Sunday, March 26, 2017

ಜಾದೂ ಮಾಡುವ ಗಾರುಡಿ ಶ್ರೀ ಕೃಷ್ಣಗಾರುಡಿ (1958) (ಅಣ್ಣಾವ್ರ ಚಿತ್ರ ೦೯ / ೨೦೭)

ಭಗವಂತ ಒಂದು ದೊಡ್ಡ ಕೃತಿಯನ್ನು ತಯಾರಿಸುವ ಮುನ್ನಾ ಒಂದು ಚಿಕ್ಕ ಅಣಕು ಮಾದರಿ ತಯಾರಿಸುತ್ತಾನೆ..

ನಂದಿ ಪಿಕ್ಚರ್ಸ್ ಲಾಂಛನದಲ್ಲಿ ಶ್ರೀ ಬೆಳ್ಳಾವಿ ನರಹರಿಶಾಸ್ತ್ರಿಗಳ ರಚಿಸಿದ ಕಥೆಯನ್ನು ಆಧರಿಸಿ ಪೆಂಡ್ಯಾಲ ಅವರ ಸಂಗೀತದ ಗಾರುಡಿಯಲ್ಲಿ ಮೂಡಿಬಂದ ಚಿತ್ರ ಶ್ರೀ ಕೃಷ್ಣಗಾರುಡಿ.  ಜಿ ದೊರೈ ಅವರ ಛಾಯಾಗ್ರಹಣ ಹೊಂದಿದ್ದ ಈ ಚಿತ್ರಕ್ಕೆ ಘಂಟಸಾಲ, ಪಿಬಿ ಶ್ರೀನಿವಾಸ್, ಸುಶೀಲ, ಜಕ್ಕಿ, ಕಾಣಾಕಿ, ರಾಣಿ ತಮ್ಮ ಗಾನ ಪ್ರತಿಭೆಯನ್ನು ತುಂಬಿದ್ದರು.

ಕರುನಾಡಿನ ಅತ್ಯುತ್ತಮ ನಿರ್ದೇಶಕರಲ್ಲಿ ಒಬ್ಬರಾದ ಹುಣುಸೂರು ಕೃಷ್ಣಮೂರ್ತಿ ರಾಜಕುಮಾರ್ ಎಂಬ ರತ್ನಕ್ಕೆ ಇನ್ನಷ್ಟು ಹೊಳಪು ನೀಡಲು ಬಂದರು. ಚಿತ್ರಕಥೆ, ಸಂಭಾಷಣೆ, ಹಾಡುಗಳು ಮತ್ತು ನಿರ್ದೇಶನ ಹೀಗೆ ಉನ್ನತ ಹೊಣೆಗಾರಿಕೆ ಹೊತ್ತು ರೂಪಿಸಿದ ಚಿತ್ರವನ್ನು ಕೆ ಎಂ ನಾಗಣ್ಣ ನಿರ್ಮಿಸಿದ್ದಾರೆ.

ಮನುಜ ಸಾಹಸಪಟ್ಟು, ಸಾಧನೆಮಾಡಿ, ತನ್ನೊಳಗಿನ ಆಕ್ರೋಶ, ಸೇಡು, ಅನುಭವಿಸಿದ ಅವಮಾನ  ಇವುಗಳನ್ನು ಅಸ್ತ್ರಗಳನ್ನಾಗಿಸಿ, ಸರಿಯಾದ ಮಾರ್ಗದರ್ಶನದಲ್ಲಿ ಮುನ್ನೆಡೆದಾಗ ಜಯವು ಸಿಕ್ಕೇ ಸಿಗುತ್ತದೆ. ಆದರೆ ಆ ಗೆಲುವನ್ನು ಬರಿ ಹೃದಯದಲ್ಲಿ ಮಾತ್ರ ಇಟ್ಟುಳ್ಳದೇ ಅದನ್ನು ಇನ್ನೊಂದು ಅಡಿ ಮೇಲಕ್ಕೆ ಅಂದರೆ ತಲೆಗೆ ತಂದುಕೊಂಡರೆ ಎಂಥಹ ಪ್ರಮಾದ ಆಗಬಹುದು, ಎಂಥಹ ಅವಮಾನವಾಗಬಹುದು, ಮತ್ತೆ ಮಾಯೆಯ ಸುಳಿ ಚಕ್ರಕ್ಕೆ ಸಿಲುಕಿ ನರಳುವಂತೆ ಮಾಡುತ್ತದೆ ಎನ್ನುವ ಸಂದೇಶ ಹೊತ್ತ ಈ ಚಿತ್ರ, ಅಂತಿಮವಾಗಿ ಕಾಣದ ಶಕ್ತಿ, ಕಾಣುವ ಶಕ್ತಿ, ಪ್ರೇರಕ ಶಕ್ತಿ ಇವುಗಳನ್ನು ನೆನೆದು ಭಕ್ತಿ ಮಾರ್ಗದಲ್ಲಿ ಮಾತ್ರ ಜಯ...  ಶಕ್ತಿ ಮಾರ್ಗ ಕಷ್ಟಕ್ಕೆ ಆಗಿಬರೋಲ್ಲ ಎಂದು ನಿರೂಪಿಸುತ್ತದೆ.

ಕುಂತಿಮಕ್ಕಳಿಗೆ ರಾಜ್ಯವಿಲ್ಲ ಎನ್ನುವ ನಾಣ್ಣುಡಿಯಂತೆ ಸಣ್ಣ ವಯಸ್ಸಿನಿಂದ ಬರಿ ಕಷ್ಟ ಕೋಟಲೆಗಳಲ್ಲಿಯೇ ಬಳಲುವ ಪಾಂಡವರು, ಕೌರವರ ಮೋಸಕ್ಕೆ ಬಲಿಯಾಗಿ ರಾಜ್ಯ, ಅಧಿಕಾರ ಕಳೆದುಕೊಂಡು ಕಾಡು ಪಾಲಾಗಿ ಕಡೆಯಲ್ಲಿ ಶ್ರೀ ಕೃಷ್ಣನ ಅನುಗ್ರಹದ ಕವಚ ತೊಟ್ಟು, ಬಂಧು ಬಾಂಧವರನ್ನು ಬದಿಗೆ ಸರಿಸಿ ಜಯಶೀಲರಾಗುತ್ತಾರೆ. ಇಲ್ಲಿಂದ ಮುಂದಕ್ಕೆ ಈ ಚಿತ್ರ ಪ್ರಾರಂಭವಾಗುತ್ತದೆ.

ತನ್ನ ಮನದ ತೊಳಲಾಟವನ್ನು ಹೇಳಿಕೊಳ್ಳುತ್ತಲೇ ಧರ್ಮರಾಯ ತನ್ನ ಮನದ ಇಂಗಿತವನ್ನು ಹೊರಗೆಡುವುತ್ತಾ, ಜನರ ಹಿತ ದೃಷ್ಟಿಯಿಂದಾಗ ಅಧಿಕಾರವನ್ನು ವಹಿಸಿಕೊಳ್ಳುತ್ತೇನೆ ಎಂದು ಭರವಸೆ ಕೊಡುತ್ತಾನೆ. ಸಮರ್ಥ ರಾಜನಿಗೆ, ಸಮರ್ಥ ನಾಯಕನಿಗೆ, ಸಮರ್ಥ ಚಕ್ರವರ್ತಿಗೆ ಸರಿಯಾದ ಅನುಯಾಯಿಗಳು, ಸಲಹೆ ಕೊಡುವ ಮಂತ್ರಿಗಳು, ದಕ್ಷ ಆಡಳಿತಗಾರರು ಬೇಕು ಎಂದು ನಕುಲ ಸಹದೇವರಿಗೆ ಪ್ರಧಾನ ಹುದ್ದೆಗಳನ್ನು ನೀಡುತ್ತಾ, ಭೀಮಾರ್ಜುನರಿಗೆ ಕಡಿಮೆ ದರ್ಜೆಯ ಹುದ್ದೆಗಳನ್ನು ನೀಡುತ್ತಾನೆ ಶ್ರೀ ಕೃಷ್ಣ.

ತಮ್ಮಿಬ್ಬರಿಂದಲೇ ಕುರುಕ್ಷೇತ್ರ ಯುದ್ಧವನ್ನು ಗೆದ್ದಿದ್ದು ಎನ್ನುವ ಅಹಂ ತುಂಬಿಕೊಂಡಿದ್ದ ಭೀಮಾರ್ಜುನರಿಗೆ ತಮ್ಮ ತಪ್ಪಿನ ಅರಿವನ್ನು ಮೂಡಿಸುವ ಸಲುವಾಗಿ ಶ್ರೀ ಕೃಷ್ಣ ರೂಪಿಸಿದ ದೃಶ್ಯನಾಟಕವಿದು.  ತಮ್ಮಂಥಹ ವೀರರಿಗೆ ಮಾಡಿದ ಅವಮಾನ ಎಂದು ನಿರ್ಧರಿಸಿ, ಭೀಮಾರ್ಜುನರು ತಮ್ಮ ಭಾಗದ ರಾಜ್ಯಕ್ಕೆ ಹಠ ತೊಡುತ್ತಾರೆ, ಸಮಾಧಾನವಾಗಿ ಕೊಟ್ಟರೆ ಸರಿ, ಇಲ್ಲದೆ ಹೋದರೆ ಯುದ್ಧಕ್ಕೂ ಸಿದ್ಧ ಎನ್ನುವ ಮಾತ್ರನ್ನು ಧರ್ಮನಂದನನಿಗೆ ಹೇಳುತ್ತಾರೆ.

ಪಾಂಡವರ ಒಗ್ಗಟ್ಟನ್ನು ಮುರಿಯಬೇಡಿ ಎನ್ನುವ ಅವನ ಮಾತಿಗೆ ಮನ್ನಣೆ ಕೊಡೋಲ್ಲ, ಇಡೀ ಸಾಮ್ರಾಜ್ಯವನ್ನೇ ನಿಮಗೆ ಕೊಡುತ್ತೇನೆ ಎಂದರೂ ನಮಗೆ ಭಿಕ್ಷೆ ಬೇಡ ಎಂದು ನಿರಾಕರಿಸುತ್ತಾರೆ, ತಾಯಿ ಕುಂತೀಮಾತಿಗೂ ಬೆಲೆ ಕೊಡೋಲ್ಲ.
ಅಹಂ ತುಂಬಿಕೊಂಡ ರೋಷಾವೇಷದ ಸಹೋದರರು 
ಕುಂತಿ ಹಲುಬುತ್ತಾ
"ಸತ್ತ ಮಕ್ಕಳನ್ನು ಸ್ಮರಿಸುತ್ತಾ ಗಾಂಧಾರಿ ರೋಧಿಸುತ್ತಿದ್ದರೆ
ಈ ಬದುಕಿರುವ ಮಕ್ಕಳ ಅವಿವೇಕವನ್ನು ಕಂಡು ನಾನು ಅಳಬೇಕಿದೆ" ಎನ್ನುತ್ತಾಳೆ, ಅದ್ಭುತ ಸಂಭಾಷಣೆ ಇದು.

ಶ್ರೀ ಕೃಷ್ಣನಿಗೆ ಇದು ಅರಿವಾಗಿ ಗಾರುಡಿಯ ವೇಷದಲ್ಲಿ ನಾನಾ ಚಮತ್ಕಾರ ತೋರಿಸುತ್ತಾ, ಭೀಮಾರ್ಜುನರನ್ನು ಕೆಣುಕುತ್ತಾನೆ. ಮದ ತುಂಬಿದ್ದ ಇಬ್ಬರೂ ಗಾರುಡಿಯ ಸವಾಲನ್ನು ಸ್ವೀಕರಿಸುತ್ತಾರೆ.
ಗಾರುಡಿಯ ಜಾದೂ 
ಉರಗವನ್ನು ಎತ್ತಬೇಕು ಎನ್ನುವ ಸವಾಲಿಗೆ ಭೀಮ ಅಹಂಕಾರದಿಂದ ಆಗಬಹುದು ಎಂದು ಮೊದಲು ಕಾಲಿನಿಂದ ಹಾವಿನ ಬುಟ್ಟಿಯನ್ನು ಒದೆಯುತ್ತಾನೆ, ಮತ್ತೆ ತನ್ನ ಅಹಂಕಾರಕ್ಕೆ ತಕ್ಕ ಬೆಲೆಯನ್ನು ತೆರುತ್ತಾನೆ. ನಾಗಲೋಕದಲ್ಲಿ ಕಾರಾಗೃಹದಲ್ಲಿ ಸೆರೆಯಾಗಿ, ಚಿತ್ರಹಿಂಸೆ ಅನುಭವಿಸಿ, ರೋಧಿಸುತ್ತಾ ಶ್ರೀಕೃಷ್ಣನನ್ನು ನೆನೆಯುತ್ತಾನೆ. ಗಾರುಡಿಯ ಮಾಯಾಜಾಲದಿಂದ ಹೊರಬಂದು ಶ್ರೀ ಕೃಷ್ಣನಿಗೆ ಶರಣಾಗುತ್ತಾನೆ.

ಅರ್ಜುನ ಮಾಯಕುದುರೆಯನ್ನು ಏರಿ, ಅದರಿಂದ ಬಿದ್ದು ಗಾರುಡಿಯ ಮಾಯೆಯ ಮೋಹಿನಿಗೆ ಮನಸೋತು, ಅವಳು ಮೋಹಿನಿ ಎಂದು ಗೊತ್ತಾದ ಮೇಲೆ, ತಪ್ಪಿಸಿಕೊಂಡು ಓಡಿ ಬರುವ ಅರ್ಜುನನನ್ನು ಮತ್ತೆ ಕಾಪಾಡಲು ಶ್ರೀ ಕೃಷ್ಣನೇ ಬರಬೇಕಾಗುತ್ತದೆ.
ಮಾಯೆಯ ಮುಸುಕು 
ಅಹಂ ಎಂದೂ ಒಳ್ಳೆಯದಲ್ಲ, ಅದು ನಮ್ಮ ಬೆಳವಣಿಗೆಯನ್ನು ಕಡಿತಗೊಳಿಸುತ್ತದೆ ಎನ್ನುವ ತಿಳುವಳಿಕೆ ಹೇಳುತ್ತಾ, ಭಕ್ತಿ ಮಾರ್ಗದಿಂದ ಮಾತ್ರ ನಕುಲ ಸಹದೇವರು ಗಾರುಡಿಯ ಮಾಯೆಯನ್ನು ಮೆಟ್ಟಿ ನಿಲ್ಲುತ್ತಾರೆ ಮತ್ತು ಭೀಮಾರ್ಜುನರಿಗೆ ತಮ್ಮ ತಪ್ಪಿನ ಅರಿವನ್ನು ಮೂಡಿಸುತ್ತಾರೆ.

ಆರು ಹಾಡುಗಳಿರುವ ಈ ಚಿತ್ರದಲ್ಲಿ ಹುಣುಸೂರ್ ಕೃಷ್ಣಮೂರ್ತಿ ಇವರ ಸಂಭಾಷಣೆ ಮನಸ್ಸೆಳೆಯುತ್ತದೆ, ಮತ್ತು ಆ ಕಾಲಕ್ಕೆ ವಿಭಿನ್ನವಾದ ಸಾಹಿತ್ಯ ರಚಿಸಿ ಗಮನಸೆಳೆಯುತ್ತಾರೆ.

ರಾಜಕುಮಾರ್ ಇಲ್ಲಿ ಅರ್ಜುನನಾಗಿ ಮಿಂಚುತ್ತಾರೆ, ಇಡೀ ಚಿತ್ರ ಭೀಮ ಮತ್ತು ಅರ್ಜುನರ ಸುತ್ತಲೇ ಸುತ್ತುವುದರಿಂದ ಇತರ ಪಾತ್ರಗಳು ತಮ್ಮ ಅಳತೆಗೆ ತಕ್ಕಂತೆ ಅಭಿನಯ ನೀಡಿದ್ದಾರೆ. ಭೀಮನ ಪಾತ್ರಧಾರಿ ವೀರಣ್ಣ ಹೂಂಕರಿಸುತ್ತಲೇ ಮಾತಾಡುವ ಶೈಲಿ ಚೆನ್ನಾಗಿದೆ.
ರಾಜ್ ಎಂಟ್ರಿ 
ರಾಮಚಂದ್ರ ಶಾಸ್ತ್ರಿ ಧರ್ಮರಾಯನಾಗಿ, ರಮಾದೇವಿ ಕುಂತಿಯಾಗಿ ತಮ್ಮ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ. ಇಲ್ಲಿ ಗಮನಸೆಳೆಯುವ ಅಂಶ ಎಂದರೆ ಶ್ರೀ ಕೃಷ್ಣನ ಪಾತ್ರಧಾರಿಯ  ತುಂಟ ನಗೆ, ಸ್ಪಷ್ಟ ಮಾತುಗಳು, ಗಾರುಡಿಯ ಹಾವಭಾವ ನೃತ್ಯ, ಮಾತುಗಳು ಇಷ್ಟವಾಗುತ್ತವೆ, ಆತನ ಸ್ನೇಹಿತ ಮಕರಂದನಾಗಿ ನರಸಿಂಹರಾಜು ಅಭಿನಯ ಕುಶಲತೆಯನ್ನು ಮೆರೆದಿದ್ದಾರೆ.
ಗಾರುಡಿಯ ದೃಶ್ಯಕ್ಕೆ ಮುನ್ನುಡಿ 
ರಾಜಕುಮಾರ್ ಪೌರಾಣಿಕ ಪಾತ್ರದಲ್ಲಿ ವಿಜೃಂಭಿಸಿದ್ದಾರೆ. ಅರ್ಜುನನಾಗಿ ರೋಷ ವೇಷ, ಒಳಗಿನ ಆಕ್ರೋಶ, ಮೋಹಿನಿಯ ಜೊತೆಯಲ್ಲಿ ಮಾತಾಡುವಾಗ ಪ್ರೇಮನಿವೇದನೆ ಮಾಡಿಕೊಳ್ಳುವಾಗ ತೋರುವ ಆಂಗೀಕ ಅಭಿನಯ, ಸಂಭಾಷಣೆ ಶೈಲಿ ಇಷ್ಟವಾಗುತ್ತದೆ. ಸಂಭಾಷಣೆಯಲ್ಲಿನ ಸ್ಪಷ್ಟತೆ, ನಿಖರವಾದ ಉಚ್ಚಾರಣೆ ಅವರ ಅಭಿನಯದ ಮಾರ್ಗದ ಹರಿವು ವಿಸ್ತರಿಸುತ್ತಾ ಇರುವ ಸೂಚನೆ ನೀಡುತ್ತದೆ.

ಒಂದು ಸುಂದರ ಚಿತ್ರ..ಸುಂದರ ಅಭಿನಯ.. ಮುಖ್ಯ ವಾಹಿನಿಯಿಂದ ಎಲ್ಲಿಯೂ ಹಾದಿ ತಪ್ಪದಂತೆ ಚಿತ್ರವನ್ನು ರೂಪಿಸಿದ್ದಾರೆ.

ಮೊದಲ ವಾಕ್ಯವನ್ನು ಮತ್ತೊಮ್ಮೆ ಓದಿರಿ.. ನಂತರ ಹುಣುಸೂರು ಕೃಷ್ಣಮೂರ್ತಿ ಮತ್ತು ರಾಜಕುಮಾರ್ ಜೋಡಿಯ ಬಭೃವಾಹನ ಚಿತ್ರವನ್ನು ನೆನೆಪಿಸಿಕೊಳ್ಳಿ. ಆ ಚಿತ್ರದ ಸರತಿ ಬಂದಾಗ ಇನ್ನಷ್ಟು ಬರೆಯುವೆ..

ಇನ್ನೊಂದು ರಾಜ್ ಚಿತ್ರ ಮಾಣಿಕ್ಯವನ್ನು ಹಿಡಿದು ಸಧ್ಯದಲ್ಲಿ ಬರೋಣ ಅಲ್ಲವೇ