Saturday, November 1, 2014

ಕನ್ನಡ ಜನರ ಔದಾರ್ಯದಂತೆ ... ಸಾಕ್ಷಾತ್ಕಾರ (1971)

ಸುಮಾರು ಇಪ್ಪತ್ತು ವರ್ಷಗಳ ಹಿಂದೆ, ನನ್ನ ಅಣ್ಣ ಆಗಿನ VCP ನಲ್ಲಿ ಸಾಕ್ಷಾತ್ಕಾರ ಚಿತ್ರವನ್ನು ಒಬ್ಬನೇ ನೋಡಿ ಸುಮಾರು ದಿನಗಳು ಮಾತೆ ಆಡದಂತೆ ಮೌನವಾಗಿದ್ದ. ಯಾಕೋ ಅಂತ ಕೇಳಿದರೆ ಆ ಚಿತ್ರ ತುಂಬಾ ಕಾಡುತ್ತದೆ.. ನೀ ಆ ಚಿತ್ರವನ್ನು ಒಮ್ಮೆ ನೋಡು ಆಮೇಲೆ ನಿನಗೆ ಗೊತ್ತಾಗುತ್ತೆ ಅಂದ.

ಒಮ್ಮೆ ನೋಡಿದೆ, ನಾ ಮೂಕ ಹಕ್ಕಿಯ ಹಾಗೆ ಆಗಿಬಿಟ್ಟೆ.

ಬಿ ಮಲ್ಲಿಕ್ ಅವರ ಮಲ್ಲಿಕ್ ಪ್ರೊಡಕ್ಷನ್ಸ್ ಅವರ ನಿರ್ಮಾಣದಲ್ಲಿ ೧೯೭೧ರಲ್ಲಿ ಬೆಳ್ಳಿತೆರೆಯಲ್ಲಿ ಸಾಕ್ಷಾತ್ಕಾರಗೊಂಡ ಈ ಚಿತ್ರ ಹಲವಾರು ಕಾರಣಗಳಿಗೆ ನಮ್ಮ ಮನದಲ್ಲಿ ಹಸಿರಾಗಿ ನಿಲ್ಲುತ್ತದೆ.


ಚಿತ್ರವನ್ನು ಚಿಕಮಗಳೂರು, ಕಳಸ, ಮುಡುಕುತೊರೆ ಮುಂತಾದ ಸುಂದರ ತಾಣಗಳಲ್ಲಿ ಮೂಡಿ ಬಂದ ಈ ಚಿತ್ರಕ್ಕೆ ಆರಂಭಿಕ ದೃಶ್ಯದಲ್ಲಿ ಕನ್ನಡದ ಚೇತನ ಅ ನ ಕೃಷ್ಣರಾಯರು ಬಂದು ಶುಭ ಹಾರೈಸುವುದು, ಜೊತೆಯಲ್ಲಿಯೇ ಚಿತ್ರರಂಗದ ಶೋ ಮ್ಯಾನ್ ಎಂದೇ ಹೆಸರಾದ ರಾಜ್ ಕಪೂರ್, ಮತ್ತು ಭಾರತ ಚಿತ್ರರಂಗದ ಸಿಂಹ ಪೃಥ್ವಿರಾಜ್ ಕಪೂರ್ ಇವರನ್ನೆಲ್ಲ ಸಾಕ್ಷಾತ್ಕರಿಸಿಕೊಂಡ ದೃಶ್ಯ ನೆನಪಾಗಿ ನಿಲ್ಲುತ್ತದೆ.

ಕನ್ನಡ ಚಿತ್ರರಂಗದ ಭೀಷ್ಮ ಆರ್ ನಾಗೇಂದ್ರರಾಯರು, ನನ್ನ ನೆಚ್ಚಿನ ಬಾಲಕೃಷ್ಣ, ಕಪ್ಪು ಬಿಳುಪಿನ ವರ್ಣದಲ್ಲೂ ಮುಗ್ಧವಾಗಿ ಕಾಣುವ ಜಮುನ, ಕಂಚಿನ ಕಂಠದ ವಜ್ರಮುನಿ, ಇಡಿ ಚಿತ್ರದಲ್ಲಿ ಮೃದುವಾಗಿ ಮಾತಾಡಿ ವಿಶಿಷ್ಟ ಅಭಿನಯ ನೀಡಿರುವ ರಾಜ್, ಚಿಕ್ಕ ಚಿಕ್ಕ ಪಾತ್ರದಲ್ಲಿ ನರಸಿಂಹರಾಜು ಮತ್ತು  ಉಳಿದ ಸಹಕಲಾವಿದರು  ಚಿತ್ರಕ್ಕೆ ಬೇಕಾದ ವರ್ಣವನ್ನು ತಂದು ಕೊಟ್ಟಿದ್ದಾರೆ.

ಈ ಚಿತ್ರದಲ್ಲಿ ಎದ್ದು ಕಾಣುವುದು ಈ ಮಹಾನ್ ಕಲಾವಿದರು

ಪೃಥ್ವಿರಾಜ್ ಕಪೂರ್:


ದೊಡ್ಡ ದೇಹ, ದೊಡ್ಡ ಶಾರೀರ, ಮಾತು, ಅಂಗೀಕ ಅಭಿನಯ ವಾಹ್ ವಾಹ್.

ಇಡಿ  ಪಾತ್ರವನ್ನು ಅವರ ಧ್ವನಿಯಲ್ಲಿಯೇ ಅಭಿನಯಿಸಿರುವುದು ಪುಟ್ಟಣ್ಣ ಅವರು ಕನ್ನಡ ನುಡಿ, ನೆಲಕ್ಕೆ ತೋರಿಸುತ್ತಿದ್ದ ಅಭಿಮಾನ.

"ಒಲವೆ ಜೀವನ ಸಾಕ್ಷಾತ್ಕಾರ" ಈ ಮಾತುಗಳನ್ನು ಹೇಳುವಾಗ ಅವರ ಧ್ವನಿ

"ಆದಷ್ಟು ಬೇಗ ಮನುಷ್ಯನಾಗಬೇಕು ಉಮಾ ಮಹೇಶ್ವರನಾಗಬೇಕು"

"ಒಲವಿನ ಬಲವೇ ದೈವ ಬಲ"

ಎಲ್ಲರೂ ಈ ಮನೆಯಿಂದ ಹೊರತು ಹೋದರೆ ಏನು ಉಳಿಯುತ್ತದೆ ಎನ್ನುವ ಅವರ ಶ್ರೀಮತಿ ಪ್ರಶ್ನೆಗೆ ಅವರು ಕೊಡುವ ಉತ್ತರ
"ಸತ್ಯ ಧರ್ಮ ಮನುಷ್ಯತ್ವ" 

ಹೆಂಡತಿ ಅವರ ಮಾತು ಕೇಳದೆ ಮನೆ ಬಿಟ್ಟು ಹೋಗುವಾಗ ಅವರು ಕೂಗುವ "ತಾಯೇ" ನಿಜಕ್ಕೂ ಒಮ್ಮೆ ನಾನೇ ಬೆಚ್ಚಿ ಬಿದ್ದೆ. ರೋಮಾಂಚನ ಮತ್ತು ಭೀತಿ ಎರಡರ ಮಧ್ಯದ ಸ್ಥಿತಿ ನನ್ನದು ಆಗ.

"ನನ್ನ ಮನೆ ಬಾಗಿಲು ದೊಡ್ಡದಾಗಿ ತೆರೆದಿದೆ
ಬರುವವರಿಗೆ ಸ್ವಾಗತ ಸುಸ್ವಾಗತ
ಹೋಗೋರಿಗೆ" ಎಂದು ಹೇಳಿ ಎರಡು ಕೈಯನ್ನು ಎತ್ತಿ ಮುಗಿಯುತ್ತಾರೆ. ಇಡಿ ದೃಶ್ಯದಲ್ಲಿ ಅವರು ಓಡಾಡುವ ಪರಿ, ಅದಕ್ಕೆ ಕೊಡುವ ಗಂಭೀರತೆ ಮನಸ್ಸೆಳೆಯುತ್ತದೆ. ಒಂದು ದೃಶ್ಯವನ್ನು ಇನ್ನಷ್ಟು ಶ್ರೀಮಂತಗೊಳಿಸುವ ಕಲೆ ಪುಟ್ಟಣ್ಣ ಅವರಿಗೆ ಸಿದ್ಧಿಸಿತ್ತು.

"ಮಡದಿಯೇ ಮನೆ ದೇವತೆ"

"ಈ ಪ್ರಪಂಚದಲ್ಲಿ ತನ್ನ ಹೆಂಡತಿಯನ್ನು ಕರೆದುಕೊಂಡು ಬಾರೋ ಅಂತ ಹೇಳುವ ದೌರ್ಭಾಗ್ಯ ಯಾವ ಅಪ್ಪನಿಗೂ ಬಾರದಿರಲಿ" ಕಣ್ಣಿನಲ್ಲಿ ಮಡುಗಟ್ಟಿದ ದುಃಖ ಧ್ವನಿಯಲ್ಲಿ ನಡುಕ, ವಾಹ್ ಸೂಪರ್ ಸೂಪರ್

ಹತಾಶರಾಗಿ ಅರಳಿ ಕಟ್ಟೆಯ ಬಳಿ ಕೂತಿದ್ದಾಗ ತನ್ನ ಸ್ನೇಹಿತ ಬಾರೋ ಮನೆಗೆ ಹೋಗೋಣ ಅಂತ ಹೇಳುವ ಮಾತು
"ಮನೆ  ಮಡದಿ, ಮಕ್ಕಳು ಎಲ್ಲಾ ನಶ್ವರ
ಈಶ್ವರನೊಬ್ಬನೆ ಶಾಶ್ವತ"

ಸ್ನೇಹಿತ "ಸ್ಥಳ ಬದಲಾದರೆ ನಿನ್ನ ಮನಸ್ಸು ತಿಳಿಯಾಗುತ್ತದೆ ನಡಿ ಶೃಂಗೇರಿಗೆ ಹೋಗೋಣ" ಅಂದಾಗ ಮಗುವಿನ ತರಹ ಅಭಿನಯ ಕೊಡುತ್ತಾ "ಶೃಂಗೇರಿಗೆ!.. ಹಾ ಹೋಗೋಣ" ಎಂದು ಎದ್ದು ನಿಲ್ಲುವಾಗ ಆ ಬೃಹತ್ ದೇಹದಲ್ಲಿ ಒಂದು ಪುಟಾಣಿ ಮಗು ಕಾಣುತ್ತದೆ.

ಅವರ ಅಂತಿಮ ದೃಶ್ಯದಲ್ಲಿ ತಮ್ಮ ಮಗನಿಗೆ ಬರೆದ ಪತ್ರದ ಸಾರಾಂಶವನ್ನು ಓದುವ ಅವರ  ಧ್ವನಿ
"ಈ ನೆಲದ ಬಾಳು ನಶ್ವರ
ಇಲ್ಲಿ ಒಲವು ಮಾತ್ರ ಅಮರ
ಕಳೆದ ನಿನ್ನೆಗಳಿಗಾಗಿ ಚಿಂತಿಸಬೇಡ 
ಬರುವ ನಾಳೆಗಳಿಗಾಗಿ ಭೀತನಾಗಬೇಡ
ನಿನ್ನ ತಾಯಿಯನ್ನು ದೈವದಂತೆ ಗೌರವಿಸು (ಈ ಮಾತನ್ನು ಹೇಳುವಾಗ "ದೈವ" ಎನ್ನುವ ಪದಕ್ಕೆ ಅವರು ಕೊಡುವ ಒತ್ತು ಸೂಪರ್)
ಜೀವನವನ್ನು ಜೇನಾಗಿ ನೆನೆದು ಸವಿಯುವ ಸಾಧನೆ ಮಾಡು 
ಸತತ ಪ್ರಯತ್ನವೇ ಸಾಧನೆಯ ರಹಸ್ಯ"

ಅವರು ಮಾತುಗಳನ್ನು ತುಸು ನಿಧಾನಗತಿಯಲ್ಲಿ ಜೊತೆಯಲ್ಲಿ ಅದಕ್ಕೆ ಕೊಟ್ಟಿರುವ  ಪ್ರತಿಧ್ವನಿಯೂ ಪರಿಣಾಮಕಾರಿಯಾಗಿ ಅವರ ಅಭಿನಯವನ್ನು ಇನ್ನಷ್ಟು ಹೆಚ್ಚಿಸಲು ಅನು ಮಾಡಿಕೊಟ್ಟಿದೆ. ಅನ್ಯ ಭಾಷೆಯ ನಟನನ್ನು ಕರೆತಂದು ಅವರೇ ಪಾತ್ರಕ್ಕೆ ಧ್ವನಿ ನೀಡುವಂತೆ ಮಾಡಿ, ಅವರಿಂದ ಕಥೆಗೆ ಬೇಕಾದ ರೀತಿಯಲ್ಲಿ ಅಭಿನಯ ಹೊರಗೆ ತೆಗೆದದ್ದು ಪುಟ್ಟಣ್ಣ ಅವರು ನಿರ್ದೇಶನದ ಮಾಧ್ಯಮದ ಮೇಲೆ ಹಿಡಿತವಿದ್ದದ್ದಕ್ಕೆ ಸಾಕ್ಷಿ.

ಹಣೆಯ ಮೇಲಿನ ವಿಭೂತಿ, ನಡುಗುವ ಕಣ್ಣುಗಳು, ಕಂಚಿನ ಕಂಠ, ವಸ್ತ್ರಗಳು ಎಲ್ಲವೂ ಆ ಪಾತ್ರಕ್ಕೆ ಸೊಗಸಾಗಿ ಜೊತೆಯಾಗಿವೆ.


ಆರ್ ನಾಗೇಂದ್ರರಾಯರು

ಕನ್ನಡ ಚಿತ್ರರಂಗದ ಭೀಷ್ಮ ಎಂದೇ ಹೆಸರಾದ ನಾಗೇಂದ್ರರಾಯರು ಪೃಥ್ವಿರಾಜ್ ಅವರಿಗೆ ಸರಿಸಾಟಿಯಾಗಿ ಅಭಿನಯಿಸಿದ್ದಾರೆ.

"ಮಹೇಶ ನಿನಗೆ ಪುಸ್ತಕದ ಜ್ಞಾನ ಹೆಚ್ಚು 
ಮಸ್ತಕದ ಜ್ಞಾನ ಕಮ್ಮಿ"

"ಬೇಡೋ ಕಣೋ.. ನಾನು ನೀನು ಬಾಲ್ಯ ಸ್ನೇಹಿತರು
ನಿನ್ನ ಮನೆ ಬೇರೆ ಅಲ್ಲ ನನ್ನ ಮನೆ ಬೇರೆ ಅಲ್ಲಾ 
ನಿನ್ನ ಹೆಂಡತಿ ಹೇಳಿದಾಗೆ ಅನಿಷ್ಟ ಅಂಗಾರಕ ದೋಷ ಮನೆ, ವಂಶವನ್ನೇ ನಿರ್ನಾಮ ಮಾಡುತ್ತದೆ"

"ಇಂದಿನಿಂದ ನೀವಿಬ್ಬರೂ ಒಲವಿನ ಜೋಡಿಗಳಲ್ಲ 
ಒಲವಿನ ಅಣ್ಣ ತಂಗಿಯರ ಹಾಗೆ ಬಾಳಿ"

ತನ್ನ ಸ್ನೇಹಿತನ ನೆಮ್ಮದಿಗೋಸ್ಕರ ಶೃಂಗೇರಿ ಬಂದು ನದಿಯಲ್ಲಿ ಅರ್ಘ್ಯ ಕೊಡುತ್ತಾ ಮಂತ್ರಗಳನ್ನು ಹೇಳುತ್ತಾ ಮುಖದಲ್ಲಿ ತೋರುವ  ಭಾವ..

"ಮಹೇಶ ಸುಮ್ಮನೆ ಒಲವು ಒಲವು ಅಂತ ಒದ್ದಾಡ್ತಾನೆ.. ಮಾಟ ಮದ್ದು ಮಾಡುವರಿಗೆ ಒಲವಿನ ಮಾತು ಎಲ್ಲಿ ಹೋಗುತ್ತೆ.. "

ಸಲೀಸಾದ ಅಭಿನಯ, ಪೃಥ್ವಿರಾಜ್ ಜೊತೆಯಲ್ಲಿಯೇ ಸರಿಸಾಟಿಯಾದ ಅಭಿನಯ ನೋಡೋದೇ ಕಣ್ಣಿಗೆ ಒಂದು ಹಬ್ಬ.

ಬಾಲಕೃಷ್ಣ ಅರ್ಥಾತ್ ಬಾಲಣ್ಣ 

ಅಕ್ಷರಶಃ ಈ ಚಿತ್ರದಲ್ಲಿ ಛಾಪು ಮೂಡಿಸಿದವರು ಇವರೇ. ಇಡಿ ಚಿತ್ರಕ್ಕೆ ಒಂದು ಮಹತ್ ತಿರುವು ಕೊಟ್ಟು, ತಮ್ಮ ಅಭಿನಯ, ಸಂಭಾಷಣೆ, ಮುಖಭಾವ ಎಲ್ಲದರಲ್ಲಿಯೂ ಖಳ ಅಂದರೆ ಕೂಗಾಡಲೇ ಬೇಕು, ದಪ್ಪ ದಪ್ಪ ಕಣ್ಣುಗಳು, ಮೀಸೆಗಳು, ವಿಚಿತ್ರ ವೇಷಭೂಷಣಗಳು ಇರಬೇಕು ಎನ್ನುವ ಸಿದ್ಧ ಸೂತ್ರವನ್ನು ಬದಿಗಿಟ್ಟ ಚಿತ್ರ ಇದು.  ಎಲ್ಲರ ರೀತಿಯಲ್ಲಿ ಸಹಜವಾಗಿ ಕಾಣುವ ಬಾಲಣ್ಣ ಈ ಚಿತ್ರದಲ್ಲಿ ಮಾಡಿರುವ ಜಾದೂ ಬಗ್ಗೆ ಹೇಳೋಕೆ ಪದಗಳೇ ಸಾಲದು.

"ಆವದಾನಿಗಳೇ ನನ್ನ ಮಗಳು ಸುಮಾ ಮಹೇಶನ ಮದುವೆ ಆಗಬೇಕು.. ನನ್ನ ಭಾವನ ಆಸ್ತಿ ನನಗೆ ಬರಬೇಕು.. ನನ್ನ ಭವನ ಸೊಕ್ಕು ಇಳಿಯಬೇಕು.. "

"ತಗೊಳ್ಳಿ ಕೊಲೆ ಮೊಕ್ಕದಮ್ಮೆಯಲ್ಲಿ ಬಂದ ದುಡ್ಡು... ಕೊಲೆ ಮಾಡಿದವನನ್ನೇ ಗೆಲ್ಲಿಸಿಬಿಟ್ಟೆ ಅದರ ಧರ್ಮ ಕರ್ಮಗಳು ನಿಮಗೆ ಇರಲಿ"

"ನಿನಗೆ ನಿನ್ನಮ್ಮನಹಾಗೆ ಮೈ ಬಂತೆ ಹೊರತು
ನನ್ನ ಹಾಗೆ ಬುದ್ದಿ ಬರಲಿಲ್ಲ"

"ಮಹಾರಾಣಿ ಆಗಿ ಬಾಳೇ ಮಗಳೇ ಅಂದ್ರೆ
ಹಾವ್ರಾಣಿ ಆಗಿ ಹಲ್ಲಿ ನುಂಗ್ತೀನಿ ಅಂತ್ಯಲ್ಲೇ"

"ನಾ ನಂಬಿದೋರಿಗೆ ದ್ರೋಹ ಮಾಡೋನಲ್ಲ
ತಂಬಿಟ್ಟಿಗೆ ಉಪ್ಪು ಬೆರೆಸೋನಲ್ಲಾ"

ಹೀಗೆ ಚಿತ್ರದ ಉದ್ದಕ್ಕೂ ಹೇಳುತ್ತಾ ಬರುವ ಬಾಲಣ್ಣನ ಪಾತ್ರ ಮಾಡೋದೆಲ್ಲ ಅನಾಚಾರವೇ.. ಅದ್ಭುತ ನಟನೆ.

ರಾಜ್ 

ಮೊದಲಿಗೆ ಗಮನಸೆಳೆಯುವುದು ಮುದ್ದಾಗಿ ಕಾಣುವ ಅವರು ಮತ್ತು ವಿದೇಶದಿಂದ ಬರುವ ಮೊದಲ ದೃಶ್ಯದಲ್ಲಿ ತನ್ನ ಓರಗೆಯವರನ್ನು ಯಾವ ಹಮ್ಮು ಬಿಮ್ಮು ಇಲ್ಲದೆ ಮಾತಾಡಿಸುವ ರೀತಿ.

ಅವರ ವೇಷಭೂಷಣಗಳು ಗಮನಸೆಳೆಯುತ್ತದೆ

ಇಡಿ ಚಿತ್ರದಲ್ಲಿ ಒಮ್ಮೆಯೂ ತಾಳ್ಮೆ ಕಳೆದುಕೊಳ್ಳದೆ ಸಂಯಮದಿಂದ ಮಾತಾಡುವ ಅಭಿನಯ.

ತಾನು ಮದುವೆಯಾಗುವ ಹೆಣ್ಣಿನಿಂದ ಹಲವು ಕಾರಣಗಳಿಗಾಗಿ ತನ್ನ ಮನೆಯೇ ಒಡೆದು ತನ್ನ ಬಂಧುಗಳೆಲ್ಲ ದೂರವಾದಮೇಲೆ ಈ ಮನೆ ಏನಾಗಿದೆ ಏನಾಗಬೇಕಿತ್ತು ಎನ್ನುವ ಸರಣಿ ಸಂಭಾಷಣೆಯಲ್ಲಿ ಅವರು ತೋರುವ ಮುಖಭಾವ ಮತ್ತು ಸಂಭಾಷಣೆಯನ್ನು ಹೇಳುವ ರೀತಿ.

ಅಪ್ಪನ ಅಣತಿಯಂತೆ ಅಮ್ಮನನ್ನು ಕರೆದೊಯ್ಯಲು ಬಂದಾಗ ಸಿದ್ಧವಾಗುವ ಅಮ್ಮನನ್ನು ನೋಡಿ ಸಂತಸಗೊಂಡು ಕೂತಿರುತ್ತಾರೆ. ಆದರೆ ಬಾಲಣ್ಣನ ಮಾತನ್ನು ಕೇಳಿ ತನ್ನ ತಾಯಿ "ಅಪ್ಪಾಜಿನೇ ಬಂದು ಕರೆದುಕೊಂಡು ಹೋದರೆ ಬರ್ತೀನಿ" ಎಂದು ಹೇಳಿದ ಮೇಲೆ.. ಒಂದು ಮಾತಾಡದೆ ತಮ್ಮ ಚಡಪಡಿಕೆ ತೋರುವ ಅಭಿನಯ ವಾಹ್ ಎನ್ನಿಸುತ್ತದೆ.

ಬೇರೆ ಯಾರೂ ತನ್ನ ತಾಯಿಯನ್ನು ಗುಂಡಿಟ್ಟು ಕೊಂದ ಮೇಲೆ.. ತಾಯಿಯ ಹತ್ತಿರ ಬಂದಾಗ "ಒಲವು ಒಲವು ಅಂತ ಹೇಳಿ.. ಒಲವಿನ ತಾಯಿಯನ್ನೇ ಬಲಿ ತೆಗೆದುಕೊಂಡೆಯ" ಎಂದು ತನ್ನ ತಾಯಿ ಹೇಳುತ್ತಾ ಕೊನೆ ಉಸಿರು ಎಳೆದಾಗ ರಾಜ್ ಅಭಿನಯ ಸೂಪರ್.

ಜೀವನವೆಲ್ಲ ಒಲವು ಒಲವು ಎಂದು ಹೋರಾಡಿಕೊಂಡು ಬಂದರೂ ತನ್ನ ತಾಯಿಯೇ ತನನ್ನು ತಪ್ಪು ತಿಳಿದುಕೊಂಡಾಗ.. ವಾಹ್ ಅಭಿನಯದಲ್ಲಿನ ತನ್ಮಯತೆ ನಮ್ಮನ್ನು ಸದಾ ಕಾಡುತ್ತದೆ

ಅಂತ್ಯದಲ್ಲಿ ತಮ್ಮ ಅಪ್ಪಾಜಿ ಹೇಳುತ್ತಿದ್ದ ಮಾತುಗಳನ್ನು ಮತ್ತೆ ನೆನಪಿಸಿಕೊಳ್ಳುವ
"ಜೀವನವೇ ಒಂದು ಪಾಠಶಾಲೆ
ಅದರಲ್ಲಿ ಬರುವ ಒಂದೊಂದು ಸನ್ನಿವೇಶವೂ ಪರೀಕ್ಷೆ
ಅದರಲ್ಲಿ ತೇರ್ಗಡೆಯಾದವನಿಗೆ ಮಾತ್ರ ಜೀವನ ಸಾಕ್ಷಾತ್ಕಾರ"

ಅತ್ಯುತ್ತಮ ಸಂಭಾಷಣೆ ಮತ್ತು ಅತ್ಯುತ್ತಮ ಅಭಿನಯ.

******

ನಾಯಕಿ ಜಮುನ ಅವರ ಅಭಿನಯ, ಮುಗ್ಧ ಸೌಂದರ್ಯ, ಸಂಭಾಷಣೆ, ಹಾಡುಗಳಲ್ಲಿ ನೃತ್ಯ ಇಷ್ಟವಾಗುತ್ತದೆ.
"ನಾನು ಅಂಗಾರಕ ದೋಷದ ಹೆಣ್ಣಲ್ಲ" ಎನ್ನುವಾಗ ತನ್ನ ಹಣೆಯ ಮೇಲಿನ ಕಳಂಕ ದೂರವಾದ ಆ ಕ್ಷಣಗಳಿಗೆ ಸಂತಸ ಪಡುವ ಅವರ ಅಭಿನಯ ಮನ ಮುಟ್ಟುತ್ತದೆ.

ಇಡಿ ಚಿತ್ರ ಪುಟ್ಟಣ್ಣ ಅವರ ಅಗ್ರಜ ಕಣಗಾಲ್ ಪ್ರಭಾಕರ ಶಾಸ್ತ್ರಿ ಅವರ ಕೂಸು. ಆರಂಭದಲ್ಲಿಯೇ "ಕಣಗಾಲ್ ಪ್ರಭಾಕರ್ ಶಾಸ್ತ್ರೀ ವಿರಚಿತ" ಎಂದು ತೋರಿಸುವ ಮೂಲಕ ಪುಟ್ಟಣ್ಣ ಪ್ರತಿಯೊಬ್ಬರ ಕಲೆಯನ್ನು, ಮತ್ತು ಅವರ ಶ್ರಮಕ್ಕೆ ತಕ್ಕ ಗುರುತಿಸುವಿಕೆಯನ್ನು ಪಾಲಿಸುತ್ತಿದ್ದದು ಇಷ್ಟವಾಗುತ್ತದೆ.

ಕಥೆ, ಚಿತ್ರಕಥೆ, ಸಂಭಾಷಣೆ, ಹಾಡುಗಳು ಎಲ್ಲವನ್ನೂ ಬರೆದಿರುವ ಕಣಗಾಲ್ ಪ್ರಭಾಕರ್ ಶಾಸ್ತ್ರಿ ಇಡಿ ಚಿತ್ರದುದ್ದಕ್ಕೂ ತಮ್ಮ ಪ್ರತಿಭೆಯನ್ನು ಧಾರೆ ಎರೆದಿದ್ದಾರೆ. ಈ ಚಿತ್ರ ಸಂಭಾಷಣೆ, ಹಾಡುಗಳಿಗೆ ಹೆಸರು ಮಾಡಿತ್ತು.

ಇಂಥಹ ಸುಮಧುರ ಚಿತ್ರಕ್ಕೆ ಛಾಯಾಗ್ರಹಣ ನೀಡಿದ ಶ್ರೀಕಾಂತ್ ಮತ್ತು ಸಂಗೀತ ಮತ್ತು ಮಹೋನ್ನತ ಗೀತೆಗಳನ್ನು ಕೊಟ್ಟ ಎಂ ರಂಗರಾವ್ ಸ್ಮರಣೀಯರು.

ಹಾಡುಗಳ ಬಗ್ಗೆ ಹೇಳಲೇ ಬೇಕು

"ಒಲವೆ ಜೀವನ ಸಾಕ್ಷಾತ್ಕಾರ" ಮೊದಲ ಹಾಡಿಗೆ ದನಿಯಾದವರು ಪಿ ಸುಶೀಲ, ಅಮೋಘ ಗಾಯನ ಜೊತೆಯಲ್ಲಿ
ಹಾಡಿನ ಕಡೆಯಲ್ಲಿ ಬರುವ ಸಾಲುಗಳನ್ನು ಹಾಡುವಾಗ ಅವರ ಧ್ವನಿ ಇಷ್ಟವಾಗುತ್ತದೆ.

"ಒಲವಿನ ಪೂಜೆಗೆ ಒಲವೆ ಮಂದಾರ
ಒಲವೆ ಬದುಕಿನ ಬಂಗಾರ
ಒಲವಿನ ನೆನಪೇ ಹೃದಯಕೆ ಮಧುರ
ಒಲವೇ ದೈವದ ಸಾಕ್ಷಾತ್ಕಾರ"

ಈ ಸಾಲುಗಳು ಮನಸ್ಸನ್ನು ಬಹಳ ಕಾಡುತ್ತವೆ.

ತನ್ನ ಒಲವಿನ ಗೆಳೆಯನ ಮುಂದೆ ಈ ಹಾಡನ್ನು ಹಾಡುತ್ತಾ ಅವನಿಗೆ ಒಲವಿನ ಪುಷ್ಪ ಮಾಲಿಕೆ ಅರ್ಪಿಸಿದ ಮೇಲೆ ರಾಜ್.. ಈ ದೃಶ್ಯವನ್ನು ತನ್ನ ಅಪ್ಪ ಮತ್ತು ಭಾವಿ ಮಾವ ನೋಡಿದರು ಎಂದು ಅರಿವಾದಾಗ ಅಭಿನಯ ಸುಂದರ.

"ಕಾದಿರುವಳು ಕೃಷ್ಣಾ ರಾಧೇ" ತನ್ನ ಬಾಳಿನ ಸಂಗಾತಿಯಾಗಿ ಬರುವುದಕ್ಕೆ ಸಿದ್ಧತೆಯಾಗಿ ಲಗ್ನ ಪತ್ರಿಕೆ ಶಾಸ್ತ್ರದಲ್ಲಿ ಹಾಡುವ ಹಾಡು. ಪಿ ಸುಶೀಲ ಅವರ ಗಾಯನ ಮರುಳು ಮಾಡುತ್ತದೆ. ಜಮುನ ಮೊಗದಲ್ಲಿ ನಾಚಿಕೆ, ಮುಂದಿನ ಜೀವನದ ಆಸೆ ಆಕಾಂಕ್ಷೆಗಳು ಎಲ್ಲವೂ ಮೆಲೈಸಿರುತ್ತದೆ.

"ಜನುಮ ಜನುಮದ ಅನುಬಂಧ" ಈ ಹಾಡಿನಲ್ಲಿ ಪಿ ಬಿ ಶ್ರೀನಿವಾಸ್ ನಮ್ಮ ಮನಸ್ಸನ್ನೇ ಅಪಹರಿಸಿಬಿಡುತ್ತಾರೆ. ಲಯಬದ್ಧವಾದ ಸಂಗೀತ, ಉತ್ತಮ ನೃತ್ಯ ಸಂಯೋಜನೆ ಈ ಹಾಡಿನ ಗರಿಮೆ. ಹಾಡಿನಲ್ಲಿ ಬರುವ "ಕನ್ನಡ.. ಜನರ ಔದಾರ್ಯದಂತೆ ಜನುಮ ಜನುಮದ ಅನುಬಂಧ" ದೃಶ್ಯದಲ್ಲಿ ಗಾಯಕ ಮತ್ತು ನಾಯಕರ ಜುಗಲ್ ಬಂದಿಇಷ್ಟವಾಗುತ್ತದೆ .

"ಫಲಿಸಿತು ಒಲವಿನ ಪೂಜಾ ಫಲ" ಸಂಪ್ರದಾಯ, ಸಂಸ್ಕಾರ, ನಮ್ಮ ಆಚರಣೆಗಳು, ಮದುವೆಯ ಸಂಭ್ರಮ ಎಲ್ಲವನ್ನೂ ಒಟ್ಟಿಗೆ ಒಂದು ಹಾಡಿನಲ್ಲಿ ತಂದಿರುವುದು ವಿಶೇಷ. ಪಿ ಸುಶೀಲ ಗಾಯನದಲ್ಲಿ ಮತ್ತೆ ಮುಂಚೂಣಿಯಲ್ಲಿ ನಿಂತರೆ, ನೃತ್ಯ, ಅಭಿನಯದಲ್ಲಿ ಜಮುನ ಗಮನ ಸೆಳೆಯುತ್ತಾರೆ.

ಅಂತಿಮ ದೃಶ್ಯದ "ಒಲವೆ ಜೀವನ ಸಾಕ್ಷಾತ್ಕಾರ" ಯುಗಳ ಗೀತೆ ಈ ಹಾಡನ್ನು ಮತ್ತೆ ಹಾಡಿನ ಬಗ್ಗೆ ಎಷ್ಟು ಹೇಳಿದರೂ ನನಗೆ ತೃಪ್ತಿ ಸಿಗುವುದಿಲ್ಲ. ಕಾರಣ ಈ ಕೆಳಗಿನಂತೆ

೧. ನಾಯಕಿ ಹಾಡಿದ್ದನ್ನೇ ನಾಯಕ ಮತ್ತೆ ಹಾಡುತ್ತಾನೆ. ಪಿ ಸುಶೀಲ ಅವರ ಧ್ವನಿಯಲ್ಲಿ ಹಾಡು ಸುಂದರವಾಗಿ ಮೂಡಿ ಬಂದಿದೆ. ಪಿ ಬಿ ಶ್ರೀನಿವಾಸ್ ಅವರ ಧ್ವನಿಗೆ ಪ್ರತಿಧ್ವನಿಯನ್ನು ಪರಿಣಾಮಕಾರಿಯಾಗಿ ಕೊಟ್ಟಿದ್ದಾರೆ.
೨. ಸಾಹಿತ್ಯ, ಅಭಿನಯ ಅತ್ಯುತ್ತಮ ಮಟ್ಟದ್ದಾಗಿದೆ
೩. ಇನ್ನೂ ಕ್ಯಾಮೇರ ಕೈಚಳಕ.

  • ಒಂದು ಕ್ಷಣವೂ ಕ್ಯಾಮೆರ ನಿಲ್ಲುವುದಿಲ್ಲ 
  • ಹತ್ತಿರ ಬರುತ್ತದೆ.. ದೂರ ಹೋಗುತ್ತದೆ 
  • ಕ್ಯಾಮೆರಾ ಚಾಲನೆಯ ವೇಗ 
  • ಆ ಬಯಲು ಪ್ರದೇಶವನ್ನೂ ಅಧ್ಬುತವಾಗಿ ಉಪಯೋಗಿಸಿಕೊಂಡಿರುವ ರೀತಿ 
ಇವೆಲ್ಲಾ ಒಂದು ಮಾತನ್ನು ಹೇಳುತ್ತದೆ. ಒಲವು ಬರಿ ಒಂದು ಕಡೆಯಲ್ಲಿ ನಿಲ್ಲುವುದಲ್ಲ, ಅಥವಾ ನಿಂತಿರುವುದಲ್ಲ.. ಓಡಾಡುತ್ತಲೇ, ಒಬ್ಬರಿಂದ ಒಬ್ಬರಿಗೆ ಹರಿಯುತ್ತಲೇ ಇರಬೇಕು. ಆಗಲೇ ಅದರ ಸಾಕ್ಷಾತ್ಕಾರ.  ಕ್ಯಾಮೆರ ಹತ್ತಿರ ಬರುತ್ತದೆ ದೂರ ಹೋಗುತ್ತದೆ.. ಇದರಿಂದ ಒಲವು ಬೇಡಿದಾಗ ಬಂದರೂ.. ನಾವು ಅದನ್ನು ಹಿಡಿದಿಡಲಾಗುವುದಿಲ್ಲ.. ಹಾಗೆಯೇ ದೂರ ಹೋದರು ಮತ್ತೆ ಮತ್ತೆ ಮರಳಿ ಬರುತ್ತಲೇ ಇರುತ್ತದೆ. 


ತನ್ನ ದುರಾಸೆಯ ವೃಕ್ಷಕ್ಕೆ ನೀರೆಯಲು ತನ್ನ ಅಕ್ಕನ ಮನೆಯ ಆಸ್ತಿಯನ್ನು ದೋಚಲು ಹೊಂಚು ಹಾಕುತ್ತಾ, ತನ್ನ ಅಕ್ಕನ ಮಗ ಇಷ್ಟ ಪಡುತ್ತಿದ್ದ ಹೆಣ್ಣಿನ ಜಾತಕದಲ್ಲಿ ದೋಷವಿದೆ ಎಂದು ಸುಳ್ಳು ಹೇಳಿಸಿ.. ಒಲವು ಒಲವು ಎಂದು ಹೇಳುತ್ತಿದ್ದ ಅಪ್ಪನ ಮಗನ ಪ್ರೀತಿ ಅನುಬಂಧವನ್ನು ಲೆಕ್ಕಿಸದೆ, ತನ್ನ ಅಕ್ಕನ ತಲೆಯಲ್ಲಿ ದ್ವೇಷದ ಬೀಜ ಬಿತ್ತಿ ಇಡಿ ಮನೆಯನ್ನು ರಣರಂಗ ಮಾಡುತ್ತಾನೆ. 
ಅಲ್ಲಿಂದ ಶುರುವಾಗುತ್ತದೆ ಧರ್ಮ ಕರ್ಮಗಳ ಹೊಡೆದಾಟ. ಕಡೆಯಲ್ಲಿ ತಾನು ಮಾಡಿದ ಪಾಪ ಶೇಷಗಳು ಸಶೇಷವಾಗದೆ ಈ ಜನ್ಮದಲ್ಲಿಯೇ ಅದಕ್ಕೆ ಪ್ರತಿಫಲ ಸಿಗುತ್ತದೆ ಎನ್ನುವದನ್ನು ಮಾರ್ಮಿಕವಾಗಿ ತೋರಿದ್ದಾರೆ ಈ ಚಿತ್ರದಲ್ಲಿ.

ಇಡಿ ಚಿತ್ರದ ಅದ್ಭುತ ರೂವಾರಿ ಪುಟ್ಟಣ್ಣ ಅದ್ಭುತ ಮಾಂತ್ರಿಕರೆ ಹೌದು. ತಮಗೆ ಅನ್ನಿಸಿದ್ದನ್ನ, ತಮ್ಮ ಮನದಾಳದಲ್ಲಿದ್ದುದ್ದನ್ನು  

ಹಾಗೆಯೇ ತೆರೆಯ ಮೇಲೆ ತಂದಿಡುವ ಅವರ ಶಕ್ತಿಗೆ ಎಷ್ಟು ಧನ್ಯವಾದಗಳನ್ನು ಹೇಳಿದರೂ ಕಡಿಮೆಯೇ. ಅವರ ಚಿತ್ರಗಳು ಅತ್ಯುತ್ತಮ ಗುಣಮಟ್ಟ ಹೊಂದಿರುತ್ತಿದ್ದವು. ಕಾರಣ ಚಲನ ಚಿತ್ರ ವಿಭಾಗದ ಪ್ರತಿ ಹಂತಗಳನ್ನು ಬಲ್ಲವರಾಗಿದ್ದರಿಂದ ಅದರ ಒಳಗೆ ಅಡಗಿರುತ್ತಿದ್ದ ಹೂರಣವನ್ನು ತೆರೆದಿಡಲು ಅನುಕೂಲವಾಗುತ್ತಿತ್ತು.

ಪುಟ್ಟಣ್ಣ ಕಣಗಾಲ್ ಗುರುಗಳೇ ಇಲ್ಲಿಯ ತನಕ ನಿಮ್ಮ ಚಿತ್ರಗಳ ಹರಿವು ಒಂದು ವಿಧದಲ್ಲಿತ್ತು. ಈ ಚಿತ್ರದ ನಂತರ ನಿಮ್ಮ ಆತ್ಮ ವಿಶ್ವಾಸ, ನಿಮ್ಮ ಪ್ರತಿಭೆಯ ಬಗ್ಗೆ ನಿಮಗೆ ಇದ್ದ ನಂಬಿಕೆ ಎಲ್ಲವೂ ಒಟ್ಟುಗೂಡಿಕೊಂಡು ಮುಂದೆ ನೀವು ಬೆಳ್ಳಿತೆರೆಗೆ ಅರ್ಪಿಸಿದ ಚಿತ್ರಗಳೆಲ್ಲವೂ ಒಂದೊಂದು ಮಾಣಿಕ್ಯ ರತ್ನಗಳೇ..

ಅಕ್ಷರಶಃ ಈ ಚಿತ್ರದ ನಂತರ ನೀವೂ ನಿಜವಾಗಿಯೂ ಕನ್ನಡ ಚಿತ್ರರಂಗವನ್ನು ಬೆಳಗಿದ ಚಿತ್ರ ಜ್ಯೋತಿಗಳನ್ನು ಹಚ್ಚಿಡುತ್ತಾ ಬಂದಿರಿ. ನಿಮ್ಮ ಕನ್ನಡಾಭಿಮಾನಕ್ಕೆ, ನೆಲದ ಸಂಪ್ರದಾಯವನ್ನು ಅಚ್ಚುಕಟ್ಟಾಗಿ ಬಿಂಬಿಸಿದ ನಿಮ್ಮ ಪ್ರತಿಭೆ ಶರಣು!!!

5 comments:

  1. ಒಂದು ಪರಿಪೂರ್ಣ ಚಿತ್ರದ ಸಮರ್ಥ ವಿಶ್ಲೇಷಣೆ.

    ರಾಜ್ - ಜಮುನ - ಪೃಥ್ವಿರಾಜ್ ಕಪೂರ್ ಅವರ ಸಂಗಮ ವ್ಯಾಖ್ಯಾನ.

    ReplyDelete
  2. Sri,
    yaako sakshatkaarada ellaa haadugaLanna omme keLabekannisthide nimma ee article odidamele. Andina kaalakke ee chitra mooDa nambikegala v/s maanaveeya moulyagaLa tudithagaLannu bimbisuvalli sampoorna prayathnavaagittu. One of my most fav. movies too :) innu haadu, ever-ever green biDi.....

    ReplyDelete
  3. ತಬಾ ಅದ್ಬುತವಾಗಿ ಮನಮುಟ್ಟುವಂತೆ ವಿಶ್ಲೇಷಣೆ ಮಾಡಿದ್ದೀರಿ..ನಿಮ್ಮ ಹೆಸರಲ್ಲಿ ಫೇಸ್ ಬುಕ್ ನ ನನ್ಮ ವಾಲ್ ನಲ್ಲಿ ಹಂಚಿಕೊಳ್ಳುವೆ..ಥ್ಯಾಂಕ್ಯೂ ಸರ್.


    ReplyDelete
  4. ನಿಜವಾಗಲೂ ಈ ಚಿತ್ರ ನಾನು ನೋಡಲು ಆಗಲಿಲ್ಲ ಸಾರ್.
    ಏಕೋ, ನೋಡಿದೆ ಅಂತ ಬರೆಯುವ ಸುಳ್ಳು ಬಹುಕಾಲ ನನ್ನನ್ನು ಕಾಡುತ್ತದೆ ಅನಿಸಿತು.
    ನೋಡದೆ ಎಂತಹ ತಪ್ಪು ಮಾಡಿದೆ ಎನ್ನುವುದು ನಿಮ್ಮ ಬರಹದಿಂದ ಅರ್ಥವಾಯಿತು.

    ಬದುಕಿನಲ್ಲಿ ಒಲವಿಗಿಂತ ಶ್ರೇಷ್ಟವಾದ್ದು ಮಗದೊಂದಿಲ್ಲ ಎನ್ನುವುದು ಸಾಕ್ಷಾತ್ಕಾರದ ಮೂಲ ಆಶಯ ಅಂತ ಎಲ್ಲೋ ಓದಿದ ನೆನಪು.

    ಈ ಕೂಡಲೇ ಈ ಚಿತ್ರ ರತ್ನವನ್ನು ಹೇಗಾದರೂ ನೋಡುತ್ತೇನೆ ಶ್ರೀಮಾನ್.

    ನೋಡಿ ಆದ ಮೇಲೆ ಪುನಃ ಪ್ರತಿಕ್ರಿಯೆ ದಾಖಲಿಸುತ್ತೇನೆ.

    ReplyDelete
  5. ಮೆಚ್ಚಿನ ಚಿತ್ರದ ನೆಚ್ಚಿನ ಸಾಲುಗಳು.... ಮತ್ತೊಮ್ಮೆ ಸಾಕ್ಷಾತ್ಕಾರ ನೋಡಿದ ಹಾಗಿದೆ ನಿಮ್ಮ ಲೇಖನ ಶ್ರೀ...

    ReplyDelete