Saturday, December 31, 2016

ಮನದ ಅರಿಯನ್ನು ಹರಿಸುವ ಹರಿ ಭಕ್ತ (1956) (ಅಣ್ಣಾವ್ರ ಚಿತ್ರ ೦೪ / ೨೦೭)

ಮನುಷ್ಯ ಯಾವ ಹಂತದಲ್ಲಿ ಹೇಗೆ ಬೆಳೆಯುತ್ತಾನೆ, ಯಾಕೆ ಬೆಳೆಯುತ್ತಾನೆ ಇದು ಚಿದಂಬರ ರಹಸ್ಯ. ಅದನ್ನು ಅರಿತವ ದೇವತ್ವ ಹೊಂದುತ್ತಾನೆ.. ಅದು ಸಾಧ್ಯವೇ ಎಂದು ನಮ್ಮನ್ನೇ ಪ್ರಶ್ನಿಸಿಕೊಳ್ಳುತ್ತಲೇ ಸಾಗುವ ನಮ್ಮ ಜೀವನ ಎಲ್ಲೋ ಹುಟ್ಟಿ ಎಲ್ಲೋ ಕಡಲನ್ನು ಸೇರುವ ನದಿಯ ಹಾಗೆ ಸಾಗುತ್ತಲೇ ಇರುತ್ತದೆ. 

ಸತತವಾಗಿ ನಾಲ್ಕನೇ ಚಿತ್ರದಲ್ಲಿ ರಾಜ್ ಮತ್ತು ಪಂಡರಿಬಾಯಿ ನಾಯಕ ನಾಯಕಿಯಾಗಿ ತೆರೆಗೆ ಬಂದರು. ಟಿ ವಿ ಸಿಂಗ್ ಠಾಕೂರ್ ನಿರ್ದೇಶನದಲ್ಲಿ ಮೂಡಿ ಬಂದ ಚಿತ್ರ. ಕರ್ನಾಟಕ ಫಿಲಂಸ್ ಲಾಂಛನದಲ್ಲಿ ಜಿ ಎನ್ ವಿಶ್ವನಾಥ್ ಶೆಟ್ಟಿ ಮತ್ತು ಟಿ ವಿ ಸಿಂಗ್ ಠಾಕೂರ್ ರವರ ನಿರ್ಮಾಣದಲ್ಲಿ ಉದಯಿಸಿತು. 


ಮಕ್ಕಳಿಲ್ಲದ ದಂಪತಿಗಳು ಸುಸಂತಾನಕ್ಕೆ ವ್ರತವನ್ನು ಹೇಳಿಕೊಡುವ ದೃಶ್ಯದಿಂದ ತೆರೆದುಕೊಳ್ಳುವ ಈ ಚಿತ್ರ.. ಗುರುಗಳು ಹೇಳುತ್ತಾರೆ.. ವ್ರತ ಭಂಗವಾಗಬಾರದು.. ವ್ರತ ಭಂಗವಾದರೆ ಸುಪುತ್ರ ಕಂಠಕವಾಗುತ್ತಾನೆ ಎನ್ನುವ ಮಾತನ್ನು ಹೇಳುತ್ತಾರೆ., "ದೇವರಿಲ್ಲದ ಗುಡಿ ಮಕ್ಕಳಿಲ್ಲದ ಮನೆ" ಎಂದು ಹೇಳುವ ಮಾತು ಇಷ್ಟವಾಗುತ್ತದೆ. 


ಈ ಚಿತ್ರಗಳಲ್ಲಿ ಹದಿಮೂರು ಹಾಡುಗಳು ಇವೆ (ಚಿಕ್ಕದು, ದೊಡ್ಡದು ಎಲ್ಲವೂ ಸೇರಿ), ವಿಲಾಸಿ ಜೀವನದಿಂದ ಪಾರಮಾರ್ಥಿಕ ಜೀವನದ ಕಡೆ ಹೆಜ್ಜೆ ಹಾಕಿಸುವ ಈ ಚಿತ್ರದಲ್ಲಿ ರಾಜ್ ಮತ್ತೊಮ್ಮೆ ತಮ್ಮ ಅಭಿನಯದಿಂದ ತೂಗಿಸಿಕೊಂಡು ಹೋಗುತ್ತಾರೆ. ಮಾತಾ ಪಿತೃಗಳನ್ನು ತುಚ್ಛವಾಗಿ ಕಾಣುವುದು, ಕಟ್ಟಿಕೊಂಡ ಹೆಂಡತಿಯನ್ನು ದೂಷಿಸುವುದು, ಪರಸ್ತ್ರೀ ಸಂಗ, ದಾರಿ ತಪ್ಪಿಸುವ ಕೆಟ್ಟ ಸ್ನೇಹಿತನನ್ನೇ ದೇವರು ಎಂದು ಭಾವಿಸುವುದು , ಬುದ್ದಿ ಹೇಳಲು ಬಂದ ಬಾಲ್ಯ ಸ್ನೇಹಿತನನ್ನು ದೂರ ಅಟ್ಟುವುದು.. ಎಲ್ಲದರಲ್ಲಿಯೂ ಅಭಿನಯ ಅಮೋಘವಾಗಿದೆ.. ಚಿತ್ರದಿಂದ ಚಿತ್ರಕ್ಕೆ ಅವರ ಅಭಿನಯ ಏರುಮುಖ ಏರುತ್ತಿರುವುದರ ಸಾಕ್ಷಿ ಈ ಚಿತ್ರದಲ್ಲಿ ಸಿಗುತ್ತದೆ. 

ವಿಲಾಸಿ ಜೀವನ, ಅಂತಸ್ತಿನ ಅಹಂ, ಕೆಟ್ಟ ಸ್ನೇಹಿತ, ದಾರಿ ತಪ್ಪಿಸುವ ಸ್ತ್ರೀ ವ್ಯಾಮೋಹ ಇವೆಲ್ಲವೂ  ಕಣ್ಣನ್ನು ಕುರುಡಾಗಿಸಿ, ಹೆಜ್ಜೆ ಹಾಕ ಬೇಕಾದ ಹಾದಿ ತಡವರಿಸುವ ಹಾಗೆ ಮಾಡುತ್ತದೆ.. ಆದರೆ ಕೈ ಖಾಲಿಯಾದಾಗ ನಿಧಾನವಾಗಿ ಅವಕಾಶವಾದಿ ವಸ್ತುಗಳು ತಮ್ಮ ಬೇಳೆ ಬೇಯಿಸಿಕೊಂಡು ಜಾಗ ಖಾಲಿಮಾಡುತ್ತಾರೆ.. ಆಗ ಜೇವನದ ಅರಿವು ಸಿಗುತ್ತದೆ. ಈ ಪುಟ್ಟ ಆದರೆ ದೊಡ್ಡ ಸಂದೇಶವನ್ನು ಚಿತ್ರದುದ್ದಕ್ಕೂ ಕಾಣಿಸುತ್ತಲೇ ಹೋಗುತ್ತಾರೆ. 

ಸುಸಂತಾನಕ್ಕೆ ವ್ರತಕ್ಕೆ ಕೂತ ದಂಪತಿಗಳು.. ಲೋಕದ ಕುಹಕ ಮಾತಿಗೆ ನೊಂದು ವ್ರತ ಭಂಗಮಾಡಿಕೊಳ್ಳುತ್ತಾರೆ. ನಂತರ ಜನರಿಲ್ಲದ ತಾಣಕ್ಕೆ ಹೋಗಿ ಶ್ರದ್ಧೆಯಿಂದ ವ್ರತ ಮಾಡಿದರೂ ಕೂಡ, ಮೊದಲೇ ಭಂಗವಾಗಿದ್ದ ವ್ರತದಿಂದ ಹುಟ್ಟುವ ಸಂತಾನವೇ ಹರಿ. ಬಾಲ್ಯದಿಂದಲೂ ದುಷ್ಟಬುದ್ದಿಯಿಂದ ವರ್ತಿಸುವ ಈ ಬಾಲಕ ಬೆಳೆಯುತ್ತಾ ಹೋದ ಹಾಗೆ ಹಠ, ಸಿಟ್ಟು, ದ್ವೇಷ, ಮದಿರೆ, ಮಾನಿನಿ ಇವುಗಳ ದಾಸನಾಗುತ್ತಾನೆ. ಜೊತೆಯಲ್ಲಿ ದಾರಿ ತಪ್ಪಿಸಲು ಸಿಗುವ ಸ್ನೇಹಿತ, ತನ್ನ ಲಾಭಕ್ಕೆ ಏನು ಬೇಕೋ ಅದನ್ನು ನೆರವೇರಿಕೊಳ್ಳಲು ಹರಿಯನ್ನು ಉಪಯೋಗಿಸಿಕೊಳ್ಳುತ್ತಾನೆ. 

ಮದಿರೆಯ ಅಮಲಿನಲ್ಲಿ ಮನೆಯ ಸಮಸ್ತ ಆಸ್ತಿ, ಧನ, ಕನಕ, ಮನೆ ಎಲ್ಲವನ್ನು ಬರೆದುಕೊಟ್ಟು ನಿರ್ಗತಿಕನಾಗುತ್ತಾನೆ. ಅದಕ್ಕಿಂತ ಮೊದಲು, ನಾರಿ ಸ್ನೇಹ ಬೇಡ ಎಂದು ಹೇಳಿದ ತಂದೆ ತಾಯಿಯರನ್ನು ಜರೆದು, ಮಡದಿಯನ್ನ, ತನ್ನ ಸ್ನೇಹಿತನನ್ನು ಮನೆಯಿಂದ ಹೊರಗೆ ಅಟ್ಟುತ್ತಾನೆ, ನಂತರ ನಾರೀಮಣಿಯನ್ನು ಓಲೈಸಿಕೊಳ್ಳಲು ಹೋದಾದ, ನಿರ್ಗತಿಕನಾದ ನಿನ್ನ ಸಂಗ ಮಾಡಿ ಏನು ಉಪಯೋಗ ಎಂದು ಅಣಕಿಸುತ್ತಾಳೆ. ಇದರಿಂದ ನೊಂದ ಹರಿ, ಗುರುವನ್ನು ಹುಡುಕುತ್ತಾ ಹೊರಡುತ್ತಾನೆ, ಹಾದಿಯಲ್ಲಿ ಮತ್ತೆ ಲೋಕದ ಜನರ ಛೀಮಾರಿ, ಕುಹಕ, ಇದೆಲ್ಲದರಿಂದ ನೊಂದ ಹರಿ ಕಾಡುಪಾಲಾಗುತ್ತಾನೆ. ಅಲ್ಲಿ ತಪಸ್ಸು ಮಾಡುತ್ತಾ, ಹೊಟ್ಟೆ ಹೊರೆದುಕೊಳ್ಳಲು ಭಿಕ್ಷಾವೃತ್ತಿ ಮಾಡುತ್ತಾನೆ. 

ಆದರೂ ಅವನ ಅಹಂ ತಕ್ಕ ಮಟ್ಟಿಗೆ ಇದ್ದೆ ಇರುತ್ತದೆ.. ಕಾಲಾನಂತರ ತಂದೆ ತಾಯಿಯರು ಸಿಗುತ್ತಾರೆ, ಆ ಹೊತ್ತಿಗೆ ಅಲ್ಪ ಸ್ವಲ್ಪ ಅಹಂ ಜಾಗ ಖಾಲಿ ಮಾಡಿರುತ್ತದೆ, ತಂದೆ ತಾಯಿಯ ಸೇವೆಯ ಪರಮ ಸೇವೆ ಮಿಕ್ಕದ್ದು ತೃಣ ಸಮಾನ ಎಂದು ನಂಬಿಕೊಂಡು, ಅವರ ಸೇವೆಯಲ್ಲಿಯೇ ಕಾಲ ಕಳೆಯುತ್ತಾನೆ. ಅವನ ಪರೀಕ್ಷಿಸಲು ವಿಠಲನೇ ಬಂದರು, ಈಗ ಮಾತಾ ಪಿತೃಗಳ ಸೇವಾ ಸಮಯ ಬೇಕಿದ್ದರೆ ನನಗೆ ಕಾಯಬಹುದು ಎಂದು ಒಂದು ಇಟ್ಟಿಗೆಯನ್ನು ಎಸೆದು ಅದರ ಮೇಲೆ ವಿಶ್ರಮಿಸು ಎನ್ನುತ್ತಾನೆ. 

ಹರಿಯ ನಿಷ್ಠೆಗೆ ಮೆಚ್ಚಿದ ವಿಠಲ ಅವನನ್ನು ಅನುಗ್ರಹಿಸುತ್ತಾನೆ. ಮಡದಿ ಸ್ನೇಹಿತ ಎಲ್ಲರ ಜೊತೆಯಲ್ಲಿ ಸಂಭ್ರಮಿಸುತ್ತಾನೆ. 

ಹೀಗೆ ನಿಲ್ಲುವ ಈ ಚಿತ್ರದಲ್ಲಿ ದಾರಿ ತಪ್ಪಿಸುವ ಸ್ನೇಹಿತನಾಗಿ ಜಿ ವಿ ಅಯ್ಯರ್ ಮತ್ತೊಮ್ಮೆ ಬೆಳಗುತ್ತಾರೆ. 
ಕಟುಕತನ, ಘಾತುಕತನ, ವಿಶ್ವಾಸ ದ್ರೋಹ, ಕುಹಕ ಮಾತುಗಳು ಎಲ್ಲವನ್ನು ಆವಾಹಿಸಿಕೊಂಡು ಅಭಿನಯಿಸಿರುವ ಶೈಲಿ ಭಲೇ ಭಲೇ ಎನ್ನುವಂತೆ ಮಾಡುತ್ತದೆ. 

ದಾರಿ ತೋರುವ ಸ್ನೇಹಿತನಾಗಿ ನರಸಿಂಹರಾಜು ಲವಲವಿಕೆಯಿಂದ ಅಭಿನಯಿಸಿದ್ದಾರೆ. 
"ಕೆಲಸ ಆದ ಮೇಲೆ ತಾನೇ ಕೈ ಕೊಡುವುದು"
"ಚಂದ್ರ ಮನೆಗೆ ರಾಹಿ ಹೊಕ್ಕ ಹಾಗೆ"
ಜಿ ವಿ ಅಯ್ಯರ್ ಅವರಿಗೆ ಹೇಳುವ ಮಾತು "ಅಯ್ಯ ವಿಷಕಂಠ ನಿನ್ನನ್ನು ಎಲ್ಲಯ್ಯ ಇಟ್ಟು ಪೂಜೆ ಮಾಡುವುದು" ಅಂದರೆ 
ಜಿ ವಿ ಅಯ್ಯರ್ "ನವಗ್ರಹ ಮಧ್ಯೆ ಇತ್ತು ಬಿಲ್ವ ಪತ್ರೇಲಿ ಪೂಜೆ ಮಾಡು" 
ಎಷ್ಟು ಸೊಗಸಾಗಿದೆ ಈ ಸಂಭಾಷಣೆ.. 


ಪಂಡರಿಬಾಯಿ ಮಡದಿಯಾಗಿ ತಮ್ಮ ಅಭಿನಯ ಛಾಪನ್ನು ಮತ್ತೆ ಒತ್ತಿದ್ದಾರೆ, ಇನ್ನು ಉಳಿದ ಪಾತ್ರಧಾರಿಗಳು ಕಥೆಗೆ ಮತ್ತು ಪಾತ್ರಕ್ಕೆ ತಕ್ಕಷ್ಟು ಮುಳುಗಿದ್ದಾರೆ. 


ಒಂದು ಉತ್ತಮ ಚಿತ್ರ, ಅಷ್ಟೇ ಉತ್ತಮ ಸಂದೇಶ.. ರಾಜ್ ಚಿತ್ರಗಳಲ್ಲಿ ಭಕ್ತಿ ಭಾವ ಹೊಮ್ಮಿಸುವ ಚಿತ್ರಗಳ ಸಾಲಿನಲ್ಲಿ ಈ ಚಿತ್ರವೂ ನಿಲ್ಲುತ್ತದೆ. 

ಭರಪೂರ ಹಾಡುಗಳ ಸುಗ್ಗಿಯೇ ಈ ಚಿತ್ರದಲ್ಲಿ ಇದೆ ಆದರೆ ಕಡೆಯಲ್ಲಿ ಬರುವ "ದೇವಾ ದರುಶನವ ನೀಡೆಯಾ" ಮನ ಸೆಳೆಯುತ್ತದೆ. 

ಹರಿ ಹರಿ ಎನ್ನುತ್ತಲೇ ಮನದ ಅರಿಯನ್ನು ದೂರ ಮಾಡುವ ಚಿತ್ರ ಕರುನಾಡ ತಾಯಿಯ ಚರಣ ಕಮಲಗಳಲ್ಲಿ ಕುಸುಮವಾಯಿತು. 

ಮತ್ತೊಮ್ಮೆ ಬರುವೆ . ರಾಜ್ ಚಿತ್ರದ ಜೊತೆಯಲ್ಲಿ!!!

Thursday, December 1, 2016

ಭಾರತ ಭೂಶಿರದಲ್ಲಿ ಪುಟ್ಟಣ್ಣ ಅವರ ಜನುಮದಿನ

"ಪುಟ್ಟಣ್ಣ ಸರ್ ನಿಮ್ಮ ಹತ್ತಿರ ಮಾತಾಡಬೇಕಿತ್ತು.. ೪೪೦ ಕ್ಷಣಗಳು ಸಿಗಬಹುದೇ.. "

"ಯಾರಪ್ಪ ನೀನು.. "

"ನಿಮ್ಮ ಕೋಟಿ ಕೋಟಿ ಅಭಿಮಾನಿಗಳಲ್ಲಿ ನಾನು ಒಬ್ಬ.. ಇಂದು ನಿಮ್ಮ ಜೊತೆ ಮಾತಾಡಬೇಕು ಅನ್ನಿಸ್ತಿದೆ.. "

"ಸರಿ.. ಬಾ ಇಲ್ಲೇ ಸ್ವಲ್ಪ ದೂರದಲ್ಲಿ ನಮ್ಮ ಊರಿನವರ ಬೊಂಡ ಅಂಗಡಿ ಇದೆ.. ಅಂಬಡೆ ಮತ್ತು ಮೆಣಸಿನ ಕಾಯಿ ಬಜ್ಜಿ ಚೆನ್ನಾಗಿ ಮಾಡ್ತಾರೆ.. "

ನನಗೆ ಬಾಯಲ್ಲಿ ನೀರು..

"ಸರಿ ಸರ್"

ಇಬ್ಬರೂ ನೆಡೆಯುತ್ತಾ ಹೋದೆವು... ಅಂಗಡಿ ಸಿಕ್ಕಿತು.. "ಏನಪ್ಪಾ.. ಬಿಸಿ ಬಿಸಿ ಅಂಬಡೆ, ಮೆಣಸಿನಕಾಯಿ ಬಜ್ಜಿ ಎರಡು ಕಾಫಿ.. ಒಂದು ೫೫೫ ಕಳಿಸು.. ನಿನಗೆ ೫೫೫?"

"ಇಲ್ಲ ಸರ್.. ಅಭ್ಯಾಸವಿಲ್ಲ.. ಬಜ್ಜಿ, ಕಾಫಿ ಸಾಕು"

"ಸರಿ ಬಾ.. ನಾ ಓದಿದ್ದ ಶಾಲೆ ಇದು.. ಶಾಲೆಯ ಹೊರಗೆ ಒಂದು ಕಲ್ಲು ಬೆಂಚು ಇದೆ.. ಇವತ್ತು ಭಾನುವಾರ.. ಅಲ್ಲಿಯೇ ಕುಳಿತು ಮಾತಾಡೋಣ.. ಆಗಬಹುದೇ?"

ದೊಡ್ಡವರಿಗೆ ಇಲ್ಲ ಎನ್ನಲು ಆಗುತ್ತದೆಯೇ.. ಸುಮ್ಮನೆ ಗೋಣು ಆಡಿಸಿದೆ..

ಬಜ್ಜಿ, ಅಂಬಡೆ, ಕಾಫೀ ಮತ್ತು ೫೫೫ ಬಂತು..

"ಸರಿ ಹೇಳಪ್ಪ ಏನು ನಿನ್ನ ಮಾತು"

"ಸರ್.. ಉಪಾಸನೆ ಚಿತ್ರದ ಭಾರತ ಭೂಶಿರ ಹಾಡನ್ನು ಗುರುಗಳ ಆಶ್ರಮದಲ್ಲಿ ಚಿತ್ರೀಕರಿಸಿದ ರೀತಿ ನನಗೆ ಬಲು ಇಷ್ಟ ಅದರ ಬಗ್ಗೆ ಹೇಳಿ.. ೪೪೦ ಕ್ಷಣಗಳು ನಿಮ್ಮ ಮಾತಿಗಾಗಿ ಮಾತ್ರ"

"ನೋಡಪ್ಪ.. ಸಂಗೀತ ಒಂದು ಅದ್ಭುತ ಔಷದಿ ಇದ್ದ ಹಾಗೆ.. ಹಾಡನ್ನುಹಾಡುವವರು , ಅದರ ಸಂಗೀತ, ಹಾಡುವ ಸ್ಥಳ, ಹಾಡಿನ ಸಾಹಿತ್ಯ ಎಲ್ಲವೂ ಒಂದು ದೇವಸ್ಥಾನ ಹಾಗೂ ಅಲ್ಲಿನ ಪರಿಸರದಲ್ಲಿರುವ ದೇವರ ಮೂರ್ತಿ, ಪೂಜೆ ಸಾಮಗ್ರಿಗಳು ಇದ್ದ ಹಾಗೆ .. ದೇವರಿಗೆ ನಾವು ಧೂಪ, ದೀಪ, ಮಂತ್ರ, ಅಭಿಷೇಕ, ಅಲಂಕಾರ ಹೇಗೆ ಮಾಡುತ್ತೇವೆಯೋ ಹಾಗೆ.. ಒಂದು ಹಾಡಿಗೂ ಅದೇ ರೀತಿಯ ಸಿದ್ಧತೆ ಬೇಕು.

ಈ ಹಾಡು ಚಿತ್ರೀಕರಿಸುವ ಸ್ಥಳ ಗುರುಗಳ ಆಶ್ರಮ..
ಆಶ್ರಮ ಒಂದು ದೇವಾಲಯವೇ ಅಲ್ಲವೇ
ಆ ಆಶ್ರಮದ ಗುರುಗಳು ದೇವರಿಗೆ ಅರ್ಚಿಸುವ ಅರ್ಚಕರು ತಾನೇ
ಆ ಅರ್ಚನೆಗೆ ಬೇಕಾಗುವ ಸಾಹಿತ್ಯ,  
ಸಂಗೀತ,ಗಾಯನ..
ಭಕ್ತರು ಎಲ್ಲರೂ ಸೇರಿ
ಈ ಹಾಡನ್ನು ಮೇಲಕ್ಕೆ ಏರಿಸಿದ್ದಾರೆ.

ಶಾರದೆ ಪಾತ್ರಧಾರಿ ಸಂಗೀತ ಎಂದರೆ ತಪಸ್ಸು ಎಂದುಕೊಂಡವಳು.. ತಾನುಬಾಲ್ಯದಲ್ಲಿ ಕಣ್ಣಾರೆ ಕಂಡ ಒಂದು  ದೃಶ್ಯವನ್ನು ಹಾಡಿನಲ್ಲಿ ಕಟ್ಟಿ ಕೊಡುತ್ತೇನೆ ಎಂದು ಹೇಳುವಾಗ ಅದಕ್ಕೆ ಬೇಕಾದ ವೇದಿಕೆಯನ್ನು ಸೃಷ್ಟಿ ಮಾಡಲು ಮನಸ್ಸಾಯಿತು.

ವಿಜಯನಾರಸಿಂಹನಿಗೆ ಹೇಳಿದೆ "ನನಗೆ ಈ ರೀತಿಯ ಹಾಡು ಬೇಕು.. ಕನ್ಯಾಕುಮಾರಿಯ ಬಗ್ಗೆ ಹಾಡು" ಅಂತ..
"ಪುಟ್ಟಣ್ಣ ನೀನು ಕೇಳಿದೆ ನಾನು ಕೊಟ್ಟೆ" ಅಂತ ಅದ್ಭುತ ಹಾಡನ್ನು ಬರೆದುಕೊಟ್ಟ.

ಇನ್ನೊಬ್ಬ ಜೀವದ ಗೆಳೆಯ ವಿಜಯಭಾಸ್ಕರ್ ಸಾಹಿತ್ಯಕ್ಕೆ ಸಂಗೀತ ಕೊಟ್ಟನೋ.. ಅಥವಾ ಸಂಗೀತಕ್ಕೆ ಸಾಹಿತ್ಯ ಬಂದಿತೋ ಅರಿವಿಲ್ಲ.. ಅದ್ಭುತವಾದ ಎದೆ ಝಲ್ ಎನ್ನುವಂಥ ಸಂಗೀತ ಒದಗಿಸಿದ..

ಇಬ್ಬರು "ವಿಜಯ"ರು ಈ ಗಾನ ಸಂಭ್ರಮ ಮಹಾಸಮರದಲ್ಲಿ ವಿಜಯಿಯಾದರು..

ಜಾನಕಿಯಮ್ಮನಿಗೆ ಈ ಹಾಡಿನ ಬಗ್ಗೆ ಹೇಳಿದಾಗ.. ಪುಟ್ಟಣ್ಣಾಜಿ ಖಂಡಿತ ಇದು ಒಂದು ಅದ್ಭುತ ಕೃತಿಯಾಗುತ್ತದೆ ಎಂದರು.. ಅದು ನಿಜವೇ ಆಯಿತು..

ಇಂಥಹಃ ಅಮೋಘ ಹಾಡನ್ನು ಸುಮ್ಮನೆ ಹೇಗೋ ಹೇಗೋ ಚಿತ್ರೀಕರಿಸಲು ಮನಸ್ಸಾಗಲಿಲ್ಲ..

ಛಾಯಾಗ್ರಾಹಕ ಶ್ರೀಕಾಂತ್ ಗೆ ಹೇಳಿದೆ.. "ಶಾರದೆ ಮೊಗದ ಮೇಲೆ ಕಾಂತಿ ಬರುವಂತೆ ಲೈಟಿಂಗ್ ಮಾಡಿ.. ಆಕೆಯ ಮುಖದ ಪ್ರತಿ ಭಾವವೂ ಎದ್ದು ಕಾಣುವಂತೆ ನೀವು ಸೆರೆ ಹಿಡಿಯಬೇಕು.. ವೀಣೆಯನ್ನು ನುಡಿಸುವ ಅಭ್ಯಾಸ ಆಕೆಗೆ ಆಗಿದೆ.. ನೋಡುವವರಿಗೆ ಶಾರದೆಯೇ ವೀಣೆ ನುಡಿಸುತ್ತಿದ್ದಾಳೆ ಎನ್ನುವ ಮನವರಿಕೆಯಾಗುತ್ತದೆ.. ಜೊತೆಗೆ ಈ ಹಾಡಿನಲ್ಲಿ ಹಿತಮಿತವಾಗಿ ವೀಣೆಯನ್ನು ಉಪಯೋಗಿಸಿರುವುದರಿಂದ, ಜೊತೆಗೆ ಹಾಡಿನಲ್ಲಿ ಕೆಲವು ಭಾಗಗಳಲ್ಲಿ ಮಾತ್ರ ವೀಣೆಯ ನಾದವಿರುವುದರಿಂದ.. ಆಕೆಯ ಮುಖದ ಭಾವ, ತನ್ಮಯತೆ ಈ ಹಾಡಿಗೆ ಬೇಕು.. " ಮರುಮಾತಿಲ್ಲದೆ ಶ್ರೀಕಾಂತ್ ನಾನು ಹೇಗೆ ಹೇಳಿದ್ದೇನೋ ಅದಕ್ಕಿಂತ ಇನ್ನೂ ಅತ್ಯುತ್ತಮವಾಗಿ ಚಿತ್ರೀಕರಿಸಿದ್ದಾರೆ.

ಇನ್ನೂ ಜಾನಕಿಯಮ್ಮ.. ಅಬ್ಬಾ ಆಕೆ ನಿಜಕ್ಕೂ ಗಾನಸರಸ್ವತಿಯೆ ಹೌದು.. ಪ್ರತಿ ಪದವನ್ನು ಅರ್ಥಮಾಡಿಕೊಂಡು ಅದಕ್ಕೆ ಬೇಕಾದ ಭಾವ ತುಂಬಿ ಈ ಹಾಡನ್ನು ಅಕ್ಷರಶಃ ದೇವಗಾನವನ್ನಾಗಿ ಮಾಡಿದ್ದಾರೆ ಆಕೆ. "ಶಿವ ತಾಂಡವದ  ಢಮರು ನಿನಾದ ನಾದ ಬ್ರಹ್ಮನ ಓಂಕಾರ ನಾದ.. " ಈ ಪದವನ್ನು ಅದೆಷ್ಟು ಭಕ್ತಿಭಾವದಿಂದ ಹಾಡಿದ್ದಾರೆ.. ನನಗೆ ರೋಮಾಂಚನವಾಗುತ್ತದೆ..

ಇನ್ನೂ ಹಾಡು ಶುರುವಾದಾಗ ಬರುವ ರುದ್ರಪಟ್ಟಣದ ಸಂಗೀತ ವಿಧ್ವಾನ್ ಅವರ ಅಭಿನಯ, ಜಾನಕಿಯಮ್ಮನವರ ಆಲಾಪ ಕೇಳಿ ಕಣ್ಣು ಮತ್ತು ಮೊಗದಲ್ಲಿ ಅವರು ತೋರುವ ಭಾವ.. ನಿಜಕ್ಕೂ ನನಗೆ ಈಗ ಹಾಡನ್ನು ಕೇಳಿದರೂ ಕಣ್ಣಲ್ಲಿ ನೀರು ಬರುತ್ತದೆ.."

ಆ ಹಾಡು ಮುಗಿದಾಗ.. "ನಿಮ್ಮ ವಿಧ್ವತ್ತಿನ ಪ್ರತಿಬಿಂಬ ನಿಮ್ಮ ಶಿಷ್ಯೆ.. ಕರುಳು ಹಿಂಡುವ ವೀಣೆಯ ನಾದ, ಜೀವ ತುಂಬುವ ಗಾನದ ಸುಧೆ ನಮ್ಮ ಊರಿನವರೆಲ್ಲರಿಗೂ ತಲುಪುವಂತೆ ಮಾಡಿ" ಎಂದು ಹೇಳಿದಾಗ ನಿಜಕ್ಕೂ ನಾ ಮೂಕನಾದೆ.

ಇಡೀ ದೃಶ್ಯವನ್ನು ನಾ ಕಲ್ಪಿಸಿಕೊಂಡ ರೀತಿಯಲ್ಲಿಯೇ ಚಿತ್ರಿಸಿದ ಹೆಮ್ಮೆ ನನಗೆ.. ಅದನ್ನು ಮೆಚ್ಚಿ ಈ ಚಿತ್ರವನ್ನು ಹಾಡನ್ನು ಯಶಸ್ಸುಗೊಳಿಸಿದ ಕೀರ್ತಿ ಕರುನಾಡ ಚಿತ್ರರಸಿಕರಿಗೆ ಸಲ್ಲಬೇಕು.. :-)

ಇಷ್ಟು ಹೇಳಿ ಪುಟ್ಟಣ್ಣ ಸರ್ ೫೫೫ ನ ಕೊನೆ ದಂ ಎಳೆದರು.. ತಮ್ಮ ಕೈಗಡಿಯಾರ ನೋಡಿಕೊಂಡು ಕಣ್ಣು ಹೊಡೆದರು.. ೪೩೯ ಕ್ಷಣಗಳಾಗಿತ್ತು..

ಅಷ್ಟು ಹೊತ್ತಿಗೆ ಅಂಬಡೆ, ಮೆಣಸಿನಕಾಯಿ ಬಜ್ಜಿ ಎರಡು ಖಾಲಿಯಾಗಿದ್ದವು..

ಪುಟ್ಟಣ್ಣ ಸರ್ ಅವರಿಗೆ ಪ್ರವರ ಹೇಳಿ ಒಂದು ನಮಸ್ಕಾರ ಮಾಡಿ.. ಸಂತೃಪ್ತಿಯಿಂದ ಹೊರ ನೆಡೆದೆ..

ಒಮ್ಮೆ ತಿರುಗಿ ನೋಡಿದೆ.. ಪುಟ್ಟಣ್ಣ ಸರ್.. ಇನ್ನೊಂದು ೫೫೫ ಹಚ್ಚಿ ವಿಜಯದ ಸಂಕೇತವಾದ ಹೆಬ್ಬೆರಳನ್ನು ತೋರಿಸಿದರು..

ತಾಯಿ ಭುವನೇಶ್ವರಿ ವೀಣೆಯನ್ನು ಹಿಡಿದು ನುಡಿಸಿದಂತೆ.. ಹಾಡು ಕೇಳಿಸುತ್ತಿತ್ತು



ಭಾರತ ಭೂಶಿರ ಮಂದಿರ ಸುಂದರಿ
ಭುವನ ಮನೋಹರಿ ಕನ್ಯಾಕುಮಾರಿ

ಸಾಮಗಾನಪ್ರಿಯ ಸಾಂಬರೂಪಿಣಿ
ಪಾಲಗಡಲ ಸ್ವರ ಪಂಚಮಧಾರಿಣಿ
ಸಾಕಾರ ಷಡ್ಜದ ಶರಧಿ ತರಂಗಿಣಿ
ಸಾಗರ ಸಂಗಮ ಸರಸ ವಿಹಾರಿಣಿ

ಶಿವತಾಂಡವದಾ ಢಮರುನಿನಾದ....
ನಾದ ಬ್ರಹ್ಮನ ಓಂಕಾರನಾದ...
ನಾದದೆ ಲೀನಾ ಆಗಮವೇದ
ನಾದ...ವೇದ ...ಶಿವೇ....
ನಾದ ವೇದ ಶಿವೆ ನಿನ್ನವಿನೋದ

ಸಂಗೀತಸುಧೆಯ ಚೈತನ್ಯಧಾರೆ
ಕಣ ಕಣ ನೀನೇ ಕರುಣಾ ಪೂರೆ
ನವ ಭಾವ ನವ ಜೀವ ನೀ ತುಂಬಿ ಬಾರೆ
ನವರಸವಾಹಿನಿ ನೀ ದಯೆ ತೋರೆ

ಭಾರತ ಭೂಶಿರ ಮಂದಿರ ಸುಂದರಿ
ಭುವನ ಮನೋಹರಿ ಕನ್ಯಾಕುಮಾರಿ

(ಪುಟ್ಟಣ್ಣ ಅವರ  ಜನುಮದಿನದಂದು ಅವರ ನೆನಪಲ್ಲಿ ಕೆಲವು ಸಾಲುಗಳನ್ನು ಬರೆಯೋಣ ಎಂದುಕೊಂಡಾಗ ಮೂಡಿ ಬಂತು ಮೇಲಿನ ಕೆಲವು ಅಕ್ಷರಗಳು.. ಇದು ಕೇವಲ ನನ್ನ ಹೃದಯದಲ್ಲಿ ಮೂಡಿಬಂದ ಭಾವಕ್ಕೆ ಒಂದು ಕಾಲ್ಪನಿಕ ಕಥಾ ರೂಪ ಕೊಟ್ಟು ಬರೆದಿದ್ದೇನೆ.. )

ಪುಟ್ಟಣ್ಣ ಸರ್.. ನಿಮ್ಮ ಪ್ರತಿಭೆಗೆ ಏನೂ ಬರೆದರೂ ಅದು ಕಮ್ಮಿಯೇ.. ಆದರೂ ಒಂದು ನುಡಿ ನಮನ ಸಲ್ಲಿಸೋಣ ಎಂದು ಸ್ವಲ್ಪ ಸಲುಗೆ ತೆಗೆದುಕೊಂಡು ಜನುಮದಿನಕ್ಕೆ ಈ ರೀತಿಯ ಶುಭಾಷಯ ಕೋರಿದ್ದೇನೆ.. (ಕ್ಷಮೆ ಇರಲಿ)