Friday, October 16, 2015

ಋಣ ಮುಕ್ತಳು - ಒಂದು ವಿಭಿನ್ನ ಅನುಭವ (1984)

ಒಂದು ಮಹಾನ್ ಚೇತನ ಅಮೋಘ ಚಿತ್ರಗಳನ್ನು ನೀಡುತ್ತಾ ನೀಡುತ್ತಾ ಬಸವಳಿದಾಗ ಮತ್ತೆ ಅದಕ್ಕೆ ಚೈತನ್ಯ ನೀಡುವುದೇ ಮತ್ತೊಂದು ಪರಿಶ್ರಮ ಬೇಡುವ ಚಿತ್ರ.

ಹೌದು ಈ ಚಿತ್ರವನ್ನು ನಾ ಇದುವರೆಗೂ ನೋಡೇ ಇರಲಿಲ್ಲ. ಯಾವಾಗಲೂ ಈ ಚಿತ್ರ ದೂರದರ್ಶನದಲ್ಲಿ ಮೂಡಿ ಬಂದರೂ ಬರಿ ಅಂತಿಮ ಕ್ಷಣವನ್ನು ಮಾತ್ರ ನೋಡಿದ್ದೇ.  ಭಾರತಿ ತನ್ನ ಮೊಗದಲ್ಲಿ ಯಾವುದೇ ಭಾವನೆ ತೋರದೆ ನಿಧಾನವಾಗಿ ಆಶ್ರಮವಾಸಿಗಳ ಜೊತೆಯಲ್ಲಿ ನಿರ್ಮಲ ಎನ್ನಿಸುವ ಶ್ವೇತ ವಸ್ತ್ರಧಾರಿಯಾಗಿ ಹೆಜ್ಜೆ ಹಾಕುತ್ತಾ ಹೋಗುವುದು, ಮತ್ತು ರಾಮಕೃಷ್ಣ ತನ್ನ ಹೆತ್ತ ತಾಯಿಯನ್ನು ನೋಡುತ್ತಾ ನಿಲ್ಲುವುದು ಅವರ ಮೊಗದ ಮೇಲೆ ಒಂದು ರೀತಿಯ ಆತಂಕ ಮತ್ತು ತನ್ನ ಮಾತೆ ತನಗೆ ನೆಮ್ಮದಿ ಸಿಗುವ ತಾಣವನ್ನು ಅರಸಿಕೊಂಡ ಒಂದು ಸಂತೋಷ. 

ಕಣಗಾಲ್ ಕ್ರಿಯೇಷನ್ಸ್ ಲಾಂಛನದಲ್ಲಿ ಪುಟ್ಟಣ್ಣ ಕಣಗಾಲ್ ಪರಿವಾರದವರೊಡನೆ ಸೇರಿ ತಯಾರಿಸಿದ ಚಿತ್ರ ಇದು. ಶ್ರೀಮತಿ ಅನುಪಮ ನಿರಂಜನ್ ರವರ "ಋಣ" ಎನ್ನುವ ಕಾದಂಬರಿ ಆಧಾರಿತ ಈ ಚಿತ್ರ ಮೊದಲಿಂದ ಕಡೆಯತನಕ ಏರು ಪೆರಿಲ್ಲದೆ ನೋಡಿಸಿಕೊಂಡು ಹೋಗುತ್ತದೆ. 

ಚಿತ್ರದ ಹೆಸರನ್ನು ತೋರಿಸುವಾಗ ಒಂದು ಪುಸ್ತಕದಲ್ಲಿ  ಪ್ರತಿ ಹಾಳೆಯನ್ನು ತಿರುವು ಹಾಕುತ್ತ ಹೋದಂತೆ ತಾರಾಗಣವನ್ನು ಪರಿಚಯ ಮಾಡಿಕೊಡುತ್ತಾರೆ. ನಮಗೆ ಕಾಣದ ನರಕಲೋಕದಲ್ಲಿ ಚಿತ್ರಗುಪ್ತ ಪ್ರತಿ ಜೀವಿಯ ತಪ್ಪು ಒಪ್ಪುಗಳನ್ನು ಅವಲೋಕಿಸುತ್ತಾ ಪಡೆದದ್ದು, ಕಳೆದದ್ದು ಇವುಗಳ ತುಲನೆ ಮಾಡಿ ಯಮಧರ್ಮ ಶಿಕ್ಷೆ ಕೊಡಲು ಅಹವಾಲು ನೀಡುವಂತೆ ತೋರುವ ದೊಡ್ಡ ಪುಸ್ತಕದ ಹಾಳೆಗಳಂತೆ ಈ ದೃಶ್ಯ ಗೋಚರಿಸುತ್ತದೆ. ಪುಟ್ಟಣ್ಣ ಪ್ರತಿ ಚಿತ್ರವನ್ನು  ಆರಂಭಿಸುವ ರೀತಿ ಯಾವಾಗಲೂ ವಿಭಿನ್ನ. 

ಸಂಭಾಷಣೆಯ ಜವಾಬ್ಧಾರಿಯನ್ನು ಕುಣಿಗಲ್ ನಾಗಭೂಷಣ್ ಜೊತೆ ಹಂಚಿಕೊಂಡು, ಚಿತ್ರಕಥೆ ಬರೆದು ನಿರೂಪಣೆ ಮಾಡಿ ಜಗನ್ಮಾತೆಯ ದಿಗ್ಧರ್ಶನದಲ್ಲಿ ಚಿತ್ರ ಮೂಡಿಸಿದ್ದಾರೆ. ಅವರ ಕನಸಿಗೆ ಕಣ್ಣಾಗಿ ಬರುವುದು ಎಸ್ ಮಾರುತಿರಾವ್ ಅವರ ಛಾಯಾಗ್ರಹಣ ಮತ್ತು ಹಿನ್ನೆಲೆ ಸಂಗೀತ ಮತ್ತು ಹಾಡುಗಳಿಗೆ ಜೀವ ತುಂಬುವ ಸಂಗೀತ ಹೊಣೆ ವಿಜಯಭಾಸ್ಕರ್ ಅವರದ್ದು. 

ಮನುಜ ತಾನು ಮಾಡಿದ ಪಾಪ ಪುಣ್ಯ ಇವುಗಳನ್ನು ಇಲ್ಲೇ ಒಪ್ಪ ಮಾಡಿ ಹೋಗುತ್ತಾನೆ ಎನ್ನುವ ನೀತಿಯ ತಳಹದಿ ಈ ಚಿತ್ರದಲ್ಲಿದೆ. ಹಳ್ಳಿಯಲ್ಲಿ ಹಾಯಾಗಿ ಇರಬಹುದಾದ ಮನೆಯ ಯಜಮಾನ ಹಣದ ಆಮಿಷಕ್ಕೆ ಒಳಗಾಗಿ ಪಟ್ಟಣಕ್ಕೆ ಬಂದು, ಆ ಪಟ್ಟಣದ ರೂಪು ರೇಶೆಗಳಿಗೆ ತಕ್ಕಂತೆ ಅನೈತಿಕತೆಯಿಂದ ಹಣ ಸಂಪಾದಿಸುವುದು, ಇದರ ಜೊತೆಯಲ್ಲಿ ಇವನ ಈ ಸಾಹಸ ಮಕ್ಕಳ ಮೇಲೆ ಪರಿಣಾಮ ಬೀರುವುದು ಸುಂದರವಾಗಿ ಚಿತ್ರಿಕೃತವಾಗಿದೆ. 

ಬುದ್ಧಿವಂತ ಮೊದಲನೇ ಮಗುವನ್ನು  ಎರಡನೇ ಮಗುವಿನ ಮುಂದೆ ಹೋಗಲಿ, ಈ ಚಿಕ್ಕ ಮಗುವಿನ ಮನದಲ್ಲಿ ರೋಷ ದ್ವೇಷ ತುಂಬಿ ಸಮಾಜಕ್ಕೆ ಒಂದು ರೀತಿಯ ಪಿಡುಗು ಎನ್ನಿಸುವಂತಹ ಪ್ರಜೆ ನೀಡುವುದರಲ್ಲಿ ಅಪ್ಪನ ಪಾತ್ರಧಾರಿ ಸಫಲ ಆಗುತ್ತಾರೆ. 
ಇದರ ಜೊತೆಯಲ್ಲಿ ಕ್ಷಣಿಕ ಆಸೆಗೆ ಬಲಿಯಾಗಿ ಮನೆಕೆಲಸದ ಹುಡುಗಿಯ ಜೊತೆಯಲ್ಲಿ ಅಕ್ರಮ ಸಂಬಂಧ ಇಟ್ಟುಕೊಂಡು ಒಂದು ಮಗುವಿನ ಜನನಕ್ಕೆ ಕಾರಣವಾಗುವಂಥಹ ವಿಚಿತ್ರ ಪರಿಸ್ಥಿತಿಯನ್ನು ನಿರ್ಮಾಣ ಮಾಡಿಕೊಳ್ಳುತ್ತಾನೆ. ಆ ಮನೆಗೆಲಸದ ಹುಡುಗಿ ಬೇರೆ ಮದುವೆ ಮಾಡಿಕೊಂಡರೂ, ಅಲ್ಲಿ ಸುಖ ಕಾಣದೆ ಗಂಡನನ್ನು ಕಳೆದುಕೊಂಡು, ಆ ದುಃಖದಲ್ಲಿಯೇ ತನ್ನ ಅನೈತಿಕ ಮಗುವನ್ನು ಜತನಮಾಡುವ ಪಾತ್ರ. 

ಮಗು ಒರಟು ಎಂದು ಗೊತ್ತಿದ್ದರೂ, ತಾಯಿ ಹೃದಯ ಮಿಡಿಯುತ್ತದೆ, ಬೇರೆಯವರ ಹತ್ತಿರ ಒರಟು ಒರಟಾಗಿ ಮಾತಾಡಿದರೂ ತನ್ನ ತಾಯಿಗೋಸ್ಕರ ಮಿಡಿಯುವ ಮಗು. ಇವರೆಡರ ಭಾವನಾತ್ಮಕ ತಾಕಲಾಟ ಸುಂದರವಾಗಿ ಕೆಲವು ದೃಶ್ಯಗಳಲ್ಲಿ ಭಿತ್ತರಗೊಂಡಿದೆ. 

ಅದರಲ್ಲೂ, ಜಗಳ ಮಾಡಿಕೊಂಡು ಮನೆಬಿಟ್ಟು ಹೋದ ಮಗನನ್ನು ನೆನೆದು, ಅಯ್ಯೋ ನಾ ತಪ್ಪು ಮಾಡಿದೆ, ಅವನನ್ನು ಅರ್ಥ ಮಾಡಿಕೊಳ್ಳಬೇಕಿತ್ತು ಎಂದು ಹಲಬುವ ಅಪ್ಪ, ಮತ್ತು ಅಕಾಲ ಮರಣಕ್ಕೆ ತುತ್ತಾಗಿ, ಕಡೆಯಲ್ಲಿ ತನ್ನ ಮಗನನ್ನು ನೋಡಬೇಕು ಎಂದು ಬಯಸಿ, ಮಗ ಬರುವ ಮುನ್ನ ಇಹಲೋಕ ತ್ಯಜಿಸಿದ ಮೇಲೆ, ಸುಮಾರು ಒಂದು ಮೂವತ್ತು ಸೆಕೆಂಡ್ ಏಕದಂ ಮೌನ. ತಾಯಿ ನೋಡಿದೆಯ ಮಗನೆ ನಿನ್ನ ಅಪ್ಪನನ್ನು ಎಂದಾಗ, ಮಗ ದೊಡ್ಡದಾಗಿ ಬಾಯಿ ತೆಗೆದು ಅಳುವ ಮೂಕ ದೃಶ್ಯ, ಇಡಿ ಚಿತ್ರದಲ್ಲಿ ಪುಟ್ಟಣ್ಣ ಅವರ ಕೈಚಳಕ ಕಾಣಿಸುವ ದೃಶ್ಯ ಇದು. 

ಕೆಲವೇ ಕೆಲವು ಪಾತ್ರಗಳು, ಆದರೆ ಎಲ್ಲರೂ ಅಚ್ಚುಕಟ್ಟಾಗಿ ಅಭಿನಯಿಸಿದ್ದಾರೆ. ಭಾರತಿ, ಸುಂದರಕೃಷ್ಣ ಅರಸ್, ರಾಮಕೃಷ್ಣ, ಭರತ್ ಭಾಗವತರ್, ಆಶಾಲತ, ಮಾ, ಹಿರಣ್ಣಯ್ಯ, ರಾಜಾನಂದ್, ಪದ್ಮಾವಾಸಂತಿ ಎಲ್ಲರೂ ಎಷ್ಟು ಬೇಕೋ ಅಷ್ಟು ಅಭಿನಯ ನೀಡಿದ್ದಾರೆ. 

"ಆಕಾಶದುದ್ದಾದ ಮಾಮರವು ಚಂದ" ಮನುಜನ ಇಬ್ಬಗೆ ನೀತಿಯನ್ನು ಸುಂದರ ಹೋಲಿಕೆಗಳ ಮೂಲಕ ವಿಜಯನಾರಸಿಂಹ ಬರೆದ ಹಾಡನ್ನು ಎಸ್ ಜಾನಕಿ ಹಾಡಿದ್ದಾರೆ. 

"ದೇವರ ಒಲಿಸಲು" ತಾಯಿಯ ಮಹತ್ವವನ್ನು ಬಿಂಬಿಸುವ ಹಾಡು ಎಸ್ ಪಿ ಬಾಲಸುಬ್ರಮಣ್ಯಂ ಜೀವ ತುಂಬಿದ್ದಾರೆ 

"ಕಣ್ಣಾರೆ ಕಂಡೆ ನಾ" ವಾಣಿ ಜಯರಾಂ ಅವರ ಕಂಚಿನ ಕಂಠ ಇಷ್ಟವಾಗುತ್ತದೆ. 



ಕಥಾವಸ್ತು ಆ ಕಾಲಕ್ಕೆ ಒಂದು ಚೂರು ಮುಂದಾಗಿತ್ತು ಅನ್ನಿಸುತ್ತದೆ. ಕೆಲವೊಮ್ಮೆ ಸಾಗರ ಪ್ರಶಾಂತವಾಗಿದ್ದ ಸಾಗರ ಚಂಡಮಾರುತದ ಮುನ್ಸೂಚನೆ ನೀಡುವಂತೆ, ಪುಟ್ಟಣ್ಣ ಕಣಗಾಲ್ ತಮ್ಮ ಮುಂದಿನ ಚಿತ್ರ ರತ್ನಕ್ಕೆ ಈ ಚಿತ್ರದಿಂದಲೇ ಅನಿಯಾಗುತ್ತಿದ್ದರೋ ಏನೋ ಎನ್ನಿಸಿತು ನನಗೆ. 

No comments:

Post a Comment