Sunday, November 16, 2014

ಸ್ಪೆಷಾಲಿಟಿ... ಪುಟ್ಟಣ್ಣ ಸ್ಪೆಷಾಲಿಟಿ - ನಾಗರಹಾವು (1972)

ಬಹುಶಃ ಭವಿಷ್ಯ ಹೇಳುವವರು ಕೂಡ ಊಹಿಸಿರಲಿಕ್ಕಿಲ್ಲ..

ಸಾವಿರದ ಒಂಬೈನೂರ ಎಪ್ಪತ್ತೆರಡನೆ ಇಸವಿಯಲ್ಲಿ ಒಂದು  ಉಲ್ಕೆ ಕನ್ನಡದ ಬೆಳ್ಳಿತೆರೆಗೆ ಅಪ್ಪಳಿಸಿತು..

ಅದುವೇ ಪುಟ್ಟಣ್ಣ ಕಣಗಾಲ್ ಒಂದು ವಿಭಿನ್ನ ಪಥ ತುಳಿದ ಪರ್ವ ಕಾಲ.. ಹಿಂದೆ ಮಾಡಿದ ಚಿತ್ರಗಳು ರತ್ನಗಳಾಗಿದ್ದರೆ... ಈ ಚಿತ್ರದ ನಂತರ ಮಾಡಿದ ರತ್ನಗಳು ಚಿತ್ರರತ್ನಗಳಾದವು. 

ಎನ್ ವೀರಾಸ್ವಾಮಿ ಆ ಕಾಲದ ಈ ಕಾಲದ ಎಲ್ಲಾ ಕಾಲದ ಹೆಮ್ಮೆಯ ನಿರ್ಮಾಪಕರು. ಅವರು ಪುಟ್ಟಣ್ಣ ಅವರ ಜೊತೆಯಲ್ಲಿ ಕೈಗೂಡಿಸಿದ ಮೇಲೆ ಸಣ್ಣ ಸಣ್ಣ ಕಲ್ಲುಗಳು ಹೊಳೆಯುತ್ತವೆ. ಈಶ್ವರಿ ಲಾಂಛನದಲ್ಲಿ ತಯಾರಾದ ಈ ಚಿತ್ರ  ಬೆಳ್ಳಿ ತೆರೆಯನ್ನು ಬೆಳಗಿದ್ದೆ ಅಲ್ಲದೆ ಅನೇಕ ತಾರೆಗಳನ್ನು ಚಮಕಾಯಿಸಿತು. 

ಚಿತ್ರದ ಹೆಸರನ್ನು ತೋರಿಸುವ ಟೈಟಲ್ ಕಾರ್ಡ್ ಮೊದಲಾಗಿ ಗಮನಸೆಳೆಯುತ್ತದೆ.. ನಿಗಿ ನಿಗಿ ಉರಿಯುವ ಕಾಯುವ ಚಿತ್ರದುರ್ಗದ ಬಂಡೆಗಳು, ಉರಿಯುತ್ತಿರುವ ಸೂರ್ಯ, ಮೋಡದೊಳಗೆ ಮರೆಯಾಗಲು ಹೊಂಚು ಹಾಕುತ್ತಿರುವ ದೃಶ್ಯದ ಮಧ್ಯದಿಂದ ಮೂಡಿ ಬರುತ್ತದೆ "ನಾಗರಹಾವು" ಚಿತ್ರದ ಹೆಸರು. 



ಉರಿಯುವ ಸೂರ್ಯನು ಮೋಡಗಳ ಸಹವಾಸದಿಂದ ತಂಪಾಗಿ ಕಂಗೊಳಿಸುತ್ತಾನೆ.. ಕಾಯುವ ಬಂಡೆಗಳು ಕೂಡ ಆ ಹೊತ್ತು ವಿರಮಿಸಿಕೊಳ್ಳುತ್ತವೆ.. ಆದರೆ ಮತ್ತೆ ಸೂರ್ಯ ಬಿರುಬಿಸಿಲು ಕೊಡಲು ಶುರುಮಾಡಿದ ಎಂದರೆ.. ಬಂಡೆಗಳು ಕೆಂಪಾಗುತ್ತವೆ.. 

ಎಂಥಹ ತರ್ಕ ಬದ್ಧ ದೃಶ್ಯ.. ಮಾನವನ ರೋಷವೇಷ.. ಸಿಟ್ಟು ಸೆಡವು, ಕೋಪ ತಾಪ ಎಲ್ಲವೂ ಪ್ರೀತಿ ವಿಶ್ವಾಸ ಎಂಬ ಮೋಡದ ಸಂಘಕ್ಕೆ ಬಂದರೆ ತಂಪಾಗುತ್ತದೆ. ಸಮಾಜಮುಖಿಯಾಗುತ್ತಾನೆ.. ಆದರೆ ಆ ಮೋಡಗಳ ಆಲಿಂಗನ ಸಿಗದೇ.. ಆ ಮೋಡಗಳನ್ನು ಚದುರಿಸುವ ಬಿರುಗಾಳಿ ಎನ್ನುವ ಸ್ವಾರ್ಥ, ಹಳದಿ ಕಣ್ಣಿನಲ್ಲಿ ನೋಡುವ ಮಂದಿ ಇದ್ದಾಗ ಆ ಬಿರುಗಾಳಿಗೆ ಒಳಗಿರುವ ರೋಷಾಗ್ನಿ ಹತ್ತಿ ಉರಿದು ಬಾಳನ್ನೇ ಸುಡುತ್ತದೆ. 

ರಾಮಾಚಾರಿ ಪಾತ್ರವನ್ನು ಚೆನ್ನಾಗಿ ಅರಿತ ಚಾಮಯ್ಯ ಮೇಷ್ಟ್ರು ಉರಿಯುವ ರಾಮಚಾರಿಗೆ ಮೋಡವಾಗಿ ನಿಲ್ಲುತ್ತಾರೆ, ಅದರ ಜೊತೆಯಲ್ಲಿ ನಿಲ್ಲುವ ಮಾರ್ಗರೆಟ್.. ಆದರೆ ಇವರ ಶ್ರಮವನ್ನು ತರಗೆಲೆಯಂತೆ ತೋರಿಸಿ ಬಿಡುವ ಪಾತ್ರಗಳಲ್ಲಿ ಮಿಕ್ಕವರು ಮಿಂಚುತ್ತಾರೆ. 

ಇಡಿ ಚಿತ್ರವನ್ನು ಹೆಗಲ ಮೇಲೆ ಹೊತ್ತು ನಡೆಸಿರುವವರು ಪುಟ್ಟಣ್ಣ. ಪ್ರತಿ ವಿಭಾಗದಿಂದ ಮೈ ಮುರಿಯುವಂತೆ ಕೆಲಸ ತೆಗೆಸಿ, ತಮ್ಮ ಮನದಲ್ಲಿ ಮೂಡಿದ ಶ್ರೀ ತ ರಾ ಸುಬ್ಬರಾಯರ ತ್ರಿವಳಿ ಕಾದಂಬರಿಗಳಾದ ನಾಗರಹಾವು, ಒಂದು ಗಂಡು ಎರಡು ಹೆಣ್ಣು, ಸರ್ಪಮತ್ಸರ ಇವನ್ನು ಜತನವಾಗಿ ಕೂಡಿಸಿ ಚಿತ್ರಕಥೆ ನಿರ್ದೇಶನ ಮಾಡಿದ್ದಾರೆ.

ಚಿತ್ರದುರ್ಗದ ಬಿರು ಬಿಸಿಲನ್ನು, ಕಾಯುವ ಬಂಡೆಗಳನ್ನು, ಒರಟು ಒರಟು ಪ್ರದೇಶವನ್ನು ಅಚ್ಚುಕಟ್ಟಾಗಿ ತೋರಿಸಿದ್ದಾರೆ ಛಾಯಾಗ್ರಾಹಕ ಚಿಟ್ಟಿಬಾಬು. ಚಿತ್ರದ ಅರ್ಧ ಭಾಗ ಚಿತ್ರದುರ್ಗದ ದುರ್ಗಮ ಕೋಟೆಯ ಪರಿಸರದಲ್ಲಿ ನಡೆದರೂ ಒಂದು ಬಾರಿತೋರಿಸಿದ ಪರಿಸರವನ್ನು ಇನ್ನೊಮ್ಮೆ ಅದೇ ಕೋನದಲ್ಲಿ ತೋರಿಸದೆ ಬೇರೆಯದೇ ಅನ್ನಿಸುವಂತೆ ಛಾಯಾಗ್ರಾಹಕ ತಮ್ಮ ಕೈಚಳಕ ತೋರಿದ್ದಾರೆ. 

ಪುಂಗಿಯ ನಾದವನ್ನು ಚಿತ್ರದುದ್ದಕ್ಕೂ ಉಪಯೋಗಿಸಿರುವ ಸಂಗೀತ ಮಾಂತ್ರಿಕ ವಿಜಯಭಾಸ್ಕರ್ ಕೊಟ್ಟಿರುವ ಸಂಗೀತ ಕಾಡುತ್ತಲೇ ಇರುತ್ತವೆ. ನಟ ಶಿವರಾಂ ಒಂದು ಸಂದರ್ಶನದಲ್ಲಿ ಹೇಳಿದಂತೆ ರಾಮಾಮಚಾರಿ ಜೀವನದಲ್ಲಿ ಮಾರ್ಗರೆಟ್ ಹೋಗಿ ಅಲಮೇಲು ಬರುವ ದೃಶ್ಯದಲ್ಲಿ ಉಪಯೋಗಿಸಿರುವ ಪಾಶ್ಚಾತ್ಯ ಸಂಗೀತ ಮತ್ತು ಭಾರತೀಯ ಸಂಗೀತ ಅವರ ಪ್ರತಿಭೆಗೆ ಸಾಕ್ಷಿ.  ಹಿನ್ನೆಲೆ ಸಂಗೀತ ಮತ್ತು  ಹಾಡುಗಳಿಗೆ ಸಂಗೀತ ಸಂಯೋಜನೆ ಬಹಳ ಬಹಳ ಕಾಡುತ್ತದೆ. 

ಉರಿಯುವ ರಾಮಾಚಾರಿಯ ಸ್ವಭಾವಕ್ಕೆ ಶಾಂತ ಸ್ವಭಾವದ ಬಳುಕುವ ಬಳ್ಳಿ ಅಲಮೇಲು ಕರಗಿ ನೀರಾಗುವ ಹಾಡು "ಕರ್ಪೂರದ ಗೊಂಬೆ ನಾನು" ಗಾಯಕಿ ಪಿ ಸುಶೀಲ ಅವರ ಕಂಚಿನ ಕಂಠ ಈ ಹಾಡನ್ನು ಇನ್ನಷ್ಟು ಎತ್ತರಕ್ಕೆ ಒಯ್ಯುತ್ತದೆ.  ಸಾಹಿತಿ ಆರ್ ಏನ್ ಜಯಗೋಪಾಲ್ ಪದಗಳ ಬಂಡೆಗಳನ್ನೇ ಪೋಣಿಸಿದ್ದಾರೆ. ಹಾಡಿಗೆ ಸಂಗೀತ ಅದ್ಭುತ. ವಾಣಿವಿಲಾಸ ಸಾಗರ, ಒರಟು ಒರಟು ಚಿತ್ರದುರ್ಗದ ಬಂಡೆಗಳು, ದೇವಸ್ಥಾನಗಳು ಇವುಗಳ ಜೊತೆಯಲ್ಲಿ ಮೂಡಿ ಬಂದ ಹಾಡು ಸೂಪರ್. ಆರತಿ ಕಡೆಯಲ್ಲಿ ಕರ್ಪೂರ ಆರಿ ಹೋಗುವಾಗ ನೃತ್ಯ ಮಾಡುವ ಕರ್ಪೂರದ ದೀಪದಂತೆ.. ಅವರ ಭಾವನೆಗಳನ್ನು ಮುಖದಲ್ಲಿಯೇ ತೋರುವುದು ... ಬಹಳ ನಾಜೂಕಾಗಿ ಹೆಣೆದಿದ್ದಾರೆ ಈ ದೃಶ್ಯವನ್ನು. 

ರಾಮಾಚಾರಿಯ ಸ್ವಭಾವವನ್ನು ತೆರೆಗೆ ಅಪ್ಪಳಿಸುವ ರೀತಿಯಲ್ಲಿ ಬಿಂಬಿಸುವ "ಹಾವಿನ ದ್ವೇಷ ಹನ್ನೆರಡು ವರುಷ" ಎಸ್ ಪಿ ಬಾಲಸುಬ್ರಮಣ್ಯಂ ಅವರ ಅಮೋಘ ಕಂಠ ಸಿರಿಯಲ್ಲಿ ಅನಾವಾರಣಗೊಂಡಿದೆ.ಕಾಲೇಜಿನಲ್ಲಿ ಮಾರ್ಗರೆಟ್ ಅವಮಾನ ಮಾಡಿದಳು ಎನ್ನುವ ಕೋಪಕ್ಕೆ ಶುರುವಾಗುವ ಹಾಡು ದುರ್ಗದ ಪ್ರದೇಶಗಳಲ್ಲಿ ಓಡಾಡಿಸಿ ಚಿತ್ರೀಕರಿಸಿದ್ದಾರೆ. ಆ ಹಾಡಿಗೆ ಬೇಕಾದ ರೋಷ ದ್ವೇಷ ಆವೇಗ ಎಲ್ಲವನ್ನು ಮೇಳೈಸಿ ಕೊಂಡು ಹಾಡಿದ ಗಾಯಕ,  ವಿಷ್ಣು ಅವರ ಸರಿಸುಮಾರು ಎಲ್ಲ ಚಿತ್ರಗಳಲ್ಲಿಯೂ ಕಾಯಂ ಗಾಯಕ ಆಗಿಬಿಟ್ಟರು.  ಹಾವಿನ ಬುಸುಗುಟ್ಟಿವಿಕೆಯನ್ನು ಹಾಡಿನ ಸಂಗೀತದಲ್ಲಿ ಉಪಯೋಗಿಸಿರುವ ರೀತಿ ಸೂಪರ್.  ಸಾಹಿತಿ ಆರ್ ಏನ್ ಜಯಗೋಪಾಲ್ ಅಕ್ಷರಶಃ ಬೆಂಕಿ ಚೆಂಡಿನಿಂದಲೇ ಈ ಹಾಡನ್ನು ಬರೆದಿದ್ದಾರೆ ಅನ್ನಿಸುತ್ತದೆ

ಜೀವನದಲ್ಲಿ ಮಾರ್ಗರೆಟ್ ಅಥವಾ ಅಲಮೇಲು ಎನ್ನುವ ಗೊಂದಲ ದೂರಮಾಡಿಕೊಂಡ ರಾಮಾಚಾರಿಯ ಕಣ್ಣಿನಲ್ಲಿ ಮೂಡಿ ಬರುವ ಹಾಡು "ಬಾರೆ ಬಾರೆ ಚಂದದ ಚಲುವಿನ ತಾರೆ". ಪಿ ಬಿ ಶ್ರೀನಿವಾಸ್ ಈ ಹಾಡನ್ನು ಜೀವದ ಹಾಡು ಎನ್ನುವಂತೆ ಹಾಡಿದ್ದಾರೆ. ಪುಸ್ತಕದಲ್ಲಿ ಓದಿದ ನೆನಪು.. ಸ್ಲೋ ಮೋಶನ್ ಎನ್ನುವ ಛಾಯಾಗ್ರಾಹಕ ಕಲೆಯನ್ನು ಮೊದಲ ಬಾರಿಗೆ ಈ ಚಿತ್ರಕ್ಕೆ ಅಳವಡಿಸಿದರು ಎಂದು. ಇಡಿ ಹಾಡಿನಲ್ಲಿ ವಿಷ್ಣುವಿನ ಚಲನೆ ಮಾಮೂಲಿ ವೇಗದಲ್ಲಿದ್ದಾರೆ.. ಆರತಿಯ ಅಭಿನಯದ ಭಾಗ ಪೂರ ಸ್ಲೋ ಮೋಶನ್. ಎರಡು ವಿಭಿನ್ನ ಧಾಟಿಯಲ್ಲಿ ಚಿತ್ರೀಕರಣ. ವಿಷ್ಣು ಪಾತ್ರ ವೇಗಕ್ಕೆ ಹೆಸರಾಗಿದ್ದರೆ.. ಆರತಿಯ ಪಾತ್ರ ನಿಧಾನ, ಸಂಯಮವನ್ನು ತೋರಿಸುತ್ತದೆ. ವಿಜಯನಾರಸಿಂಹ ಅವರ ಸರಳ ಪದಗಳ ಜೋಡಣೆ ಈ ಹಾಡನ್ನು ಇನ್ನಷ್ಟು ವಿಶೇಷ ಎನ್ನಿಸುವಂತೆ ಮಾಡಿದೆ. 

ಪುಟ್ಟಣ್ಣ ಅವರಿಗೆ ನಾಡು ನುಡಿ ಪರಿಚಯ, ಇತಿಹಾಸ, ಅಭಿಮಾನ ಎಲ್ಲವೂ ಬೆಟ್ಟದಷ್ಟಿತ್ತು.. ಅವರ ಪ್ರತಿ ಚಿತ್ರದಲ್ಲೂ ಸಂದರ್ಭ ಸಿಕ್ಕಾಗೆಲ್ಲ ಅವರ ಅಭಿಮಾನವನ್ನು ಹಾಡುಗಳಿಂದ, ಸಂಭಾಷಣೆಗಳಿಂದ ಹರವಿಬಿಡುತ್ತಿದ್ದರು . ಅಂಥಹ ಒಂದು ಅಭೂತಪೂರ್ವ ಅವಕಾಶ ದುರ್ಗದ ಓಬವ್ವನ ಹಾಡು. ಮನೆಮಾತಾಗಿರುವ ಈ ಹಾಡನ್ನು ಸಾಹಿತಿ ಚಿ ಉದಯಶಂಕರ್ ಒಂದು ಸಾಂಧರ್ಭಿಕ ಘಟನೆಯನ್ನು "ಕನ್ನಡ ನಾಡಿನ ವೀರ ರಮಣಿಯ"  ಕನ್ನಡ ನಾಡೆ ಎದೆ ಉಬ್ಬಿಸುವಂತೆ ಬರೆದಿದ್ದಾರೆ. ಸಂಗೀತ, ಸಾಹಿತ್ಯ, ಚಿತ್ರಿಸಿರುವ ರೀತಿ ಸೊಗಸಾಗಿದೆ.  

ಕೆಲವೊಮ್ಮೆ ಚಿಕ್ಕ ಚಿಕ್ಕ ಉಲ್ಕೆಗಳು ಪರಿಣಾಮಕಾರಿಯಾಗಿ ತಮ್ಮ ಪ್ರಭಾವ ಬೀರುತ್ತವೆ. ಕೆಲವೇ ನಿಮಿಷಗಳಲ್ಲಿ ಮೂಡಿಬರುವ ಈ ಹಾಡಿನಲ್ಲಿ ಜಯಂತಿ ಕರುನಾಡಿನ ಓಬವ್ವನ ರೂಪದಲ್ಲಿಯೇ ನಿಂತು ಬಿಟ್ಟಿದ್ದಾರೆ. ಅದ್ಭುತ ಅಭಿನಯ. ಆ ಗತ್ತು, ರೋಷ, ಶಕ್ತಿ, ಧೈರ್ಯ.. ಒಬವ್ವಳನ್ನೇ ಆವಹಿಸಿಕೊಂಡು ಈ ಪಾತ್ರ ಮಾಡಿದ್ದಾರೆ. 

 ಎರಡು ಧರ್ಮ ಒಂದಾಗುವುದರ ಬಗ್ಗೆ ದೊಡ್ಡ ಚರ್ಚೆ ಮಾಡುವುದರ ಬದಲು ಅದನ್ನೇ ಒಂದು ಸುಂದರ ಗೀತೆಯನ್ನಾಗಿ ಮಾಡಿಬಿಟ್ಟರೆ ಅಂಥಹ ಸಂದರ್ಭ "ಸಂಗಮ ಸಂಗಮ ಅನುರಾಗ ತಂದ ಸಂಗಮ" ಹಾಡು. ಇಡಿ ಹಾಡಿನ ಚಿತ್ರೀಕರಣ ನೆರಳು ಬೆಳಕಿನ ಮಧ್ಯೆ ನಡೆದಿದೆ. ಕ್ಯಾಮೆರ ಓಡಾಡುತ್ತಲೇ ಇರುತ್ತದೆ. ಎರಡು ಹೃದಯಗಳ ಮಿಲನಕ್ಕೆ ಧರ್ಮದ ನೆರಳು ಬೇಕೇ.. ಅಥವಾ ಬರಿ ಪ್ರೀತಿ ಅನುರಾಗದ ಬೆಳಕು ಸಾಕೆ ಎನ್ನುವ ತರ್ಕವನ್ನು ಹುಟ್ಟು ಹಾಕುತ್ತದೆ. ಸಂಗಮ ಎನ್ನುವ ಪದವನ್ನೇ ಒಟ್ಟಾಗಿ ಇಟ್ಟುಕೊಂಡು ಸುಂದರ ಸಾಹಿತ್ಯ ಬರೆದದ್ದು ವಿಜಯನಾರಸಿಂಹ. 

ಕೆಲವೊಮ್ಮೆ ಮನೆಯವರು ಯಾವುದೋ ಆವೇಗದಲ್ಲಿ ಮಾಡುವ ನಿರ್ಧಾರ ಮಗಳ ಭವಿಷ್ಯವನ್ನೇ ಬಲಿ ಹಾಕಿಬಿಡುತ್ತದೆ. ಅಂಥಹ ಸಮಯದಲ್ಲಿ ಮತ್ತೆ ತನ್ನವರು ಸಿಕ್ಕಾಗ ತನ್ನ ವೇದನೆಯನ್ನು ಕೇಳಿದಾಗ.. ಮನಸ್ಸು ಕರಗಿ ನೀರಾಗುತ್ತದೆ. ಒಂದು ಹಿನ್ನೋಟವನ್ನು "ಕಥೆ ಹೇಳುವೆ ನನ್ನ ಕಥೆ ಹೇಳುವೆ" ಗೀತೆಯಲ್ಲಿ ತುಂಬಿ.. ಅಶ್ಲೀಲ ಎನ್ನಿಸಬಹುದಾದ ಈ ಘಟನೆಯನ್ನು ಅಷ್ಟೇ ನಾಜೂಕಾಗಿ ಚಿತ್ರಿಕರಿಸುತ್ತಲೇ ಮನಸ್ಸನ್ನು ಕಲಕಿಬಿಡುವ ಹಾಡಾಗಿ ಮೂಡಿಸಿದ್ದಾರೆ ಪುಟ್ಟಣ್ಣ .  ಅಲಮೇಲು ಜೀವನವನ್ನು ಒಂದು ಬಾರಿ ಹಾಗೆ ಝಲಕ್ ಎನ್ನಿಸುವಂತೆ ತೋರಿಸುವ ಈ ಹಾಡು ಚಿತ್ರದ ಹೈಲೈಟ್ ಎನ್ನಬಹುದು. ಜೊತೆಯಲ್ಲಿಯೇ ಅವಳ ಜೀವನದ ಮುಂದಿನ ಭಾಗವನ್ನು ಹೇಳಹೊರಟವಳಿಗೆ ತಡೆದು ಕಣ್ಣೀರಾಗುವ ನಾಯಕ ತನ್ನ ಒರಟು ಹೃದಯದಲ್ಲಿ ಪ್ರೀತಿ ಮಮತೆ ಎಲ್ಲವಕ್ಕೂ ಅವುಗಳದ್ದೇ ಸ್ಥಾನ ಇದೆ ಎಂದು ತೋರುತ್ತಾನೆ. ಚಿ ಉದಯಶಂಕರ್ ಪದಗಳಲ್ಲಿ ಆಟವಾಡಿದ್ದಾರೆ.. 

ಈ ಚಿತ್ರದಲ್ಲಿ ಪುಟ್ಟಣ್ಣ ಅವರ ಹಿಂದಿನ ಚಿತ್ರಗಳಿಗಿಂತ ನಟ ನಟಿಯರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ. ಕಥೆಗೆ ಅದು ಪೂರಕವಾಗಿದೆ ಕೂಡ. ಜೊತೆಯಲ್ಲಿ ಈ ದೃಶ್ಯ.. ಅಥವಾ ಈ ಪಾತ್ರ ಬೇಕಿಲ್ಲ ಅನ್ನುವ  ಹಾಗೆ ಇಲ್ಲ. ಎಲ್ಲವೂ ಎಲ್ಲಾ ಪಾತ್ರವೂ ರಾಮಾಚಾರಿಯ ಜೀವನದ ಏಳು ಬೀಳುಗಳನ್ನು ಬಿಂಬಿಸುತ್ತವೆ, ಜೊತೆಯಲ್ಲಿ ಅವನ ಪಾತ್ರಕ್ಕೆ ಒಂದು ನಿರ್ಧಿಷ್ಟ ತಿರುವು ಕೊಡಲು ಸಹಕರಿಸುತ್ತವೆ. 

ರಾಘವೇಂದ್ರ ರಾವ್ ( ರಾಮಾಚಾರಿಯ ತಂದೆಯ ಪಾತ್ರ)
ನಾ ನಿನ್ನ ಮಗ ಎಂದು ಒಂದು ಒಳ್ಳೆಯ ಮಾತು ಆಡಿದ್ದೀರ ಎನ್ನುವ ಪ್ರಶ್ನೆಗೆ.. ಅವರು ಹೇಳುವ ಮಾತು "ನೀ ನನ್ನ ಮಗ ಅಂತ ನನಗೆ ಹೆಸರು ತರುವ ಒಂದು ಒಳ್ಳೆ ಕೆಲಸ ಮಾಡಿದ್ದೀಯ". 
ಇಡಿ ಚಿತ್ರದುದ್ದಕ್ಕೂ ತಂದೆಯ ಪಾತ್ರದಲ್ಲಿ ರಾಮಾಚಾರಿಯ ರೋಷಕ್ಕೆ ಸುರಿವ ತುಪ್ಪವಾಗೆ ಬರುತ್ತಾರೆ. ರಾಮಾಚಾರಿ ಕೆಲಸಕ್ಕೆ ಸೇರಿಕೊಂಡು ಮನೆಗೆ ಅಷ್ಟೋ ಇಷ್ಟೋ ಸಹಾಯ ಮಾಡಲು ಶುರುವಾದಾಗ ಮೆಚ್ಚುಗೆ ಸೂಸುವ ಇವರು.. ತಕ್ಷಣದಲ್ಲೇ ಅವನು ಮಾರ್ಗರೆಟ್ ಜೊತೆಯಲ್ಲಿದ್ದಾನೆ ಎಂದು ಗೊತ್ತಾದಾಗ.. "ನನಗೆ ಮಗನಿಗಿಂತ ಮಠದ ತೀರ್ಥ ಮುಖ್ಯ" "ಕಿರಿಸ್ತಾನದ ಹುಡುಗಿಯನ್ನು ನಾ ಸೊಸೆ ಮಾಡಿಕೊಳ್ಳಲಾರೆ" ಎಂದು ಹೇಳುವ ಮೂಲಕ ರಾಮಾಚಾರಿಯ ಬದುಕಿಗೆ ಮಂಗಳ ಹಾಡಲು ನಿಲ್ಲುತ್ತಾರೆ. ತಂದೆಯ ತೊಳಲಾಟ, ಹಠ ಎರಡನ್ನು ಅಚ್ಚುಕಟ್ಟಾಗಿ ಅಭಿನಯಿಸಿದ್ದಾರೆ.  

ಜಯಶ್ರೀ - (ರಾಮಾಚಾರಿಯ ಅಮ್ಮ)
ಮಗನ ಮೇಲಿನ ವಾತ್ಸಲ್ಯ, ತನ್ನ ಮಗನ ಮೇಲೆ ತನ್ನ ಪತಿರಾಯ ತೋರುವ ತಿರಸ್ಕಾರ ಇವುಗಳ ನಡುವೆ ತೊಳಲಾಡುವ ಪಾತ್ರದ ಅಭಿನಯ ಸುಂದರ. "ಓದಿ ಪರೀಕ್ಷೆಯಲ್ಲಿ ಪಾಸಾಗಿ ಕೆಲಸಕ್ಕೆ ಸೇರಿ ನನಗೆ ಒಂದು ಜರತಾರಿ ಸೀರೆಯನ್ನು ತಂದು ಕೊಡುತ್ತಾನೆ" ಎಂದು ಅಂದುಕೊಂಡಿದ್ದೆ ಎನ್ನುವಾಗ ಮಾತೃ ಪ್ರೇಮ ಹರಡಿಕೊಂಡಿದೆ. ಇವರು ಕೂಡ ಕಿರಿಸ್ತಾನದ ಹುಡುಗಿಯನ್ನುಸೊಸೆಯಾಗಿ ಒಪ್ಪಿಕೊಳ್ಳಲಾರೆ ಎಂದು ಹೇಳುವ ಮೂಲಕ ತಮ್ಮ ಮಗನ ಬದುಕಿಗೆ ಮುಳ್ಳಾಗುತ್ತಾರೆ. 

ಲೋಕನಾಥ - (ಕಾಲೇಜಿನ ಪ್ರಾಂಶುಪಾಲರು)
ವಿದ್ಯೆ ತಲೆಗೆ ಹತ್ತದೆ ಮನೆಯವರ ಒತ್ತಾಯಕ್ಕೆ ಪಾಸಾಗಲೇ ಬೇಕು ಎಂದು ಚೀಟಿಯನ್ನು ಇಟ್ಟುಕೊಂಡು ಬರೆಯುತ್ತಿದ್ದ ರಾಮಾಚಾರಿಯನ್ನು ಹಿಡಿದು ಡಿಬಾರ್ ಮಾಡುವ ಈ ಪಾತ್ರ.. ಉರಿಯುವ ಬೆಂಕಿಗೆ ತುಪ್ಪ ಹಾಕುತ್ತಾರೆ. ಆ ಸೇಡಿಗೆ ರಾಮಾಚಾರಿ ಇವರನ್ನು ಕಂಬಕ್ಕೆ ಕಟ್ಟಿ ತಮ್ಮ ಕೋಪವನ್ನು ತೀರಿಸಿಕೊಳ್ಳುತ್ತಾರೆ. ಚಿಕ್ಕ ಪಾತ್ರವಾದರೂ ರಾಮಾಚಾರಿಯ ಜೀವನಕ್ಕೆ ಒಂದು ತಿರುವು ಕೊಡುವಲ್ಲಿ ಮಹತ್ವ ಪಾತ್ರವಹಿಸುತ್ತಾರೆ. ಮಾರ್ಗರೆಟ್ ಇವರ ಬಳಿ ದೂರು ಕೊಟ್ಟಾಗ ಮೊದಲಿಗೆ ಸಿಡಿದು ಬೀಳುವ ನಂತರ ತಂಪಾಗುತ್ತಾರೆ. ಆದರೆ ಅಷ್ಟೊತ್ತಿಗೆ ರಾಮಾಚಾರಿಯ ದ್ವೇಷ ರೋಷದ ಊರಿಗೆ ಉರುವಲು ಹಾಕಿ ಬಿಟ್ಟಿರುತಾರೆ. 

ಲೀಲಾವತಿ - (ರಾಮಾಚಾರಿಗೆ ಮಾತೃ ವಾತ್ಸಲ್ಯ ತೋರುವ ಸಾಕುತಾಯಿ)
ಮಕ್ಕಳಿಲ್ಲದ ಈ ಪಾತ್ರ ರಾಮಾಚಾರಿಯನ್ನು ಮಗನಿಗಿಂತ ಹೆಚ್ಚು ಪ್ರೀತಿ ತೋರಿಸುತ್ತಾರೆ. ಅವನ ಪ್ರತಿ ಏಳು ಬೀಳುಗಳನ್ನು ತಾಯಿ ಹೃದಯದಿಂದ ಸಂತೈಸುವ ಈ ಪಾತ್ರ.. "ಈ ದಡ್ಡ ಓದಿರುವ ವಿದ್ಯೆಗೆ ಕಲೆಕ್ಟರ್ ಕೆಲಸ ಎಲ್ಲಿ ಸಿಕ್ಕುತ್ತೆ. ಬಸ್ ಸ್ಟಾಂಡ್, ಹೋಟೆಲ್ ನಲ್ಲಿ ಕೂಲಿ ಕೆಲಸ" ಕೊಡಿಸಿ ಎನ್ನುವಾಗ ಹೃದಯವೇ ಹೊರ ಬಂದಂತೆ ಆಗುತ್ತದೆ. ಪ್ರತಿ ಸಂಭಾಷಣೆಗೂ "ದೇವ್ರೇ ದೇವ್ರೇ" ಎನ್ನುತ್ತಾ ಆ ಸಾಕು ತಾಯಿಯ ತಳಮಳ, ಪ್ರೀತಿ, ಮಮತೆ ಹೊರ ಹೊಮ್ಮುವ ಪಾತ್ರ ಒಂದು ರೀತಿಯಲ್ಲಿ ಉರಿಯುವ ರಾಮಾಚಾರಿಯ ಹೃದಯಕ್ಕೆ ತಂಪನ್ನು ಎರೆಯುತ್ತದೆ.  ಅಂತಿಮ ದೃಶ್ಯಗಳಲ್ಲಿ ರಾಮಾಚಾರಿ ಮಾರ್ಗರೆಟ್ ಜೊತೆಯಲ್ಲಿರುವುದನ್ನು ಇವರೇ ನೋಡಿ.. ಮಾರ್ಗರೆಟ್ ಅಮ್ಮನ ಮನೆಯ ಮುಂದೆ ಹಾದಿ ರಂಪ ಬೀದಿ ರಂಪ ಮಾಡಿ ಈ ಸಮಸ್ಯೆ ಬಗೆಹರಿಯುತ್ತೇನೋ ಅನ್ನುವಂಥ ಸಮಸ್ಯೆಯನ್ನು ಕಗ್ಗಂಟಾಗಿ ಮಾಡಿಬಿಡುತ್ತಾರೆ.  ಕೆಲವೊಮ್ಮೆ ಅತಿ ಪ್ರೀತಿ ವಿಶ್ವಾಸ ಮುಳ್ಲಾಗುತ್ತೇನೋ ಎನ್ನುವ ಆತಂಕ ಹೊಮ್ಮಿಸುತ್ತದೆ. 

ಎಂ ಪಿ ಶಂಕರ್ - ಗರಡಿ ಉಸ್ತಾದ್ 
ಪ್ರಾಯಶಃ ಈ ಪಾತ್ರ ಚಿತ್ರದ ದಿಕ್ಕನ್ನು ಬದಲಿಸುತ್ತದೆ ಎನ್ನಿಸುತ್ತದೆ. ಪರೀಕ್ಷೆಯಲ್ಲಿ ನಪಾಸಾದ ರಾಮಾಚಾರಿಗೆ ಊರಿನ ಸಾಹುಕಾರರ ಬಳಿ ಕೆಲಸ ಕೊಡಿಸುತ್ತಾರೆ. ಅವರ ಜೊತೆಯಲ್ಲಿ ಹೋದಾಗ ಅವನಿಗೆ ಅಲಮೇಲುವಿನ ಜೀವನದ ದುರ್ಗತಿ ಗೊತ್ತಾಗುತ್ತದೆ. ಪೈಲ್ವಾನರ ಗತ್ತು, ನಡೆ, ಮೀಸೆ, ವೇಷಭೂಷಣ, ಎಲ್ಲವೂ ಸೊಗಸಾಗಿದೆ. ಇವ ನಮ್ಮ ಗರಡಿ ಹುಡುಗ ಎಂದು ಎದೆ ತಟ್ಟಿ ಹೇಳಿಕೊಳ್ಳುವ ಇವರು ಜಲೀಲ ರಾಮಾಚಾರಿಯ ಹೊಡೆದಾಟದ ನಂತರ "ನಾವು ನೀವು ಅಣ್ಣ ತಮ್ಮಂದಿರು ಎಂದು ಬಾಳುವಾಗ ಇಂಥಹ ಮಕ್ಕಳು ಹಾಳುಮಾಡುತ್ತವೆ" ಎನ್ನುವಾಗ ಹೌದು ಧರ್ಮ ಜಾತಿ ಎಂದಿಗೂ ಬಡಿದಾಡಿ ಎಂದು ಹೇಳುವುದಿಲ್ಲ ಬದಲಿಗೆ ಅದನ್ನು ಪಾಲಿಸದ ಕೆಲವು ಕಿಡಿಗೇಡಿಗಳಿಂದ ಊರು ಹಾಳಾಗುತ್ತದೆ. ಆಹಾ ಎಂಥಹ ಮಾತು. ರಾಮಾಚಾರಿ ಚಿತ್ರದಲ್ಲಿ ಅತಿ ಗೌರವಿಸುವ ಎರಡು ಪಾತ್ರಗಳಲ್ಲಿ ಇವರು ಒಬ್ಬರು. 


ರಾಮಚಂದ್ರ ಶಾಸ್ತ್ರಿ - ಪ್ರತಿಮಾ ದೇವಿ - (ಅಲಮೇಲು ಅಪ್ಪ ಅಮ್ಮ)
ರಾಮಾಚಾರಿಯನ್ನು ಪೋಲಿ ಪುಂಡ ಎಂದೇ ಮಾತಾಡಿಸುವ ಇವರು.. ತಮ್ಮ ಮಗಳು ಅವನಿಗೆ ಹೃದಯ ಕೊಟ್ಟಿದ್ದಾಳೆ ಎನ್ನುವಾಗ ಇವರಿಬ್ಬರ ಅಭಿನಯ ಸೂಪರ್. ಆ ಪೋಲಿಗೆ ಮಗಳನ್ನು ಕೊಡುವ ಬದಲು ಹಾಳು ಬಾವಿಗೆ ದೂಡುತ್ತೇನೆ ಎನ್ನುವ ಮನಸ್ಥಿತಿಯನ್ನು ಇಟ್ಟುಕೊಂಡ ಇವರಿಬ್ಬರೂ ಯಾವುದೇ ಕಾರಣದಲ್ಲೂ ಬಗ್ಗುವುದಿಲ್ಲ. ಸಮಾಜಕ್ಕೆ ಹೆದರಿಕೊಂಡೇ ಬಾಳಬೇಕು ಎನ್ನುವ ಮಾತು ಎಷ್ಟು ನಿಜ. ಗಡಿಬಿಡಿಯಲ್ಲಿ ತೆಗೆದುಕೊಳ್ಳುವ ನಿರ್ಧಾರ ರಾಮಾಚಾರಿಯ ಜೀವನನ್ನಷ್ಟೇ ಅಲ್ಲಾ ಅಲಮೇಲು ಜೀವನವನ್ನು ತಲೆಬುಡ ಮಾಡಿಬಿಡುತ್ತದೆ. ಈ ನಿರ್ಧಾರವೇ ಚಿತ್ರಕ್ಕೆ ಅನೇಕ  ತಿರುವು ಕೊಡುತ್ತದೆ. "ಹೋಗಿ ಹೋಗಿ  ಮೇಷ್ಟ್ರೇ  ನಿಮಗೇನು ಗೊತ್ತು ಹೆತ್ತವರ ಸಂಕಟ" ಮನಕಲಕುವ ಮಾತುಗಳು. 

ಶುಭ - ಮಾರ್ಗರೆಟ್ ಪಾತ್ರ 
ಸಿರಿತನದ ಗತ್ತು, ಸುಂದರಿ ಎನ್ನುವ ಹಮ್ಮು ಹೊಂದಿರುವ ಈ ಪಾತ್ರ ಕಾಲೇಜಿನಲ್ಲಿ ತನ್ನ ರೂಪಕ್ಕೆ ಮರುಳಾಗುತ್ತಾರೆ ಎನ್ನುವ ಧೋರಣೆ ಹೊಂದಿರುತ್ತಾಳೆ. ಅದಕ್ಕೆ  ತಕ್ಕಂತೆ ಕೆಲ ಹುಡುಗರು ಇವಳ ಮುಂದೆ ಹಲ್ಲುಕಿರಿಯುತ್ತಾ ನಿಂತಾಗ ಅವರನ್ನು ಮಟ್ಟ ಹಾಕಲು ರಾಮಾಚಾರಿಯನ್ನು ಬಳಸಿಕೊಳ್ಳುತ್ತಾರೆ. ಇದರಿಂದ ಮಾರ್ಗರೆಟ್ ಮತ್ತು ರಾಮಾಚಾರಿಯ ಮಧ್ಯೆ ಜಗಳ ಕದನವಾಗಿ ಹಠವಾದಿಯಾದ ರಾಮಾಚಾರಿಯ ಅವಳ ಮನೆಯಲ್ಲಿ ಗದ್ದಲವೆಬ್ಬಿಸುತ್ತಾನೆ. ನಂತರ ಕಾಲೇಜಿನಲ್ಲಿ ದೂರು.. ಕ್ಷಮಾಪಣೆ ಎಲ್ಲಾ ನಡೆಯುತ್ತದೆ. ಆದರೆ ಅಷ್ಟರಲ್ಲಿಯೇ ಮೊದಲೇ ಪುಂಡ ಎಂಬ ಬಿರುದಾಂಕಿತ ರಾಮಾಚಾರಿಯ ಎದೆಯಲ್ಲಿ ಬಂಧಿಸಲಾಗದ ಉರಿ ಶುರುವಾಗಿರುತ್ತದೆ. ಈ ಪಾತ್ರ ಚಿತ್ರಕ್ಕೆ ಒಂದು ನಿರ್ಧಿಷ್ಟ ತಿರುವು ಕೊಡುತ್ತದೆ. ಜೊತೆಯಲ್ಲಿ ರಾಮಾಚಾರಿಯ ಜೀವನದಲ್ಲಿ ಬಿರುಗಾಳಿ ಎಬ್ಬಿಸಿರುತ್ತಾಳೆ. 

ಧೀರೇಂದ್ರ ಗೋಪಾಲ್ -  ತುಕಾರಾಂ 
ತನ್ನ ಗಡುಸು ರಾಗವಾದ ಸಂಭಾಷಣೆಗಳಿಂದಲೇ ಪ್ರಸಿದ್ಧಿಗೆ ಬಂದ ಈ ನಟ.. ಈ ಚಿತ್ರದಲ್ಲಿ ಚಿಕ್ಕ ಚೊಕ್ಕ ಪರಿಣಾಮಕಾರಿಯಾದ ಪಾತ್ರ ಮಾಡಿದ್ದಾರೆ. ರಾಮಾಚಾರಿ-ಮಾರ್ಗರೆಟ್ ಪಾತ್ರಗಳ ಮಧ್ಯೆ ಉರಿ ಎಬ್ಬಿಸುವ, ಮತ್ತೆ ಇದಕ್ಕೆ ಇನ್ನಷ್ಟು ಮಸಾಲೆ ಬೆರೆಸಿ ರಾಮಾಚಾರಿಯ ಜೀವನಕ್ಕೆ ಹೊಗೆ ಎಬ್ಬಿಸುವ ಕೆಲಸ ಮಾಡುತ್ತಾರೆ. 

ಎಂ ಎನ್ ಲಕ್ಷ್ಮೀದೇವಿ - ಮಾರ್ಗರೆಟ್ ಅಮ್ಮ 
ಜೀವನದಲ್ಲಿ ಹಣ ಹಣ ಹಣ ಹಣವೇ ಮುಖ್ಯ ಎನ್ನುವ ಈ ಪಾತ್ರ.. ಮಗಳನ್ನು ಮುಂದೆ ಇಟ್ಟುಕೊಂಡು ಜೀವನವನ್ನು ಅನುಭವಿಸಬೇಕು ಎನ್ನುವ ಸಿದ್ಧಾಂತ ಇರುವ ಈಕೆ.. ರಾಮಾಚಾರಿಯನ್ನು ಯಾವುದೇ ಕಾರಣಕ್ಕೂ ಒಪ್ಪಿಕೊಳ್ಳಲಾರೆ ಎನ್ನುತ್ತಾಳೆ. ಏನಾದರೂ ಮದುವೆ ಆದ್ರೆ.. ಮಾರ್ಗರೆಟ್ ಗೆ ವಿಷ ಕೊಡಿಸಿ ರಾಮಾಚಾರಿಯೇ ಕೊಂದು ಹಾಕಿದ ಎಂದು ಹೇಳಿ ಅವನನ್ನು ಕೂನಿ ಮಾಡಿಸುತ್ತೇನೆ ಎನ್ನುತ್ತಾಳೆ. ಈ ಹಠ ಮಾರ್ಗರೆಟ್ ಅಲ್ಲೂ ಇರುವುದರಿಂದ ಅವನ ಬದುಕಿಗೆ ಮತ್ತಷ್ಟು ಮಾರಕವಾಗಿಬಿಡುತ್ತಾರೆ. 

ವಜ್ರಮುನಿ, ರಂಗ, ಮತ್ತು ಇನ್ನೋರ್ವ ಸಾಹುಕಾರ 
ಊರಿನ ಸಾಹುಕಾರರಾದ ಇವರು ಮಾಡುವ ಕೆಟ್ಟ ಕೆಲಸಗಳಿಗೆ ಹೆಸರಾಗಿರುತ್ತಾರೆ. ರಾಮಾಚಾರಿಯನ್ನು ಬೆಂಗಳೂರಿಗೆ ಕರೆದೊಯ್ಯುವ ಇವರು ಚಿತ್ರಕ್ಕೆ ಒಂದು ಬಿರುಕು ಒದಗಿಸುತ್ತಾರೆ. ಅಲ್ಲಿಯೇ ಅಲಮೇಲು ಕಾಣಸಿಗುತ್ತಾಳೆ ವ್ಯೆಶ್ಯಯ ರೂಪದಲ್ಲಿ. ರಾಮಾಚಾರಿ ಇಡಿ ಚಿತ್ರದಲ್ಲಿ ಕಣ್ಣೀರಲ್ಲಿ ಕರಗುವ ದೃಶ್ಯಕ್ಕೆ ಇವರೇ ಕಾರಣಗುತ್ತಾರೆ 

ಶಕ್ತಿ ಪ್ರಸಾದ್ - ನಾಯ್ಡು ಅಂಕಲ್ 
ಮಾರ್ಗರೆಟ್ ಅಮ್ಮನಿಗೆ ಒಂದು ವಿಚಿತ್ರ ರೀತಿಯ ಸಂಬಂಧ ಹೊಂದಿದ ವ್ಯಕ್ತಿಯ ಪಾತ್ರ ಇದು. ಮಾರ್ಗರೆಟ್ ಹಾದಿ ತಪ್ಪಿದ್ದಾಳೆ ಎನ್ನುವ ಅವಳ ಅಮ್ಮನ ಆರೋಪಕ್ಕೆ ಮಣಿದು ರಾಮಾಚಾರಿಗೆ ಬುದ್ದಿ ಕಲಿಸೋಕೇ ಬಂದು ಕಡೆಗೆ ಅವರಿಬ್ಬರನ್ನು ಒಂದು ಮಾಡುತ್ತೇನೆ ಎಂದು ಹೇಳಿ ಹೋಗುತ್ತಾನೆ. ಇದು ಒಂದು ಚಿಕ್ಕ ಪಾತ್ರ. ಮಾರ್ಗರೆಟ್ ಗೆ ಧೈರ್ಯ ತುಂಬಲು ಬಂದಂಥಹ ಪಾತ್ರ ಎನ್ನಿಸುತ್ತದೆ. 

ಇನ್ನೂ ಇಡಿ ಚಿತ್ರಕ್ಕೆ ನಾಲ್ಕು ದಿಕ್ಕುಗಳು ಈ ಕೆಳಕಂಡ ನಾಲ್ಕು ಪಾತ್ರಗಳು 

ಅಂಬರೀಶ್ - ಜಲೀಲ 
ಅಲಮೇಲುವನ್ನು ರೇಗಿಸುತ್ತಾ ಅವಳನ್ನು ಒಲಿಸಿಕೊಳ್ಳಲು ಬರುವ ಈ ಪಾತ್ರ ಎರಡೇ ದೃಶ್ಯದಲ್ಲಿ ಬಂದು ಹೋಗುತ್ತಾರೆ. ಆದರೆ ಈ ಎರಡು ದೃಶ್ಯ ಚಿತ್ರದ ಓಟವನ್ನೇ ಬದಲಿಸಿಬಿಡುತ್ತದೆ. ಇವನನ್ನು ಮಟ್ಟ ಹಾಕಲು ರಾಮಾಚಾರಿ ಬರುತ್ತಾನೆ ಇದರ ಹಿನ್ನೆಲೆ ಜಲೀಲನಿಗೆ ಬುದ್ದಿ ಕಲಿಸಿದರೆ ಅಲಮೇಲು ನಿನಗೆ ಎನ್ನುವ ಪಂಥ ಇರುತ್ತದೆ. ಇದೆ ಈ ಚಿತ್ರಕ್ಕೆ ತಿರುವು. 

ಶಿವರಾಂ - ಸ್ಪೆಷಾಲಿಟಿ ಶಿವರಾಂ - ವರದ 
ಇದೊಂದು ವಿಶೇಷ ಪಾತ್ರ. ಜೀವನದಲ್ಲಿ ತಮಾಷೆಯೇ ಮುಖ್ಯ.. ಆ ಸಮಯಕ್ಕೆ ಏನು ಬೇಕೋ ಅಷ್ಟೇ.. ಮುಂದಾಲೋಚನೆ ಇಲ್ಲದೆ ಮಾತಾಡುವ ಪಾತ್ರ. ಪ್ರತಿಮಾತಿಗೂ ಸ್ಪೆಷಾಲಿಟಿ ಸೇರಿಸುವ ಸಂಭಾಷಣೆಯಲ್ಲಿ ಮುಂಚುತ್ತಾರೆ. ಸುಮ್ಮನಿದ್ದ ರಾಮಾಚಾರಿಗೆ ಅಲಮೇಲುವಿನ ಬಗ್ಗೆ ಆಸೆ ಹುಟ್ಟಿಸಿ ಕಡೆಗೆ ಅವನೇ ಆ ಮದುವೆಗೆ ಕಲ್ಲು ಹಾಕಿ ತನ್ನ ತಂಗಿಯ ಜೀವನದ ಅವನತಿಗೆ ಕಾರಣವಾಗುತ್ತಾನೆ. 

ವಿಷ್ಣು - ರಾಮಾಚಾರಿ
ಹಿಂದಿನ ಚಿತ್ರಗಳ ತನಕ ಹೆಣ್ಣು ಮಕ್ಕಳ  ಮನಸ್ಸಿನ ಸೂಕ್ಷಮತೆ ಬಗ್ಗೆ ಚಿತ್ರಗಳನ್ನು ಮಾಡಿದ್ದ ಪುಟ್ಟಣ್ಣ ಕಣಗಾಲ್.. ಅಚಾನಕ್ ಪಥವನ್ನು ಹೊರಳಿಸಿ ಒಂದು ಬೆಂಕಿ ಚಂಡನ್ನೇ ಹೊರ ತರುತ್ತಾರೆ. ಅದಕ್ಕೆ ಬೇಕಿದ್ದ ಎಲ್ಲಾ ಲಕ್ಷಣಗಳನ್ನು ವಿಷ್ಣು ಮೈಮೇಲೆ ಆವಾಹಿಸಿಕೊಂಡು ಅಭಿನಯಿಸಿದ್ದಾರೆ. ಆ ರೋಷದ ಉಕ್ಕುವ ಕಣ್ಣುಗಳು, ಮಾತಿನ ಗಡುಸು ಹೊಂದಿಕೊಂಡಿವೆ. ಇಡಿ ಚಿತ್ರವನ್ನು ತನ್ನ ಅಭಿನಯದ ಮೇಲೆ ಹೊತ್ತು ನಿಲ್ಲುವ ಈ ಪಾತ್ರ ಕೆಲವೊಮ್ಮೆ ಮರುಕ ಹುಟ್ಟಿಸುತ್ತದೆ, ನಗೆ ಉಕ್ಕಿಸುತ್ತದೆ, ಪ್ರೀತಿ ಹುಟ್ಟಿಸುತ್ತದೆ, ದ್ವೇಷ ರೋಷ ಅಂದ್ರೆ ರಾಮಾಚಾರಿ ಎನ್ನುವ ಮಟ್ಟಕ್ಕೆ ತಲುಪಿಸುತ್ತದೆ. 

ಮೇಲೆ ಹೇಳಿದ ಎಲ್ಲಾ ಪಾತ್ರಗಳು ತಮಗೆ ಬೇಕಾದ ರೀತಿಯಲ್ಲಿ ರಾಮಾಚಾರಿಯ ಜೀವನದಲ್ಲಿ ಹೆಜ್ಜೆ ಇಟ್ಟು ಅವನ ಜೀವನದ ಸರೋವರದಲ್ಲಿ ಅಲೆಗಳನ್ನು ಎಬ್ಬಿಸಿ ತಿಳಿ ನೀರನ್ನು ಕದಡಿಬಿಡುತ್ತಾರೆ. 

ವಿಧಿಯ ಆಟದ ಶಿಶು ಅನ್ನುವಂತೆ ಎಲ್ಲರಿಗೂ ಬೇಡ ವ್ಯಕ್ತಿಯಾಗಿ ಪ್ರೀತಿಸುವ ಮನಸ್ಸಿನ ರಾಜನಾಗಿ ಮೆರೆಯುವ ಈ ಪಾತ್ರ ವಿಷ್ಣು ಅವರ ಅಭಿನಯ ಪ್ರಪಂಚದಲ್ಲಿ ಅತ್ಯುತ್ತಮ ಪಟ್ಟ ಪಡೆಯುತ್ತದೆ. 

ಅಲ್ಲಿಯ ತನಕ ಈ ಮಟ್ಟದಲ್ಲಿ ಗುರುಗುಟ್ಟುವ, ಸಿಡಿಯುವ, ಉರಿಯುವ ನಾಯಕ ಬಂದಿರಲಿಲ್ಲ ಬೆಳ್ಳಿ ಪರದೆಯಲ್ಲಿ. ಆ ಪಾತ್ರವನ್ನು ಸಾಕ್ಷಾತ್ಕರಿಸಿದವರು ವಿಷ್ಣು. 
ಚಿತ್ರ ಕೃಪೆ - ಅಂತರ್ಜಾಲ 

ಅಶ್ವತ್ - ಚಾಮಯ್ಯ ಮೇಷ್ಟ್ರು
ಗುರು - ತಂದೆ - ಸ್ನೇಹಿತ ಈ ಮೂರು ಸ್ಥಾನಗಳನ್ನು ಕಲಸಿ, ಬೆರೆಸಿ ಪಾಕ ಹಾಕಿದ ಪಾತ್ರ ಇದು. ಈ ಪಾತ್ರಕ್ಕೆ ಅಶ್ವತ್ ಅಭಿನಯಿಸಿಲ್ಲ ಬದಲಿಗೆ ಅವರೇ ಚಾಮಯ್ಯ ಮೇಷ್ಟ್ರು. 

"ಆ ನಾಗರಹಾವಿಗೆ ನಾನೇ ಗರುಡ ಮಚ್ಚೆ"

"ನನ್ನ ಶಿಷ್ಯ ದೊಡ್ಡ ವ್ಯಕ್ತಿ ದೊಡ್ಡ ವ್ಯಕ್ತಿ"

"ರಾಮಾಚಾರಿಯಂಥಹ ಉರಿಯುವ ಬೆಂಕಿಗೆ ಕೋಪದ ಕಾದೆಣ್ಣೆ ಹಾಕಬೇಡಿ"

"ನಿನಗೆ ಧರ್ಮರಾಯ ಲಾಂಚನವಾಗಬೇಕೆ ಹೊರತು ದುರ್ಯೋಧನ ಅಲ್ಲ"

"ನಿಮಗೆ ಗೊತ್ತಿಲ್ಲ ನಾ ಹಾಕಿದ ಗೆರೆಯನ್ನು ರಾಮಾಚಾರಿ ಎಂದು ದಾಟುವುದಿಲ್ಲ"

ಇವೆಲ್ಲಾ ಕೆಲವು ತುಣುಕುಗಳು..

ಮನದಾಳಕ್ಕೆ ಮೆಟ್ಟಿಲು ಇಳಿದು ಹೋಗೊಲ್ಲಾ ಇವರ ಪಾತ್ರ.. ಒಂದೇ ಸಾರಿ ಮನದ ಸರೋವರಕ್ಕೆ ಧುಮುಕಿಯೇ ಬಿಡುತ್ತಾರೆ. 
(ಈ ಪಾತ್ರದ ಬಗ್ಗೆ ಬಹಳ ಬರೆಯಲು ಹೋಗಿಲ್ಲ.. ಕಾರಣ ಚಿತ್ರ ಜಗತ್ತಿನ ಪಾತ್ರಗಳ ಬಗ್ಗೆ ಬರೆಯುವೆ.. ಅಲ್ಲಿ ಮಿನುಗುತ್ತಾರೆ ನಮ್ಮ ಹೆಮ್ಮೆಯ ಚಾಮಯ್ಯ ಮೇಷ್ಟ್ರು!.  ನಾ ತುಂಬಾ ಇಷ್ಟ ಪಡುವ ಕೆ ಎಸ್ ಅಶ್ವತ್ ಅವರ ಚಿತ್ರ ಪ್ರಪಂಚದ ಪಾತ್ರಗಳ ಬಗ್ಗೆ ಮುಂದೆ ಬರೆಯುವೆ.. ಜೊತೆಯಲ್ಲಿ ಚಾಮಯ್ಯ ಮೇಷ್ಟ್ರು ಪಾತ್ರವೇ ಮೊದಲು)

ಚಿತ್ರ ಕೃಪೆ - ಅಂತರ್ಜಾಲ 
ಅಶ್ವತ್ ಅವರ ಅಭಿನಯಕ್ಕೆ ಈ ಚಿತ್ರ ಲೇಖನ ಅರ್ಪಿತ 

*************************************
ನಾಗರಹಾವು ಚಿತ್ರ ತುಂಬಾ ಕಾಡುವುದು ಚಾಮಯ್ಯ ಮೇಷ್ಟ್ರ ಅಭಿನಯ, ರಾಮಾಚಾರಿಯ ಆಕ್ರೋಶ, ವರದಾ ಪಾತ್ರದ ಸ್ಪೆಷಾಲಿಟಿ, ದುರ್ಗವನ್ನು ಅಚ್ಚುಕಟ್ಟಾಗಿ ತೋರಿಸುವ ರೀತಿ. ಚಿತ್ರದುರ್ಗ ನೋಡಬೇಕೆಂದರೆ ನಾಗರಹಾವು ಚಿತ್ರ ನೋಡಿ ಸಾಕು ಎನ್ನುವಷ್ಟರ ಮಾತಿಗೆ ಪ್ರಸಿದ್ಧಿಯಾಗಿದೆ. 

ಒಂದು ವಸ್ತುವನ್ನು ಜಗತ್ತು ಹೇಗೆಲ್ಲ ನೋಡಬಹುದು, ಮತ್ತು ಹೇಗೆಲ್ಲ ಅದರ ಬೆಳವಣಿಗೆಗೆ ಅಡ್ಡಿ ಅಥವಾ ಸಹಕಾರಿ ಆಗಬಹುದು ಎನ್ನುವ ಒಂದು ಸತ್ವ ಈ ಚಿತ್ರದಲ್ಲಿ ಮೂಡಿ ಬಂದಿದೆ. ವಿವೇಕದ ಲೇಖನಿಗೆ ನಮ್ಮ ಹಣೆಬರಹವನ್ನು ತಿದ್ದುವ ಶಕ್ತಿ ಇಲ್ಲದೆ ಹೋದರು.. ಹಣೆಬರಹದ ದಿಕ್ಕನ್ನು ಇನ್ನಷ್ಟು ತೀಕ್ಷ್ಣಗೊಳಿಸುವ ಶಕ್ತಿ ಇದೆ ಎನ್ನುವ ಮಾತು ನಿಜಕ್ಕೂ ಹೌದು. ಇಲ್ಲಿ ಎಲ್ಲಾ ಪಾತ್ರಗಳು ವಿವೇಕಸಹಿತವಾಗಿ ಯೋಚಿಸಿ.. ಸ್ವಲ್ಪ ತಾಳ್ಮೆಯಿಂದ ವರ್ತಿಸಿದ್ದರೆ ರಾಮಾಚಾರಿಯ ಜೀವನ ಸುಂದರ ಹೂ ಬನವಾಗುತ್ತಿತ್ತು ಅನ್ನಿಸುತ್ತದೆ. 

ಒಂದು ಕಾದಂಬರಿಯನ್ನು ಚಿತ್ರ ಮಾಡುವುದೇ ಸಾಹಸ.. ಮೊದಲೇ ಬಂಧಿತವಾಗಿದ್ದ ಮೂರು ಮೂರು ಕಾದಂಬರಿಗಳನ್ನು ಜೋಡಿಸಿ ಹೊಂದಿಸಿ ಬೆಳ್ಳಿ ತೆರೆಗೆ ಬೇಕಾದ ರೀತಿಯಲ್ಲಿ ಅಳವಡಿಸಿಕೊಂಡು, ಮನೋಜ್ಞ ಸಂಭಾಷಣೆ, ಹಾಡುಗಳು, ಸಂಗೀತ ಸರಿಯಾದ ಹದದಲ್ಲಿ ಬೆರೆಸಿ ಒಂದು ಅನರ್ಘ್ಯ ರತ್ನ ನೀಡಿದ್ದಾರೆ. 

ಚಿತ್ರ ಕೃಪೆ - ಅಂತರ್ಜಾಲ

ಈ ಲೇಖನ ಮಾಲಿಕೆ ಅವರ ಚಿತ್ರಗಳ ಬಗ್ಗೆ ಆದರೂ.. ನಟರ, ತಂತ್ರಜ್ಞರ ಬಗ್ಗೆ ಹೆಚ್ಚು ಹೆಚ್ಚು ಬರೆದಿದ್ದೇನೆ. ಆದರೆ ನಿರ್ದೇಶಕ ಚಿತ್ರದ ಹಡಗಿನ ಕಪ್ತಾನ ಎನ್ನುವ ಮಾತನ್ನು ಕಲ್ಲಿನಲ್ಲಿ ಕೆತ್ತಿ ನಿರೂಪಿಸಿದವರು ಪುಟ್ಟಣ್ಣ ಕಣಗಾಲ್. ಇಡಿ ಪಾತ್ರಗಳನ್ನೂ ತಾವು ಮನದಲ್ಲಿ ಕಟ್ಟಿಕೊಂಡು ಅದಕ್ಕೆ ರೂಪ ಕೊಟ್ಟು ಅಭಿನಯ ಹೇಳಿಕೊಟ್ಟು, ಎಲ್ಲರ ಬಳಿಯೂ ೧೦೦ ಕ್ಕೆ ನೂರು ಶ್ರಮ ತೆಗೆಸಿದ ಈ ಕಪ್ತಾನರಿಗೆ ಲೇಖನಗಳ ಮಾಲಿಕೆಯೇ ನಮ್ಮ ಕೃತಜ್ಞತೆಗಳು, ಧನ್ಯವಾದಗಳು ಮತ್ತು ಅಭಿನಂದನೆಗಳು!!!

6 comments:

  1. ನಿಜವಾಗಲೂ ಸ್ಟಾರ್ ಮೇಕರ್ ಎಂದರೆ ವೀರಸ್ವಾಮಿಯವರು.
    ನಾಗರಹಾವು - ಪುಟ್ಟಣ್ಣ - ತಾರಾಸು ಎಂತಹ ಸಂಗಮವಿದು ಅಲ್ಲವೇ!

    ReplyDelete
  2. Excellent Writeup sir... tumba ishta aytu.. cricket matchnalli replay torisida haage Naagarahaavu cinema drushyagalu patragalu ondondagi kanna munde sulidu hodavu.. great article about a great movie. Dhanyavadagalu

    ReplyDelete
  3. Sri, eshtu patienceinda idanna barediddeera..... bhale bhale......
    scene to scene kanna munde banthu ......
    khushiyaytu odi.........

    ReplyDelete
  4. Man u have commendable hold on the language hat's off.

    ReplyDelete
  5. Srikanth.... FB yallondu movie.

    ReplyDelete
  6. "ಈ ರಾಮಾಚಾರಿನ್ ಕೆಣಕೊ ಗಂಡು ಇನ್ನೂ ಹುಟ್ಟಿಲ್ಲಾ, ಎಂದೆಂದೂ ಹುಟ್ಟೋಲ್ಲಾ" ಎಂಬಾ ನಾಗರ ಹಾವಿನ ಮಾತು ನಿಜ "ಪುಟ್ಟಣ್ಣ ಕಣಗಾಲ್" ತರಹ ಚಿತ್ರ ಮಾಡೋ ಗಂಡು ಇನ್ನೂ ಹುಟ್ಟಿಲ್ಲಾ, ಹಾಗೆ ನಮ್ಮ ಶ್ರೀಕಾಂತ್ ಕೂಡಾ ಹಾಗೆ . ನಿಮ್ಮ ಬರವಣಿಗೆಯ ಅಕ್ಷರಗಳು ಈ ಚಿತ್ರದ ಪ್ರತೀ ಪಾತ್ರವನ್ನೂ ಅಳೆದೂ ತೂಗಿ, ಪಾತ್ರಗಳ ಮಹತ್ವವನ್ನು ಸಾರಿವೆ. ನಾಗರ ಹಾವು ಚಿತ್ರದಲ್ಲಿ , ಲೈಟ್ ಬಾಯ್ , ನಿಂದ ಹಿಡಿದು, ನಿರ್ದೇಶಕ , ಸಂಗೀತ ನಿರ್ದೇಶಕ, ಗೀತ ರಚನೆಕಾರರು, ಗಾಯಕರು, ಪಾತ್ರಧಾರಿಗಳು , ಹಾಗೂ ಇತರ ಎಲ್ಲಾ ತಂಡದವರು ಹೀಗೆ. ಎಲ್ಲರೂ ನಾಯಕರೆ. ಇದರ ಚುಕ್ಕಾಣಿ ಹಿಡಿದು ನಡೆಸಿದ ಪುಟ್ಟಣ್ಣನವರ ಕಾಯಕಕ್ಕೆ, ಅವರ ತಾಂತ್ರಿಕ ಜ್ಞಾನಕ್ಕೆ ಹೆಮ್ಮೆ ಪಡದೆ ಇರಲು ಸಾಧ್ಯವಿಲ್ಲಾ. ಈ ಚಿತ್ರದ ಮೂಲ ಕತೆಗಾರ ತ. ರಾ. ಸು. ಅವರು ಯಾಕೋ ಗೊತ್ತಿಲ್ಲಾ ನಾಗರಹಾವನ್ನು ಕೆರೆ ಹಾವು ಎಂದು ಕರೆದರು, ಆದರೆ ಕನ್ನಡ ಪ್ರೇಕ್ಷಕ ಮಾತ್ರ ಇದನ್ನು ನಾಗರ ಹಾವು ಎಂದು ಒಪ್ಪಿಕೊಂಡು ಬಿಟ್ಟ , ಜೊತೆಗೆ ಈ ಚಿತ್ರ ಹಲವು ಭಾಷೆಗೆ ಮರು ಚಿತ್ರೀಕರಣ ಗೊಂಡು ದಾಖಲೆ ಬರೆಯಿತು. ಶ್ರೀ ಕಾಂತ್ ನೀವು ಒಂದು ತರಹ ರಾಮಾಚಾರಿ ಇದ್ದ ಹಾಗೆ ನಿಮ್ಮನ್ನು ಪುಟ್ಟಣ್ಣನವರ ಚಿತ್ರ ವಿಮರ್ಶೆ ವಿಚಾರದಲ್ಲಿ, ಹಾಗೂ ನಿಮ್ಮದೇ ಶೈಲಿಯಲ್ಲಿ ಮನಮುಟ್ಟುವಂತೆ ಬರೆಯುವ ಯಾವುದೇ ವಿಚಾರದಲ್ಲಿ ಕೆಣಕಲು ಆಗೋದಿಲ್ಲ. ಪುಟ್ಟಣ್ಣ ಬದುಕಿದ್ದರೆ ಖಂಡಿತಾ ನಿಮ್ಮನ್ನು ಅಭಿಮಾನದಿಂದ ಅಪ್ಪಿಕೊಂಡು ಕೃತಜ್ಞತೆ ಸಲ್ಲಿಸುತ್ತಿದ್ದರು. ಬರಹ ಮುಂದು ವರೆಯಲಿ

    ReplyDelete