Saturday, October 31, 2015

ಕಾಡುವ ಭಾವದೊಳಗೆ ಮಾಸದ ಮಸಣದ ಹೂವು (1984)

ಕೊಳವೆ ಬಾವಿ ತೋಡುವಾಗ ಆ ಯಂತ್ರ ಒಂದೇ ಸಮನೆ ನೆಲವನ್ನು ಕೊರೆಯುತ್ತಾ ಹೋಗುತ್ತದೆ ಎಡಬಿಡದೆ. ಹಾಗೆಯೇ ಪುಟ್ಟಣ್ಣ ಕಣಗಾಲ್ ಅವರ ನಿರ್ದೇಶನದ ಅಂತಿಮ ಚಿತ್ರ ಕೂಡ. ಈ ಚಿತ್ರವನ್ನು ಅನೇಕ ಬಾರಿ ನೋಡಿದ್ದೇನೆ. ಈ ಲೇಖನ ಬರೆಯುವ ಮೊದಲು ನೋಡಲು ಕುಳಿತೆ. ಸೂಕ್ಷ್ಮವಾಗಿ ಗಮನಿಸಿದಾಗ ಅರಿವಿಗೆ ಬಂದದ್ದು, ಈ ಚಿತ್ರದಲ್ಲಿ ಅನೇಕ ಉದ್ದುದ್ದ ದೃಶ್ಯಗಳು ಇವೆ (ಲಾಂಗ್ ಶಾಟ್ಸ್). ನನಗೆ ಅಚ್ಚರಿ ಆಯಿತು, ತಾಂತ್ರಿಕತೆ ಮತ್ತು ನಿರ್ದೇಶನದ ಮೇಲೆ ಮತ್ತು ಕತೆಯ ಮೇಲೆ ಹಿಡಿತ ಇದ್ದಾಗ ಎಂಥಹ ಜಾದೂ ಮಾಡಬಹುದು ಎಂದು.

ಈ ಚಿತ್ರ ಚೆನ್ನಾಗಿದೆ ಎಂದರೆ, ಮನುಕುಲದ ಮೇಲೆಯೇ ಒಂದು ರೀತಿಯಲ್ಲಿ ವಾಕರಿಕೆ ಬರುತ್ತದೆ, ಏಕೆಂದರೆ ಇದರ ಹುಟ್ಟಿಗೆ ಮನುಕುಲದ ವಿಷಮ ಮನಸ್ಥಿತಿಯೇ ಕಾರಣ. ಶ್ರೀ ತ ರಾ ಸುಬ್ಬರಾಯರು ರಚಿಸಿದ ಅನೇಕ ಕೃತಿಗಳು ಚಲನಚಿತ್ರಗಳಾಗಿವೆ. ಇದು ಒಂದು ರೀತಿಯ ವಿಚಿತ್ರ ಪರಿಸ್ಥಿತಿ. ಪುಟ್ಟಣ್ಣ ಅವರು ಈ ಚಿತ್ರವನ್ನು ನಿರ್ದೇಶಿಸಿದ ರೀತಿ ನೋಡಿದಾಗ, ಮುಂದಿನ ಚಿತ್ರಗಳು ಹೇಗಿರಬಹುದು ಎನ್ನುವ ಒಂದು ಖುಷಿ ಮನಸ್ಸಿಗೆ ಬಂದಿದ್ದು ಸುಳ್ಳಲ್ಲ. 

ಕಾರಣ, ನಾ ಮಸಣದ ಹೂವು ಕಾದಂಬರಿಯನ್ನು ಓದಿದಾಗ ಅಕ್ಷರಶಃ ಮನಸ್ಸು ಗಲಿಬಿಲಿಗೊಂಡಿದ್ದು ಮತ್ತು ಮನಸ್ಸು ತಲ್ಲಣಗೊಂಡಿದ್ದು ನಿಜ. ಮನುಜ ತನಗೆ ಬೇಕಾದ ದೇಹದ ಬಯಕೆಗೆ ಅಥವಾ ತನ್ನ ಕೆಲಸ ಸಾಧಿಸಿಕೊಳ್ಳುವ ತವಕದಲ್ಲಿ ಸಮಾಜದಲ್ಲಿ ಒಂದು ಅಸಹ್ಯ ಎನಿಸುವ ಒಂದು ಮೂಲೆಯನ್ನು ಸೃಷ್ಠಿ ಮಾಡಿದ್ದಾನೆ ಎಂದು ಅರಿವಾದಾಗ ನಿಜಕ್ಕೂ ವಕರಿಕೆಯೇ ಬರುತ್ತದೆ. ಕಾದಂಬರಿ ಕತೃ, ಆ ಲೋಕದ ದೃಶ್ಯವನ್ನು ಅಷ್ಟು ಸಹಜವಾಗಿ ಕಟ್ಟಿಕೊಟ್ಟಿದ್ದಾರೆ. 

ಪುಟ್ಟಣ್ಣ ಕಣಗಾಲ್ ಅವರು ಅಕ್ಷರಶಃ ಪುಸ್ತಕದಲ್ಲಿ ಇರುವಂಥಹ ಕ್ರೌರ್ಯ, ಸಾಕಪ್ಪ ಎನ್ನಿಸುವಷ್ಟು ಮನಸ್ಸಿಗೆ ಹಿಂಸೆ ಅನ್ನಿಸುವ ದೃಶ್ಯಗಳನ್ನು ನವಿರಾಗಿ, ಮನಕ್ಕೆ ತಾಕುವಂತೆ ಚಿತ್ರೀಕರಿಸಿದ್ದಾರೆ. ಈ ರೀತಿಯ ಕಥೆಗಳನ್ನು ದೃಶ್ಯಕಾವ್ಯವಾಗಿ ಮಾಡಲು ಅದ್ಭುತ ಸೃಜನಶೀಲತೆ ಬೇಕು.  ಎಲ್ಲೇ ಮೀರಲು ಎಲ್ಲಾ ಅವಕಾಶಗಳು ಇದ್ದಾಗ್ಯೂ, ಸಹ್ಯವಾಗಿ ಚಿತ್ರವನ್ನು ಕೊಟ್ಟಿರುವುದು ಅವರ ಅಸಾಧಾರಣ ಪ್ರತಿಭೆಯ ವಿರಾಟ್ ರೂಪ ಎಂಬ ಮಾತು ನನ್ನದು. 

ಉತ್ತುಂಗದಲ್ಲಿದ್ದ ಅಂಬರೀಶ್ ಅಕ್ಷರಶಃ ತಮ್ಮ ಗುರುಗಳ ದಿಗ್ದರ್ಶನದಲ್ಲಿ ತಮ್ಮ ಇಮೇಜ್ ಬಿಟ್ಟು ಅಭಿನಯಿಸಿದ್ದಾರೆ. ಮೇಡಂ ನನಗೆ ಎರಡು ಸಾವಿರ ಕೊಡಿ, ನೀವು ಹೇಳಿದ ಕೆಲಸ ಮಾಡಿಕೊಂಡು ಇರುತ್ತೇನೆ ಎನ್ನುವಾಗ ಅವರ ಕಣ್ಣುಗಳಲ್ಲಿ ಕಾಣುವ ನೋವು, ಜೀವನದ ಬಗ್ಗೆ ತಿರಸ್ಕಾರ ಜೊತೆಯಲ್ಲಿಯೇ, ಹೇಗಾದರೂ ಸರಿ ಬದುಕಬೇಕು ಎನ್ನುವ ಭಾವ ಎದ್ದು ಕಾಣುತ್ತದೆ. ತಮ್ಮ ತಾಯಿಗೆ ರಾತ್ರಿಯೊಳಗೆ ನಾ ಬರದಿದ್ದರೆ, ಇಲಿ ಪಾಷಾಣ ಮತ್ತು ನೀರು ಇದೆ ಎನ್ನುವ ಧ್ವನಿಯಲ್ಲಿ ನಿರಾಶೆ, ಹತಾಶೆ ಮತ್ತು ತನ್ನ ತಾಯಿಗೆ, ಬಡತನದಿಂದ ಮುಕ್ತಿ ನೀಡಲು ವಿಷ ತಿನ್ನು ಎಂದು ಹೇಳುವಂಥಹ ದೃಶ್ಯ. ಇದರಲ್ಲಿ ಅವರ ಅಭಿನಯ ಕಣ್ಣಲ್ಲಿ ನೀರು ಮೂಡಿಸುತ್ತದೆ. 

ಎರಡು ಸಾವಿರ ಕೊಡಿ ಎಂದಾಗ, ಅದಕ್ಕೆ ಕೆಲವು ನಿಯಮಗಳಿವೆ ಎಂದಾಗ, ಏನೇ ಆಗಲಿ, ನಾ ನೀವು ಹೇಳುವ ಕೆಲಸ ಮಾಡುತ್ತೇನೆ ಎಂದು ಎರಡು ಬೊಗಸೆಗಳನ್ನು ಒಡ್ಡಿ ನಿಂತಾಗ, ಯಾರ ಕಣ್ಣಲ್ಲೇ ಆದರೂ ಜೋಗದ ಹನಿ ಕಂಡೆ ಕಾಣುತ್ತದೆ. ತಲೆಹಿಡುಕನ ಪಾತ್ರದಲ್ಲಿ ಅದ್ಭುತ ಪರಕಾಯ ಪ್ರವೇಶ. ನಡೆ, ನುಡಿ, ಹಾವ ಭಾವ, ಅಬ್ಬಬ್ಬ ಎನ್ನಿಸುತ್ತದೆ. 

ಜಯಂತಿ, ಮಾತೆ ಬೇಡ, ಹಲವಾರು ದೃಶ್ಯಗಳಲ್ಲಿ ಬರಿ ಕಣ್ಣುಗಳಲ್ಲೇ ಅಭಿನಯ ತೋರಿಸಿದ್ದಾರೆ. ಆ ಪಾತ್ರಕ್ಕೆ ಬೇಕಾದ ಅಂಗೀಕ ಅಭಿನಯ, ತಿರಸ್ಕಾರ, ಹಣಕ್ಕೆ ಮಾತ್ರ ಪ್ರಾಮುಖ್ಯತೆ ಮಿಕ್ಕವು ಗೌಣ ಎಂದು ಕೆಲವು ದೃಶ್ಯಗಳಲ್ಲಿ ಕಂಡು ಬಂದರೆ, ಇನ್ನೂ ಕೆಲವು ದೃಶ್ಯಗಳಲ್ಲಿ ನಂಬಿದವರನ್ನು ಸಲಹುವುದು, ಜೊತೆಯಲ್ಲಿಯೇ ಅವರನ್ನು ರಕ್ಷಿಸಲು ಮುಂದಾಗುವ ರೀತಿಯ  ಅಭಿನಯ ಅವರು ಮಾತ್ರ ಮಾಡಲು ಸಾಧ್ಯ. ತಾನು ಕಳಿಸಿದ ಹುಡುಗಿಯ ವರ್ತನೆ ಬಗ್ಗೆ ಕೇಳಿಬಂದಾಗ ಕೋಪಗೊಂಡು ಆ ಹುಡುಗಿಗೆ ದಂಡಿಸುತ್ತಾರೆ, ನಂತರ ನಿಜದ ಅರಿವಾದ ಮೇಲೆ, ಆಕೆಯನ್ನು ತಬ್ಬಿಕೊಂಡು ಕ್ಷಮೆ ಕೇಳುತ್ತಾರೆ. ಇಂಥಹ ವೃತ್ತಿಯಲ್ಲಿ ಈ ರೀತಿಯ ಮಾನವೀಯತೆಯೂ ಇದೆ ಎಂದು ಕೂಗಿ ತೋರಿಸುವ ಅಭಿನಯ. ಇಡಿ ಚಿತ್ರವನ್ನು ತಮ್ಮ ಹೆಗಲ ಮೇಲೆ ಹೊತ್ತು ಸಾಗಿದ್ದಾರೆ.  

ಇನ್ನು ಉಳಿದ ಪಾತ್ರಗಳು ಚಿತ್ರಕ್ಕೆ ಬೇಕಾದ ಅಗತ್ಯ ಅಭಿನಯವನ್ನು ನೀಡಿದ್ದಾರೆ. ಇಡಿ ಚಿತ್ರದ ತುಂಬಾ ತುಂಬಿಕೊಂಡಿರುವುದು ಅಂಬರೀಶ್ ಮತ್ತು ಜಯಂತಿ. ಇವರಿಬ್ಬರಿಂದ ಹಿತಮಿತವಾಗಿ, ಪರಿಣಾಮಕಾರಿಯಾಗಿ ಅಭಿನಯ ತೆಗೆದಿರುವುದು ಪುಟ್ಟಣ್ಣ ಅವರ ಅದ್ಭುತ ಹಿಡಿತ ಹೊಂದಿರುವ ನಿರ್ದೇಶನದ ಕುರ್ಚಿ. 

ಪಂಚಾಮೃತದಲ್ಲಿ ಹಾಲು, ಮೊಸರು, ಸಕ್ಕರೆ, ಜೇನುತುಪ್ಪ, ಮತ್ತು ಫಲಗಳು ಸೇರಿದಂತೆ, ಪ್ರತಿ ದೃಶ್ಯವನ್ನು ಕಲೆಯ ಹಾಲಿನ ಕಡಲಲ್ಲಿ ಅದಕ್ಕೆ ಬೇಕಾಗುವ ವಿವಿಧ ಭಾವಗಳನ್ನು ಬೆರೆಸಿ ಅದ್ದಿ ತೆಗೆದಂತೆ ಚಿತ್ರೀಕರಿಸಿದ್ದಾರೆ. ಚಿತ್ರವನ್ನು ನೋಡುತ್ತಾ ಹೋದಂತೆ, ಅಲ್ಲಿ ಚಿತ್ರಕಥಾವಸ್ತುಗಿಂತಲೂ ಪುಟ್ಟಣ್ಣ ಅವರ ನಿರ್ದೇಶಕನ ಜವಾಬ್ಧಾರಿ ಕೊಂಚವೂ ಅಲುಗಾಡದಂತೆ ಆದರೆ ಅವರ ಮೇಲೆ ಹೆಮ್ಮೆ ಬರುವಂತೆ ದೃಶ್ಯಗಳನ್ನು ಪೋಣಿಸಿದ್ದಾರೆ. 

ಕೆಲವು ಅದ್ಭುತ ದೃಶ್ಯಗಳು 
೧) ಮೇಡಂ, ಎರಡು ಸಾವಿರ ಕೊಡಿ ಎಂದಾಗ, ನನಗೆ ಒಂದು ಮುತ್ತು ಕೊಡು ಎಂದು ಕೇಳುತ್ತಾರೆ. ಹಿಂದೆ ಮುಂದೆ ನೋಡುತ್ತಾ ನಿಂತ ನಾಯಕನಿಗೆ ಬಯ್ದು, ಒಂದು ಮುತ್ತು ಕೊಡಲು ಹಿಂದೆ ಮುಂದೆ ನೀಡುವ ನೀನು ಈ ಮನೆಯಲ್ಲಿ ಏನು ತಾನೇ ಕೆಲಸ ಮಾಡ್ತೀಯ, ಹೋಗು ಹೋಗು ಎಂದು ಅಟ್ಟುತ್ತಾರೆ. ಆಗ ಕೊಂಚವೂ ಗಲಿಬಿಲಿ ಗೊಳ್ಳದೆ ಮುತ್ತು ನೀಡುತ್ತಾರೆ, ಆದರೆ ಆ ದೃಶ್ಯವನ್ನು ತೋರಿಸುವ ರೀತಿ ಅದ್ಭುತ. ಅಶ್ಲೀಲತೆ ಇಲ್ಲವೇ ಇಲ್ಲ ಅಲ್ಲಿ.  ಬದುಕಲೇ ಬೇಕು  ಎಂಬ ಹಠ ಬಂದಾಗ, ಜೀವನ ತನಗೆ ತಾನೇ ದಾರಿ ತೋರಿಸುತ್ತದೆ, ಹಾಗೂ ಧೈರ್ಯ ತುಂಬುತ್ತದೆ. 

೨) ಮೇಡಂ, ಸುಮ್ಮನೆ ಎರಡು ಸಾವಿರ ಗೊತ್ತಿರದ ಅವನಿಗೆ ಕೊಟ್ಟು ಬಿಟ್ಟಿರಿ, ಅವನು ಬರದೆ ಹೋದರೆ "ನೋಡು ಅವನು ನಿಯತ್ತಿನ ಮನುಷ್ಯ ಅನ್ನಿಸುತ್ತದೆ, ಒಂದು ವೇಳೆ ಬರದೆ ಹೋದರೆ, ನನ್ನ ಕಾಲುಮುಟ್ಟಿ ನಮಸ್ಕರಿಸಿದ ಅವನ ಶ್ರದ್ಧೆ ವಜಾ ಮಾಡಿಕೊಳ್ಳುತ್ತೇನೆ". ಬಂಡೆಯಲ್ಲಿ ಕೂಡ ನಂಬಿಕೆ ಇದು, ಒಲಿದರೆ ದೇವರಾಗುತ್ತದೆ, ಇಲ್ಲವೇ ಮನೆ ಕಟ್ಟಲು ಕಲ್ಲಾಗುತ್ತದೆ ಎನ್ನುತ್ತದೆ ಸುಭಾಷಿತ. ಎಷ್ಟು ನಿಜ ಅಲ್ಲವೇ. 

೩) ಇದುವರೆಗೂ ಯಾರು ಯಾರಿಗೋ ಕೈ ಮುಗಿದೇ, ಆದರೆ ಇಂದು ಒಂದು ದೇವರ ಮೂರ್ತಿ ತರಹ ಇರುವ ನಿಮಗೆ ಕೈಮುಗಿಯುತ್ತೇನೆ ಎಂದು ಲೋಕನಾಥ್ ಪಾತ್ರಧಾರಿಗೆ ಕೈಮುಗಿಯುವ ಜಯಂತಿ ಅಭಿನಯ. ಆ ಮನೆಗೆ ಬರುವವರೆಲ್ಲ ಬರಿ ಸುಖಃ ಅರಸಿಕೊಂಡು ಬರುವವರಲ್ಲ, ಬದಲಿಗೆ ಮಾನವೀಯತೆಯನ್ನು ಅರಸಿಕೊಂಡು ಬರುವವರು ಇದ್ದಾರೆ ಎನ್ನುವ ನಿರೂಪಣೆ ಇಲ್ಲಿದೆ. 

ಈ ಚಿತ್ರದ ದೊಡ್ಡ ಆಸ್ತಿ ಚಿತ್ರದಲ್ಲಿ ಅದ್ಭುತವಾಗಿ ಚಿತ್ರೀಕರಣಗೊಂಡ ಹಾಡುಗಳು. ಇಂಥಹ ಚಿತ್ರದಲ್ಲೂ ಕರುನಾಡನ್ನು, ಅದರ ಸೊಬಗನ್ನು ತೋರಿಸುವ ಪುಟ್ಟಣ್ಣ ಅವರ ವಿಶಿಷ್ಟ ಭಾವ ಇಲ್ಲೂ ಇದೆ. ಬಹುತೇಕ ಕರಾವಳಿ ಪ್ರದೇಶಗಳಲ್ಲಿ ಚಿತ್ರಿತವಾಗಿರುವ "ಕನ್ನಡ ನಾಡಿನ ಕರಾವಳಿ" ಜಯಚಂದ್ರನ್ ಮತ್ತು ವಾಣಿ ಜಯರಾಂ ಅವರ ಜೇನಿನ ಕಂಠದಲ್ಲಿ ಮೂಡಿ ಬಂದಿದೆ. ಎಸ್ ಆರ್ ಎಕ್ಕುಂಡಿ ಅವರ ಅಮೋಘ ಸಾಹಿತ್ಯಕ್ಕೆ ಕರಾವಳಿಯ ಎಲ್ಲಾ ಪ್ರಕಾರದ ಸಂಗೀತ ಒದಗಿಸಿರುವ ವಿಜಯಭಾಸ್ಕರ್, ಮತ್ತು ನೃತ್ಯ ಸಂಯೋಜನೆ, ಕರುನಾಡಿನ ವಿಶಿಷ್ಠತೆಯನ್ನು ಎತ್ತಿ ತೋರಿಸುವ ಹಾಡಾಗಿ ಉಳಿದುಕೊಂಡು ಬಂದಿದೆ. 

ಪ್ರೀತಿ ಎಲ್ಲಿಂದ ಹುಟ್ಟುತ್ತೆ ಹೇಗೆ ಜೀವನವನ್ನು ಬೆಳಗಬಲ್ಲದು ಎನ್ನುವ ಅನೇಕ ಪ್ರಶ್ನೆಗಳಿಗೆ ಹಾಡಿನ ರೂಪದಲ್ಲಿ ಚಿತ್ರೀಕರಿಸಿದ್ದಾರೆ "ಉಪ್ಪಿನ ಸಾಗರಕ್ಕೂ ಮುಪ್ಪಿದೆಯಂತೆ" ಮತ್ತೊಮ್ಮೆ ಜಯಚಂದ್ರನ್ ಮತ್ತು ವಾಣಿ ಜಯರಾಂ ಮನಸ್ಸಿನ ಮೂಲೆ ಮೂಲೆಯನ್ನು ತಟ್ಟುತ್ತಾರೆ. ವಿಜಯನಾರಸಿಂಹ ಅವರ ಸರಳ ಆದರೆ ಪರಿಣಾಮಕಾರಿ ಸಾಹಿತ್ಯ ಇಷ್ಟವಾಗಲೇ ಬೇಕು. ಪ್ರೇಮಿಗಳ ಹಾಡಾಗಿ ಬರುತ್ತದೆ. 

ಒಂದು ಕ್ಷಣದ ಆದರೆ ಜೀವನದ ಗತಿಯನ್ನು ಬದಲಾಯಿಸಬಲ್ಲ ತಿರುವನ್ನು ಒಂದು ಹಾದಿ ಬಿಟ್ಟ ಹುಡುಗಿಗೆ ಕೊಡುವ ನಾಯಕನನ್ನು ಕನಸಿನಲ್ಲಿ ಮತ್ತು ಮನಸ್ಸಿನಲ್ಲಿಯೇ ಅಭಿನಂದಿಸುವ ಹಾಡಾಗಿ ಬಂದಿದೆ "ಓ ಗುಣವಂತ". ಈ ಹಾಡಿನ ಸಾಹಿತ್ಯ ಎಷ್ಟು ಬಾರಿ ಕೇಳಿದರೂ, ಹೊಸ ಹೊಸ ರೀತಿಯಲ್ಲಿ ಮನಸ್ಸಿಗೆ ತಾಕುತ್ತದೆ. ಕನಸ್ಸುಗಳ ಮೂಟೆಯನ್ನು ಹೊತ್ತು ಸಾಗುವಾಗ ಬರುವ ಒಂದು ವಿಚಿತ್ರ ತಿರುವು ಮತ್ತು ಆ ತಿರುವಿಗೆ ಒಂದು ಕೊಂಕು ಹಾಕಿ, ಮತ್ತೆ ಹಳಿಗೆ ಬರುವ ಜೀವನ ಪಥವನ್ನು ತೋರುವ ಆ ನಾಯಕನಿಗೆ ಧನ್ಯವಾದಗಳನ್ನು ಅರ್ಪಿಸುವ ಹಾಡನ್ನು ಎಸ್ ಜಾನಕಿಯಮ್ಮ ಆಪೋಶನ ಮಾಡಿ ಹಾಡಿದ್ದಾರೆ. ಸಂಗೀತ, ಅದಕ್ಕೆ ತಕ್ಕಂತೆ ಸಾಹಿತ್ಯ, ಅದಕ್ಕೆ ಬೇಕಾದ ಅದ್ಭುತ ಗಾಯನ... ನಾ ಹೇಳೋಲ್ಲ ನೀವೇ ಕೇಳಿ ಈ ಹಾಡನ್ನು ತಲೆದೂಗದೆ ಇರಲು ಸಾಧ್ಯವೇ ಇಲ್ಲ. 

ಚಂದ್ರ ತೋರಿಸಲೇ, ನಕ್ಷತ್ರಗಳನ್ನು ನಿನ್ನ ಮುಡಿಗೆ ಪೋಣಿಸಲೇ ಎಂದು ಇಲ್ಲದ ಆಸೆ ಹುಟ್ಟಿಸುವ ಪ್ರೇಮಿಗಳ ಆಶಾಪಾಶದ ಮಧ್ಯದಲ್ಲಿ, ನನ್ನ ಮಟ್ಟ ಹೀಗಿದೆ, ನನಗೆ ಅದು ತರಲು ಆಗೋಲ್ಲ, ಇದು ತರಲು ಅಸಾಧ್ಯ ಎಂದು ಹೇಳುತ್ತಲೇ, ನಿನಗಾಗಿ ಏನು ತರಲಿ ಹೇಳು ಎಂದು ಪ್ರೀತಿಯ ನಿವೇದನೆ ಮಾಡುವ ಹಾಡಿನಲ್ಲಿ ಎಸ್ ಅರ್ ಎಕ್ಕುಂಡಿ ವಿರಚಿತ "ಯಾವ ಕಾಣಿಕೆ ನೀಡಲಿ" ಎಂದು ಎಸ್ ಪಿ ಬಾಲಸುಬ್ರಮಣ್ಯಂ ಮನವನ್ನು ತಟ್ಟುತ್ತಾರೆ. 

ಕಸದ ಬಿದ್ದ ಹೂವಿಗೂ ಬೆಲೆಯಿದೆ, ಮುದುಡಿ ಹೋದ ಮಾಲೆಗೆ ಬೆಲೆ ಕಟ್ಟುವ ಮನಸಿದ್ದರೆ ಸಾಕು, ಅದು ಹೃದಯ ಕಮಲದ ಗುಡಿಯಲ್ಲಿ ಪೂಜೆಗೆ ಅರ್ಹವಾಗುವ ಮನಸ್ಸಿಗೆ ಅರ್ಪಿತವಾಗುತ್ತದೆ ಎನ್ನುವ ಒಂದು ಹೃದಯ ಹಿಂಡುವ ಸಾಹಿತ್ಯ "ಮಸಣದ ಹೂವೆಂದು ನೀನೇಕೆ ಕೊರಗುವೆ" ಹಾಡು, ಇಲ್ಲಿ ಎಸ್ ಪಿ ಬಾಲಸುಬ್ರಮಣ್ಯಂ ಅವರ "ಪಾರ್ವತಿ" ಎಂದು ಕೂಗುವ ಶಬ್ದ ಮನಸ್ಸಿನ ಮೇಲೆ ತುಂಬಾ ಪರಿಣಾಮ ಬೀರುತ್ತದೆ. 

ಹಾಡುಗಳು ಚಿತ್ರದ ಅವಿಭಾಜ್ಯ ಅಂಗ ಮತ್ತು ಅದು ಕತೆಯನ್ನು ಮುಂದುವರೆಸಲು ಸಹಾಯವಾಗುತ್ತದೆ ಎಂದು ಬಲವಾಗಿ ನಂಬಿದ್ದ ಪುಟ್ಟಣ್ಣ ಕಣಗಾಲ್ ತಮ್ಮ ಅಂತಿಮ ಚಿತ್ರದಲ್ಲಿಯೂ ಕೂಡ ಹಾಡುಗಳನ್ನು ಸರಿಯಾದ ಜಾಗದಲ್ಲಿ ಅಳವಡಿಸಿಡಿಸಿ ಕಥೆಯ ಓಟಕ್ಕೆ ಒಂದು ನಿರ್ಧಿಷ್ಟ ವೇಗವನ್ನು ಕೊಟ್ಟಿದ್ದಾರೆ. 

ಇಡಿ ಚಿತ್ರ ಎಲ್ಲೂ ಒಂದಿನಿತು ಬೇಸರ ತರಿಸುವುದಿಲ್ಲ. ಒಬ್ಬ ಜಾದೂಗಾರ ಯಕ್ಷಿಣಿ ಮಾಡಿ ಮಾಡಿ ಜನರ ಮನಸ್ಸನ್ನು ಗೆಲ್ಲುವಂತೆ, ಪ್ರತಿ ದೃಶ್ಯಗಳನ್ನು ಜಾದೂಗಾರಿಕೆಯ ದಂಡದಿಂದ ಸ್ಪರ್ಶ ಮಾಡಿ, ಮರೆಯದ ಮಾಣಿಕ್ಯವನ್ನು ಬೆಳ್ಳಿ ತೆರೆಯಲ್ಲಿ ಬೆಳಗಿಸಿದ್ದಾರೆ. 

ಅನುಗ್ರಹ ಮೂವಿ ಮೇಕರ್ಸ್ ಲಾಂಛನದಲ್ಲಿ ಬಿ ಎಸ್ ಗಾಯತ್ರಿ ಮತ್ತು ಎಸ್ ಆರ್ ಸರ್ವೋತ್ತಮ ಕಣಗಾಲ್ ಅವರ ನಿರ್ಮಾಣದಲ್ಲಿ ಮೂಡಿ ಬಂದ ಈ ಚಿತ್ರ ರತ್ನಕ್ಕೆ ಛಾಯಾಗ್ರಾಹಣ ಮಾಡಿದವರು ಎಸ್ ಮಾರುತಿರಾವ್.  ಸರಳ ಆದರೆ ಪರಿಣಾಮಕಾರಿ ಸಂಭಾಷಣೆ ನೀಡಿದವರು ಟಿ ಜಿ ಅಶ್ವತ್ ನಾರಾಯಣ. 

ತಮ್ಮ ಎಲ್ಲಾ ಕಾಯಕಕ್ಕೂ ಪ್ರೇರೇಪಣೆ ನೀಡಿದ ಜಗನ್ಮಾತೆಯನ್ನು ಸ್ಮರಿಸುತ್ತಾ  ಆ ಮಾತೆಯ ದಿಗ್ದರ್ಶನದಲ್ಲಿ ಈ ದೃಶ್ಯ ಕಾವ್ಯವನ್ನು ಕಟ್ಟಿಕೊಟ್ಟವರು ಪುಟ್ಟಣ್ಣ ಕಣಗಾಲ್ ಅವರು. 

ತಾವು ಕಂಡ ರೀತಿಯಲ್ಲಿ ಚಿತ್ರವನ್ನು ಮುಗಿಸುವ ಮೊದಲೇ ಆ ಜವರಾಯನ ಕರೆಗೆ ಓಗೊಟ್ಟು ಇಹಲೋಕದಿಂದ ಹೊರನೆಡೆದ ಮೇಲೆ, ಅವರಿಗೆ ಗೌರವ ಸಲ್ಲಿಸುತ್ತಲೇ, ಉಳಿದ ಭಾಗವನ್ನು ಆದಷ್ಟು ಪುಟ್ಟಣ್ಣ ಅವರ ಕಲ್ಪನೆಯಲ್ಲಿ ಇರಬಹುದು ಎನ್ನುವ ರೀತಿಯಲ್ಲಿ ಚಿತ್ರವನ್ನು ಪೂರ್ಣಗೊಳಿಸಿ, ತಾವು ಚಿತ್ರೀಕರಿಸಿದ ಭಾಗದಲ್ಲಿ ತಪ್ಪಿದ್ದರೆ ಅದು ತಮ್ಮದೇ ಎಂದು ಹೇಳಿ ತಮ್ಮ ಗೆಳೆಯ ಪುಟ್ಟಣ್ಣ ಕಣಗಾಲ್ ಅವರಿಗೆ ವಂದನೆ ಅರ್ಪಿಸುವ ಇತ್ತೀಚಿಗಷ್ಟೇ ಪುಟ್ಟಣ್ಣ ಕಣಗಾಲ್ ಅವರನ್ನು ಸ್ವರ್ಗದಲ್ಲಿ ಭೇಟಿ ಮಾಡಲು ತೆರಳಿದವರು ರವಿ ಅಥವಾ ಕೆ ಎಸ್ ಎಲ್ ಸ್ವಾಮೀ. 



ಈ ಚಿತ್ರದ ಹೆಸರು ಮಸಣದ ಹೂವು ಎಂದಿದ್ದರೂ ಕನ್ನಡಿಗರ ಮತ್ತು ಚಲನ ಚಿತ್ರ ರಸಿಕರ ಹೃದಯ ಕಮಲದಲ್ಲಿ ಈ ಚಿತ್ರ ಎಂದೂ ಬಾಡದ ಪಾರಿಜಾತ ಹೂವಾಗಿ ಸದಾ ನಗುನಗುತ್ತಲೇ ಇರುತ್ತದೆ. 

ಪುಟ್ಟಣ್ಣ ಕಣಗಾಲ್ ಮತ್ತು ರವಿ ಅವರಿಗೆ ಈ ಲೇಖನ ಅರ್ಪಿತ. 

Thursday, October 29, 2015

ಸ್ನೇಹದ ಅಮೃತ ಸಿಂಚನ ಮಾಡುವ ಅಮೃತ ಘಳಿಗೆ (1984)

ಸಮುದ್ರದಲ್ಲಿ ತೇಲುವ ಅನುಭವ ಎಷ್ಟು ಸೊಗಸೋ ಅಷ್ಟೇ ಭಯನಕವಾಗಿರುತ್ತೆ ದೈತ್ಯ ಅಲೆಗಳು ಸುತ್ತ ಮುತ್ತಲ ಸೃಷ್ಠಿಯನ್ನು ಆಪೋಶನ ಮಾಡುವಾಗ. ಆದರೆ ಆ ದೈತ್ಯ ಅಲೆಗಳಿಗೆ ಶಕ್ತಿ ಕೊಡುವುದು ಯಾವುದು ಗೊತ್ತೇ, ಕಡಲಲ್ಲಿ ಇರುವ ನೀರು ಮತ್ತು ಅದರ ಮೇಲೆ ಬೀಸುವ ಗಾಳಿ.

ನಿಜ ಅದರ ಒಡಲೊಳಗೆ ಇರುವ ನೀರು ದೈತ್ಯಾಕಾರ ತಾಳುತ್ತದೆ ಎಂದರೆ, ಅದರೊಳಗಿನ ಶಕ್ತಿ ನಮ್ಮ ಊಹೆಗೆ ನಿಲುಕದ್ದು. 

ಪುಟ್ಟಣ್ಣ ಕಣಗಾಲ್ ಅವರು ಮಾಮೂಲಿ ಎನ್ನುವ ಕಥೆಯನ್ನು ಕೂಡ ಅಸಾಧಾರಣ ರೀತಿಯಲ್ಲಿ ತೆರೆಯ ಮೇಲೆ ಬಡಿಸುತ್ತಿದ್ದುದು ಅವರ ಅಗಾಧ ಪ್ರತಿಭೆಯ ಶಕ್ತಿಯಿಂದ. ನಮ್ಮ ಕಣ್ಣಿಗೆ ಸಾಧಾರಣ ಎನ್ನಿಸುವುದನ್ನು ಅಷ್ಟೇ ವಿವರವಾಗಿ, ವಿಶಿಷ್ಟ ರೀತಿಯಿಂದ ಹೀಗೂ ನೋಡಬಹುದು ಎನ್ನುವುದನ್ನು ಕಳಿಸಿಕೊಟ್ಟ ಗುರುಗಳು ಅವರು. 

ಅಮೃತ ಘಳಿಗೆ ಈ ಚಿತ್ರದ ಕಥೆಯನ್ನು ಅವರ ಜೀವದ ಗೆಳೆಯ ಮೋಹನ್ ಕಂಪ್ಲಾಪುರ್ ಕೊಟ್ಟಾಗ ಅ ಪುಸ್ತಕದ ಮೇಲೆ ಇದ್ದ ಶಿರೋನಾಮೆ "ದೊಡ್ಡೇರಿ ವೆಂಕಟಗಿರಿ ರಾವ್ - "ಅವಧಾನ" ". ಅದನ್ನೇ ಸುಂದರ ಚಿತ್ರಕಥೆ ಮಾಡಿ, ಅದಕ್ಕೊಂದು ಸುಂದರ ತಾಣವನ್ನು ಹುಡುಕಿ, ಅಮೃತ ಘಳಿಗೆ ಎನ್ನುವ ಒಂದು ನಿತ್ಯ ನೂತನ ಚಿತ್ರವನ್ನು ನೀಡಿದರು. ಈ ಕಥೆ ಆ ಕಾಲದಲ್ಲಿ ಸುಧಾ ವಾರ ಪತ್ರಿಕೆಯಲ್ಲಿ ಧಾರಾವಾಹಿಯಾಗಿ ಮೂಡಿ ಬಂದಿತ್ತು. ಪುಟ್ಟಣ್ಣ ಅವರ ಹುಡುಕಾಟದಲ್ಲಿ ಸಿಕ್ಕ ಇಂಥಹ ಕಥಾ ಮುತ್ತುಗಳು ಹೇರಳ. 

ಎಸ್ ಆರ್ ರಾಜನ್, ಭೀಮ ರಾವ್, ಕೆ ನಾಗರತ್ನ, ಪುಟ್ಟಣ್ಣ ಕಣಗಾಲ್ ತಂಡ ನಿರ್ಮಾಪಕರಾಗಿ ಈ ಚಿತ್ರವನ್ನು ಜಯಭೇರಿ ಫಿಲಂಸ್ ಲಾಂಛನದಲ್ಲಿ ತೆರೆಗೆ ತಂದರು. 

ಆರಂಭದಲ್ಲಿ ಪುಟ್ಟಣ್ಣ ಅವರ ಮಾತೃಶ್ರಿ ಅವರಿಗೆ ನಮನ ಸಲ್ಲಿಸುತ್ತಾ, ಶುರುವಾಗುವ ಈ ಚಿತ್ರದ ವಿಶೇಷ ಛಾಯಾಗ್ರಹಣ ಬಿ ಎಸ್ ಬಸವರಾಜ್ ಅವರದ್ದು. ಅದ್ಭುತ ಹಾಡುಗಳನ್ನು ಬರೆದದ್ದು ಜೀವದ ಗೆಳೆಯ ವಿಜಯನಾರಸಿಂಹ ಅದಕ್ಕೆ ಸಂಗೀತ ಕಿರೀಟ ತೊಡಿಸಿದವರು ಇನ್ನೊಬ್ಬ ಜೀವದ ಗೆಳೆಯ ವಿಜಯಭಾಸ್ಕರ್. 

ಪುಟ್ಟಣ್ಣ ಅವರಿಗೆ ಕರುನಾಡಿನ ಪ್ರತಿಭೆಗಳನ್ನು, ಕರುನಾಡಿನ ಸುಂದರ ತಾಣಗಳನ್ನು ಪರಿಚಯಿಸುವ ಉತ್ಸಾಹ ಯಾವಾಗಲೂ ಇತ್ತು. ಅವರ ಚಿತ್ರಗಳ ಮೂಲಕ ಬೆಳಕಿಗೆ ಬಂದ ನಕ್ಷತ್ರಗಳು ಅನೇಕ ಅನೇಕ. ಈ ಚಿತ್ರದ ಮೂಲಕ ಕರುನಾಡಿಗೆ ಕೊಟ್ಟ ಉಡುಗೊರೆ ಬಿ ಆರ್ ಛಾಯ ಎನ್ನುವ ಕರುನಾಡಿನ ಮನೆಮಗಳಾದ ಗಾಯಕಿ. 

ಚುರುಕು ಸಂಭಾಷಣೆ, ಹಿತಮಿತವಾದ ಪದಗಳು ಪುಟ್ಟಣ್ಣ ಚಿತ್ರಗಳ ಆಸ್ತಿ, ಈ ಚಿತ್ರಕ್ಕೆ ಪದಗಳನ್ನು ಜೋಡಿಸಿದವರು ಬಿ ಎಲ್ ವೇಣು. ಜಗನ್ಮಾತೆಯ ದಿಗ್ದರ್ಶನದಲ್ಲಿ ಚಿತ್ರಕಥೆ, ನಿರೂಪಣೆ ಮತ್ತು ನಿರ್ವಹಣೆ ಪೂಜ್ಯ ಗುರುಗಳಾದ ಪುಟ್ಟಣ್ಣ ಕಣಗಾಲ್ ಅವರದ್ದು. 

ಪುಟಿಯುವ ಯೌವನದ ಉತ್ಸಾಹ ಕೆಲವೊಮ್ಮೆ ಎಂಥಹ ಹಾದಿಯನ್ನು ಹಿಡಿಯುತ್ತದೆ ಎನ್ನುವುದರ ಆರಂಭ ಈ ಚಿತ್ರದ ಆರಂಭಿಕ ದೃಶ್ಯದಲ್ಲಿ ಕಾಣುತ್ತದೆ. ಬುಗ್ಗೆ ಬುಗ್ಗೆಯಾಗಿ ದೋಣಿಯ ಮೋಟಾರಿನ ಕೆಳಗೆ ಉಕ್ಕುವ ನೀರು ಈ ಮಾತಿಗೆ ಸಾಕ್ಷಿ. 
ಆಧುನಿಕ ಪ್ರಪಂಚ ದಾಪುಗಾಲು ಇಡುತ್ತಾ ಸಾಗಿದಾಗ ಪ್ರಕೃತಿಯನ್ನು ಮನುಷ್ಯ ಹೇಗೆ ಕಬಳಿಸುತ್ತಾ ಹೋಗುತ್ತಾನೆ ಎನ್ನುವುದಕ್ಕೆ ಶರಾವತಿ ಹಿನ್ನೀರಿನ ಬಗ್ಗೆ ನಾಯಕಿ ಮಾತಲ್ಲಿ ಬರುವ ಆರಂಭಿಕ ಸಂಭಾಷಣೆ ಸಾಕ್ಷಿಯಾಗಿ ನಿಲ್ಲುತ್ತದೆ. 

ಶಾಲೆಯ ಕಡಿವಾಣದ ದಿನಗಳಿಂದ ಕಾಲೇಜು ಎನ್ನುವ ಸ್ವತಂತ್ರ ಎನ್ನುವ ಇನ್ನೊಂದು ಪರಿಧಿಯೊಳಗೆ ಹೋಗುವ ಹರೆಯದ ತುಡಿತವನ್ನು ಕೆಲವೇ ದೃಶ್ಯಗಳಲ್ಲಿ ಅಚ್ಚುಕಟ್ಟಾಗಿ ತಂದಿದ್ದಾರೆ. ನೋಡಿದ ತಕ್ಷಣ ರೂಪು, ವಯ್ಯಾರ ಅಥವಾ ಲಕ್ಷಣಗಳನ್ನು ಗಮನಿಸದೆ ಪ್ರೀತಿ ಎನ್ನುವ ಒಂದು ವಿಚಿತ್ರ ಭಾವಕ್ಕೆ ಬೀಳುವ ನಾಯಕ ಪಾತ್ರಧಾರಿ ರಾಮಕೃಷ್ಣ ಉತ್ತಮವಾಗಿ ಅಭಿನಯಿಸಿದ್ದಾರೆ. ನಾಯಕಿ ಪದ್ಮಾವಾಸಂತಿ ಮತ್ತೆ ಅಭಿನಯವನ್ನು ಸಾಣೆ ಹಿಡಿದಂತೆ ನಟಿಸಿದ್ದಾರೆ. ಇನ್ನೂ ಮೊದಲ ಪರಿಚಯ ಶ್ರೀಧರ್ ಗಂಭೀರ ಪಾತ್ರದಲ್ಲಿ ಮಿಂಚಿದ್ದಾರೆ. ಎಲ್ಲೂ ಅತಿರೇಕದ ಅಭಿನಯ ಅಥವಾ ದೃಶ್ಯಗಳನ್ನು ಕಟ್ಟಿ ಕೊಡದಿರುವುದು ಪುಟ್ಟಣ್ಣ ಅವರ ಎಲ್ಲಾ ಚಿತ್ರಗಳ ಪ್ರಮುಖ ಆಕರ್ಷಣೆ. ಹದವಾಗಿ, ನವಿರಾದ ಸಂಭಾಷಣೆಗಳು ಮತ್ತು ಅದಕ್ಕೆ ಬದ್ಧವಾಗಿ ನಿಲ್ಲುವ ದೃಶ್ಯ ಜೋಡಣೆ, ಪರಿಸರ ಇದು ಈ ಚಿತ್ರದ ಮತ್ತೊಂದು ಆಕರ್ಷಣೆ. ರಾಮಕೃಷ್ಣ ಒಬ್ಬರನ್ನು ಬಿಟ್ಟರೆ ಮಿಕ್ಕೆಲ್ಲಾ ಕಲಾವಿದರು ಅಷ್ಟೇನೂ ಬೆಳಕಿಗೆ ಬಂದು ಮಿಂಚಿದ ಪ್ರತಿಭೆಗಳಲ್ಲ. ಆದರೆ ಪ್ರತಿಯೊಬ್ಬರಲ್ಲೂ ಕಥೆಗೆ ಬೇಕಷ್ಟು ಅಭಿನಯ ಹೊಮ್ಮಿಸಿರುವ ರೀತಿ ಇಷ್ಟವಾಗುತ್ತದೆ.

ಸೂರ್ಯಾಸ್ತದ ಅನೇಕ ದೃಶ್ಯಗಳನ್ನು ಪರಿಣಾಮಕಾರಿಯಾಗಿ ಉಪಯೋಗಿಸಿರುವ ಪುಟ್ಟಣ್ಣ, ಅದನ್ನು ಸರಿಯಾದ ದೃಶ್ಯಕ್ಕೆ ಒಪ್ಪವಾಗಿ ಜೋಡಿಸಿದ್ದಾರೆ.

ಮೊದಲ ಪ್ರೇಮವನ್ನು ನಿವೇದಿಸುತ್ತಾ ಮನಸ್ಸಲ್ಲೇ ರಮ್ಯ ಕಲ್ಪನೆ ಮಾಡಿಕೊಳ್ಳುವ ಹಾಡಾಗಿ "ಮಯೂರಿ ನಾಟ್ಯ ಮಯೂರಿ" ಎಸ್ ಪಿ ಬಾಲಸುಬ್ರಮಣ್ಯಂ ಮತ್ತು ಛಾಯ ಅವರ ಕಂಠ ಸಿರಿಯಲ್ಲಿ ಬರುತ್ತದೆ. ರಾಮಕೃಷ್ಣ ಅವರ ನೃತ್ಯ, ಪದ್ಮಾವಾಸಂತಿ ಅಭಿನಯ ಈ ಹಾಡಿನ ಮೆಚ್ಚತಕ್ಕ ಅಂಶ. ಶರಾವತಿ ಹಿನ್ನೀರಿನ ರಮ್ಯ ತಾಣವನ್ನು ಪರಿಚಯಿಸಿಕೊಡುತ್ತಾರೆ

ಪ್ರಣಯದ ಉತ್ತುಂಗ, ಮತ್ತು ಮನಸ್ಸಿನ ಮೇಲೆ ಹಿಡಿತ ಜಾರುವ ದೃಶ್ಯವನ್ನು ಹಾಡಾಗಿ "ಪಾರವತಿ ಪರಶಿವನ ಪ್ರಣಯ ಪ್ರಸಂಗ" ಹಾಡಿನಲ್ಲಿ ಮನಸ್ಸಿನ ಮೇಲೆ ಬೀರುವ ವಿಧ ವಿಧ ಭಾವಕ್ಕೆ ಒಪ್ಪುವಂತೆ ಬಣ್ಣ ಬಣ್ಣಗಳ ಬೆಳಕಲ್ಲಿ ಈ ಹಾಡನ್ನು ಚಿತ್ರೀಕರಿಸಿದ್ದಾರೆ ಇಕ್ಕೇರಿಯ ದೇಗುಲದಲ್ಲಿ. ಪುಟ್ಟಣ್ಣ ಅವರ ತಾಂತ್ರಿಕ ಜ್ಞಾನದ ಭವ್ಯ ಅನಾವರಣ.

ಮುಂದಿನ ವಿದ್ಯಾಭ್ಯಾಸಕ್ಕೆ ಹೊರಡುವ ನಾಯಕ, ಮೊದಲ ಕಾಗದವನ್ನು ತಲುಪಿಸಿದಾಗ ಅದನ್ನು ಓದುವ ನಾಯಕಿ, ಮತ್ತು ಆ ದೃಶ್ಯವನ್ನು ಉಯ್ಯಾಲೆಯಲ್ಲಿ ತೂಗಿದಂತೆ ಚಿತ್ರೀಕರಿಸಿದ್ದಾರೆ. ಅದನ್ನು ನಾಯಕಿಯ ದೇಹದಲ್ಲಿ ಆಗುವ ಬದಲಾವಣೆ ಮತ್ತು ನಾಯಕ ಹೊರಳಿದ ಪಥದಲ್ಲಿ ನಿಲ್ಲುವನು ಎನ್ನುವ ಉಪಮೆ ನೀಡಿದ್ದಾರೆ. ಬಿಸಿಗೆ ಕರಗಿದ ಮಂಜಿನಂತೆ ನಾಯಕನ ಪ್ರೇಮವೂ ಪ್ರೀತಿಯೂ ಅನುಮಾನಕ್ಕೆ ತಿರುಗುತ್ತೆ ಇದರ ಮುನ್ಸೂಚನೆ ಈ ದೃಶ್ಯದಲ್ಲಿ ಕಾಣುತ್ತದೆ.

ನಾಯಕಿ ತನ್ನ ಬವಣೆಯನ್ನು ತನ್ನ ಆತ್ಮೀಯ ಸ್ನೇಹಿತ ಶ್ರೀಧರ್ ಗೆ ಹೇಳಲು ಹೊರ ಕರೆಯುತ್ತಾಳೆ, ಆದರೆ ಸ್ನೇಹಿತನ ಮುಂದೆ ತಾನು ಕಾಲು ಜಾರಿದ್ದೇನೆ ಎಂದು ಹೇಳಲು ತೊಳಲಾಡುವ ದೃಶ್ಯವನ್ನು ಅಷ್ಟೇ ಅದ್ಭುತವಾಗಿ ಕ್ಯಾಮೆರ ಓಡಾಡುತ್ತಲೇ ಇರುವಂತೆ ತೋರಿಸಿದ್ದಾರೆ. ಶ್ರೀಧರ್ ಹತ್ತಿರ ಬಂದು ಏನು ಸಮಾಚಾರ ಎಂದಾಗ, ಕ್ಯಾಮೆರ ನಿಲ್ಲುತ್ತದೆ, ಅಂದರೆ, ಜೀವದ ಗೆಳೆಯ ಆತ್ಮ ವಿಶ್ವಾಸ ತುಂಬುತ್ತಾನೆ ಮತ್ತು ತನ್ನ ಎಲ್ಲಾ ಕಷ್ಟಗಳಿಗೆ ಸ್ಪಂಧಿಸುತ್ತಾನೆ ಎನ್ನುವ ಭರವಸೆ ಮೂಡಿದಾಗ ತೂಗಾಡುವ ಮನಸ್ಸು ಒಂದು ತಹಬದಿಗೆ ನಿಲ್ಲುತ್ತದೆ ಎನ್ನುವ ಮಾತನ್ನು ಈ ದೃಶ್ಯದಲ್ಲಿ ಕಟ್ಟಿಕೊಟ್ಟಿದ್ದಾರೆ.

ನಾಯಕಿಯ ಪರಿಸ್ಥಿತಿಗೆ ಪರಿಹಾರ ಎನ್ನುವಂತೆ ತಾನೇ ಮದುವೆ ,ಮಾಡಿಕೊಳ್ಳುವ ಶ್ರೀಧರ್, ತನ್ನ ತಾಯಿಗೆ ಹೇಳುವ ಮಾತು "ಯಾವತ್ತೂ ಯಾವ ಕಾರಣಕ್ಕೂ ಇವಳ ಮನಸ್ಸನ್ನು ನೋಯುವ ಮಾತನ್ನು ಆಡಬೇಡ" ಎಂದಾಗ ತಾಯಿ ಹೇಳುವ ಅದ್ಭುತ ಮಾತು "ಮಗ ಇಷ್ಟ ಪಟ್ಟು ಮದುವೆ ಮಾಡಿಕೊಂಡ ಹೆಣ್ಣನ್ನು ನಿಕೃಷ್ಟವಾಗಿ ಕಾಣುವಷ್ಟು ಕೆಟ್ಟ ತಾಯಿಯಲ್ಲ" ಎನ್ನುತ್ತಾಳೆ.

ಇದಕ್ಕೆ ವಿವರಣೆಯೇ ಬೇಡವೇ ಬೇಡ.

ಕರುನಾಡಿನ ರಮ್ಯತಾಣ ಶ್ರೀಧರ ತೀರ್ಥ ಇರುವ ವರದಹಳ್ಳಿ. ಇಲ್ಲಿ ಚಿತ್ರೀಕರಣ ಮಾಡಿದ್ದಾರೆ ಒಂದು ಅದ್ಭುತ ಹಾಡನ್ನು "ಹಿಂದೂಸ್ಥಾನವು ಎಂದೂ ಮರೆಯದ" ಜಯಚಂದ್ರನ್ ಹಾಡಿರುವ ರೀತಿ, ಆ ಸಾಹಿತ್ಯ ಅದ್ಭುತ. ಶ್ರೀಧರ್ ಈ ಹಾಡಿಗೆ ಉತ್ತಮ ಅಭಿನಯ ನೀಡಿದ್ದಾರೆ. ಮುಂದೆ ಇದೆ ಹಾಡನ್ನು ಬಿ ಆರ್ ಛಾಯ ಹಾಡಿರುವ ರೀತಿಯೂ ಸೊಗಸಾಗಿದೆ.

ಶ್ರೀಧರ್ ಪಾತ್ರ ಮರಣಹೊಂದಿದಾಗ, ಮುಗ್ಧ ಮಗು ಸ್ಮಶಾನದಲ್ಲಿ ಏನೂ ಮಾತಾಡದೆ ಅಥವಾ ಅಳಲು  ಗೊತ್ತಾಗದೆ ನಿಂತಿರುತ್ತದೆ. ಇಲ್ಲಿ ಯಾವುದೇ ಭಾವನಾತ್ಮಕ ಸಂಭಾಷಣೆ ಇರುವುದಿಲ್ಲ, ನಿಶ್ಯಬ್ಧ... ಅತ್ಯುತ್ತಮ ದೃಶ್ಯ ಇಡಿ ಚಿತ್ರದಲ್ಲಿ.

ಕಡೆಯ ಕೆಲ ದೃಶ್ಯದಲ್ಲಿ ರಾಮಕೃಷ್ಣ ತನ್ನ ತಪ್ಪಿನ ಅರಿವಾಗಿ ನಾಯಕಿಯನ್ನು ನೋಡಲು ಬಂದಾಗ, ನಾಯಕಿಯ ಮೊಗದಲ್ಲಿ ತನ್ನ ಬಾಳನ್ನು ನಾಶ ಮಾಡಿದ ಅವನನ್ನು ನೋಡಿದ ತಕ್ಷಣ ಕೋಪ ಆದರೆ ಕೆಲವು ಕ್ಷಣಗಳಲ್ಲಿ ಶಾಂತ ಸ್ವಭಾವದ ಅಭಿನಯ ಸೂಪರ್ ಸೂಪರ್ ಎನ್ನಿಸುತ್ತದೆ.

ಶ್ರೀಧರ್ ಬರೆದಿಟ್ಟ ಪತ್ರ ಮತ್ತು ಉಯಿಲನ್ನು ಓದುವ ರಾಮಕೃಷ್ಣ ಕೂತಿರುವ ಶರಾವತಿ ಹಿನ್ನೀರಿನ ದಡದಲ್ಲಿ ದೃಶ್ಯವನ್ನು ಪದೇ ಪದೇ ಹಿಂದಕ್ಕೆ ಮುಂದಕ್ಕೆ ಜೂಮ್ ಮಾಡುತ್ತಲೇ ಇರುತ್ತದೆ ದೃಶ್ಯ ಸಂಯೋಜನೆ, ನಾಯಕ ತನ್ನ ಗತ ಜೀವನದಲ್ಲಿ ಮಾಡಿದ ತಪ್ಪನ್ನು ತಿದ್ದಿಕೊಳ್ಳಬೇಕು ಮತ್ತು ಅದಕ್ಕೆ ಒಂದು ಅವಕಾಶವಿದೆ, ಮತ್ತೆ ತನ್ನ ತಪ್ಪನ್ನು ಸರಿ ಪಡಿಸಿಕೊಳ್ಳಲಿಕ್ಕೆ ಸಾಧ್ಯವಿದೆ ಎನ್ನುವ ಅಭಿಪ್ರಾಯ ಮೂಡಿಬರಲು ಸಹಾಯ ಮಾಡುತ್ತದೆ.


ಪುಟ್ಟಣ್ಣ ಕಣಗಾಲ್ ಮತ್ತೆ ತಮ್ಮ ಜಾದೂವನ್ನು ತೋರಿಸಿದ ಚಿತ್ರ ಇದು. ಸುಂದರ ಕಥೆಯನ್ನು ಅಷ್ಟೇ ಅಚ್ಚುಕಟ್ಟಾಗಿ ನಿರೂಪಣೆ ಮಾಡಿರುವ ರೀತಿಗೆ ಮನಸ್ಸಲ್ಲೇ ನಮನ ಸಲ್ಲಿಸುತ್ತೇನೆ. 

Sunday, October 18, 2015

ಸಾವಿರ ಸಾವಿರ ಮನಸ್ಸಿನ ಭಾವದ ಉಗಮಸ್ಥಾನ "ಸಾವಿರ ಮೆಟ್ಟಿಲು" - ಪೂರ ಹತ್ತದ ಮೆಟ್ಟಿಲುಗಳು (2006)

ಕಲಾವಿದರ ಕಾಲು ಅಳತೆ ಒಬ್ಬರಿಂದ ಒಬ್ಬರದು ವಿಭಿನ್ನ ಎಂದು ಹೇಳುತ್ತಾರೆ. ಒಬ್ಬರ ಪರಿಶ್ರಮದ ಪಾದರಕ್ಷೆ ಇನ್ನೊಬ್ಬರ ಕಾಲಿಗೆ ಆಗೋಲ್ಲ ಎಂದು.

ಪುಟ್ಟಣ್ಣ ಕಣಗಾಲ್ ಒಂದು ಪ್ರತಿಭಾ ಪೆಟ್ಟಿಗೆ, ಅವರ ಮೆದುಳು ಒಂದು ಈಗಿನ ಕಾಲದ ಮಾಹಿತಿ ಕೇಂದ್ರ ಅಥವಾ ಕಂಪ್ಯೂಟರ್ ಇದ್ದ ಹಾಗೆ. ಅವರ ಬಗ್ಗೆ ಜನಜನಿತ ಮಾತು ಅಂದರೆ, ಅವರು ಒಂದು ಸಿನಿಮಾ ಕೈಗೆತ್ತಿಕೊಂಡರೆ ಅದರಲ್ಲಿಯೇ ಮುಳುಗಿಬಿಡುತ್ತಿದ್ದರು ಎಂದು, ಹಾಗಾಗಿ ಕಥೆ ಚಿತ್ರಕಥೆ ಎಲ್ಲವೂ ಅವರ ತಲೆಯೊಳಗೆ ಇದ್ದುಬಿಡುತ್ತಿದ್ದವು, ಒಂದು ಮಾದರಿ ಅಥವ ಆಧುನಿಕ ಭಾಷೆಯಲ್ಲಿ ಹೇಳುವುದಾದರೆ ಬ್ಲೂ ಪ್ರಿಂಟ್ ಅಥವಾ ನಕಾಶೆ ಇರುತ್ತಿದ್ದವು ಅನ್ನಿಸುತ್ತದೆ, ಅದನ್ನು ಚಿತ್ರಿಕರಿಸುವಾಗ ಅದಕ್ಕೆ ಮತ್ತಷ್ಟು ಹೊಳಪು ಕೊಟ್ಟು ಬೆಳಗಿಸುತ್ತಿದ್ದರು ಎನ್ನುವ ಅನುಭವ ಅವರ ಎಲ್ಲಾ ಚಿತ್ರಗಳನ್ನು ನೋಡಿದ ಅವರ ಅಪ್ಪಟ ಅಭಿಮಾನಿಗಳಲ್ಲಿ ಒಬ್ಬನಾದ ನನ್ನದು. 

ಇದು ಒಂದು ಮಟ್ಟಿಗೆ ನಿಜ, ಕಲಾವಿದ ಎಂದಿಗೂ ತನ್ನ ಕಲೆಯನ್ನು ಅಥವಾ ತನ್ನ ಕೃತಿಯನ್ನು ಹೊಳಪಿನ ಮೂಸೆಗೆ ತಳ್ಳುತ್ತಲೇ ಇರುತ್ತಾನೆ. ಅದು ಪೂರ್ಣ ಕೃತಿಗೆ ಬರುವಷ್ಟರಲ್ಲಿ ಅವರ ತಲೆಯೊಳಗೆ ಮತ್ತು ಹೃದಯದ ಪರಿಷ್ಕರಣ ಪೆಟ್ಟಿಗೆಯೊಳಗೆ ಮಿಂದೆದ್ದು ಬರುತ್ತದೆ. 

ಅದನ್ನು ಮುಟ್ಟುವುದು ಅಥವಾ ಅದನ್ನು ಮುಂದುವರೆಸುವುದು ಸವಾಲಿನ ಸಂಗತಿಯೇ ಸರಿ. ಶ್ರೀ ಬಸವೇಗೌಡರು ಮತ್ತು ಕೆ ಎಸ್ ಎಲ್ ಸ್ವಾಮೀ ಇಬ್ಬರ ಪರಿಶ್ರಮ ನಿಜಕ್ಕೂ ಶ್ಲಾಘನೀಯ. ಪೂರ್ಣ ಚಿತ್ರಕಥೆಯಿಲ್ಲ, ಕಥೆಯನ್ನು ಎಲ್ಲಿಂದ ಆರಂಭಿಸಬೇಕು, ಹೇಗೆ ಮುಂದಕ್ಕೆ ಕೊಂಡೊಯ್ಯಬೇಕು ಹೀಗೆ ಯಾವುದೇ ಒಂದು ನಿರ್ದಿಷ್ಟ ಚೌಕಟ್ಟಿನ ಜೊತೆಯಲ್ಲಿದೆ ಒಬ್ಬ ಕಲಾವಿದನ ಕುಂಚವನ್ನು ಮುಂದಕ್ಕೆ ಒಯ್ಯುವುದು ಸವಾಲಿನ ವಿಷಯ. ಇಂಥಹ ಪರಿಶ್ರಮ ಕೈಗೊಂಡ ಇಬ್ಬರೂ ಸಾಧಕರಿಗೂ ಮತ್ತು ಅದಕ್ಕೆ ಸಹಕರಿಸಿದ ಎಲ್ಲಾ ಕಲಾವಿದರಿಗೂ ಮತ್ತು ತಾಂತ್ರಿಕ ವರ್ಗಕ್ಕೆ ಅಭಿನಂದನೆಗಳು. 

ಈ ಚಿತ್ರದ ಬಗ್ಗೆಗಿನ ನನ್ನ ಬರಹವನ್ನು ಪುಟ್ಟಣ್ಣ ಅವರು ಚಿತ್ರೀಕರಿಸಿದ ಭಾಗಗಷ್ಟೇ ಸೀಮಿತಗೊಳಿಸುತ್ತೇನೆ, ಕಾರಣ ನಿಮಗೆ ಗೊತ್ತು. 

ಪುಟ್ಟಣ್ಣ ಕಣಗಾಲ್ ಅವರ ಮೊದಲ ಕೆಲ ಪ್ರಯತ್ನಗಳಲ್ಲಿ ಇದು ಒಂದು ಚಿತ್ರ ಎನ್ನಿಸುವ ಎಲ್ಲಾ ಸುಳಿವು ಇದರಲ್ಲಿ ಸಿಗುತ್ತದೆ. ವಜ್ರ ತನ್ನನ್ನೇ ತಾನು ಹೊಳಪಿನ ಪ್ರಖರತೆ ಒಡ್ಡಿಕೊಳ್ಳುತ್ತಿರುವ ಎಲ್ಲಾ ಲಕ್ಷಣಗಳು ಇವೆ ಈ ಚಿತ್ರದಲ್ಲಿ. 

ಈ ಚಿತ್ರದಲ್ಲಿ ನಟಿಸಿರುವ ಸುಮಾರು ೮೦% ಕಲಾವಿದರು ಈ ಚಿತ್ರ ಬಿಡುಗಡೆಯಾದಾಗ ಇಲ್ಲ. ತಾರಾಗಣ ಪಟ್ಟಿಯಲ್ಲಿ ಅವರ ಹೆಸರಿನ ಹಿಂದೆ "ದಿ।।" ಎಂದು ನೋಡುವುದು ಮನಸ್ಸಿಗೆ ಬಹಳ ಹಿಂಸೆಯಾಗುತ್ತದೆ.ನಮ್ಮ ಕರುನಾಡಿನ ಚಿತ್ರರಂಗವನ್ನು ಬೆಳಗಲು ಶ್ರಮಿಸಿದ  ಅನೇಕ ಕಲಾರತ್ನಗಳ ಹೆಸರುಗಳ ಹಿಂದೆ ಆ ಅಕ್ಷರ ನೋಡುವುದು ನಿಜಕ್ಕೂ ಬೇಸರದ ಸಂಗತಿ. 

ಕಪ್ಪು ಬಿಳುಪಿನಲ್ಲಿ ತಯಾರಾದ ಈ ಚಿತ್ರ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿಯೇ ಚಿತ್ರಿಕರಣವಾಗಿದೆ. ಒಂದು ಪ್ರದೇಶವನ್ನು ಅದೇ ಅದೇ ಚೌಕಟ್ಟಿನಲ್ಲಿ ತರದೇ, ಪ್ರತಿದೃಶ್ಯವನ್ನು ಅರೆ ಇದು ಬೇರೆಯದೇ ತಾಣ ಇರಬಹುದೇನೋ ಅನ್ನುವಂತೆ ತೋರಿಸಿದ್ದಾರೆ ಛಾಯಾಗ್ರಾಹಕರು. 

"ಗಂಡು ಬೀರಿ ನಾನಲ್ಲ" ಹಾಡು ಎಲ್ ಆರ್ ಈಶ್ವರಿ ಅಬ್ಬರಿಸಿದ್ದಾರೆ, ಜೊತೆಯಲ್ಲಿಯೇ ನಿಜಕ್ಕೂ ಗಂಡು ಬೀರಿಯಂತೆಯೇ ಅಭಿನಯಿಸಿರುವ ಜಯಂತಿ.  
ಎಳನೀರು ಮಾರುವ ಪಾತ್ರದಲ್ಲಿ ನನ್ನ ಪ್ರೀತಿಯ ಅಶ್ವತ್ ಗಮನಸೆಳೆಯುತ್ತಾರೆ. 
ಆ ಕಾಲದ ಸುರಸುಂದರಾಂಗ ಕಲ್ಯಾಣ್ ಕುಮಾರ್ "ಕೈ ನೀಡಿದೇ ನೀನು ಅಂದು" ಪಿ ಬಿ ಶ್ರೀನಿವಾಸ್ ಮತ್ತು ಎಸ್ ಜಾನಕಿ  ಹಾಡಿಗೆ ಸುಂದರ ನೃತ್ಯ ಮತ್ತು ಅಭಿನಯಯವರ ಜೊತೆಯಲ್ಲಿ ಜಯಂತಿ ಅವರದು 
"ನಮ್ಮೂರ ಬೆಟ್ಟದ" ಎನ್ನುವ ಹಾಡಿನಲ್ಲಿ ಮೈಸೂರನ್ನು ರಮ್ಯವಾಗಿ ತೋರಿಸುವ ದೃಶ್ಯಗಳು ಕಣ್ಣಿಗೆ ಕಟ್ಟುತ್ತವೆ. ಪಿ ಬಿ ಶ್ರೀನಿವಾಸ್ ಮತ್ತು ಪಿ ಸುಶೀಲ ಸಾಹಿತ್ಯಕ್ಕೆ ದನಿಯಾಗುತ್ತಾರೆ. 

ಅದ್ಭುತ ದೃಶ್ಯ ಸಂಯೋಜನೆ ಅಂದರೆ 
ವಜ್ರಮುನಿ, ಜಯಂತಿ ಮತ್ತು ಕಲ್ಯಾಣ್ ಕುಮಾರ್ ಒಂದು ದೃಶ್ಯದಲ್ಲಿ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಸಿಕ್ಕಿಕೊಂಡಿರುತ್ತಾರೆ. ಆ ದೃಶ್ಯದಲ್ಲಿ ಮೂವರು ಜೋರಾಗಿ ಮಾತಾಡಬೇಕು ಅಥವಾ ಬೇಡಿಕೊಳ್ಳುವ ದನಿ ಇರಬೇಕು ಇಲ್ಲವೇ ಅಥವಾ ಒಬ್ಬರಿಗೂಬ್ಬರು ತಮ್ಮ ತಮ್ಮ ಬಗ್ಗೆ ಸಮಜಾಯಿಷಿ ಕೊಡಬೇಕು. ಇವಿಷ್ಟನ್ನು ಕೇವಲ ಒಂದು ನಿಮಿಷದ ದೃಶ್ಯದಲ್ಲಿ ತೋರಿಸುತ್ತಾರೆ ಪುಟ್ಟಣ್ಣ ಅವರು. ಇಡಿ ದೃಶ್ಯವನ್ನು ಮೂರು ಜೊತೆ ಕಣ್ಣುಗಳಲ್ಲಿ ತೋರುತ್ತಾರೆ.. ಪ್ರತಿ ಐದು ಅಥವಾ ಹತ್ತು ಕ್ಷಣಗಳಿಗೆ ಒಂದೊಂದು ಜೊತೆ ಕಣ್ಣುಗಳಲ್ಲಿ ಭಾವ ಬದಲಾಗುತ್ತಾ ಹೋಗುತ್ತದೆ. ಅದ್ಭುತ ಅದ್ಭುತ ಎನ್ನಿಸುವ ದೃಶ್ಯ ಸಂಯೋಜನೆ. 

ಜಯಂತಿ ಪಾತ್ರವನ್ನು ಅತಿ ಅಲ್ಲಿಯ ತನಕ ಅತಿ ಎತ್ತರದಲ್ಲಿ ಕೂರಿಸಿದ್ದ ವಜ್ರಮುನಿ ಮನೆಯವರು (ಪಂಡರಿ ಬಾಯಿ ಮತ್ತು ಆಕೆಯ ಮಗಳು ಮತ್ತು ಮಗ), ಯಾವುದೇ ಕಾರಣಕ್ಕೆ, ಜಯಂತಿ ಅಪರಾಧಿನಿ ಎಂದುಅರಿವಾಗುತ್ತದೆ , ಮಹಡಿಯ ಕೆಳಗೆ ಇದ್ದ ವಜ್ರಮುನಿ ಮತ್ತು ಆತನ ತಾಯಿ ಪಂಡರಿಬಾಯಿ ಜಯಂತಿಯನ್ನು ಕರೆಯುತ್ತಾರೆ. ಜಯಂತಿ ಇಳಿದುಬರುತ್ತಿರುವಾಗ ಆಕೆಯ ಕಣ್ಣಲ್ಲಿ ಅಪರಾಧಿ ಭಾವ ಎದ್ದು ಕಾಣುತ್ತದೆ, ಜೊತೆಯಲ್ಲಿಯೇ ಕ್ಯಾಮೆರ ಚಾಲನೆ ನಿಧಾನವಾಗಿ ಕೆಳಗೆ ಇಳಿಯುತ್ತಾ ಹೋಗುತ್ತದೆ. ವಜ್ರಮುನಿ ಮತ್ತು ಪಂದರಿಬಾಯಿಯವರ ಮುಖಭಾವವನ್ನೇ ತೋರಿಸುತ್ತಾ ಕ್ಯಾಮೆರಾ ನಿಧಾನವಾಗಿ ಕೆಳಗೆ ಇಳಿಯುತ್ತಾ ಹೋಗುತ್ತದೆ. 

ಅಂದರೆ ಜಯಂತಿ ಪಾತ್ರ, ಆ ಮನೆಯವರ ಮುಂದೆ ಅಪರಾಧಿ ಭಾವದಿಂದ ಎತ್ತರದಲ್ಲಿದ್ದ ವ್ಯಕ್ತಿತ್ವ ಭೂಮಿಗೆ ಇಳಿಯುತ್ತಾ ಹೋದಂತೆ ತೋರಿಸುವ ದೃಶ್ಯ. 

ಗುರುಗಳೇ ಇವೆರಡು ದೃಶ್ಯಗಳು ಸಾಕು, ನಿಮ್ಮ ಪ್ರತಿಭೆ ಅನಾವರಣಗೊಳ್ಳಲು ಕರುನಾಡಿನ ರಂಗ ಪರದೆ ಕಾಯುತ್ತಿತು ಎಂದು ತಿಳಿದುಕೊಳ್ಳಲು. 

ಪುಟ್ಟಣ್ಣ ಅವರ ತಲೆಯಲ್ಲಿದ್ದ ಇಡಿ ಚಿತ್ರಕಥೆ ಸಿಕ್ಕಿದ್ದರೂ, ಅಥವಾ ಕಥೆಯ ಒಳ ಸುಳಿವು ಗೊತ್ತಿದ್ದರೂ ಪುಟ್ಟಣ್ಣ ಕಣಗಾಲ್ ಅವರ ಮನಪಟಲದಲ್ಲಿದ್ದ ಚಿತ್ರಕೃತಿಯನ್ನು ಇತರರಿಗೆ ಅಸಾಧ್ಯ ಎನ್ನಿಸುತ್ತಿತ್ತೋ ಏನೋ. ನನ್ನ ಉತ್ತರ ಅಸಾಧ್ಯ ಎಂದು. ಕಾರಣ ಗುರುಗಳು ಗುರುಗಳೇ. 

ಪುಟ್ಟಣ್ಣ ಕಣಗಾಲ್ ಅವರಿಗೆ ಒಂದು ಶ್ರದ್ಧಾ ಪೂರ್ವಕ ನಮನಸಲ್ಲಿಸುವ ಕಾರ್ಯದಲ್ಲಿ ಬಸವೇಗೌಡರು ಮತ್ತು ಕೆ ಎಸ್ ಎಲ್ ಸ್ವಾಮೀ ಮತ್ತು ಚಿತ್ರತಂಡದವರು ಶ್ರಮಿಸಿದ್ದು ನಿಜಕ್ಕೂ ಶ್ಲಾಘನೀಯ. ಪುಟ್ಟಣ್ಣ ಕಣಗಾಲ್ ಮೇಲಿನ ಪ್ರೀತಿ ಮತ್ತು ಗೌರವ ಅವರ ಈ ಬೃಹತ್ ಕಾರ್ಯದಲ್ಲಿ ಜೊತೆ ನೀಡಿದೆ. 

ಪುಟ್ಟಣ್ಣ ಕಣಗಾಲ್ ಅವರಿಗೆ ನನ್ನ ಹೃದಯ ಪೂರ್ವಕ ನಮನಗಳು. 

Friday, October 16, 2015

ಋಣ ಮುಕ್ತಳು - ಒಂದು ವಿಭಿನ್ನ ಅನುಭವ (1984)

ಒಂದು ಮಹಾನ್ ಚೇತನ ಅಮೋಘ ಚಿತ್ರಗಳನ್ನು ನೀಡುತ್ತಾ ನೀಡುತ್ತಾ ಬಸವಳಿದಾಗ ಮತ್ತೆ ಅದಕ್ಕೆ ಚೈತನ್ಯ ನೀಡುವುದೇ ಮತ್ತೊಂದು ಪರಿಶ್ರಮ ಬೇಡುವ ಚಿತ್ರ.

ಹೌದು ಈ ಚಿತ್ರವನ್ನು ನಾ ಇದುವರೆಗೂ ನೋಡೇ ಇರಲಿಲ್ಲ. ಯಾವಾಗಲೂ ಈ ಚಿತ್ರ ದೂರದರ್ಶನದಲ್ಲಿ ಮೂಡಿ ಬಂದರೂ ಬರಿ ಅಂತಿಮ ಕ್ಷಣವನ್ನು ಮಾತ್ರ ನೋಡಿದ್ದೇ.  ಭಾರತಿ ತನ್ನ ಮೊಗದಲ್ಲಿ ಯಾವುದೇ ಭಾವನೆ ತೋರದೆ ನಿಧಾನವಾಗಿ ಆಶ್ರಮವಾಸಿಗಳ ಜೊತೆಯಲ್ಲಿ ನಿರ್ಮಲ ಎನ್ನಿಸುವ ಶ್ವೇತ ವಸ್ತ್ರಧಾರಿಯಾಗಿ ಹೆಜ್ಜೆ ಹಾಕುತ್ತಾ ಹೋಗುವುದು, ಮತ್ತು ರಾಮಕೃಷ್ಣ ತನ್ನ ಹೆತ್ತ ತಾಯಿಯನ್ನು ನೋಡುತ್ತಾ ನಿಲ್ಲುವುದು ಅವರ ಮೊಗದ ಮೇಲೆ ಒಂದು ರೀತಿಯ ಆತಂಕ ಮತ್ತು ತನ್ನ ಮಾತೆ ತನಗೆ ನೆಮ್ಮದಿ ಸಿಗುವ ತಾಣವನ್ನು ಅರಸಿಕೊಂಡ ಒಂದು ಸಂತೋಷ. 

ಕಣಗಾಲ್ ಕ್ರಿಯೇಷನ್ಸ್ ಲಾಂಛನದಲ್ಲಿ ಪುಟ್ಟಣ್ಣ ಕಣಗಾಲ್ ಪರಿವಾರದವರೊಡನೆ ಸೇರಿ ತಯಾರಿಸಿದ ಚಿತ್ರ ಇದು. ಶ್ರೀಮತಿ ಅನುಪಮ ನಿರಂಜನ್ ರವರ "ಋಣ" ಎನ್ನುವ ಕಾದಂಬರಿ ಆಧಾರಿತ ಈ ಚಿತ್ರ ಮೊದಲಿಂದ ಕಡೆಯತನಕ ಏರು ಪೆರಿಲ್ಲದೆ ನೋಡಿಸಿಕೊಂಡು ಹೋಗುತ್ತದೆ. 

ಚಿತ್ರದ ಹೆಸರನ್ನು ತೋರಿಸುವಾಗ ಒಂದು ಪುಸ್ತಕದಲ್ಲಿ  ಪ್ರತಿ ಹಾಳೆಯನ್ನು ತಿರುವು ಹಾಕುತ್ತ ಹೋದಂತೆ ತಾರಾಗಣವನ್ನು ಪರಿಚಯ ಮಾಡಿಕೊಡುತ್ತಾರೆ. ನಮಗೆ ಕಾಣದ ನರಕಲೋಕದಲ್ಲಿ ಚಿತ್ರಗುಪ್ತ ಪ್ರತಿ ಜೀವಿಯ ತಪ್ಪು ಒಪ್ಪುಗಳನ್ನು ಅವಲೋಕಿಸುತ್ತಾ ಪಡೆದದ್ದು, ಕಳೆದದ್ದು ಇವುಗಳ ತುಲನೆ ಮಾಡಿ ಯಮಧರ್ಮ ಶಿಕ್ಷೆ ಕೊಡಲು ಅಹವಾಲು ನೀಡುವಂತೆ ತೋರುವ ದೊಡ್ಡ ಪುಸ್ತಕದ ಹಾಳೆಗಳಂತೆ ಈ ದೃಶ್ಯ ಗೋಚರಿಸುತ್ತದೆ. ಪುಟ್ಟಣ್ಣ ಪ್ರತಿ ಚಿತ್ರವನ್ನು  ಆರಂಭಿಸುವ ರೀತಿ ಯಾವಾಗಲೂ ವಿಭಿನ್ನ. 

ಸಂಭಾಷಣೆಯ ಜವಾಬ್ಧಾರಿಯನ್ನು ಕುಣಿಗಲ್ ನಾಗಭೂಷಣ್ ಜೊತೆ ಹಂಚಿಕೊಂಡು, ಚಿತ್ರಕಥೆ ಬರೆದು ನಿರೂಪಣೆ ಮಾಡಿ ಜಗನ್ಮಾತೆಯ ದಿಗ್ಧರ್ಶನದಲ್ಲಿ ಚಿತ್ರ ಮೂಡಿಸಿದ್ದಾರೆ. ಅವರ ಕನಸಿಗೆ ಕಣ್ಣಾಗಿ ಬರುವುದು ಎಸ್ ಮಾರುತಿರಾವ್ ಅವರ ಛಾಯಾಗ್ರಹಣ ಮತ್ತು ಹಿನ್ನೆಲೆ ಸಂಗೀತ ಮತ್ತು ಹಾಡುಗಳಿಗೆ ಜೀವ ತುಂಬುವ ಸಂಗೀತ ಹೊಣೆ ವಿಜಯಭಾಸ್ಕರ್ ಅವರದ್ದು. 

ಮನುಜ ತಾನು ಮಾಡಿದ ಪಾಪ ಪುಣ್ಯ ಇವುಗಳನ್ನು ಇಲ್ಲೇ ಒಪ್ಪ ಮಾಡಿ ಹೋಗುತ್ತಾನೆ ಎನ್ನುವ ನೀತಿಯ ತಳಹದಿ ಈ ಚಿತ್ರದಲ್ಲಿದೆ. ಹಳ್ಳಿಯಲ್ಲಿ ಹಾಯಾಗಿ ಇರಬಹುದಾದ ಮನೆಯ ಯಜಮಾನ ಹಣದ ಆಮಿಷಕ್ಕೆ ಒಳಗಾಗಿ ಪಟ್ಟಣಕ್ಕೆ ಬಂದು, ಆ ಪಟ್ಟಣದ ರೂಪು ರೇಶೆಗಳಿಗೆ ತಕ್ಕಂತೆ ಅನೈತಿಕತೆಯಿಂದ ಹಣ ಸಂಪಾದಿಸುವುದು, ಇದರ ಜೊತೆಯಲ್ಲಿ ಇವನ ಈ ಸಾಹಸ ಮಕ್ಕಳ ಮೇಲೆ ಪರಿಣಾಮ ಬೀರುವುದು ಸುಂದರವಾಗಿ ಚಿತ್ರಿಕೃತವಾಗಿದೆ. 

ಬುದ್ಧಿವಂತ ಮೊದಲನೇ ಮಗುವನ್ನು  ಎರಡನೇ ಮಗುವಿನ ಮುಂದೆ ಹೋಗಲಿ, ಈ ಚಿಕ್ಕ ಮಗುವಿನ ಮನದಲ್ಲಿ ರೋಷ ದ್ವೇಷ ತುಂಬಿ ಸಮಾಜಕ್ಕೆ ಒಂದು ರೀತಿಯ ಪಿಡುಗು ಎನ್ನಿಸುವಂತಹ ಪ್ರಜೆ ನೀಡುವುದರಲ್ಲಿ ಅಪ್ಪನ ಪಾತ್ರಧಾರಿ ಸಫಲ ಆಗುತ್ತಾರೆ. 
ಇದರ ಜೊತೆಯಲ್ಲಿ ಕ್ಷಣಿಕ ಆಸೆಗೆ ಬಲಿಯಾಗಿ ಮನೆಕೆಲಸದ ಹುಡುಗಿಯ ಜೊತೆಯಲ್ಲಿ ಅಕ್ರಮ ಸಂಬಂಧ ಇಟ್ಟುಕೊಂಡು ಒಂದು ಮಗುವಿನ ಜನನಕ್ಕೆ ಕಾರಣವಾಗುವಂಥಹ ವಿಚಿತ್ರ ಪರಿಸ್ಥಿತಿಯನ್ನು ನಿರ್ಮಾಣ ಮಾಡಿಕೊಳ್ಳುತ್ತಾನೆ. ಆ ಮನೆಗೆಲಸದ ಹುಡುಗಿ ಬೇರೆ ಮದುವೆ ಮಾಡಿಕೊಂಡರೂ, ಅಲ್ಲಿ ಸುಖ ಕಾಣದೆ ಗಂಡನನ್ನು ಕಳೆದುಕೊಂಡು, ಆ ದುಃಖದಲ್ಲಿಯೇ ತನ್ನ ಅನೈತಿಕ ಮಗುವನ್ನು ಜತನಮಾಡುವ ಪಾತ್ರ. 

ಮಗು ಒರಟು ಎಂದು ಗೊತ್ತಿದ್ದರೂ, ತಾಯಿ ಹೃದಯ ಮಿಡಿಯುತ್ತದೆ, ಬೇರೆಯವರ ಹತ್ತಿರ ಒರಟು ಒರಟಾಗಿ ಮಾತಾಡಿದರೂ ತನ್ನ ತಾಯಿಗೋಸ್ಕರ ಮಿಡಿಯುವ ಮಗು. ಇವರೆಡರ ಭಾವನಾತ್ಮಕ ತಾಕಲಾಟ ಸುಂದರವಾಗಿ ಕೆಲವು ದೃಶ್ಯಗಳಲ್ಲಿ ಭಿತ್ತರಗೊಂಡಿದೆ. 

ಅದರಲ್ಲೂ, ಜಗಳ ಮಾಡಿಕೊಂಡು ಮನೆಬಿಟ್ಟು ಹೋದ ಮಗನನ್ನು ನೆನೆದು, ಅಯ್ಯೋ ನಾ ತಪ್ಪು ಮಾಡಿದೆ, ಅವನನ್ನು ಅರ್ಥ ಮಾಡಿಕೊಳ್ಳಬೇಕಿತ್ತು ಎಂದು ಹಲಬುವ ಅಪ್ಪ, ಮತ್ತು ಅಕಾಲ ಮರಣಕ್ಕೆ ತುತ್ತಾಗಿ, ಕಡೆಯಲ್ಲಿ ತನ್ನ ಮಗನನ್ನು ನೋಡಬೇಕು ಎಂದು ಬಯಸಿ, ಮಗ ಬರುವ ಮುನ್ನ ಇಹಲೋಕ ತ್ಯಜಿಸಿದ ಮೇಲೆ, ಸುಮಾರು ಒಂದು ಮೂವತ್ತು ಸೆಕೆಂಡ್ ಏಕದಂ ಮೌನ. ತಾಯಿ ನೋಡಿದೆಯ ಮಗನೆ ನಿನ್ನ ಅಪ್ಪನನ್ನು ಎಂದಾಗ, ಮಗ ದೊಡ್ಡದಾಗಿ ಬಾಯಿ ತೆಗೆದು ಅಳುವ ಮೂಕ ದೃಶ್ಯ, ಇಡಿ ಚಿತ್ರದಲ್ಲಿ ಪುಟ್ಟಣ್ಣ ಅವರ ಕೈಚಳಕ ಕಾಣಿಸುವ ದೃಶ್ಯ ಇದು. 

ಕೆಲವೇ ಕೆಲವು ಪಾತ್ರಗಳು, ಆದರೆ ಎಲ್ಲರೂ ಅಚ್ಚುಕಟ್ಟಾಗಿ ಅಭಿನಯಿಸಿದ್ದಾರೆ. ಭಾರತಿ, ಸುಂದರಕೃಷ್ಣ ಅರಸ್, ರಾಮಕೃಷ್ಣ, ಭರತ್ ಭಾಗವತರ್, ಆಶಾಲತ, ಮಾ, ಹಿರಣ್ಣಯ್ಯ, ರಾಜಾನಂದ್, ಪದ್ಮಾವಾಸಂತಿ ಎಲ್ಲರೂ ಎಷ್ಟು ಬೇಕೋ ಅಷ್ಟು ಅಭಿನಯ ನೀಡಿದ್ದಾರೆ. 

"ಆಕಾಶದುದ್ದಾದ ಮಾಮರವು ಚಂದ" ಮನುಜನ ಇಬ್ಬಗೆ ನೀತಿಯನ್ನು ಸುಂದರ ಹೋಲಿಕೆಗಳ ಮೂಲಕ ವಿಜಯನಾರಸಿಂಹ ಬರೆದ ಹಾಡನ್ನು ಎಸ್ ಜಾನಕಿ ಹಾಡಿದ್ದಾರೆ. 

"ದೇವರ ಒಲಿಸಲು" ತಾಯಿಯ ಮಹತ್ವವನ್ನು ಬಿಂಬಿಸುವ ಹಾಡು ಎಸ್ ಪಿ ಬಾಲಸುಬ್ರಮಣ್ಯಂ ಜೀವ ತುಂಬಿದ್ದಾರೆ 

"ಕಣ್ಣಾರೆ ಕಂಡೆ ನಾ" ವಾಣಿ ಜಯರಾಂ ಅವರ ಕಂಚಿನ ಕಂಠ ಇಷ್ಟವಾಗುತ್ತದೆ. 



ಕಥಾವಸ್ತು ಆ ಕಾಲಕ್ಕೆ ಒಂದು ಚೂರು ಮುಂದಾಗಿತ್ತು ಅನ್ನಿಸುತ್ತದೆ. ಕೆಲವೊಮ್ಮೆ ಸಾಗರ ಪ್ರಶಾಂತವಾಗಿದ್ದ ಸಾಗರ ಚಂಡಮಾರುತದ ಮುನ್ಸೂಚನೆ ನೀಡುವಂತೆ, ಪುಟ್ಟಣ್ಣ ಕಣಗಾಲ್ ತಮ್ಮ ಮುಂದಿನ ಚಿತ್ರ ರತ್ನಕ್ಕೆ ಈ ಚಿತ್ರದಿಂದಲೇ ಅನಿಯಾಗುತ್ತಿದ್ದರೋ ಏನೋ ಎನ್ನಿಸಿತು ನನಗೆ. 

Sunday, October 11, 2015

ಮನುಜನ ಭಾವಗಳನ್ನು ಮಧ್ಯೆ ಕೂರಿಸಿ ತೋರಿಸುವ ಧರಣಿ ಮಂಡಲ ಮಧ್ಯದೊಳಗೆ (1983)

ಕೆಲವೊಮ್ಮೆ ನಮ್ಮ ಮನಸ್ಸು ಗಲಿಬಿಲಿಯಾಗಿದ್ದಾಗ ಅಥವಾ ಕೆಲವೊಮ್ಮೆ ನಿರ್ಮಲವಾಗಿದ್ದಾಗ ಒಳಗಿನ ಬಿಳಿಯ ಮನ ಪಟಲದಲ್ಲಿ ವರ್ಣಮಯ ದೃಶ್ಯಗಳು ಕಾಣಸಿಗುತ್ತದೆ. ಆದರೆ ಅದು ಕ್ಷಣಿಕ ಮಾತ್ರ, ಆ ಪಟಲದಲ್ಲಿ ಮೂಡುತ್ತಿದ್ದ ದೃಶ್ಯಗಳನ್ನು ಮತ್ತೆ ಮತ್ತೆ ರೂಪಿಸಿಕೊಳ್ಳಲು ಬಲು ಕಷ್ಟ.

ಅಳತೆಗೂ ಮೀರಿದ ಕೆಲವು ಭಾವನಾತ್ಮಕ ದೃಶ್ಯಗಳು ಹಾಗೆ ಬಂದು ಹೋಗುವುದು ಉಂಟು. ಅಂಥಹ ಸಹಜವಾದ, ಆದರೆ ಈ ವ್ಯಾವಹಾರಿಕ ಪ್ರಪಂಚದಲ್ಲಿ ನಾನು, ನನ್ನದು, ನನ್ನದೇ ಎನ್ನುವ ಸ್ವಾರ್ಥ ಭಾವಗಳೇ ನಮ್ಮನ್ನು ಕಪಿ ಮುಷ್ಠಿಯಲ್ಲಿ ಇರಿಸಿಕೊಂಡು, ತನ್ನದೇ ರಕ್ತ ಹಂಚಿಕೊಂಡು ಹುಟ್ಟಿದ ಮಾಂಸದ ಮುದ್ದೆಯನ್ನು ಮೂಲೆ ಗುಂಪು ಮಾಡುವ ಶಕ್ತಿ ಹೊಂದಿಬಿಡುತ್ತದೆ.

ಈ ರೀತಿಯ ಒಂದು ಕಥೆಯನ್ನು ಸಿನಿಮಾ ತೆರೆಗೆ ಒಪ್ಪುವ ರೀತಿಯಲ್ಲಿ ಅಳವಡಿಸಿಕೊಳ್ಳುವುದು ಕಷ್ಟ ಸಾಧ್ಯದ ಕೆಲಸ. ಕಥೆ, ಚಿತ್ರಕಥೆ ಬರೆದು, ನಿರೂಪನೆಯನ್ನು ತಾಯಿ ಜಗನ್ಮಾತೆಯ ಅಭಯ ಹಸ್ತದ ವಾರದಲ್ಲಿ ಮೂಡಿಸಿರುವ ಚಿತ್ರವೇ "ಧರಣಿ ಮಂಡಲ ಮಧ್ಯದೊಳಗೆ" 

ಇದೊಂದು ಪುಟ್ಟಣ್ಣ ಅವರ ಎಲ್ಲಾ ಚಿತ್ರಗಳಿಗಿಂತ ಭಿನ್ನ. ಇದುವರೆಗೂ ಅವರು ತುಳಿದಿದ್ದ ದಾರಿಯಲ್ಲಿ ತುಸು ಹೊರಳಿ ಈ ಚಿತ್ರವನ್ನು ಮೂಡಿಸಿದ್ದಾರೆ. 

ಮೊದಲ ಮೊದಲಿಗೆ ಅರೆ ಏನಿದು ಹೀಗಿದೆ ಚಿತ್ರ ಎಂದು ನನಗನ್ನಿಸಿದ್ದು ಪ್ರಾಮಾಣಿಕವಾಗಿ ನಿಜ. ಆದರೆ ನೋಡುವಾಗ ಮತ್ತು ನೋಡಿದ ಕೆಲಹೊತ್ತಿನ ಮೇಲೆ, ಕೆಸರಲ್ಲಿ ಮುಳುಗುವ ಮನುಜನಂತೆ ನಿಧಾನವಾಗಿ ಈ ಚಿತ್ರದ ಒಳ ಹೂರಣ ಅರ್ಥವಾಗುತ್ತಾ ಹೋಗುತ್ತದೆ. 
ನಾಲ್ಕು ಮುಖ್ಯ ಪಾತ್ರಗಳು, ನಾಯಕ್, ದಳವಾಯಿ, ಪಾಳೆಗಾರ, ಮತ್ತು ಪುರುಷೋತ್ತಮ.   ಸಮಾಜಕ್ಕೆ ಬೇಕಾದ ನಾಲ್ಕು ಮುಖ್ಯ ಆಧಾರ ಸ್ಥಂಭಗಳು. 

ಪುರುಷೋತ್ತಮ ಎನ್ನುವ ಪಾತ್ರ ಎಂದಿಗೂ ಸೇಡು, ದ್ವೇಷಗಳ ಬತ್ತಳಿಕೆಯೊಳಗೆ ಇಳಿಯಬಾರದು, ಆದರೆ ಈ ಸಮಾಜದಲ್ಲಿ ಸೇಡಿನ ಮನೋಭಾವ ಹೊತ್ತು, ಅಲ್ಪ ಸ್ವಲ್ಪ ಹದ್ದುಬಸ್ತಿಗೆ ಬರುತ್ತಿದ್ದ ಇತರ ಮೂರು ಆಧಾರಗಳನ್ನು ತನ್ನ ಕೈಯಾರೆ ತಾನೇ ಹಾಳು ಮಾಡಿ, ತನ್ನನ್ನು ತಾನೇ ಹಳಿದುಕೊಳ್ಳುವಂಥಹ ಸ್ಥಿತಿಗೆ ಇಳಿಯಬೇಕಾಗುತ್ತದೆ. 

ಇಡಿ ಸಮಾಜವನ್ನು ಮುನ್ನಡೆಸಬೇಕಾದ ನಾಯಕ್ ಪಾತ್ರ, ಪರಿಸ್ಥಿಯ ಆಳ ತಿಳಿಯದೆ ತೆಗೆದುಕೊಳ್ಳುವ ಆತುರದ ನಿರ್ಧಾರ, ಮತ್ತು ವ್ಯಾವಹಾರಿಕ ಜ್ಞಾನವಿಲ್ಲದೇ, ವಿವೇಚನೆ ಇಲ್ಲದೆ ತೆಗೆದುಕೊಳ್ಳುವ ಕೆಲವು ತೀರ್ಮಾನಗಳು ತನ್ನನ್ನೇ ನಂಬಿಕೊಂಡು ನಿಲ್ಲುವ ತನ್ನ ಜನರಿಗೆ ಬರಿ ಬೇಡದ, ನಡೆಯದ ಆಶ್ವಾಸನೆ ಕೊಡುವಂತಹ ಪಾತ್ರವಾಗಿ ಬಿಡುತ್ತದೆ. 

ನಾಯಕ್ ತೆಗೆದುಕೊಳ್ಳುವ ನಿರ್ಧಾರವನ್ನು, ತೀರ್ಮಾನಗಳನ್ನು, ಸಲಹೆಗಳನ್ನು ಆಚರಣೆಗೆ ತರಬೇಕಾದ ಪಾಳೇಗಾರ್, ತನ್ನ ಆಸೆ ಆಮಿಷಗಳಿಗೆ, ತನ್ನ ಸ್ವಂತ ವಿಚಾರಗಳಿಗೆ, ಸೋತು, ಸಮಾಜಕ್ಕೆ ಆಘಾತ ಮಾಡುವ ಈ ಪಾತ್ರ ಕಡೆಗೆ ಕಾನೂನನ್ನು ಕೈಗೆ ತೆಗೆದುಕೊಂಡು ತಾನೂ ಬಾಳದೆ, ತನ್ನ ನಂಬಿದವರನ್ನು ಬಾಳಿಸದೆ, ಸಮಾಜಕ್ಕೆ ದೊಡ್ಡ ಆಘಾತ ನೀಡುವ ಪಾತ್ರವಾಗಿಬಿಡುತ್ತದೆ. 

ನಾಯಕ್ ಮತ್ತು ಪಾಳೇಗಾರ್ ಇಬ್ಬರಿಗೂ ಹೆಗಲು ಕೊಟ್ಟು ಸಮಾಜಕ್ಕೆ ರಕ್ಷಣೆ ನೀಡಬೇಕಾದ ದಳವಾಯಿ, ತಪ್ಪು ನಿರ್ಧಾರಗಳಿಂದ, ತನ್ನ ತೃಷೆಯನ್ನು ತಣಿಸಿಕೊಳ್ಳಲು ಅಮಾಯಕ ಪ್ರಜೆಯ ಮೇಲೆ ದಾಳಿ ಮಾಡಿ, ಕಡೆಗೆ ರಕ್ಷಣೆ ನೀಡುತ್ತೇನೆ ಎನ್ನುವ ಭರವಸೆ ನೀಡುತ್ತಾ, ತನ್ನ  ತಪ್ಪಿನ ಬಗ್ಗೆ ಪಶ್ಚಾತಾಪ ಪಟ್ಟು, ಅದನ್ನು ಸರಿಪಡಿಸಿಕೊಂಡು,  ಕೈ ಕೈ ಹಿಡಿದು ಸಾಗುವಾಗಲೇ, ನಾಯಕ್ ಮತ್ತು ಪಾಳೇಗಾರ್ ಅವರ ತಪ್ಪು ನಡೆಗಳಿಂದ ತನ್ನ ಪ್ರಾಣವನ್ನು ನೀಗಿ, ಕಡೆಗೆ ತಾನು ನೋಡಲಾಗದ ಉತ್ತಮ ಸಮಾಜವನ್ನು ತನ್ನ ಪ್ರಜೆ ನೋಡಲಿ ಎನ್ನುವ ಆಶಾವಾದದೊಡನೆ ಪ್ರಾಣ ನೀಗುತ್ತದೆ ಆ ಪಾತ್ರ. 

ಹೀಗೆ ಸಮಾಜದ ಹುಳುಕುಗಳನ್ನು ಎತ್ತಿ ತೋರಿಸಿ, ಅದನ್ನು ಸರಿಪಡಿಸಬೇಕಾದ ಕಂಬಗಳೇ ತಮ್ಮದೇ ಆದ ತಪ್ಪು ನಡೆಗಳಿಂದ ಎಡವಿ, ಮತ್ತೆ ಅದನ್ನು ಸರಿಪಡಿಸಿಕೊಳ್ಳುವ ಹಾದಿಯಲ್ಲಿದ್ದಾಗ ಮತ್ತೆ ಅದೇ ವಿಚಿತ್ರ ನಿರ್ಧಾರಗಳನ್ನು ತೆಗೆದುಕೊಂಡು ಸಮಾಜದ ಆರೋಗ್ಯವನ್ನು ಸುಧಾರಿಸದೆ ಹಪಹಪಿಗೊಳ್ಳುವ ಹಂತಕ್ಕೆ ಚಿತ್ರ ನಿಲ್ಲುತ್ತದೆ ಮತ್ತು ಇಂದಿನ ಸಮಾಜದ ಗುಣಮಟ್ಟವನ್ನು ತೋರಿಸುತ್ತದೆ. 

ಅಚಾರವೇ ಬೇರೆ ವಿಚಾರವೇ ಬೇರೆ... ಆಚಾರ ವಿಚಾರವಾಗಿ ಬದಲಾಗಬೇಕಾದರೆ ಅಥವಾ ವಿಚಾರ ಆಚಾರವಾಗಿ ಬದಲಾಗಬೇಕಾದರೆ ಬರಿ ಅಕ್ಷರಗಳ (ಅ ಮತ್ತು ವಿ) ಬದಲಾವಣೆ ಆದರೆ ಮಾತ್ರ ಸಾಲದು ಬದಲಿಗೆ ಎಲ್ಲರೂ ಯೋಚಿಸುವ ರೀತಿಯು ಬದಲಾಗಬೇಕು. ಅದೇ ಈ ಚಿತ್ರದ ಉದ್ದೇಶ ಮತ್ತು ಅಡಗಿರುವ ಸಂದೇಶ. 

ಶ್ರೀನಾಥ್, ಜೈಜಗದೀಶ್, ಚಂದ್ರಶೇಖರ್  ತಮಗೆ ವಹಿಸಿದ ಪಾತ್ರಗಳನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಪುಂಡು ಹುಡುಗರಾಗಿ, ನಂತರ ಬದಲಾಗುವ ಹುಡುಗರಾಗಿ, ನಂತರ ಗೊಂದಲಕ್ಕೆ ಒಳಗಾಗುವ ಯುವ ಪೀಳಿಗೆಯನ್ನು ಪ್ರತಿನಿಧಿಸುವ ಪಾತ್ರಗಳಿಗೆ ಜೀವ ತುಂಬಿದ್ದಾರೆ. ಅದಕ್ಕೆ ಬೇಕಾದ ಅಭಿನಯ, ಸಂಭಾಷಣೆ ಹೇಳುವ ಧಾಟಿ ಎಲ್ಲವೂ ತಮ್ಮ ಗುರುಗಳ ಮಾರ್ಗದರ್ಶನದಲ್ಲಿ ಸೊಗಸಾಗಿ ಅರಳಿದೆ.

ಟಿ ಎನ್ ಸೀತಾರಾಂ ಕೋಪತಾಪದ, ಮೈ ಪರಚಿಕೊಳ್ಳುವಂಥಹ ಸಂಧಿಗ್ಧ ಪಾತ್ರದಲ್ಲಿ ಮೊದಲು ನಂತರ ಸೇಡು ತೀರಿಸಿಕೊಳ್ಳುವ ಪಾತ್ರದಲ್ಲಿ ನೈಜತೆಯಿಂದ ಅಭಿನಯಿಸಿದ್ದಾರೆ. ಇವರ ಪಾತ್ರ ಚಿತ್ರಕ್ಕೆ ಇನ್ನೊಂದು ತಿರುವನ್ನು ಕೊಡುತ್ತದೆ. 

ಪೋಷಕ ಪಾತ್ರದಲ್ಲಿ ಬರುವ ಪದ್ಮಾವಾಸಂತಿ, ರೇಖಾ ರಾವ್ ಗಮನ ಸೆಳೆಯುತ್ತಾರೆ. ಚಿತ್ರಕ್ಕೆ ಒಂದು ದಿಕ್ಕು ಕೊಡುವ ಪಾತ್ರದಲ್ಲಿ ವಿಜಯಲಕ್ಷ್ಮಿ ಸಿಂಗ್ ತಮ್ಮ ಚೆಲುವಿಂದ, ಚಿನಕುರುಳಿ ಅಭಿನಯದಿಂದ ಚುಟುಕಾದ ಪಾತ್ರದಲ್ಲಿ ಮಿಂಚುತ್ತಾರೆ.  

ಈ ಚಿತ್ರದಲ್ಲಿ ಹಾಡುಗಳು ಮತ್ತೊಮ್ಮೆ ಮಿಂಚುತ್ತದೆ. 

ಸಿದ್ದಲಿಂಗಯ್ಯ ಅವರ ಸಾಹಿತ್ಯದ ಮೂರು ಹಾಡುಗಳು 
ಅ) "ಕಾಸನು ಬೀಸಿ ಒಲವಿನ ಬೆಲೆಯನು" ವಾಣಿಜಯರಾಂ ಅವರ ಸುಮಧುರ ಕಂಠದಲ್ಲಿ ಉತ್ತಮವಾಗಿ ಚಿತ್ರೀಕರಿಸಿದ್ದಾರೆ. 
ಆ) "ಗೆಳತಿ ಓ ಗೆಳತಿ" ಪ್ರಣಯಗೀತೆಯಾಗಿ ಎಸ್ ಪಿ ಬಾಲಸುಬ್ರಮಣ್ಯಂ ಗಾಯನದಲ್ಲಿ ಸೊಗಸಾಗಿದೆ 
ಇ) "ಕಲಿಗಾಲವಯ್ಯ ಕಲಿಗಾಲ" ಎಂದಿನ ಇಂದಿನ ಮುಂದಿನ ಪರಿಸ್ಥಿತಿಯನ್ನು ಹೇಳುವ ಗೀತೆಯಾಗಿ ಎಸ್ ಪಿ ಬಾಲಸುಬ್ರಮಣ್ಯಂ ಚಿತ್ರಿಕೃತವಾಗಿದೆ. 

ತನ್ನ ನೆಚ್ಚಿನ ಗೆಳೆಯ ವಿಜಯನಾರಸಿಂಹ ಅವರಿಂದ ಮೂಡಿಬಂದ "ಉಯ್ಯಾಲೆ ಆಡೋಣ ಬನ್ನಿರೋ" ಜಯಚಂದ್ರನ್ ಮತ್ತು ವಾಣಿ ಜಯರಾಂ ಅವರ ಉತ್ತಮ ಯುಗಳ ಗೀತೆಯಾಗಿದೆ. ಇಡಿ ಹಾಡನ್ನು ಉಯ್ಯಾಲೆಗಳ ಮಧ್ಯೆದಲ್ಲಿ ಚಿತ್ರಿಕರಿಸಿರುವುದು ವಿಶೇಷ. 

ಇಡಿ ಚಿತ್ರಕ್ಕೆ ಸಂಗೀತ ಮೆರುಗು ನೀಡಿರುವ ವಿಜಯಭಾಸ್ಕರ್, ಹಿನ್ನೆಲೆ ಸಂಗೀತದಲ್ಲಿ ಗಮನ ಸೆಳೆಯುತ್ತಾರೆ. ಆಣೆಕಟ್ಟು ಕಟ್ಟುವ ಪ್ರದೇಶವನ್ನು ತೋರಿಸುವಾಗೆಲ್ಲ ಬರುವ ಸಂಗೀತ ಅತ್ಯುತ್ತಮ. ಒಂದು ರೀತಿಯ ಆಶಾಭಾವವನ್ನು ಹೊತ್ತು ತರುತ್ತದೆ. 

ಬಿ ಎಸ್ ಬಸವರಾಜ್ ಭಾವುಕ ಸನ್ನಿವೇಶಗಳ ಛಾಯಾಗ್ರಹಣ ಮಾಡುತ್ತಲೇ ನಿಧಾನವಾಗಿ ನಮ್ಮ ಮನದೊಳಗೆ ಹೊಕ್ಕು ಸಾಗುವ ಸೂರ್ಯಾಸ್ತ ಮತ್ತು ಸೂರ್ಯೋದಯದ ದೃಶ್ಯಗಳು, ಅಣೆಕಟ್ಟಿನ ಆಯಾತ ಪ್ರದೇಶವನ್ನು ತೋರಿಸುವ ರೀತಿ ಸೂಪರ್ ಸೂಪರ್. 

ಚಿತ್ರದ ಆರಂಭ ಪುಟ್ಟಣ್ಣ ಅವರ ಎಲ್ಲಾ ಚಿತ್ರಗಳ ವಿಶೇಷ. ಭೂಮಿ ತಿರುಗುತ್ತದೆ ಅದರ ಜೊತೆಯಲ್ಲಿಯೇ ಮನುಜ ಯೋಚಿಸುವ ಲಹರಿಯೂ ಸಹ ಎನ್ನುವ ಭಾವ ಹೊತ್ತು ತರುವ ರೀತಿಯಲ್ಲಿ ಚಿತ್ರದ ಹೆಸರು, ತಾರಾಗಣ, ತಾಂತ್ರಿಕವರ್ಗ ಎಲ್ಲವೂ ಒಂದೇ ಚೌಕಟ್ಟಿನೊಳಗೆ ಸಾಗುತ್ತಾ ಹೋಗುತ್ತದೆ. 

ಇಡಿ ಚಿತ್ರ ಒಂದು ಗುಟುಕಿಗೆ ಒಳಗೆ ಹೋದರೂ, ಅದರ ಪರಿಣಾಮ ನಿಧಾನವಾಗಿ ಮನದೊಳಗೆ ಇಳಿಯುತ್ತಾ ಹೋಗುತ್ತದೆ. 

ಒಂದು ಪೂರ್ತಿ ವಿಭಿನ್ನ ಎನ್ನಿಸುವ ಚಿತ್ರ ನೀಡಿರುವ ಪುಟ್ಟಣ್ಣ ಕಣಗಾಲ್ ಅವರು ಒಂದು ದೃಶ್ಯದಲ್ಲಿ ಬಂದು ಹೋಗುವುದು ವಿಶೇಷ. 

ಒಂದು ಮನದಾಳಕ್ಕೆ ಇಳಿಯುವ ಚಿತ್ರವನ್ನು ನೋಡಿದ,  ಅನುಭವಿಸಿದ, ಮತ್ತು ಯೋಚನಾಲಹರಿಗೆ ಕೆಲಸ ತಂದು ಕೊಟ್ಟ ತೃಪ್ತಿ ಈ ಚಿತ್ರ ನೋಡಿದ ಮೇಲೆ ನನಗೆ ದಕ್ಕಿತು. 


Saturday, October 3, 2015

ಮನದ ಸರೋವರವನ್ನು ಕೆದಕುವ ಮಾನಸ ಸರೋವರ (1982)

ಈ ಸಿನಿಮಾ ತುಂಬಾ ಕಾಡಿತ್ತು ಆ ಕಾಲದಲ್ಲಿಯೇ. ಮೊದಲ ಬಾರಿಗೆ ಈ ಚಿತ್ರವನ್ನು ದೂರದರ್ಶನದಲ್ಲಿ ನೋಡಿದಾಗ ನನಗೆ ಸುಮಾರು ಹದಿನೈದು ವರ್ಷಗಳು ಇರಬಹುದು. 

ಆ ವಯಸ್ಸು ಒಂದು ರೀತಿಯ ಬದಲಾವಣೆಯ ಪರ್ವವಾಗಿರುತ್ತದೆ. ಮೊದಲಿಂದಲೂ ಸಿನಿಮಾ ನೋಡುವ ಮತ್ತು ಅದರ ಒಳಗೆ ಕೂತು ನೋಡುವ ಒಂದು ವಿಚಿತ್ರ ರೋಗವಿದ್ದದರಿಂದ ಬಹುಶಃ ಈ ಚಿತ್ರ ಇನ್ನಷ್ಟು ಕಾಡಿತ್ತು ಎನ್ನಿಸುತ್ತದೆ.  

ಅದಾದ ಮೇಲೆ ಹಲವಾರು ಬಾರಿ ಈ ಚಿತ್ರವನ್ನು ನೋಡಿದ್ದೇನೆ. ಪ್ರತಿಬಾರಿಯೂ ನನಗೆ ಮೊಟ್ಟಮೊದಲು ನೋಡಿದ ಅನುಭವ ಹೇಗೆ ಇರುತ್ತದೆಯೋ ಅದೇ ಅನುಭವ. ಒಂದೂ ಚೂರು ಬದಲಾವಣೆ ಇಲ್ಲ. 
ಹಲವಾರು ಚಿತ್ರಗಳು ಪ್ರತಿ ಬಾರಿ ನೋಡಿದಾಗಲೂ ಹಲವಾರು ರೀತಿಯಲ್ಲಿ ಕೈಗೆ ಎಟುಕುತ್ತದೆ, ಆದರೆ ಈ ಚಿತ್ರ ಪ್ರತಿ ಸಾರಿ ನೋಡಿದ ಮೇಲೆ ಇನ್ನಷ್ಟು ಆಳಕ್ಕೆ ಇಳಿಯುತ್ತದೆ ಮತ್ತು ಅದೇ ಮೊದಲ ಅನುಭವವನ್ನು ಕಣ್ಣ ಮುಂದೆ ತಂದಿಡುತ್ತದೆ. 

ಚಿತ್ರದ ಆರಂಭ ನನಗೆ ಇನ್ನೂ ಕಾಡುತ್ತದೆ.  ಮನಸ್ಸಿನ ಬಗ್ಗೆ ಒಂದೆರಡು ವಾಕ್ಯಗಳು ಮನಸ್ಸಿಗೆ ತಾಕಿದರೆ, ಹೂವಿನ ಜೊತೆಯಲ್ಲಿ ಹೆಸರನ್ನು ತೋರಿಸುತ್ತಾ, ಪ್ರತಿ ಬಾರಿಯೂ ಅಲೆಗಳು ಬಂದು ಆ ಅಕ್ಷರಗಳನ್ನು ಅಳಿಸಿಹಾಕುವಂತಹದು, ನಮ್ಮ ಜೀವನದಲ್ಲಿ ಎಷ್ಟೋ ಮಂದಿ ಬರುತ್ತಾರೆ, ನೆನಪು ಉಳಿಸುತ್ತಾರೆ, ಅಳಿಸುತ್ತಾರೆ, ಆದರೆ ಕಾಲ ಮುಂದೆ ಸಾಗುತ್ತಲೇ ಇರುತ್ತವೆ, ಅಲೆಗಳು ಬರುತ್ತಲೇ ಇರುತ್ತವೆ ಎಂಬ ಸೂಕ್ಷ್ಮ ಸಂದೇಶ ಹೊತ್ತು ತರುತ್ತದೆ. 

ಹುಣ್ಣಿಮೆಯ ಚಂದ್ರ, ಆವ ಚೆಲ್ಲುವ ಬೆಳದಿಂಗಳು, ಪ್ರೀತಿ ಪ್ರೇಮ ಪ್ರಣಯ ಇವುಗಳ ಉಗಮಸ್ಥಾನ, ಚಂದ್ರನ ಕಿರಣಗಳು ಮನಸ್ಸಿನ ಮೇಲೆ ಬಲು ಪ್ರಭಾವ ಬೀರುತ್ತದೆ. ಕಾವ್ಯಮಯವಾದ ಮನಸ್ಸಿನ  ನಾಯಕ ಆ ಬೆಳದಿಂಗಳ ಚಂದ್ರನ ಬೆಳಕಲ್ಲಿ ಕೂತು, ತೂಗಾಡುವ ಮನಸ್ಸನ್ನು ಪ್ರತಿಬಿಂಬಿಸುವ, ಉಯ್ಯಾಲೆಯಲ್ಲಿ ಜೀಕುತ್ತಾ ಕೂತಿದ್ದಾಗ ಏನೋ ಒಂದು ಅದ್ಭುತ ವಿಷಯ ಹೊಳೆಯುತ್ತದೆ. 

ಅದನ್ನು ಅಷ್ಟೇ ಪ್ರೀತಿಯಿಂದ ತನ್ನ ಮಡದಿಗೆ ಹೇಳಬಂದಾಗ ಆಕೆ ಭಾವನಾತ್ಮಕವಾಗಿ ಸ್ಪಂದಿಸದೇ, ವ್ಯಾವಹಾರಿಕ ಜಗತ್ತಿನ ಸೂತ್ರದಲ್ಲಿ ಬಂಧಿಯಾಗಿ, ತನಗೆ ಲಾಭ ತರದ ಈ ಕಾವ್ಯಮಯ ಭಾಷೆ ಅನಗತ್ಯ ಎನ್ನುವ ಮಾತುಗಳನ್ನು ಹೇಳುತ್ತಾಳೆ. 

ಅಲ್ಲಿಂದ ಶುರು ನಾಯಕನ ಮನಸ್ಸು ಅವನ ಜೊತೆ ಮಾತಾಡಲು ಅನುವಾಗುತ್ತದೆ. ಅದ್ಭುತ ದೃಶ್ಯ ಕಲ್ಪನೆ. ನಮ್ಮ ಮನಸ್ಸು ನಮಗೆ ಮಾರ್ಗದರ್ಶಿ ಎನ್ನುವ ಮಾತು ಎಷ್ಟು ನಿಜ. 

ಮನಸ್ಸು ಒಂದು ಕಡೆಯಲ್ಲಿ ಸಹಾನುಭೂತಿ ತೋರಿದರೆ, ತನ್ನ ಮನದಲ್ಲಿ ಕೂತ ಮಡದಿಯಿಂದ ತಿರಸ್ಕಾರ ಸಾಕು ಎನ್ನಿಸಿ ಮನೆ ಬಿಟ್ಟು ಹೊರಡುತ್ತಾನೆ. ಆಗ ಇನ್ನೊಂದು ಅದ್ಭುತ ಜಗತ್ತು ನಾಯಕನ ಮನಸ್ಸಿಗೆ ಸಿಗುತ್ತದೆ. 

ಜಿ ಎಸ್ ಶಿವರುದ್ರಪ್ಪ ಅವರ ಅದ್ಭುತ ಕವಿತೆ "ವೇದಾಂತಿ ಹೇಳಿದನು" ಪಿ ಬಿ ಶ್ರೀನಿವಾಸ್ ಅವರ ಸಿರಿಕಂಠದಲ್ಲಿ ಅಷ್ಟೇ ಅದ್ಭುತವಾಗಿ ಮೂಡಿ ಬಂದಿದೆ. ಕಾಡಿನಲ್ಲಿ ಕಾರಿನಲ್ಲಿ ಹೋಗುತ್ತಾ ಜೋರಾಗಿ ಈ ಹಾಡನ್ನು ಕೇಳಿದರೆ ಸಿಗುವ ಆನಂದ ಹೇಳಲಿಕ್ಕೆ ಆಗೋಲ್ಲ (ನಾ ಹಲವಾರು ಬಾರಿ ಒಬ್ಬನೇ ಪಯಣ ಮಾಡುವಾಗ.. ಈ ರೀತಿಯ ಹುಚ್ಚು ಸಾಹಸಕ್ಕೆ ಕೈ ಹಾಕುವುದು ಉಂಟು) 
ಈ ಹಾಡಿನಲ್ಲಿರುವ ಸತ್ವವನ್ನು ವಿಜಯಭಾಸ್ಕರ್ ಸಂಗೀತದಲ್ಲಿ ಅದ್ದಿ ಅದ್ದಿ ತೆಗೆದಿದ್ದಾರೆ. ಎಷ್ಟು ಬಾರಿ ಕೇಳಿದರೂ ಬೋರ್ ಅನ್ನಿಸಿದ ಅನೇಕ ಹಾಡುಗಳಲ್ಲಿ ಇದು ಒಂದು. ಈ ಹಾಡನ್ನು ಚಿತ್ರೀಕರಿಸಿದ ರೀತಿಯೂ ಸುಂದರ. 

ಒಂದು ರಕ್ಷಾ ಬೇಲಿ ಇರುವ ಮನೆಯಿಂದ ಹೊರಡುವ ನಾಯಕನ ಮನೆಯ ಎದುರು ದಾರಿಗಳು ಕವಲಾಗಿ ಎರಡಾಗುತ್ತವೆ. ನಾಯಕನ ಬಾಳಿನ ಪಥದಲ್ಲೂ ಇಬ್ಬಗೆಯ ಹಾದಿ ಎದುರಿಗೆ ಇದೆ ಎನ್ನುವ ಸೂಚ್ಯ ಅದು. 
ಅಲ್ಲಿಂದ ಹೊರಡುವ ಅವನ ಕಾರು, ತಂಪಾದ ಹಸಿರು ಕಾಡಿನ ಮಧ್ಯೆ ಸಾಗುವುದು, ಹಿನ್ನೆಲೆಯಲ್ಲಿ ಹಾಡು ಬರುವುದು ವಾಹ್ ಎನ್ನಿಸುತ್ತದೆ. ಎಂಥಹ ಸಮಸ್ಯೆಗೂ ಪ್ರಕೃತಿಯೇ ಅದ್ಭುತ ವೈದ್ಯ ಎನ್ನುವುದರ ಸುಂದರ ನಿರೂಪಣೆಯ ಭಾವ ಈ ಹಾಡಿನಲ್ಲಿ ಇದೆ. ಬೇಲಿಯಿರುವ ಮನೆಯಿಂದ, ವಿಹಂಗಮ ಪ್ರಕೃತಿಯ ಮಧ್ಯೆ ಯಾವುದೇ ಬಂಧನವಿರದ ಮುಕ್ತವಾಗಿರುವ ಮನೆಗೆ ಬರುತ್ತಾನೆ. ಈ ಹಾಡು ನೋಡಬೇಕು ಕೇಳಬೇಕು ಆಗಲೇ ಅದರ ಸತ್ವ ಅರಿವಾಗುವುದು. 

ಮಿತ್ರವೃಂದ ಲಾಂಛನದಲ್ಲಿ ತಯಾರಾದ ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ನಿರ್ವಹಣೆ ಮತ್ತು ನಿರೂಪಣೆ ಪುಟ್ಟಣ್ಣ ಕಣಗಾಲ್ ಅವರದ್ದು. ತನ್ನ ಸಾಧನೆ ಏನೂ ಅಲ್ಲ, ಅದಕ್ಕೆಲ್ಲ ಕಾರಣ ಜಗನ್ಮಾತೆ ಎನ್ನುವ ತತ್ವವನ್ನು ದಿಗ್ದರ್ಶನ - ಜಗನ್ಮಾತೆ ಎಂದು ತೋರುವ ಮೂಲಕ, ತಾನು ಯಶಸ್ಸಿನ ಶಿಖರದಲ್ಲಿದ್ದರೂ ಅದಕ್ಕೆ ಕಾರಣ ಕಾಣದ ಆ ಮಹಾನ್ ಶಕ್ತಿ ಎಂಬ ಅರಿವು ಮೂಡಿಸುತ್ತಾರೆ. 

ಮೂರು ಮಂದಿ ಮಿತ್ರರ ಜೊತೆಗೂಡಿ (ವರ್ಗಿಸ್, ಕಮಲಾಕರ್, ಗೀತ ಶ್ರೀನಾಥ್) ನಿರ್ಮಿಸಿದ ಚಿತ್ರವಿದು. ಚುರುಕಾದ ಸಂಭಾಷಣೆ ಪುಟ್ಟಣ್ಣ ಅವರ ಎಲ್ಲಾ ಚಿತ್ರಗಳ ಆಸ್ತಿ, ಈ ಚಿತ್ರದಲ್ಲಿ ಆ ಹೊಣೆ ಹೊತ್ತವರು ಟಿ ಎನ್ ಸೀತಾರಾಮ್. ಪುಟ್ಟಣ್ಣ ಅವರ ಅನೇಕ ಚಿತ್ರಗಳಿಗೆ ಛಾಯಾಗ್ರಾಹಕರಾಗಿದ್ದ ಬಿ ಎಸ್ ಬಸವರಾಜ್ ಮತ್ತೊಮ್ಮೆ ಪುಟ್ಟಣ್ಣ ಅವರ ಭಾವಗಳಿಗೆ ತಕ್ಕಂತೆ ದೃಶ್ಯಗಳನ್ನು ಚಿತ್ರೀಕರಿಸಲು ಜೊತೆಯಾಗಿದ್ದರು.  

ಒಂದು ಅಡಿಗೆ ಸಿದ್ಧಮಾಡುವಾಗ, ಅಥವಾ ಯಾವುದೇ ಕೆಲಸ ಮಾಡುವಾಗ, ಅದರ ಬಗ್ಗೆ ಪುಟ್ಟ ಪುಟ್ಟ ವಿವರಗಳು, ವಿಧಾನಗಳು ಇವೆಲ್ಲಾ ಸರಿಯಾಗಿ ಸಿಕ್ಕಿ, ಅದನ್ನು ಹೇಳಿಕೊಡುವ ಒಬ್ಬರು ಜೊತೆಗಿದ್ದರೆ ಪವಾಡ ಸೃಷ್ಟಿಸಬಹುದು ಎನ್ನುತ್ತದೆ ಮಾತು. ಅದನ್ನು ಈ ಚಿತ್ರದಲ್ಲಿ ನೋಡಬಹುದು. ಪ್ರತಿಯೊಬ್ಬ ಕಲಾವಿದರು ಪಾತ್ರಗಳಿಗೆ ಎಷ್ಟು ಬೇಕು ಅಷ್ಟೇ ಅಭಿನಯ ನೀಡಿದ್ದಾರೆ ಅಥವಾ ಪಾತ್ರ ಬೇಡುವಷ್ಟು ಅಭಿನಯ ನೀಡಿದ್ದಾರೆ. 

ಅಡಿಗೆ ಕೆಲಸಮಾಡಿಕೊಂಡು ಮನೆ ನೋಡಿಕೊಳ್ಳುವ ಪಾಂಡು ಅಂಕಲ್ ಪಾತ್ರ, ನಾಯಕನ ತೋಟವನ್ನು ತಮ್ಮ ತಂಗಿಯನ್ನು ಮುಂದೆ ಇಟ್ಟುಕೊಂಡು ಕಬಳಿಸಲು ಹೊಂಚು ಹೂಡುವ ಲಂಬಾಣಿ ಹುಡುಗರ ಪಾತ್ರ, ಲಂಬಾಣಿ ಹುಡುಗಿಯಾಗಿ ಅಭಿನಯಿಸಿರುವ ವೈಶಾಲಿ ಕಾಸರವಳ್ಳಿ, ನಾಯಕಿಯ ತಂದೆಯಾಗಿ ಬರುವ ಜಿ ವಿ ಶಿವಾನಂದ್.. ಹೀಗೆ ಎಲ್ಲರಲ್ಲಿಯೂ ತಮಗೆ ಬೇಕಾದಷ್ಟೇ ಅಭಿನಯ ಪಡೆಯುವಲ್ಲಿ ಯಶಸ್ವೀ ಆಗಿದ್ದಾರೆ ಪುಟ್ಟಣ್ಣ ಕಣಗಾಲ್. 

"ಹಾಡು ಹಳೆಯದಾದರೇನು" ಮತ್ತೊಮ್ಮೆ ಜಿ ಎಸ್ ಶಿವರುದ್ರಪ್ಪ ಅವರ ಕವಿತೆಯನ್ನು ಸಂಗೀತದಲ್ಲಿ ಅಳವಡಿಸಿರುವುದು ಇಷ್ಟವಾಗುತ್ತದೆ. ವಾಣಿ ಜಯರಾಂ ಭಾವ ತುಂಬಿ ಹಾಡಿದ್ದಾರೆ, ಈ ಹಾಡನ್ನು ಚಿತ್ರಿಸಿರುವ ರೀತಿ ಇಷ್ಟವಾಗುತ್ತದೆ. ಹಸಿರಿನ ಮಧ್ಯೆ ಕಂಗೊಳಿಸುವ ಹಿತ ಮಿತ ಬೆಳಕಿನಲ್ಲಿ ಸೂಪರ್ ಎನ್ನಿಸುತ್ತದೆ. 

ನಾಯಕಿಗೆ ಚಿಕಿತ್ಸೆ ನೀಡುವಲ್ಲಿ ಬೇಕಾದ ತಾಳ್ಮೆ, ಸಂಯಮ, ಹಿತ ಮಿತ ನುಡಿಗಳು, ಮಗುವನ್ನು ಪಾಲಿಸುವ ಅಮ್ಮನಂತಹ ಪಾತ್ರದಲ್ಲಿ, ಕೆಲವೊಮ್ಮೆ ಮುಗ್ಧ ಮಗುವೆ ಆಗುವ ಪಾತ್ರದಲ್ಲಿ ಶ್ರೀನಾಥ್ ಸ್ಮರಣೀಯ ಅಭಿನಯ ನೀಡಿದ್ದಾರೆ. ಮಾನಸಿಕ ರೋಗತಜ್ಞನ ಪಾತ್ರದಲ್ಲಿ ಅವರ ಅಭಿನಯ ಅದ್ಭುತ. ಆ ಪಾತ್ರಕ್ಕೆ ಬೇಕಾದ ಆಂಗೀಕ ಅಭಿನಯ, ವೇಷ ಭೂಷಣ, ತಾನು ಸರಿ ಎನ್ನುತ್ತಾ ಮಾತಾಡುವ ಶೈಲಿ ಬಹುಕಾಲ ನೆನಪಲ್ಲಿ ಉಳಿಯುತ್ತದೆ. ನಿರ್ದೇಶಕರ ಅಣತಿಯಂತೆ ನಟಿಸಿರುವ ಈ ಪಾತ್ರ ಅದ್ಭುತವಾಗಿ ಮೂಡಿ ಬಂದಿದೆ. 

ಕುಂಬಾರ ಒಂದು ಮಣ್ಣಿನ ಮುದ್ದೆಯನ್ನು ತಿರುಗುವ ಚಕ್ರದಮೇಲೆ ಹಾಕಿ, ಆ ಮಣ್ಣಿಗೆ ಸುಂದರ ರೂಪವನ್ನು ಕೊಡುವ ಹಾಗೆ ಪದ್ಮಾವಾಸಂತಿ ಅವರಿಂದ ಅಭಿನಯ ಕಲೆಯನ್ನು ಅನಾವರಣಗೊಳಿಸಿರುವುದು ಪುಟ್ಟಣ್ಣ ಅವರ ತಾಕತ್. ಬಹುಶಃ ಪದ್ಮಾವಾಸಂತಿ ಈ ಚಿತ್ರದಲ್ಲಿ ಅಭಿನಯಿಸಿರುವಂತೆ ಇನ್ಯಾವ ಚಿತ್ರಗಳಲ್ಲೂ ಅಭಿನಯಿಸಲಿಕ್ಕೆ ಅವಕಾಶ ಸಿಗಲಿಲ್ಲ ಅಂದರೆ ತಪ್ಪಿಲ್ಲ ಎನುವ ಅಭಿಪ್ರಾಯ ನನ್ನದು. 

"ಮಾನಸ ಸರೋವರ" ಹಾಡು ಎಸ್ ಪಿ ಬಾಲಸುಬ್ರಮಣ್ಯಂ ಮತ್ತು ವಾಣಿ ಜಯರಾಂ ಅವರ ಧ್ವನಿಯಲ್ಲಿ ಅತ್ಯುತ್ತಮವಾಗಿ ಮೂಡಿ ಬಂದಿದೆ. ಸುಂದರ ಪರಿಸರ, ಈ ಹಾಡು ಶುರುವಾಗುವ ಮುಂಚೆ ಬರುವ ವೇದ ಮಂತ್ರಗಳು ಈ ಹಾಡನ್ನು ನೋಡುವಾಗ ಒಂದು ಭಕ್ತಿ ಭಾವದ ಜೊತೆಯಲ್ಲಿ ಒಂದು ಮಧುರ ಭಾವ ನೀಡುತ್ತದೆ. 

"ಚಂದ ಚಂದ"  ಹಾಡು, ಅದರ ಆರಂಭಿಕ ಸಂಗೀತ ಹುಚ್ಚು ಹಿಡಿಸುತ್ತದೆ. ಜಯಚಂದ್ರನ್ "ಚಂದ ಚಂದಾ" ಎಂದು ಶುರು ಮಾಡುವ ರೀತಿ ವಾಹ್. ಸಾಹಿತ್ಯ ಎಂ ಎನ್ ವ್ಯಾಸರಾವ್ ಅವರದ್ದು, ಈ ಹಾಡು ಇಷ್ಟವಾಗಲು ಕಾರಣ, ಸರಳ ಸಂಗೀತ, ರಾಮಕೃಷ್ಣ ಅವರ ಹುಡುಗು ಹುಡುಗು ನೃತ್ಯ, ಸುಂದರ ಹೊರಾಂಗಣ. 

ಈ ಚಿತ್ರದ ಆರಂಭದಿಂದ ಈ ಹಾಡಿನ ತನಕ ಬಿರು ಬಿಸಿಲ ನಾಡು ಎಂದೇ ಖ್ಯಾತವಾದ ಬಳ್ಳಾರಿಯಲ್ಲಿ ಚಿತ್ರಿಕರಿಸಿದ್ದರೂ, ಆ ಬಿಸಿಲಿನ ತಾಪ ಎಲ್ಲೂ ಕಾಣದ ರೀತಿಯಲ್ಲಿ ಸುಂದರ ಹಸಿರಿನಲ್ಲಿ ಆಹ್ಲಾದಕರ ರೀತಿಯಲ್ಲಿ ಈ ದೃಶ್ಯದ ತನಕ ಚಿತ್ರೀಕರಿಸಿದ್ದಾರೆ. ಈ ಹಾಡು ಬರುವ ಹೊತ್ತಿಗೆ ನಾಯಕನ ಹೃದಯಕ್ಕೆ ಘಾಸಿಯಾಗಿರುತ್ತದೆ. ಮನಸ್ಸಿನ ಹಸಿರಿನ ಕಾಡು ಬೆಂಗಾಡಾಗಳು ಸಿದ್ಧವಾಗಿರುತ್ತದೆ. ಹೃದಯ ಒಡೆದು ಚೂರಾಗಿರುತ್ತದೆ. ಅಂಥಹ ಸಂದರ್ಭದಲ್ಲಿ ಬರುವ ಹಾಡು "ನೀನೆ ಸಾಕಿದ ಗಿಣಿ". 

ವಿಜಯನಾರಸಿಂಹ ಅವರ ಹೃದಯ ಹಿಂಡುವ ಸಾಹಿತ್ಯಕ್ಕೆ ಜೊತೆಯಾಗಿ ನಿಲ್ಲುತ್ತದೆ ಸಂಗೀತ ಮತ್ತು ಛಾಯಾಗ್ರಹಣ. ಕ್ಯಾಮೆರ ಚಾಲನೆ, ಕ್ಯಾಮೆರಾದ ಓಡಾಟ ಈ ಹಾಡಿನಲ್ಲಿ ನನಗೆ ಬಲು ಇಷ್ಟವಾಗುತ್ತದೆ. ಒಂದು ಹೃದಯ ಇನ್ನೊಂದು ಹೃದಯಕ್ಕೆ ಹತ್ತಿರವಾಗಬೇಕು ಎನ್ನುವಷ್ಟರಲ್ಲಿ ಮತ್ತೆ ದೂರ ಹೋಗುತ್ತದೆ. ಅದ್ಭುತವಾದ ರೀತಿಯಲ್ಲಿ ಚಿತ್ರಿಕರಣವಾಗಿದೆ. 

ನಾಯಕನ ಮನಸ್ಸು ಹೇಳುವ ಮಾತು "ಇವಳಿಗೆ ಬೇಕಾಗಿರುವುದು ಆನಂದ ಕಣೋ ಸಂತೋಷ ಅಲ್ಲ" ಅದ್ಭುತ ಮಾತುಗಳು. ಆನಂದ ನಿರಂತರದ ಭಾವ, ಸಂತೋಷ ಕೇವಲ ಕ್ಷಣ ಮಾತ್ರ ಸಿಗುವ ಸುಂದರ ಅನುಭವ. ಇಡಿ ಚಿತ್ರ ಈ ಮೇಲಿನ ಸಾಲಿನ ಮೇಲೆ ನಿಂತಿದೆ. 

ಈ ಚಿತ್ರದಲ್ಲಿ ಅಭಿನಯಿಸಿರುವ ಮೂವರು ಮೂರು ಆಧಾರ ಸ್ಥಂಭಗಳು. 

ಶ್ರೀನಾಥ್ : ಚಿತ್ರಜೀವನದಲ್ಲಿಯೇ ಒಂದು ಮೈಲಿಗಲ್ಲು, ಆನಂದನ ಪಾತ್ರದಲ್ಲಿ ಕೈಕಟ್ಟಿಕೊಂಡು ಓಡಾಡುವ, ಕನ್ನಡಕವನ್ನು ಆಗಾಗ ಸರಿಪಡಿಕೊಳ್ಳುವ ರೀತಿ, ಸಿಲ್ಲಿ ಫೆಲೋ ಸಿಲ್ಲಿ ಫೆಲ್ಲೋ ಎನ್ನುವ ಮಾತುಗಳು, ಅಪಾರ ಚಿಂತನೆ ನಡೆಸಿ ಮನಸ್ಸು ಹಣ್ಣಾಗಿದೆ ಎನ್ನುವಂಥಹ ಮನೋಜ್ಞ ಅಭಿನಯ ಈ ಪಾತ್ರದಲ್ಲಿ ಕಾಣಸಿಗುತ್ತದೆ 

ಪದ್ಮಾವಾಸಂತಿ: ವಾಸಂತಿ ಎನ್ನುವ ಮಾನಸಿಕ ಸ್ಥಿಮಿತ ಕಳೆದುಕೊಂಡ ಪಾತ್ರದಲ್ಲಿ ಅತಿರೇಕಕ್ಕೆ ಹೋಗದೆ, ನಿಭಾಯಿಸಿರುವ ರೀತಿ, ತನ್ನ ಕಾಯಿಲೆ ಗುಣವಾದಮೇಲೆ ಹಿಂದಿನ ಪಾತ್ರದ ಪರಿಣಾಮ ಕೊಂಚವೂ ಇರದ ಹಾಗೆ ಅಭಿನಯ ಇಷ್ಟವಾಗುತ್ತದೆ. 

ರಾಮಕೃಷ್ಣ : ಚಿತ್ರ ಒಂದು ನಿಟ್ಟಿನಲ್ಲಿ ಓಡುತ್ತಿದೆ ಎಂದು ಅಂದುಕೊಂಡಾಗ ಪ್ರತ್ಯಕ್ಷವಾಗುವ ಪಾತ್ರ ಚಿತ್ರದ ದಿಕ್ಕನ್ನೇ ಬದಲಿಸಿಬಿಡುತ್ತದೆ. ತನಗೆ ಅರಿವಿಲ್ಲದೆ ವಾಸಂತಿ ಪಾತ್ರವನ್ನು ಪ್ರೀತಿಸುತ್ತಾ, ಅರಿವಿಲ್ಲದೆ ನಾಯಕನ ಭಾವಗಳಿಗೆ ಬರೆ ಎಳೆಯುವ ಪಾತ್ರದಲ್ಲಿ ಲೀಲಾಜಾಲವಾಗಿ ನಟಿಸಿದ್ದಾರೆ. 

ಈ ಮೂವರು ಈ ಮೇಲಿನ ಪಾತ್ರ ಮಾಡಲಿಕ್ಕೆ ನಟಿಸಿದ್ದಾರೆಯೋ ಅನ್ನುವಷ್ಟು ಸಹಜವಾಗಿ ಮೂಡಿ ಬಂದಿದೆ. 

ಈ ಪಾತ್ರಗಳ ಮತ್ತು ಮನೋಜ್ಞ ಕಥೆಯ ಕತೃ ಪುಟ್ಟಣ್ಣ ಕಣಗಾಲ್ ಅವರಿಗೆ ಒಂದು ದೊಡ್ಡ ಸಲಾಂ ಈ ಲೇಖನದ ಮೂಲಕ!!!