Monday, November 2, 2015

ಅಭಿಮಾನದ ಕೂಸು - ಟಿ ಎನ್ ಬಾಲಕೃಷ್ಣ - ಆರಂಭ


ಕನ್ನಡ ಚಿತ್ರಗಳನ್ನು ಮೊದಲಿಂದ ಆಸಕ್ತಿಯಿಂದ ನೋಡುತ್ತಾ ಬಂದ ನನಗೆ, ಅದನ್ನು ಇನ್ನಷ್ಟು ಆಸಕ್ತಿಯಿಂದ ನೋಡಲು ಪ್ರೇರೇಪಣೆ ನೀಡಿದವರಲ್ಲಿ ಮೊದಲಿಗರು ಅಂದರೆ ಟಿ ಎನ್ ಬಾಲಕೃಷ್ಣ. 

ಒಬ್ಬ ಕಲಾವಿದನ ಅದರಲ್ಲೂ ಪೋಷಕ ಪಾತ್ರದಲ್ಲಿ ಬರುವ ಕಲಾವಿದರು ನೆನಪಲ್ಲಿ ಉಳಿಯುವುದು ಬಲು ಅಪರೂಪದ ಸಂಗತಿ. ಆದರೆ ಅಂದಿನ ಆ ಕನ್ನಡ ಚಿತ್ರರಂಗದಲ್ಲಿ ಇದ್ದವರೆಲ್ಲಾ ದಿಗ್ಗಜರೆ. ಕುಮಾರ ತ್ರಯರು, ನರಸಿಂಹರಾಜು, ಜಿ ವಿ ಅಯ್ಯರ್, ಲೀಲಾವತಿ, ರಾಮಚಂದ್ರ ಶಾಸ್ತ್ರಿ, ಡಿಕ್ಕಿ ಮಾಧವರಾವ್, ಜಯಶ್ರೀ, ಪಂತುಲು, ಎಂ ವಿ ರಾಜಮ್ಮ, ಪಂಡರಿಬಾಯಿ, ಅಶ್ವತ್, ದ್ವಾರಕೀಶ್ ಹೇಳುತ್ತಾ ಹೋದ ಹಾಗೆ ಹನುಮನ ಬಾಲ ಬೆಳದಂತೆ ಬೆಳೆಯುತ್ತಲೇ ಇರುತ್ತದೆ. 

ಅಂದಿನ ಕಾಲದಲ್ಲಿ ಎಲ್ಲಾ ಕಲಾವಿದರ ಗುರಿ ಒಂದೇ.. ಈ ಚಿತ್ರದಲಿ ಚೆನ್ನಾಗಿ ಅಭಿನಯಿಸಿದರೆ, ಇನ್ನೊಂದು ಚಿತ್ರ ಸಿಗುತ್ತದೆ, ಕೆಲಸ ಸಿಗುತ್ತದೆ, ಹೊಟ್ಟೆಗೆ ಆಧಾರವಾಗುತ್ತದೆ. ಅಷ್ಟೇ ಅವರ ತಲೆಯಲ್ಲಿ ಇದ್ದುದ್ದು, ಅವರಿಗೆಲ್ಲಾ ಚೆನ್ನಾಗಿ ಗೊತ್ತಿತ್ತು ಕಲಾದೇವಿ ನಮ್ಮನ್ನು ಆರಿಸಿದ್ದಾಳೆ ಎಂದರೇ, ನಮ್ಮ ಬದುಕನ್ನು ಜೋಪಾನ ಮಾಡುತ್ತಾಳೆ ಎಂದು, 

ಅವರ ನಂಬಿಕೆ ಎಂದೂ ಸುಳ್ಳಾಗಿರಲಿಲ್ಲ. ಅದಕ್ಕೆ ಅತ್ಯುತ್ತಮ ಉದಾಹರಣೆ, ನಮ್ಮ ಕರುನಾಡಿನ ಅಭಿಮಾನದ ಕೂಸು ಬಾಲಕೃಷ್ಣ. ಆ ದಿಗ್ಗಜರಲ್ಲಿ ಎಲ್ಲರೂ ಒಂದೊಂದು ಮ್ಯಾನರಿಸಂ ಅಥವಾ ಅವರದೇ ಆದ ಒಂದು ವಿಶಿಷ್ಟ ಛಾಪು ಇದ್ದಿತ್ತು. ನಮ್ಮ ಬಾಲಕೃಷ್ಣ ತಮ್ಮ ಅಭಿನಯ ಚಾತುರ್ಯವನ್ನು ಕೊಂಡೊಯ್ದ ರೀತಿ ಶಭಾಶ್ ಎನ್ನಲೇ ಬೇಕು ಅನ್ನಿಸುವಷ್ಟು ತಾಜಾ ಆಗಿತ್ತು ಮತ್ತು ನಿಜವಾಗಿತ್ತು. 

ಅವರು ಮಾಡದ ಪಾತ್ರವೇ ಇರಲಿಲ್ಲ. ಆದರೆ ನೀರಿನ ತರಹ ಯಾವುದೇ ಆಕಾರಕ್ಕೆ ಹೋದರೂ ನೀರು ಅದೇ ಪಾತ್ರಕ್ಕೆ ಒಗ್ಗಿಕೊಳ್ಳುವ ಹಾಗೆ, ಬಾಲಕೃಷ್ಣ ಕೂಡ ಅವರು ಮಾಡಿದ ಪಾತ್ರದೊಳಗೆ ಹೊಕ್ಕುಬಿಡುತ್ತಿದ್ದರು. ನೋಡಿದವರಿಗೆ, ಈ ಪಾತ್ರವನ್ನು ಬೇರೆ ಯಾರೇ ಮಾಡಿದರೂ ಅದು ಬಾಲಕೃಷ್ಣ ಮಾಡಿದ ಹಾಗಿಲ್ಲ ಅನ್ನಿಸುವುವಷ್ಟು ಶಕ್ತಿಶಾಲಿಯಾಗಿರುತ್ತಿತ್ತು. 

ನನ್ನ ಜೀವನದಲ್ಲಿ ಮೂರು "ಅಣ್ಣ" ಬಂದೆ ಬರುತ್ತಾರೆ, ಮತ್ತು ನಾನು ಜೀವನವನ್ನು ನೋಡುವ ರೀತಿ ಮತ್ತು ಬದುಕುವ ರೀತಿಗೆ ಸ್ಫೂರ್ತಿ ತುಂಬಿದವರು ಇವರು 

ಮೊದಲು ನನ್ನ ಅಣ್ಣ, ಅಂದರೆ ನನ್ನ ಅಪ್ಪ - ಮಂಜುನಾಥ್. 

ಎರಡನೆಯವರು ಬಾಲಣ್ಣ ಅರ್ಥಾತ್ ಬಾಲಕೃಷ್ಣ 

ಮೂರನೆಯವರು ಅಣ್ಣ - ಕರುನಾಡಿನ ಅಣ್ಣಾವ್ರು. 

ಬಾಲಕೃಷ್ಣ ನನಗೆ ಬಲು ಇಷ್ಟ ಪಡಲು ಕಾರಣ ಅವರ ಸಂಭಾಷಣೆ ಹೇಳುವ ಶೈಲಿ. ಒಂದು ಸಾಮಾನ್ಯ ಪದಗಳು ಇವರ ಬಾಯಲ್ಲಿ ನುಸುಳಿ ಬಂದರೆ ಮಹಾನ್ ಶಕ್ತಿ ಪಡೆಯುತ್ತಿತ್ತು ಮತ್ತು ಅದಕ್ಕೆ ಒಂದು ತೂಕ ಬರುತ್ತಿತ್ತು. ಖಳನಾಯಕನ ಪಾತ್ರ ಕೂಡ ನಗೆ ಉಕ್ಕಿಸಬಲ್ಲುದು ಮತ್ತು ಅಷ್ಟೇ ರೋಷ ಉಕ್ಕಿಸಬಲ್ಲುದು ಎಂದು ತೋರಿಸಿಕೊಟ್ಟವರು. (ಉದಾಹರಣೆ ಕಣ್ತೆರೆದು ನೋಡು, ಸಂಪತ್ತಿಗೆ ಸವಾಲ್, ಗಂಧದ ಗುಡಿ, ಗಾಂಧಿನಗರ, ದೂರದ ಬೆಟ್ಟ ಹೀಗೆ ಹತ್ತಾರು ಚಿತ್ರಗಳ ಪಾತ್ರಗಳು)

ಇಂಥಹ ಒಂದು ಅದ್ಭುತ ಶಕ್ತಿಯ ಬಾಲಕೃಷ್ಣ ಅವರ ಹಲವಾರು ಚಿತ್ರಗಳಲ್ಲಿ ನನಗೆ ಇಷ್ಟವಾದ, ಮತ್ತು ಪರಿಣಾಮಕಾರಿ ಸಂಭಾಷಣೆ, ಅಭಿನಯ ಕೂಡಿರುವ ಒಂದಷ್ಟು ಚಿತ್ರಗಳ ಬಗ್ಗೆ ಬರೆಯುತ್ತ ಹೋಗುವೆ. ಎಲ್ಲಿ ಆರಂಭಿಸಲಿ, ಎಲ್ಲಿ ನಿಲ್ಲಿಸಲಿ ಗೊತ್ತಿಲ್ಲ ಕಾರಣ, ಬಾಲಕೃಷ್ಣ ಒಂದು ಕಡಲು. 

ಕಡಲಿನ ನೀರು ಆವಿಯಾಗುತ್ತದೆ, ಮೊಡವಾಗುತ್ತದೆ, ಮೋಡದಲ್ಲಿ ಸಾಂಧ್ರತೆ ಹೆಚ್ಚಾದಾಗ ಮಳೆ ಸುರಿಸುತ್ತದೆ. ಝರಿಗಳು ಹುಟ್ಟುತ್ತವೆ, ತೊರೆಯಾಗುತ್ತದೆ, ನದಿಯಾಗುತ್ತದೆ, ಕಡಲು ಸೇರುತ್ತದೆ.... ಮತ್ತೆ ಆವಿಯಾಗುತ್ತದೆ. 

ಹೀಗೆ ಬಾಲಕೃಷ್ಣ ಅವರ ಯಾವುದೇ ಚಿತ್ರವನ್ನು ನೋಡಿದರೂ ಮತ್ತೆ ಆರಂಭಕ್ಕೆ ಹೋಗಿ ನಿಲ್ಲಬಹುದು. ಎಲ್ಲಿಂದ ಬೇಕಾದರೂ ಆರಂಭಿಸಬಹುದು ಮತ್ತು ಎಲ್ಲಿ ಬೇಕಾದರೂ ಅಲ್ಪವಿರಾಮ ತೆಗೆದುಕೊಳ್ಳಬಹುದು. 

ಅಂಥಹ ಮಹಾನ್ ಶಕ್ತಿಯ ಚೇತನ ಭುವಿಗೆ ಬಂದು ೧೦೪ ವಸಂತಗಳು ಕಳೆದು ಹೋದವು. ಹೇಳಿದಷ್ಟು, ಬರೆದಷ್ಟು, ಗೀಚಿದಷ್ಟು ಹೊಸ ಹೊಸ ಅರ್ಥಗಳು ಹುಟ್ಟಿಕೊಳ್ಳುವ ಕನ್ನಡಾಂಬೆಯ ಅಭಿಮಾನದ ಕೂಸಿಗೆ ಇಂದು ಜನುಮ ದಿನದ ಸಂಭ್ರಮ. 

ಇದೆ ಸಂತಸದಲ್ಲಿ ಬಾಲಕೃಷ್ಣ ಅವರ ಚಿತ್ರಗಳ ಯಾತ್ರೆಯನ್ನು ನೋಡಲು, ಮತ್ತು ಅದರಿಂದ ಕೆಲವು ಪ್ರಭಾವಿ ಸನ್ನಿವೇಶಗಳನ್ನು, ನನಗೆ ಬಲು ಇಷ್ಟವಾದ ಕೆಲವು ಸ್ಪೂರ್ತಿದಾಯಕ ಅಥವಾ ಜೀವನಕ್ಕೆ ದಾರಿದೀಪವಾಗಬಲ್ಲಂಥಹ ಕೆಲವು  ಸಂಭಾಷಣೆಗಳನ್ನು ಬರೆಯಲು ಇಷ್ಟಪಡುತ್ತೇನೆ. 

ನನ್ನ ನಲ್ಮೆಯ ಓದುಗರ ಕಣ್ಣು ಮತ್ತು ಹೃದಯದ ಸಹಕಾರವಿರಲಿ... !

ಬಾಲಕೃಷ್ಣ ಅವರಿಗೆ ಜನುಮದಿನದ ಶುಭಾಶಯಗಳು. 

Sunday, November 1, 2015

ಬೋರ್ಡ್ ನಲ್ಲಿ ಕಾಣದೆ ಇರುವ - ಫಲಿತಾಂಶ (1976)

ಪಾಠ ಪ್ರವಚನಗಳು ಹಲವಾರು ಬಾರಿ ಹಳೆಯದಾಗಿಬಿಡುತ್ತದೆ, ಆದರೆ ಅವು ನಮಗೆ ದಾರಿ ತೋರಿಸಿದ ಬಗೆ ಯಾವತ್ತಿಗೂ ನೆನಪಿರುತ್ತದೆ. ಪುಟ್ಟಣ್ಣ ಕಣಗಾಲ್ ಚಿತ್ರಜಗತ್ತಿನಲ್ಲಿ ಸೃಷ್ಠಿ ಮಾಡಿದ ರತ್ನಗಳು ಹಲವಾರು.

ಒಂದೊಂದು ರತ್ನವೂ ಭಿನ್ನ ವಿಭಿನ್ನ. ಪ್ರತಿ ರತ್ನ ಮಣಿಯನ್ನು ಅರಸುತ್ತಾ ಅದನ್ನು ನೋಡಿ ಸಂಭ್ರಮಿಸುತ್ತಾ ಹೋಗುತ್ತಿದ್ದ ನನಗೆ, ಆ ಸಾಲಿನಲ್ಲಿ ಒಂದು ಅನರ್ಘ್ಯ ರತ್ನದ ಹೆಸರಿತ್ತು, ಆದರೆ ಆ ಜಾಗದಲ್ಲಿ ಖಾಲಿ ಖಾಲಿ. ಅದರ ಫಲಕ ನೋಡಿದೆ, ಅದರಲ್ಲಿ "ಫಲಿತಾಂಶ" ಎಂದಿತ್ತು.

ಯಾಕೋ ಕುತೂಹಲ ಕಾಡಿತು, ಆ ಜಾಗವನ್ನು ಮತ್ತೆ ಮತ್ತೆ ನೋಡಿದೆ ಕೆಳಕಂಡ ವಿವರಗಳು ಸಿಕ್ಕವು.

ಆ ಮಾಣಿಕ್ಯ ೧೯೭೬ ನೆ ಇಸವಿಯಲ್ಲಿ ಅನಾವರಣಗೊಂಡಿತ್ತು.

ಅರೆಗಲ್ ಬ್ರದರ್ಸ್ ತಮ್ಮ ಕಿಸೆಯಿಂದ ಹಾಕಿದ ಕಾಂಚಣ ಈ ರತ್ನವನ್ನು ಬೆಳ್ಳಿ ತೆರೆಯಲ್ಲಿ ಬೆಳಗಿಸಿತ್ತು.

ಜೈ ಜಗದೀಶ್, ಆರತಿ, ಶುಭ ಜೊತೆಯಲ್ಲಿ ಹಿಂದಿ ಚಿತ್ರ ಜಗತ್ತಿನ ಕಂಚಿನ ಕಂಠ ಅಮರೀಶ್ ಪುರಿ ಕನ್ನಡಕ್ಕೆ ಕಾಲಿಟ್ಟ ಹೆಮ್ಮೆಯ ಕ್ಷಣ ಅದು.

ಆರ್ ಏನ್ ಜಯಗೋಪಾಲ್ ರಚಿಸಿದ ಸುಂದರ ಹಾಡುಗಳನ್ನು ಎಸ್ ಪಿ ಬಾಲಸುಬ್ರಮಣ್ಯಂ ಮತ್ತು ವಾಣಿ ಜಯರಾಂ ಅಷ್ಟೇ ಸುಂದರವಾಗಿ ಜೀವ ತುಂಬಿ ಹಾಡಿದ್ದರು. ಇಂದಿಗೂ ನೆನಪಲ್ಲಿ ಉಳಿದಿರುವ ಅನೇಕ ಗೀತೆಗಳಲ್ಲಿ ಇವು ಕೂಡ ಒಂದು.

ಪುಟ್ಟಣ್ಣ ಚಿತ್ರಗಳು ಎಂದ ಮೇಲೆ ಸಂಗೀತದ ಮಾತು ಬಂದಾಗ ಮೊದಲ ಹೆಸರು ಬರುವುದು ಅವರ ನೆಚ್ಚಿನ ಗೆಳೆಯ ವಿಜಯಭಾಸ್ಕರ್. ಹೌದು ಈ ಚಿತ್ರವನ್ನು ವಿಜಯಭಾಸ್ಕರ್ ಸಂಗೀತ ಶರಧಿಯಲ್ಲಿ ಅದ್ದಿ ತೆಗೆದಿದ್ದಾರೆ.

"ಈ ಚೆಂಡಿನ ಆಟ" ಎಸ್ ಪಿ ಬಾಲಸುಬ್ರಮಣ್ಯಂ ಮತ್ತು ಪಿ ಸುಶೀಲ ಹಾಡಿದ್ದಾರೆ.



"ಲವ್ ಎಂದರೆ ಯಾರೂ ಬಿಡಿಸಿದ ಬಂಧನ" ಈ ಹಾಡು ಇಷ್ಟವಾಗುವುದು ವಾಣಿಜಯರಾಂ ಅವರ ಧ್ವನಿ ಮತ್ತು ಪಾಶ್ಚಾತ್ಯ ಸಂಗೀತದ ಅಚ್ಚಿನಲ್ಲಿ ಮೂಡಿರುವ ಹಿನ್ನೆಲೆ ಸಹ ಗಾಯಕರ ಧ್ವನಿ.


ಫಲಿತಾಂಶವನ್ನು ಕಪ್ಪು ಬಿಳುಪಿನಲ್ಲಿ ಸೆರೆ ಹಿಡಿದದ್ದು ಬಿ ಎನ್ ಹರಿದಾಸ್ ಅವರ ಕ್ಯಾಮೆರ. 

ಶ್ರೀನಿವಾಸ್ ಕುಲಕರ್ಣಿಯವರ ಕತೆಯನ್ನು ತೆರೆಗೆ ಅಳವಡಿಸಿ ಈ ರತ್ನವನ್ನು ಬೆಳ್ಳಿ ತೆರೆಯಲ್ಲಿ ನೋಡಲು ಅನುಕೂಲ ಮಾಡಿಕೊಟ್ಟವರು ಪುಟ್ಟಣ್ಣ ಕಣಗಾಲ್.

ಹುಡುಕಿ ಹುಡುಕಿ ಸುಸ್ತಾಗಿ ಅಲ್ಲೇ ಒಂದು ಮೂಲೆಯಲ್ಲಿ ಕುಳಿತಾಗ ಈ ಚಿತ್ರದ ಪುಟ್ಟ ಮಾಹಿತಿ ಫಲಕ ಅಲ್ಲಿ ನೇತು ಹಾಕಿದ್ದು ಬಿದ್ದು ಹೋಗಿತ್ತು .. :-)


ಫಲಿತಾಂಶ
ನಿರ್ದೇಶನಪುಟ್ಟಣ್ಣ ಕಣಗಾಲ್
ನಿರ್ಮಾಪಕಅರಗಲ್ ಸಹೋದರರು
ಕಥೆಶ್ರೀನಿವಾಸ ಕುಲಕರ್ಣಿ
ಪಾತ್ರವರ್ಗಜೈಜಗದೀಶ್ ಆರತಿ ವೈಶಾಲಿ,ಪದ್ಮಾಕುಮುಟಅರುಣ ಇರಾನಿ,ಶುಭಲೋಕನಾಥ್ಲೀಲಾವತಿ,ಅಮರೀಶ್ ಪುರಿ
ಸಂಗೀತವಿಜಯಭಾಸ್ಕರ್
ಛಾಯಾಗ್ರಹಣಬಿ.ಎನ್.ಹರಿದಾಸ್
ಬಿಡುಗಡೆಯಾಗಿದ್ದು೧೯೭೬
ಚಿತ್ರ ನಿರ್ಮಾಣ ಸಂಸ್ಥೆಎ.1 ಮೂವೀಟೋನ್
ಹಿನ್ನೆಲೆ ಗಾಯನವಾಣಿ ಜಯರಾಂ,ಎಸ್.ಪಿ.ಬಾಲಸುಬ್ರಹ್ಮಣ್ಯಂ


ಈ ಚಿತ್ರ ಎಲ್ಲೇ ಹುಡುಕಿದರೂ ಸಿಗದ ಕಾರಣ, ಪುಟ್ಟಣ್ಣ ಕಣಗಾಲ್ ಚಿತ್ರಸರಣಿಯಲ್ಲಿ ಕೊನೆಯಲ್ಲಿ ಬರೆಯೋಣ ಎಂದು ಇಟ್ಟುಕೊಂಡಿದ್ದೆ. ಚಿತ್ರವನ್ನು ಕೈ ಬಿಡಲು ಮನಸ್ಸು ಒಪ್ಪಲ್ಲಿಲ್ಲ. ಆದ್ದರಿಂದ ಈ ಚಿತ್ರದ ಬಗ್ಗೆ ಅಂತರ್ಜಾಲದಲ್ಲಿ ಕೈ ಎಟುಕಿದ ಮಾಹಿತಿಯನ್ನು ಓದಿ ನನಗೆ ಅನ್ನಿಸಿದ ಒಂದಷ್ಟು ಪದಗಳಲ್ಲಿ ಒಂದು ಲೇಖನ ಮಾಡಿದ್ದೇನೆ. ಈ ಚಿತ್ರವನ್ನು ಯಾವಾಗಲಾದರೂ ನೋಡಿಯೇ ನೋಡುತ್ತೇನೆ ಎನ್ನುವ ಆತ್ಮವಿಶ್ವಾಸ ನನ್ನಲ್ಲಿದೆ. ನೋಡಿದ ದಿನ ಆ ಚಿತ್ರವನ್ನು ನನ್ನ ಮೂಸೆಯಲ್ಲಿ ಅರಳಿಸಿ, ನನಗೆ ತಾಕಿದ ಅನುಭವದ ಬಗ್ಗೆ ಒಂದಷ್ಟು ಪದಗಳನ್ನು ಹರಿಯ ಬಿಡುತ್ತೇನೆ...

****

ಪುಟ್ಟಣ್ಣ ಕಣಗಾಲ್ ಗುರುಗಳೇ, ಕರುನಾಡಿನ ಭಾಷೆಯಲ್ಲಿ ನಿಮ್ಮ ದಿಗ್ದರ್ಶನದಲ್ಲಿ ಅರಳಿದ ೨೪ ಚಿತ್ರಗಳಲ್ಲಿ ೨೩ ಚಿತ್ರಗಳನ್ನು ನೋಡಿ ನನ್ನ ಅನುಭವಕ್ಕೆ ನಿಲುಕಿದ ಒಂದೆರಡು ಮಾತುಗಳನ್ನು ಹಂಚಿಕೊಂಡಿದ್ದೇನೆ. ಒಂದು ಚಿತ್ರದ ಬಗ್ಗೆ ಕೇವಲ ಲಭ್ಯವಾದ ಮಾಹಿತಿಯನ್ನು ಮಾತ್ರ ಕೊಟ್ಟಿದ್ದೇನೆ. ನಿಮ್ಮ ಚಿತ್ರಗಳನ್ನು ಬಾಲ್ಯದಿಂದಲೂ ಆನಂದಿಸಿಕೊಂಡು ಬಂದಿದ್ದ ನನಗೆ, ಆ ಚಿತ್ರಗಳ ಬಗ್ಗೆ ಬರೆಯಬೇಕೆಂಬ ಹಂಬಲ ಹುಟ್ಟಿತ್ತು. ನಾ ಏನೇ ಬರೆದಿದ್ದರೂ ಅದು ನಿಮ್ಮ ಆಶೀರ್ವಾದದ ಬಲ ನನ್ನೊಳಗೆ ಕೂತು ಬರೆಸಿದೆ. ಈ ಲೇಖನಮಾಲಿಕೆಗಳನ್ನೂ ಬರೆಯುವ ಸಾಹಸಕ್ಕೆ ಸ್ಫೂರ್ತಿ ನೀಡಿದವರು ನನ್ನ ಅಪ್ಪ (ಮಂಜುನಾಥ್), ಮತ್ತು ನನ್ನ ಸೋದರ ಮಾವ (ಶ್ರೀಕಾಂತ್ ಅಲಿಯಾಸ್ ರಾಜ),  ಇವರಿಬ್ಬರೂ ಹಲವಾರು ರೀತಿಯಲ್ಲಿ ನನಗೆ ಮಾರ್ಗದರ್ಶಿಗಳು ಮತ್ತು ಪ್ರತ್ಯಕ್ಷವಾಗಿ ಪರೋಕ್ಷವಾಗಿ ಶ್ರೀ  ನೀವು ಬರೆಯಿರಿ ಖಂಡಿತ ನೀವು ಈ ಸುಂದರ ಮಾಲೆಯನ್ನು ಪೂರ್ಣ ಮಾಡುತ್ತೀರಿ ಎಂದು ಧೈರ್ಯ ತುಂಬಿದವರು ಶ್ರೀ ಬಾಲಸುಬ್ರಮಣ್ಯ ಅರ್ಥಾತ್ ಬಾಲೂ ಸರ್, ಶ್ರೀ ಪ್ರಕಾಶ್ ಹೆಗ್ಡೆ, ಶ್ರೀಮತಿ ರೂಪ ಸತೀಶ್, ಶ್ರೀಮತಿ ನಿವೇದಿತ ಚಿರಂತನ್, ಶ್ರೀಮತಿ ಸ್ವರ್ಣ ಪಿ, ಶ್ರೀಮತಿ ಹರಿಣಿ GNT, ಶ್ರೀಮತಿ ಸುಗುಣ ಮಹೇಶ್, ಬದರಿನಾಥ್ ಪಲವಳ್ಲಿ  ಮತ್ತು ನಿಮ್ಮ ದಿಗ್ದರ್ಶನದ ಬಗ್ಗೆ ಅಭೂತಪೂರ್ವ ಮಾಹಿತಿ ಕೊಟ್ಟ ನಿಮ್ಮಯ ಆತ್ಮೀಯ ಸ್ನೇಹಿತರಾದ ಶ್ರೀ ಮೋಹನ್ ಕಂಪ್ಲಾಪುರ್ ಅಥವಾ ಕಂಪ್ಲಾಪುರದ ಮೋಹನ್  ಮತ್ತು ಅನೇಕ ಪುಟ್ಟಣ್ಣ ಕಣಗಾಲ್ ಅಭಿಮಾನಿಗಳು.

ಇಂದಿಗೂ ನನಗೆ ನೆನಪಿದೆ ನಿಮ್ಮ ಸಹೋದರ ಶ್ರೀ ನರಸಿಂಹ ಶಾಸ್ತ್ರಿಗಳು ನಿರರ್ಗಳವಾಗಿ ಒಂದೂವರೆ ತಾಸು ನಿಮ್ಮ ಬೆಳ್ಳಿಮೋಡದ ಚಿತ್ರದ ತಯಾರಿಯಿಂದ ಹಿಡಿದು ಸಿನಿಮಾ ಬಿಡುಗಡೆಯಾಗಿ ಭರ್ಜರಿ ಯಶಸ್ಸು ಕಂಡಿದ್ದನ್ನು ಅದ್ಭುತವಾಗಿ ಕಣ್ಣಿಗೆ ಕಟ್ಟಿದಂತೆ ವಿವರಿಸಿದ ರೀತಿ. ನಿಮ್ಮ ಮತ್ತು ನಿಮ್ಮ ಸಹೋದರರ ಚರಣ ಕಮಲಗಳಿಗೆ ಈ ಲೇಖನ ಅರ್ಪಿತ.

ಇದು ಖಂಡಿತ ನಾ ಬರೆದಿದ್ದಲ್ಲ, ನನ್ನೊಳಗೆ ಕೂತು, ನನಗೆ ಪ್ರೇರಣೆ ನೀಡಿ ನನ್ನ ಕೈಯಿಂದ ಬರೆಸಿದವರು.  ನೀವೇ ಹೇಳುವಂತೆ ಈ ಲೇಖನ ಮಾಲಿಕೆಯ ದಿಗ್ದರ್ಶನ ಜಗನ್ಮಾತೆ.

ಧನ್ಯವಾದಗಳು ಗುರುಗಳೇ ಮತ್ತು ಆರಂಭದಿಂದಲೂ ಪ್ರೋತ್ಸಾಹಿಸಿದ ಎಲ್ಲಾ ಓದುಗರಿಗೆ ನನ್ನ ಶಿರಸಾ ಪ್ರಣಾಮಿ.. !