Sunday, October 18, 2015

ಸಾವಿರ ಸಾವಿರ ಮನಸ್ಸಿನ ಭಾವದ ಉಗಮಸ್ಥಾನ "ಸಾವಿರ ಮೆಟ್ಟಿಲು" - ಪೂರ ಹತ್ತದ ಮೆಟ್ಟಿಲುಗಳು (2006)

ಕಲಾವಿದರ ಕಾಲು ಅಳತೆ ಒಬ್ಬರಿಂದ ಒಬ್ಬರದು ವಿಭಿನ್ನ ಎಂದು ಹೇಳುತ್ತಾರೆ. ಒಬ್ಬರ ಪರಿಶ್ರಮದ ಪಾದರಕ್ಷೆ ಇನ್ನೊಬ್ಬರ ಕಾಲಿಗೆ ಆಗೋಲ್ಲ ಎಂದು.

ಪುಟ್ಟಣ್ಣ ಕಣಗಾಲ್ ಒಂದು ಪ್ರತಿಭಾ ಪೆಟ್ಟಿಗೆ, ಅವರ ಮೆದುಳು ಒಂದು ಈಗಿನ ಕಾಲದ ಮಾಹಿತಿ ಕೇಂದ್ರ ಅಥವಾ ಕಂಪ್ಯೂಟರ್ ಇದ್ದ ಹಾಗೆ. ಅವರ ಬಗ್ಗೆ ಜನಜನಿತ ಮಾತು ಅಂದರೆ, ಅವರು ಒಂದು ಸಿನಿಮಾ ಕೈಗೆತ್ತಿಕೊಂಡರೆ ಅದರಲ್ಲಿಯೇ ಮುಳುಗಿಬಿಡುತ್ತಿದ್ದರು ಎಂದು, ಹಾಗಾಗಿ ಕಥೆ ಚಿತ್ರಕಥೆ ಎಲ್ಲವೂ ಅವರ ತಲೆಯೊಳಗೆ ಇದ್ದುಬಿಡುತ್ತಿದ್ದವು, ಒಂದು ಮಾದರಿ ಅಥವ ಆಧುನಿಕ ಭಾಷೆಯಲ್ಲಿ ಹೇಳುವುದಾದರೆ ಬ್ಲೂ ಪ್ರಿಂಟ್ ಅಥವಾ ನಕಾಶೆ ಇರುತ್ತಿದ್ದವು ಅನ್ನಿಸುತ್ತದೆ, ಅದನ್ನು ಚಿತ್ರಿಕರಿಸುವಾಗ ಅದಕ್ಕೆ ಮತ್ತಷ್ಟು ಹೊಳಪು ಕೊಟ್ಟು ಬೆಳಗಿಸುತ್ತಿದ್ದರು ಎನ್ನುವ ಅನುಭವ ಅವರ ಎಲ್ಲಾ ಚಿತ್ರಗಳನ್ನು ನೋಡಿದ ಅವರ ಅಪ್ಪಟ ಅಭಿಮಾನಿಗಳಲ್ಲಿ ಒಬ್ಬನಾದ ನನ್ನದು. 

ಇದು ಒಂದು ಮಟ್ಟಿಗೆ ನಿಜ, ಕಲಾವಿದ ಎಂದಿಗೂ ತನ್ನ ಕಲೆಯನ್ನು ಅಥವಾ ತನ್ನ ಕೃತಿಯನ್ನು ಹೊಳಪಿನ ಮೂಸೆಗೆ ತಳ್ಳುತ್ತಲೇ ಇರುತ್ತಾನೆ. ಅದು ಪೂರ್ಣ ಕೃತಿಗೆ ಬರುವಷ್ಟರಲ್ಲಿ ಅವರ ತಲೆಯೊಳಗೆ ಮತ್ತು ಹೃದಯದ ಪರಿಷ್ಕರಣ ಪೆಟ್ಟಿಗೆಯೊಳಗೆ ಮಿಂದೆದ್ದು ಬರುತ್ತದೆ. 

ಅದನ್ನು ಮುಟ್ಟುವುದು ಅಥವಾ ಅದನ್ನು ಮುಂದುವರೆಸುವುದು ಸವಾಲಿನ ಸಂಗತಿಯೇ ಸರಿ. ಶ್ರೀ ಬಸವೇಗೌಡರು ಮತ್ತು ಕೆ ಎಸ್ ಎಲ್ ಸ್ವಾಮೀ ಇಬ್ಬರ ಪರಿಶ್ರಮ ನಿಜಕ್ಕೂ ಶ್ಲಾಘನೀಯ. ಪೂರ್ಣ ಚಿತ್ರಕಥೆಯಿಲ್ಲ, ಕಥೆಯನ್ನು ಎಲ್ಲಿಂದ ಆರಂಭಿಸಬೇಕು, ಹೇಗೆ ಮುಂದಕ್ಕೆ ಕೊಂಡೊಯ್ಯಬೇಕು ಹೀಗೆ ಯಾವುದೇ ಒಂದು ನಿರ್ದಿಷ್ಟ ಚೌಕಟ್ಟಿನ ಜೊತೆಯಲ್ಲಿದೆ ಒಬ್ಬ ಕಲಾವಿದನ ಕುಂಚವನ್ನು ಮುಂದಕ್ಕೆ ಒಯ್ಯುವುದು ಸವಾಲಿನ ವಿಷಯ. ಇಂಥಹ ಪರಿಶ್ರಮ ಕೈಗೊಂಡ ಇಬ್ಬರೂ ಸಾಧಕರಿಗೂ ಮತ್ತು ಅದಕ್ಕೆ ಸಹಕರಿಸಿದ ಎಲ್ಲಾ ಕಲಾವಿದರಿಗೂ ಮತ್ತು ತಾಂತ್ರಿಕ ವರ್ಗಕ್ಕೆ ಅಭಿನಂದನೆಗಳು. 

ಈ ಚಿತ್ರದ ಬಗ್ಗೆಗಿನ ನನ್ನ ಬರಹವನ್ನು ಪುಟ್ಟಣ್ಣ ಅವರು ಚಿತ್ರೀಕರಿಸಿದ ಭಾಗಗಷ್ಟೇ ಸೀಮಿತಗೊಳಿಸುತ್ತೇನೆ, ಕಾರಣ ನಿಮಗೆ ಗೊತ್ತು. 

ಪುಟ್ಟಣ್ಣ ಕಣಗಾಲ್ ಅವರ ಮೊದಲ ಕೆಲ ಪ್ರಯತ್ನಗಳಲ್ಲಿ ಇದು ಒಂದು ಚಿತ್ರ ಎನ್ನಿಸುವ ಎಲ್ಲಾ ಸುಳಿವು ಇದರಲ್ಲಿ ಸಿಗುತ್ತದೆ. ವಜ್ರ ತನ್ನನ್ನೇ ತಾನು ಹೊಳಪಿನ ಪ್ರಖರತೆ ಒಡ್ಡಿಕೊಳ್ಳುತ್ತಿರುವ ಎಲ್ಲಾ ಲಕ್ಷಣಗಳು ಇವೆ ಈ ಚಿತ್ರದಲ್ಲಿ. 

ಈ ಚಿತ್ರದಲ್ಲಿ ನಟಿಸಿರುವ ಸುಮಾರು ೮೦% ಕಲಾವಿದರು ಈ ಚಿತ್ರ ಬಿಡುಗಡೆಯಾದಾಗ ಇಲ್ಲ. ತಾರಾಗಣ ಪಟ್ಟಿಯಲ್ಲಿ ಅವರ ಹೆಸರಿನ ಹಿಂದೆ "ದಿ।।" ಎಂದು ನೋಡುವುದು ಮನಸ್ಸಿಗೆ ಬಹಳ ಹಿಂಸೆಯಾಗುತ್ತದೆ.ನಮ್ಮ ಕರುನಾಡಿನ ಚಿತ್ರರಂಗವನ್ನು ಬೆಳಗಲು ಶ್ರಮಿಸಿದ  ಅನೇಕ ಕಲಾರತ್ನಗಳ ಹೆಸರುಗಳ ಹಿಂದೆ ಆ ಅಕ್ಷರ ನೋಡುವುದು ನಿಜಕ್ಕೂ ಬೇಸರದ ಸಂಗತಿ. 

ಕಪ್ಪು ಬಿಳುಪಿನಲ್ಲಿ ತಯಾರಾದ ಈ ಚಿತ್ರ ಮೈಸೂರಿನ ಚಾಮುಂಡಿ ಬೆಟ್ಟದಲ್ಲಿಯೇ ಚಿತ್ರಿಕರಣವಾಗಿದೆ. ಒಂದು ಪ್ರದೇಶವನ್ನು ಅದೇ ಅದೇ ಚೌಕಟ್ಟಿನಲ್ಲಿ ತರದೇ, ಪ್ರತಿದೃಶ್ಯವನ್ನು ಅರೆ ಇದು ಬೇರೆಯದೇ ತಾಣ ಇರಬಹುದೇನೋ ಅನ್ನುವಂತೆ ತೋರಿಸಿದ್ದಾರೆ ಛಾಯಾಗ್ರಾಹಕರು. 

"ಗಂಡು ಬೀರಿ ನಾನಲ್ಲ" ಹಾಡು ಎಲ್ ಆರ್ ಈಶ್ವರಿ ಅಬ್ಬರಿಸಿದ್ದಾರೆ, ಜೊತೆಯಲ್ಲಿಯೇ ನಿಜಕ್ಕೂ ಗಂಡು ಬೀರಿಯಂತೆಯೇ ಅಭಿನಯಿಸಿರುವ ಜಯಂತಿ.  
ಎಳನೀರು ಮಾರುವ ಪಾತ್ರದಲ್ಲಿ ನನ್ನ ಪ್ರೀತಿಯ ಅಶ್ವತ್ ಗಮನಸೆಳೆಯುತ್ತಾರೆ. 
ಆ ಕಾಲದ ಸುರಸುಂದರಾಂಗ ಕಲ್ಯಾಣ್ ಕುಮಾರ್ "ಕೈ ನೀಡಿದೇ ನೀನು ಅಂದು" ಪಿ ಬಿ ಶ್ರೀನಿವಾಸ್ ಮತ್ತು ಎಸ್ ಜಾನಕಿ  ಹಾಡಿಗೆ ಸುಂದರ ನೃತ್ಯ ಮತ್ತು ಅಭಿನಯಯವರ ಜೊತೆಯಲ್ಲಿ ಜಯಂತಿ ಅವರದು 
"ನಮ್ಮೂರ ಬೆಟ್ಟದ" ಎನ್ನುವ ಹಾಡಿನಲ್ಲಿ ಮೈಸೂರನ್ನು ರಮ್ಯವಾಗಿ ತೋರಿಸುವ ದೃಶ್ಯಗಳು ಕಣ್ಣಿಗೆ ಕಟ್ಟುತ್ತವೆ. ಪಿ ಬಿ ಶ್ರೀನಿವಾಸ್ ಮತ್ತು ಪಿ ಸುಶೀಲ ಸಾಹಿತ್ಯಕ್ಕೆ ದನಿಯಾಗುತ್ತಾರೆ. 

ಅದ್ಭುತ ದೃಶ್ಯ ಸಂಯೋಜನೆ ಅಂದರೆ 
ವಜ್ರಮುನಿ, ಜಯಂತಿ ಮತ್ತು ಕಲ್ಯಾಣ್ ಕುಮಾರ್ ಒಂದು ದೃಶ್ಯದಲ್ಲಿ ಇಕ್ಕಟ್ಟಿನ ಪರಿಸ್ಥಿತಿಯಲ್ಲಿ ಸಿಕ್ಕಿಕೊಂಡಿರುತ್ತಾರೆ. ಆ ದೃಶ್ಯದಲ್ಲಿ ಮೂವರು ಜೋರಾಗಿ ಮಾತಾಡಬೇಕು ಅಥವಾ ಬೇಡಿಕೊಳ್ಳುವ ದನಿ ಇರಬೇಕು ಇಲ್ಲವೇ ಅಥವಾ ಒಬ್ಬರಿಗೂಬ್ಬರು ತಮ್ಮ ತಮ್ಮ ಬಗ್ಗೆ ಸಮಜಾಯಿಷಿ ಕೊಡಬೇಕು. ಇವಿಷ್ಟನ್ನು ಕೇವಲ ಒಂದು ನಿಮಿಷದ ದೃಶ್ಯದಲ್ಲಿ ತೋರಿಸುತ್ತಾರೆ ಪುಟ್ಟಣ್ಣ ಅವರು. ಇಡಿ ದೃಶ್ಯವನ್ನು ಮೂರು ಜೊತೆ ಕಣ್ಣುಗಳಲ್ಲಿ ತೋರುತ್ತಾರೆ.. ಪ್ರತಿ ಐದು ಅಥವಾ ಹತ್ತು ಕ್ಷಣಗಳಿಗೆ ಒಂದೊಂದು ಜೊತೆ ಕಣ್ಣುಗಳಲ್ಲಿ ಭಾವ ಬದಲಾಗುತ್ತಾ ಹೋಗುತ್ತದೆ. ಅದ್ಭುತ ಅದ್ಭುತ ಎನ್ನಿಸುವ ದೃಶ್ಯ ಸಂಯೋಜನೆ. 

ಜಯಂತಿ ಪಾತ್ರವನ್ನು ಅತಿ ಅಲ್ಲಿಯ ತನಕ ಅತಿ ಎತ್ತರದಲ್ಲಿ ಕೂರಿಸಿದ್ದ ವಜ್ರಮುನಿ ಮನೆಯವರು (ಪಂಡರಿ ಬಾಯಿ ಮತ್ತು ಆಕೆಯ ಮಗಳು ಮತ್ತು ಮಗ), ಯಾವುದೇ ಕಾರಣಕ್ಕೆ, ಜಯಂತಿ ಅಪರಾಧಿನಿ ಎಂದುಅರಿವಾಗುತ್ತದೆ , ಮಹಡಿಯ ಕೆಳಗೆ ಇದ್ದ ವಜ್ರಮುನಿ ಮತ್ತು ಆತನ ತಾಯಿ ಪಂಡರಿಬಾಯಿ ಜಯಂತಿಯನ್ನು ಕರೆಯುತ್ತಾರೆ. ಜಯಂತಿ ಇಳಿದುಬರುತ್ತಿರುವಾಗ ಆಕೆಯ ಕಣ್ಣಲ್ಲಿ ಅಪರಾಧಿ ಭಾವ ಎದ್ದು ಕಾಣುತ್ತದೆ, ಜೊತೆಯಲ್ಲಿಯೇ ಕ್ಯಾಮೆರ ಚಾಲನೆ ನಿಧಾನವಾಗಿ ಕೆಳಗೆ ಇಳಿಯುತ್ತಾ ಹೋಗುತ್ತದೆ. ವಜ್ರಮುನಿ ಮತ್ತು ಪಂದರಿಬಾಯಿಯವರ ಮುಖಭಾವವನ್ನೇ ತೋರಿಸುತ್ತಾ ಕ್ಯಾಮೆರಾ ನಿಧಾನವಾಗಿ ಕೆಳಗೆ ಇಳಿಯುತ್ತಾ ಹೋಗುತ್ತದೆ. 

ಅಂದರೆ ಜಯಂತಿ ಪಾತ್ರ, ಆ ಮನೆಯವರ ಮುಂದೆ ಅಪರಾಧಿ ಭಾವದಿಂದ ಎತ್ತರದಲ್ಲಿದ್ದ ವ್ಯಕ್ತಿತ್ವ ಭೂಮಿಗೆ ಇಳಿಯುತ್ತಾ ಹೋದಂತೆ ತೋರಿಸುವ ದೃಶ್ಯ. 

ಗುರುಗಳೇ ಇವೆರಡು ದೃಶ್ಯಗಳು ಸಾಕು, ನಿಮ್ಮ ಪ್ರತಿಭೆ ಅನಾವರಣಗೊಳ್ಳಲು ಕರುನಾಡಿನ ರಂಗ ಪರದೆ ಕಾಯುತ್ತಿತು ಎಂದು ತಿಳಿದುಕೊಳ್ಳಲು. 

ಪುಟ್ಟಣ್ಣ ಅವರ ತಲೆಯಲ್ಲಿದ್ದ ಇಡಿ ಚಿತ್ರಕಥೆ ಸಿಕ್ಕಿದ್ದರೂ, ಅಥವಾ ಕಥೆಯ ಒಳ ಸುಳಿವು ಗೊತ್ತಿದ್ದರೂ ಪುಟ್ಟಣ್ಣ ಕಣಗಾಲ್ ಅವರ ಮನಪಟಲದಲ್ಲಿದ್ದ ಚಿತ್ರಕೃತಿಯನ್ನು ಇತರರಿಗೆ ಅಸಾಧ್ಯ ಎನ್ನಿಸುತ್ತಿತ್ತೋ ಏನೋ. ನನ್ನ ಉತ್ತರ ಅಸಾಧ್ಯ ಎಂದು. ಕಾರಣ ಗುರುಗಳು ಗುರುಗಳೇ. 

ಪುಟ್ಟಣ್ಣ ಕಣಗಾಲ್ ಅವರಿಗೆ ಒಂದು ಶ್ರದ್ಧಾ ಪೂರ್ವಕ ನಮನಸಲ್ಲಿಸುವ ಕಾರ್ಯದಲ್ಲಿ ಬಸವೇಗೌಡರು ಮತ್ತು ಕೆ ಎಸ್ ಎಲ್ ಸ್ವಾಮೀ ಮತ್ತು ಚಿತ್ರತಂಡದವರು ಶ್ರಮಿಸಿದ್ದು ನಿಜಕ್ಕೂ ಶ್ಲಾಘನೀಯ. ಪುಟ್ಟಣ್ಣ ಕಣಗಾಲ್ ಮೇಲಿನ ಪ್ರೀತಿ ಮತ್ತು ಗೌರವ ಅವರ ಈ ಬೃಹತ್ ಕಾರ್ಯದಲ್ಲಿ ಜೊತೆ ನೀಡಿದೆ. 

ಪುಟ್ಟಣ್ಣ ಕಣಗಾಲ್ ಅವರಿಗೆ ನನ್ನ ಹೃದಯ ಪೂರ್ವಕ ನಮನಗಳು. 

No comments:

Post a Comment