

"ಪಂಚಮವೇದ ಪ್ರೇಮದ ನಾದ" ಹಾಡಿನಲ್ಲಿನ ಅಭಿನಯ 

"ಗಗನವು ಎಲ್ಲೋ ಭೂಮಿಯು ಎಲ್ಲೋ" ಹಾಡಿಗಿಂತ ಮುಂಚೆ ಗಂಗಾಧರ್ ಜೊತೆಯಲ್ಲಿ ನಡೆವ ಸಂಭಾಷಣೆಯಲ್ಲಿ ತನಗೆ ಹೊಸ ಜೀವನದ ರಹದಾರಿ ಸಿಗುತ್ತಿದೆ ಎಂಬ ಭಾವ ಸಿಕ್ಕಾಗ ಅವರ ಅಭಿನಯ.. 

ತನ್ನ ಜನ್ಮಕ್ಕೆ ಕಾರಣವಾದ ಮನುಷ್ಯನ ಬಳಿ ನಿಂತು "ನಿಮ್ಮನ್ನು ಅಪ್ಪಾ ಎನ್ನಬಹುದೇ.. ನಿಮ್ಮನ್ನು ಮುಟ್ಟಬಹುದೇ" ಈ ದೃಶ್ಯ ಈ ಚಿತ್ರದ ಹೈ ಲೈಟ್. 

ಇಂತಹ ಒಂದು ಸುಂದರ ಅಭಿನಯ ಕೊಟ್ಟ ಕಲ್ಪನಾ ಈ  ಚಿತ್ರದಲ್ಲಿ ಮಿನುಗುತ್ತಾರೆ. 

ಕಾಮ ನೋಡುವ ದೇಹದಲ್ಲಲ್ಲ.. ನೋಡುವ ನೋಟದಲ್ಲಿ ಎನ್ನುವ ಮಾತಿನಂತೆ ಇಡಿ ಚಿತ್ರದಲ್ಲಿ ಕಣ್ಣಲ್ಲೇ ಬೆರಗುಗೊಳಿಸುವ ಮೂಗೂರು ಸುಂದರಮ್ಮ ಅವರ ಅಭಿನಯ ವಾಹ್ ವಾಹ್ ಎಂದು ಹೇಳಿಸುತ್ತದೆ. 

ಹೆಣ್ಣು ಈ ಮನೆಗೆ ಹೊನ್ನು ತರುತ್ತದೆ.. ಗಂಡು ಈ ಮನೆಗೆ ಬರಬೇಕು ಹೊರತು, ಹುಟ್ಟ ಬಾರದು ಅಪರ್ಣ ಎನ್ನುವಾಗ ಕಣ್ಣಲ್ಲಿ ತೋರುವ ಮಿಂಚು, ಗೆಜ್ಜೆ ಪೂಜೆ ಮಾಡಿಸ್ತೀನಿ, ಗೆಜ್ಜೆ ಪೂಜೆ ಮಾಡಿಸ್ತೀನಿ ಎನ್ನುವಾಗ ಕಣ್ಣಲ್ಲೇ ತೋರಿಸುವ ಭಾವ ಅಬ್ಬಾ ಅನ್ನಿಸುತ್ತದೆ. ಇಡಿ ಚಿತ್ರವನ್ನು ನುಂಗಿ ಬಿಡುವ ಸಾಮರ್ಥ್ಯ ಇರುವ ಈ ಕಲಾವಿದೆಯಿಂದ ತೆಗಿಸಿರುವ ಅಭಿನಯ ಪುಟ್ಟಣ್ಣ ಅವರ ತಾಕತ್.  

ಮನದಲ್ಲಿ ಅಶ್ಲೀಲವೆನಿಸುವ ಯೋಚನೆಯನ್ನು ಬೆಳ್ಳಿ ತೆರೆಯ ಮೇಲೆ ಸಹ್ಯವಾಗಿ ತಂದು ಒಂದು ಪುಟ್ಟ ಮಗುವಿನ ಜೊತೆಯಲ್ಲಿ ಕೂಡ ನೋಡಬಹುದು ಎನ್ನಿಸುವ ಚಿತ್ರವನ್ನು ಕೊಟ್ಟಿರುವ ಪುಟ್ಟಣ್ಣ ಚಿತ್ರದುದ್ದಕ್ಕೂ ಕಾಡುತ್ತಾರೆ. ಒಂದೇ ಒಂದು ಅಶ್ಲೀಲ ಸಂಭಾಷಣೆ, ದೃಶ್ಯ ಇರದ ಆದರೆ ಹೇರಳವಾಗಿ ತುಂಬಲು ಎಲ್ಲಾ ಸಾಧ್ಯಗಳಿರುವಂಥಹ  ಕಥಾವಸ್ತುವನ್ನು ಅಷ್ಟೇ ನವಿರಾಗಿ ಮಾತಿನಲ್ಲೇ ಕಟ್ಟಿ ಕೊಟ್ಟಿರುವ ಈ ಸುಂದರ ಚಿತ್ರಕ್ಕೆ ಅನೇಕ ಪ್ರಶಸ್ತಿಗಳು ಹುಡುಕಿಕೊಂಡು ಬಂದದ್ದು ಈ ಚಿತದ ಹೆಗ್ಗಳಿಕೆ. 

ಅಬ್ಬಬ್ಬ ಎನ್ನಿಸುವ ಈ ಚಿತ್ರವನ್ನು ನೋಡುತ್ತಾ ಹಲವಾರು ದೃಶ್ಯಗಳಲ್ಲಿ ಮನ, ಕಣ್ಣು ಅಶ್ರು ಧಾರೆಯನ್ನು ಸುರಿಸಿತು. 

ಪುಟ್ಟಣ್ಣ ಗುರುಗಳೇ ಹಾಟ್ಸ್ ಆಫ್ ನಿಮಗೆ!!!