Friday, June 19, 2015

ಕನೆಕ್ಷನ್ ಪಾಂಡವರು... ಪಡುವಾರಹಳ್ಳಿ ಪಾಂಡವರು (1978)

ಅಡಿಗೆ ಮಾಡುವಾಗ ಕೆಲವೊಮ್ಮೆ ಎಲ್ಲಾ ಪದಾರ್ಥಗಳು ಸಿಗದೇ ಇದ್ದಾಗ ಇರುವುದನ್ನೇ ಹದವಾಗಿ ಉಪಯೋಗಿಸಿ ಒಂದು ಸವಿರುಚಿ ಮಾಡಬಹುದು. ಕೆಲವೊಮ್ಮೆ ಎಲ್ಲಾ ಪದಾರ್ಥಗಳು ಇದ್ದಾಗ ಅದನ್ನು ಸರಿಯಾದ ಕ್ರಮದಲ್ಲಿ ಉಪಯೋಗಿಸಿ ಸವಿ ಭೋಜನ ಮಾಡಬಹುದು..

ಇಂಥಹ ಒಂದು ಅದ್ಭುತ ಸಾಹಸಕ್ಕೆ ಕೈ ಹಾಕಿದ್ದು ಪುಟ್ಟಣ್ಣನವರು ಈ ಚಿತ್ರದಲ್ಲಿ... ಅಲ್ಲಿಯ ತನಕ ಕಥೆ, ಸಾಹಿತ್ಯ, ಸಂಭಾಷಣೆ, ಹೆಣ್ಣಿನ ಮನಸ್ಸಿನ ತುಮುಲಗಳು, ಅದ್ಭುತ ತಾಂತ್ರಿಕತೆ ಇದನ್ನೆಲ್ಲಾ ಇಟ್ಟುಕೊಂಡು ಪರಮಾದ್ಭುತ ಚಿತ್ರಗಳನ್ನು ಕೊಟ್ಟಿದ್ದ ಈ ಮಹಾನ್ ನಿರ್ದೇಶಕ.. ಅಚಾನಕ್ ಬೇರೊಂದು ಮಗ್ಗುಲಿಗೆ ಹೊರಳಿ.. ವ್ಯವಸ್ಥೆಯ ವಿರುದ್ಧ ಹೋರಾಡುವಂಥಹ ಚಿತ್ರ ಮಾಡಬಲ್ಲೆ ಎಂದು ತೋರಿಸಿದ ಚಿತ್ರ ಇದು. 

ಇದು ಅವರದೇ ನಿರ್ಮಾಣ ಲಾಂಛನದಲ್ಲಿ ಮೂಡಿ ಬಂದ ಕಲಾರತ್ನ. ಇಂದಿಗೂ ಈ ಚಿತ್ರ ಜನಮಾನಸದಲ್ಲಿ ಉಳಿದಿರುವುದು ಅದ್ಭುತ ಅಭಿನಯ, ಸಂಭಾಷಣೆ ಹಾಗೂ ಹಾಡುಗಳು. 

ತಮ್ಮ ಇಷ್ಟವಾದ ಪ್ರದೇಶ ಚಿಕಮಗಳೂರಿನ ಸುತ್ತಾ ಮುತ್ತಾ ಎನ್ ಮಾರುತಿ ರಾವ್ ಅವರ ಕ್ಯಾಮೆರಾದಲ್ಲಿ ಚಿತ್ರೀಕರಿಸಿದರು. ಸೊಂಪಾದ ಇಂಪಾದ ಸಂಗೀತ ಅವರ ಜೀವದ ಗೆಳೆಯ ವಿಜಯಭಾಸ್ಕರ್ ಅವರದ್ದಾಗಿತ್ತು. ಪ್ರತಿ ಹಾಡಿಗೆ ಭಿನ್ನ ಭಿನ್ನವಾಗಿ ಸಂಗೀತ ನೀಡಿರುವ ಅವರು, ಹಿನ್ನೆಲೆ ಸಂಗೀತದಲ್ಲಿ ಪವಾಡವನ್ನೇ ಮಾಡಿದ್ದಾರೆ. 

ಚಿತ್ರಕ್ಕೆ ತಕ್ಕ ಹಾಗೆ ಸಾಹಿತಿಗಳನ್ನು ಕರೆತರುತ್ತಿದ್ದ ಪುಟ್ಟಣ್ಣ ಅವರು ಈ ಚಿತ್ರಕ್ಕೆ ಮೂವರು ಸಾಹಿತಿಗಳಿಂದ ಹಾಡುಗಳನ್ನು ಬರೆಸಿದರು.  

ಕಯ್ಯಾರ ಕಿಞಞಣ್ಣ ರೈ- 
ಮಹಾಕವಿ, ಸ್ವತಂತ್ರ ಹೋರಾಟಗಾರ, ಇಂತಹವರ ಕೈಯಿಂದ ಬಂದ ಸಾಹಿತ್ಯ ಬಳಸಿಕೊಂಡಿರುವ ಪುಟ್ಟಣ್ಣ ಸಾಧನೆಯನ್ನೇ ಮಾಡಿದ್ದಾರೆ. 
"ಸಾವಿರ ಸಾವಿರ ಯುಗಯುಗ ಕಳೆದರು ಸಾಗಿದೆ ಸಂಗ್ರಾಮ" ಎನ್ನುವ ಬಂಡಾಯ ಮಿಶ್ರಿತ ಹಾಡನ್ನು ಅದ್ಭುತವಾಗಿ ಹಾಡಿದವರು ಎಸ್ ಪಿ ಬಾಲಸುಬ್ರಮಣ್ಯಂ ಅವರು. ಜಿ ವಿ ಕೃಷ್ಣ ಅವರು ಸ್ವಾಮಿಗಳ ಪಾತ್ರದ ಅಭಿನಯ ನೆನಪಲ್ಲಿ ಉಳಿಯುತ್ತದೆ. 

"ಹಾಡೊಮ್ಮೆ ಹಾಡಬೇಕು" ಸಂಘಟಿತ ಮನೋಭಾವ ಬೇಕು ಎಂದು ಸಂದೇಶ ನೀಡುವ ಹಾಡು ಎಸ್ ಪಿ ಬಿ ಮತ್ತು ಪಿ ಬಿ ಎಸ್ ಅವರ ಅಮೋಘ ಧ್ವನಿಯಲ್ಲಿ ಮೂಡಿ ಬಂದಿತು. ಈ ಚಿತ್ರದ ಪಾಂಡವರು ಸೇರಿ ಹಾಡಿ ಕುಣಿಯುವ ಹಾಡಿನ ಚಿತ್ರೀಕರಣ ಸುಂದರವಾಗಿದೆ. 

"ಬಹಿಷ್ಕಾರ ನಿಮ್ಮ ಬಹಿಷ್ಕಾರಕ್ಕೆ ನಮ್ಮಯ ಒಮ್ಮತ ದಿಕ್ಕಾರ" ಹಳ್ಳಿಗಳಲ್ಲಿ ನಡೆಯುವ ರಾಜಕೀಯ, ಒಳ ಸಂಚು ಇದನ್ನೆಲ್ಲಾ ಪದಗಳಲ್ಲಿ ಕೂಡಿ ಹಾಕಿ ಬರೆದಿರುವ ಸಾಹಿತ್ಯ ಸೂಪರ್ ಸೂಪರ್ ಎನ್ನಲೇ ಬೇಕು.. ಎಸ್ ಪಿ ಬಿ ಅದೇ ರೋಷ ವೇಷದಲ್ಲಿ ಹಾಡಿದ್ದಾರೆ. ಈ ಚಿತ್ರದ ಪಾಂಡವರ ಮೇಲೆ ಈ ಹಾಡು ಮೂಡಿ ಬಂದಿದೆ 

ಸೋರಟ್ ಅಶ್ವತ್ 
ಅದ್ಭುತ ಸಾಹಿತಿ ಇವರು.. ತಮ್ಮ ಇತಿಮಿತಿಗಳಲ್ಲಿಯೇ ಅನೇಕ ಪ್ರಬುದ್ಧ ಹಾಡುಗಳನ್ನು, ಸಂಭಾಷಣೆಗಳನ್ನು ಕೊಟ್ಟ ಕಲಾ ಪ್ರತಿಭೆ ಇವರು. 

"ತೂಕಡಿಸಿ ತೂಕಡಿಸಿ ಬೀಳದಿರು ತಮ್ಮ"  ಪಿ ಬಿ ಎಸ್ ಹಳ್ಳಿಯ ಜೀತದ ಪದ್ಧತಿಯನ್ನು ನವಿರಾಗಿ ರೂಪಿಸಿರುವ ಈ ಹಾಡನ್ನು ಅಷ್ಟೇ ಸೂಕ್ಷಮತೆಯಿಂದ ಹಾಡಿದ್ದಾರೆ. ಜೈಜಗದೀಶ್ ಸುಂದರ ತರುಣ.. ಹಳ್ಳಿ ಮಕ್ಕಳಿಗೆ ಸಂದೇಶ ಹೇಳುತ್ತಾ, ಅಲ್ಲಿಯ ಹುಳುಕುತನವನ್ನು ಎತ್ತಿ ಹಿಡಿಯುವ ಅಭಿನಯ ಈ ಹಾಡಿನಲ್ಲಿ ಸೊಗಸಾಗಿದೆ. ಬೆಳಗಿನ ಹೊತ್ತನ್ನು ಬಿಂಬಿಸುವ ನಿಟ್ಟಿನಲ್ಲಿ ಆ ಸೂರ್ಯ ರಶ್ಮಿ, ಧೂಳು, ಬೆಳಕು ನೆರಳಿನ ಆಟ ಎಲ್ಲವನ್ನು ಅದ್ಭುತವಾಗಿ ತಂದಿದ್ದಾರೆ. 
"ಕಣ್ಣ ಮುಚ್ಚಿ ಕುಳಿತರೆ ಕಾಣ್ವರು ನೂರಾರು ಶಿವರು" ಮಠದ ಸ್ವಾಮೀಜಿಯ ಪಾತ್ರಧಾರಿ ಈ ಹಾಡನ್ನು ಹಾಡುತ್ತಾ ಇಡಿ ಹಳ್ಳಿಯನ್ನು ಸುತ್ತುತ್ತಾರೆ.. ಬಡವ, ಬಲ್ಲಿದ, ನೋವು, ನಲಿವು, ದೇವರು ಕೂಡ ಎಲ್ಲೋ ತಪ್ಪು ಮಾಡಿದ್ದಾನಾ ಎನ್ನುವ ಅರ್ಥದಲ್ಲಿ ಬರುವ ಈ ಹಾಡು ಉತ್ಕೃಷ್ಟ ಸಾಹಿತ್ಯದಿಂದ ಗಮನಸೆಳೆಯುತ್ತದೆ. 

ದೊಡ್ಡರಂಗೇಗೌಡ 
ಹಳ್ಳಿಸೊಗಡಿನ ಭಾಷೆಯನ್ನು ಉಪಯೋಗಿಸಿಕೊಂಡು ಹಾಡುಗಳನ್ನು ಬರೆಯುವುದರಲ್ಲಿ ಇವರದು ಪ್ರಚಂಡ ಪ್ರತಿಭೆ. ಅನೇಕ ಇಂಥಹ ಸುಮಧುರ ಹಾಡುಗಳನ್ನು ಬರೆದಿರುವ ಇವರ ಪ್ರತಿಭೆಯನ್ನು ಸಶಕ್ತರೀತಿಯಲ್ಲಿ ಈ ಚಿತ್ರದಲ್ಲಿ ಅಳವಡಿಸಿಕೊಂಡಿದ್ದಾರೆ ಪುಟ್ಟಣ್ಣನವರು. 

"ಏಸು ವರ್ಸ ಆಯ್ತೆ ನಿಂಗೆ ನನ್ನ ಬಂಗಾರಿ"   ಸುಮಧುರ ಕಂಠದ ಒಡತಿ ಕಸ್ತೂರಿ ಶಂಕರ್ ಮತ್ತು ಎಸ್ ಪಿ ಬಿ ಅವರ ಹಾಡಿಗೆ ತಕ್ಕ ಹಾಗೆ ಅಂಬರೀಶ್ ಮತ್ತು ಸಹನಟಿ ನೃತ್ಯ ಮನಸ್ಸಿಗೆ ಹಿತ ನೀಡುತ್ತದೆ. ಹಳ್ಳಿಯ ಶೈಲಿಯಲ್ಲಿಯೇ ಚಿತ್ರೀಕರಣ, ನೃತ್ಯ, ಪದಗಳ ಬಳಕೆ ಈ ಹಾಡನ್ನು ಮೇಲಕ್ಕೆ ಒಯ್ಯುತ್ತದೆ. 

"ಶ್ರೀ ರಾಮ ಬಂದೌನೆ, ಸೀತೆಯ ಕಾಣಲಿಕ್ಕೆ" ಮತ್ತೆ ಕಸ್ತೂರಿ ಶಂಕರ್ ಗಾಯನ ಪ್ರತಿಭೆ ಅನಾವರಣಗೊಂಡಿದೆ. ಹಳ್ಳಿ ಭಾಷ ಪ್ರಯೋಗ, ಸಮರ್ಥವಾಗಿ ಉಪಯೋಗಿಸಿರುವ ರೀತಿ ಗಾಯನ ಶೈಲಿ ಹಿತನೀಡುತ್ತದೆ. 

"ಜನುಮ ನೀಡಿದ ಭೂತಾಯಿಯ" ಈ ಚಿತ್ರದ ಸಶಕ್ತ ಹಾಡು ಜೊತೆಯಲ್ಲಿಯೇ.. ಪರನಾಡಿನಲ್ಲಿರುವ ಎಲ್ಲರ ಮಂತ್ರವಾಗಿ ಹೋಗಿರುವ ಈ ಹಾಡಿನ ಪ್ರತಿ ಸಾಲುಗಳು ಜೀವಂತ. ರಾಮಕೃಷ್ಣ ಅದ್ಭುತ ರೀತಿಯಲ್ಲಿ ಅಭಿನಯಿಸಿದ್ದಾರೆ. ಹಳ್ಳಿಯ ಮೂಲೆ ಮೂಲೆಯನ್ನು ಪರಿಚಯಿಸಿರುವ ಈ ದೃಶ್ಯಗಾರಿಕೆ ಇಷ್ಟವಾಗುತ್ತದೆ.   

ರಾವ್ ಬಹದ್ದೂರ್ ಅವರ ಸತ್ವಯುಕ್ತ ಕಥೆಯನ್ನು ಪುಟ್ಟಣ್ಣನವರು ಇನ್ನಷ್ಟು ಬಿಗಿಗೊಳಿಸಿ ಅತ್ಯುತ್ತಮ ಚಿತ್ರಕಥೆ ಮಾಡಿದ್ದಾರೆ. ಇದಕ್ಕೆ ಕಳಶವಿಟ್ಟಂತೆ ಯೋಗಾನರಸಿಂಹ ಮತ್ತು ಬಾಬು ಕೃಷ್ಣಮೂರ್ತಿಯವರ ಸಂಭಾಷಣೆ ಇಡಿ ಚಿತ್ರವನ್ನು ಗಟ್ಟಿಯಾಗಿ ಹಿಡಿದಿಟ್ಟಿದೆ. ಸಂಭಾಷಣೆ ಈ ಚಿತ್ರದ ಅತ್ಯುತ್ತಮ ಅಂಶಗಳಲ್ಲಿ ಒಂದು. 

ಕೆಲವು ತುಣುಕುಗಳು 
"ಊರ ಮುಂದಿನ ಹಾದಿ ಅಂದರೆ ನೂರಾರು ಜನ ತಿರುಗಾಡಿರ್ತಾರೆ.. ಇರೋ ಹೆಜ್ಜೆ ಗುರುತೆಲ್ಲ ನಂದೇ ಅಂದ್ರೆ"
"ಜಾತ್ರೆಲಿ ಉಂಡ ಮೇಲೆ ಯಾರಾದ್ರು ಎಲೇನ ಮನೆಗೆ ತರ್ತಾರೆನೋ.."
"ಒಂದು ಬಾಟಲಿ ಬ್ರಾಂಡಿ ಕೊಡೊ ಸುಖ ಒಂದು  ಕೊಡ ನೀರು ಕೊಡುತ್ತೇನೋ"
"ಇವ್ರು ಅಂದ್ರೆ ಪಡುವಾರಹಳ್ಳಿ.. ಪಡುವಾರಹಳ್ಳಿ ಅಂದ್ರೆ  ಇವರು"
"ನಮ್ಮ ಹತ್ರ ನಗಾರಿ ಅಯ್ತೆ. ಒಂದು ಸಾರಿ ಬಾರಿಸಿದರೆ ಚಂಡಮಾರುತದಲ್ಲಿ ತರಗೆಲೆಗಳ ಹಾಗೆ ತೂರಿ ಹೋಗ್ತೀರಾ"
"ಕಸ ತುಂಬಿದ ಮನೆ ಅಂತ ಮನೆನ ಸುಟ್ಟು ಹಾಕು.. ಕೆಸರಾಗಿದೆ ಅಂತ ಕಾಲನ್ನೇ ಕಡಿದು ಹಾಕು.. ಊರು ಹೊಲಸಾಗಿದೆ ಅಂತ ಊರನ್ನೇ ಬಿಡು"
"ಮೀಸೇನೆ ಮೂಗು ತಿನ್ನೋಕೆ ಶುರು ಮಾಡಿದ್ರೆ"
ಬ್ಯಾಸ್ಗೆಲಿ ಬರ ಸಿಡಿಲು ಬಂದಂತೆ ಬಂದೆ"

ಈ ಚಿತ್ರದ ನಾಯಕರು ಅಂಬರೀಶ್, ರಾಮಕೃಷ್ಣ, ಜೈಜಗದೀಶ್, ಮಹದೇವ್, ಚಂದ್ರಹಾಸ.. ಆದರೆ ಇಡಿ ಚಿತ್ರವನ್ನು ತಮ್ಮ ಭುಜದ ಮೇಲೆ ಹೊತ್ತು ನಿಂತವರು ಧೀರೇಂದ್ರ ಗೋಪಾಲ್, ಮತ್ತು ಕನೆಕ್ಷನ್ ಕಾಳಪ್ಪ ಪಾತ್ರದ ಮುಸುರಿ ಕೃಷ್ಣಮೂರ್ತಿ. 
ಕ್ರೌರ್ಯ, ಹಿಂಸೆ, ದಬ್ಬಾಳಿಕೆ, ದರ್ಪ, ಸಿರಿತನ ಎಲ್ಲವನ್ನು ಬರಿ ಮಾತುಗಳಿಂದಲೇ ವ್ಯಕ್ತ ಪಡಿಸುವ ಈ ಇವರಿಬ್ಬರ ಅಭಿನಯ ಅದ್ಭುತ. ಅವರಿಬ್ಬರ ಚಿತ್ರಜಗತ್ತಿನಲ್ಲಿ ಮೊದಲ ಸಾಲಲ್ಲಿ ನಿಲ್ಲುವ ಈ ಚಿತ್ರದ ಅಭಿನಯಕ್ಕೆ ಸಂಪೂರ್ಣ ಅಂಕಗಳು. 

ಬರಿ ಹೊಡೆದಾಟ, ಹಿಂಸೆ, ರಕ್ತಪಾತ ಬರಿ ಇವೆ ಖಳನಾಯಕನ ಆಸ್ತಿ ಎಂದು ತೆರೆಯ ಮೇಲೆ ನೋಡಿ ನೋಡಿ ಸಾಕಾಗಿದ್ದ ಪ್ರೇಕ್ಷಕನಿಗೆ ಅರೆ ಖಳ ನಾಯಕ ಹೀಗೂ ಇರಬಹುದು ಎಂದು ಆಶ್ಚರ್ಯ ಪಡುವಂತೆ ಅಭಿನಯವನ್ನು ತೆಗೆದಿದ್ದಾರೆ ಪುಟ್ಟಣ್ಣನವರು ಈ ಮಹಾನ್ ಪ್ರತಿಭೆಗಳಿಂದ. 

ಈ ಚಿತ್ರದ  ಬಗ್ಗೆ ಹೇಳಿದಷ್ಟು ಕಡಿಮೆಯೇ.. 

ಚಿತ್ರದ ಆರಂಭದಲ್ಲಿ ದರ್ಪ, ದಬ್ಬಾಳಿಕೆ, ಗುಂಡು, ಬಂದೂಕ ಇವೆಲ್ಲವೂ ಹಳ್ಳಿಯಲ್ಲಿ ಕಾಣುತ್ತಿದ್ದ ಈ ಕ್ರೂರ ಪದ್ದತಿಯನ್ನು ತೋರುವ ನಿಟ್ಟಿನಲ್ಲಿ ಫಲಕ ತೋರುವ ಆರಂಭದಿಂದ ಅಂತ್ಯದವರೆಗೂ ಪರದೆ ಎಡ ಬಲಕ್ಕೆ ಸರಿದಾಡುತ್ತಲೇ ಇರುತ್ತದೆ,  ಹಿನ್ನೆಲೆಯಲ್ಲಿ ಮದ್ದು, ಗುಂಡು, ಬಂದೂಕು, ಬೂಟು ಕಾಲಿನ ಸಪ್ಪಳ.. ಆರಂಭದಲ್ಲಿಯೇ ಅರಿವಾಗುತ್ತದೆ ಚಿತ್ರದ ಮೂಲ ಉದ್ದೇಶ ಏನು ಎಂದು. ಇದು ಪುಟ್ಟಣ್ಣ ಅವರ ಚಿತ್ರಗಳ ತಾಕತ್ತು. 

ಚಿತ್ರಕಥೆಯ ಅಮಲನ್ನು ಆರಂಭದಿಂದಲೇ ಏರಿಸಿ ಹಾಗೆ ಅದನ್ನು ಕಾಯ್ದುಕೊಂಡು ಕೊನೆಯವರೆಗೂ ಹಾಗೆ ಉಳಿಸಿ ತೋರಿಸುವುದು ಅವರ ನಿರ್ದೇಶಕನ ಸ್ಥಾನದ ಮೇಲೆ ಅವರಿಗಿದ್ದ ಪ್ರಬುದ್ಧತೆಯನ್ನು ತೋರಿಸುತ್ತಿತ್ತು. 

ಸಹಪಾತ್ರಗಳು ಮಚ್ಚೇರಿ, ಆರತಿ, ಶುಭ, ಮೈಸೂರು ಲೋಕೇಶ್, ಶ್ರೀ ಲಲಿತ,ಜಯಶ್ರೀ ಎಲ್ಲರ ಅಭಿನಯ ಹಿತಮಿತ. ಒಂದೇ ಒಂದು ಈ ಸನ್ನಿವೇಶ ಸರಿಯಿಲ್ಲ ಅನ್ನಿಸುವ ಮಾತೆ ಇಲ್ಲ. ಇಡಿ ಚಿತ್ರದ ಚಿತ್ರಕಥೆ ಅಷ್ಟು ಸಶಕ್ತವಾಗಿದೆ. 

ಪುಟ್ಟಣ್ಣ ಅವರ ಚಿತ್ರಗಳಲ್ಲಿಯೇ ಈ ಚಿತ್ರ ತೀರ ಭಿನ್ನ ವಿಭಿನ್ನ. ಅವರ ಶಕ್ತಿ ಹೆಣ್ಣಿನ ಅಂತರೀಕ ತುಮುಲಗಳನ್ನು ಉಪಯೋಗಿಸಿಕೊಂಡೆ ಒಂದು ಹಳ್ಳಿಯಲ್ಲಿನ ಸಂಪೂರ್ಣ ಚಿತ್ರ ಕೊಡುವುದು ಅವರಿಗೆ ಸಾಧ್ಯವಾಗಿದ್ದು ಅವರ ಅದ್ಭುತ ಕಲೆಗೆ ಒಂದು ಸಾಕ್ಷಿ. 


ಬರುತ್ತಲೇ ಇರುತ್ತಾರೆ.. ನೀವು ಓಡಿಸುತ್ತಲೇ ಇರಿ.. ಬರುತ್ತಲೇ ಇರುತ್ತಾರೆ ಓಡಿಸುತ್ತಲೇ ಇರಿ ಎನ್ನುವ ಶ್ರೀಲಲಿತ ಅವರ ಸಂಭಾಷಣೆಯೊಂದಿಗೆ ಈ ಚಿತ್ರ ಮುಗಿಯುತ್ತದೆ. ಹಾಗೆ ಸಮಸ್ಯೆಗಳು ಇದ್ದೆ ಇರುತ್ತವೆ.. ಧೈರ್ಯ ತುಂಬಿಕೊಂಡು ಎದೆಗುಂದದೆ ಅದನ್ನು ಮೆಟ್ಟಿ ನಿಲ್ಲಬೇಕು ಎನ್ನುವ ಸಂದೇಶ ಕೊಟ್ಟಿದ್ದಾರೆ ನಮ್ಮ ಗುರುಗಳು ಪುಟ್ಟಣ್ಣ ಕಣಗಾಲ್. 


ಅದ್ಭುತ ಅನುಭವ ಖಂಡಿತ ಕೊಡುತ್ತದೆ.. ಒಮ್ಮೆ ನೋಡಿ .. ಪಡುವಾರಹಳ್ಳಿ ಪಾಂಡವರು... !!!

No comments:

Post a Comment