Friday, April 24, 2015

ನಗುವಿನ ಹೊಡೆದಾಟದಲ್ಲಿ ಅಣ್ಣಾವ್ರು !!!

ಬ್ರಹ್ಮ ಮಾಡಿದ ಒಂದು ಪರಿಪೂರ್ಣ ಕಲಾವಿದರ ಪಟ್ಟಿಯಲ್ಲಿ ಅಣ್ಣಾವ್ರು  ಅಣ್ಣಾವ್ರೆ..

ಬರಿ ಕನ್ನಡಾಭಿಮಾನ ಅಥವಾ ಕರುನಾಡಿನ ಕಲಾವಿದ ಎನ್ನುವ ಹೆಗ್ಗಳಿಕೆ ಅಥವಾ ಅಹಂ ಎನ್ನುವುದಕ್ಕಿಂತ ಒಂದು ಪಕ್ವ ರುಚಿಕರ ಭೋಜನ ಹೇಗೆ  ಸೊಗಸೋ ಹಾಗೆಯೇ ಇವರು ಕೂಡ. ಎಲ್ಲರಲ್ಲಿಯೂ ಸಲ್ಲುವವರು. ಪರಿಪೂರ್ಣತೆ ಎನ್ನುವುದು ಅವರಿಗೆ ದೇವರು ಕೊಟ್ಟ ಉಡುಗೊರೆಯೇ ಸರಿ.

ಅಭಿನಯ, ಗಾಯನ, ನೃತ್ಯ,ಹೊಡೆದಾಟ, ಪ್ರೇಮ ನಿವೇದನೆ, ಪರಿತಪಿಸುವಿಕೆ ಹೀಗೆ ಯಾವುದೇ ಭಾವ ಇರಲಿ ಅದಕ್ಕೆ ಅಣ್ಣಾವ್ರ ಹೆಸರೊಂದೆ ನನ್ನ ಮನಸ್ಸಲ್ಲಿ ಮೂಡಿ ಬರುವುದು.

ಇಂದು ಅವರ ಜನುಮದಿನ... ಹೀಗೆ ಅವರ ಚಿತ್ರಗಳ, ಪಾತ್ರಗಳ ಬಗ್ಗೆ,  ಹೊಡೆದಾಟದ ದೃಶ್ಯಗಳು ಬಗ್ಗೆ  ಯೋಚಿಸುತ್ತಿರುವಾಗ ಮನಕ್ಕೆ  ಬಂದ ಮಾತುಗಳು ಲೇಖನವಾಗಿದೆ

ಕಟ್ಟು ಮಸ್ತು ಶರೀರ, ಅದಕ್ಕೆ ಒಪ್ಪುವ ಅಭಿನಯ, ಮುಖ ಭಾವ, ರೋಷ, ಆವೇಗ  ಇವುಗಳ ಸಮಾಗಮ ಈ ಕೆಳಕೊಂಡ ಹೊಡೆದಾಟದ ದೃಶ್ಯಗಳು ನನಗೆ ಬಹಳ ಇಷ್ಟವಾಗಿವೆ!!!.

ಚಿತ್ರದ ಕಥೆಯ ಬಗ್ಗೆ ಬರೆಯೋಕೆ ಹೋಗೋಲ್ಲ.. ಆ ಹೊಡೆದಾಟದ ದೃಶ್ಯಗಳ ಬಗ್ಗೆ ಬರೆಯುತ್ತಾ ಹೋಗುತ್ತೇನೆ!!

ದಾರಿ ತಪ್ಪಿದ ಮಗ 

ಕಳ್ಳ ಸಾಗಣಿಕೆಯ ತಂಡದ ನಾಯಕನ ಪಾತ್ರದಲ್ಲಿ ಅಣ್ಣಾವ್ರು.. ಬೆಲೆಬಾಳುವ ವಜ್ರಗಳನ್ನು ಕದಿಯಲು ಬಂದರಿಗೆ ಬರುತ್ತಾರೆ. ಅಲ್ಲಿ ಒಬ್ಬನನ್ನು ಆ ತಂಡದ ಸದಸ್ಯನ ಬಗ್ಗೆ ಕೇಳುತ್ತಾರೆ.. ನೀನು ಯಾರು ಎಂಬ ಪ್ರಶ್ನೆ ಬರುತ್ತದೆ.. ಆಗ ಶುರು ಹೊಡೆದಾಟ.
ಈ ಹೊಡೆದಾಟದ ದೃಶ್ಯದ ಅತ್ಯುತ್ತಮ ಅಂಶ ಅಂದರೆ ಹಿನ್ನೆಲೆ ಸಂಗೀತ. ಅಲ್ಲಿಯ ತನಕ ಡಿಶುಂ ಡಿಶುಂ ಸದ್ದು ಕೇಳಿಸುತ್ತಿದ್ದ ರೀತಿಗಿಂತ,  ಆಂಗ್ಲ ಶೈಲಿಯಲ್ಲಿ ಹಿನ್ನೆಲೆ ಸಂಗೀತ ನೀಡಿರುವುದು ಜಿ ಕೆ ವೆಂಕಟೇಶ್ ಅವರ ಕಲೆಗಾರಿಕೆ.  ಹಡಗಿನ ಮೇಲಿಂದ ಕೆಳಗೆ ನೆಗೆಯುತ್ತಾರೆ.. ಎದ್ದು ನಿಂತ ತಕ್ಷಣ.. ಅಲ್ಲಿದ್ದ ಒಬ್ಬ ಅಣ್ಣಾವ್ರಿಗೆ ಚಾಕು ತೋರಿಸುತ್ತಾನೆ.,. ಆಗ ಬರುವ ಹಿನ್ನೆಲೆ ಸಂಗೀತ.. ಆಹಾ ನೋಡಿಯೇ ನಲಿಯಬೇಕು .. ಮತ್ತು ಚಾಕು ನೋಡಿದ ತಕ್ಷಣ ಅಣ್ಣಾವ್ರ ಭಾವಾಭಿನಯ.. ಸೂಪರ್

ಸಮಯದ ಗೊಂಬೆ 

ಅಣ್ಣಾವ್ರು ಕೆಲಸ ಮಾಡುತ್ತಿದ್ದ ಮನೆ ಮಾಲೀಕರ ಮಗು ಕಾಣದಾಗಿರುತ್ತದೆ.. ಅದನ್ನ ಹುಡುಕಿಕೊಂಡು ಅವರ ತಮ್ಮ ಸಹೋದ್ಯೋಗಿಗಳ ಜೊತೆಯಲ್ಲಿ ಮೈಸೂರು ಲೋಕೇಶ್ ಹತ್ತಿರ ಬರುತ್ತಾರೆ.. ನಿಧಾನವಾಗಿ ಕೇಳುತ್ತಾರೆ, ರೇಗುತ್ತಾರೆ, ಹೊಡೆಯುತ್ತಾರೆ.. ಬಾಯಿ ಬಿಡುವುದಿಲ್ಲ.. ಕಡೆಗೆ ತಮ್ಮ ಸ್ನೇಹಿತರಿಗೆ ಪೆಟ್ರೋಲ್ ಸುರಿಯಿರಿ ಇವನ ಮೇಲೆ.. ಎಂದು ಪೆಟ್ರೋಲ್ ಸುರಿದು ಕಡ್ಡಿ ಗೀರಬೇಕು.. ಅಷ್ಟರಲ್ಲಿ ಮೈಸೂರು ಲೋಕೇಶ್ ಹೇಳ್ತೀನಿ.. ಹೇಳ್ತೀನಿ.. ಎಂದು ಭಯ ಮಿಶ್ರಿತ ನುಡಿಯಲ್ಲಿ "ಮಾರಿಬಿಟ್ಟೆ" ಎಂದು ಹೇಳುತ್ತಾರೆ.. ಆಗ ಅಣ್ಣಾವ್ರು "ಮಾರಿಬಿಟ್ಟೆ" ಎಂದು ಜೋರಾಗಿ ಕೂಗುತ್ತಾ.. ತಮ್ಮ ತೋಳಿನಲ್ಲಿ ಲೋಕೇಶ್ ಅವರ ಕುತ್ತಿಗೆಯನ್ನು ಅಮುಕುತ್ತಾರೆ.. ಆ ರೌದ್ರಾವತಾರ ಆಹಾ ಆಹಾ..

ಕಾಮನಬಿಲ್ಲು 

ಊರಿನಲ್ಲಿ ದ್ವೇಷ ಅಸೂಯೆಯ ಫಲ.. ಅಣ್ಣಾವ್ರ ಮೇಲೆ ಕೆಟ್ಟ ಹೆಸರನ್ನು ತರಬೇಕು ಎಂದು ಮೈಸೂರು ಲೋಕೇಶ್ ಅವರನ್ನು ಪುಸಲಾಯಿಸಿ ಭತ್ತದ ಮೆದೆಗೆ ಬೆಂಕಿ ಇಡಲು ಹೇಳುತ್ತಾರೆ ತೂಗುದೀಪ ಶ್ರೀನಿವಾಸ್.. ಬೆಂಕಿ ಇಡುವಾಗ ಅದನ್ನು ನೋಡಿದ ಅಣ್ಣಾವ್ರು ಜೋರಾಗಿ ಕೂಗುತ್ತಾ ಒಬ್ಬೊಬ್ಬರನ್ನೇ ಬಡಿಯಲು ಶುರುಮಾಡುತ್ತಾರೆ.. ಒಬ್ಬನ ಕೈಯಿಂದ ಪಂಜನ್ನು ಕಸಿದುಕೊಳ್ಳಲು ಅವನ ಕೈಗಳಿಗೆ ಜೋರಾಗಿ ಒದೆಯುತ್ತಾರೆ.. ಆಕಾಶಕ್ಕೆ ಚಿಮ್ಮಿದ ಪಂಜಗಳನ್ನೂ ಎರಡು ಕೈಯಲ್ಲಿ ಹಿಡಿದು ಕೊಂಡು ಅಲ್ಲಿದ್ದವರ ಜೊತೆಯಲ್ಲಿ ಕಾದಾಡಲು ಶುರುಮಾಡುತ್ತಾರೆ. ಎರಡು ಪಂಜುಗಳನ್ನು ಹಿಡಿದು ನಿಂತ ಅಣ್ಣಾವ್ರ ನೋಟ.. ಬಿಡಿ ಆ ದೃಶ್ಯವನ್ನು ನೋಡಬೇಕು ನೀವು.

ಶಂಕರ್ ಗುರು 

ಈ ಚಿತ್ರದ ಬಗ್ಗೆ ಹೇಳಿದಷ್ಟು ಕಡಿಮೆಯೇ. ಮೂರು ಪಾತ್ರ.. ಅಂತಿಮ ದೃಶ್ಯಗಳಲ್ಲಿ ಮೂರು ಪಾತ್ರಗಳು ಹೊಡೆದಾಡುವ ರೀತಿ. ಒಬ್ಬೊಬ್ಬರದು ಒಂದು ವಿಭಿನ್ನ ಶೈಲಿ. ಶಂಕರ್ ಪಾತ್ರದಲ್ಲಿ ಗಂಭೀರ ಹೊಡೆದಾಟ ಇದ್ದರೆ.. ಗುರು ಪಾತ್ರ ಹಾಸ್ಯ ಲಾಸ್ಯ ಬೆರೆತ ಸಂಗಮ.. ಇನ್ನೂ ಹಿರಿಯ ಪಾತ್ರ ರಾಜಶೇಖರ್.. ಘನತೆ ಗಾಂಭೀರ್ಯ ಸಾರುವ ರೀತಿಯಲ್ಲಿ ಇದೆ. ಒಂದು ರೀತಿ ಮೂರು ಚಿತ್ರಗಳನ್ನು ಒಟ್ಟಿಗೆ ಮಲ್ಟಿಪ್ಲೆಕ್ಸ್ ಮಂದಿರಗಳಲ್ಲಿ ನೋಡಿದ ಹಾಗೆ.. ಕನ್ನಡ ಚಿತ್ರಗಳಲ್ಲಿಯೇ ಅಪರೂಪದ ಹೊಡೆದಾಟದ ದೃಶ್ಯಗಳು ಈ ಚಿತ್ರದ ಅಂತಿಮ ದೃಶ್ಯಗಳಲ್ಲಿದೆ.

ಜಗಮೆಚ್ಚಿದ ಮಗ 

ಅಣ್ಣಾವ್ರನ್ನು ಕಟ್ಟಿ ಹಾಕಿರುತ್ತಾರೆ.. ಮೈಗೆ ಅಂಟಿಕೊಂಡಂತಹ ಪ್ಯಾಂಟ್ ಬೂಟು ತೊಟ್ಟ ಅವರನ್ನು ಕಬ್ಬಿಣದ ಸರಪಳಿಗಳಿಂದ ಕೈಗಳನ್ನು ಕಟ್ಟಿರುತ್ತಾರೆ. ಅಣ್ಣಾವ್ರ ಕಟ್ಟು ಮಸ್ತಾದ ಶರೀರದ ಅಮೋಘ ಪ್ರದರ್ಶನ ಅದು. ಹೊಡೆಸಿಕೊಂಡು ಸೋತು ಸುಣ್ಣ ಆಗಿ ಕೈಗಳನ್ನು ಕಟ್ಟಿಸಿಕೊಂಡು ನಿಂತಿದ್ದ ಅಣ್ಣಾವ್ರಿಗೆ ಅವರ ತಾಯಿಯ ವಾಣಿ ಮೊಳಗುತ್ತದೆ "ಏಳು ಕಂದ.. ನಿನ್ನ ತೋಳಿನಲ್ಲಿ ಸಿಂಹಬಲವನ್ನು ತಂದುಕೋ.. ಸರಪಳಿಯನ್ನು ಮುರಿದು ಹೋಗು ಹೋಗು... ವೈರಿಯನ್ನು ಸದೆ ಬಡಿ ಎಂಬ ಅರ್ಥ ಬರುವ ಉತ್ತೇಜಿತ ಮಾತುಗಳು ಮೂಡುತ್ತವೆ.. ಆಗ .. ಅಣ್ಣಾವ್ರು ನಗುತ್ತ, ಗಹಗಹಿಸಿ ನಗುತ್ತ, ಅಟ್ಟಹಾಸ ಮಾಡುತ್ತಾ.. ಕೈಗಳನ್ನು ಸರಪಳಿಗಳಿಂದ ಬಿಡಿಸಿಕೊಳ್ಳಲು ಕೂಗಾಡುವ ದೃಶ್ಯ.. ಇಂದಿಗೂ ಆ ದೃಶ್ಯ ನೋಡಿದಾಗ ರೋಮಾಂಚನವಾಗುತ್ತದೆ.

ಮಯೂರ 

ವೇದ ಕಲಿಯುತ್ತಿದ್ದ ಬ್ರಾಹ್ಮಣ... ಗರಡಿ ಮನೆಯ ಜಟ್ಟಿಯು ತನ್ನ ಗ್ರಾಮಸ್ಥರನ್ನು ಹೀಯಾಳಿಸುವಂಥಹ ಮಾತುಗಳನ್ನು ಹೇಳಿದಾಗ... ತನ್ನ ಇರುವನ್ನೇ ಮರೆತು .. ಜಟ್ಟಿಯ ಜೊತೆಯಲ್ಲಿ ಹೋರಾಡಲು ಸಿದ್ಧರಾಗುತ್ತಾರೆ.. ಆದರೆ ಆ ಕಾಳಗಕ್ಕೆ ಬೇಕಾದ ಗರಡಿ ಮನೆಯಲ್ಲಿ ಧರಿಸುವ ವಸ್ತ್ರಗಳು ಅವರ ಬಳಿ ಇರುವುದಿಲ್ಲ.. ನಾನು ಹೀಗೆ ಕಾಳಗ ಮಾಡುತ್ತೇನೆ ಎಂದಾಗ ಅಲ್ಲಿದ್ದವರೆಲ್ಲ ನಗುತ್ತಾರೆ.. ಅದನ್ನು ಲೆಕ್ಕಿಸದೆ ಜನಿವಾರವನ್ನು ಸೊಂಟಕ್ಕೆ ಕಟ್ಟಿಕೊಂಡು ಸಿದ್ಧವಾಗುತ್ತಾರೆ.. ಆದರೆ ಅಲ್ಲಿದ್ದವರು ಅವರಿಗೆ ಗರಡಿಮನೆಯ ಉಡುಪನ್ನು ಕೊಡುತ್ತಾರೆ.. ಕಾಳಗಕ್ಕೆ ಸಿದ್ಧವಾಗಬೇಕಾದರೆ.. ಅವರ ಮುಖದಲ್ಲಿನ ಮುಗ್ಧತೆ.. ಜನರು ಎಷ್ಟೇ ನಕ್ಕರು, ಹೀಯಾಳಿಸಿದರು  ಲೆಕ್ಕಿಸದೆ ಹೋರಾಡುವ ದೃಶ್ಯ.. ಸೂಪರ್ ಸೂಪರ್ ಎನ್ನಲೇಬೇಕು.

ಸಿಪಾಯಿ ರಾಮು 

ಸಿಪಾಯಿಯಾಗಿದ್ದ ರಾಮು ಪಾತ್ರ.. ಕಾರಣಾಂತರಗಳಿಂದ ಡಕಾಯಿತರ ಗುಂಪಿಗೆ ಬಂದು ಸೇರುತ್ತಾರೆ.. ಅವರ ಶಕ್ತಿ ಪರೀಕ್ಷೆ ಮಾಡಲು.. ಡಕಾಯಿತರ ಪರಂಪರೆಯಂತೆ..ಬಂದೂಕಿನ ಗುರಿ , ಕತ್ತಿ ಕಾಳಗ, ಮತ್ತು ಪರಸ್ಪರ ಕೈಗಳನ್ನು ಕಟ್ಟಿಕೊಂಡು ಹೊಡೆದಾಡುವ ದೃಶ್ಯ.. ಅಣ್ಣಾವ್ರು ಪಾತ್ರಗಳಲ್ಲಿ ತೊಡಗಿಸಿಕೊಳ್ಳುವ ಪರಿಪೂರ್ಣತೆಗೆ ಒಂದು ಸಾಕ್ಷಿ

ಬಂಗಾರದ ಮನುಷ್ಯ 

ಅಣ್ಣಾವ್ರು ತಮ್ಮ ಜಮೀನನ್ನು ಬಿಟ್ಟು ಕೊಡಲು ಎಂ ಪಿ ಶಂಕರ್ ಬಳಿ ಕೇಳಿದಾಗ.. ಎಂಪಿ ಶಂಕರ್  "ಯಾರಪ್ಪನ ಜಮೀನು" ಎಂದು ಬಯ್ದು ಹೊಡೆದೆ ಬಿಡುತ್ತಾರೆ.. ಆಗ ಶುರುವಾಗುತ್ತದೆ ಕೆಸರು ಗದ್ದೆಯಲ್ಲಿ ಹೊಡೆದಾಟ.. ಮೈಗೆ ಅಂಟಿಕೊಳ್ಳುವ ಕೆಸರು.. ಯೋಚಿಸದೆ ಹೊಡೆದಾಡುವ ರೀತಿ.. ಅದಕ್ಕೆ ತಕ್ಕ ಅಭಿನಯ.. ಅಣ್ಣಾವ್ರೆ ಇದಕ್ಕೆ ಸರಿಯಾದ ಪಾತ್ರಧಾರಿ.

ಪ್ರೇಮದ ಕಾಣಿಕೆ 

ತನ್ನ ಪ್ರೇಯಸಿಯನ್ನು ಕೆಣಕುತ್ತ ಬರುವ ವಜ್ರಮುನಿ ಪಾತ್ರಧಾರಿ.. ಅಣ್ಣಾವ್ರನ್ನು ಹೀಯಾಳಿಸುತ್ತಾರೆ, ಬಯ್ಯುತ್ತಾರೆ.. ತನ್ನ ಪ್ರೇಯಸಿ ಬಿಡಿ ಇವರ ಸಹವಾಸ ನಮಗೇಕೆ ಎಂದಾಗ ಸರಿ ಎಂದು ಕೋಣೆಯ ತನಕ ಹೋಗಿ ತನ್ನ ಪ್ರೇಯಸಿಯನ್ನು ಕೋಣೆಯಲ್ಲಿ ಕೂಡಿ ಹಾಕಿ. ತಾವು ಹಾಕಿಕೊಂಡ ಜರ್ಕಿನ್ ತೆಗೆಯುವ ದೃಶ್ಯದಲ್ಲಿ ಅವರ ಮುಖಭಾವ.. ತನ್ನ ಪ್ರೇಯಸಿಯನ್ನು ಹೊಡೆದದ್ದು, ತಮಗೆ ಹೀಯಾಳಿಸಿದ್ದು, ಹೊಡೆದದ್ದು ಎಲ್ಲಾವುದಕ್ಕೆ ಬಡ್ಡಿ ಸಮೇತ ವಾಪಸ್ ಕೊಡುತ್ತೇನೆ ಎನ್ನುವ ಅಭಿನಯ.. ಸೂಪರ್ ಸೂಪರ್..

ಅನುರಾಗ ಅರಳಿತು 

"ಆ ಬಡ್ಡಿ ಮಗ ಯಾರ ಮಾತನ್ನು ಕೇಳುವುದಿಲ್ಲ" ಎಂದ ಫ್ಯಾಕ್ಟರಿ ಮ್ಯಾನೇಜರ್ ಮಾತಿಗೆ.. ಬಡ್ಡಿ ಮಗನ ಅರ್ಥ ಇದೆ ಎಂದು ಕಪಾಳಕ್ಕೆ ಬಿಗಿಯುತ್ತಾರೆ ಅಣ್ಣಾವ್ರು.. ಅದರಿಂದ ಕ್ರೋಧಗೊಂಡ ಮ್ಯಾನೇಜರ್ ಸಂಜೆ ಕೆಲವು ಬಾಡಿಗೆಗೆ ಗೂಂಡಗಳನ್ನು ಕರೆಸಿ  ಸೈಕಲ್ ನಲ್ಲಿ ಕಳಿಸುತ್ತಾರೆ.. ಒಂದು ವಿಭಿನ್ನ ಸಾಹಸ ಸಂಯೋಜನೆ ಈ ದೃಶ್ಯದಲ್ಲಿದೆ .. ಅಣ್ಣಾವ್ರು ಕೂಡ ಸೈಕಲ್ ಮೇಲೆ ಕೆಲವು ಸಾಹಸಗಳನ್ನು ಮಾಡಿದ್ದಾರೆ .. ಅಷ್ಟೊತ್ತಿಗೆ ಆಗಲೇ ಸುಮಾರು ಐವತ್ತು ವರ್ಷಗಳು ದಾಟಿದ್ದರೂ ಆ ಹುರಿಗಟ್ಟಿದ ದೇಹ, ಆ ಶಿಸ್ತು ಹೊಡೆದಾಟದಲ್ಲಿ ಎದ್ದು ಕಾಣುತ್ತದೆ.

ಕತ್ತಿ, ಕಠಾರಿ, ಭರ್ಜಿ, ಕೋಲು, ದೊಣ್ಣೆ, ಹಗ್ಗ, ಬಿಲ್ಲು ಬಾಣ ಇವುಗಳ ಬಗ್ಗೆ ನಾ ಮಾತಾಡುವುದೇ ಇಲ್ಲ ಕಾರಣ ಈ ಆಯುಧಗಳ ಜೊತೆಯಲ್ಲಿ ಹೋರಾಡಲು ಕಾದಾಡಲು ಭಾರತೀಯ ಮತ್ತು ಪ್ರಪಂಚದ ಎಲ್ಲಾ ಸಿನಿಮಾರಂಗದಲ್ಲಿ ಅಣ್ಣಾವ್ರು ಮಾತ್ರ ಅದಕ್ಕೆ ತಕ್ಕ ನೈಜತೆ ಕೊಡುತ್ತಿದ್ದುದ್ದು. ಹಾಗಾಗಿ ಮಾಮೂಲಿ ಹೊಡೆದಾಟ ಎನ್ನಬಹುದಾದ ದೃಶ್ಯಗಳನ್ನು ಅಪರೂಪದ ಮಟ್ಟಕ್ಕೆ ತೆಗೆದುಕೊಂಡು ಹೋಗುತ್ತಿದ್ದುದ್ದು ಅಣ್ಣಾವ್ರ ಹೆಗ್ಗಳಿಕೆ.

ಆ ಕಟ್ಟು ಮಸ್ತಾದ ಶರೀರಕ್ಕೆ ಮತ್ತು ಅದರ ಆರೈಕೆಗಾಗಿ ಅವರು ಪ್ರತಿದಿನ ಪಡುತ್ತಿದ್ದ  ಪರಿಶ್ರಮಕ್ಕೆ ಈ ಲೇಖನ ಸಮರ್ಪಿತ. ಜೊತೆಯಲ್ಲಿಯೇ ಈ ಎಲ್ಲಾ ಸಾಹಸಗಳನ್ನು ಸಂಯೋಜಿಸುತ್ತಿದ್ದ ಆ ಸಾಹಸ ನಿರ್ದೇಶಕರಿಗೂ ಅಭಿನಂದನೆಗಳು.

ಅಣ್ಣಾವ್ರೆ ನಿಮಗೆ ಜನುಮದಿನದ ಕೊಡುಗೆಯಾಗಿ ಈ ಲೇಖನ.. ಇಷ್ಟವಾಯಿತೆ..?

ಕನಸಲ್ಲಿ ಬಂದು ಹೇಳಿ.. !!! 

Sunday, April 12, 2015

ಯುಗಯುಗಕ್ಕೂ ಸಲ್ಲುವ ಏಕೈಕ ಆರಾಧ್ಯ ದೈವ....!

ದಿನಗಳು ಉರುಳುತ್ತವೆ... ಅವು ವಾರಗಳಾಗುತ್ತವೆ, ಮಾಸಗಳಾಗುತ್ತವೆ.. ವಸಂತಗಳಾಗುತ್ತವೆ.. ದಶಕಗಳಾಗುತ್ತವೆ.. ಶತಮಾನಗಳು, ಯುಗಗಳು ಆಗುತ್ತವೆ.. ಈ ಕಾಲಚಕ್ರವನ್ನು ಮೆಟ್ಟಿ ನಿಲ್ಲಬಲ್ಲವರು, ಯುಗಯುಗಗಳಿಗೂ ಸಲ್ಲುವವರ ಸಂಖ್ಯೆ ಬೆರಳೆಣಿಕೆ.. ಅಂಥವರಲ್ಲಿ ಅಭಿಮಾನಿ ದೇವರುಗಳ ಹೃದಯದಲ್ಲಿ ಸದಾ ನೆಲೆಸಿರುವ ದೇವರು ನಮ್ಮ ಅಣ್ಣಾವ್ರು.

ದೇವಲೋಕದಲ್ಲಿ ಎಲ್ಲರಲ್ಲೂ ತಳಮಳ, ಸಂದೇಹ.. ದೊಡ್ಡ ದೊಡ್ಡ ಚರ್ಚೆಗಳೇ ಆಗೊಗಿದ್ದವು.. ಯಾರಿಗೂ ಒಮ್ಮತ ನಿರ್ಣಯ ಕೊಡಲು ಸಾಧ್ಯವಿರಲಿಲ್ಲ. ತ್ರಿಮೂರ್ತಿಗಳೇ ಬಂದರೂ, ಋಷಿ ಮುನಿಗಳು, ಬ್ರಹ್ಮರ್ಷಿಗಳು, ಮಹರ್ಷಿಗಳು ಊಒಹೂ ನಿರ್ಣಯಕ್ಕೆ ಬರಲು ಹೋರಾಡಿದರು, ಮಾತಿನಲ್ಲಿ ಕುರುಕ್ಷೆತ್ರವನ್ನೇ ಕಟ್ಟಿದರು.. ಉಪಯೋಗವಾಗಲೇ ಇಲ್ಲ..

ಯಾಕೋ ಸಭೆಯಲ್ಲಿ ಅಚಾನಕ್ ನಿಶ್ಯಬ್ಧ..ಎಲ್ಲರೂ ತುಟಿಗಳಿಗೆ ಬೀಗ ಮುದ್ರೆ ಹಾಕಿಕೊಂಡು ಬಿಟ್ಟಿದ್ದಾರೋ ಎನ್ನುವಂಥ ಸನ್ನಿವೇಶ ಸೃಷ್ಟಿಯಾಗಿತ್ತು.. ಅಲ್ಲಿದ್ದ ನಾರದರಿಗೆ ಆಶ್ಚರ್ಯ ಇದೇನಿದು. ಈಗ ಕೆಲ ಹೊತ್ತಿನಲ್ಲಿ ನಭೋಮಂಡಲವೇ ತೂತು ಬಿದ್ದು ನಾವೆಲ್ಲಾ ಭುವಿಗೆ ಜಾರಿ ಬಿದ್ದು ಬಿಡುತ್ತೇವೆ ಅನ್ನುವಷ್ಟು ಸದ್ದು ಮಾಡುತ್ತಿದ್ದ ಈ ದೇವಲೋಕದಲ್ಲಿ ಈ ನಿರ್ವಾತ ವಾತಾವರಣವೇಕೆ ಎನ್ನುವ ಅನುಮಾನ ಬಂದು.... ಹಾಗೆ ತಂಬೂರಿ ಮೀಟುತ್ತಾ, ನಾರಾಯಣ ನಾರಾಯಣ ಎಂದು ತಿರುಗಿ ನೋಡುತ್ತಾರೆ...

"ಓಹ್ ಬನ್ನಿ ಬನ್ನಿ.. ನಿಮಗೆ ಕಾಯುತ್ತಿದ್ದೆವು.. ನಿಮ್ಮ ಪರಿಚಯವಾಗಲಿ ನಮಗೆಲ್ಲ.. ನಮಗೆ ನಿಮ್ಮ ಪರಿಚಯವಿದೆ... ಆದರೆ ನಿಮ್ಮನ್ನು ನೋಡುವ ತವಕ ನಮಗೆಲ್ಲರಿಗೂ ಇತ್ತು.. .. "

"ನಮಸ್ಕಾರ ನಮಸ್ಕಾರ.. ನಾರದ ಮುನಿಗಳೇ ನನ್ನ ಆಗಮನವನ್ನು ನೀವೆಲ್ಲ ನಿರೀಕ್ಷಿಸುತ್ತಿದ್ದೀರ.. ? ದೊಡ್ಡ ಮಾತು ದೊಡ್ಡ ಮಾತು.. ನೀವೆಲ್ಲ ದೇವಾನುದೇವತೆಗಳು.. ನಾ ಒಬ್ಬ ಹುಲು ಮಾನವ.. ನಾನೆಲ್ಲಿ ನೀವೆಲ್ಲಿ.. ಏನಿದು ಈ ತುಂಟತನ... "

"ಇಲ್ಲ ಇಲ್ಲ.. ನಾವೆಲ್ಲಾ ಯುಗಯುಗಗಳ ಕಾಲ ತಪಸ್ಸು ಮಾಡಿ ಸಿದ್ಧಿಸಿ ಈ ದೇವತ್ವವನ್ನು ಪಡೆದ ನಮಗೆ ಸಾಧಿಸಲು ಆಗದ ಕೆಲಸವನ್ನು ನೀವು ಕೇವಲ ಏಳೆಂಟು ದಶಕಗಳಲ್ಲಿ ಸಾಧಿಸಿದ್ದೀರಿ.. ಅದು ನಿಮಗೆ ಹೇಗೆ ಸಾಧ್ಯವಾಯಿತು.. ಇನ್ನೊಂದು ತಮಾಷೆ ಗೊತ್ತೇ.. ಇದನ್ನು ಕೇಳಿದರೆ ನೀವೇ ನಗುತ್ತೀರಿ"

"ನಿಮಗೆ ಅಭ್ಯಂತರ ಇಲ್ಲದೆ ಹೋದರೆ  ಹೇಳಿ ನಾರದ ಮುನಿಗಳೇ.. ನೀವು ಹೇಳಿ ನಂತರ ನಿಮ್ಮ ಪ್ರಶ್ನೆಗೆ ಉತ್ತರಿಸುವೆ.. "

"ದೇವಲೋಕದ ನಮ್ಮ ಮಾರುಕಟ್ಟೆಯಲ್ಲಿ ತಿಂಡಿ ತಿನಿಸು ಪೇಯ ಎಲ್ಲವೂ ಸರಾಗವಾಗಿ ಮಾರಾಟವಾಗುತ್ತದೆ.. ಬಳೆ, ಲೋಲಾಕು, ಉಡುಗೆ ತೊಡುಗೆ, ಪಾದರಕ್ಷೆಗಳು ಯಾವುದಕ್ಕೂ ಮೋಸವಿಲ್ಲ.. ಆದರೆ ಆದರೆ... "

"ಹೇಳಿ ಮುನಿಗಳೇ ಏನು ಆದರೆ?"

"ಇಲ್ಲಿನ ದೇವರ ಚಿತ್ರಗಳಾದ ಗಣಪ, ಸುಬ್ರಮಣ್ಯ, ತ್ರಿಮೂರ್ತಿಗಳು, ರಾಮ, ಕೃಷ್ಣ, ಹೀಗೆ ವಿಷ್ಣುವಿನ ದಶಾವತಾರ, ಋಷಿ ಮುನಿಗಳು, ಇವೆಲ್ಲ ಹೋಗಲಿ ಅಸುರರಾದ ರಾವಣ, ಜರಾಸಂಧ, ದುರ್ಯೋಧನ, ಹೀಗೆ ಮಿಕ್ಕಿತರ ಪುರಾಣ ಪಾತ್ರಗಳ ಯಾವುದೇ ಚಿತ್ರಪಟಗಳು ನಮ್ಮ ಮಾರುಕಟ್ಟೆಯಲ್ಲಿ ಕೊಳೆಯುತ್ತಾ ಬಿದ್ದಿವೆ.. ಯಾರೂ ಅದನ್ನು ತೆಗೆದುಕೊಳ್ಳುವುದಿಲ್ಲ.. ಇದನ್ನು ತೋರಿಸಿದರೂ ಬೇಡ ಬೇಡವೇ ಎಂದು ಹೇಳುತ್ತಾರೆ..."

"ಅರೆ ಅರೆ ಇದೇನಿದು ಆಶ್ಚರ್ಯವಾಗಿದೆಯೆ.. ಯಾಕಂತೆ.. ದೇವಲೋಕದಲ್ಲಿ ದೇವರ ಬಗ್ಗೆ ಭಕ್ತಿ, ಶ್ರದ್ಧೆ ಕಡಿಮೆಯಾಯಿತೆ.. ಅಥವಾ ದೇವರ ಮಹಿಮೆ ಕಡಿಮೆ ಆಗಿದೆಯೇ.. ಕೇಳಿದ ವರವನ್ನು ಕರುಣಿಸಲು ಆಗುತ್ತಿಲ್ಲವೇ.. ಯಾಕೆ ಯಾಕೆ.. ನನಗೆ ಕುತೂಹಲ ತಡೆಯಲು ಆಗುತ್ತಿಲ್ಲ.. ಹೇಳಿ ಮುನಿಗಳೇ ಹೇಳಿ ಮುನಿಗಳೇ"

"ನೋಡಿ ನೋಡಿ ನೀವೇ ನೋಡಿ.. ಬರಿ ಈ ಕೆಳಗಿನ ಪಟಗಳನ್ನು ಮಾತ್ರ ಕೊಳ್ಳುತ್ತಿದ್ದಾರೆ.. ನಮ್ಮ ಇಲ್ಲಿನ ಯಾರ ಚಿತ್ರಪಟಗಳನ್ನು ಮೂಸಿ ಕೂಡ ನೋಡುತ್ತಿಲ್ಲ.. "

ಹಾಗೆಯೇ ಕಣ್ಣು ಹಾಯಿಸಿದರು.. ಆಶ್ಚರ್ಯ.. ನಗು ಎಲ್ಲವೂ ಒಟ್ಟಿಗೆ









"ಓಹ್ ಆಹಾ ಆಹಾ ಅಹಹ" ನಗು ಬಂತು.. "ಅರೆ ಇದೆಲ್ಲ ನನ್ನದೇ ಚಿತ್ರಗಳ ಚಿತ್ರ ಪಟ.. ಇದೆಲ್ಲ ಇಲ್ಲಿಗೆ ಹೇಗೆ ಬಂದವು.. "

"ಅಯ್ಯೋ ನಮ್ಮ ಗಣಪ ಇದ್ದಾನಲ್ಲ ಅವನು ಪ್ರತಿ ವರ್ಷ ಭುವಿಗೆ ಭಾದ್ರಪದ ಶುಕ್ಲ ಚೌತಿಯ ದಿನ ಹೋದಾಗ.. ಒಮ್ಮೆ ನಿಮ್ಮ ಚಲನಚಿತ್ರಗಳನ್ನು ನೋಡಿ.. ಇಲ್ಲಿಗೆ ತಂದು ಬಿಟ್ಟಿದ್ದಾನೆ.. ಅವನ ಕೆಲಸ ನಿಮ್ಮ ಚಿತ್ರಗಳು ಖಾಲಿ ಆಗದೆ ಇರುವ ಹಾಗೆ ಸದಾ ಅಚ್ಚು ಹಾಕುತ್ತಲೇ ಇರುವುದು.. ನೋಡಿ ಅವನ ಅಂಗಡಿ ಸದಾ ಗಿಜಿ ಗಿಜಿ ಎನ್ನುತ್ತಲೇ ಇರುತ್ತದೆ.. "

"ನಾರದ ಮುನಿಗಳೇ ಈ ದೇಹವನ್ನು ರಾಜಕುಮಾರ, ಮುತ್ತು ರಾಜ, ರಾಜಣ್ಣ, ಅಣ್ಣಾವ್ರು ಎಂದು ಗುರುತಿಸುತ್ತಾರೆ.. ಆದ್ರೆ ಈ ಲೋಕದಲ್ಲಿ ನೀವೆಲ್ಲ ನನಗೆ ತೋರುತ್ತಿರುವ ಗೌರವ ನೋಡಿ ನಾ ಮೂಕನಾಗಿದ್ದೇನೆ.. ಭುವಿಯಲ್ಲಿ ನನಗೆ ಅಭಿಮಾನಿಗಳು ಅಣ್ಣಾ ಎಂದು ಕರೆದರೆ.. ನೀವೆಲ್ಲ ನನ್ನನ್ನು ಇನ್ನಷ್ಟು ಎತ್ತರಕ್ಕೆ ಏರಿಸಿದ್ದೀರ.. ನಿಮಗೆಲ್ಲಾ ನನ್ನ ಹೃದಯ ಪೂರ್ವಕ ನಮನಗಳು"

"ಹೌದು ಅಣ್ಣಾವ್ರೆ .. ನಿಮ್ಮ ಮಾತು ನಿಜ.. ನೀವು ನಟಸಾರ್ವಭೌಮ ಮಾತ್ರವೇ ಅಲ್ಲ ನೀವು ಚಲನಚಿತ್ರದ ಅನಭಿಷಿಕ್ತ ಸಾಮ್ರಾಟರು.. ನಿಮ್ಮಲ್ಲೇ ಮುನ್ನೂರು ಕೋಟಿ ದೇವಾನುದೇವತೆಗಳನ್ನು ನೋಡಬಹುದು ನೋಡುತ್ತಿದ್ದೇವೆ.. "
ಇಡಿ ದೇವಲೋಕ ಎದ್ದು ನಿಂತು .. ಅಣ್ಣಾವ್ರೆ ನೀವು ನಮ್ಮ ಕರೆಗೆ ಓಗೊಟ್ಟು ನಿಮ್ಮ ಅಭಿಮಾನಿ ದೇವರುಗಳನ್ನು ಬಿಟ್ಟು ಇಲ್ಲಿಗೆ ಬಂದದ್ದು ನಮಗೆ ಕುಶಿ ಆಯ್ತು ಅಂತ ಹೇಳಿದರೂ.. ನಿಮ್ಮ ಅಭಿಮಾನಿ ದೇವರುಗಳು ನಿಮ್ಮನ್ನು ದೇವರೇ ಎಂದು ಸಂಭ್ರಮಿಸುವುದನ್ನು ನೋಡಿ ಕೇಳುವುದೇ ನಮ್ಮ ಭಾಗ್ಯ"

************

"ಹೀಗೆ ಯುಗಯುಗಕ್ಕೂ ಸಲ್ಲುವ ಏಕೈಕ ಆರಾಧ್ಯ ದೈವ ನಮ್ಮ ಅಭಿಮಾನಿದೇವರುಗಳ ದೇವರು.. "