Sunday, April 24, 2016

ಈ (ಕೀಲಿ ಮಣೆ) ಕಂಗಳು ಮಾಡಿದ ಪುಣ್ಯವೋ!!!

ವಿಶ್ವಾಮಿತ್ರರು ಮತ್ತೆ ಸುದ್ದಿಯಾದರು.  ಮೇನಕೆಯಿಂದ ತಪೋಭಂಗವಾದ ಮೇಲೆ ಮತ್ತೊಮ್ಮೆ ತಪಸ್ಸಿಗೆ ಕೂರುವ ಮುನ್ನ, ಯಾಕೋ ಸ್ವರ್ಗಲೋಕಕ್ಕೆ ಹೋಗಿಬರೋಣ ಎಂದುಕೊಂಡು ಅಲ್ಲಿಗೆ ಬಂದರು.

ಯಥಾ ಪ್ರಕಾರ ಇಂದ್ರನ ಆಸ್ಥಾನದಲ್ಲಿ ಸಭೆ ನಡೆಯುತ್ತಿತ್ತು, ನೃತ್ಯ ಗಾಯನದ ನಂತರ, ವಸಿಷ್ಠರು ಇಂದು  ಒಂದು ವಿಚಾರ ಚರ್ಚೆ ಮಾಡೋಣ. ಇಂದಿನ ವಿಷಯ ಕಲಾವಿದರು ಮತ್ತು ಅವರ ಅಭಿಮಾನಿಗಳು.

ವಿಶ್ವಾಮಿತ್ರ ಇಂಥಹ ಸುದ್ದಿಗಳಿಗಾಗಿಯೇ ಕಾಯುತ್ತಿರುವವರು.. ಕಮಂಡಲದ ತೀರ್ಥವನ್ನು ಪರೀಕ್ಷಿಸಿದರು. ಸಾಕಷ್ಟು ಇತ್ತು.

ಚರ್ಚೆ ಶುರುವಾಯಿತು.. ತಾರಕಕ್ಕೆ ಹೋಯಿತು.. ಹೊಡೆದಾಟ ಬಡಿದಾಟ ಕೈ ಮೀರಿತ್ತು.. ಯಾರೊಬ್ಬರು ಯಾರ ಮಾತನ್ನು ಕೇಳುವ ಸ್ಥಿತಿಯಲ್ಲಿ ಇರಲಿಲ್ಲ.. ಅವರಿಗೆ ಬೇಕಿದ್ದು ತಮ್ಮ ಮಾತನ್ನು ಪುಷ್ಠಿಕರಿಸುವುದಷ್ಟೇ ಆಗಿತ್ತು. ಯಾರಿಗೂ ನಿಜಾಂಶ ಬೇಕಿರಲಿಲ್ಲವಾಗಿತ್ತು.

ವಸಿಷ್ಠರಿಗೆ ಈ ತರಹ ವಾದ ವಾಗ್ವಾದಗಳು ಹೊಸತೆನಲ್ಲ.. ಸುಮ್ಮನೆ ಎಲ್ಲರ ಮಾತನ್ನು ಕೇಳುತ್ತಾ ಕೂತಿದ್ದರು. ಇಂದ್ರನಿಗೆ ಸಾಕಾಗಿ ಹೋಗಿತ್ತು... ಒಂದು ದಿನ ಸಂಭ್ರಮದಲ್ಲಿ ಕಳೆಯೋಣ ಅಂದರೆ ಇವರು ಒಂದು ವಿಷಯವನ್ನು ಕಡೆದು ಕಡೆದು ಆನಂದವನ್ನು ಹಾಳು ಮಾಡುತ್ತಿದ್ದಾರೆ .. ಮನದಲ್ಲಿಯೇ ಜಪ ಮಾಡಿದ.

ಮಂಜಿನ ಗಾಳಿ ಎಲ್ಲರ ಮೊಗಕ್ಕೆ ತಾಗಿ, ಬಿಸಿಯಾಗಿದ್ದ ಮನಸ್ಸು ದೇಹ ಹಾಯ್ ಎನ್ನುವಂತೆ ಮಾಡಿತು.

"ಅಭಿಮಾನಿ ದೇವರುಗಳಿಗೆ ನಮಸ್ಕಾರ.. ಯಾಕೆ ಇಷ್ಟೊಂದು ಬಿಸಿ ಬಿಸಿ ಚರ್ಚೆ... " ಶ್ವೇತ ವಸ್ತ್ರದಾರಿಯ ಮಾತು ಕೇಳಿ ಎಲ್ಲರೂ ಮಂತ್ರಕ್ಕೆ ಒಳಗಾದವರಂತೆ ತಣ್ಣಗಾದರು.

ಅಭಿಮಾನಿ ದೇವರುಗಳೇ.. ನಿಮ್ಮ ಮನೆಯ ಮಗುವನ್ನು ನೀವೇ ಮುದ್ದು ಮಾಡಿ, ಅದಕ್ಕೆ ಬೇಕಾದ ಪೋಷಾಕುಗಳನ್ನು ಹಾಕಿದಿರಿ. ಒಮ್ಮೆ ಕೃಷ್ಣದೇವರಾಯ ಎಂದಿರಿ, ಇನ್ನೊಮ್ಮೆ ಮಯೂರ ಎಂದಿರಿ, ಕುಂಬಾರ ಎಂದಿರಿ, ಜೇಮ್ಸ್ ಬಾಂಡ್, ದಾಸರು ಎಂದರಿ... ನಿಮ್ಮ ಅಭಿಮಾನಕ್ಕೆ ನಾ ಚಿರಋಣಿ. ನಿಮ್ಮ ಮಗು ಬಗ್ಗೆ ನೀವು ಹೆಮ್ಮೆ ಪಡುವುದು ನಿಮ್ಮ ಪ್ರೀತಿಯ ಸಂಕೇತ. ನೀವು ಪ್ರೀತಿ ತೋರಿಸಿದಿರಿ, ಅದು ನಾ ಈ ಮಟ್ಟಿಗೆ ಬೆಳೆಯಲು ಅನುಕೂಲ ಮಾಡಿಕೊಟ್ಟಿತು. ಚಂದ್ರ ಯಾವಾಗಲೂ ಪೂರ್ಣ ನಾಗಿಯೆ ಇರುವುದಿಲ್ಲ ಅಲ್ಲವೇ, ಹಾಗೆಯೇ ಶುಕ್ಲ ಪಕ್ಷದ ಚಂದ್ರ ಗೆರೆಯಿಂದ ಪೂರ್ಣ ಸ್ವರೂಪ ತೆಗೆದುಕೊಂಡ ಹಾಗೆ, ನಿಮ್ಮ ಅಭಿಮಾನದ ಬೆಳಕಲ್ಲಿ, ಈ ಸಣ್ಣ ಬಿಂಧು ಅಥವಾ ಈ ಸಣ್ಣ ಕಣ ಪೂರ್ಣ ಚಂದ್ರವಾಯಿತು. ಅದರ ಬೆಳಕು ಕರುನಾಡಿನ ಭುವನೇಶ್ವರಿಯ ಮಡಿಲು ಸೇರಿ ಇನ್ನಷ್ಟು ಹೊಳಪು ಖಂಡಿತು.

ನನ್ನನ್ನು ಅಣ್ಣ, ಅಣ್ಣಾವ್ರು, ಅಪ್ಪಾವ್ರು, ಅಪ್ಪಾಜಿ, ಸರ್ ಹೀಗೆ ನೂರಾರು ಹೆಸರಿಂದ, ಅಭಿಮಾನದ ಭಾವದಿಂದ ಗುರುತಿಸಿದಿರಿ. ಒಂದೇ ಅಕ್ಕಿಯಿಂದ ತಯಾರಾದ ಖಾದ್ಯ, ಬೇರೆ ಬೇರೆ ಹೆಸರು ಪಡೆದುಕೊಳ್ಳುತ್ತದೆ, ಬರಿ ಅನ್ನವಾಗುತ್ತದೆ, ಚಿತ್ರಾನ್ನ ಆಗುತ್ತದೆ, ಬಿಸಿಬೇಳೆ ಬಾತ್ ಆಗುತ್ತದೆ, ಪುಳಿಯೋಗರೆ, ಬಿರ್ಯಾನಿ ಹೀಗೆ ಅನೇಕ ಹೆಸರು ಬಂದು ಬಿಡುತ್ತದೆ, ಅದರಂತೆ ನೀವು ಏನೇ ಕರೆದರೂ ಅಥವಾ ನನ್ನನ್ನು ಹೇಗೆ ಗೌರವಿಸಿದರೂ ಅದು ಮೂಲ ಸ್ವರೂಪದಲ್ಲಿಯೇ ಇರುವ ಅಕ್ಕಿಯಂತೆ ಬೆಂದು ಬಗೆ ಬಗೆಯ ಭಕ್ಷ್ಯವಾಗುವಂತೆ, ನಿಮ್ಮ ಅಭಿಮಾನದ ಹೊಳೆಯಲ್ಲಿ ಮಿಂದು ನಾ ನಿಮ್ಮ ರಾಜಕುಮಾರನಾಗಿದ್ದೇನೆ.

ಒಂದು ಮಗುವಿಗೆ ಅಣ್ಣ ಎಂದು ಹೆಸರಿಟ್ಟರೆ, ಆ ಮಗು ಚಿಕ್ಕದಾಗಿದ್ದಾಗಲೂ ಅಣ್ಣನೆ, ವಯಸ್ಸಿಗೆ ಬಂದಾಗಲೂ ಅಣ್ಣನೆ, ಮುಪ್ಪಿಗೆ ಬಂದಾಗಲೂ ಅಣ್ಣನೆ, ಇದಕ್ಕೆ ಅಪವಾದವೆ ಇಲ್ಲ ಅಲ್ಲವೇ. ಅದು ಹೆಸರಿನ ತಪ್ಪಲ್ಲ, ಅದು ಆ ಮಗುವನ್ನು ಆದರಿಸುವ ಪರಿ.

ನಾನು ಕರುನಾಡಿನ, ಕನ್ನಡ ಭಾಷ ಚಿತ್ರರಂಗಕ್ಕೆ ಅಣ್ಣ ಎನಿಸಿದರೂ, ನನಗಿಂತ ಅಪಾರ ಕೀರ್ತಿ ಪಡೆದ, ನನಗಿಂತಲೂ ಪ್ರತಿಭಾವಂತರನ್ನು ಕೂಡ ಅಣ್ಣ ಎಂದರೆ ಕರೆಯುತ್ತಿದ್ದೀರಿ. ಶಂಕ್ರಣ್ಣ, ಪುಟ್ಟಣ್ಣ, ದೊಡ್ಡಣ್ಣ, ಅಂಬಿಯಣ್ಣ, ವಿಷ್ಣುದಾದ ಹೀಗೆ ಕಲಾವಿದರು ನಮಗೆ ಹೇಗೆ ಹತ್ತಿರವಾಗುತ್ತಾರೆಯೋ ಹಾಗೆ ಅವರು ಅಣ್ಣ, ಅಣ್ಣಾವ್ರು, ಅಪ್ಪಾವ್ರು, ಅಪ್ಪಾಜಿ ಹೀಗೆ ರೂಪ ಪಡೆದುಕೊಳ್ಳುತ್ತಾರೆ. ಪಕ್ಕದ ಚಿತ್ರರಂಗದಲ್ಲಿ ಎಮ್. ಜಿ ಆರ್, ಶಿವಾಜಿ ಗಣೇಶನ್, ರಜನಿಕಾಂತ್, ಕಮಲ್, ಹಿಂದಿಯ ಬಚ್ಚನ್ ಅವರನ್ನು ತಮ್ಮ ಕುಟುಂಬದ ಸದಸ್ಯರಿಗಿಂತ ತುಸು ಹೆಚ್ಚಾಗಿಯೇ ಪ್ರೀತಿಸುತ್ತಾರೆ, ಅಂದ ಮಾತ್ರಕ್ಕೆ ತಮ್ಮ ಮಕ್ಕಳನ್ನು ಬೀದಿಗೆ ಬಿಡೋಲ್ಲ.

ಕಲಾಭಿಮಾನಿಗಳು ನನ್ನ ಹಾಗೆ ಕರೆದರೆ ಅದು ಅವರ ಮಗುವನ್ನು "ಚಿನ್ನಾ, ಮುದ್ದು, ಪುಟ್ಟಿ" ಎಂದು ಕರೆಯುವ ಹಾಗಿರುತ್ತೆಯೇ ಹೊರತು ಅದಕ್ಕೆ ಪದ ಅರ್ಥ ಹುಡುಕಿ ಗೊಂದಲ ಮಾಡಿಕೊಳ್ಳಬಾರದು.

ಇಂದ್ರನ ಸಭೆಯಲ್ಲಿ.. ಸೂಜಿ ಬಿದ್ದರೂ ಕೇಳಿಸುವಂಥಹ ನಿಶ್ಯಬ್ಧ.. ವಸಿಷ್ಠರಿಗೆ ಜೋರಾಗಿ ಚಪ್ಪಾಳೆ ಹಾಕಿ "ಅಣ್ಣಾವ್ರಿಗೆ, ಮತ್ತು ಮುತ್ತಿನಂಥಹ ಮಾತುಗಳಿಗೆ ಜೈ" ಅನ್ನಬೇಕು ಅನ್ನಿಸಿತು, ಆದರೆ ಸ್ವಲ್ಪ ಹೊತ್ತು ಸುಮ್ಮನಿದ್ದರು.

ಅಣ್ಣಾವ್ರು ಹೇಳಿದ್ದು ಒಬ್ಬೊಬ್ಬರ ಮನಸ್ಸಿಗೆ ಇಳಿಯುತ್ತಾ ಹೋಯಿತು.. ಇಂದ್ರ ಸಭೆಯೇ ಕಿತ್ತು ಹೋಗುವಷ್ಟು ಜೋರಾದ ಚಪ್ಪಾಳೆ, ಜೊತೆಯಲ್ಲಿ "ಅಣ್ಣಾವ್ರಿಗೆ ಜೈ" ಎಂಬ ಜೈಕಾರ..

ಪಕ್ಕದಲ್ಲಿಯೇ ದೈವ ಧೂತ.. ಅಣ್ಣಾವ್ರೆ ಯಾಕೆ ಕಣ್ಣೀರು ಎಂದು ಕೇಳಿದ

ಅಣ್ಣಾವ್ರು "ಇದು ಕಣ್ಣೀರಲ್ಲ ಪನ್ನೀರು ಪನ್ನೀರು"... ಚಿನ್ನದಂಥ ಅಭಿಮಾನಿಗಳು ಇರುವಾಗ ಕಣ್ಣೀರೆತೆಕೆ, ಮನಸನು ಅರಿತು ನೆಡೆಯುತಲಿರಲು ಚಿಂತೆಯ ಮಾತೇಕೆ.. ಅಭಿಮಾನಿಗಳು  ನಗುತಿರಲು ನಮ್ಮೀ ಕರುನಾಡಿಗೆ ಆ ಸ್ವರ್ಗವೇ ಜಾರಿದಂತೆ.. "

ಇಷ್ಟು ಕೇಳಿ, ಆ ಧೂತ ಅಣ್ಣಾವ್ರ ಕಾಲಿಗೆ ಎರಗುತ್ತಾ "ಅಣ್ಣಾವ್ರಿಗೆ ಜೈ ಅಣ್ಣಾವ್ರಿಗೆ ಜೈ.. ಅಣ್ಣಾವ್ರಿಗೆ ಹುಟ್ಟು ಹಬ್ಬದ ಶುಭಾಶಯಗಳು.. ." ಎಂದು ಜೈ ಕಾರ ಹಾಕಿದ..

ಸಭೆಯಲ್ಲಿದ್ದ ಎಲ್ಲರೂ ಎದ್ದು ಕರತಾಡನ ಮಾಡಿ.. ಒಬ್ಬರ ಮುಖ ಒಬ್ಬರು ನೋಡಿಕೊಂಡರು.. ಎಲ್ಲರ ಮನಸ್ಸು, ಮೊಗ ತೊಳೆದ ಪಾತ್ರೆಯಂತೆ ಲಕ ಲಕ ಹೊಳೆಯುತ್ತಿತ್ತು..

ಆ ಕ್ಷಣದಲ್ಲಿ ಗಾಳಿಯಲ್ಲಿ ತೇಲಿಬಂದ ಒಂದು ಕರ ಪತ್ರದಲ್ಲಿ ಮೂಡಿ ಬಂದ ದೃಶ್ಯ ನೋಡಿ ಎಲ್ಲರೂ ಹೋ ಹೋ ಅಣ್ಣಾವ್ರಿಗೆ ಜೈ ಎಂದು ಕೂಗಿ

ಅಣ್ಣಾವ್ರೆ ನಿಮ್ಮ ಜೊತೆಯಲ್ಲಿಯೇ ಈ ಚಿತ್ರವನ್ನು ನೋಡೋಣ ನಡೆಯಿರಿ ಎಂದು ರಥವನ್ನು ಹತ್ತಿಸಿದರು...
ಇಂದ್ರಸಭೆಯ ಪಕ್ಕದಲ್ಲಿಯೇ ಇದ್ದ ಮಲ್ಟಿಪ್ಲೆಕ್ಸ್ ನಲ್ಲಿ ಆಗಲೇ ಶುರುವಾಗಿತ್ತು .. ಎಲ್ಲರೂ ದಡ ದಡ ಒಳಗೆ ನುಗ್ಗಿದರು.. ಆಗ ಹಾಡು ಬರುತ್ತಿತ್ತು..




"ನಾವಾಡುವ ನುಡಿಯೇ ಕನ್ನಡ ನುಡಿ..
ನಾವಿರುವ ತಾಣವೇ ಗಂಧದ ಗುಡಿ ಅಂದದ ಗುಡಿ ಚಂದದ ಗುಡಿ ಶ್ರೀ ಗಂಧದ ಗುಡಿ"

ಅಣ್ಣಾವ್ರೆ ನನ್ನ ಕೆಲವು ಗೊಂದಲಗಳಿಗೆ ನಿಮ್ಮ ಮಾತುಗಳು ಬೇಕಿತ್ತು.. ನೀವು ಹೀಗೆಯೇ ಉತ್ತರಿಸಬಹುದು ಎಂದು ಅಂದುಕೊಂಡು ಈ ಲೇಖನವನ್ನು ನಿಮ್ಮ ಹುಟ್ಟು ಹಬ್ಬಕ್ಕೆ ಸಮರ್ಪಿಸುತ್ತಿದ್ದೇನೆ.

ಕರುನಾಡು ಕಂಡ ಅದ್ಭುತ ಕಲಾವಿದ ನೀವು.. ನಿಮಗೆ ಹುಟ್ಟು ಹಬ್ಬದ ಶುಭ ಕೋರುವುದು ನಾ ಮಾಡಿದ ಪುಣ್ಯದ ಫಲ ಎನ್ನಬಹುದು..

ನನ್ನ ಮನಸ್ಸು ಹೇಳುತ್ತಿದೆ "ಇದು ಯಾರ ತಪಸಿನ ಫಲವೋ.. ಈ (ಕೀಲಿ ಮಣೆ) ಕಂಗಳು ಮಾಡಿದ ಪುಣ್ಯವೋ"

ಅಣ್ಣಾವ್ರೆ ಹುಟ್ಟು ಹಬ್ಬದ ಶುಭಾಶಯಗಳು!!!

Tuesday, April 12, 2016

ಹಾಡುಗಳಲ್ಲಿ ನುಗ್ಗಿ ಬರುವ ಭಾವ ಲೋಕದಲ್ಲಿ ಅಣ್ಣಾವ್ರು

ಅಣ್ಣಾವ್ರ  ಚಿತ್ರಗಳಲ್ಲಿ ಹಾಡುಗಳು ಎಂದಿಗೂ ಜೀವ ತುಂಬಿ ಹರಿಯುವ ನದಿಯ ತರಹ, ಬೆಳದಿಂಗಳಲ್ಲಿ ಬರುವ ಮಳೆಯ  ಹಾಗೆ, ಚೈತ್ರ ಮಾಸದಲ್ಲಿ ಅರಳುವ ಹೂಗಳ ಹಾಗೆ ಇರುತ್ತಿದ್ದವು.. ಅದರಲ್ಲೂ ಅಣ್ಣಾವ್ರೆ ಹಾಡಲು ಶುರು ಮಾಡಿದ ಮೇಲೆ, ಅವರ ಎಲ್ಲಾ ಚಿತ್ರಗಳಲ್ಲಿ ಹಾಡುಗಳು ವಿಜೃಂಬಿಸಿದ್ದು ಒಂದು ದಂತ ಕಥೆ ಎನ್ನಬಹುದು.

ಅಣ್ಣಾವ್ರ ಗಾಯನದಲ್ಲಿ ನಾ ಮೆಚ್ಚುವ ಅನೇಕ ಅಂಶಗಳಲ್ಲಿ ಒಂದು, ಅವರು ಹಾಡಿನ ಮಧ್ಯೆ ಆಡುವ ಮಾತುಗಳು, ಇಲ್ಲವೇ ಪುಟ್ಟ ಪುಟ್ಟ ಧ್ವನಿಗಳು, ಸಂಗತಿಗಳು..

ಅವರ ನೂರಾರು ಹಾಡುಗಳ ಮಧ್ಯೆ ನನಗೆ ಇಷ್ಟವಾಗುವುದು, ಅವರು ಯುಗಳ ಗೀತೆಗಳಲ್ಲಿ, ಮಧ್ಯೆ ನುಗ್ಗುವ ಪರಿ. ಸಿನೆಮಾ ಟಾಕೀಸುಗಳಲ್ಲಿ ಅಣ್ಣಾವ್ರು ಯುಗಳ ಗೀತೆಯ ಮಧ್ಯೆ ಅಥವಾ ನಾಯಕಿ ಒಬ್ಬಳೇ ಹಾಡುತ್ತಿದ್ದಾಗ ನುಗ್ಗಿ ಬರುವ ಪರಿ, ಅದಕ್ಕೆ ಅವರ ಅಭಿಮಾನಿ ದೇವರುಗಳ ಸಂಭ್ರಮ ಅದರ ಬಗ್ಗೆ ಬರೆಯೋಣ ಅನ್ನಿಸಿತು. ಅದಕ್ಕಾಗಿ ಈ ಲೇಖನ.

ಈ ಹಾಡುಗಳಲ್ಲಿ ಸಾಂತ್ವನ ಹೇಳುವ ಹಾಡುಗಳು ಇವೆ, ಪ್ರಣಯವೂ ಇದೆ, ಗುಪ್ತಗಾಮಿನಿಯ ಹಾಗೆ ಹರಿಯುವ ಭಾವ ಪ್ರಶಾಂತತೆ ಇದೆ, ಹೀಗೆ ಹಲವಾರು ರಸಗಳ ಸಂಗಮ.. ಅಣ್ಣಾವ್ರು ಹಾಡುಗಳಲ್ಲಿ ಮಧ್ಯೆ ಎಂಟ್ರಿ ಆಗುವ ದೃಶ್ಯಗಳು.

*****

ನಾನೊಬ್ಬ ಕಳ್ಳ ಚಿತ್ರದಲ್ಲಿ, ಒಂದು ಬಗೆಯ ವಿಷಾದ ತುಂಬಿರುತ್ತದೆ, ಆಗ ಶುರುವಾಗುತ್ತದೆ "ಆಸೆಯು ಕೈಗೂಡಿತು". 
ನಾಯಕಿ ಲಕ್ಷ್ಮಿ ರಾಜ್ ರನ್ನು ಸಂತೈಸುತ್ತಲೇ ಶುರುವಾಗುವ ಹಾಡು, ಅಣ್ಣಾವ್ರು ಶುರು ಮಾಡುವ "ಕಂದ ನೊಂದು ಅತ್ತಾಗ, ಯಾರೂ ಕಾಣದಾದಾಗ ಸಂತೈಸಲೆಂದು ಓಡೋಡಿ ಬರುವ ತಾಯಂತೆ ನೀನು ಬಂದೆ.. ಗಾಳಿ ಬೀಸಿ ಬಂದಾಗ, ಜ್ಯೋತಿ ಹೆದರಿ ಹೋದಾಗ, ಆ ದೀಪದಲ್ಲಿ ನೀ ಜೀವವಾಗಿ ಹೊರಾಡಲೆಂದು ಬಂದೆ.. ಉಸಿರಾಡುವಾಸೆ ತಂದೆ"
ಈ ಪದಗಳಲ್ಲಿ  ಪ್ರೇಯಸಿಯ ಸಾಮಿಪ್ಯವನ್ನು, ನೊಂದ ಮಗುವನ್ನು ತಾಯಿ ರಮಿಸುವ ಹಾಗೆ ಹೋಲಿಸಿದ್ದಾರೆ. ಅದ್ಭುತ ಹಾಡು, ಲಕ್ಷ್ಮಿ ಹಾಗೂ ಅಣ್ಣಾವ್ರು ಅದ್ಭುತ ಅಭಿನಯ. ಚಿ ಉದಯಶಂಕರ್ ಜೀವ ತುಂಬಿ ಸಾಹಿತ್ಯ ಕೊಟ್ಟರೆ, ಅದಕ್ಕೆ ಬಂಗಾರದ ಚೌಕಟ್ಟು ಸಿಕ್ಕಿದ್ದು ರಾಜನ್ ನಾಗೇಂದ್ರ ಅವರ ಸುಲಲಿತ ಸಂಗೀತ. 



ಕೆರಳಿದ ಸಿಂಹ, ರಾಜ್ ಸಾಹಸಮಯ ಚಿತ್ರಗಳಲ್ಲಿ ಒಂದು. ಸಂದೇಹ, ಮತ್ತು ಪರಿಸ್ಥಿತಿಯ ಒತ್ತಡ, ನಾಯಕಿ ಮತ್ತು ನಾಯಕನನ್ನು ದೂರ ಮಾಡಿರುತ್ತದೆ. ಹೇಗಿದ್ದೆವು ಹೇಗಾದೆವು ಎಂದು ಯೋಚಿಸುತ್ತಾ ಕೂತಾಗ ಬರುವ " ಏನೋ ಮೋಹ ಏಕೋ ದಾಹ". ಅಣ್ಣಾವ್ರ ಚಿತ್ರಗಳಲ್ಲಿ ಈ ಹಾಡು ತುಂಬಾ ವಿಭಿನ್ನ ಅನ್ನಿಸುವ ಕಾರಣ ಅದರ ಸಾಹಿತ್ಯ ಮತ್ತು ಸಂಗೀತ. ಆಂಗ್ಲ ಶೈಲಿಯಲ್ಲಿ ಸತ್ಯಂ ಅವರು ಸಂಗೀತ ಸಂಯೋಜನೆ ಮಾಡಿದ್ದರೆ, ಪ್ರೇಮಿಗಳ ವಿರಹವನ್ನು ಪದಗಳಲ್ಲಿ ಕಟ್ಟಿ ಕೊಟ್ಟದ್ದು ಚಿ ಉದಯಶಂಕರ್. ಈ ಹಾಡಿನಲ್ಲಿ ಸರಿತಾ ಮನಮೋಹಕವಾಗಿ ಕಾಣುತ್ತಾರೆ, ಉದ್ದ ಕೂದಲು, ಕಣ್ಣುಗಳು ಭಾವನೆಗಳಿಂದ ಸರಿತಾ ಮುದ್ದಾಗಿಕಂಡರೆ , ಅಣ್ಣಾವ್ರು ಅಚ್ಚುಕಟ್ಟಾದಮೈಕಟ್ಟು , ವಸ್ತ್ರ ವಿನ್ಯಾಸ, ಬಲಗೈಗೆ ಚೈನ್ ವಾಚ್, ತುಂಬಾ ವಿಭಿನಾವಾಗಿ ಕಾಣುತ್ತಾರೆ. ವಾಣಿ ಜಯರಾಂ ಅವರ ಧ್ವನಿಯಲ್ಲಿ ಶುರುಮಾಡುವ ಹಾಡಿಗೆ, "ಏನೋ ಮೋಹ" ಎಂದು ಕೆಳಗಿಂದ ಮೇಲೆ ಎದ್ದು ನಿಲ್ಲುವ ಅಣ್ಣಾವ್ರ ಧ್ವನಿ ಮತ್ತು ಮೈಕಟ್ಟಿಗೆ ಟಾಕೀಸಿನಲ್ಲಿ ಶಿಳ್ಳೆಗಳ ಮೇಲೆ ಶಿಳ್ಳೆ.  ಒಂದು ಮಾದಕತೆ ತುಂಬಿರುವ ಪ್ರಣಯ ಗೀತೆಯನ್ನು ಅಶ್ಲೀಲವಾಗದಂತೆ ಚಿತ್ರಿಕರಿಸಿರುವುದು ಈ ಹಾಡಿನ ವಿಶೇಷ. 


ಹೊಸ ಬೆಳಕು ಚಿತ್ರದಲ್ಲಿ ತನಗೆ ಅರಿವಿಲ್ಲದ ಪ್ರೇಮಿಸುವ ನಾಯಕ ಒಂದು ಕಡೆ, ಪ್ರೀತಿ ತುಂಬಿದ್ದರೂ ತೋರಿಸಿಕೊಳ್ಳದೇ ಮೂಕ ರೋದನೆ ಪಡುವ ನಾಯಕಿ ಸರಿತಾ ಇನ್ನೊಂದು ಕಡೆ. ತನಗೆ ಇಚ್ಚೆ ಇರದ ಹುಡುಗನ ಜೊತೆ ಮೈಸೂರಿನ ಬೃಂದಾವನಕ್ಕೆ ಬರುವ ನಾಯಕಿ ಸರಿತಾ, ಆ ಹುಡುಗ ಹಾಡು ಬೇಕು ಹೇಳಿ.. ಎಂದು ಬಲವಂತ ಮಾಡಿದಾಗ "ರವಿ ನೀನು ಆಗಸದಿಂದ ಮರೆಯಾಗಿ ಹೋಗದೆ ನಿಲ್ಲು" ಹಾಡಿನಲ್ಲಿ ತನ್ನ ಎಲ್ಲಾ ಭಾವನೆಗಳನ್ನು ದಿನಕರನಿಗೆ ಹೋಲಿಸಿ ತನ್ನ ನಾಯಕ "ರವಿ" ಪಾತ್ರಕ್ಕೆ ಒಪ್ಪುವ ಹಾಗೆ ಹಾಡುತ್ತಾ ಹೋಗುತ್ತಾಳೆ. ಎಸ್ ಜಾನಕಿ ಕಂಠ ಸಿರಿಯಲ್ಲಿ ಚಿ ಉದಯಶಂಕರ್ ಅವರ ಸಾಹಿತ್ಯ, ಎಂ ರಂಗರಾವ್ ಅವರಿಂದ ಬಂದ ಸಂಗೀತಕ್ಕೆ ರಾಜ್ ಮಧ್ಯೆ ನುಗ್ಗುತ್ತಾರೆ ಒಂದು ದೋಣಿಯಲ್ಲಿ "ಆಅ ಅಹ ಹಾ ಆಹಾ ಲ ಲಾ".. ಕಿವಿ ಕಿತ್ತುಹೋಗುವ ಹಾಗೆ ಶಿಳ್ಳೆ.  ನಾಯಕಿ ಯ ಭಾವಕ್ಕೆ ಭಾವ ಜೋಡಿಸಿ ಹೆಜ್ಜೆಗೆ ಹೆಜ್ಜೆ ಹಾಕಿ ನಲಿಯುವ ಈ ಹಾಡು, ನಾಯಕಿಗೆ ನಾ ಇದ್ದೇನೆ ನಿನ್ನ ಜೊತೆ ಎನ್ನುವ ಬಂಧವನ್ನು ದಯಪಾಲಿಸುತ್ತದೆ. 


ಅಣ್ಣ ತಂಗಿಯರ ಅಪ್ಪ ಅಮ್ಮನ ಬಾಂಧ್ಯವದ ಚಿತ್ರ "ಸಮಯದ ಗೊಂಬೆ", ವಿಧಿಯ ಆಟದಲ್ಲಿ ಹೇಗೆ ಮೂಕ ಪ್ರೇಕ್ಷಕರಾಗಿ ನಿಲ್ಲಬೇಕಾಗುತ್ತದೆ ಎನ್ನುವ ಸಂದೇಶ ಹೊತ್ತ ಚಿತ್ರದಲ್ಲಿ, ಹೇಗೂ ಪರಿಸ್ಥಿತಿಯ ಹಿಡಿತದಲ್ಲಿ ತನ್ನ ತಂಗಿ ಸಿಗುತ್ತಾಳೆ. ತಂಗಿ ಮಗುವಿನ ಹುಟ್ಟು ಹಬ್ಬದ ಸಂಭ್ರಮದಲ್ಲಿ ಆ ಮನೆಯಲ್ಲಿ ಚಾಲಕನ ಕೆಲಸ ನಿಭಾಯಿಸುವ ನಾಯಕ, ತಾನೇ ನಿನ್ನ ಅಣ್ಣ ಎಂದು ಹೇಳಿಕೊಳ್ಳಲಾಗದೆ ತೊಳಲಾಡುತ್ತಾ ನಿಂತಿರುವಾಗ.. ತಂಗಿ "ಕೋಗಿಲೆ ಹಾಡಿದೆ ಕೇಳಿದೆಯ" ಎಸ್ ಜಾನಕಿಯ ಮಂಜಿನ ಧ್ವನಿಯಲ್ಲಿ ಮೂಡಿಬರುತ್ತದೆ. ನಾಯಕನಿಗೆ ತನ್ನ ಬಾಲ್ಯದ ನೆನಪಾಗುತ್ತದೆ, ಮರಗುತ್ತಾ ಆ ಹಾಡನ್ನು ಹಾಗೆ ಕೇಳುತ್ತಾ ಕನಸಿನ ಲೋಕಕ್ಕೆ ಜಾರುತ್ತಾನೆ. ಕಾರಿನಿಂದ ಇಳಿಯುವ ದೃಶ್ಯದಲ್ಲಿ ಟಾಕೀಸಿನಲ್ಲಿ ಕೂಗು, ಶಿಳ್ಳೆ, ಚಪ್ಪಾಳೆಯ ಸುರಿಮಳೆ. ಹಾಡುತ್ತಾ ಬರುವ ಅಣ್ಣಾವ್ರು, ಅದ್ಭುತವಾಗಿ ಹಾಡಿ, ಚಿ ಉದಯಶಂಕರ್ ಅವರ ಸಾಹಿತ್ಯಕ್ಕೆ ಮೆರುಗು ನೀಡುತ್ತಲೇ, ರಾಜನ್ ನಾಗೇಂದ್ರ ಅವರ ಸಂಗೀತ ಜೊತೆಯಲ್ಲಿ ತಾವು ಮಂಜಿನ ಹೂವಾಗುತ್ತಾರೆ. 


ಹೀಗೆ ನಾ ಮೇಲೆ ಉಲ್ಲೇಖ ಮಾಡಿದ್ದು ಕೆಲವು ಹಾಡುಗಳನ್ನು ಮಾತ್ರ.. ಈ ತರಹ ಹಾಡುಗಳು ರಾಜ್ ಮತ್ತು ಪಿ ಬಿ ಎಸ್ ಜೋಡಿಯಲ್ಲಿ ಇನ್ನಷ್ಟು ಬೇಕಾದಷ್ಟು ಇವೆ. 

ಇಂದು ಅಣ್ಣಾವ್ರು  ಚಿತ್ರಗಳಲ್ಲಿ ಮಾತ್ರ ಅವರನ್ನು ಬಿಟ್ಟು ಆನಂದ ಲೋಕವನ್ನು ಸೇರಿದ ದಿನ. ಅವರ ನೆನಪು ಅಮರ ಮಧುರ. ಎಂದಿಗೂ ಅಳಿಸಲಾರದ ಬಂಧ ಅಣ್ಣಾವ್ರು, ಕರುನಾಡು ಮತ್ತು ಅವರ ಅದ್ಭುತ ಚಿತ್ರಗಳು.. 

ಅಣ್ಣಾವ್ರಿಗೆ ಒಂದು ಜೈ ಹೇಳುತ್ತಾ, ಅವರ ಸುಂದರ ಆತ್ಮಕ್ಕೆ ಒಂದು ನಮನ!!!