Monday, November 24, 2014

ಎಡವಿದರೆ ಕಲ್ಲು ಗುಡ್ಡವೇ.. ಎಡಕಲ್ಲು ಗುಡ್ಡದ ಮೇಲೆ (1973)

ಪುಟ್ಟಣ್ಣ ಯಾಕೆ ಇಷ್ಟ ಆಗ್ತಾರೆ.. ಕಾರಣ ಹುಡುಕುತ್ತಾ ಹೋದ ಹಾಗೆ ಶರಧಿಯಲ್ಲಿ ಕಪ್ಪೆ ಚಿಪ್ಪು ಹುಡುಕಿದ ಹಾಗೆ.. ಒಂದು ಸಿಕ್ಕಾಗ ಇನ್ನೊಂದು ಕಾಣುತ್ತದೆ. ಅರೆ ಇದು ಚೆನ್ನಾಗಿದೆ ಅಂತ ಇನ್ನೊಮ್ಮೆ ಕಣ್ಣರಳಿಸಿದರೆ ಇನ್ನೊಂದು ಸೊಗಸಾಗಿ ಕಾಣುತ್ತದೆ.

ಅವರ ಬೆಳ್ಳಿಮೋಡದಿಂದ ನಾಗರಹಾವು ಚಿತ್ರದವರೆಗೆ ಬರೆದ ನಂತರ ಹಿಂದೆ ತಿರುಗಿ ನೋಡಿದರೆ ಒಂದು ರೀತಿ ಸಂತೃಪ್ತಿ, ಮುಂದೆ  ಆನಿಸಿ ನೋಡಿದರೆ ಇನ್ನೊಂದು ಬಗೆಯ ರತ್ನಗಳು ಹೊಳೆಯುತ್ತಿವೆ.

ಭಾರತಿಸುತ ಅವರ ಸುಧಾ ವಾರಪತ್ರಿಕೆಯ ಸ್ಪರ್ಧೆಯಲ್ಲಿ ಪ್ರಥಮ ಬಹುಮಾನ ಪಡೆದ ಅದೇ ಹೆಸರಿನ ಕಾದಂಬರಿಯನ್ನು ಚಿತ್ರಕಥೆ ಬರೆದು ನಿರ್ದೆಶಿಸಿದ್ದಾರೆ ಪುಟ್ಟಣ್ಣ ಕಣಗಾಲ್.

ಶ್ರೀಕಾಂತ್ & ಶ್ರೀಕಾಂತ್ ಎಂಟರ್ಪ್ರೈಸಸ್ ಲಾಂಛನದಲ್ಲಿ ತಯಾರಾದ ಈ ಚಿತ್ರ ೧೯೭೩  ತೆರೆಯನ್ನು ಅಲಂಕರಿಸಿತು. ಒಂದು ರೀತಿಯ ವಿಚಿತ್ರ ಅನ್ನಿಸುವಷ್ಟು ಕಥೆಗೆ ಹೂರಣ ತುಂಬಿ ನಟಿಸಿದ್ದು ಅಭಿನಯ ಶಾರದೆ ಜಯಂತಿ. ಪ್ರವರ್ಧಮಾನಕ್ಕೆ ಬರುತ್ತಿದ್ದ ಆರತಿ, ಎಡಕಲ್ಲು ಗುಡ್ಡ ಚಂದ್ರಶೇಖರ್ ಎಂದೇ ಖ್ಯಾತರಾಗಿದ್ದ ಚಂದ್ರು, ಶರಪಂಜರ, ನಾಗರಹಾವು ಚಿತ್ರಗಳಲ್ಲಿ ಚಮತ್ಕಾರಿ ಅಭಿನಯ ನೀಡಿ, ಜೊತೆಯಲ್ಲಿ ಗೆಜ್ಜೆ ಪೂಜೆ ಚಿತ್ರವನ್ನು ನಿರ್ಮಿಸಿದ್ದ ಶಿವರಾಂ ಮತ್ತು ಪೋಷಕ ಪಾತ್ರದಲ್ಲಿ ರಂಗ.

ಇಡಿ ಚಿತ್ರದಲ್ಲಿ ಆವರಿಸಿಕೊಂಡಿರುವುದು ಈ ಐದೇ ಮಂದಿ. ಇವರುಗಳನ್ನೇ ಕೇಂದ್ರವಾಗಿತ್ತು ಕೊಂಡು ಎಲ್ಲೂ ಬೇಸರ ತರಿಸದೇ ಚಿತ್ರವನ್ನು ಮಾಡಿ ಗೆದ್ದವರು ಪುಟ್ಟಣ್ಣ ಎಂಬ ಮಾಂತ್ರಿಕ ನಿರ್ದೇಶಕ.

ನರೇಂದ್ರ ಬಾಬು ಅವರ ಸಂಭಾಷಣೆ, ಎಸ್ ವಿ ಶ್ರೀಕಾಂತ್ ಅವರ ಛಾಯಾಗ್ರಹಣ, ಸಂಗೀತ ನಿಧಿ ಎಂ ರಂಗರಾವ್ ಇವರಿಂದ ಕೂಡಿದ ಈ ಚಿತ್ರಕ್ಕೆ ಸೊಗಸಾದ ಹಾಡುಗಳನ್ನು ಬರೆದವರು ಕಣಗಾಲ್ ಪ್ರಭಾಕರ್ ಶಾಸ್ತ್ರೀ, ವಿಜಯನಾರಸಿಂಹ, ಆರ್ ಎನ್ ಜಯಗೋಪಾಲ್, ನರೇಂದ್ರಬಾಬು.  ಹಾಡುಗಳಿಗೆ ದನಿಯಾದವರು ಪಿ ಸುಶೀಲ, ಎಸ್ ಪಿ ಬಾಲಸುಬ್ರಮಣ್ಯಂ, ಎಸ್ ಜಾನಕಿ.

ಈ ಚಿತ್ರ ಮನಸ್ಸೆಳೆಯುವುದು ಈ ಕಾರಣಗಳಿಂದ

೧. ಕಾಮ ಎಂಬ ಅರಿಷಡ್ವರ್ಗದ ಪ್ರಮುಖ  ವೈರಿಯನ್ನು ಕೇಂದ್ರ ಕಥಾ ವಸ್ತುವಾಗಿದ್ದರೂ ಇಡಿ ಪರಿವಾರ ಒಟ್ಟು ಕೂತು ನೋಡಬಹುದಾದ ಚಿತ್ರ ಮಾಡಿದ್ದು
೨. ಜಯಂತಿ ಆಗಲೇ ಪ್ರಸಿದ್ಧ ತಾರೆ ಎಂದು ಹೆಸರು ಮಾಡಿದ್ದರು, ಈ ರೀತಿಯ ಒಂದು ಸಂಕೀರ್ಣ ಪಾತ್ರವನ್ನು ಒಪ್ಪಿ ನಟಿಸಿದ್ದು
೩. ರಂಗ ಅವರ ಚಿತ್ರ ಜೀವನದಲ್ಲಿ ಒಂದು ವಿಭಿನ್ನ ಚಿತ್ರವಾಗಿ ಮೂಡಿ ಬಂದದ್ದು.
೪. ಪುಟ್ಟಣ್ಣ ಅವರು ಮೊದಲಬಾರಿಗೆ ಕರುನಾಡಿನಿಂದ ಒಂದು ಕಾಲನ್ನು ಹೊರಗೆ ಇತ್ತು ಕೇರಳದ ವೈನಾಡಿನಲ್ಲಿರುವ ಎಡಕಲ್ಲು ಗವಿಯಲ್ಲಿ ಕೆಲವು ಸನ್ನಿವೇಶಗಳನ್ನು ಚಿತ್ರಿಸಿದ್ದು.

ಚಿತ್ರದ ಹೆಸರು, ತಾರಾಗಣ, ತಾಂತ್ರಿಕ ವರ್ಗವನ್ನು ತೋರಿಸುವ ಜೊತೆಯಲ್ಲಿ ಅರಿಷಡ್ವರ್ಗಗಳ ಬಗ್ಗೆ ಕಿರು ಮಾತನ್ನು ಹೇಳಿ, ಜೊತೆಯಲ್ಲಿ ಪುರುಷ ಗೊಂಬೆಗಳನ್ನ ಪೂರಕವಾಗಿ ತೋರಿಸಿ ಚಿತ್ರದ ಆರಂಭದಲ್ಲೇ ತಾನು ಹೇಳ ಹೊರಟಿರುವ ಸಂದೇಶವನ್ನು ಸಾರಿ ಸಾರಿ ಹೇಳಿದ್ದಾರೆ.

ಕಾಮತುರಣಾಂ ನಲಜ್ಜಂ ನಭಯಂ ಇನ್ನು ಮೂಲಕ ಚಲನ ಚಿತ್ರ ಆರಂಭವಾಗುತ್ತದೆ.

"ವಿರಹ ನೂರು ನೂರು ತರಹ" ಹಾಡು ಸಾಹಿತ್ಯ, ಸಂಗೀತ ಮತ್ತು ಛಾಯಗ್ರಹಣದಿಂದ ಮನಗೆದ್ದರೆ. ಪಿ ಸುಶೀಲ ಮತ್ತು ಜಯಂತಿ ಪ್ರೇಕ್ಷಕರಿಗೆ ಹೇಳುತ್ತಾರೆ.. ಇರಿ ಸರ್ ನಮ್ಮ ಕಡೆಯೂ ಗಮನಿಸಿ ಅಂತ.
ಅದ್ಭುತ ಗಾಯನ ಸುಶೀಲಮ್ಮ ಅವರದಾದರೆ, ಅದಕ್ಕೆ ಪೈಪೋಟಿ ನೀಡುವಂತೆ ಜಯಂತಿ (ಇರಿ ಸ್ವಲ್ಪ ಸಮಯ ತಡೆದುಕೊಳ್ಳಿ ಲೇಖನದ ಮುಂದಿನ ಭಾಗದಲ್ಲಿ ಜಯಂತಿ ಅವರ ಬಗ್ಗೆ ಬರೆದಿದ್ದೇನೆ) ಅಭಿನಯದ ಮೂಲಕ ತೆರೆದಿಡುತ್ತಾರೆ. ವಿಜಯನಾರಸಿಂಹ ಅಕ್ಷರಶಃ ಪದಗಳ ಗಾರುಡಿಗ. ಭಾವಾಂತರಂಗದಲ್ಲಿ ಅಲ್ಲೋಲ ಕಲ್ಲೋಲಾ ಎನ್ನುವಾಗ ಕೊಳದ ನೀರಲ್ಲಿ ಮೋಡವನ್ನು ತೋರಿಸಿ ನೀರಿನ ಅಲಗಾಡುವಿಕೆಯನ್ನು ಕದಡಿದ ಮನಸ್ಸಿಗೆ ಹೋಲಿಸಿರುವ ಸನ್ನಿವೇಶ ಒಂದು ಅದ್ಭುತ ಸಂಯೋಜನೆ.

ತಮ್ಮ ದೇಹದ ಬಯಕೆಯನ್ನು ತೋಡಿ ಕೊಂಡಾಗ ರಂಗ ಹೇಳುವ ನಿಜಾಂಶ..  ನಂತರ ಉರಿಯುತ್ತಿದ್ದ ಬೆಂಕಿಗೆ ಜಯಂತಿ ನೀರು ತಂದು ಸುರಿಯುವ ದೃಶ್ಯ ಸೂಪರ್.

ಅಡ್ಡ ಬಡ್ದ ಬೈಕ್ ಓಡಿಸುತ್ತಾ ಬರುವ ಚಂದ್ರು ಮೊದಲ ದೃಶ್ಯದಲ್ಲಿಯೇ ಆತನ ಗುಣವನ್ನು ತೋರಿಬಿಡುತ್ತಾರೆ. ರಸ್ತೆಯಲ್ಲಿ ಓಡಿಸದೇ ಸಿಕ್ಕ ಮೈದಾನದಲ್ಲಿ ಇಷ್ಟ ಬಂದಾ ಹಾಗೆ ಓಡಿಸುವ ಮೂಲಕ ತಾನು ಯಾರ ಹಂಗಿಗೂ ಸಿಗದ ಮನುಷ್ಯ ಎಂಬ ತರ್ಕವನ್ನು ತೋರಿಬಿಡುತ್ತಾರೆ. ವಿಚಿತ್ರ ವೇಷಭೂಷಣ, ಮಾತು ಮಾತಿಗೂ "ಇದೆ ಫಸ್ಟ್ ಟೈಮ್" ಎನ್ನುವ ಪದವನ್ನು ಸೇರಿಸೋದು, ಈ ಪಾತ್ರ ಒಂದು ವಿಭಿನ್ನವಾಗಿ ರೂಪುಗೊಳ್ಳಲು ಸಹಾಯ ಮಾಡಿದೆ.

"ಗುಂಡಿನ ಮತ್ತೆ ಗಮ್ಮತ್ತು ಅಳತೆ ಮೀರಿದರೆ ಆಪತ್ತು" ಎಸ್ ಪಿ  ಈ ಹಾಡನ್ನು ಪಕ್ಕ ಕುಡುಕರ ಶೈಲಿಯಲ್ಲಿಯೇ ಹಾಡಿದ್ದಾರೆ. ನರೇಂದ್ರ ಬಾಬು ಅವರ ಸಾಹಿತ್ಯಕ್ಕೆ ಅಚ್ಚುಕಟ್ಟಾದ ನಟನೆ ಶಿವರಾಂ ಅವರದು. ಇವರು ಪ್ರತಿ ಸಂಭಾಷಣೆಯಲ್ಲಿ "ಗಮ್ಮತ್ತು, ಲಿಮಿಟ್ ಎನ್ನುವ ಪದಗಳನ್ನು ಉಪಯೋಗಿಸುತ್ತಲೇ ಹೇಳುವ ಮಾತು "ನಾ ಹೇಳಿದ ಹಾಗೆ ಕೇಳು.. ಆದರೆ ನಾ ಮಾಡಿದಂತೆ ಮಾಡಬೇಡ"..  ಉಪದೇಶ ಯಾರು ಹೇಳುತ್ತಾರೆ ಅನ್ನೊಂದು ಮುಖ್ಯ ಅಲ್ಲಾ ಏನು ಹೇಳುತ್ತಾರೆ ಅನ್ನೊಂದು ಮುಖ್ಯ ಎಂದು ತೋರಿಸುತ್ತಾರೆ.

ಇವರಿಬ್ಬರು ರಂಗ ಅವರ ಮನೆಗೆ ಪರಿಚಯ ಆದ ಮೇಲೆ ಚಿತ್ರ ಶುರುವಾಗುತ್ತೆ.  ದೊಡ್ಡ ದೊಡ್ಡ ಬಂಗಲೆಯಲ್ಲಿ ಒಂಟಿ ತನ.. ,ಸಾಹುಕಾರನನ್ನು ಸಾಹುಕಾರರ ಹಾಗೆ ಮಾಡದೆ ಬಯಕೆಯಲ್ಲಿ ದಟ್ಟ ದರಿದ್ರ ಸ್ಥಿತಿಗೆ ತಳ್ಳುತ್ತದೆ ಅನ್ನುವ ಮಾರ್ಮಿಕ ಸಂದೇಶ . ಎಲ್ಲಾ ಇದೆ ಏನೂ ಇಲ್ಲ ಅನ್ನಿಸುವ ವಿಚಿತ್ರ ಸನ್ನಿವೇಶ.

ಮನೆಯ ಯಜಮಾನನಿಗೆ ಹೇಳದೆ ಮಾಡುವ ಕೆಲಸ ಜೀವನದ ದಾರಿಯನ್ನು  ಹೇಗೆ ತಪ್ಪಿಸುತ್ತದೆ ಎನ್ನುವುದಕ್ಕೆ ಚಂದ್ರು ಜೊತೆಯಲ್ಲಿ ಜಯಂತಿ ಎಡಕ್ಕಲ್ಲು ಗುಡ್ಡಕ್ಕೆ ಹೋಗುತ್ತಾ "ಸಂತೋಷ ಆಹಾ ಸಂಗೀತ" ಹಾಡಿನಲ್ಲಿ ಎಸ್ಪಿ ಮತ್ತು ಪಿ ಸುಶೀಲ ಅವರ ಹಾಡುಗಾರಿಕೆ ಮತ್ತು ವಿಜಯನಾರಸಿಂಹ ಅವರ ಸಾಹಿತ್ಯ ಗಮನ ಸೆಳೆಯುತ್ತದೆ.

ಚುಟುಕಾಗಿ ಎಡಕಲ್ಲು ಗುಡ್ಡವನ್ನು ತೋರಿಸುವ ಈ ಹಾಡಿನಲ್ಲಿ ಮತ್ತು ನಂತರದ ದೃಶ್ಯದಲ್ಲಿ ಸಾವಿರಾರು ವರ್ಷಗಳ ಹಿಂದೆ ಬಂಡೆಗಳಲ್ಲಿನ ಕೆತ್ತನೆ ಗಮನ ಸೆಳೆಯುತ್ತದೆ. ಮಾನವನ ಆದಿ ಕಾಲದಿಂದಲೂ ಈ ಕಾಮ ಎನ್ನುವ ಸಮಸ್ಯೆ ಸಮಸ್ಯೆಯಾಗಿಯೇ ಉಳಿದಿದೆ ಎನ್ನುವ ಮಾತು ನಿಜ ಅನ್ನಿಸುತ್ತದೆ.

ತಪ್ಪು ಹೆಜ್ಜೆ ಇಡಲು ಮುನ್ನುಗುವ ಆ ಕ್ಷಣವನ್ನು ಬಣ್ಣ ಬಣ್ಣಗಳ ಬೆಳಕಿನ ಸಹಾಯದಿಂದ ಬಿಂಬಿತವಾಗುವ ದೃಶ್ಯ ಅಮೋಘ ಕಲ್ಪನೆ. ಇಲ್ಲಿಯೂ ಕೂಡ ಅಶ್ಲೀಲ ಎನ್ನಿಸುವ ದೃಶ್ಯವನ್ನು ನಾಗರೀಕ ಪ್ರಜ್ಞೆಯಿಂದ ಬರಿ ಸಾಂಕೇತಿಕವಾಗಿ ಕಡಲಿನ ಅಲೆಗಳ ಅಬ್ಬರ, ಎಲೆಯಿಂದ ಜಿನುಗುವ ನೀರಿನ ಬಿಂದು ಹೀಗೆ ಸಾಂಕೇತಿಕವಾಗಿ ಚಿತ್ರೀಕರಿಸಿದ್ದಾರೆ.

ಜೀವನದ ಹಾದಿಯಲ್ಲಿ ತಪ್ಪು ಹೆಜ್ಜೆಯನ್ನಿಟ್ಟು ಬಂದ ಮೇಲೆ ತನ್ನ ಗಂಡನಿಗೆ ಆ ವಿಷಯ ಹೇಳಲಾಗದೆ ತೊಳಲಾಡುವ ದೃಶ್ಯವನ್ನು ಕ್ಯಾಮೆರ ನಿಧಾನವಾಗಿ ಓಲಾಡುತ್ತಾ ಜಯಂತಿಯ ಹಿಂದೆ ಹೋಗುವ ರೀತಿ ತೋರಿರುವುದು ಮತ್ತೊಮ್ಮೆ ಪುಟ್ಟಣ್ಣ ಅವರ ಹಿಡಿತ ನಿರ್ದೇಶಕರ ಸ್ಥಾನದ ಮೇಲೆ ಎಷ್ಟು ಉನ್ನತ ಮಟ್ಟದಲ್ಲಿದೆ ಎಂದು ತೋರಿಸುತ್ತದೆ.

ಊರಿನ ಮನೆಯಲ್ಲಿ ಸಂಸಾರದ ವಿಷಯವನ್ನು ರಂಗ ಅವರ ಬಳಿ ನ್ಯಾಯ ತೀರ್ಮಾನ ಮಾಡಲು ಬಂದಾಗ.. ಬಯಕೆಯನ್ನು ತೃಪ್ತಿ ಪಡಿಸದ ಗಂಡಿನ ಬಳಿ ಜೀವನ ಮಾಡುವುದು ವ್ಯರ್ಥ ಎಂದು ಊರಿನ ಜನರೇ ತೀರ್ಮಾನ ತೆಗೆದುಕೊಳ್ಳುತ್ತಾರೆ. ಅಂಥಹ ಸಂದರ್ಭದಲ್ಲಿ ರಂಗ ತನ್ನ ಜೀವನವನ್ನು ತುಲನೆ ಮಾಡಿ.. ಜಯಂತಿ ತನ್ನ ಬಾಳಿನ ದೇವತೆ ಎಂದು ಅವಳ ತಲೆಯ ಮೇಲೆ ಹೂವನ್ನು ಹಾಕುತ್ತಾರೆ.  ತಾನು ನಿಜ ಎಂದು ನಂಬಿದ್ದ ನಂಬಿಕೆಗೆ ಬದ್ಧನಾಗಿ ಇರುವುದು ಮತ್ತು ತನ್ನ ಹೆಂಡತಿ ಹಾದಿ ತಪ್ಪಿರುವುದರ ಬಗ್ಗೆ ಸ್ವಲ್ಪವೂ ಅರಿವಿರದೆ ನಡೆದುಕೊಳ್ಳುವ ಈ ದೃಶ್ಯ ನಂಬಿದ ಸತ್ಯವೆ ಒಳ್ಳೆಯದು ಅನ್ನಿಸುತ್ತದೆ.

ಇವುಗಳ ಗಡಿಬಿಡಿಯ ಮಧ್ಯೆ ಬರುವ ಆರತಿ ಪಾತ್ರ ತುಂಬಾ ವಿಭಿನ್ನವಾಗಿ ಮೂಡಿ ಬಂದಿದೆ. ಜಯಂತಿ ಎಡವಿ ಬೀಳುವ ಪಾತ್ರದಲ್ಲಿ ಅಭಿನಯಿಸಿದ್ದರೆ.. ಆರತಿ ಎಡವಿ ಬಿದ್ದವರನ್ನು ತಡವಿ ಎತ್ತುವ ಪಾತ್ರದಲ್ಲಿ ಬಂದಿದ್ದಾರೆ. ಚಂದ್ರು ಆರತಿಯ ಮೇಲೆ ಕಣ್ಣು ಹಾಕಿದಾಗ ಬಗ್ಗದೆ ಚೇಡಿಸುತ್ತಾ ಸಾಗುವ "ಸನ್ಯಾಸಿ ಸನ್ಯಾಸಿ ಅರ್ಜುನ ಸನ್ಯಾಸಿ" ಹಾಡು ಋತುವಿನ ಬದಲಾವಣೆಯಲ್ಲಿಯೂ ಬಯಕೆಗಳ ಪಾತ್ರ ಹಿರಿದು ಎಂದು ಹಾಡುತ್ತಾ ಹೋಗುತ್ತಾರೆ. ಎಸ್ ಜಾನಕಿಯಮ್ಮನವರ ಕೋಮಲ ಸ್ವರ ಆರ್ ಎನ್ ಜಯಗೋಪಾಲ್ ಅವರ ಸುಲಲಿತ ಸಾಹಿತ್ಯ, ಆರತಿಯ ಅವರ ಅಭಿನಯ ಈ ಹಾಡಿನ ಬೆಡಗು ಹೆಚ್ಚಿಸಿದೆ.

ಕೊಡವ ಸಂಸ್ಕೃತಿಯ ಮದುವೆಯ ಒಂದು ಚಿಕ್ಕ ಝಲಕ್ ಇಲ್ಲಿ ಮೂಡಿ ಬಂದಿದೆ. "ಯಾವೂರವ್ವ ಇವ ಯಾವೂರವ್ವ" ಹಾಡಿನಲ್ಲಿ ಕಣಗಾಲ್ ಪ್ರಭಾಕರ್ ಶಾಸ್ತಿ ಅವರ ಸಾಹಿತ್ಯದಲ್ಲಿ ಮಡಿಕೇರಿ ಸುತ್ತ ಮುತ್ತಲ ಅನೇಕ ಪೇಟೆ ಹಳ್ಳಿಗಳ ಹೆಸರುಗಳನ್ನ ತಂದು ಹಾಡಿನಲ್ಲಿ ಕೂರಿಸಿರುವುದು  ವಿಶೇಷ. ಜಾನಕಿಯಮ್ಮ ಅವರ ಕಂಠದಲ್ಲಿ, ಆರತಿಯವರ ವ್ಯಯ್ಯಾರದ ನೃತ್ಯವೇ ಸೊಗಸು.

ಎಡಕಲ್ಲು ಗುಡ್ಡಕ್ಕೆ ಚಂದ್ರು ಆರತಿಯನ್ನು ಕರೆದೊಯ್ದಾಗ ಅಲ್ಲಿ ಆರತಿ ತೋರುವ ಧೈರ್ಯ, ಮನಸ್ಥಿತಿ ಇಂದಿನ ಪೀಳಿಗೆಗೆ ಒಂದು ದಾರಿ ದೀಪ ಎನ್ನಿಸುತ್ತದೆ.  ಎಡವಲು ಅವಕಾಶ ಹೇರಳವಾಗಿದ್ದರೂ ಮನೋ ಬಲ ಸಿದ್ಧಿಸಿದ್ದಾಗ ಇಂಥಹ ಚಿಕ್ಕ ಚಿಕ್ಕ ಉನ್ಮಾದಗಳಿಗೆ ಬಲಿಯಾಗಲು ಸಾಧ್ಯವೇ ಇಲ್ಲ.

ತನ್ನ ಅಕ್ಕಳನ್ನು ಮರಳಿ ದಾರಿಗೆ ತರುವ ಪ್ರಯತ್ನ "ನಿಲ್ಲು ನಿಲ್ಲೇ ಪತಂಗ ಬೇಡ ಬೇಡ ಬೆಂಕಿಯ ಸಂಗ" ವಿಜಯನಾರಸಿಂಹ ಪದಗಳ ಮಹಲನ್ನೇ ಕಟ್ಟಿದ್ದಾರೆ. ಅದ್ಭುತ ಸಾಹಿತ್ಯ, ಅಮೋಘ ಗಾಯನ.  ಆರತಿಯವರ ಅಭಿನಯ, ಜಯಂತಿ ಅವರ ತೊಳಲಾಟ ಸೂಪರ್.

ಅಂತಿಮ ದೃಶ್ಯದಲ್ಲಿ ತನ್ನ ಎಲ್ಲಾ ಎಡವಿದ ಪ್ರಸಂಗಗಳನ್ನು ಜಯಂತಿ ತನ್ನ ಗಂಡನಿಗೆ ಹೇಳುತ್ತಾ ತಪ್ಪನ್ನು ಒಪ್ಪಿಕೊಳ್ಳುವಾಗ ಕ್ಯಾಮೆರ ಓಲಾಟ ಜಯಂತಿಯ ಮನಸ್ಥಿತಿಯನ್ನು ನಿಖರವಾಗಿ ಬಿಂಬಿಸುತ್ತದೆ. ಒಂದು ಚಿಕ್ಕ ಚಿಕ್ಕ ದೃಶ್ಯಗಳಲ್ಲಿ ಕೂಡ ಪುಟ್ಟಣ್ಣ ತೋರುತ್ತಿದ್ದ ಜಾದೂ ಗಮನಸೆಳೆಯುತ್ತದೆ.  ಜೊತೆಯಲ್ಲಿಯೇ ಸಂಸಾರದ ಗುಟ್ಟನ್ನು ಹೇಳುವೆ ಎಂದು ಬೆದರಿಸುವ ಚಂದ್ರು ಮನೆಗೆ ಬಂದಾಗ ಅವರ ನೆರಳನ್ನು ಭೂತಾಕಾರವಾಗಿ ದೊಡ್ಡದಾಗಿ ತೋರಿಸುವ ಮೂಲಕ ಬಯಕೆ ಚಿಕ್ಕ ಗಾತ್ರದಲ್ಲಿ ಬಂದರೂ ಅದು ಹೊತ್ತು ತರುವ ಸಮಸ್ಯೆ ಭೂತಾಕಾರವಾಗಿ ನಿಲ್ಲುತ್ತದೆ ಮತ್ತು ಕಾಡುತ್ತದೆ ಎಂದು ತೋರಿದ್ದಾರೆ. ಉತ್ತಮ ನೆರಳು ಬೆಳಕಿನ ಸಂಯೋಜನೆ.
*****
ಜಯಂತಿ ಈ ಚಿತ್ರದ ನಾಯಕಿ, ಕಣ್ಣಲ್ಲೇ ಅವರು ಕಾರುವ ಬಯಕೆಯ ಭಾವ, ನಾಜೂಕಿನ ಸನ್ನಿವೇಶಗಳಲ್ಲಿ ತನಗಿಂತಲೂ ಕಿರಿಯ ನಟ ಚಂದ್ರುವಿನ ಜೊತೆಯಲ್ಲಿನ ಅಭಿನಯ ವಾಹ್ ಎನ್ನಿಸುತ್ತದೆ. ಈ ಚಿತ್ರದುದ್ದಕ್ಕೂ ಕಣ್ಣುಗಳಿಗೆ ಕಾಡಿಗೆ ತುಸು ಹೆಚ್ಚಾಗಿಯೇ ಬಳಸಿದ್ದಾರೆ. ಕಾಮಾಲೆ ಕಣ್ಣಿಗೆ ಕಾಣೋದೆಲ್ಲಾ ಹಳದಿ ಎನ್ನುವ ಹಾಗೆ, ಈ ತೀಕ್ಷ್ಣ ಕಾಡಿಗೆ ಕಣ್ಣುಗಳು ಅವರ ಬಯಕೆ, ಮನಸ್ಥಿತಿ ಎಲ್ಲವನ್ನು ಸೂಚ್ಯವಾಗಿ ತೋರಿಸುತ್ತದೆ.

ವಿರಹ ನೂರು ನೂರು ತರಹ ಹಾಡಿನಲ್ಲಿ ಕಣ್ಣು ಮುಖದಲ್ಲೇ ವ್ಯಕ್ತ ಪಡಿಸುವ ಆ ಕಾಮದ ಬಯಕೆ, ಕೆಲವು ದೃಶ್ಯಗಳಲ್ಲಿ ಕಣ್ಣಲ್ಲೇ ಕಾರುವ ರೋಷ, ಜಿಗುಪ್ಸೆ, ತನ್ನ ತಂಗಿ ಆರತಿಯನ್ನು ಬಲೆಗೆ ಎಳೆದುಕೊಳ್ಳುತ್ತಿದ್ದಾನೆ ಎಂದು ಅರಿವಾದಾಗ ಅದನ್ನು ತಡೆಯಲು ಪ್ರಯತ್ನ ಪಡುವ ಅಭಿನಯ (ಅಡಿಗೆ ಮನೆಯ ಹತ್ತಿರ ಚಂದ್ರುವಿಗೆ ಹೋಗು ಎಂದು ಹೇಳುವ ದೃಶ್ಯ) ಅದ್ಭುತ.

ಆ ಧ್ವನಿ, ಆ ನೋಟ, ವೇಷ ಭೂಷಣ ಎಲ್ಲವನ್ನೂ ಸೇರಿಸಿಕೊಂಡು ನಿಖರವಾಗಿ ಜಯಂತಿ ಆ ಪಾತ್ರದೊಳಗೆ ನುಗ್ಗಿಬಿಟ್ಟಿದ್ದಾರೆ

ಆರತಿ ಉತ್ತರಾರ್ಧದಲ್ಲಿ ಬಂದರು ತಮ್ಮ ಪಾಲನ್ನು ಸರಿಯಾಗಿಯೇ ಗುರುತಿಸಿಕೊಂಡಿದ್ದಾರೆ. ಮನೊಧೈರ್ಯಕ್ಕೆ ಇನ್ನೊಂದು ಹೆಸರಾಗುವ ಪಾತ್ರ ಅವರದು. ಪ್ರತಿ ಹಂತದಲ್ಲೂ ತಮ್ಮ ಇರುವಿಕೆಯನ್ನು ತೋರುವ ಅವರ ಅಭಿನಯ ಸೊಗಸಾಗಿದೆ.

ಪೋಷಕ ಪಾತ್ರದಲ್ಲಿ ಬರುವ ರಂಗ, ತೊಳಲಾಡುವ ಪಾತ್ರದಲ್ಲಿ ಅಚ್ಚುಕಟ್ಟಾಗಿ ನಟಿಸಿದ್ದಾರೆ. ತನ್ನ ಹೆಂಡತಿ ಜಾರಿದ್ದಾಳೆ ಎಂದು ಅವಳೇ ತಪ್ಪನ್ನು ಒಪ್ಪಿಕೊಂಡಾಗ... ಪ್ರೇಮದ ಮೇಲೆ ಕಾಮ ಜಯ ಸಾಧಿಸಿದ ಹೊತ್ತು ಎಂದು ಹೇಳಿ ಇಡಿ ಸನ್ನಿವೇಶವನ್ನು ತಿಳಿಗೊಳಿಸುತ್ತಾರೆ.. ಕಡೆಗೆ ಕೇಳುವ ಪ್ರಶ್ನೆ ನಿನಗೆ ಬೇಕಿರುವುದು ಕಾಮವೋ ಪ್ರೇಮವೋ... ಅನ್ನುವಾಗ ಅವರ ಮುಖಭಾವ, ಅಭಿನಯ ಇಷ್ಟವಾಗುತ್ತದೆ.

ಚಂದ್ರು.. ಆಹಾ ಏನು ಹೇಳಲಿ ಈ ಪಾತ್ರದ ಬಗ್ಗೆ. ಇವರು ನಟಿಸಬೇಕಾಗಿದ್ದು ಘಟಾನುಘಟಿಗಳ ಮಧ್ಯೆ. ಅಷ್ಟರಲ್ಲಿಯೇ ಜಯಂತಿ, ಆರತಿ, ಶಿವರಾಂ, ರಂಗ ತಮ್ಮ ಛಾಪನ್ನು ಚಿತ್ರರಂಗದಲ್ಲಿ ಮೂಡಿಸಿದ್ದರು. ಅವರುಗಳ ಮಧ್ಯೆ ತುಂಟ ದಾರಿ ತಪ್ಪಿದ ಹುಡುಗನಾಗಿ ಅಭಿನಯಿಸುವುದು ಸವಾಲೇ ಸರಿ. ಜಯಂತಿಯ ಪಾತ್ರವನ್ನು ಮೋಹಿಸುವ ಸನ್ನಿವೇಶ, ರಂಗ ಅವರ ಬಳಿ ಕೂಗುತ ಮಾತಾಡುವ ಪರಿ, ಶಿವರಾಂ ಅವರನ್ನು ಬಯ್ದು ದೂರ ಅಟ್ಟುವ ದೃಶ್ಯ, ಆರತಿ ಜೊತೆಯಲ್ಲಿನ ಅಭಿನಯ ಎಲ್ಲವಕ್ಕೂ ಪಕ್ಕ ಪ್ಲೇ ಬಾಯ್ ರೂಪ ಕೊಟ್ಟಿದ್ದಾರೆ. ವೇಷಭೂಷಣಗಳು, ಮಾತಿನ ಚಟಾಕಿ "ಇದೆ ಫಸ್ಟ್ ಟೈಮ್" ಅವರ ಪಾತ್ರವನ್ನ ಇನ್ನಷ್ಟು ಸೊಗಸು ಮಾಡಿವೆ.

ಶಿವರಾಂ ಒಂದು ಚಿಕ್ಕ ಚಿಕ್ಕ ಪಾತ್ರವೇ ಆದರೂ.. ಗಮ್ಮತ್ತು, ನಿಯತ್ತು, ಲಿಮಿಟ್ ಈ ಪದಗಳಲ್ಲೇ ಅವರ ಸಂಭಾಷಣೆ ಆರಂಭ ಇಲ್ಲಾ ಮುಕ್ತಾಯ.. ತನ್ನ ವಯಸ್ಸಿಗೂ ಮೀರಿದ ಪಾತ್ರವಾದರೂ ಅಭಿನಯದಲ್ಲಿ ಗೆದ್ದಿದ್ದಾರೆ.

ಕಾಮ ಕ್ಷಣ ಮಾತ್ರ.. ಪ್ರೇಮ ಎಲ್ಲಾ ಸಮಯಕ್ಕೂ ಎನ್ನುವ ಸುಂದರ ನೀತಿಯನ್ನು ಹೇಳುತ್ತಾ ಜಾರಿ ಬಿದ್ದರೆ ಅದಕ್ಕೆ ಸಾವೇ ಗುರಿ ಎನ್ನುವುದನ್ನು ಜಯಂತಿ ಮತ್ತು ಚಂದ್ರುವಿನ ಪಾತ್ರದ ಅವಸಾನದಲ್ಲಿ ತೋರಿದ್ದಾರೆ. ಗಂಡ ಜಾರಿ ಹೋದ ಹೆಂಡತಿಯನ್ನು ಸ್ವೀಕರಿಸುತ್ತೇನೆ ಎಂದು ಹೇಳಿದರು.. ತಪ್ಪು ಮಾಡಿದ್ದಕ್ಕೆ ಸಾವೇ ಪ್ರಾಯಶ್ಚಿತ್ತ ಎಂದು ತನ್ನನ್ನೇ ಕೊನೆಗಾಳಿಸುವ ಆ ದೃಶ್ಯದಲ್ಲಿ ತಪ್ಪು ಮಾಡಬೇಡಿ. ಮಾಡಿದರೆ ಆ ನೊಂದು ಬೆಂದು ಬಾಳುವ ಬದಲು ಮರೆಯಾಗಿ ಹೋಗಿ ಎನ್ನುತ್ತದೆ ಸಂದೇಶ. ಈ ಮಾತುಗಳು ಚರ್ಚೆ ಒಳಪಡಬಹುದಾದರೂ ಆ ಕಾಲ ಘಟ್ಟದಲ್ಲಿ ಇದು ಒಂದು ಅಪರಾಧ ಎನ್ನುತ್ತಿದ್ದ ಕಾಲದಲ್ಲಿ ಈ ರೀತಿಯ ಅಂತ್ಯ ಈ ಚಿತ್ರದಲ್ಲಿ ಬಂದದ್ದು ಸರಿ ಅನ್ನಿಸುತ್ತದೆ.

ಒಂದು ಸುಂದರ ಕಥೆಯನ್ನು ಅಷ್ಟೇ ಅಚ್ಚುಕಟ್ಟಾಗಿ ತೆರೆ ಮೇಲೆ ತರುವುದು ಮತ್ತು ಅಲ್ಲಿ ವಿಚಿತ್ರ ಸನ್ನಿವೇಶಗಳನ್ನು ಕೂಡ ಎಲ್ಲರೂ ಕೂತು ನೋಡುವ ಹಾಗೆ ಹೆಣೆಯುವುದು ನಿರ್ದೇಶಕರ ತಾಕತ್ತು. ಅಂಥಹ ಒಂದು ಸವಾಲಿನಲ್ಲಿ ಗೆಜ್ಜೆ ಪೂಜೆ, ನಾಗರಹಾವು ಚಿತ್ರಗಳಲ್ಲಿ ಗೆದ್ದಿದ್ದ ಪುಟ್ಟಣ್ಣ ಅವರು ಈ ಚಿತ್ರದಲ್ಲಿ ತಮ್ಮ ನಿರ್ದೇಶಕರ ಶಕ್ತಿಯನ್ನು ಪರಿಣಾಮಕಾರಿ ನಿರೂಪಿಸಿದ್ದಾರೆ. ಒಂದು ವಯಸ್ಕರ ಚಿತ್ರ ಆಗಬಹುದಿದ್ದ ಈ ಕಥೆಯನ್ನು ಸುಲಲಿತವಾಗಿ ಬರಿ ಸಾಂಕೇತಿಕ ದೃಶ್ಯಗಳಲ್ಲಿ ಮಾತ್ರ ಆ ಭಾವವನ್ನು ತೋರಿಸಿ ಚಿತ್ರ ರೂಪಿಸಿರುವುದು "ಎಡಕಲ್ಲು ಗುಡ್ಡದ ಮೇಲೆ" ಚಿತ್ರ ಒಂದು ರತ್ನವಾಗಿ ಮಾರ್ಪಟ್ಟಿರುವುದಕ್ಕೆ ಸಾಕ್ಷಿ. ಪುಟ್ಟಣ್ಣ ಕಣಗಾಲ್ ಗುರುಗಳೇ ನಿಮಗೆ ನಮೋ ನಮಃ. 

3 comments:

  1. ಅಬ್ಬಾ... ಆ ರಂಗ... ಎಂಥ ನಟ ! ಬದುಕಿದ್ದಿದ್ದರೆ ಈ ಚಿತ್ರದ ನಂತರ ಖಂಡಿತವಾಗಿ ಆತ ಒಂದೆರಡು ದಶಕ ಆಳುತ್ತಿದ್ದ. ವಿಲ್ಸನ್ ಗಾರ್ಡನ್ನಿನಲ್ಲಿ ನಮ್ಮ ಮನೆಯ ಎದುರಿದ್ದ ರಂಗಾ ಪಾಪ, 'ನಶಾ ವಶ'ನಾಗಿ ಅಸು ನೀಗಿದ. ಆ ಮಾತಿಗೀಗ ೪೨ ವರ್ಷ.

    ReplyDelete
  2. ಅಂದಿನ ಸಾಮಾಜಿಕ ಪರಿಸ್ಥಿತಿಗಳನ್ನು ವಿವರಿಸಿ ಅವುಗಳನ್ನು ಮಾನವೀಯತೆಯ ದೃಷ್ಟಿಯಿಂದ ಕಾದಂಬರಿಗಳ ಮೂಲಕ ಮೇಲೆತ್ತುವುದರಲ್ಲಿ ತ್ರಿವೇಣಿಯವರ ಕಥೆಗಳು ಅತ್ಯುತ್ಕೃಷ್ಟ.
    ಹಾಗೆಯೇ ಚಿತ್ರಗಳ ಮೂಲಕ ಸಮಾಜದ ಹಳೆಯ ಪದ್ಧತಿಗಳನ್ನು ಮುರಿದು ಇಂದಿನ ರೀತಿ ನೀತಿಗಳಿಗೆ ಹೊಂದಿಕೊಂಡು ಹೋಗುವಂತೆ ಮಾಡಿದ ಕೀರ್ತಿ ಪುಟ್ಟಣ್ಣನವರಿಗೆ ಸಲ್ಲುತ್ತದೆ.
    ಅವುಗಳನ್ನು ಇಂದಿನ ಯುವಜನತೆಗೆ ಬ್ಲಾಗ್ ಗಳ ಮೂಲಕ ತಲುಪಿಸುತ್ತಿರುವ ನಿಮಗೆ ನನ್ನ ಮೆಚ್ಚುಗೆ...

    ReplyDelete
  3. "ಎಡಕಲ್ಲು ಗುಡ್ಡದ ಮೇಲೆ" ಚಿತ್ರ ಬಂದಾಗ ನಾನಿನ್ನೂ ಚಿಕ್ಕವನು , ಆದರೆ ಈ ಚಿತ್ರದ ಹಾಡುಗಳು ಅತ್ಯಂತ ಜನಪ್ರೀಯವಾಗಿ ಕನ್ನಡ ನಾಡಿನ ಹಳ್ಳಿ ಹಳ್ಳಿಗಳಲ್ಲೂ ಮೊಳಗಿದ್ದವು , ಬುದ್ದಿ ಬಲಿತ ಮೇಲೆ ಮತ್ತೊಮ್ಮೆ ಚಿರ ನೋಡಿ ಅರ್ಥ ಮಾಡಿಕೊಂಡೆ . ಪುಟ್ಟಣ್ಣ ನವರ ಚಿತ್ರಗಳು ಒಂದು ತರಹ ಜೀವನ ದರ್ಶನ ಮಾಡಿಸುವ ಶಾಲೆಗಳಿದ್ದಂತೆ , ಒಂದೊಂದು ಚಿತ್ರವೂ ಒಂದೊಂದು ಅಧ್ಯಾಯವೇ . ಕೆಲವೊಮ್ಮೆ ಅನ್ನಿಸುತ್ತದೆ ಸರಿಯಾದ ಜೀವನ ಕ್ರಮ ಹೇಗೆ ಎಂಬುದನ್ನು ಹಿಂದೆ ಬಂದ ಹಳೆಯ ಕನ್ನಡ ಚಿತ್ರಗಳು ಜನರಿಗೆ ಹೇಳಿಕೊಟ್ಟು, ಉತ್ತಮ ಸಮಾಜ ನಿರ್ಮಾಣದಲ್ಲಿ ಪಾಲ್ಗೊಂಡಿದ್ದವು. ಈಗ ಆ ಮಾತು ಬೇರೆ ಬಿಡಿ. ಈ ಚಿತ್ರದಲ್ಲಿನ ವಿಚಾರ ಬಹಳ ಸೂಕ್ಷ್ಮವಾಗಿತ್ತು, ಅಂದಿನ ಸಮಾಜ ಇಂತಹ ವಿಚಾರಗಳನ್ನು ಹೇಗೆ ಸ್ವೀಕಾರ ಮಾಡುತ್ತದೆ ಎಂಬ ಪ್ರಶ್ನೆ ಹಲವರಿಗೆ ಇತ್ತು , ಆದರೆ ಪುಟ್ಟಣ್ಣ ಅದಕ್ಕೆ ಉತ್ತರ ನೀಡಿದ್ದರು, ಕನ್ನಡ ನಾಡಿನ ಜನತೆಗೆ ಇಂತಹ ಸೂಕ್ಷ್ಮ ವಿಚಾರವನ್ನು ತಮ್ಮದೇ ಶೈಲಿಯಲ್ಲಿ ಮುಂದಿಟ್ಟು, ಸೈ ಎನ್ನಿಸಿಕೊಂಡರು, ಈ ಚಿತ್ರವೂ ಕೂಡ ಸಾಮೂಹಿಕ ನಾಯಕ್ತ್ವದ ಚಿತ್ರವೇ, ಚಿತ್ರದ ತಂಡದ ಪ್ರತಿಯೊಬ್ಬ ವ್ಯಕ್ತಿಯೂ ಅಭಿನಂದನೆಗೆ ಅರ್ಹನೇ ಆಗಿದ್ದಾನೆ. ಅಂದಿಗೆ ಖಳನಾಯಕ ಪ್ರದಾನ ಚಿತ್ರವಿದು, ಈ ಪಾತ್ರವನ್ನು ನಿರ್ವಹಿಸಿ ಸೈ ಅನ್ನಿಸಿಕೊಂಡರು ಚಂದ್ರು, ಮುಂದೆ ಎಡಕಲ್ಲು ಗುಡ್ಡದ ಚಂದ್ರು ಆದರು. ಈ ಚಿತ್ರದಲ್ಲಿ ಒಂದು ಹಾಡಿದೆ "ನಿಲ್ಲು ನಿಲ್ಲೇ ಪತಂಗ, ಬೇಡ ಬೇಡ ಬೆಂಕಿಯ ಸಂಗ" ಇದು ಚಿತ್ರದ ಸಾರಾಂಶವನ್ನು ಹೇಳುತ್ತದೆ . ಇಲ್ಲಿ ಬೆಂಕಿ ಚಂದ್ರು ಆದರೆ ಪಟಂಗಗಳಾಗಿ ಜಯಂತಿ, ಆರತಿ ಕಾಣಿಸಿಕೊಳ್ಳುತ್ತಾರೆ , ಸುಂದರ ಸನ್ನಿವೇಶಗಳನ್ನು , ದೃಶ್ಯರೂಪಕ್ಕೆ ತಂದು ಯಾವುದೇ ರೀತಿಯ ಕಥೆಯನ್ನು ಪ್ರೇಕ್ಷಕರಿಗೆ ಇಷ್ಟವಾಗುವ ರೀತಿ ಮಾಡಿಸುವ ಕಲೆ ಪುಟ್ಟಣ್ಣನವರಿಗೆ ಇತ್ತು. ಯಾವುರವ್ವ ಇವ ಯಾವುರವ್ವ ಎಂ ಚಂದಾ ಬರೆಯುತ್ತಾನೆ ಯಾವುರವ್ವಾ ಇವ ಯಾವೂರವ್ವಾ ....!ಅಂತಾ ಹಾಡುತ್ತಾ ಶ್ರೀಕಾಂತ್ ಗೆ ಜೈ ಎನ್ನುತ್ತೇನೆ

    ReplyDelete