Sunday, June 28, 2015

ಸಂಕಟದಲ್ಲಿ ಸೆರೆಯಾದ ಧರ್ಮ... ಧರ್ಮಸೆರೆ (1979)

ಒಳ್ಳೆಯ ರಸ್ತೆ ಎಂದೂ ಒಳ್ಳೆಯ ವಾಹನ ಚಾಲಕನನ್ನು ನೀಡುವುದಿಲ್ಲ ಎನ್ನುತ್ತಾರೆ ಹಿರಿಯರು..


ಸದಾ ಸವಾಲನ್ನು ಬೆನ್ನಿಗೆ ಹಾಕಿಕೊಂಡು, ಭಿನ್ನ ವಿಭಿನ್ನವಾದ ಕಥೆಗಳನ್ನು ಆಯ್ದುಕೊಂಡು.. ಇಂಥಹ ಕಥೆಗಳು ಬೆಳ್ಳಿ ತೆರೆಯ ಮೇಲೆ ಬರಲು ಸಾಧ್ಯವೇ ಎನ್ನುವ ತರ್ಕವನ್ನೇ ಬುಡಮೇಲು ಮಾಡಿ, ಅನೇಕ ಅದ್ಭುತ ಚಿತ್ರಗಳನ್ನು ಕೊಡುಗೆಯಾಗಿ ಕೊಟ್ಟವರು ನಮ್ಮ ಅಚ್ಚುಮೆಚ್ಚಿನ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರು.

ಮತ್ತು ಅವರು ತುಳಿದ ಹಾದಿ. ಒಂದು ಚಿತ್ರ ನಂತರ ಇನ್ನೊಂದಕ್ಕೆ ಯಾವುದೇ ರೀತಿಯಲ್ಲಿ ತರ್ಕ ಬದ್ಧ ಲಯವಿರುತ್ತಿರಲಿಲ್ಲ.. ಅದೇ ಬೇರೆ ಇದೆ ಬೇರೆ ಎನ್ನುವ ರೀತಿಯಲ್ಲಿ ಅವರ ಚಿತ್ರಗಳು ಮೂಡಿ ಬರುತ್ತಿದ್ದವು. ಇಂದಿನ ಬೆಟ್ಟಿಂಗ್ ಯುಗದಲ್ಲಿ ಅವರ ಚಿತ್ರಗಳು ಬಂದಿದ್ದರೇ ಅವರ ಚಿತ್ರ ಕತೆಗಳ ಮೇಲೆ ಜೂಜು ಕಟ್ಟಿ ಸೋಲುತ್ತಿದ್ದವರು ಲೆಕ್ಕಕ್ಕೆ ಇರುತ್ತಿರಲಿಲ್ಲ.

ಹಿಂದಿನ ಚಿತ್ರ ಪಡುವಾರಹಳ್ಳಿ ಪಾಂಡವರು ಚಿತ್ರದಲ್ಲಿ ದೈಹಿಕ ದಬ್ಬಾಳಿಕೆ, ಬಹಿಷ್ಕಾರ, ಉಸಿರು ಕಟ್ಟಿಸಿ ಗುಲಾಮಿ ಪದ್ದತಿಯನ್ನು ರೂಡಯಲ್ಲಿಟ್ಟುಕೊಂಡ ಹಳ್ಳಿ ಕಥೆಯನ್ನು ಹೇಳಿದರೆ, ಈ ಚಿತ್ರದಲ್ಲಿ ಮಾನಸಿಕ ಹಿಂಸೆ ಬಗ್ಗೆಯೇ ಒಂದು ಚಿತ್ರ ನೀಡುತ್ತಾರೆ.

ಶ್ರೀ ಜಡಭರತ ಅವರ ಅದೇ ಹೆಸರಿನ ಕಥೆಯನ್ನು ಕೈಗೆ ತೆಗೆದುಕೊಳ್ಳುವ ಇವರಿಗೆ ಜೊತೆಯಾಗಿ ನಿಂತದ್ದು ನಟಿ ಆರತಿ ನಿರ್ಮಾಪಕಿಯಾಗಿ. ಆ ಕಾಲದಲ್ಲಿ ಆರತಿ ಉತ್ತುಂಗ ತಲುಪಿದ್ದ ಕಾಲ, ಯಾವುದೇ ಕಾರಣಕ್ಕೂ ಈ ಚಿತ್ರವನ್ನು ಆರಿಸಿಕೊಳ್ಳಲು ಕಾರಣ ಬೇಕಿರಲಿಲ್ಲ. ಅವರು ಹೇಳಿದ ರೀತಿ ಕಥೆ ತಯಾರಾಗಬಹುದಿದ್ದ ಕಾಲ ಅದು.

ಕಿವುಡಿ ಮೂಕಿಯಾಗಿ ಮನೋಜ್ಞ ಅಭಿನಯ ನೀಡಿರುವ ಆರತಿ ಈ ಚಿತ್ರದಲ್ಲಿ ಒಂದು ವಿಭಿನ್ನ ನಾಯಕಿಯಾಗಿ ನೆಲೆ ನಿಲ್ಲುತ್ತಾರೆ. ನಿರ್ದೇಶಕರ ನಟಿ ಎಂಬ ಹೆಸರಿಗೆ ತಕ್ಕಂತೆ ಅಭಿನಯ ನೀಡಿದ್ದಾರೆ. ಮಾತಿಲ್ಲ, ಆದರೆ ಅವರ ಅಭಿನಯ ಮಾತಾಡುತ್ತದೆ ಇಡಿ ಚಿತ್ರದಲ್ಲಿ.  ಕಥಾಸಂಗಮದ ಮುನಿತಾಯಿ ಮತ್ತೆ ತೆರೆಯ ಮೇಲೆ ಅಪ್ಪಲಿಸಿದ್ದಾರೆ, ಆದರೆ ಇಲ್ಲಿ ಬರಿ ಕುರುಡಿಯಾಗಿ ಅಲ್ಲ, ಕಿವುಡಿ ಮತ್ತು ಮೂಕಿಯಾಗಿ.

ಈ ಚಿತ್ರ ಆರಂಭಿಕ ಹಂತದಲ್ಲಿ ಅರೆ ಆರತಿ ಏಕೆ ಈ ಚಿತ್ರಕಥೆಗೆ ಒಪ್ಪಿಕೊಂಡರು ಎಂಬ ಅನುಮಾನ ಕಾಡಿತ್ತು.. ಆದರೆ ಮೊದಲ ಅರ್ಧ ಅಥವಾ ಮುಕ್ಕಾಲು ಘಂಟೆ ಆದ ಮೇಲೆ ನಿಧಾನವಾಗಿ ಆವರಿಸಿಕೊಳ್ಳುತ್ತಾ ಹೋಗುತ್ತಾರೆ.

ತನ್ನ ತಂಗಿ ಮತ್ತು ಭಾವ ಭೂಮದೂಟಕ್ಕೆ ಕೂತಾಗ.. ತಾನು ಆ ಜಾಗದಲ್ಲಿದ್ದೇನೆ ಎನ್ನುವಂತೆ ಕಲ್ಪಿಸಿಕೊಂಡು ಅಭಿನಯ ಕಣ್ಣಿಗೆ ಕಟ್ಟುತ್ತದೆ. "ಮೂಕ ಹಕ್ಕಿಯು ಹಾಡುತಿದೆ" ಹಾಡು ಹಂತ ಹಂತವಾಗಿ ಮೂಡಿ ಬರುತ್ತದೆ, ಪ್ರತಿಹಂತದಲ್ಲೂ ಅವರ ಅಭಿನಯ ಅಬ್ಬಬ್ಬ ಎನ್ನಿಸುತ್ತದೆ.

ಆರತಿ ತನ್ನ ಮನೆಯಲ್ಲಿ ಇರಲಿ ಎಂದು ಶ್ರೀನಾಥ್ ಹೇಳಿದಾಗ, ಆ ಮೂಕವೇದನೆಯಲ್ಲೂ ಅಭಿನಯ ತೋರುವ ಆರತಿ ನಮ್ಮ ಹೃದಯದಲ್ಲಿ ಚಪ್ಪಾಳೆ ಗಿಟ್ಟಿಸುತ್ತಾರೆ.

ಅವರ ತಂಗಿ ಭಾವನ ಫೋಟೋ ತರಹವೇ ತನ್ನದು ಫೋಟೋ ಇರಬೇಕು ಎನ್ನುವಾಗ ಅವರು ತೋರುವ ಕಣ್ಣುಗಳ ಅಭಿನಯ ಸೂಪರ್.

ಮನಸ್ತಾಪ ಬಂದು ತನ್ನ ತಂಗಿ ಇವರನ್ನು ತನ್ನ ಕೋಣೆಯಿಂದ ಹೊರಗೆ ಹಾಕಿದಾಗ, ಕಣ್ಣಲ್ಲೇ ಮಡುವು ಗಟ್ಟಿದ ದುಃಖವನ್ನು ತೋರುತ್ತಾ.. ಕ್ಯಾಮೆರ ನಿಧಾನವಾಗಿ ಕಸದ ಕಡೆಗೆ ತೋರುತ್ತದೆ. ಪುಟ್ಟಣ್ಣ ಅವರ ಸೂಕ್ಷ್ಮ ನಿರ್ದೇಶಕನ ಮನಸ್ಸು ತೋರುವುದು ಆ ಪಾತ್ರದ ಬೆಲೆ ಕಸಕ್ಕಿಂತ ಕಡೆ ಎಂದು. ಸೂಪರ್ ಕಲ್ಪನೆ ಮತ್ತು ದೃಶ್ಯ ಸಂಯೋಜನೆ.

ತನ್ನ ತಂಗಿ ಮನೆಯಲ್ಲಿ ಇಲ್ಲದಾಗ, ಬಣ್ಣ ಬಣ್ಣದ ಕನಸ್ಸು ಕಾಣುತ್ತಾ, ತೋರಣವನ್ನು ಮುಟ್ಟಿ ಮುಟ್ಟಿ ನೋಡುವ ಆರತಿ ಅಭಿನಯ, ನಂತರ, ಶ್ರೀನಾಥ್ ಆರತಿ ಪಾತ್ರಕ್ಕೆ ಮನಸೋತು ಆಕೆಯನ್ನು ಒಪ್ಪಿಕೊಳ್ಳುವ ದೃಶ್ಯ, ನೆರಳು ಬೆಳಕಿನಲ್ಲಿ ಬಣ್ಣ ಬಣ್ಣದ ದೀಪದಲ್ಲಿ ತೋರುತ್ತಾರೆ. ಮತ್ತೊಮ್ಮೆ ಅದ್ಭುತ ದೃಶ್ಯ ಸಂಯೋಜನೆ ಪುಟ್ಟಣ್ಣ ಅವರದ್ದು.

ಶ್ರೀನಾಥ್.. ಗುರುಗಳೇ ನೀವು ಹೇಳಿ ನಾ ಅಭಿನಯಿಸುತ್ತೇನೆ ಎನ್ನುವ ದೃಷ್ಟಿಯಲ್ಲಿ ಇಡಿ ಚಿತ್ರದಲ್ಲಿ ನಿಲ್ಲುತ್ತಾರೆ. ಪ್ರತಿ ಮಾತನ್ನು ಅಳೆದು ತೂಗಿ ಮಾತಾಡುವ ಸಂಯಮದ ಪಾತ್ರ. ಒಮ್ಮೆ ಮಾತ್ರ ತನ್ನ ಮಡದಿಯ ಮಾತನ್ನು ಕೇಳಿ ಆರತಿಗೆ ಹೊಡೆಯುವ ದೃಶ್ಯದಲ್ಲಿ ಮಾತ್ರ ಸಂಯಮ ಕಳೆದುಕೊಳ್ಳುವ ಅಭಿನಯ ತೋರುತ್ತಾರೆ. ಆದರೆ ಇಡಿ ಚಿತ್ರದಲ್ಲಿ ಒಂದು ತೂಕಬದ್ಧ ಪಾತ್ರದಲ್ಲಿನ ಅಭಿನಯ ಶ್ರೀನಾಥ್ ಅವರಿಂದ ಮೂಡಿ ಬಂದಿದೆ.

"ಕಂದಾ ಓ ನನ್ನ ಕಂದಾ" ಹಾಡಿನಲ್ಲಿ ಶ್ರೀನಾಥ್ ಅವರ ಅಭಿನಯ ವಿಶೇಷ ಎನ್ನಿಸುತ್ತದೆ.. ಹಾಗೆಯೇ ಎಸ್ ಪಿ ಬಾಲಸುಬ್ರಮಣ್ಯಂ ಅವರು ಎದೆ ತುಂಬಿ ಹಾಡಿದ್ದಾರೆ. ಚಿತ್ರದ ಅಂತ್ಯದಲ್ಲಿ ಇದೆ ಹಾಡಿನ ತುಣುಕನ್ನು ಪುಟ್ಟಣ್ಣ ಅವರ ಮೆಚ್ಚಿನ ಗಾಯಕ ಪಿ ಬಿ ಶ್ರೀನಿವಾಸ್ ಹಾಡಿದ್ದಾರೆ.

ಕಳೆದ ದಶಕದ ಹಲಾವರು ಚಿತ್ರಗಳಲ್ಲಿ ಖಾಯಂ ಅಮ್ಮನ ಪಾತ್ರ ಮಾಡಿರುವ ಸತ್ಯಪ್ರಿಯ ಈ ಚಿತ್ರದಲ್ಲಿ ಎರಡನೇ ನಾಯಕಿ ಪಾತ್ರದಲ್ಲಿ ಶೋಭಿಸುತ್ತಾರೆ. ಪ್ರೀತಿ, ವಿಶ್ವಾಸ, ದ್ವೇಷ, ಅಸೂಯೆ ಎಲ್ಲವನ್ನು ಹೊರಹೊಮ್ಮಿಸುವ ಪಾತ್ರಕ್ಕೆ ತಕ್ಕ ನ್ಯಾಯ ಒದಗಿಸಿದ್ದಾರೆ.

ಉಪಾಸನೆಯ ನಂತರ ಮತ್ತೊಮ್ಮೆ ಆರತಿ ಮತ್ತು ಸೀತಾರಾಂ ಅವರ ಜೋಡಿ ಅಭಿನಯ ಮನಸ್ಸು ತಾಕುತ್ತದೆ. ಅಪ್ಪ ಮಗಳಾಗಿ ಒಬ್ಬರನ್ನು ಇನ್ನೊಬ್ಬರು ಅನುಸರಿಸಿ ಅಭಿನಯ ನೀಡಿರುವುದು ವಿಶೇಷ. ಸೀತಾರಾಂ ತನ್ನ ಮಗಳು ಗರ್ಭಿಣಿ ಎಂದು ತಿಳಿದ ಮೇಲೆ, ತಾಳ್ಮೆ ಕೆಟ್ಟು ಕೂಗಾಡುವ ಅಭಿನಯ ಮನಸ್ಸನ್ನು ಕಲಕುತ್ತದೆ. ಅಲ್ಲಿವರೆಗೂ ತಾಳ್ಮೆ, ಅನುಭೂತಿ ಇಟ್ಟುಕೊಂಡು ತನ್ನ ಮಗಳನ್ನು ನೆರಳಾಗಿ ಕಾಯುವ ಅವರು ಅಚಾನಕ್ ಆವೇಶಕ್ಕೆ ಮನಸೋತು, ತನ್ನ ಮಗಳ ಮೇಲೆ ನಂಬಿಕೆ ಕಳೆದುಕೊಂಡು ರೌದ್ರಾವತಾರ ತಾಳುವ ದೃಶ್ಯ ಬೊಂಬಾಟ್.

ಮುಸುರಿ ಕೃಷ್ಣಮೂರ್ತಿ.. ಪ್ರಚಂಡ ಅಭಿನಯ ಹೊತ್ತ ಮಹನೀಯ ಇವರು. ಪಡುವಾರಹಳ್ಳಿ ಪಾಂಡವರು ಚಿತ್ರದಲ್ಲಿ ಇಡಿ ಚಿತ್ರವನ್ನು ಆವರಿಸಿಕೊಳ್ಳುವ ಇವರು, ಇಲ್ಲಿ ಮತ್ತೊಮ್ಮೆ ತಮ್ಮ ಅಭಿನಯದ ಛಾಪನ್ನು ಒತ್ತಿದ್ದಾರೆ. ಕ್ರೌರ್ಯ, ಉಪಟಳ ಕೊಡುವ ಸೋದರಮಾವನಾಗಿ ಆರತಿಗೆ ನಾನಾ ವಿಧದಲ್ಲಿ ಕಾಟ ಕೊಡುವ ಅಭಿನಯ ಆಹಾ ಎನ್ನಿಸುತ್ತದೆ. ಅದರಲ್ಲೂ ಆರತಿ ಮಾನಸಿಕ ಹಿಂಸೆ ಕೊಡುವ ದೃಶ್ಯದಲ್ಲಿ ಅವರ ಅಭಿನಯ, ಖಳ ಎಂದರೆ ಮಾಮೂಲಿ ವೇಷ ಭೂಷಣದಲ್ಲೂ ಮಿಂಚಬಹುದು ಎಂದು ತೋರಿದ್ದಾರೆ.

ಅವರ ಚುರುಕು ಸಂಭಾಷಣೆ
"ಯಾವ ಬ್ರಾಂಡ್ ಸಿಮೆಂಟ್ ಆದರೇನೂ.. ನೀರು ಬಿದ್ದ ಕೂಡಲೇ ಕಚ್ಚಿಕೊಳ್ಳುತ್ತೆ"

"ಗಂಡು ಹೆಣ್ಣು ಎರಡು ಇಟ್ಟಿಗೆ ಇದ್ದ ಹಾಗೆ, ಎರಡು ಇಟ್ಟಿಗೆ ಬಲವಾಗಿ ಕಚ್ಚಿಕೊಂಡು ಹಾರೆ ಹಾಕಿದರೂ ಬಿಡಬಾರದು ಅಷ್ಟು ಬಲವಾಗಿ ಇರಬೇಕಾದರೆ, ಪರಸ್ಪರ ಒಪ್ಪಿಗೆ ಎನ್ನುವ ಸಿಮೆಂಟ್ ಇರಬೇಕು"

"ದೇಹಕ್ಕೆ ಹಿಂಸೆ ಕೊಟ್ಟರೆ ಭಾವನಿಗೆ ಗೊತ್ತಾಗುತ್ತದೆ, ಮಾನಸಿಕವಾಗಿ ಹಿಂಸೆ ಕೊಟ್ಟರೆ, ಕಬ್ಬಿಣದ ಗುಂಡು ಕುಲುಮೆಯಲ್ಲಿ ಕರಗಿ ನೀರಾಗುವ ಹಾಗೆ ಅವಳೊಳಗೆ ಇರುವ ಪಿಂಡ ಹಾಗೆ ಕರಗಿ ನೀರಾಗಿ ಹೋಗುತ್ತದೆ"

ಬಾಯಲ್ಲಿ ಇರೋದು ನಾಲಿಗೆನೋ ಎಕ್ಕಡಾನೋ ಎನ್ನುವ ಮಾತಿಗೆ "ಎಕ್ಕಡಾನೆ ಅಂದುಕೋ" ಎಂದು ಹೇಳಿ ನಾಲಿಗೆಯನ್ನು ಹೊರಕ್ಕೆ ಹಾಕಿ "ಎಕ್ಕಡ ಆಗೊಯ್ತೋ" ಎನ್ನುತ್ತಾರೆ.. ತದನಂತರ ಸೀತಾರಾಂ ಮುಸುರಿಯನ್ನು ಹೊಡೆದು ದೂಕುತ್ತಾರೆ, ಜೋಕಾಲಿಯನ್ನು ದಾಟಿ ನೆಗೆದು ಬೀಳುತ್ತಾರೆ.. ಬಹಳ ನಿಜವಾಗಿ ಮೂಡಿ ಬಂದಿದೆ ಈ ದೃಶ್ಯ.

ಪುಟ್ಟಣ್ಣ ಅವರು ಈ ಚಿತ್ರಕಥೆಯನ್ನು ತುಂಬಾ ಚೆನ್ನಾಗಿ ಹೆಣೆದಿದ್ದಾರೆ. ಬೋರ್ ಅಥವಾ ಅಳುಮುಂಜಿ ಚಿತ್ರವಾಗಬಹುದಿದ್ದ ಚಿತ್ರವನ್ನು ಸಹ್ಯವಾಗಿ ಚಿತ್ರಿಸಿದ್ದಾರೆ.

ಧರ್ಮ ಸೆರೆ ಎಂದಾಗ ನಾವೇ ಸೃಷ್ಟಿಸಿಕೊಂಡಿರುವ ಈ ಜಗತ್ತಿನ ನಿಯಮದಲ್ಲಿ ನಾವೇ ಬಂಧಿಯಾಗಿ ನರಳುವುದನ್ನು ಎದಿ ಚಿತ್ರದ ಹೆಸರನ್ನು ಕಿಟಕಿಯ ಸರಳುಗಳನ್ನು ಸೆರೆಮನೆಯ ಸರಳುಗಳ ಹಾಗೆ ನೆರಳಲ್ಲಿ ತೋರಿಸಿರುವುದು ಅವರ ಜಾಣ್ಮೆಗೆ ಸಾಕ್ಷಿ
ಮದುವೆ ಸಂಪ್ರದಾಯವನ್ನು ಅಚ್ಚುಕಟ್ಟಾಗಿ ಚಿತ್ರಿಸಿರುವುದು.
ಧರ್ಮ ಜಿಜ್ಞಾಸೆಯನ್ನು ಕೆಲವೇ ಮಾತುಗಳಲ್ಲಿ ಮೂಡಿಸಿರುವುದು
ಆರಂಭಿಕ ದೃಶ್ಯದಲ್ಲಿಯೇ ನಾಯಕಿ ಮೂಗಿ ಮತ್ತು ಆಕೆಯ ಮೂಕ ಪ್ರಾಣಿಗಳ ಮೇಲಿನ ಮಮಕಾರ
ಈ ಚಿತ್ರದಲ್ಲಿ ಬರಿ ನಟರಿಂದ ಅಷ್ಟೇ ಅಲ್ಲದೆ ಪ್ರಾಣಿಗಳಿಂದ ಕೂಡ ಅಭಿನಯ ತೆಗೆದಿರುವುದು.
            ಬಳೆಗಾರನನ್ನು ಮತ್ತೆ ಕರೆದು ತರುವ ನಾಯಿ ಕೋತಿ
            ಮುಸುರಿ ಆರತಿಯ ಮೇಲೆ ಕಣ್ಣು ಹಾಕಿದಾಗ ಪರಕೆ ಸೇವೆ ಮಾಡುವ ಕೋತಿ
            ಆರತಿಯನ್ನು ಬಿಡದೆ ಹಿಂಬಾಲಿಸುವ ಕೋತಿ ಮತ್ತು ನಾಯಿ
ಕೈ ಹಿಡಿದ ಹೆಂಡತಿ ಕೋಪಗೊಂಡು ನಾಯಕನ ಜೊತೆಗಿನ ಫೋಟೋವನ್ನು ಒಡೆದು ಹಾಕಿದಾಗ.. ಆ ಫೋಟೋದಲ್ಲಿರುವ ವ್ಯಕ್ತಿಗಳು ಮಾತಾಡಿದಾಗ ಕ್ಯಾಮೆರ ಕೊಡ ಆ ಚಿತ್ರದಲ್ಲಿನ ವ್ಯಕ್ತಿಗಳ ಮೇಲೆ ಕೆಂದ್ರಿಕರಿಸಿರುವುದು.
ಗಂಡ ಹೆಂಡತಿ ಸಂಭಾಷಣೆಯನ್ನು ಒಡೆದ ಗಾಜಿನ ಫಿಲ್ಟರ್ ನಲ್ಲಿ ಚಿತ್ರಿಸಿರುವುದು.. ಗಂಡ ಹೆಂಡಿರ ಮಧ್ಯೆ ಸಂಬಂಧ ಒಡೆದಿದೆ ಎಂದು ತೋರಿಸುವ ತಾರ್ಕಿಕ ದೃಶ್ಯ
ಕ್ಷಮೆಯಾಚಿಸುವ ಗಂಡ ಮೇಲೆ ಕೋಪಗೊಂಡ ಹೆಂಡತಿ ತಾನು ಗಂಡನೊಡನೆ ಮಾತಾಡೋಲ್ಲ ಎಂದು ಬಾಗಿಲು ಹಾಕಿಕೊಂಡಾಗ, ಬಾಗಿಲ ಮೇಲಿನ ಸಿಮೆಂಟ್ ಗೋಡೆ ಬಿರುಕು ಬಿಟ್ಟುಕೊಳ್ಳುವುದು ಸಾಂಕೇತಿಕವಾಗಿ ಮೂಡಿಬಂದಿದೆ.

"ಈ ಸಂಭಾಷಣೆ" ಹಾಡಿನಲ್ಲಿ ಬಣ್ಣ ಬಣ್ಣದ ಕನಸ್ಸನ್ನು ಕಾಣುವ ನಾಯಕ ನಾಯಕಿಯ ಮನಸ್ಸನ್ನು ಚಿತ್ರಿಕರಿಸುತ್ತಲೇ ಫಿಲ್ಟರ್ ಮೂಲಕ ಬಣ್ಣ ಬಣ್ಣವನ್ನು ತೋರುವ ಜಾಣ್ಮೆ ಇಲ್ಲಿ ಪುಟ್ಟಣ್ಣ ಅವರದ್ದು.

ಹಿರಿಮಗಳಿಗೆ ಮದುವೆ ಮಾಡದೆ ಕಿರಿಮಗಳಿಗೆ ಮದುವೆ ಮಾಡಿದರೆ ಧರ್ಮಸೆರೆಗೆ ಸಿಕ್ಕಿದಂತಾಗುತ್ತದೆ.. ಎನ್ನುವ ಒಂದು ಚಿಕ್ಕ ಸೆಲೆಯನ್ನು ಸುಂದರ ಕಥೆಯನ್ನಾಗಿ ಮಾಡಿರುವುದು ಜಡಭರತರ ಪ್ರತಿಭೆಯಾದರೆ, ಅದೇ ಕಥೆಯನ್ನು ಚಿತ್ರಕ್ಕೆ ಒಗ್ಗುವಂತೆ ಮೂಡಿಸಿರುವುದು ಪುಟ್ಟಣ್ಣ ಅವರ ಜಾಣ್ಮೆ. ಮೊದಲ ಮಗಳು ಅಂಗವಿಹೇನೆ ಆಗಿದ್ದಾಗ ಎರಡನೇ ಮಗಳಿಗೆ ಮದುವೆ ಮಾಡಬಹುದು ಎಂದು ಗರುಡ ಪುರಾಣದಲ್ಲಿ ಹೇಳಿದ್ದಾರೆ ಎಂದಾಗ .. ಪುರಾಣ ಆ ಕಾಲದಲ್ಲಿ ಇತ್ತು, ನಡೆಯುತ್ತಿತ್ತು ಈಗ ನಡೆಯುತ್ತದೆಯೇ, ಸಮಾಜದಲ್ಲಿ ಹೀಗೆ ನಡೆಯಬಾರದು, ಈ ಮದುವೆ ನಡೆಯಬಾರದು ಎಂದಾಗ.. ಅದಕ್ಕೆ ಏನಾದರೂ ಪರಿಹಾರ ಬೇಕು ಎಂಬಲ್ಲಿಂದ ಈ ಚಿತ್ರ ಶುರುವಾಗುತ್ತದೆ. ಆರತಿ ಜೊತೆಯಲ್ಲಿ ಸಾಂಕೇತಿಕವಾಗಿ ಮದುವೆ ಅಷ್ಟೇ ಎಂದು ಶ್ರೀನಾಥ್ ಹೇಳುವ ದೃಶ್ಯದಲ್ಲಿ ಎಲ್ಲರೂ ಸೇರಿ ಹೇಳುವಾಗ ವಾಲಗದ ತಂಡವನ್ನು ತೋರುತ್ತಾರೆ.. ಶ್ರೀನಾಥ್ ಕಿವಿಗೆ ಇವರು ಹೇಳಿದ ಮಾತುಗಳು ಬಿದ್ದಿವೆ ಎನ್ನುವಾಗ ಬರಿ ವಾಲಗವನ್ನು ತೋರುತ್ತಾರೆ. ಅಂದರೆ ಹಲವಾರು ಜನರು ಹೇಳಿದರೂ ಕಿವಿಗೆ ಹೋಗಬೇಕಾದು ಒಂದೇ ಮಾತುಗಳು ಎನ್ನುವ ಸಾಂಕೇತಿಕ ದೃಶ್ಯ.

ಚಿತ್ರಕಥೆಯನ್ನು ಅತ್ಯಂತ ನಾಜೂಕಾಗಿ ನಿರೂಪಣೆ ಮಾಡಿರುವ ಅವರ ಯಶಸ್ಸಿಗೆ ಸಹಭಾಗಿಯಾಗಿ ಸಂಭಾಷಣೆ ಬರೆದವರು ಯೋಗಣ್ಣ ಮತ್ತು ಸೋರೆಟ್ ಅಶ್ವಥ್. ಚಿತ್ರಕ್ಕೆ ತಕ್ಕ ಸಾಹಿತಿ, ಸಾಹಿತ್ಯಕ್ಕೆ ತಕ್ಕ ಸಂಗೀತ ಎನ್ನುವ ಮನೋಭಾವ ಇದ್ದ ಪುಟ್ಟಣ್ಣ ಈ ಚಿತ್ರದ ಎಲ್ಲಾ ಹಾಡುಗಳನ್ನು ತಮ್ಮ ಆಪ್ತ ವಿಜಯನಾರಸಿಂಹ ಅವರಿಂದ ಬರೆಸಿದ್ದಾರೆ. ಇಡಿ ಚಿತ್ರಕ್ಕೆ ಬೆನ್ನೆಲುಬು ಹಾಡುಗಳು ಮತ್ತು ಹಿನ್ನೆಲೆ ಸಂಗೀತ, ಇದರಲ್ಲಿ ಯಶಸ್ವಿಯಾದವರು ಉಪೇಂದ್ರ ಕುಮಾರ್.

ಇನ್ನು ಈ ಚಿತ್ರದ ಇನ್ನೊಂದು ಉತ್ತಮ ಅಂಶ ಎಂದರೆ.. ಪುಟ್ಟಣ್ಣ ಅವರ ಮನಸ್ಸೊಳಗೆ ಇರುವಂತೆಯೇ ನೆರಳು ಬೆಳಕಿನ ಆಟವನ್ನು ದೃಶ್ಯಕಾವ್ಯವಾಗಿ ಚಿತ್ರಿಕರಿಸಿರುವುದು ಛಾಯಾಗ್ರಾಹಕ ಎಸ್ ಮಾರುತಿರಾವ್.

ಒಂದು ಸಂಕೀರ್ಣ ವಿಷಯವನ್ನು ಅಷ್ಟೇ ಸುಲಭ ಎನ್ನುವ ರೀತಿಯಲ್ಲಿ ಸಂಭಾಷಣೆ, ದೃಶ್ಯ ಜೋಡಣೆ ಮತ್ತು ಹಾಡುಗಳು ಮತ್ತು ಹಿನ್ನೆಲೆ ಸಂಗೀತದಿಂದ ಜೊತೆಯಲ್ಲಿ  ಎಲ್ಲಾ ಕಲಾವಿದರ ಹದವರಿತ ಅಭಿನಯವನ್ನು ತೆಗೆದು ಒಂದು ಸಹ್ಯ ಚಿತ್ರವನ್ನಾಗಿ ಮಾಡಿದ್ದಾರೆ ನಮ್ಮ ಹೆಮ್ಮೆಯ ನಿರ್ದೇಶಕ ಪುಟ್ಟಣ್ಣ ಕಣಗಾಲ್.

ಮತ್ತೆ ಮುಂದೆ ಅವರ ಚಿತ್ರರತ್ನ ರಂಗನಾಯಕಿಯನ್ನು ಬರ ಮಾಡಿಕೊಳ್ಳೋಣ! 

Friday, June 19, 2015

ಕನೆಕ್ಷನ್ ಪಾಂಡವರು... ಪಡುವಾರಹಳ್ಳಿ ಪಾಂಡವರು (1978)

ಅಡಿಗೆ ಮಾಡುವಾಗ ಕೆಲವೊಮ್ಮೆ ಎಲ್ಲಾ ಪದಾರ್ಥಗಳು ಸಿಗದೇ ಇದ್ದಾಗ ಇರುವುದನ್ನೇ ಹದವಾಗಿ ಉಪಯೋಗಿಸಿ ಒಂದು ಸವಿರುಚಿ ಮಾಡಬಹುದು. ಕೆಲವೊಮ್ಮೆ ಎಲ್ಲಾ ಪದಾರ್ಥಗಳು ಇದ್ದಾಗ ಅದನ್ನು ಸರಿಯಾದ ಕ್ರಮದಲ್ಲಿ ಉಪಯೋಗಿಸಿ ಸವಿ ಭೋಜನ ಮಾಡಬಹುದು..

ಇಂಥಹ ಒಂದು ಅದ್ಭುತ ಸಾಹಸಕ್ಕೆ ಕೈ ಹಾಕಿದ್ದು ಪುಟ್ಟಣ್ಣನವರು ಈ ಚಿತ್ರದಲ್ಲಿ... ಅಲ್ಲಿಯ ತನಕ ಕಥೆ, ಸಾಹಿತ್ಯ, ಸಂಭಾಷಣೆ, ಹೆಣ್ಣಿನ ಮನಸ್ಸಿನ ತುಮುಲಗಳು, ಅದ್ಭುತ ತಾಂತ್ರಿಕತೆ ಇದನ್ನೆಲ್ಲಾ ಇಟ್ಟುಕೊಂಡು ಪರಮಾದ್ಭುತ ಚಿತ್ರಗಳನ್ನು ಕೊಟ್ಟಿದ್ದ ಈ ಮಹಾನ್ ನಿರ್ದೇಶಕ.. ಅಚಾನಕ್ ಬೇರೊಂದು ಮಗ್ಗುಲಿಗೆ ಹೊರಳಿ.. ವ್ಯವಸ್ಥೆಯ ವಿರುದ್ಧ ಹೋರಾಡುವಂಥಹ ಚಿತ್ರ ಮಾಡಬಲ್ಲೆ ಎಂದು ತೋರಿಸಿದ ಚಿತ್ರ ಇದು. 

ಇದು ಅವರದೇ ನಿರ್ಮಾಣ ಲಾಂಛನದಲ್ಲಿ ಮೂಡಿ ಬಂದ ಕಲಾರತ್ನ. ಇಂದಿಗೂ ಈ ಚಿತ್ರ ಜನಮಾನಸದಲ್ಲಿ ಉಳಿದಿರುವುದು ಅದ್ಭುತ ಅಭಿನಯ, ಸಂಭಾಷಣೆ ಹಾಗೂ ಹಾಡುಗಳು. 

ತಮ್ಮ ಇಷ್ಟವಾದ ಪ್ರದೇಶ ಚಿಕಮಗಳೂರಿನ ಸುತ್ತಾ ಮುತ್ತಾ ಎನ್ ಮಾರುತಿ ರಾವ್ ಅವರ ಕ್ಯಾಮೆರಾದಲ್ಲಿ ಚಿತ್ರೀಕರಿಸಿದರು. ಸೊಂಪಾದ ಇಂಪಾದ ಸಂಗೀತ ಅವರ ಜೀವದ ಗೆಳೆಯ ವಿಜಯಭಾಸ್ಕರ್ ಅವರದ್ದಾಗಿತ್ತು. ಪ್ರತಿ ಹಾಡಿಗೆ ಭಿನ್ನ ಭಿನ್ನವಾಗಿ ಸಂಗೀತ ನೀಡಿರುವ ಅವರು, ಹಿನ್ನೆಲೆ ಸಂಗೀತದಲ್ಲಿ ಪವಾಡವನ್ನೇ ಮಾಡಿದ್ದಾರೆ. 

ಚಿತ್ರಕ್ಕೆ ತಕ್ಕ ಹಾಗೆ ಸಾಹಿತಿಗಳನ್ನು ಕರೆತರುತ್ತಿದ್ದ ಪುಟ್ಟಣ್ಣ ಅವರು ಈ ಚಿತ್ರಕ್ಕೆ ಮೂವರು ಸಾಹಿತಿಗಳಿಂದ ಹಾಡುಗಳನ್ನು ಬರೆಸಿದರು.  

ಕಯ್ಯಾರ ಕಿಞಞಣ್ಣ ರೈ- 
ಮಹಾಕವಿ, ಸ್ವತಂತ್ರ ಹೋರಾಟಗಾರ, ಇಂತಹವರ ಕೈಯಿಂದ ಬಂದ ಸಾಹಿತ್ಯ ಬಳಸಿಕೊಂಡಿರುವ ಪುಟ್ಟಣ್ಣ ಸಾಧನೆಯನ್ನೇ ಮಾಡಿದ್ದಾರೆ. 
"ಸಾವಿರ ಸಾವಿರ ಯುಗಯುಗ ಕಳೆದರು ಸಾಗಿದೆ ಸಂಗ್ರಾಮ" ಎನ್ನುವ ಬಂಡಾಯ ಮಿಶ್ರಿತ ಹಾಡನ್ನು ಅದ್ಭುತವಾಗಿ ಹಾಡಿದವರು ಎಸ್ ಪಿ ಬಾಲಸುಬ್ರಮಣ್ಯಂ ಅವರು. ಜಿ ವಿ ಕೃಷ್ಣ ಅವರು ಸ್ವಾಮಿಗಳ ಪಾತ್ರದ ಅಭಿನಯ ನೆನಪಲ್ಲಿ ಉಳಿಯುತ್ತದೆ. 

"ಹಾಡೊಮ್ಮೆ ಹಾಡಬೇಕು" ಸಂಘಟಿತ ಮನೋಭಾವ ಬೇಕು ಎಂದು ಸಂದೇಶ ನೀಡುವ ಹಾಡು ಎಸ್ ಪಿ ಬಿ ಮತ್ತು ಪಿ ಬಿ ಎಸ್ ಅವರ ಅಮೋಘ ಧ್ವನಿಯಲ್ಲಿ ಮೂಡಿ ಬಂದಿತು. ಈ ಚಿತ್ರದ ಪಾಂಡವರು ಸೇರಿ ಹಾಡಿ ಕುಣಿಯುವ ಹಾಡಿನ ಚಿತ್ರೀಕರಣ ಸುಂದರವಾಗಿದೆ. 

"ಬಹಿಷ್ಕಾರ ನಿಮ್ಮ ಬಹಿಷ್ಕಾರಕ್ಕೆ ನಮ್ಮಯ ಒಮ್ಮತ ದಿಕ್ಕಾರ" ಹಳ್ಳಿಗಳಲ್ಲಿ ನಡೆಯುವ ರಾಜಕೀಯ, ಒಳ ಸಂಚು ಇದನ್ನೆಲ್ಲಾ ಪದಗಳಲ್ಲಿ ಕೂಡಿ ಹಾಕಿ ಬರೆದಿರುವ ಸಾಹಿತ್ಯ ಸೂಪರ್ ಸೂಪರ್ ಎನ್ನಲೇ ಬೇಕು.. ಎಸ್ ಪಿ ಬಿ ಅದೇ ರೋಷ ವೇಷದಲ್ಲಿ ಹಾಡಿದ್ದಾರೆ. ಈ ಚಿತ್ರದ ಪಾಂಡವರ ಮೇಲೆ ಈ ಹಾಡು ಮೂಡಿ ಬಂದಿದೆ 

ಸೋರಟ್ ಅಶ್ವತ್ 
ಅದ್ಭುತ ಸಾಹಿತಿ ಇವರು.. ತಮ್ಮ ಇತಿಮಿತಿಗಳಲ್ಲಿಯೇ ಅನೇಕ ಪ್ರಬುದ್ಧ ಹಾಡುಗಳನ್ನು, ಸಂಭಾಷಣೆಗಳನ್ನು ಕೊಟ್ಟ ಕಲಾ ಪ್ರತಿಭೆ ಇವರು. 

"ತೂಕಡಿಸಿ ತೂಕಡಿಸಿ ಬೀಳದಿರು ತಮ್ಮ"  ಪಿ ಬಿ ಎಸ್ ಹಳ್ಳಿಯ ಜೀತದ ಪದ್ಧತಿಯನ್ನು ನವಿರಾಗಿ ರೂಪಿಸಿರುವ ಈ ಹಾಡನ್ನು ಅಷ್ಟೇ ಸೂಕ್ಷಮತೆಯಿಂದ ಹಾಡಿದ್ದಾರೆ. ಜೈಜಗದೀಶ್ ಸುಂದರ ತರುಣ.. ಹಳ್ಳಿ ಮಕ್ಕಳಿಗೆ ಸಂದೇಶ ಹೇಳುತ್ತಾ, ಅಲ್ಲಿಯ ಹುಳುಕುತನವನ್ನು ಎತ್ತಿ ಹಿಡಿಯುವ ಅಭಿನಯ ಈ ಹಾಡಿನಲ್ಲಿ ಸೊಗಸಾಗಿದೆ. ಬೆಳಗಿನ ಹೊತ್ತನ್ನು ಬಿಂಬಿಸುವ ನಿಟ್ಟಿನಲ್ಲಿ ಆ ಸೂರ್ಯ ರಶ್ಮಿ, ಧೂಳು, ಬೆಳಕು ನೆರಳಿನ ಆಟ ಎಲ್ಲವನ್ನು ಅದ್ಭುತವಾಗಿ ತಂದಿದ್ದಾರೆ. 
"ಕಣ್ಣ ಮುಚ್ಚಿ ಕುಳಿತರೆ ಕಾಣ್ವರು ನೂರಾರು ಶಿವರು" ಮಠದ ಸ್ವಾಮೀಜಿಯ ಪಾತ್ರಧಾರಿ ಈ ಹಾಡನ್ನು ಹಾಡುತ್ತಾ ಇಡಿ ಹಳ್ಳಿಯನ್ನು ಸುತ್ತುತ್ತಾರೆ.. ಬಡವ, ಬಲ್ಲಿದ, ನೋವು, ನಲಿವು, ದೇವರು ಕೂಡ ಎಲ್ಲೋ ತಪ್ಪು ಮಾಡಿದ್ದಾನಾ ಎನ್ನುವ ಅರ್ಥದಲ್ಲಿ ಬರುವ ಈ ಹಾಡು ಉತ್ಕೃಷ್ಟ ಸಾಹಿತ್ಯದಿಂದ ಗಮನಸೆಳೆಯುತ್ತದೆ. 

ದೊಡ್ಡರಂಗೇಗೌಡ 
ಹಳ್ಳಿಸೊಗಡಿನ ಭಾಷೆಯನ್ನು ಉಪಯೋಗಿಸಿಕೊಂಡು ಹಾಡುಗಳನ್ನು ಬರೆಯುವುದರಲ್ಲಿ ಇವರದು ಪ್ರಚಂಡ ಪ್ರತಿಭೆ. ಅನೇಕ ಇಂಥಹ ಸುಮಧುರ ಹಾಡುಗಳನ್ನು ಬರೆದಿರುವ ಇವರ ಪ್ರತಿಭೆಯನ್ನು ಸಶಕ್ತರೀತಿಯಲ್ಲಿ ಈ ಚಿತ್ರದಲ್ಲಿ ಅಳವಡಿಸಿಕೊಂಡಿದ್ದಾರೆ ಪುಟ್ಟಣ್ಣನವರು. 

"ಏಸು ವರ್ಸ ಆಯ್ತೆ ನಿಂಗೆ ನನ್ನ ಬಂಗಾರಿ"   ಸುಮಧುರ ಕಂಠದ ಒಡತಿ ಕಸ್ತೂರಿ ಶಂಕರ್ ಮತ್ತು ಎಸ್ ಪಿ ಬಿ ಅವರ ಹಾಡಿಗೆ ತಕ್ಕ ಹಾಗೆ ಅಂಬರೀಶ್ ಮತ್ತು ಸಹನಟಿ ನೃತ್ಯ ಮನಸ್ಸಿಗೆ ಹಿತ ನೀಡುತ್ತದೆ. ಹಳ್ಳಿಯ ಶೈಲಿಯಲ್ಲಿಯೇ ಚಿತ್ರೀಕರಣ, ನೃತ್ಯ, ಪದಗಳ ಬಳಕೆ ಈ ಹಾಡನ್ನು ಮೇಲಕ್ಕೆ ಒಯ್ಯುತ್ತದೆ. 

"ಶ್ರೀ ರಾಮ ಬಂದೌನೆ, ಸೀತೆಯ ಕಾಣಲಿಕ್ಕೆ" ಮತ್ತೆ ಕಸ್ತೂರಿ ಶಂಕರ್ ಗಾಯನ ಪ್ರತಿಭೆ ಅನಾವರಣಗೊಂಡಿದೆ. ಹಳ್ಳಿ ಭಾಷ ಪ್ರಯೋಗ, ಸಮರ್ಥವಾಗಿ ಉಪಯೋಗಿಸಿರುವ ರೀತಿ ಗಾಯನ ಶೈಲಿ ಹಿತನೀಡುತ್ತದೆ. 

"ಜನುಮ ನೀಡಿದ ಭೂತಾಯಿಯ" ಈ ಚಿತ್ರದ ಸಶಕ್ತ ಹಾಡು ಜೊತೆಯಲ್ಲಿಯೇ.. ಪರನಾಡಿನಲ್ಲಿರುವ ಎಲ್ಲರ ಮಂತ್ರವಾಗಿ ಹೋಗಿರುವ ಈ ಹಾಡಿನ ಪ್ರತಿ ಸಾಲುಗಳು ಜೀವಂತ. ರಾಮಕೃಷ್ಣ ಅದ್ಭುತ ರೀತಿಯಲ್ಲಿ ಅಭಿನಯಿಸಿದ್ದಾರೆ. ಹಳ್ಳಿಯ ಮೂಲೆ ಮೂಲೆಯನ್ನು ಪರಿಚಯಿಸಿರುವ ಈ ದೃಶ್ಯಗಾರಿಕೆ ಇಷ್ಟವಾಗುತ್ತದೆ.   

ರಾವ್ ಬಹದ್ದೂರ್ ಅವರ ಸತ್ವಯುಕ್ತ ಕಥೆಯನ್ನು ಪುಟ್ಟಣ್ಣನವರು ಇನ್ನಷ್ಟು ಬಿಗಿಗೊಳಿಸಿ ಅತ್ಯುತ್ತಮ ಚಿತ್ರಕಥೆ ಮಾಡಿದ್ದಾರೆ. ಇದಕ್ಕೆ ಕಳಶವಿಟ್ಟಂತೆ ಯೋಗಾನರಸಿಂಹ ಮತ್ತು ಬಾಬು ಕೃಷ್ಣಮೂರ್ತಿಯವರ ಸಂಭಾಷಣೆ ಇಡಿ ಚಿತ್ರವನ್ನು ಗಟ್ಟಿಯಾಗಿ ಹಿಡಿದಿಟ್ಟಿದೆ. ಸಂಭಾಷಣೆ ಈ ಚಿತ್ರದ ಅತ್ಯುತ್ತಮ ಅಂಶಗಳಲ್ಲಿ ಒಂದು. 

ಕೆಲವು ತುಣುಕುಗಳು 
"ಊರ ಮುಂದಿನ ಹಾದಿ ಅಂದರೆ ನೂರಾರು ಜನ ತಿರುಗಾಡಿರ್ತಾರೆ.. ಇರೋ ಹೆಜ್ಜೆ ಗುರುತೆಲ್ಲ ನಂದೇ ಅಂದ್ರೆ"
"ಜಾತ್ರೆಲಿ ಉಂಡ ಮೇಲೆ ಯಾರಾದ್ರು ಎಲೇನ ಮನೆಗೆ ತರ್ತಾರೆನೋ.."
"ಒಂದು ಬಾಟಲಿ ಬ್ರಾಂಡಿ ಕೊಡೊ ಸುಖ ಒಂದು  ಕೊಡ ನೀರು ಕೊಡುತ್ತೇನೋ"
"ಇವ್ರು ಅಂದ್ರೆ ಪಡುವಾರಹಳ್ಳಿ.. ಪಡುವಾರಹಳ್ಳಿ ಅಂದ್ರೆ  ಇವರು"
"ನಮ್ಮ ಹತ್ರ ನಗಾರಿ ಅಯ್ತೆ. ಒಂದು ಸಾರಿ ಬಾರಿಸಿದರೆ ಚಂಡಮಾರುತದಲ್ಲಿ ತರಗೆಲೆಗಳ ಹಾಗೆ ತೂರಿ ಹೋಗ್ತೀರಾ"
"ಕಸ ತುಂಬಿದ ಮನೆ ಅಂತ ಮನೆನ ಸುಟ್ಟು ಹಾಕು.. ಕೆಸರಾಗಿದೆ ಅಂತ ಕಾಲನ್ನೇ ಕಡಿದು ಹಾಕು.. ಊರು ಹೊಲಸಾಗಿದೆ ಅಂತ ಊರನ್ನೇ ಬಿಡು"
"ಮೀಸೇನೆ ಮೂಗು ತಿನ್ನೋಕೆ ಶುರು ಮಾಡಿದ್ರೆ"
ಬ್ಯಾಸ್ಗೆಲಿ ಬರ ಸಿಡಿಲು ಬಂದಂತೆ ಬಂದೆ"

ಈ ಚಿತ್ರದ ನಾಯಕರು ಅಂಬರೀಶ್, ರಾಮಕೃಷ್ಣ, ಜೈಜಗದೀಶ್, ಮಹದೇವ್, ಚಂದ್ರಹಾಸ.. ಆದರೆ ಇಡಿ ಚಿತ್ರವನ್ನು ತಮ್ಮ ಭುಜದ ಮೇಲೆ ಹೊತ್ತು ನಿಂತವರು ಧೀರೇಂದ್ರ ಗೋಪಾಲ್, ಮತ್ತು ಕನೆಕ್ಷನ್ ಕಾಳಪ್ಪ ಪಾತ್ರದ ಮುಸುರಿ ಕೃಷ್ಣಮೂರ್ತಿ. 
ಕ್ರೌರ್ಯ, ಹಿಂಸೆ, ದಬ್ಬಾಳಿಕೆ, ದರ್ಪ, ಸಿರಿತನ ಎಲ್ಲವನ್ನು ಬರಿ ಮಾತುಗಳಿಂದಲೇ ವ್ಯಕ್ತ ಪಡಿಸುವ ಈ ಇವರಿಬ್ಬರ ಅಭಿನಯ ಅದ್ಭುತ. ಅವರಿಬ್ಬರ ಚಿತ್ರಜಗತ್ತಿನಲ್ಲಿ ಮೊದಲ ಸಾಲಲ್ಲಿ ನಿಲ್ಲುವ ಈ ಚಿತ್ರದ ಅಭಿನಯಕ್ಕೆ ಸಂಪೂರ್ಣ ಅಂಕಗಳು. 

ಬರಿ ಹೊಡೆದಾಟ, ಹಿಂಸೆ, ರಕ್ತಪಾತ ಬರಿ ಇವೆ ಖಳನಾಯಕನ ಆಸ್ತಿ ಎಂದು ತೆರೆಯ ಮೇಲೆ ನೋಡಿ ನೋಡಿ ಸಾಕಾಗಿದ್ದ ಪ್ರೇಕ್ಷಕನಿಗೆ ಅರೆ ಖಳ ನಾಯಕ ಹೀಗೂ ಇರಬಹುದು ಎಂದು ಆಶ್ಚರ್ಯ ಪಡುವಂತೆ ಅಭಿನಯವನ್ನು ತೆಗೆದಿದ್ದಾರೆ ಪುಟ್ಟಣ್ಣನವರು ಈ ಮಹಾನ್ ಪ್ರತಿಭೆಗಳಿಂದ. 

ಈ ಚಿತ್ರದ  ಬಗ್ಗೆ ಹೇಳಿದಷ್ಟು ಕಡಿಮೆಯೇ.. 

ಚಿತ್ರದ ಆರಂಭದಲ್ಲಿ ದರ್ಪ, ದಬ್ಬಾಳಿಕೆ, ಗುಂಡು, ಬಂದೂಕ ಇವೆಲ್ಲವೂ ಹಳ್ಳಿಯಲ್ಲಿ ಕಾಣುತ್ತಿದ್ದ ಈ ಕ್ರೂರ ಪದ್ದತಿಯನ್ನು ತೋರುವ ನಿಟ್ಟಿನಲ್ಲಿ ಫಲಕ ತೋರುವ ಆರಂಭದಿಂದ ಅಂತ್ಯದವರೆಗೂ ಪರದೆ ಎಡ ಬಲಕ್ಕೆ ಸರಿದಾಡುತ್ತಲೇ ಇರುತ್ತದೆ,  ಹಿನ್ನೆಲೆಯಲ್ಲಿ ಮದ್ದು, ಗುಂಡು, ಬಂದೂಕು, ಬೂಟು ಕಾಲಿನ ಸಪ್ಪಳ.. ಆರಂಭದಲ್ಲಿಯೇ ಅರಿವಾಗುತ್ತದೆ ಚಿತ್ರದ ಮೂಲ ಉದ್ದೇಶ ಏನು ಎಂದು. ಇದು ಪುಟ್ಟಣ್ಣ ಅವರ ಚಿತ್ರಗಳ ತಾಕತ್ತು. 

ಚಿತ್ರಕಥೆಯ ಅಮಲನ್ನು ಆರಂಭದಿಂದಲೇ ಏರಿಸಿ ಹಾಗೆ ಅದನ್ನು ಕಾಯ್ದುಕೊಂಡು ಕೊನೆಯವರೆಗೂ ಹಾಗೆ ಉಳಿಸಿ ತೋರಿಸುವುದು ಅವರ ನಿರ್ದೇಶಕನ ಸ್ಥಾನದ ಮೇಲೆ ಅವರಿಗಿದ್ದ ಪ್ರಬುದ್ಧತೆಯನ್ನು ತೋರಿಸುತ್ತಿತ್ತು. 

ಸಹಪಾತ್ರಗಳು ಮಚ್ಚೇರಿ, ಆರತಿ, ಶುಭ, ಮೈಸೂರು ಲೋಕೇಶ್, ಶ್ರೀ ಲಲಿತ,ಜಯಶ್ರೀ ಎಲ್ಲರ ಅಭಿನಯ ಹಿತಮಿತ. ಒಂದೇ ಒಂದು ಈ ಸನ್ನಿವೇಶ ಸರಿಯಿಲ್ಲ ಅನ್ನಿಸುವ ಮಾತೆ ಇಲ್ಲ. ಇಡಿ ಚಿತ್ರದ ಚಿತ್ರಕಥೆ ಅಷ್ಟು ಸಶಕ್ತವಾಗಿದೆ. 

ಪುಟ್ಟಣ್ಣ ಅವರ ಚಿತ್ರಗಳಲ್ಲಿಯೇ ಈ ಚಿತ್ರ ತೀರ ಭಿನ್ನ ವಿಭಿನ್ನ. ಅವರ ಶಕ್ತಿ ಹೆಣ್ಣಿನ ಅಂತರೀಕ ತುಮುಲಗಳನ್ನು ಉಪಯೋಗಿಸಿಕೊಂಡೆ ಒಂದು ಹಳ್ಳಿಯಲ್ಲಿನ ಸಂಪೂರ್ಣ ಚಿತ್ರ ಕೊಡುವುದು ಅವರಿಗೆ ಸಾಧ್ಯವಾಗಿದ್ದು ಅವರ ಅದ್ಭುತ ಕಲೆಗೆ ಒಂದು ಸಾಕ್ಷಿ. 


ಬರುತ್ತಲೇ ಇರುತ್ತಾರೆ.. ನೀವು ಓಡಿಸುತ್ತಲೇ ಇರಿ.. ಬರುತ್ತಲೇ ಇರುತ್ತಾರೆ ಓಡಿಸುತ್ತಲೇ ಇರಿ ಎನ್ನುವ ಶ್ರೀಲಲಿತ ಅವರ ಸಂಭಾಷಣೆಯೊಂದಿಗೆ ಈ ಚಿತ್ರ ಮುಗಿಯುತ್ತದೆ. ಹಾಗೆ ಸಮಸ್ಯೆಗಳು ಇದ್ದೆ ಇರುತ್ತವೆ.. ಧೈರ್ಯ ತುಂಬಿಕೊಂಡು ಎದೆಗುಂದದೆ ಅದನ್ನು ಮೆಟ್ಟಿ ನಿಲ್ಲಬೇಕು ಎನ್ನುವ ಸಂದೇಶ ಕೊಟ್ಟಿದ್ದಾರೆ ನಮ್ಮ ಗುರುಗಳು ಪುಟ್ಟಣ್ಣ ಕಣಗಾಲ್. 


ಅದ್ಭುತ ಅನುಭವ ಖಂಡಿತ ಕೊಡುತ್ತದೆ.. ಒಮ್ಮೆ ನೋಡಿ .. ಪಡುವಾರಹಳ್ಳಿ ಪಾಂಡವರು... !!!