Saturday, February 18, 2017

ಮನವನ್ನು ಹರನ ತಾಣವ ಮಾಡುವ ಭೂ ಕೈಲಾಸ (1958) (ಅಣ್ಣಾವ್ರ ಚಿತ್ರ ೦೮ / ೨೦೭)


ಅವಕಾಶಗಳು ಹೇಗೆ ಬರುತ್ತದೆಯೋ ಹಾಗೆ ನುಗ್ಗಬೇಕು. ಉಳಿವಿನ ಒತ್ತಡ ಒಂದು ಕಡೆ,  ಬಣ್ಣದ ಕನಸ್ಸು ಇನ್ನೊಂದೆಡೆ. ಈ ಹಾದಿಯಲ್ಲಿ ಸಿಕ್ಕ ಪಾತ್ರಗಳು ಚಿಕ್ಕದೇ ಇರಲಿ ದೊಡ್ಡದೇ ಇರಲಿ ಒಪ್ಪಿಕೊಂಡು ತಮಗೆ ಹೇಳಿದಷ್ಟು ಅಭಿನಯ ನೀಡುತ್ತಿದ್ದ ರಾಜ್ ಅವರಿಗೆ ಇನ್ನೊಂದು ಉತ್ತಮ ಅವಕಾಶ ಸಿಕ್ಕಿತು.. !

ಆ ಕಾಲದ ಉತ್ತಮ ತಾಂತ್ರಿಕತೆ - ಹಲವಾರು ರಾಜ್!
ಹಿಂದಿನ ಚಿತ್ರಗಳಲ್ಲಿನ ತಮ್ಮ ಅಭಿನಯದ ಮುದ್ರೆಯನ್ನು ಇನ್ನಷ್ಟು ಗಟ್ಟಿಯಾಗಿ ಒತ್ತಲು ಈ ಚಿತ್ರ ಸಹಾಯ ಮಾಡಿತು. ಪ್ರತಿಷ್ಠಿತ ಎ. ವಿ. ಎಂ  ಸಂಸ್ಥೆ ನಿರ್ಮಿಸಿದ ಈ ಚಿತ್ರವನ್ನ ನಿರ್ದೇಶಿಸಿದ್ದು ಕೆ. ಶಂಕರ್.

ಕು ರಾ ಸೀತಾರಾಮಶಾಸ್ತ್ರಿ ಅವರ ಸಾಹಿತ್ಯ ಸಂಭಾಷಣೆ ಇದ್ದ ಈ ಚಿತ್ರದಲ್ಲಿ ಸುಮಾರು ೧೮ ಹಾಡುಗಳಿದ್ದದು ವಿಶೇಷ.

ಒಂದು ಹಾಡಿನಲ್ಲಿ ಇಡೀ ರಾಮಾಯಣವನ್ನು ರಚಿಸಿದ್ದು. ದೃಶ್ಯದ ಮೂಲಕ ತೋರಿಸಿದ್ದಾರೆ.  ಸಂಗೀತ, ಗಾಯನ ಎಲ್ಲವೂ ಸುಂದರವಾಗಿದೆ. ಇಂದಿಗೂ "ರಾಮನ ಅವತಾರ ರಘುಕುಲ ಸೋಮನ ಅವತಾರ" ಅತ್ಯಂತ ಜನಪ್ರಿಯ ಕನ್ನಡ ಹಾಡುಗಳಲ್ಲಿ ಒಂದು.  ರಾಮನ ಜನನದಿಂದ ಪಟ್ಟಾಭಿಷೇಕದವರೆಗೆ ಸಮಗ್ರ ಕತೆಯನ್ನು ಚಿಕ್ಕ ಪುಟ್ಟ ದೃಶ್ಯದಲ್ಲಿ ಚಿತ್ರಿಸಿರುವುದು ನಿರ್ದೇಶಕರ ಕಲಾವಂತಿಕೆಗೆ ಸಾಕ್ಷಿ.

ಆ ತುಣುಕುಗಳು ನಿಮಗಾಗಿ..

ಶ್ರೀ ರಾಮ ಮತ್ತು ಅನುಜರ ಜನನ 
ಅಹಲ್ಯೆ ಶಾಪ ವಿಮೋಚನೆ 

ಶಿವ ಧನಸ್ಸು ಮತ್ತು ಶ್ರೀ ರಾಮ 

ಕೈಕೇಯಿ ಮತ್ತು ದಶರಥ ... ಶಾಪವಾದ ಕೊಟ್ಟ ಮಾತು 

ಭರತನ ಭ್ರಾತೃ ಪ್ರೇಮ... ರಾಮನ ಪಾದುಕೆ ಹೊತ್ತ ಭರತ
ಲಕ್ಶ್ಮಣ ರೇಖೆ



ಸೀತಾಪಹರಣ 

ಕನ್ನಡ ಕುಲ ಪುಂಗವ ಹನುಮ 

ರಾಮನ ಮುದ್ರಿಕೆ ಕಂಡ  ಸೀತೆ 

ಲಂಕಾದಹನ 

ಮರಳಿ ಆಯೋಧ್ಯೆಗೆ 

ರಾಜ್ ಕುಮಾರ್ ಅವರು ರಾವಣನಾಗಿ ಅಬ್ಬರಿಸಿದ ಈ ಚಿತ್ರದಲ್ಲಿ ಅವರ ಅಭಿನಯದ ಪ್ರಚಂಡ ಪ್ರತಿಭೆ ತೆರೆಯ ಮೇಲೆ ಬಂದಿದೆ. ಸಂಭಾಷಣೆ, ಉಚ್ಚಾರಣೆ, ಕಣ್ಣಲ್ಲಿ ಕಾರುವ ಕೋಪ, ಗಹಗಹಿಸಿ ನಗುವುದು, ಓರೇ ನೋಟ, ಆಕ್ರೋಶ, ಸಿಟ್ಟು, ದೇಹ ಭಾಷೆ ಎಲ್ಲವೂ ಸುಸೂತ್ರವಾಗಿ ಮೂಡಿ ಬಂದಿದೆ. ತೆರೆಯನ್ನು ಸಂಪೂರ್ಣವಾಗಿ ಆವರಿಸಿಕೊಳ್ಳುವ ಅವಕಾಶವನ್ನು ಸರಿಯಾಗಿ ಉಪಯೋಗಿಸಿಕೊಂಡಿದ್ದಾರೆ.
ರಾವಣನಾಗಿ ರಾಜ್ 

 ಈ ಚಿತ್ರದ ಕಥೆ ಎಲ್ಲರಿಗೂ ಗೊತ್ತಿರುವುದೇ. ಲಂಕೇಶ್ವರ ರಾವಣ ತನ್ನ ತಾಯಿಯ ಮೇಲಿನ ಅಪರಿಮಿತ ಪ್ರೀತಿಯಿಂದಾಗಿ, ಅವಳ ನಿತ್ಯ ಪೂಜೆಗೆ ಶಿವನ ಆತ್ಮಲಿಂಗವನ್ನೇ ತರುವುದಾಗಿ ಉಗ್ರ ತಪಸ್ಸು ಮಾಡುತ್ತಾನೆ.
ರಾವಣನ ಮಾತೆ ಕೈಕಸಿಯ ಶಿವನ ಪೂಜೆ 
ಅವನ ತಪಸ್ಸಿನ ಭಕ್ತಿಗೆ ಮೆಚ್ಚಿದ ಪರಶಿವ ಪಾರ್ವತಿಯೊಂದಿಗೆ ಪ್ರಕಟವಾಗುತ್ತಾನೆ. ಅದಕ್ಕೆ ತುಸುಮುಂಚೆ ರಾವಣನ ತಪಸ್ಸಿನ ಇಂಗಿತವನ್ನು ತಿಳಿದ ಕಲಹಪ್ರಿಯ ಆದರೆ ಲೋಕಕಲ್ಯಾಣಕ್ಕಾಗಿ ಶ್ರಮಿಸುವ ನಾರದ, ಪಾರ್ವತಿಯನ್ನು ಹರಿಯ ಬಳಿ ಸಹಾಯ ಕೇಳುವಂತೆ ಮಾಡುತ್ತಾನೆ.  ಹರಿಯು ಮೋಹದ ಹೆಣ್ಣಿನ ರೂಪದಲ್ಲಿ ರಾವಣನ ಮನಸ್ಸನ್ನು ಸೇರಿಬಿಡುತ್ತಾನೆ.
ತಪಸ್ಸಿಗೆ ಹೊರಟ ರಾವಣ 

ಪರಶಿವ ಪಾರ್ವತಿ ಸಮೇತನಾಗಿ ಪ್ರಕಟವಾಗಿ ಬೇಡಿದ ವರ ಕೊಡುವೆ ಎಂದಾಗ, ಹರಿಯ ಮೋಹದ ಜಾಲದಲ್ಲಿ ಸಿಕ್ಕಿದ್ದ ರಾವಣ, ತಾಯಿ ಪಾರ್ವತಿಯ ಮೇಲೆಯೇ ಮೋಹವಶನಾಗಿ ಅವಳನ್ನೇ ಬೇಡುತ್ತಾನೆ. ಭಕ್ತರ ಇಷ್ಟ ನೆರವೇರಿಸುವ ಶಿವ, ಒಪ್ಪಿಗೆ ನೀಡಿ ಪಾರ್ವತಿಯನ್ನು ರಾವಣ ಜೊತೆಯಲ್ಲಿ ಕಳಿಸುತ್ತಾನೆ .
ಉಗ್ರರೂಪಿಯಾಗಿ ಪಾರ್ವತಿ 

ಮತ್ತೆ ನಾರದ ತನ್ನ ಕೈಚಳಕ ತೋರಿ, ರಾವಣನ  ಕಣ್ಣಿಗೆ ಪಾರ್ವತಿ ಉಗ್ರ ರೂಪಿಯಾಗಿ ಕಾಣುವ ಹಾಗೆ ಮಾಡುತ್ತಾನೆ.  ಕುಪಿತಗೊಂಡ ರಾವಣ, ಪಾರ್ವತಿಯನ್ನು  ಕೈಲಾಸಕ್ಕೆ ಬಿಟ್ಟು, ಶಿವನಿಗೆ  ಹರಿತವಾದ ಕುಪಿತ ಮಾತುಗಳನ್ನು ಹೇಳಿ ಹೊರಡುತ್ತಾನೆ.

ನಾರದ ರಾವಣನ ಉಗ್ರಮಾತುಗಳಿಗೆ ಸಮಾಧಾನ ಹೇಳುತ್ತಾ ಪಾರ್ವತಿಗಿಂತಲೂ ಸುಂದರಿ ಪಾತಾಳ ಲೋಕದ ದೊರೆ ಮಯನ ಮಗಳು ಮಂಡೋದರಿಯ ಜೊತೆ ಲಗ್ನವಾಗುವಂತೆ ಮಾಡುತ್ತಾನೆ. ಪಾರ್ವತಿಯ ಮೋಹ ಇನ್ನೂ ಇಳಿಯದ ಲಂಕೇಶ್ವರ ತನ್ನ ಅರಮನೆಗೆ ಬಂದು ತಾಯಿಯ ಆಶೀರ್ವಾದ ಬೇಡಿದಾಗ, ತಾಯಿ ಕೇಳುತ್ತಾಳೆ "ರಾವಣ ಆತ್ಮಲಿಂಗವೆಲ್ಲಿ"
ಮಂಡೋದರಿಯಾಗಿ ಜಮುನಾ 
 ತನ್ನ ತಪ್ಪಿನ ಅರಿವಾಗದ ರಾವಣ ಅಹಂನಲ್ಲಿ ಇನ್ನಷ್ಟು ಮಾತಾಡಿದಾಗ ನಾರದ ಹರಿಯ ಮೋಹರೂಪಿಯನ್ನು ರಾವಣನ ಮನದಿಂದ ದೂರವಾಗುವಂತೆ ಮಾಡಿದಾಗ, ರಾವಣನಿಗೆ ತನ್ನ ತಪ್ಪಿನ  ಅರಿವಾಗುತ್ತದ. ಮತ್ತೆ ಉಗ್ರತಪಸ್ಸಿಗೆ ಕೂರುತ್ತಾನೆ.

ಭಕ್ತರ ಭಕ್ತ ಮಹಾದೇವ ರಾವಣನಿಗೆ ತನ್ನ ಆತ್ಮ ಲಿಂಗವನ್ನು ಕೊಡುತ್ತಾ, ಇದರೊಳಗೆ ಅಡಗಿರುವ ಕಾಂತಿಗೆ, ಶಕ್ತಿಗೆ ಭೂ ಪ್ರಕೃತಿ ಸದಾ ಆಕರ್ಷಿಸಿರುತ್ತದೆ.. ನಿರ್ಧಾರಿತ ಸ್ಥಳ ಸೇರುವತನಕ ಇದು ಭೂಸ್ಪರ್ಶವಾಗದ ರೀತಿಯಲ್ಲಿ ನೋಡಿಕೋ ಎಂದು ಎಚ್ಚರಿಕೆಯ ಮಾತುಗಳನ್ನುಹೇಳುತ್ತಾನೆ.
ರಾವಣನಿಗೆ ಆತ್ಮಲಿಂಗ 
ಕರಾವಳಿಯ ಮಾರ್ಗದಲ್ಲಿ ಲಂಕೆಗೆ ಹೊರಟ ರಾವಣನ್ನು ಕಂಡು, ನಾರದ ಗಣಪತಿಗೆ ಹೇಳುತ್ತಾನೆ "ನಿನಗೆ ಆಗ್ರ ಪೂಜೆ ಮಾಡದೆ ತನ್ನ ಕಾರ್ಯ ಸಾಧಿಸಿದ್ದಾನೆ.. ಇನ್ನೂ ಆತ್ಮಲಿಂಗ ಲಂಕೆಗೆ ಸೇರಿದರೆ ಮುಗಿಯಿತು.. ನೀವೆಲ್ಲಾ ರಾವಣನ  ಊಳಿಗಕ್ಕೆ ಸಿದ್ಧವಾಗಿರಿ"
ಗಣಪನ  ಅಭಯ ಹಸ್ತ 

ಚತುರಮತಿ ಗಣಪತಿ ಗೋಪಾಲಕನಾಗಿ ರಾವಣನಿಗೆ ಕಾಣಿಸಿಕೊಂಡು, ಅರ್ಘ್ಯ ಕೊಡುವುದಕ್ಕಾಗಿ ರಾವಣ ಆತ್ಮಲಿಂಗವನ್ನು ತನ್ನ ಕೈಗೆ ನೀಡುವಂತೆ ಮಾಡುತ್ತಾನೆ. ಮೂರು ಬಾರಿ ಕರೆಯುತ್ತೇನೆ, ಅಷ್ಟರಲ್ಲಿ ನೀ ಬರದೇ ಹೋದರೆ ಕೆಳಗೆ ಇಟ್ಟು, ಅರ್ಘ್ಯ ನೀಡಲು ಹೋಗುತ್ತೇನೆ ಎನ್ನುತ್ತಾನೆ.
ಭೂಸ್ಪರ್ಶವಾದ ಆತ್ಮ ಲಿಂಗ 

ಗೋಪಾಲಕನನ್ನು ಥಳಿಸುವ ರಾವಣ 

ಗಣಪನ ಕುಚೋದ್ಯ 
ಪೂರ್ವನಿರ್ಧಾರಿತ ಯೋಜನೆಯಂತೆ ಮೂರು ಬಾರಿ ರಾವಣನ ಹೆಸರು ಕೂಗಿ, ರಾವಣ ಬರದೇ ಇರುವುದನ್ನು ನೋಡಿ ಭೂ ಸ್ಪರ್ಶ  ಮಾಡಿಸಿಯೇ ಬಿಡುತ್ತಾನೆ. ಕುಪಿತಗೊಂಡ ರಾವಣ ಆ ಗೋಪಾಲಕನಿಗೆ ಮನಬಂದಂತೆ ಬಯ್ದು, ಹೊಡೆದು.. ನಂತರ ಆ ಆತ್ಮಲಿಂಗವನ್ನು ಭೂ ತಾಣದಿಂದ ಹೊರ ತೆಗೆಯಲು  ಶ್ರಮಿಸಿ ಆಗದೆ ಹೋಗಿ ಕಡೆಗೆ ತನ್ನ  ಆತ್ಮಾರ್ಪಣೆ ಮಾಡಲು ಸಿದ್ಧವಾಗುತ್ತಾನೆ.

ಅವನ ಭಕ್ತಿಗೆ ಮೆಚ್ಚಿ, ಸದಾಶಿವ ಭೂ ಸ್ಪರ್ಶ ಮಾಡಿದ ಈ ತಾಣ ಭೂ ಕೈಲಾಸ ಎಂದು ಪ್ರಸಿದ್ಹಿಯಾಗಲಿ ಎಂದು
ಹರಸುತ್ತಾನೆ.
ಭೂಕೈಲಾಸ 
ಈ ಕಥೆಯನ್ನು ದೃಶ್ಯರೂಪದಲ್ಲಿ ಕಟ್ಟಿಕೊಟ್ಟಿರುವ ರೀತಿ  ಸೊಗಸಾಗಿದೆ.  ಬರೋಬ್ಬರಿ ಹದಿನೆಂಟು ಹಾಡುಗಳು ಇದ್ದರೂ ಚಿತ್ರದ ಓಘಕ್ಕೆ ಅಡ್ಡಿಮಾಡದೆ ಚಿತ್ರದ ಕತೆಯನ್ನು  ಕೊಂಡೊಯ್ಯುತ್ತದೆ. "ರಾಮನ ಅವತಾರ" ಪ್ರಸಿದ್ಧವಾದ ಹಾಡಾಗಿದೆ.

ರಾವಣನಾಗಿ ರಾಜ್ ಕುಮಾರ್ ಅದ್ಭುತವಾಗಿ ನಟಿಸಿದ್ದಾರೆ..
ಭವಿಷ್ಯದ ತಾರಾ ಪಟ್ಟ - ರಾಜ್ 

ನಾರದನಾಗಿ  ತುಂಟನಗುವಿನ ಸರದಾರ ಕಲ್ಯಾಣ್ ಕುಮಾರ್ ಚಿತ್ರದುದ್ದಕ್ಕೂ ಕಾಣುತ್ತಾರೆ. ಸಂಭಾಷಣೆ, ಆ ಕುಟಿಲತೆ, ತರ್ಕಬದ್ಧವಾದ  ಮಾತುಗಳು.ಕುಚೋದ್ಯ ಎಲ್ಲದರಲ್ಲಿಯೂ ಮಿಂಚುತ್ತಾರೆ.
 ತುಂಟ ಕಲಹಪ್ರಿಯ ನಾರದನಾಗಿ ಕಲ್ಯಾಣ್ ಕುಮಾರ್ 
ಅಶ್ವಥ್ ರಾಜ್ ಚಿತ್ರಸರಣಿಯಲ್ಲಿ ಮೊದಲಬಾರಿಗೆ  ಸೇರಿಕೊಳ್ಳುತ್ತಾರೆ. ಶಿವನ ಪಾತ್ರದಲ್ಲಿ  ಹದವರಿತ ನಟನೆ. ಜೀವಂತ ಹಾವನ್ನು ಕೊರಳಿಗೆ ಸುತ್ತಿಕೊಂಡು  ಅಭಿನಯಿಸಿರುವುದು ವಿಶೇಷ.
ಪರಶಿವನಾಗಿ ಅಶ್ವತ್ 
ಮಂಡೋದರಿಯಾಗಿ ಜಮುನಾ ಅವರ ಅಭಿನಯ ಸೊಗಸಾಗಿದೆ.
ಶಿವನ ಸತಿ  ಪಾರ್ವತಿಯಾಗಿ ಬಿ ಸರೋಜಾದೇವಿ ಮುದ್ದಾಗಿ ಕಾಣುತ್ತಾರೆ.
ಕಪ್ಪುಬಿಳುಪಿನ ದೃಶ್ಯಗಳಲ್ಲಿ ನಟ ನಟಿಯರು ಮುದ್ದಾಗಿ ಕಾಣುತ್ತಾರೆ.  ಉಳಿದ ಪಾತ್ರವರ್ಗದಲ್ಲಿ ಚಿತ್ರಕತೆಗೆ ತಕ್ಕ ಅಭಿನಯ

ಪಾರ್ವತಿಯಾಗಿ ಬಿ ಸರೋಜಾದೇವಿ 
ಆರ್ ಸುದರ್ಶನಂ ಮತ್ತು ಆರ್ ಗೋವರ್ಧನಂ ಅವರ ಸಂಗೀತದಿಂದ ಬೆಳಗಿದ್ದ ಈ ಚಿತ್ರಕ್ಕೆ ಛಾಯಾಗ್ರಹಣ ಮಾಧವ ಬುಲ್ ಬುಲೆ ಅವರದ್ದು.  ಗಾಯಕರು  ಸಿ ಎಸ್ ಜಯರಾಮನ್, ಎಸ್ ಗೋವಿಂದರಾಜನ್, ಎಂ ಎಲ್ ವಸಂತಕುಮಾರಿ, ಪಿ ಸುಶೀಲ, ಟಿ ಎಸ್ ಭಗವತಿ ಮತ್ತು ಎ ವಿ ಕೋಮಲ.

ಗುರಿ ಕಣ್ಣ ಮುಂದೆ ಇದ್ದಾಗ ಅಡ್ಡಿ ಅಡಚಣೆಗಳು ಇರುತ್ತವೆ, ಗುರಿ ತಪ್ಪಿಸಲು ಹೊರಗಿನ ಶಕ್ತಿಗಳು  ತಡೆ ಹಾಕುತ್ತವೆ, ಆದರೆ ಅದನ್ನು ದಾಟಬೇಕು. ಗುರಿಯಲ್ಲಿ ಸೋತರು ಮತ್ತೊಮ್ಮೆ ಶಕ್ತಿ ಮೈಗೂಡಿಸಿಕೊಂಡು ಮುನ್ನುಗ್ಗಬೇಕು. ಇದೆಲ್ಲದರ ಜೊತೆಯಲ್ಲಿ  ಗುರಿ ಸಾತ್ವಿಕವಾಗಿದ್ದಾಗ ದೈವದ ಪ್ರೇರಣೆ ಇರುತ್ತದೆ, ಆದರೆ ಆ ಗುರಿಯಲ್ಲಿ ಹಾದಿ ತಪ್ಪಿದರೆ ದೈವವೇ ಕಾಡುವ ಭೂತವಾಗುತ್ತದೆ ಎನ್ನುವ ಸಂದೇಶ  ಸಿಗುತ್ತದೆ..

ರಾಜ್ ಕುಮಾರ್ ತಮಗೆ ಸಿಕ್ಕ ಪಾತ್ರ ದೊಡ್ಡದೇ ಇರಲಿ ಚಿಕ್ಕದೇ ಇರಲಿ ಶ್ರದ್ಧೆಯಿಂದ ನಿರ್ವಹಿಸುತ್ತಿದ್ದದು ಅವರ ಹೆಗ್ಗಳಿಕೆ.. ಅಂತಹ ಇನ್ನೊಂದು  ಶ್ರದ್ಧೆಯಿಂದ ಕೂಡಿದ ಚಿತ್ರದ ಜೊತೆಯಲ್ಲಿ ಮತ್ತೊಮ್ಮೆ ಸೇರೋಣವೇ.. !

Sunday, February 5, 2017

ಸಾಮಾಜಿಕ ಕಳಕಳಿ ತುಂಬಿಕೊಂಡು ಬಂದ ರಾಯರ ಸೊಸೆ (1957) (ಅಣ್ಣಾವ್ರ ಚಿತ್ರ ೦೭ / ೨೦೭)

ಶಾಲೆಯಲ್ಲಿ ಮಾಸ್ತರು ಒಮ್ಮೆ ಪಾಠದ ಮಧ್ಯೆ "ನಮಗೆ ಬೇಕಿದ್ದಕ್ಕಿಂತ ಒಂದು ಗ್ರಾಂ ಹೆಚ್ಚಿಗಿದ್ದರೂ ಅದು ಅನ್ಯ ಮಾರ್ಗದಲ್ಲಿ ಸಂಪಾದಿಸಿದ್ದು ಎನ್ನಬಹುದು" ಎಂದು ಹೇಳಿದ್ದರು.. ಆಗ ನಮಗೆ ಬರಿ ಪದಗಳು ಮಾತ್ರ ಅರ್ಥವಾಗಿತ್ತು, ಆದರೆ ಭಾವವಾಗಲಿ ಅಥವಾ ಪದಗಳ ಮಧ್ಯೆ ಬಚ್ಚಿಟ್ಟುಕೊಂಡಿದ್ದ ಅರ್ಥವಾಗಲಿ ಆಗಿರಲಿಲ್ಲ. ಕಾಲಾನುಕಾಲಕ್ಕೆ ಬುದ್ಧಿ ವಿಕಸನಗೊಂಡಹಾಗೆ (???????) ಮಾಸ್ತರು ಹೇಳಿದ್ದ ಆ ಪದಗಳ ಗೂಢಾರ್ಥ ಅರಿವಾಗತೊಡಗಿತ್ತು.

ತನ್ನ ಬಳಿಯೇ ಅಪಾರ ಸಂಪತ್ತಿದ್ದರೂ,  ಧನದಾಹಕ್ಕೆ ಮರುಳಾಗಿ ಸುಂದರ ನಂದನವನದಂತಹ ಸಂಸಾರವನ್ನು ನಿರಾಶೆಯ ಕಡಲಿನ ಕಡೆಗೆ ದಾಪುಗಾಲು ಹಾಕುತ್ತಾರೆ.. ಸಮಯಕ್ಕೆ ಸರಿಯಾಗಿ ಸಿಕ್ಕ ತಿಳುವಳಿಕೆಯ ಮಾರ್ಗದಿಂದ ಹೇಗೆ ಬದಲಾಗಬಹುದು ಎನ್ನುವ ಪುಟ್ಟ ಸಂದೇಶ ಹೊಂದಿದ್ದು ಈ ಚಿತ್ರದ ಹೆಗ್ಗಳಿಕೆ.

ಭಕ್ತಿರಸದಲ್ಲಿ ಮೀಯುತ್ತಿದ್ದ ರಾಜ್ ತಮ್ಮ ಏಳನೇ ಚಿತ್ರದಲ್ಲಿ ವಿಶಿಷ್ಟ ಪಾತ್ರದಲ್ಲಿ ಮೂಡಿಬಂದಿದ್ದಾರೆ.   ವರದಕ್ಷಿಣೆ ಪಿಡುಗು ಹೆಣ್ಣುಮಕ್ಕಳನ್ನು ಮದುವೆಗೆ ಮುಂಚೆ ಮತ್ತು ನಂತರವೂ ಕಾಡುವ ಭೂತ. ವಿಶೇಷ ಎಂದರೆ ಈ ಚಿತ್ರವನ್ನು ನಿರ್ಮಿಸಿದ್ದು ರಾಜ್ ಅವರ ಹಿಂದಿನ ಆರು ಚಿತ್ರಗಳಲ್ಲಿ ಐದು ಚಿತ್ರಗಳಿಗೆ ನಾಯಕಿಯಾಗಿದ್ದ ಕರುನಾಡಿನ ಅಮ್ಮ ಪಂಡರಿಬಾಯಿ ಅವರು.

ಶ್ರೀ ಪಾಂಡುರಂಗ ಪ್ರೊಡಕ್ಷನ್ಸ್ ಲಾಂಛನದಲ್ಲಿ ನಿರ್ಮಿತವಾದ ಈ ಚಿತ್ರವನ್ನು ಆರ್. ರಾಮಮೂರ್ತಿ ಮತ್ತು ಕೆ ಎಸ್ ಮೂರ್ತಿ ನಿರ್ದೇಶನ ಮಾಡಿದ್ದಾರೆ, ಅವರಿಗೆ ಕಥೆ ಸಂಭಾಷಣೆ ಕೊಟ್ಟವರು ಪಿ. ಗುಂಡೂರಾವ್. ಛಾಯಾಗ್ರಹಣಕ್ಕೆ ಕ್ಯಾಮೆರಾ ಹಿಡಿದವರು ಸಂಪತ್ ಮತ್ತು ಸಂಗೀತ ದಿವಾಕರ್ ಅವರದ್ದು.

ಕಲ್ಯಾಣ್ ಕುಮಾರ್ ಮತ್ತು ಮೈನಾವತಿ ದಾಂಪತ್ಯದಲ್ಲಿ ಕಲ್ಯಾಣ್ ಕುಮಾರ್ ಅವರ ಧನದಾಹಿ ಅಪ್ಪ ರಾಮಚಂದ್ರಶಾಸ್ತ್ರಿ ವರದಕ್ಷಿಣೆ ಬಾಕಿ ಬಾಬ್ತು ನೆಪದಲ್ಲಿ ತನ್ನ ಸೊಸೆಯನ್ನು ತವರಿಗೆ ಅಟ್ಟುತ್ತಾರೆ. ಅವರ ಮಡದಿ ಜಯಶ್ರೀ ಎಷ್ಟೇ ಗೋಗರೆದರು ಕೇಳದೆ ಸೊಸೆಯನ್ನು ತವರಿಗೆ ಹೋಗಿ ಬರಬೇಕಿದ್ದ ಹಣವನ್ನು ತಂದರೆ ನಿನಗೆ ಜಾಗ ಇಲ್ಲದೆ ಹೋದರೆ ಅಲ್ಲೇ ನೀನು ಇಲ್ಲೇ ಇವನು ಎಂದು ಕಠೋರವಾಗಿ ಹೇಳಿ ಶುಕ್ರವಾರ ಮುಸ್ಸಂಜೆ ತನ್ನ ಸೊಸೆಯನ್ನು ಹೊರಹಾಕುತ್ತಾರೆ.

ತವರು ಮನೆಯ ಪರಿಸ್ಥಿತಿ ಗೊತ್ತಿದ್ದ ಮೈನಾವತಿ, ಏನೂ ಮಾಡಲು ತೋಚದೆ ತವರು ಮನೆಯ ಹಾದಿ ಹಿಡಿಯುತ್ತಾರೆ. ಇದನ್ನೆಲ್ಲಾ ಸರಿ ಪಡಿಸಲು ಕಲ್ಯಾಣ್ ಕುಮಾರ್ ತನ್ನ ಮಿತ್ರ ರಾಜ್ ಕುಮಾರ್ ಸಹಾಯ ಕೋರುತ್ತಾರೆ. ಅಪರಿಮಿತವಾಗಿ ಪ್ರೀತಿಸುತ್ತಿದ್ದ ಕಲ್ಯಾಣ್ ಕುಮಾರ್ ತನ್ನ ಮಡದಿ ಮೈನಾವತಿಯನ್ನು ಬಿಟ್ಟಿರಲಾರದೆ, ರಾಜ್ ಕುಮಾರ್ ಅವರ ಮನೆಯಲ್ಲಿಯೇ ಉಳಿದುಕೊಳ್ಳಲು ಹೇಳಿ, ತಾನು ಅವಾಗವಾಗ ಅಲ್ಲಿಗೆ ಬರುತ್ತಿರುತ್ತಾರೆ.

ಬುದ್ದಿವಂತ ದಂಪತಿಗಳಾಗಿ ರಾಜ್ ಕುಮಾರ್ ಮತ್ತು ಪಂಡರಿಬಾಯಿ ಕೆಲವು ಉಪಾಯಗಳನ್ನು ಮಾಡಿ, ನೊಂದಿದ್ದ
ಸಂಸಾರವನ್ನು ಸರಿ ಪಡಿಸುತ್ತಾರೆ. ಇದರ ಮಧ್ಯೆ ಹಾದು ಬರುವ ಸನ್ನಿವೇಶಗಳು, ಹಾಡುಗಳು ಮತ್ತು ಸಂಭಾಷಣೆಗಳು ಈ ಚಿತ್ರವನ್ನು  ನೋಡುಗರ ಭಾವಕ್ಕೆ ಅನುಭವಿಸುವಂತೆ ಮಾಡಿದೆ.

****
ರಾಮಚಂದ್ರ ಶಾಸ್ತ್ರೀ ತಮ್ಮ ಮಗ ತಮ್ಮ ಮಾತಿಗೆ ವಿರುದ್ಧ ನೆಡೆದರೆ, ಮನೆಯಲ್ಲಿರುವ ರಮಾದೇವಿ ಅವರ ಪೆದ್ದು ಮಗ ನರಸಿಂಹರಾಜು ಅವರನ್ನೇ ದತ್ತುತೆಗೆದುಕೊಂಡು, ಇಡೀ ಆಸ್ತಿಯನ್ನು ಬರೆದುಬಿಡುತ್ತೇನೆ ಎಂದಾಗ.. ರಮಾದೇವಿ ಮತ್ತು ನರಸಿಂಹರಾಜು ಅವರ ನಡುವಿನ ಸಂಭಾಷಣೆ ಮಜಾ ಕೊಡುತ್ತೆ.


"ಅಮ್ಮ ಹಪ್ಪಳ ಕೊಡೆ.. ಸಪ್ಪಳ ಮಾಡದ ಹಾಗೆ ತಿಂದು ಬಿಡುತ್ತೇನೆ"

"ಗಣಪ ನಿನ್ನ ಅದೃಷ್ಟ ಆನೆ ಮೇಲೆ ಬರುತ್ತೆ ಕಣೋ.. "
"ಅಮ್ಮ ಆನೆ ಮೇಲೆ ಬೇಡ.. ಅದು ಎತ್ತರಕ್ಕೆ ಇರುತ್ತದೆ.. ಕತ್ತೆ ಮೇಲೆ ಬರೋಕೆ ಹೇಳು.. ಅದರ ಮೇಲೆ ನಾನೇ ಹತ್ತಿ ಬರುತ್ತೇನೆ"

"ನನ್ನನ್ನು ದತ್ತು ತೆಗೆದುಕೊಂಡರೆ, ಧಣಿಯ ಮಗನ ಹೆಂಡತಿ ನನ್ನ ಹೆಂಡತಿಯಾಗುತ್ತಾಳೆ" (ಆಹಾ ಎಂಥಹ ತರ್ಕ)
"ಹಣ ಕೊಡುತ್ತೇನೆ ಎಂದರೆ.. ಅವರ ಅಪ್ಪನಿಗೂ ದತ್ತುವಾಗುತ್ತೇನೆ"

****

ಹಣ ತರದ ಸೊಸೆಯ ಬದಲಿಗೆ, ತನ್ನ ಮಗನಿಗೆ ಯಥೇಚ್ಛ ಹಣ ಕೊಡುವ ಸಂಬಂಧ ಹುಡುಕುತ್ತಿರುವಾಗ, ಆ ಉದ್ದೇಶವನ್ನು ರಾಜ್ ಕುಮಾರ್ ವಿಫಲಗೊಳಿಸುತ್ತಾರೆ. ಆಗ ಆ ಸಂದರ್ಭವನ್ನು ರಮಾದೇವಿ ತನ್ನ ಅನುಕೂಲಕ್ಕೆ ತಕ್ಕಂತೆ ಉಪಯೋಗಿಸಿಕೊಳ್ಳುವ ಸಲುವಾಗಿ ತನ್ನ ಪೆದ್ದು ಮಗ ನರಸಿಂಹರಾಜುವನ್ನು ಕರೆತಂದು..

"ಇವನೇ ಹುಡುಗ.. ಒಪ್ಪಿಸಿಕೊಳ್ಳಿ, ನೀವು ಹೇಳಿದಂತೆ ಕೇಳುತ್ತಾ, ಮನೆ ಅಳಿಯನಾಗಿ ನಿಮ್ಮ ಮನೆಯಲ್ಲಿಯೇ ಇದ್ದುಬಿಡುತ್ತಾನೆ, ಜೊತೆಯಲ್ಲಿ ನಾನು ಕೂಡ ಅದು ಇದು ಕೆಲಸ ಮಾಡುತ್ತಾ ನಿಮ್ಮ ಮನೆಯಲ್ಲಿಯೇ ಉಳಿದುಬಿಡುತ್ತೇನೆ, ನೆಡೆಯಿರಿ ನಮಗೂ ರೈಲ್ ಟಿಕೆಟ್ ತೆಗೆದುಕೊಳ್ಳಿ ಎಂದು ಒತ್ತಾಯ ಮಾಡುತ್ತಾಳೆ"

"ಏನಪ್ಪಾ ಓದಿದ್ದೀಯ" ಅಂತ ಹುಡುಗಿಯ ತಂದೆ ಕೇಳಿದಾಗ

ನರಸಿಂಹರಾಜು "ನೋಡಿ ಪುಸ್ತಕ ಇರೋ ತನಕ ಓದಿದೆ.. ಆಮೇಲೆ ಮಾಡಿದೆ ನಿದ್ದೆ.. ನಮ್ಮಮ್ಮ ಗಣಪನ ಗುಡಿಗೆ ಹೋದಾಗ.. ದೇವರ ಬಲಗಡೆಯಿಂದ ಪ್ರಸಾದ ಬಿತ್ತು.. ಆಗ ಮಗ ಬುದ್ದಿವಂತನಾಗುತ್ತಾನೆ ಎಂದರು.. ಹೇಗೂ ನಾ ಬುದ್ದಿವಂತ ಆಗುತ್ತೇನೆ, ಇನ್ಯಾಕೆ ಓದಲಿ ಅಂತ ಓದು ಬಿಟ್ಟೆ.... ನಮ್ಮಪ್ಪ ಗಣಪತಿ ಗುಡಿಗೆ ಹೋದಾಗ ಎಡಗಡೆ ಪ್ರಸಾದ ಬಿತ್ತು ... ನಿಮ್ಮ ಮಗ ದಡ್ಡನಾಗುತ್ತಾನೆ ಎಂದರು.. ಹೇಗೂ ನಾನು ದಡ್ಡನಾಗುತ್ತೇನೆ, ಸುಮ್ನೆ ಯಾಕೆ ಓದೋದು ಅಂತ ಬಿಟ್ಟೆ"

ನರಸಿಂಹರಾಜು ಈ ಮಾತನ್ನು ಹೇಳುವಾಗ ಅವರ ಮುಖಭಾವ ನೋಡಲು ಚಂದ.. !!!

ಬಾಲಕೃಷ್ಣ ಈ ಚಿತ್ರದಿಂದ ರಾಜ್ ಕುಮಾರ್ ಅವರ ಚಿತ್ರಗಳಲ್ಲಿ ಕಾಣತೊಡಗಿದರು. ರಾಜ್ ಕುಮಾರ್ ಅವರಿಗಿಂತ ಮೊದಲೇ ಚಿತ್ರರಂಗಕ್ಕೆ ಬಂದಿದ್ದರೂ.. ಆ ಕಾಲಕ್ಕೆ ತಯಾರಾಗುತ್ತಿದ್ದ ಚಿತ್ರಗಳು ಕಡಿಮೆಯೇ.. ಕಾಲಾನಂತರ ರಾಜ್ ಕುಮಾರ್ ಪ್ರಸಿದ್ಧರಾಗುತ್ತಾ ಬಂದ ಹಾಗೆ ಚಿತ್ರಗಳ ಸಂಖ್ಯೆಯೂ ಹೆಚ್ಚಿತು, ಜೊತೆಯಲ್ಲಿ ನರಸಿಂಹರಾಜು ಮತ್ತು ಬಾಲಕೃಷ್ಣ ಜೋಡಿಯೂ ಕೂಡ.

ಚಿಕ್ಕ ಚೊಕ್ಕ ಪಾತ್ರದಲ್ಲಿ ಬಾಲಕೃಷ್ಣ ತಮ್ಮ ಛಾಪನ್ನು ತೋರಿಸುತ್ತಾರೆ. ಸಂಭಾಷಣೆಯ ಶೈಲಿ, ಅಂಗೀಕಾ ಅಭಿನಯ ಇಷ್ಟವಾಗುತ್ತದೆ. ಚಿತ್ರದಲ್ಲಿ ಹೀಗೆ ಬಂದು ಹಾಗೆ ಹೋಗುವ ಒಂದೆರಡು ಚಿಕ್ಕ ಪುಟ್ಟ ಸನ್ನಿವೇಶಗಳು, ಅಷ್ಟರಲ್ಲಿಯೇ ತಮ್ಮ ಅಭಿನಯದ ಮಿಂಚನ್ನು ಹರಿಸುತ್ತಾರೆ.. !!!


ಈ ಚಿತ್ರದಲ್ಲಿ ವರದಕ್ಷಿಣೆ ಪಿಡುಗು ಹೇಗೆ ಹೆಣ್ಣು ಹೆತ್ತವರನ್ನು ಕಾಡುತ್ತದೆ  ಎಂದು ಸೂಚ್ಯವಾಗಿ ತೋರಿಸಿದ್ದಾರೆ.  ದಾಸನಾಗಿ, ಸಂತನಾಗಿ, ಭಕ್ತನಾಗಿ ಅಲ್ಲಿಯ ತನಕ ತೆರೆ ಮೇಲೆ ಕಂಡಿದ್ದ ರಾಜ್ ಕುಮಾರ್ ಇಲ್ಲಿ ಹಠಾತ್ ಸೂಟು ಬೂಟಿನಲ್ಲಿ ಕಂಗೊಳಿಸುತ್ತಾರೆ. ಕತ್ತರಿಸಿದ ಕೇಶರಾಶಿ, ಚಿಗುರು ಮೀಸೆ (ಅವರ ಕಡೆಯ ಚಿತ್ರದ ತನಕ ಚಿಗುರು ಮೀಸೆಯಲ್ಲಿಯೇ ಬಂದದ್ದು ಅವರ ವಿಶೇಷ).

ಡಾಕ್ಟರ್ ಪಾತ್ರದಲ್ಲಿ ಅದಕ್ಕೆ ಬೇಕಾದ ಆಯಾಮ ಒದಗಿಸಿದ್ದಾರೆ, ಹದವರಿತ ಮಾತು, ಉಚ್ಚಾರಣೆ, ಆಂಗ್ಲ ಭಾಷೆಯ ಪದಬಳಕೆ, ಎಲ್ಲವೂ ಲೀಲಾಜಾಲವಾಗಿ ಮೂಡಿಬಂದಿದೆ. ಹಿಂದಿನ ಚಿತ್ರಗಳಲ್ಲಿ ಭಕ್ತಿ ಭಾವ ಪೂರಿತ ಪಾತ್ರಗಳಿಂದ ಸಾಮಾಜಿಕ ಪಾತ್ರದಲ್ಲಿ ಅದರಲ್ಲೂ ಸುಶಿಕ್ಷಿತ ಡಾಕ್ಟರ್ ಪಾತ್ರದಲ್ಲಿ ಅಭಿನಯಿಸಿರುವ ರೀತಿ ತನ್ನೊಳಗೆ ಇರುವ ಕಲಾವಿದನ ಹಸಿವನ್ನು ತೋರಿಸಿದ್ದಾರೆ.

ಈ ಚಿತ್ರದಲ್ಲಿ ಪ್ರಮುಖ ಪಾತ್ರ ಎಂದರೆ ರಾಮಚಂದ್ರ ಶಾಸ್ತ್ರಿಯವರದ್ದು, ದುರಾಸೆಯ ಅಪ್ಪನಾಗಿ ಅವರ ಸಂಭಾಷಣೆ ವೈಖರಿ ಖುಷಿಯಾಗುತ್ತದೆ. ಮನೆಯ ಶಾಂತಿಗೆ, ನೆಮ್ಮದಿಗೆ ರುದ್ರದೇವರಿಗೆ ಜಲಾಭಿಷೇಕ, ವಿಷ್ಣುವಿಗೆ ಕ್ಷೀರಾಭಿಷೇಕ, ಆಂಜನೇಯನಿಗೆ ತೈಲಾಭಿಷೇಕ ಮಾಡಿಸಬೇಕು ಪುರೋಹಿತರು ಹೇಳಿದರೆ,  ಜಿಪುಣಾಗ್ರೇಸರ ಹೇಳುವ ಮಾತು

"ತಲೆಯ ಮೇಲೆ ಗಂಗೆಯನ್ನು ಹೊತ್ತ ಶಿವನಿಗೆ ಏಕೆ ಜಲಾಭಿಷೇಕ
ಕ್ಷೀರಸಾಗರದಲ್ಲಿಯೇ ಮಲಗಿರುವ ವಿಷ್ಣುವಿಗೆ ಒಂದು ತಂಬಿಗೆ ಹಾಲು ಏಕೆ ಬೇಕು
ಬಾಲ ಬ್ರಹ್ಮಚಾರಿ ಆಂಜನೇಯನಿಗೆ ಎಣ್ಣೆ ಸ್ನಾನ ಮಾಡಿಸೋರು ಯಾರು. . ಹೋಗ್ರಿ ಇವೆಲ್ಲ ದುಡ್ಡುಕೀಳುವ ತಂತ್ರ ಎಂದು ಬಯ್ದು ಅಟ್ಟುತ್ತಾರೆ..

ನಂತರ ".. ಗಿಣಿಯಂತೆ ಮಾತನಾಡಿ ಗುಡ್ ಬೈ ಹೇಳೋನು ನಾನು, ನನ್ನ ಹತ್ರ ದುಡ್ಡು ಕೇಳುತ್ತೀರಾ" ಎಂದು ಮೀಸೆ ತಿರುವುತ್ತಾರೆ. ಬಹುಶಃ ಅವರ ಚಿತ್ರ ಜೀವನದಲ್ಲಿ ಒಂದು ಚಿತ್ರದುದ್ದಕ್ಕೂ ಸಿಕ್ಕ ಪ್ರಮುಖ ಪಾತ್ರ ಇದಾಗಿತ್ತು ಅನ್ನಿಸುತ್ತದೆ.

ಪಂಡರಿಬಾಯಿ ಅವರು ಚಿತ್ರದ ನಿರ್ಮಾಪಕಿಯಾಗಿದ್ದರೂ ಕೂಡ ತಮ್ಮ ಪಾತ್ರಕ್ಕೆ ಅತಿ ಮಹತ್ವ ಕೊಡದೆ, ಕಥೆಯ ಜೊತೆಯಲ್ಲಿನ ಸಣ್ಣ ಪಾತ್ರವಾಗಿ ನಿಲ್ಲುವುದು ನಿಜಕ್ಕೂ ಅವರ ಮನಸ್ಸು ಎಂತಹದ್ದು ಎಂದು ತೋರಿಸುತ್ತದೆ.  ಮೈನಾವತಿ ಕೂಡ ಪಾತ್ರಕ್ಕೆ ಬೇಕಿದ್ದ ನಟನೆಯನ್ನು ತುಂಬಿಕೊಂಡು ಬಂದಿದ್ದಾರೆ.


ಮುದ್ದುಮುದ್ದಾಗಿ ಕಾಣುವ ಕಲ್ಯಾಣ್ ಕುಮಾರ್, ಪಂಡರಿಬಾಯಿ ನಂತರ ಮಮತಾಮಯಿ ತಾಯಿ ಪಾತ್ರದಲ್ಲಿ ಮಿಂಚುವ ಜಯಶ್ರೀ, ಘಟವಾಣಿಯಾಗಿ ರಮಾದೇವಿ, ಅವರ ಪೆದ್ದು ಮಗನಾಗಿ ನರಸಿಂಹರಾಜು ಸುಲಲಿತ ಅಭಿನಯ ನೀಡಿದ್ದಾರೆ.

ಇಲ್ಲಿ ರಾಜ್ ಕುಮಾರ್ ತುಂಬಾ ಮುದ್ದಾಗಿ ಕಾಣಲು ಕಾರಣ ಅವರ ಕತ್ತರಿಸಿದ ಕೇಶರಾಶಿ, ಚಿಗುರು ಮೀಸೆ, ಅಭಿನಯದಲ್ಲಿ ಪಳಗಿರುವ ಲಕ್ಷಣಗಳಿಂದ ಹಿತವಾಗಿದ್ದಾರೆ. ಶುದ್ಧ ಕನ್ನಡ ಭಾಷೆಯ ಉಚ್ಚಾರಣೆ ಅವರ ಮೊದಲ ಚಿತ್ರದಿಂದಲೂ ಇತ್ತು, ಆದರೆ ಈ ಚಿತ್ರದಲ್ಲಿ ಅಚ್ಚುಕಟ್ಟಾಗಿ ಆಂಗ್ಲ ಪದ ಬಳಕೆ, ಆ ಡಾಕ್ಟರ್ ವೃತ್ತಿಗೆ ಇರಬೇಕಾದ ಗಂಭೀರತೆ ತೋರುವುದು ಖುಷಿಕೊಡುತ್ತದೆ.


ಸಾಮಾಜಿಕ ಸಂದೇಶವಾಗಿ ಈ ಚಿತ್ರ ವರದಕ್ಷಿಣೆಯ ಪಿಡುಗನ್ನು ಗಮನದಲ್ಲಿಟ್ಟುಕೊಂಡು ಬೆಳ್ಳಿ ತೆರೆಯನ್ನು ಅಲಂಕರಿಸಿದ್ದು ೧೯೫೭ರಲ್ಲಿ.. ಇದು ರಾಜಕುಮಾರ್ ಅವರ ಬಿಡುಗಡೆಗೊಂಡ ಏಳನೇ ಮಣಿಯಾಗಿ  ತಾಯಿ ಭುವನೇಶ್ವರಿಯ ಮಾಲೆಯಲ್ಲಿ ಸೇರಿಕೊಂಡು ಬಿಟ್ಟಿತು. !!

ಮತ್ತೊಮ್ಮೆ ಇನ್ನೊಂದು ಚಿತ್ರರತ್ನದ ಜೊತೆಯಲ್ಲಿ!!!