Wednesday, January 18, 2017

ದೇಹದೊಳಗಿನ ಆತ್ಮಕ್ಕೆ ಕಣ್ಣು ಕೊಡುವ ಓಹಿಲೇಶ್ವರ (1956) (ಅಣ್ಣಾವ್ರ ಚಿತ್ರ ೦೫ / ೨೦೭)

ಕ್ಯಾಲೆಂಡರ್ ಮಗುಚಿದೆ.. ಇನ್ನೊಂದು ವರ್ಷ ಶುರುವಾಯಿತು ಅನ್ನೋದು ಗೊತ್ತಾಯಿತು.. ಕಾರಣ ಜನವರಿ ತಿಂಗಳು ಅಂತ ಕಿರುಚುತಿತ್ತು ಕ್ಯಾಲೆಂಡರ್. ಓಹೋ ಆಗಲೇ ಹದಿನೆಂಟು ದಿನಗಳು ಕಳೆದುಹೋಗಿವೆ.. ಇನ್ನು ಏನೂ ಬರೆದಿಲ್ಲ.. ಸರಿ ಹೆಂಗೆ ಶುರುಮಾಡೋದು ಅನ್ನೋದು ಅನ್ನಿಸಿದಾಗ ನನ್ನ ಅದ್ಭುತ ಗೆಳತೀ ಹೇಳಿದರು.. ಸುಮ್ಮನೆ ನೆಡೆಯುತ್ತಾ ಹೋಗಿ.. ಗುರು ನಿಮ್ಮ ಹಿಂದೆ ಇರಲಿ ಗುರಿ ನಿಮ್ಮ ಮುಂದೆ ಇರಲಿ.. ಮೈಲಿಗಲ್ಲುಗಳ ಬಗ್ಗೆ ತಲೆಕೆಡಿಸಿಕೊಳ್ಳಬೇಡಿ.

ಅದ್ಭುತ ಮಾತು!!!

ಅಣ್ಣಾವ್ರ ಫೋಟೋ ಕಡೆ ತಿರುಗಿದೆ.. "ಓಹಿಲೇಶ್ವರ"ನಾಗಿ ಬರುತ್ತಿದ್ದೇನೆ ಎಂದರು.


ವಿಶ್ವಕಲಾ  ಚಿತ್ರ ಲಾಂಛನದಲ್ಲಿ ೧೯೫೬ ರಲ್ಲಿ ತಯಾರಾದ ಈ ಚಿತ್ರದ ರಾಜ್ ಅವರ ಐದನೇ ಚಿತ್ರ. ಈ ಚಿತ್ರದ ಒಂದೇ ಒಂದು ನೆನಪು "ಈ ದೇಹದಿಂದ ದೂರನಾದೆ ಏಕೆ ಆತ್ಮನೇ" ಹಾಡು. ಘಂಟಸಾಲ ಮತ್ತು ಜಿ ಕೆ ವೆಂಕಟೇಶ್ ಅವರ ಅದ್ಭುತ ಜೋಡಿಯಲ್ಲಿ ಬಂದ ಈ ಗೀತೆ ತನ್ನ ಸಾಹಿತ್ಯದಿಂದ, ಹಾಡುಗಾರಿಕೆಯಿಂದ ಮನಸ್ಸೆಳೆದಿತ್ತು. ಸರಿ ನೋಡಲು ಶುರುಮಾಡಿದೆ.

ಈ ಚಿತ್ರ ವನ್ನು ನೋಡಿ ಮುಗಿಸಿದಾಗ ಮನದೊಳಗೆ ಅಡಗಿದ್ದ ಮಾತುಗಳೇ ಈ ಲೇಖನವಾಗಿ ಹೊರಬಂದಿದೆ..

ಗಿಡದ ಬೆಳವಣಿಗೆ ಮೊಳಕೆಯಲ್ಲಿ ಕಾಣಬಹುದು. ಮರ ಆಗಬೇಕು ಎಂದರೆ ಮರಗಟ್ಟಬೇಕು ಎನ್ನುವ ಆತ್ಮಾವಲೋಕನ ಮಾಡಿಕೊಳ್ಳಬೇಕಾದ ಸಂದೇಶ ಸಾರುವ ಚಿತ್ರ ಇದು.

ವಿಧಿಯಾಟದ ಮುಂದೆ ನಾವೆಲ್ಲರೂ ಕೈಗೊಂಬೆಗಳು. ಪೂರ್ವನಿರ್ಧಾರಿತ ಬರಹದಂತೆ ನಮ್ಮ ಜೀವನ. ಮುದ್ದುಕುವರನಾಗಿ ಜನಿಸುವ ಈ ಕಂದನಿಗೆ, ರಾಜ ಮನೆತನದ ಗತ್ತು ಗೈರತ್ತು ಏನೂ ಇರುವುದಿಲ್ಲ. ಒಂದು ದಿನ ತನ್ನ ತಂದೆಯೊಡನೆ ಪ್ರಯಾಣ ಮಾಡುತ್ತಿದ್ದಾಗ ಜೀವನದ ಮಗ್ಗಲುಗಳ ದರ್ಶನವಾಗುತ್ತದೆ. ಕಡುಬಡವನ ಹಪಾಹಪಿ, ಕುರುಡು ಮಗುವಿನ ಆಕ್ರಂಧನ, ಇವರೆಡು ದೃಶ್ಯಗಳು ಯುವರಾಜನ ಮಾನಸ ಸರೋವರವನ್ನು ಅಲುಗಾಡಿಸುತ್ತದೆ.

ಜೀವನ ಎಂದರೆ ಇಷ್ಟೆಯೇ.. ಬಡತನ, ಕುರುಡುತನ, ಯಾಕೆ ದೇವರ ಸೃಷ್ಟಿ ಏತಕ್ಕೆ ಹೀಗೆ.. ಈ ರೀತಿಯ ನಾನಾ ಪ್ರಶ್ನೆಗಳು ಆ ಮುಗ್ಧ ಮನದಲ್ಲಿ ಹುಟ್ಟಿದಾಗ, ಅವನ ತಂದೆ ಸಮಂಜಸ ಉತ್ತರ ಕೊಡದೆ, ನಾ ಬಡತನವನ್ನ ನಿರ್ಮೂಲನೆ ಮಾಡುತ್ತೇನೆ ಎಂದು ಒಂದಷ್ಟು ಕಾಸು ಕೊಡುತ್ತೇನೆ ಎಂದು ಭರವಸೆ ಕೊಡುತ್ತಾನೆ. ಆದರೆ ಬಡವರಿಗೆ ಸ್ವಾಭಿಮಾನ ದೊಡ್ಡದಾಗಿರುತ್ತದೆ.
ಆ ಬಾಲಕನ ಮನದಲ್ಲಿನ ಗೊಂದಲಗಳು ಇನ್ನಷ್ಟು ಜಟಿಲವಾಗುತ್ತವೆಯೇ ಹೊರತು ಕಡಿಮೆಯಾಗುವುದಿಲ್ಲ. ಬೆಳೆದಂತೆ ಅವು ದೊಡ್ಡದಾಗುತ್ತದೆ. ರಾಜಭೋಗಗಳು ಇದ್ದರೂ ದೇವರ ಕಡೆ ಇದ್ದ ಮನಸ್ಸು ಐಹಿಕ ಭೋಗಗಳಿಗೆ ಬಲಿಯಾಗುವುದಿಲ್ಲ.

ವಿಧಿಯಾಟದಂತೆ ಅಪ್ಪ ಅಮ್ಮ ಸಾವಿನ ಸುಖವನ್ನು ಅಪ್ಪಿಕೊಂಡಾಗ, ಮಾರುವೇಷದಲ್ಲಿ ಬರುವ ಈಶ್ವರ, "ನಿನಗೆ ಲೌಕಿಕ ಜ್ಞಾನಕ್ಕಿಂತ ಪಾರಮಾರ್ಥಿಕ ಜ್ಞಾನ ಹೆಚ್ಚು ಸುಖಕೊಡುತ್ತದೆ. ರೊಟ್ಟಿ ತಿನ್ನುವನೊಬ್ಬ, ನೀರು ಕುಡಿಯುವವ ಒಬ್ಬ ಎನ್ನುವಂತೆ ಆದರೆ ಉಪಯೋಗವಿಲ್ಲ. ಕಾಯಕವೇ ಕೈಲಾಸ ಎಂಬ ನುಡಿಯಂತೆ ನೆಡೆದುಕೋ" ಎನ್ನುವ ಮಾತನ್ನು ಹೇಳಿದಾಗ, ತಂದೆ ತಾಯಿಯ ಅಂತ್ಯ ಸಂಸ್ಕಾರವನ್ನು ಮಾಡದೆ, ಕಪಟಿ ರಾಜಗುರುವಿನ ಕೋಪಕ್ಕೆ ಗುರಿಯಾಗುತ್ತಾನೆ.

ಅನೇಕ ಭಾವನೆಗಳನ್ನು ಎದುರಿಸಿದರು, ಕುಗ್ಗದೆ, ಹಿಗ್ಗದೇ, ಕಷ್ಟಗಳನ್ನು ಎದುರಿಸಿ ಕಡೆಗೂ ಶಿವನ ಒಲುಮೆಯಿಂದ ಓಹಿಲೇಶ್ವರನಾಗಿ ಮುಕ್ತಿ ಹೊಂದುತ್ತಾನೆ.


ಈ ಸರಳಕಥೆಯನ್ನು ಅಚ್ಚುಕಟ್ಟಾಗಿ, ಅನೇಕ ಹಾಡುಗಳು, ಮತ್ತು ಹಿತ ಮಿತ ಸಂಭಾಷಣೆಯ ಜಲಕದಲ್ಲಿ ನಿಲ್ಲಿಸಿದ್ದಾರೆ ಟಿ ವಿ ಸಿಂಗ್ ಠಾಕೂರ್ ಅವರು.  ಜಿಕೆ ವೆಂಕಟೇಶ್ ಅವರ ಉತ್ತಮ ಸಂಗೀತವಿದ್ದ ಈ ಚಿತ್ರದಲ್ಲಿ ರಾಜ್ ಅವರ ಹಾಡುಗಾರಿಕೆಯ ಪ್ರತಿಭೆ ಅಲ್ಲಲ್ಲಿ ಕೇಳಸಿಗುತ್ತದೆ. ಕೆಲವು ಶ್ಲೋಕಗಳನ್ನು, ವಚನದ ರೂಪದಲ್ಲಿರುವ ಕೆಲವು ಮಾತುಗಳನ್ನು ಹಾಡಿನ ರೂಪದಲ್ಲಿ ತಂದಿರುವ ಈ ಚಿತ್ರ ಬಹುಶಃ ರಾಜ್ ಅವರ ಗಾಯನ ಪ್ರತಿಭೆಯ ಒಂದು ಪ್ರಭೆ ಕಂಡು ಬರುತ್ತದೆ.

ಜಿ ವಿ ಅಯ್ಯರ್ ಮತ್ತೆ ದುಷ್ಟನ ಪಾತ್ರದಲ್ಲಿ ಮಿಂಚುತ್ತಾರೆ. ಅವರಿಗೆ ತೊಡರುಗಾಲು ಕೊಡುವ ಪಾತ್ರದಲ್ಲಿ ಶುಖನಾಗಿ ನರಸಿಂಹರಾಜು ನಿಂತಿದ್ದಾರೆ.


ನರಸಿಂಹರಾಜು ಪಿಶಾಚಿಯ ಕಾಟದಿಂದ ಪೇಚಾಡುತ್ತಿದ್ದಾಗ ಬರುವ ಒಂದು ಪುಟ್ಟ ಸಂಭಾಷಣೆ ನಗೆ ತರಿಸುತ್ತದೆ.
ಭೂತಾಕಾರವಾಗಿ ನಿಂತು ಗಹಗಹಿಸುವ ಪಿಶಾಚಿ
"ನಾನು ಒಬ್ಬರಿಗೂ ಹಿಂಸೆ ಕೊಡೋಲ್ಲ"
ಅದಕ್ಕೆ ನರಸಿಂಹರಾಜು ಅವರ ಉತ್ತರ
"ದರ್ಶನ ಕೊಟ್ಟರೆ ಸಾಕು ಹಿಂಸೆ ಬೇರೆ ಕೊಡಬೇಕೇ"
ನಾನು ಯಾರ ಪ್ರಾಣವನ್ನು ತೆಗೆಯುವುದಿಲ್ಲ"
"ಅದೇ ಹೋಗುತ್ತೆ.. ನಿನ್ನ ನೋಡಿದ ತಕ್ಷಣ"


ಚುಟುಕು ಸಂಭಾಷಣೆ ಖುಷಿ ಕೊಡುತ್ತದೆ.

ಉಳಿದ ಪಾತ್ರಗಳಲ್ಲಿ ಅರ್ಧಂಬರ್ಧ ಬುದ್ಧಿವಂತಿಕೆಯ ಪಾತ್ರದಲ್ಲಿ ಮಹಾರಾಜನಾಗಿ ಕಲ್ಯಾಣ್ ಕುಮಾರ್ ಇದ್ದರೇ, ಓಹಿಲೇಶ್ವರನ ತಂದೆಯಾಗಿ ಎಚ್ ಎಲ್ ರಾಮಚಂದ್ರಶಾಸ್ತ್ರಿ ಬರುತ್ತಾರೆ. ಮಿಕ್ಕ ಕೆಲವು ಪಾತ್ರಗಳಲ್ಲಿ ಬರುವ ನಟರು ನಟಿಯರು ತಮ್ಮ ತಮ್ಮ ಪಾತ್ರಕ್ಕೆ ಎಷ್ಟು ಬೇಕೋ ಅಷ್ಟು ನಟನೆಯನ್ನು ನೀಡಿದ್ದಾರೆ.

ಈ ಚಿತ್ರದ ಉತ್ತಮ ಅಂಶ ಎಂದರೆ ಕೆಲವು ನೆನಪಲ್ಲಿ ಉಳಿಯುವ ಸಂಭಾಷಣೆಗಳು.

ಮೇಲೆ ಹೇಳಿದ ಸಂಭಾಷಣೆಯ ಜೊತೆಯಲ್ಲಿ ಇನ್ನೊಂದಿಷ್ಟು
"ನಿಮ್ಮ ರಾಜ್ಯಕ್ಕೆ  ನೀವು ಹೋಗಿ
ನನ್ನ ರಾಜ್ಯಕ್ಕೆ ನಾನು ಹೋಗುತ್ತೇನೆ"  ಓಹಿಲೇಶ್ವರನಿಗೆ ಪ್ರಜೆಗಳು ರಾಜ್ಯ ನೋಡಿಕೊಳ್ಳಿ ಧಣಿ ಎಂದಾಗ ಹೇಳುವ ಮಾತಿದು.

"ಸಾವಿಲ್ಲದ ಮನೆಯಿಂದ ಬೂದಿ ಕೊಡಪ್ಪ" ಎಂದಾಗ ಹಳ್ಳಿಯವ "ಅಯ್ಯೋ ಸಿಹಿಯಾದ ಬೇವಿನ ಗಿಡ ತಂದು ಕೊಡಿ" ಎನ್ನುತ್ತಾನೆ. ಇಂತಹ ಮಾರ್ಮಿಕ ಮಾತಿದು.

ಇಬ್ಬರು ರಾಜಭಟರು ಬಂದು "ದೇವರು ಕರೆಯುತ್ತಿದ್ದಾನೆ ಬಾ" ಎಂದಾಗ ನರಸಿಂಹರಾಜು ಹೇಳುವ ಮಾತು
"ದೇವರು ಕರೆದರೆ ನಾಲ್ಕು ಜನದ ಜೊತೆ ಹೋಗಬೇಕು ನೀವು ಇಬ್ಬರೇ ಬಂದಿದ್ದೀರಲ್ಲೋ".. ನಗು ಬರುತ್ತದೆ ಹಾಗೆಯೇ ಅದರೊಳಗಿನ ಸಂದೇಶ  ಭರಿತ ಮಾತು ಸೂಪರ್.

ರಾಜ್ ತಮ್ಮದೇ ಪರಿಧಿಯಲ್ಲಿ ಈ ಚಿತ್ರದಲ್ಲಿ ಕಾಡುತ್ತಾರೆ. ಉತ್ತಮ ಚಿತ್ರ.. ಉತ್ತಮ ಗೀತೆಗಳು.. ಉತ್ತಮ ಅಭಿನಯ ಈ ಚಿತ್ರದ ತಾಕತ್ತು. ಬಸವಣ್ಣ, ಅಕ್ಕ ಮಹಾದೇವಿ ಹೀಗೆ ವಚನಕಾರರ ಮಾತುಗಳನ್ನು ಸೋಮನಾಥ ಎಂಬ ಅಂಕಿತನಾಮದಲ್ಲಿ ಉಪಯೋಗಿಸಿದ್ದೇವೆ ಎಂಬ ಫಲಕ ಆರಂಭದಲ್ಲಿ ತೋರಿಸುವುದು ನಿರ್ದೇಶಕರ ಜಾಣ್ಮೆ ಮತ್ತು ಆ ಮಹಾನ್ ವಚನಕಾರರ ಪದ ಸಂಪತ್ತನ್ನು ಗೌರವ ಪೂರಿತವಾಗಿ ಉಪಯೋಗಿಸುವ  ರೀತಿ ಇಷ್ಟವಾಗುತ್ತದೆ.


ಜೀವನ ಆರಂಭವಾದಾಗ ನಮ್ಮ ಜೀವನ ಹೇಗಿರುತ್ತದೆ ಎನ್ನುವ ಒಂದು ಚಿಕ್ಕ ಟ್ರೈಲರ್ ನಮಗೆ ಸಿಗುತ್ತದೆ, ಅದರ ಜಾಡು ಹಿಡಿದು ಹೊರಟರೆ.. ಜೀವನ ಸಾಕ್ಷಾತ್ಕಾರ ಎನ್ನುವ ಸಂದೇಶವನ್ನು ಹೊತ್ತು ತಂದ ಈ ಚಿತ್ರ ಒಂದು ರತ್ನವಾಗಿ ನಮ್ಮ ಮುಂದೆ ನಿಲ್ಲುತ್ತದೆ.

ಮತ್ತೊಂದು ಚಿತ್ರ ರತ್ನದ ಜೊತೆಯಲ್ಲಿ ರಾಜ್ ಬರುತ್ತಾರೆ.. !!!

No comments:

Post a Comment