Saturday, December 22, 2018

ಕನ್ನಡ ಗುಡ್ ಫಿಲ್ಮ್ - ಕೆ.ಜಿ.ಎಫ್ (2018)

ಯಾವುದೇ ಆಟವಿರಲಿ, ಸವಾಲಿರಲಿ, ಕಾಳಗವಿರಲಿ, ಯುದ್ಧವಿರಲಿ.. ಸರಿಯಾದ ವಿವರಗಳನ್ನು ಇಟ್ಟುಕೊಂಡು, ಬಲಾಬಲಗಳನ್ನು ಅಳೆದು, ತಮ್ಮ ಬಳಿ ಇರುವ ಸರಕು ಸಾಮಗ್ರಿಗಳನ್ನು ಜೋಪಾನವಾಗಿ ನೋಡಿಕೊಂಡು ಮುನ್ನುಗ್ಗಿದ್ದಾಗ ಯಶಸ್ಸು ಅಂಗೈಯಲ್ಲಿ ಅನ್ನುತ್ತದೆ ಜನಜನಿತ ಮಾತು..

ಸುಮಾರು ವಾರಗಳಿಂದ ಮಾಧ್ಯಮಗಳಲ್ಲಿ ಕೇಳಿಬರುತ್ತಿದ್ದ ಒಂದೇ ಪದ ಕೆಜಿಎಫ್.. ನನ್ನ ಮಗಳು ಅಪ್ಪ ಆ ಮೂವಿಗೆ ಹೋಗೋಣ ಅಂದಿದ್ದಳು.. ಜೀವನದಲ್ಲಿ ಪುಟ್ಟ ಪುಟ್ಟ ಆಸೆಗಳನ್ನು ಈಡೇರಿಸಿಕೊಳ್ಳೋಕೆ ಮ್ಯಾನೇಜ್ಮೆಂಟ್ ಕೋರ್ಸ್ ಬೇಕಾಗಿಲ್ಲ ಅಲ್ಲವೇ..

ಮನೆ ಹತ್ತಿರವೇ ಥೀಯೇಟರ್.. ಸ್ವರ್ಗಕ್ಕೆ ಮೂರೇ ಗೇಣು ಅನ್ನುವ ಹಾಗಾಯ್ತು.. .ಚಿತ್ರ ಬಿಡುಗಡೆಯಾದ ಮೊದಲ ದಿನ.. ಸಂಜೆ ಆಟಕ್ಕೆ ಟಿಕೆಟ್ ಕೊಳ್ಳೋಣ ಅಂತ ಹೋದ್ರೆ.. ಟಿಕೆಟ್ ಇಲ್ಲ.. ಸಂಜೆ ಆಟಕ್ಕೆ ಸಿಗುತ್ತೆ.. ಅಂದ್ರು.. ಟಾಕೀಸಿನವರು.. ಸರಿ ನಿಗದಿತ ಸಮಯಕ್ಕೆ ಹೋದರೆ... ಟಿಕೆಟ್ ಎಲ್ಲಾ ಮುಗಿದಿದೆ ಆನ್ಲೈನ್ ನೋಡಿ ಅಂದ್ರು.. ಆನ್ಲೈನ್ ಟಿಕೆಟ್ ಇಲ್ಲ ಅಂತ ನೋಟಿಫಿಕೇಶನ್ ತೋರಿಸ್ತಾ ಇತ್ತು.. ಸರಿ ರಾತ್ರಿ ಆಟಕ್ಕೆ ನೋಡೋಣ ಅಂತ ಸರತಿಯಲ್ಲಿ ನಿಂತಿದ್ರೆ ಅಲ್ಲೂ ನಿರಾಶೆ.. ಟಿಕೆಟುಗಳು ಬೇಗನೆ ಬಿಸಿ ದೋಸೆಯಂತೆ ಖಾಲಿ..

ಅರೆ ಕನ್ನಡ ಸಿನಿಮಾಗಳಿಗೆ ಈ ಪಾಟಿ ಕ್ರೇಜ್ ಕಳೆದ ಸುಮಾರು ವರ್ಷಗಳಲ್ಲಿ ಇರಲಿಲ್ಲ ಅನ್ನುವ ಮಾತು ಕಷ್ಟವಾದರೂ ಅರಗಿಸಿಕೊಳ್ಳಲು ಬೇಕಿತ್ತು.. ಕನ್ನಡ ಸಿನೆಮಾಗಳ ಅಭಿಮಾನಿಯಾಗಿ.. ಅಣ್ಣಾವ್ರ ಚಿತ್ರಗಳ ಸಮಯದಲ್ಲಿ.. ವಿಷ್ಣುದಾದ ಚಿತ್ರಗಳು, ಅಂಬಿ ಸಿನೆಮಾಗಳು ಆ ಎಂಭತ್ತರ ದಶಕದಲ್ಲಿ ಹುಟ್ಟಿಸಿದ್ದ ಕ್ರೇಜ್ ನೋಡಿದ್ದರಿಂದ.. ಆ ರೀತಿಯ ಹಬ್ಬದ ವಾತಾವರಣ ನೋಡಬೇಕಿತ್ತು ಎಂದು ಮನಸ್ಸು ಬಯಸಿದ್ದು ಸುಳ್ಳಲ್ಲ..

ಸರಿ.. ಎರಡನೇ ದಿನದ ಆಟಕ್ಕೆ ಬುಕ್ ಮಾಡಿದ್ದರಿಂದ.. ನಿರಾಳವಾಗಿತ್ತು.. ಟಾಕೀಸಿನ ಮುಂದೆ ಆಗಲೇ ಜನಸಂದಣಿ.. ಟಾಕೀಸಿನ ಒಳಗೆ.. ತಮ್ಮ ತಮ್ಮ ಸೀಟಿನಲ್ಲಿ ಆಸೀನರಾಗಿದ್ದ ಜನತೆ.. ತಂತ್ರಜ್ಞಾನ ಎಷ್ಟೇ ಮುಂದುವರೆದಿರಲಿ.. ಟಾಕೀಸಿನಲ್ಲಿ ಆ ಕೂಗಾಟ, ಚೀರಾಟ, ಶಿಳ್ಳೆ, ಚಪ್ಪಾಳೆಗಳ ನಡುವೆ... ಅಭಿಮಾನ ಹುಟ್ಟಿಸುವ ಅಭಿಮಾನಿಗಳ ಜೊತೆಯಲ್ಲಿ ಸಿನಿಮಾಗಳನ್ನು ನೋಡುವ ಖುಷಿಯೇ ಖುಷಿ..

ಕೆಜಿಎಫ್ ಎಂಬ ಫಲಕ ಬೆಳ್ಳಿ ಪರದೆಯ ಮೇಲೆ ಬಂದ ಕೂಡಲೇ.. ಹೋ ಅಂತ ಕೂಗಾಟ, ಚೀರಾಟ.. ಸೊಗಸಾಗಿತ್ತು.. ರೆಬೆಲ್ ಸ್ಟಾರ್ ಅಂಬಿಗೆ ಶ್ರದ್ದಾಂಜಲಿ ಸಲ್ಲಿಸಿದ್ದು.. ಶಿಳ್ಳೆಗಳು ಇನ್ನಷ್ಟು ಹೆಚ್ಚಾಗಲು ಕಾರಣವಾಗಿತ್ತು..

ಸಿನಿಮಾಗಳನ್ನು ಮಾಡುವುದು ಸುಲಭವಲ್ಲ.. ಅದರಲ್ಲೂ ಒಂದು ನಾಲ್ಕು ಐದು ದಶಕಗಳ ಹಿಂದಕ್ಕೆ ಹೋಗಿ ಅಲ್ಲಿದ್ದ ವಾತಾವರಣ ಸೃಷ್ಟಿಮಾಡುವುದು ಸುಲಭದ ಮಾತಲ್ಲ.. ಇಂದಿನ ಪೀಳಿಗೆಯ ನಟರಿಗೆ, ನಿರ್ದೇಶಕರಿಗೆ, ಸಂಗೀತ, ಛಾಯಾಗ್ರಹಣ ಮಾಡುವವರಿಗೆ ತಂತ್ರಜ್ಞಾನ ವರವಾಗಿದೆ.. ಅಂದುಕೊಂಡಿದ್ದನ್ನು ಹಾಗೆಯೇ ತೆರೆಯ ಮೇಲೆ ಮೂಡಿಸೋದುಆಗುತ್ತದೆ ..


ನಿರ್ದೇಶಕ ಪ್ರಶಾಂತ್ ನೀಲ್ ತುಂಬಾ ಹೋಂ ವರ್ಕ್ ಮಾಡಿ ಈ ಚಿತ್ರ ಸಿದ್ಧ ಮಾಡಿದ್ದಾರೆ.. ಮೊದಲನೇ ಚಾಪ್ಟರ್ ಎನ್ನುವ ಟ್ಯಾಗ್ ಲೈನ್ ಇರೋದರಿಂದ.. ಕುತೂಹಲ ಹುಟ್ಟಿಸುವ ಹಾಗೆ ಚಿತ್ರಕಥೆ ಮಾಡಿದ್ದಾರೆ.. ಚಿತ್ರ ನೋಡಿ ಹೊರಗೆ ಬಂದಾಗ.. ಯಶ್ ಮತ್ತು ಪ್ರಶಾಂತ್ ನೀಲ್ ಜೊತೆ ಮಾತಾಡಿಸಬೇಕು ಅನ್ನಿಸಿತು..

ಇಬ್ಬರೂ Virtual ಆಗಿ ಸಿಕ್ಕರು..

ಅವರ ಜೊತೆ ಮಾತುಕತೆ"

ಶ್ರೀ : ಯಶ್ ಅವರೇ ಇಡೀ ಚಿತ್ರದಲ್ಲಿ ನೀವು ಎದ್ದು ಕಾಣುತ್ತೀರಾ.. ನಿಮ್ಮ ಕೇಶ ವಿನ್ಯಾಸ, ಬಟ್ಟೆಗಳು, ಇರಿಯುವಂಥಹ ನೋಟ.. ಮಾತುಗಳು.. ನಿಮ್ಮ ಹೆಜ್ಜೆ ಇಡುವ ಶೈಲಿ ಎಲ್ಲವೂ ಸೊಗಸಾಗಿದೆ.. ಇದಕ್ಕೆ ನಿಮ್ಮ ತಯಾರಿ ಹೇಗಿತ್ತು..

ಯಶ್ : ಅಣ್ತಮ್ಮ.. ಪ್ರಶಾಂತ್ ಈ ಚಿತ್ರದ ಕತೆ ಹೇಳಿದಾಗ ಮನದೊಳಗೆ ಒಂದು ಸ್ಪಷ್ಟ ರೂಪ ತಾಳುವಂತೆ ಅವರು ಹೇಳಿದ್ದು.. ನಾ ರಾಕಿ ಪಾತ್ರದೊಳಗೆ ನುಗ್ಗುವಂತೆ ಮಾಡಿತು.. ರಾಕಿ ಪಾತ್ರಕ್ಕೂ ನನಗೂ ತುಂಬಾ ಸಾಮ್ಯತೆ ಇದ್ದದ್ದು ಅನುಕೂಲವಾಯಿತು..

ಪ್ರಶಾಂತ್ : ನೋಡಿ ಶ್ರೀ ಜೊತೆಗೆ. ನನಗನ್ನಿಸಿದ್ದು.. ಈ ಚಿತ್ರಕಥೆ ಮಾಡುವಾಗ.. ಅರಿವಿಲ್ಲದೆ ಯಶ್ ಅವರು ಈ ನನ್ನ ಕತೆಯೊಳಗೆ ಬಂದುಬಿಟ್ಟಿದ್ದರು.. ಹಾಗಾಗಿ ಬರೆದದ್ದೆಲ್ಲ ಅವರನ್ನು ಮನದೊಳಗೆ ಇಟ್ಟುಕೊಂಡು ಬರೆದೆನೋ.. ಅಥವಾ ಅವರು ಕತೆಯೊಳಗೆ ಹೋಗಿ.. ನನಗೆ ಹೀಗೆ ಅಂತ ಹೇಳಿದರೂ ಗೊತ್ತಿಲ್ಲ.. ಇದೊಂತರ.. ಕುಂಬಳ ಕಾಯಿ ನಮ್ಮದೇ.. ಮಚ್ಚು ನಮ್ಮದೇ.. ಅಡ್ಡವಾದರೂ ಸರಿ ಉದ್ದವಾದರೂ ಸರಿ.. ಕುಂಬಳ ಕಾಯಿ ಕತ್ತರಿಸೋದು ಬೇಕಿತ್ತು.. ಅದೇ ರೀತಿ ಇಲ್ಲೂ ಆಗಿದ್ದು... ನನಗೆ ನಾಯಕ ಹೇಗೆ ಬೇಕಿತ್ತೂ ಹಾಗೆ ಯಶ್ ಸಿಕ್ಕಿದರು.. ಯಶ್ ಅವರಿಗೆ ಅವರಿಗೆ ಚಿತ್ರದ ನಾಯಕ ಹೇಗೆ ಇರಬೇಕಿತ್ತೋ ಅವರು ಪರಕಾಯ ಪ್ರವೇಶ ಮಾಡಿದರು.. ಅದರ ಪರಿಣಾಮ ಈ ಚಿತ್ರ ನಿಮ್ಮ ಮುಂದೆ..

ಶ್ರೀ : ನಿಮ್ಮ ಸೆಟ್ ಡಿಸೈನ್, ಮೇಕಿಂಗ್, ಫೋಟೋಗ್ರಫಿ, ಸಂಗೀತ, ಬಿಜಿಎಂ ಎಲ್ಲವೂ ಹೊಂದಿಕೊಂಡು ಸಾಗಿದೆ.. ಅಷ್ಟೊಂದು ಕಲಾವಿದರು, ಅಷ್ಟು ದೊಡ್ಡ ಕ್ಯಾನವಾಸ್ ಇದನ್ನೆಲ್ಲಾ ಹೇಗೆ ನಿಭಾಯಿಸಿದಿರಿ..

ಪ್ರಶಾಂತ್ : ನಿರ್ಮಾಪಕರಿಗೆ ಕತೆ ಹೇಳಿದೆ.. ಇಷ್ಟು ಬಡ್ಜೆಟ್ ಆಗಬಹುದು ಎಂದು ಹೇಳಿದ್ದೆ.. ವಿಜಯ್ ಕಿರಗಂದೂರು ಒಪ್ಪಿ ನಮ್ಮ ಕಲ್ಪನೆಗೆ ಒಂದು ಚೂರು ಕಮ್ಮಿಯೆಯಾಗದಂತೆ ಎಲ್ಲಾ ಸಿದ್ಧತೆ ಮಾಡಿದರು.. ಭುವನ್ ಗೌಡ ಅವರು ಇಡೀ ಚಿತ್ರವನ್ನು ದೃಶ್ಯಕಾವ್ಯವಾಗಿ ಮಾಡಿದ್ದಾರೆ.. ರವಿ ಬಸ್ರೂರ್ ಅವರ ಸಂಗೀತ ಈ ಚಿತ್ರಕ್ಕೆ ತೂಕಬದ್ಧವಾಗಿ ನೀಡಿದ್ದಾರೆ..

ಯಶ್ : ಅಣ್ತಮ್ಮ.. ಇದೊಂತರಹ ಜೇನುಗೂಡು ಕಟ್ಟಿದ ಹಾಗೆ.. ಪ್ರತಿಯೊಬ್ಬರ ಶ್ರಮ ಇದರ ಹಿಂದೆ ಇದೆ.. ನಾವಿಕನ ಯೋಜನೆ ಸರಿಯಾಗಿದ್ದಾಗ ಹಡಗು ಸಮುದ್ರದಲ್ಲಿ ಸಲೀಸಾಗಿ ಸಾಗುತ್ತದೆ ಎನ್ನುತ್ತಾರೆ ಅಲ್ವೇ.. ಈ ಚಿತ್ರವೂ ಹಾಗೆ

ಶ್ರೀ : ಯಶ್ ಅವರೇ ಮತ್ತು ಪ್ರಶಾಂತ್ ಅವರೇ.. ನೀವು ಬ್ಯುಸಿ ಇದ್ದೀರಾ ಅಂತ ಗೊತ್ತು.. ಕನ್ನಡ ನಾಡಿನ ಚಿತ್ರ ಭಾಷಾ ಗಡಿಯನ್ನು ತೊರೆದು ಇಡೀ ಚಿತ್ರಜಗತ್ತಿನಲ್ಲಿಯೇ ಸುದ್ದಿ ಮಾಡುತ್ತಿರುವುದು ಚಿತ್ರಪ್ರೇಮಿಯಾಗಿ ನನಗೆ.. ಹಾಗೂ ಕನ್ನಡಾಭಿಮಾನಿಯಾಗಿ ನನಗೆ ಖುಷಿ ಕೊಟ್ಟಿದೆ..

ಪ್ರಶಾಂತ್ ಮತ್ತು ಯಶ್ : ಶ್ರೀ ಧನ್ಯವಾದಗಳು.. ಚಿತ್ರ ಯಶಸ್ವಿಯಾಗಿ ಚಿತ್ರಾಭಿಮಾನಿಗಳ ಹೃದಯ ಗೆದ್ದರೆ ಎಲ್ಲರೂ ಗೆದ್ದ ಹಾಗೆ.. ಜೊತೆಯಲ್ಲಿ ನಮ್ಮ ಇಡೀ ಚಿತ್ರ ತಂಡದ ಸುಮಾರು ಎರಡು ವರ್ಷದ ಪರಿಶ್ರಮ ಸಾರ್ಥಕ ಅನ್ನಿಸುತ್ತದೆ.. ನಮಸ್ಕಾರ.. ಶ್ರೀ ... ಎನ್ನುತ್ತಾ ತಮ್ಮ ಕಾರು ಹತ್ತಿ ಹೊರಟೆ ಬಿಟ್ಟರು..



                                                                   ****

ಈ ಸಿನಿಮಾ ಮೂಡಿ ಬಂದ ರೀತಿ ಸೊಗಸಾಗಿದೆ.. ಕನ್ನಡ ಚಿತ್ರರಂಗವನ್ನು ಅನೇಕ ಚಿತ್ರ ರತ್ನಗಳು ನಾನಾ ಕಾರಣಗಳಿಂದ ಬೆಳಗಿವೆ .. ಈ ಸಿನೆಮಾವೂ ಹಾಗೆ.. ಪ್ರತಿಯೊಂದು ವಿಭಾಗದಲ್ಲಿಯೂ ನುರಿತ ತಂತ್ರಜ್ಞರು ಪರಿಶ್ರಮ ವಹಿಸಿದ್ದಾರೆ..

  • ಯಶ್ ಅವರು ಇಷ್ಟವಾಗದೇ ಇರೋಕೆ ಸಾಧ್ಯವೇ ಇಲ್ಲ ಅನ್ನುವ ಮಟ್ಟಿಗೆ ಚಿತ್ರದಲ್ಲಿ ಆವರಿಸಿಕೊಂಡಿದ್ದಾರೆ.. 
  • ಇಡೀ ಚಿತ್ರವನ್ನು ತಮ್ಮ ಭುಜದ ಮೇಲೆ ಹೊತ್ತಿಕೊಂಡಿರುವುದು ಸ್ಪಷ್ಟವಾಗುತ್ತದೆ ಮತ್ತು ಅದರಲ್ಲಿ ಗೆದ್ದಿದ್ದಾರೆ
  • ಹೊಡೆದಾಟದ ದೃಶ್ಯಗಳು, ಅದಕ್ಕೇ ಉಪಯೋಗಿಸಿರುವ ಬಣ್ಣ, ಅದರ ಹಿನ್ನೆಲೆ ಮನಸೆಳೆಯುತ್ತದೆ.. 
  • ಸಂಗೀತ ಅಬ್ಬರಿಸುತ್ತದೆ.. 
  • ಆ ಗಣಿ ದೃಶ್ಯಗಳು, ಅದನ್ನೂ ನಾಜೂಕಾಗಿ ತೆರೆದಿಟ್ಟಿರುವ ಪರಿ ಅಬ್ಬಬ್ಬಾ ಅನಿಸುತ್ತದೆ
  • ಆ ಗಣಿಯಲ್ಲಿ ಹಾಕಿರುವ ಸೆಟ್ ನಯನ ಮನೋಹರ
  • ಗಣಿಗಳಲ್ಲಿ ಕೆಲಸ ಮಾಡುವವರ ನೋವುಗಳನ್ನು ಬೋರ್ ಆಗದಂತೆ ಹಿಡಿದಿಟ್ಟಿರುವ ಪರಿ..  
  • ಸಂಕಲನಕಾರನ ಚಾಕಚಕ್ಯತೆ ಈ ಚಿತ್ರದ ಹೈ ಲೈಟ್ 
  • ಅಪಾರ ಕಲಾವಿದರನ್ನು ಹಿಡಿದಿಟ್ಟುಕೊಂಡು ಚಿತ್ರಕ್ಕೆ ಬೇಕಾದ ರೀತಿಯಲ್ಲಿ ಉಪಯೋಗಿಸಿರುವುದು ನಿರ್ದೇಶಕ ಜಾಣ್ಮೆ 
  • ಮುದ್ದಾಗಿ ಕಾಣುವ ಅನಂತ್ ನಾಗ್..ಅವರ ನಿರೂಪಣೆ, ಅವರ ಧ್ವನಿ, ಭಾಷಾ ಶುದ್ಧತೆ ಇಷ್ಟವಾಗುತ್ತದೆ 
  • ಅಷ್ಟೇ ಮುದ್ದಾಗಿ ಮಾಳವಿಕಾ..ಅವರ ಧ್ವನಿ ಸ್ಪಷ್ಟ ಕನ್ನಡ ಮಾತುಗಳು ಇಷ್ಟವಾಗುತ್ತದೆ . 
  • ಒಂದು ಕಾಲದಲ್ಲಿ ಕನ್ನಡ ಚಿತ್ರಗಳ ಕಡೆಗೆ ಇಡೀ ಭಾರತ ಚಿತ್ರರಂಗ ಕಣ್ಣು ತಿರುಗಿಸುತಿತ್ತು.. ಇಂತಹ ಚಿತ್ರಗಳ ಬಂದಷ್ಟು ಮತ್ತೆ ಆ ದಿನಗಳು ದೂರವಿಲ್ಲ ಅನ್ನಿಸುತ್ತದೆ.. 
  • ಆ ಭಾಷೆ ಚಿತ್ರ. .ಈ ಭಾಷೆ ಚಿತ್ರ ಅಂತ ಅಂತ ಸುದ್ದಿ ಕೇಳಿ ಕೇಳಿ ಬೇಸತ್ತಿದ್ದ ಕಿವಿಗಳು.. ಕನ್ನಡ ಸಿನಿಮಾ ಈ ಪಾಟಿ ಸುದ್ದಿ ಮಾಡುತ್ತಿರುವುದು.. ಕರುನಾಡಿನ ಪ್ರತಿಯೊಬ್ಬ ಸಿನಿಪ್ರಿಯನಿಗೂ ಇದು ಯುಗಾದಿ ಹಬ್ಬವೆಂದರೆ ತಪ್ಪಿಲ್ಲ ಅಲ್ವೇ.. !!!




ಎರಡನೇ ಚಾಪ್ಟರ್ ಬೇಗನೆ ತೆರೆಯ ಮೇಲೆ ಅಪ್ಪಳಿಸಲಿ.. ಶುಭವಾಗಲಿ ಕೆಜಿಎಫ್ ತಂಡಕ್ಕೆ!!!

Sunday, November 25, 2018

ಅಜಾತಶತ್ರು .. ಸ್ನೇಹಮಯ ಅಂಬಿ ಅಜರಾಮರ

ಎಂಭತ್ತರ ದಶಕದ ಆರಂಭ.. ಆಗ ನಮ್ಮ ಮನೆ ತ್ಯಾಗರಾಜನಗರದದಲ್ಲಿ.. ನನ್ನ ಅಣ್ಣ ಇವರ  ದೊಡ್ಡ ಅಭಿಮಾನಿ.. ನಮಗೆ ಚಿತ್ರಗಳು ನೋಡುವುದೆಂದರೆ ಒಂದು ಹಬ್ಬ ಅನ್ನುವ ಪರಿಸ್ಥಿತಿ...

ಒಂದು ದಿನ ಅಣ್ಣ ಮನೆಗೆ ದೊಡ್ಡ ಪೇಪರ್ ತಂದು.. ಅದರಲ್ಲಿ ಇವರ ಅನೇಕ ಪುಟ್ಟ ಪುಟ್ಟ ಚಿತ್ರಗಳನ್ನು ತಂದು. ಅಂಟಿಸುತ್ತಿದ್ದ.. ಬಾಲ್ಯ ಸಹಜ ಕುತೂಹಲ.. ನಾವು ಕೈ ಹಾಕಿದೆವು.. ಜಾಕೆಟಿನಲ್ಲಿ, ಜರ್ಕಿನಲ್ಲಿ, ಜೀನ್ಸ್ ಪ್ಯಾಂಟ್, ಕಪ್ಪು ಕನ್ನಡಕ, ತಲೆಗೆ ಟೋಪಿ, ಗಜೇಂದ್ರ ಚಿತ್ರದ ಒಂದು ಪ್ಲಾಸ್ಟಿಕ್ ಬ್ಯಾರೆಲ್ ಎತ್ತಿ ಹಿಡಿದ ಚಿತ್ರ.. ಹೀಗೆ ತರಹಾವರಿ ಚಿತ್ರಗಳನ್ನು ಅಂಟಿಸಿದ ಒಂದು ಪೋಸ್ಟರ್ ಸಿದ್ಧಪಡಿಸಿದ ಅವನು ಮತ್ತು ಅವನ ಗೆಳೆಯರು.. ಆಮೇಲೆ ಒಂದು ಥೀಯೇಟರ್ ನಲ್ಲಿ ಹಾಕಿದರು ಎಂದು ಹೇಳಿದ..  ಅದು ಬೇರೆ ವಿಷಯ.. ಆದರೆ ಜನರನ್ನು ಅಭಿಮಾನಿಗಳನ್ನಾಗಿ ಮಾಡಿದ ನಟ ಇವರು ಎಂದು ಹೇಳಲು ಇಷ್ಟಪಡುತ್ತೇನೆ.. ಆರು

ಇಮೇಜ್,  ಸ್ಟಾರ್ ಗಿರಿ, ಹಿರಿತನ, ಪಾತ್ರ ದೊಡ್ಡದು ಚಿಕ್ಕದು ಎನ್ನುವುದರ ಬಗ್ಗೆ ತಲೆಕೆಡಿಸಿಕೊಳ್ಳದೆ, ತನಗೆ ತೋಚಿದಂತೆ ಪಾತ್ರಕ್ಕೆ ನ್ಯಾಯ ಸಲ್ಲಿಸಿ ರೆಬಲ್ ಸ್ಟಾರ್ ಎಂಬ ಬಿರುದು ಪಡೆದ ನಟ..

ಮಠ ಚಿತ್ರ.. ಸಾಧುಕೋಕಿಲ ನಿರ್ಮಾಪಕರಿಗೆ ಕತೆ ಹೇಳುತ್ತಿರುತ್ತಾರೆ.. ಮಹಾಭಾರತವನ್ನು ಈಗಿನ ಕಾಲಕ್ಕೆ ಹೊಂದಿಸುವ ಕತೆ.. ಪಾಂಡವರ, ಕೌರವರ ಪಾತ್ರಕ್ಕೆ ಈ ಈ ನಟರನ್ನು ಆಯ್ಕೆ ಮಾಡೋಣ ಅಂತ ಹೇಳುತ್ತಾರೆ.. ಆಗ ಅಲ್ಲಿದ್ದ ಒಬ್ಬ ಅಣ್ಣ ಕರ್ಣ ಪಾತ್ರ  ಯಾರು ಮಾಡುತ್ತಾರೆ ಎಂದಾಗ..

"ಅಯ್ಯೋ ನಿನ್ನ ಯೋಗ್ಯತೆಗೆ ಬೆಂಕಿ ಹಾಕ.. ಇಂಡಸ್ಟ್ರಿನಲ್ಲಿ ಎಷ್ಟು ವರ್ಷದಿಂದ ಇದ್ದೀಯ.. "ಕರ್ನಾಟಕದ ಕರ್ಣ ಯಾರು "ಅಂಬರೀಷ್"  ಎಂದು ಸಾಧುಕೋಕಿಲ ಹೇಳುತ್ತಾರೆ.. ಇದೊಂದು ಮಾತು ಅಂಬರೀಷ್  ಅವರ ಜೀವನದ ಸಾರ್ಥಕತೆಯನ್ನು ಹೇಳುತ್ತದೆ..

ಕಷ್ಟ ಎಂದು ಹೋದವರ್ಯಾರಿಗೂ ಬರಿಗೈಯಲ್ಲಿ ಕಳಿಸಿದ ಉದಾಹರಣೆ ಇಲ್ಲ ಎಂದು ಅವರಿಂದ ಸಹಾಯ ಪಡೆದ ನೂರಾರು ಮಂದಿ ಹೇಳುತ್ತಾರೆ.. ಯಾರಿಗೂ ತಿಳಿಯದೆ ಸಹಾಯ ಮಾಡಿರೋದು ಅವರಿಗೆ, ಸಹಾಯ ಪಡೆದವರಿಗೆ ಮತ್ತು ಆ ಭಗವಂತನಿಗೆ ಗೊತ್ತು..

ಪುಟ್ಟ ಹನಿ ಜಿನುಗಿ ಮುಂದೆ ಅದೇ ಹೊನಲಾಗಿ, ಝರಿಯಾಗಿ, ತೊರೆಯಾಗಿ, ನದಿಯಾಗಿ, ಸಾಗರವಾಗುವಂತೆ, ಮೈಲಿಗಲ್ಲು ಚಿತ್ರ ನಾಗರಹಾವು ಚಿತ್ರದ ಒಂದೆರಡು ದೃಶ್ಯಗಳಲ್ಲಿ ಬರುವ ಜಲೀಲ ಪಾತ್ರದಿಂದ ಬೆಳೆಯುತ್ತ ಹೋದ ಪರಿ ಅಚ್ಚರಿಯಾಗುತ್ತದೆ.

ಅವರ ಸ್ನೇಹಪರತೆ, ವಿಷ್ಣುವಿನ ಜೊತೆಯ ಅಗಾಧ ಗೆಳೆತನ, ಎಲ್ಲರೊಡನೆ ಬೆರೆಯುವ ಅವರ ಮನೋಭಾವ ಅವರ ಪಾತ್ರಗಳಿಗಿಂತ ಹೆಚ್ಚು ಕಾಡಿದ್ದು ಸುಳ್ಳಲ್ಲ.. ಅವರ ೨೦೦ಕ್ಕೂ ಹೆಚ್ಚು ಚಿತ್ರಗಳಲ್ಲಿ ನನ್ನ ಕಾಡುವ ಹತ್ತು ಚಿತ್ರಗಳ ಬಗ್ಗೆ ಒಂದಷ್ಟು ಹೇಳುವೆ..

ನ್ಯೂ ಡೆಲ್ಲಿ
ಪತ್ರಕರ್ತ ತನಗಾದ ನೋವು, ಅವಮಾನ ಮತ್ತು ತನ್ನ ಗೆಳತಿಗಾದ ಅವಮಾನವನ್ನು ತಣ್ಣಗಿನ ಕ್ರೌರ್ಯದಿ ತಣಿಸಿಕೊಳ್ಳುವ ಪಾತ್ರದಲ್ಲಿ ನಿಜಕ್ಕೂ ಮನಕ್ಕೆ ಇಳಿಯುತ್ತಾರೆ.. ಎರಡನೇ ಭಾಗದಲ್ಲಿ ವಿಗ್ ಧರಿಸಿದ್ದರೂ ಮುದ್ದಾಗಿ ಕಾಣುವ ಅಂಬರೀಷ್ ಈ ಚಿತ್ರದ ಜೀವವಾಗಿದ್ದರೆ.  "ಚಂದ್ರಪ್ಪ" ಎನ್ನುವ ಅವರ ರಾಗವಾಗಿ ಹೇಳುವ ದನಿ ಬಲು ಇಷ್ಟ

ಶುಭಮಂಗಳ
ಈ ಶತಮಾನದ ಮಾದರಿ ಹೆಣ್ಣು ಎನ್ನುವ ಹಾಡಿನಲ್ಲಿ ಕುಣಿಯುವ ದೃಶ್ಯ,
ನಾಯಕಿ ಆರತಿಗೆ ಅವಮಾನವಾದಾಗ.. ನಾಯಕಿ ಅಂಬರೀಷ್ ಅವರಿಗೆ ಏನಾಯಿತು ಎಂದು ಮೂಕಭಾಷೆಯಲ್ಲಿ ಹೇಳಿದಾಗ ಅಂಬಿ ಅಭಿನಯ
ಮೂಕನಾದರೂ ಭಾವ ತುಂಬುವ ಆ ಪಾತ್ರ ಚಿತ್ರದುದ್ದಕ್ಕೂ ಕಾಡುತ್ತದೆ.

ಪಡುವಾರಹಳ್ಳಿ ಪಾಂಡವರು
"ಸಾಹುಕಾರ್ರೆ ನನಗೆ ದುಡ್ಡು ಕೊಡಿ.. ಒಂದು ಚಿನ್ನದ ಸರ ಮಾಡಿಸಿ ಮದುವೆ ಆಯ್ತು ಎನ್ನಿಸಿಬಿಡಿ.. ಸಾಯೊಗಂಟ ನಿಮ್ಮ ಮನೆಯಲ್ಲಿ ನಾನು ಚೆನ್ನೈ ಜೀತ ಮಾಡುತ್ತೀವಿ.. " ಎನ್ನುವಾಗ ಅವರ ಕಣ್ಣಿನಲ್ಲಿ ಕಾಣುವ ಧೈನ್ಯತೆ ಅಬ್ಬಾ.. !
"ನೀವು ಹೋಗದೆ ಇದ್ರೆ ..  ಸಾಹುಕಾರ ಕರಿಯ ಅವರಿಗೆ ಹೊಡಿ ಅಂತಾನೆ, ನಾ ಅವನ ಮನೆ ಉಪ್ಪು ತಿಂದಿದ್ದೀನಿ.. ಆಗೋಲ್ಲ ಅನ್ನೋಕಾಗಲ್ಲ.. ಒಂದೇ ಏಟು.. ಬೇಡಪ್ಪಾ.. ಹೋಗ್ರೋ, ಹೋಗ್ರಣ್ಣ ..." ಎನ್ನುವ ಕಾಳಜಿ..

ರಂಗನಾಯಕಿ
ಏನ್ ಅಪ್ಪಾಜಿ ಎಲ್ಲರೆದುರು ಕೈ ಇದೆ ಅಂತ ಪಟ ಪಟ ಅಂತ ಹೊಡೆದುಬಿಟ್ರಲ್ಲ. .ನಾ ಮಾಡಿದ್ದು ತಪ್ಪು ಅಂದ್ರೆ ಹೇಳಿ.. ಆ ಸಾಹುಕಾರನ ಕಾಲು ಮುಟ್ಟಿ ಕರೆದುಕೊಂಡು ಬರ್ತೀನಿ.. ಎನ್ನುತ್ತಾರೆ.. ಆಗ ರಾಜಾನಂದ್ "ಇಲ್ಲ ಕಣೋ ರಾಮಣ್ಣ ನಾಟಕ ಮಾಡುವವರಿಗೂ ಮರ್ಯಾದೆ ಇದೆ ಅಂತ ಹೇಳೋ ನಿನ್ನಂತ ಲಕ್ಷ ಲಕ್ಷ ರಾಮಣ್ಣ ಇರಬೇಕು ಕಣೋ" ಎಂದಾಗ ಅಂಬಿ ಮೊಗ.. ಸೂಪರ್

ಇಂದ್ರಜಿತ್  
ತನ್ನ ಮೇಲೆ ಆಪಾದನೆ ಹೊರಿಸಿದ ಸಾಕ್ಷಿಯನ್ನು ಕರೆತಂದು ಕಮಿಷನರ್ ಮುಂದೆ ತಳ್ಳಿ "ನನ್ನ ತಲೆಮೇಲೆ ಕೂರಿಸಲು ಪ್ರಯತ್ನ ಪಟ್ಟ ಗೊಂಬೆಯಿದು" ಎಂದು ಹೇಳುವ ಅಂಬರೀಷ್.. ಈ ಚಿತ್ರದುದ್ದಕ್ಕೂ ಸಂಭಾಷಣೆಯಲ್ಲಿ ಗಮನಸೆಳೆಯುತ್ತಾರೆ.. ಈ ಚಿತ್ರ ಅವರ ಚಿತ್ರಜೀವನದಲ್ಲಿ ಒಂದು ತಿರುವು ಕೂಡ.. ಯಶಸ್ಸು ಕಂಡ ಚಿತ್ರವಿದು..

ಮಸಣದ ಹೂವು 
ಯಾಕೆ ಈ ಪಾತ್ರ ಒಪ್ಪಿಕೊಂಡಿರಿ ಎಂದು ಈ ಚಿತ್ರ ನೋಡಿದ ಅಭಿಮಾನಿಗಳು ಕೇಳುವಷ್ಟು ವಿಚಿತ್ರ ಪಾತ್ರವಿದು.. ತಲೆಹಿಡುಕನ ಪಾತ್ರ.. ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾಗ ಈ ಚಿತ್ರ ಗುರುಗಳು ಪುಟ್ಟಣ್ಣನವರು ನೀಡಿದಾಗ ಮರು ಮಾತಿಲ್ಲದೆ ಒಪ್ಪಿಕೊಂಡು ಅಚ್ಚುಕಟ್ಟಾಗಿ ಅಭಿನಯಿಸಿದ್ದರು.. ಈ ಪಾತ್ರಕ್ಕೆ ಪೋಷಕ ಪಾತ್ರ ಪ್ರಶಸ್ತಿ ಸಿಕ್ಕಿತು. ಪುಟ್ಟಣ್ಣನವರು ಚಿತ್ರಿಸಿದ ಇಡೀ ಪಾತ್ರ ಸೊಗಸಾಗಿ ಮೂಡಿಬಂದಿದೆ..

ಅಂತ
ಕುತ್ತೆ ಕನ್ವರ್ ನಹಿ ಕನ್ವರ್ ಲಾಲ್ ಬೋಲೋ ಎನ್ನುವ ಈ ಸಂಭಾಷಣೆ ಪ್ರಸಿದ್ಧಿಯಾಗಿದ್ದು ಅವರು ಹೇಳುವ ಶೈಲಿ ಮತ್ತು ಸಿಗರೇಟಿನ ಹೊಗೆಯನ್ನು ಒಳಗೆ ಎಳೆದುಕೊಂಡು ಕೆಂಡ ಕಾರುವ ಕಣ್ಣುಗಳನ್ನು ದೊಡ್ಡದಾಗಿ ಬಿಡುವ ಆ ಅಭಿನಯ ಚಿತ್ರರಸಿಕರ ಮನದಲ್ಲಿ ಕೂತು ಬಿಟ್ಟಿದೆ.. ಹಿಂಸೆ ಮಾಡಿದಾಗ ಅವರು ಕಿರುಚುವ ಅಭಿನಯ.. ಒಬ್ಬೊಬ್ಬ ಖಳನನ್ನು ಮುಗಿಸುವಾಗ ಅವರ ಮಾತುಗಳು ಸೊಗಸಾಗಿದೆ.. ಈ ಚಿತ್ರ ಹಲವಾರು ಭಾಷೆಯಗಳಲ್ಲಿ ಬಂದರೂ ಅಂಬರೀಷ್ ಅಭಿನಯ ಮುಟ್ಟಲಾಗಿಲ್ಲ..

ಚಕ್ರವ್ಯೂಹ 
ಭಾರತ ಚಿತ್ರರಂಗದ ಮೊದಲ ರಾಜಕೀಯ ಚಿತ್ರವಿದು ಎಂದು ಬಾಲ್ಯದಲ್ಲಿ ಎಲ್ಲೋ ಓದಿದ ನೆನಪು.. ಈ ಚಿತ್ರದಿಂದ ಅವರ ಅಭಿಮಾನಿಗಳ ಬಳಗ ಇನ್ನಷ್ಟು ದೊಡ್ಡದಾಯಿತು.. ಮತ್ತು ಚಿತ್ರರಂಗದ ಒಂದು ಆಸ್ತಿಯಾದರು..

ಹೃದಯ ಹಾಡಿತು
ರೆಬೆಲ್ ಸ್ಟಾರ್ ಬರಿ ಹೊಡೆದಾಟ ಬಡಿದಾಟದ ಸಿನೆಮಾಗಳಲ್ಲಿ ಕಳೆದು ಹೋಗಿದ್ದಾರೆ ಅನ್ನಿಸುವಾಗ ಧುತ್ ಎಂದು ಬಂದ ಚಿತ್ರವಿದು.. ವಿಭಿನ್ನ ಮೇಕಪ್.. ಸುಂದರವಾಗಿ ಇವರನ್ನು ಸೆರೆಹಿಡಿದ ಛಾಯಾಗ್ರಾಹಕ ಗೌರಿಶಂಕರ್ ಇಷ್ಟವಾಗುತ್ತಾರೆ.. ಚಿತ್ರಕ್ಕೋಸ್ಕರ ಒಂದೇ ಒಂದು ಫೈಟ್ ಇದ್ದರೂ ಪೂರ್ತಿ ಕೌಟುಂಬಿಕ ಚಿತ್ರವಿದು..ಸಂಯಮದ ಅಭಿನಯದಲ್ಲಿ ಇಷ್ಟವಾಗುತ್ತಾರೆ..

ಏಳು ಸುತ್ತಿನ ಕೋಟೆ 
ಛಾಯಾಗ್ರಾಹಕ ಗೌರಿಶಂಕರ್ ನಿರ್ದೇಶಿಸಿದ ಈ ಚಿತ್ರ ಯಶಸ್ಸಾಗಲಿಲ್ಲ ಆದರೆ ಕತೆ, ಚಿತ್ರಕತೆ ಮತ್ತು ಅಂಬರೀಷ್ ಅಭಿನಯ ಅದ್ಭುತವಾಗಿದೆ.. ಕೋಪದ ಭರದಲ್ಲಿ ಮಾಡಿದ ಒಂದು ತಪ್ಪು ಅವರನ್ನು ಕಾಡುವ ಪರಿ ಜೊತೆಯಲ್ಲಿ ಅದನ್ನು ವ್ಯಕ್ತ ಪಡಿಸುವ ರೀತಿ ಅಮೋಘವಾಗಿದೆ.. ಹಾಡುಗಳು, ಅಭಿನಯ ಎಲ್ಲವೂ ಸೊಗಸು..

ಇಲ್ಲಿ ಪರಿಗಣಿಸದ ಚಿತ್ರಗಳು ನನ್ನ ಮನ ಮುಟ್ಟಿದ ಕೆಲವು ಚಿತ್ರಗಳು.. ಆದರೆ ಅವರು ಅಭಿನಯಿಸಿದ ಅಷ್ಟೂ ಚಿತ್ರಗಳಲ್ಲಿ ಒಂದಲ್ಲ ಒಂದು ರೀತಿಯಲ್ಲಿ ಅವರ ತಾಕತ್ತು ತೋರಿಸಿದ್ದಾರೆ.. ಯಾರಿಗೂ ಹೆದರದೆ, ಯಾರಿಗೂ ಬಗ್ಗದೆ,, ಆದರೆ ವಿನಯ ಬಿಟ್ಟು ಹೋಗದೆ, ಮಾತು ಬಿರುಸಾದರೂ ಹೃದಯವಂತ ಜೀವಿ ಅಂಬರೀಷ್..

ಅವರ ಮಿತಿ ಅವರಿಗೆ ಗೊತ್ತಿತ್ತು ಆದರೂ ಅಭಿನಯದಲ್ಲಿ ಆಹಾ ಎನ್ನಿಸುವಂತೆ ಅಭಿನಯಿಸಿದ್ದಷ್ಟೇ ಅಲ್ಲದೆ, ಎಲ್ಲರ ಸ್ನೇಹಿತನಾಗಿದ್ದರು.. ಇದಕ್ಕೆ ಸಾಕ್ಷಿ ಅಂಬಿ ೬೦:೪೦ ಕಾರ್ಯಕ್ರಮದಲ್ಲಿ ಭಾರತ ಚಿತ್ರರಂಗದ ದಿಗ್ಗಜರೆಲ್ಲಾ ವೇದಿಕೆಬಂದಿದ್ದು..

ಅವರ ನಿರ್ಮಾಪಕರಿಗೆ, ನಿರ್ದೇಶಕರಿಗೆ ಯಾವತ್ತೂ ತೊಂದರೆಯಾಗದಂತೆ ನೋಡಿಕೊಂಡ ಅಪರೂಪದ ನಟ ಇವರು.

ಎಲ್ಲರಿಗೂ ಒಂದು ಆಸೆ ಇರುತ್ತೆ.. ನಾವಿಲ್ಲದೆ ಇದ್ದಾಗ ನಮ್ಮ ಬಗ್ಗೆ ಜನರ ಅಭಿಪ್ರಾಯ ಹೇಗಿರುತ್ತೆ ಅಂತ.. ಇದು ನಿಜವಾಗಿದ್ದು ಕೆಲವು ವರ್ಷಗಳ ಹಿಂದೆ.. ಆರೋಗ್ಯ ಹದಗೆಟ್ಟಿದ್ದಾಗ ಚಿಕಿತ್ಸೆ ತೆಗೆದುಕೊಳ್ಳುವ ಸಮಯದಲ್ಲಿ ಕಾಲಯಮನೊಡನೆ ಹೋರಾಡಿ ಬಂಡ ಸಂಧರ್ಭ ದೃಶ್ಯ ಮಾಧ್ಯಮ, ಪತ್ರಿಕೆ ಎಲ್ಲದರಲ್ಲೂ ಅವರ ಬಗ್ಗೆ ಬಂದಿದ್ದನ್ನು ಅವರು ಹುಷಾರಾಗಿ ಬಂದ ಮೇಲೆ ಅವರೇ ಹೇಳಿದ್ದು "ನಾ ಹೋದ ಮೇಲೆ ನನ್ನ ಮೇಲಿನ ಅಭಿಮಾನ ಹೇಗಿರುತ್ತೆ ಅಂತ ಜೀವಂತವಾಗಿದ್ದಾಗಲೇ ನೋಡಿ ಮನತುಂಬಿ ಬಂತು"

ಅವರ ಕಾಲಘಟ್ಟದ ಎಲ್ಲಾ ನಂತರ ಜೊತೆ ಅಭಿನಯಿಸಿದ್ದ ನಟ.. ನಂತರ ಬದಲಾದ ಕಾಲಮಾನದಲ್ಲಿಯೂ ಕಿರಿಯ ನಟರ ಜೊತೆಯಲ್ಲಿಯೂ ಅದೇ ರೀತಿ ಅಭಿನಯಿಸಿ ಎಲ್ಲರೊಡನೆ ಒಂದಾಗಿದ್ದು ಅವರ ಹೆಗ್ಗಳಿಕೆ.. 

ನಟರಾಗಿ, ಸ್ನೇಹಿತನಾಗಿ, ಎಲ್ಲರ ಜೊತೆ ಬೆರೆಯುವ ಹಿರಿಯನಾಗಿ ಚಿತ್ರರಂಗಕ್ಕೆ ಒಂದು ಶಕ್ತಿಯಾಗಿದ್ದ ಅಂಬರೀಷ್ ಧ್ರುವತಾರೆಯಾಗಿದ್ದಾರೆ.. ಅವರ ಚಿತ್ರಗಳಲ್ಲಿ, ಅವರ ಅಭಿನಯದಲ್ಲಿ, ಅವರ ಮಾತುಗಳಲ್ಲಿ ಸದಾ ಅಮರ.. !!!

ಪುಟ್ಟಣ್ಣ ಕಣಗಾಲ್ ಕುಲುಮೆಯಲ್ಲಿ ಎದ್ದು ಬಂದ ಚಿನ್ನ ತಾಯಿ ಭುವನೇಶ್ವರಿ ಕೊರಳಿನಲ್ಲಿ ಆಭರಣವಾಗಿದ್ದರೆ!!!
ಅಜಾತಶತ್ರು .. ಸ್ನೇಹಮಯ ಅಂಬಿ ಅಜರಾಮರ


Wednesday, November 21, 2018

ಮನದ ಮೊಂಡು ಕೋಣವನ್ನು ಅಡಗಿಸುವ ಮಹಿಷಾಸುರ ಮರ್ಧಿನಿ (1959) (ಅಣ್ಣಾವ್ರ ಚಿತ್ರ ೧೩ / ೨೦೭)

ಜೀವನದಲ್ಲಿ ಏನೇನೂ ಆಗಿ ಹೋಗುತ್ತದೆ.. ಅತೀವೃಷ್ಟಿಯೂ ಹೌದು ಅನಾವೃಷ್ಟಿಯೂ ಹೌದು.. ಇದ್ಯಾಕೆ ಹೀಗೆ ಹೇಳುತ್ತಿದ್ದೀನಿ ಅಂದ್ರ.. ಕಡೆಯಲ್ಲಿ ಹೇಳುತ್ತೇನೆ.. !

ಪೌರಾಣಿಕ ಸಿನಿಮಾ ಮಾಡುವುದು ಒಂದು ಅದ್ಭುತ ಅನುಭವ.. ಅಣ್ಣಾವ್ರ ಹದಿಮೂರನೇ ಸಿನಿಮಾ ಇದು.. ಇದರಲ್ಲಿ ಸಿಂಹಪಾಲು ಪೌರಾಣಿಕ ಅಥವಾ ಐತಿಹಾಸಿಕ ಚಿತ್ರಗಳೇ ತುಂಬಿಕೊಂಡಿವೆ..

ಕರುನಾಡಿನಲ್ಲಿ ಮಹಿಷಾಸುರ ಅಂದ ಕೂಡಲೇ ಎಲ್ಲರ ಕಣ್ಣು ಓಡುವುದು ಚಾಮುಂಡಿ ಬೆಟ್ಟದಲ್ಲಿರುವ ಆ ಮೂರ್ತಿಯ ಕಡೆಗೆ. ಹೌದು ಅಲ್ಲಿಂದಲೇ ನಮ್ಮ ಬಾಲ್ಯದ ನೆನಪು ಶುರುವಾಗೋದು.. ಅನೇಕ ಬಾರಿ ನೋಡಿದರೂ, ಏನೋ ಒಂದು ರೀತಿಯ ಅವ್ಯಕ್ತ ಸಂತೋಷ ಪ್ರತಿ ಬಾರಿ ನೋಡಿದಾಗಿಯೂ ಅರಿವಾಗುವಂತೆ, ಈ ಚಿತ್ರದ ಕಥೆ ಹೊಸದೇನಲ್ಲ.. ಗೊತ್ತಿರುವುದೇ ಆದರೂ, ಅದನ್ನು ತೆರೆಯ ಮೇಲೆ ತಂದ ವಿಕ್ರಂ ಪ್ರೊಡಕ್ಷನ್ಸ್ ಲಾಂಛನದಲ್ಲಿ ಅನರ್ಘ್ಯ ರತ್ನ ಎಂದೇ ಹೆಸರಾದ ನಿರ್ದೇಶಕ ಶ್ರೀ ಬಿ ಎಸ್ ರಂಗ ಅವರು ಚಿತ್ರಕಥೆ ಬರೆದು, ನಿರ್ಮಿಸಿ, ಛಾಯಾಗ್ರಹಣದ ಹೊಣೆ ಹೊತ್ತು ನಿರ್ದೇಶಿಸಿರುವ ಚಿತ್ರವಿದು.

ಈ ಚಿತ್ರ ಗಮನ ಸೆಳೆಯುವುದು ಚಿತ್ರಕಥೆಯಲ್ಲಿ. ಎಲ್ಲರಿಗೂ ಗೊತ್ತಿರುವ ಕಥೆಯಲ್ಲಿ ನರಸಿಂಹರಾಜು, ರಮಾದೇವಿ, ಎಂ ಏನ್ ಲಕ್ಷ್ಮೀದೇವಿ ಇವರ ಕಥೆಯನ್ನು ಸೇರಿಸಿ, ಹಾಸ್ಯ ಬಡಿಸುವ ಅದ್ಭುತ ಕಲೆಗಾರಿಕೆ ತುಂಬಿದೆ.. ರಾಕ್ಷಸ ಕುಲದ ವೇಷಭೂಷಣಗಳಿದ್ದರೂ ಹಾಸ್ಯಕ್ಕೆ ಕೊರತೆಯಿಲ್ಲ ಎನ್ನುವುದು ಈ ಮೂರು ಕಲಾವಿದರ ಅಭಿನಯ ಮತ್ತು ಸಂಭಾಷಣೆಯಲ್ಲಿ ಅಡಕವಾಗಿದೆ..

ಚುರುಕಾದ, ಚುಟುಕಾದ ಸಂಭಾಷಣೆ ಬರೆದಿರುವ ಶ್ರೀ ಚಿ ಸದಾಶಿವಯ್ಯನವರ ಜಾದೂ ಈ ಚಿತ್ರದ ತುಂಬಾ ಹರಡಿಕೊಂಡಿದೆ.  ಹಾಡುಗಳು ಈ ಚಿತ್ರದ ತುಂಬಾ ಹರಡಿಕೊಂಡಿದ್ದರೂ ಗಮನ ಸೆಳೆಯುವುದು
"ನಾರಾಯಣ ವನಮಾಲಿ" ನಾರದ ಹಾಡಿಕೊಂಡಿ ಬರುವ ಹಾಡು 
"ತುಂಬಿತು ಮನವ" ಯುಗಳ ಗೀತೆ.. ಇದರ ವಿಶೇಷತೆ ಏನೂ ಅಂದರೆ ರಾಜ್ ಹಿನ್ನೆಲೆ ಗಾಯನದ ಎರಡನೇ ಚಿತ್ರವಿದು. ಮೊದಲನೆಯ ಚಿತ್ರ ಓಹಿಲೇಶ್ವರದ "ಶರಣು ಶಂಭೋ". ಈ ಗೀತೆಯ ಸಂಗೀತ ನಿರ್ದೇಶಕರೂ ಕೂಡ ಶ್ರೀ ಜಿ ಕೆ ವೆಂಕಟೇಶ್ ಅವರು."

ಕಥೆ ಸರಳ.. ರಕ್ಕಸ ಕುಲದ ರಂಭೇಶ ಸೋದರರ ಕುಲ ಸಂತಾನವಿಲ್ಲದೆ ಕೊರಗುತ್ತಿರುವಾಗ, ರಾಕ್ಷಸರ ಗುರು ಶುಕ್ರಾಚಾರ್ಯರ ಅಣತಿಯಂತೆ, ವರುಣ ದೇವನನ್ನು ತಪಸ್ಸು ಮಾಡುವಾಗ, ಕಪಟಿ ಇಂದ್ರ ಮೊಸಳೆಯನ್ನು ಕಳಿಸಿ ರಂಭೇಶ ಅಗ್ರಜನನ್ನು ಸಾಯಿಸುತ್ತೆ, ನಂತರ ಪಣ ತೊಟ್ಟು ನಾಗಲೋಕಕ್ಕೆ ಹೋಗಿ ಸಂತಾನ ಫಲವ ತಂದು, ಗುರುವಿನ ಅಣತಿಯಂತೆ ಮದುವೆಗೆ ಸಿದ್ಧನಾಗುತ್ತಾನೆ. ಯಥಾಪ್ರಕಾರ ಇಂದ್ರ, ಮಹಿಷ ಗುಂಪನ್ನು ಹೆಣ್ಣುಗಳನ್ನಾಗಿ ಮಾಡಿ,  ರಂಭೇಶ ಒಂದು  ಸುಂದರಿಗೆ ಮನಸೋಲುವಂತೆ ಮಾಡುತ್ತಾನೆ.

ಮದುವೆಯಾದ ಮರುಕ್ಷಣವೇ ತನ್ನ ಮಾಯಾಜಾಲದಿಂದ ಸುಂದರಿಯನ್ನು ಮಹಿಷನನ್ನಾಗಿ ಮಾಡುತ್ತಾನೆ., ಇದನ್ನು ಅರಿತ ಶುಕ್ರಾಚಾರ್ಯರು ತಮ್ಮ ತಪಶಕ್ತಿ ಧಾರೆಯೆರೆದು ಹೆಣ್ಣಿನ ರೂಪವನ್ನು ಸ್ಥಿರಗೊಳಿಸುತ್ತಾರೆ. ಮುಂದೆ ಮಗುವಾಗುವ ಮುನ್ನವೇ, ಇಂದ್ರ ಕುತಂತ್ರದಿಂದ ರಂಭೇಶನ ಅವಸಾನವಾಗುತ್ತದೆ, ಮತ್ತು ಆತನ ಪತ್ನಿಯೂ ಕೊನೆಯುಸಿರೆಳೆಯುತ್ತಾಳೆ. ಮಗು ಬೆಳೆದು ದೊಡ್ಡವನಗಾಗುವ ತನಕ ಅದರ ತಂದೆ ತಾಯಿ ಮತ್ತು ಆತನ ದೊಡ್ಡಪ್ಪನ ಅಂತ್ಯದ ಕಾರಣ ಹೇಳದೆ, ನಂತರ ಹೇಳಿದಾಗ, ಮಹಿಷ ಕುಪಿತನಾಗಿ, ಉಗ್ರ ತಪಸ್ಸು ಮಾಡಿ, ಬ್ರಹ್ಮನಿಂದ ಯಾವ ಗಂಡಿನಿಂದಲೂ, ಪ್ರಾಣಿ ಪಕ್ಷಿಗಳಿಂದಲೂ ಮರಣಬಾರದಂತೆ ವರ ಪಡೆದು, ಉನ್ಮತ್ತನಾಗಿ ಇಂದ್ರನ ಸಾಮ್ರಾಜ್ಯಕ್ಕೆ ಲಗ್ಗೆ ಹಾಕಿ, ಬಂಧಿಸಿ, ಶಚೀದೇವಿಯನ್ನು ಮೋಹಿಸುತ್ತಾನೆ. ಅಹಂಕಾರ ತುಂಬಿಕೊಂಡು, ತಾನೇ ಸರ್ವೇಶ್ವರ ಎಂದು ಘೋಷಿಸಿಕೊಂಡು, ಎಲ್ಲರೂ ತನ್ನ ಪ್ರತಿಮೆಯನ್ನೇ ಪೂಜಿಸಬೇಕೆಂದು ತಾಕೀತು ಮಾಡಿ ಮೆರೆದಾಡುತ್ತಾನೆ. ನಂತರ ಎಲ್ಲರಿಗೂ ಅರಿವಿರುವಂತೆ, ತಾಯಿ ಸರ್ವಮಂಗಳೇ ದೇವತೆಗಳು ಕೊಟ್ಟ ಅಸ್ತ್ರಗಳ ಸಹಾಯದಿಂದ ಮದೋನ್ಮತ್ತ ಮಹಿಷನನ್ನು ಸಂಹರಿಸುತ್ತಾಳೆ ಮಹಿಷಾಸುರ ಮರ್ಧಿನಿಯಾಗುತ್ತಾಳೆ.. !

ಈ ಚಿತ್ರದಲ್ಲಿ ರಾಜ್ ಅಭಿನಯ ಸೊಗಸು.. ಅವರ ಆರಂಭಿಕ ದೃಶ್ಯದಲ್ಲಿಯೇ ಈ ಚಿತ್ರದಲ್ಲಿ ಘರ್ಜಿಸುವ ಕುರುಹು ತೋರುತ್ತಾರೆ. ಅಭಿನಯ, ಭಾಷ ಶುದ್ಧತೆ, ಆ ಪಾತ್ರಕ್ಕೆ ಬೇಕಾದ ಹಾವಭಾವ, ಗತ್ತು ಎಲ್ಲವೂ ಸೊಗಸಾಗಿ ಮೂಡಿಬಂದಿದೆ. ಈ ಚಿತ್ರ ಅವರ ಮುಂದಿನ ಭಕ್ತ ಪ್ರಹ್ಲಾದದ ಹಿರಣ್ಯಕಶಿಪು ಪಾತ್ರಕ್ಕೆ ಟ್ರೈಲರ್ ತರಹ ಮೂಡಿ ಬಂದಿದೆ.. ಸೊಗಸಾದ ಯುಗಳ ಗೀತೆಯನ್ನು ಹಾಡಿರುವ ಈ ಚಿತ್ರದಲ್ಲಿ ಸೊಗಸಾದ ಅಭಿನಯವಷ್ಟೇ ಅಲ್ಲದೆ, ಆರಂಭಿಕ ದೃಶ್ಯಗಳಲ್ಲಿ ಮುದ್ದಾಗಿ ಕಾಣುತ್ತಾರೆ, ನಂತರ ಆರ್ಭಟ ಮಾಡುವ ಪಾತ್ರದಲ್ಲಿ ರಾಜ್ ಗಮನ ಸೆಳೆಯುತ್ತಾರೆ.

ಉದಯಕುಮಾರ್ ರಂಭೇಶನ ಪಾತ್ರದಿ ಗಮನಸೆಳೆಯುತ್ತಾರೆ. ಈ ಗಿರಿಜಾ ಮೀಸೆಯಲ್ಲಿ ಜುಮ್ ಎನಿಸುವಂತೆ ಕಾಣುವ ಇವರು, ಆರಂಭಿಕ ದೃಶ್ಯಗಳಲ್ಲಿ ಅಭಿನಯ ಸೊಗಸಾಗಿದೆ. ನಾರದನ ಪಾತ್ರ ಮಾಡಿರುವ ಅಶ್ವಥ್, ನಾರದ ಹೀಗೆ ಇದ್ದರೇನೊ ಅನ್ನಿಸುವಷ್ಟು ಸಹಜ ನಟನೆ. ನರಸಿಂಹರಾಜು ಹಾಸ್ಯದೃಶ್ಯದಲ್ಲಿ ನಗಿಸುತ್ತಾರೆ, ಅವರನ್ನು ಗೋಳುಹುಯ್ದುಕೊಳ್ಳುವ ರಮಾದೇವಿ, ಮತ್ತು ಲಕ್ಷ್ಮೀದೇವಿಯವರ ದೃಶ್ಯಗಳು ನಗೆ ತರಿಸುತ್ತದೆ..

ಶುಕ್ರಾಚಾರ್ಯರಾಗಿ ವಿ ನಾಗಯ್ಯನವರ ಧ್ವನಿ ಇಷ್ಟವಾಗುತ್ತದೆ. ಆ ಕಪ್ಪು ಬಿಳುಪಿನ ಕಾಲದ ಚಿತ್ರದಲ್ಲಿ ಅಚ್ಚುಕಟ್ಟಾಗಿ ಕಾಣುವ ಇವರು ಪೋಷಕ ಪಾತ್ರಧಾರಿಯಾಗಿ ಹಲವಾರು ಪೌರಾಣಿಕ ಚಿತ್ರಗಳಲ್ಲಿ ವಿಜೃಂಭಿಸಿದ್ದಾರೆ.

ದೇವನು ಏನೂ ಇಲ್ಲದ ಕಾಲದಲ್ಲಿ ಒಂದೊಂದಾಗಿ ಕೊಡುತ್ತಾ ಹೋಗುತ್ತಾನೆ, ಅದನ್ನು ಪಡೆದು ಜೀವನದಲ್ಲಿ ಅನ್ಯ ಮಾರ್ಗತುಳಿಯದೆ, ಧರ್ಮ ಮಾರ್ಗದಿ ಸಾಗುತ್ತಾ ಹೋದಾಗ ಆ ಮಹಾಮಹಿಮನು ಎಂದಿಗೂ ಕೈಬಿಡದೆ, ಬೇಕಾದ ಅನುಕೂಲಗಳನ್ನು ಮಾಡಿಕೊಡುತ್ತಾನೆ. ಆದರೆ ಧರ್ಮ ಮಾರ್ಗ ತ್ಯಜಿಸಿ, ವರಗರ್ವಿತನಾಗಿ, ಅಹಂಕಾರ ತುಂಬಿಕೊಂಡು ಪಾಪದ ಕೊಡ ತುಂಬಿಕೊಳ್ಳುತ್ತಾ ಸಾಗಿದಾಗ ಪವಾಡ ನೆಡೆಯುವಂತೆ, ಅನಿರೀಕ್ಷಿತ ಘಟನೆಗಳು ತೀರಾ ಸಾಮಾನ್ಯ ಅನ್ನುವಂತೆ ನೆಡೆದು ಅಂತ್ಯಕಾಣಿಸುತ್ತದೆ..
 
ಇದೆ ಅಲ್ಲವೇ ಜೀವನ.. ರಾಜ್ ಅವರ ಚಿತ್ರದ ಜೈತ್ರಯಾತ್ರೆ ಮುಂದುವರೆಸುತ್ತಾ.. ಈ ಚಿತ್ರದ ಕೆಲವು ದೃಶ್ಯಗಳನ್ನು ನಿಮಗಾಗಿ ಲಗತ್ತಿಸುತ್ತಿದ್ದೇನೆ..

ಜಾನಕೀ ಮುಂದೆ ಸಾಹುಕಾರ್ ಜಾನಕೀ ಎಂದೇ ಹೆಸರಾದ ನಾಯಕಿ 

ಹಾಸ್ಯ ಜೋಡಿ ನರಸಿಂಹರಾಜು ಮತ್ತು ಲಕ್ಷ್ಮೀದೇವಿ 

ಇವಳೇ ನನ್ನ ಗಂಡತಿ ಎನ್ನುವ ನರಸಿಂಹರಾಜು ಮತ್ತು ರಮಾದೇವಿ 


ಯುಗಳ ಗೀತೆ..ತುಂಬಿತು ಮನವ 

ಗಾಯಕ ಮತ್ತು ಗಾಯಕಿಯರ ಪಟ್ಟಿಯಲ್ಲಿ ರಾಜ್!

ರಾಜ್ ಮೊದಲ ದೃಶ್ಯದಲ್ಲಿ ಕಾಣುವುದು ಹೀಗೆ 

ಶ್ರೀ ವಿ. ನಾಗಯ್ಯ ಶುಕ್ರಾಚಾರ್ಯರಾಗಿ 

ನಾರದನಾಗಿ ಅಶ್ವತ್ 

ಸುಂದರ ಉದಯಕುಮಾರ್ 

ನೋಡ್ರಪ್ಪಾ ಅಣ್ಣಾವ್ರ ಅಭಿನಯ 

ಮುಂದಿನ ಚಿತ್ರದೊಂದಿಗೆ ಮತ್ತೆ ಬರುವ, ನೋಡುವ, ಓದುವ ಖುಷಿಪಡುವ.. ಏನಂತೀರಾ.. !!!

Friday, November 2, 2018

ಟಿ ಎನ್ ಬಾಲಕೃಷ್ಣ... ಬಂಗಾರದ ಬಾಲಣ್ಣ (ಚಿತ್ರ - ೩)

ಬಂಗಾರ ತೊಡದೆ ಇರೋರು ಇದ್ದರೂ ಇರಬಹುದು
ಬಂಗಾರ ಬಿಸ್ಕತ್ ನೋಡದೆ ಇರೋರು ಇರಬಹುದು 
ಅಣ್ಣಾವ್ರ ಬಂಗಾರದ ಮನುಷ್ಯ ನೋಡದೆ ಇರೋರು ಬಲು ಅಪರೂಪ!

ಒಂದು ಸಾಮಾಜಿಕ ಕ್ರಾಂತಿ ಮಾಡಿತ್ತು ಎಂದು ಹೇಳಲಾದ ಈ ಚಿತ್ರ ಎಲ್ಲ ಸಿನಿ ಆರಾಧಕರ ಅಚ್ಚುಮೆಚ್ಚಿನ ಚಿತ್ರ ಅನ್ನೋದರಲ್ಲಿ ಸಂದೇಹವೇ ಇಲ್ಲ.. ಶ್ರೀ ಟಿ ಕೆ ರಾಮರಾಮ್ ಅವರ ಬಂಗಾರದ ಮನುಷ್ಯ ಕಾದಂಬರಿಯನ್ನು ಶ್ರೀ ಸಿದ್ದಲಿಂಗಯ್ಯನವರು ಚಿತ್ರ ಮಾಡಿದ್ದು.. ನಂತರ ಅದು ಇತಿಹಾಸ ಮಾಡಿದ್ದು ಎಲ್ಲಾ ನಿಮಗೆ ಗೊತ್ತು.. 

ಅದರಲ್ಲಿ ಮುಖ್ಯ ಪಾತ್ರದ ರಾಜೀವ.. ಆ ಪಾತ್ರಕ್ಕೆ ಪ್ರೋತ್ಸಾಹ ಕೊಡುತ್ತಾ.. ರಾಜೀವ ತನ್ನ ಮುರಿದು ಬಿದ್ದ ಸಂಸಾರವನ್ನು ಎತ್ತಿ ನಿಲ್ಲಿಸಲು ಜೊತೆಯಾಗಿ ನಿಲ್ಲೋದು ರಾಚೂಟಪ್ಪನ ಪಾತ್ರ.. ಬಾಲಣ್ಣ ಅವರು ಆ ಪಾತ್ರವನ್ನು ಎಷ್ಟು ಅಚ್ಚುಕಟ್ಟಾಗಿ ಜೀವ ತುಂಬಿ ನಟಿಸಿದ್ದಾರೆ ಎಂದರೆ.. ಅವರಿಗೆ ಶ್ರೇಷ್ಠ ಪೋಷಕ ನಟ ರಾಜ್ಯ ಪ್ರಶಸ್ತಿ ಸಿಕ್ಕಿತು. 

ಕಷ್ಟದಲ್ಲಿದ್ದವರಿಗೆ ಸಹಾಯ ಮಾಡುತ್ತಾ..   ಅವರ ತಪ್ಪುಗಳನ್ನು ಸರಿ ಮಾಡುತ್ತಾ ಸಾಗುವ ಈ ಪಾತ್ರ ಹಲುಬುವುದು ಕಡೆಯ ದೃಶ್ಯದಲ್ಲಿ.. ರಾಜೀವ ತನ್ನ ಅಕ್ಕನ ಮಗನಿಂದ ಅವಮಾನಿತನಾಗಿ.. ಮನೆಯನ್ನೇಕೆ.. ಊರನ್ನೇ ಬಿಟ್ಟು ಹೋದರೆಂದು  ತಿಳಿದ ರಾಚೂಟಪ್ಪ "ನಾ ಊರಾಗಿದ್ದಿದ್ರೆ ಇಷ್ಟೊಂದು ನೆಡೆಯೋಕೆ ಅವಕಾಶನೇ ಕೊಡ್ತಾ ಇರ್ಲಿಲ್ಲ.. .ಎಲ್ಲಾ ಶಿವನಿಚ್ಛೆ ..  ರಾಜೀವಪ್ಪ ಅವತ್ತು ಏನು ಹೇಳಿದ್ರಿ.. ಸಾಹುಕಾರ್ರೆ ನಾನು ಏನು ಬೇಕಾದರೂ ಕಳ್ಕೋತೀನಿ .. ನಿಮ್ಮನ್ನು ಮಾತ್ರ ಕಳ್ಕೊಳೋಕೆ ತಯಾರಿಗಿಲ್ಲ ಅಂದ್ರಿ.. .. ಇವತ್ತು ನೀವು ನನ್ನ ಕಳಕೊಂಡ್ರೋ.. ನಾನು ನಿಮ್ನ ಕಳೆಕೊಂಡನೋ .. ಆ ಶಿವನೇ ಬಲ್ಲ..  ... ರಾಜೀವಪ್ಪ ಎಲ್ಲಾದರೂ ಇರಿ.. ಹೆಂಗಾದರೂ ಇರಿ.. ಈ ಮಕ್ಕಳನ್ನು, ಊರನ್ನು ಹರಸ್ತಾ ಇರಿ..  ನಿಮ್ಮಂಥ ಸತ್ಯವಂತರ ಆಶೀರ್ವಾದ ಎಂದೂ ಹುಸಿಯಾಗೋಲ್ಲ.. ನಿಮ್ಮಂತವರ ಆಶೀರ್ವಾದದ ಬಲದಲ್ಲಿ ಸುಖಿಯಾಗಿ ಬಾಳ್ತಾರೆ .. ಊರು ಸುಭಿಕ್ಷವಾಗಿರುತ್ತೆ..  "

ಅದ್ಭುತ ಮಾತುಗಳು.. ಇಲ್ಲಿ ಈ ಸಂಭಾಷಣೆಯನ್ನು ಒಬ್ಬ ನಟ ಹೇಳಿದ್ದಾರೆ ಅನಿಸೋದಿಲ್ಲ.. ಮನೆಯ ಯಜಮಾನ.. ಮನೆಯ ಹಿತವನ್ನು ನೋಡಿಕೊಳ್ಳುವ ಒಬ್ಬ ಹಿರಿಯ ಹೇಳುತ್ತಿದ್ದಾರೆ ಎನಿಸುವಷ್ಟು ಪರಿಣಾಮಕಾರಿಯಾಗಿದೆ.. ಪಾತ್ರದೊಳಗೆ ಬಾಲಣ್ಣ ಹೋಗಿಲ್ಲ.. ಈ ಚಿತ್ರದಲ್ಲಿ ರಾಚೂಟಪ್ಪನೆ ಆಗಿದ್ದಾರೆ.. 

ಅದಕ್ಕೆ ಅಲ್ವೇ "ಹನಿ ಹನಿ ಗೂಡಿದರೆ ಹಳ್ಳ" ಹಾಡಿನಲ್ಲಿ "ರಾಶಿ ರೊಕ್ಕ ಇರೋರೆಲ್ಲ ರಾಚೂಟಪ್ಪನಂಗೆ ಇರಬೇಕು" ಎಂದು ಹೇಳಿರುವುದು.. 

ಇಡೀ ಚಿತ್ರದಲ್ಲಿ ಬಾಲಣ್ಣ ಇರುವ ಪ್ರತಿದೃಶ್ಯವೂ ಒಂದು ಪಾಠ ಕಲಿಸುತ್ತದೆ.. 

ಆರಂಭದ ದೃಶ್ಯದಲ್ಲಿ.. ಸಾಲ ಪಡೆದುಕೊಂಡ ರೈತ.. ಅದನ್ನು ಹುಡಿ ಮಾಡಿ .. ದುಂಡು ವೆಚ್ಚ ಮಾಡಿ.. ಜಮೀನು ಹರಾಜಿಗೆ ಬಂದಿರುತ್ತೆ.. ಮತ್ತೆ ಸಾಲಕ್ಕೆ ಬಂದಾಗ ಚೆನ್ನಾಗಿ ಬೈದು ಬುದ್ದಿ ಹೇಳುತ್ತಾ "ರೈತರು ಹೋಟೆಲಿನಲ್ಲಿ ತಿನ್ನೊದು, ಜೂಜಾಡೋದು ಕಲಿತಿರಿ ನಾಶವಾಗೋದ್ರಿ"  ಎಷ್ಟು ಸುಂದರ ಮಾತು..  ಅದೇ ಮಾತನ್ನು ಮುಂದುವರೆಸುತ್ತಾ "ತಿನ್ನೊದು ತಂಗಲು.. ಮುಕ್ಕಳಿಸೋಕೆ ಪನ್ನೀರು" ಈ ಮಾತುಗಳನ್ನು ಅವರ ಬಾಯಲ್ಲಿಯೇ ಕೇಳಬೇಕು .. ಅದ್ಭುತ 

ಊರಿಗೆಲ್ಲಾ ಉಪಕಾರ ಮಾಡುವ ರಾಚೂಟಪ್ಪನಿಗೆ ತನ್ನ ಮಗ ಓದದೇ ಪೆದ್ದನಾಗಿರೋದು ಕಂಡಾಗ.. ಬೇಸರವಾದರೂ ಆ ದೃಶ್ಯದಲ್ಲಿಯೂ ನೀತಿ ಹೇಳುತ್ತಾ.. ಹಾಸ್ಯ ಉಕ್ಕಿಸುತ್ತಾರೆ "ದುಡ್ಡಿರೋರ ಮಕ್ಕಳಿಗೆ ಬುದ್ದಿ ಇಲ್ಲ.. ಬುದ್ದಿ ಇರೋರ ಮಕ್ಕಳಿಗೆ ದುಡ್ಡಿಲ್ಲ ಅನ್ನೋ ತರ ಆಯಿತು" ಎಂದು ಹೇಳುತ್ತಾ ಸಹಾಯ ಬೇಡಿ ಬಂದ ರಾಜೀವನಿಗೆ ಹಣಕಾಸು ಕೊಡುತ್ತಾರೆ. . 


ಹಳ್ಳಿಯ ಹೊನ್ನನ ಬಳಿ ತಮ್ಮ ಪುಟ್ಟ ಜಮೀನನ್ನು ಆಧಾರ ಮಾಡಿ ಸಾಲ ಮಾಡಿದ್ದ ರಾಜೀವನಿಗೆ ದುಡ್ಡು ಕೊಟ್ಟು ಜಮೀನು ಬಿಡಿಸಿಕೊಳ್ಳಲು ಸಹಾಯ ಮಾಡುತ್ತಾರೆ.. 

ನಂತರ ಆರಂಭ ಮಾಡುವ ದೃಶ್ಯದಲ್ಲಿ ರಾಜೀವ ರಾಚೂಟಪ್ಪನವರಿಗೆ ನಮಸ್ಕಾರ ಮಾಡಿದಾಗ "ನೋಡು ರಾಜೀವಪ್ಪ.. ನಂಬಿಕೆಯಿಂದ ದುಡಿದವರಿಗೆ ಭೂಮಿತಾಯಿ ಎಂದೂ ಕೈ ಬಿಡಾಕಿಲ್ಲ" ಎಂದು ಹೇಳುತ್ತಾರೆ.. 

ರಾಜೀವ ಎತ್ತುಗಳ ಮೈಸವರಿ ಹೊಲ ಊಳೋಕೆ ಶುರುಮಾಡುವಾಗ ಅದನ್ನು ನೋಡುತ್ತಾ "ಆರಂಭಗಾರ ಯಾವಾಗಲೂ ಇಂಥ ಮಮತೆ ತುಂಬ್ಕೊಂಡಿರಬೇಕು" ಎನ್ನುತ್ತಾರೆ..  

ಹೀಗೆ ಪ್ರತಿಯೊಂದು ಹಂತದಲ್ಲೂ ರಾಜೀವನಿಗೆ ಬೆನ್ನೆಲುಬಾಗಿ ನಿಲ್ಲುವ ರಾಚೂಟಪ್ಪ.. ರಾಜೀವನಿಗೆ ಮಾರ್ಗದರ್ಶಕ. ಗುರುಗಳ ಸ್ಥಾನದಲ್ಲಿ ನಿಲ್ಲುತ್ತಾರೆ.. ಕಷ್ಟ ಎನಿಸಿದಾಗ ರಾಜೀವ ಓಡಿ ಬರೋದು ರಾಚೂಟಪ್ಪನವರ ಬಳಿಗೆ ಎನ್ನುವಷ್ಟು ಪರಿಣಾಮಕಾರಿಯಾಗಿದೆ ಚಿತ್ರಕಥೆ.. 

ಹೀಗೆ ಸಾಗುವ ಕಥೆಯಲ್ಲಿ... ರಾಜೀವ ತನ್ನ ಸಂಸಾರವನ್ನು ಎತ್ತಿಕಟ್ಟಿ ನಿಲ್ಲಿಸುವ ಶ್ರಮದಲ್ಲಿ ಕೊಂಚ ಯಶಸ್ಸು ಕಾಣುವಾಗ.. ಇನ್ನೊಂದು ಸಾಹಸಕ್ಕೆ ಕೈ ಹಾಕುತ್ತಾರೆ.. ನೇರಳೆ ಗುಡ್ಡದ ಕಲ್ಲು ಜಮೀನನ್ನು ಕೊಂಡು ಕೊಳ್ಳುವ ಆಶಯ ವ್ಯಕ್ತಪಡಿಸಿದಾಗ ಹೇಳುವ ಮಾತು "ಅಲ್ರಿ ಆ ಜಮೀನಲ್ಲಿ ಸ್ವಲ್ಪ ಸತ್ವ ಇದೆ ಅಂತ ಅನ್ನಿಸಿದ್ದರೆ ನಾವು  ಬಿಡ್ತಾ ಇದ್ವಾ.. " ಎನ್ನುತ್ತಾರೇ.. ಆಗ ಸಹಾಯ ಸಿಗುವ ಬಗ್ಗೆ ಕೊಂಚ  ಅನುಮಾನ ವ್ಯಕ್ತಪಡಿಸುವ ರಾಜೀವಪ್ಪ ಬೇರೆ ಕಡೆ ಹಣ ಹೊಂದಿಸೋಕೆ  ಪ್ರಯತ್ನ ಪಡಲೇ ಎಂದಾಗ "ಅಲ್ರಿ ನಾ ಕೊಡೋಲ್ಲ ಅಂದ್ನಾ.. ಒಸಿ ಯೋಚನೆ ಮಾಡಿ ಅಂದೇ" ಎನ್ನುತ್ತಾ ಎಚ್ಚರಿಕೆಯ ಕರೆಘಂಟೆ ಕೊಡುತ್ತಾರೆ.. 

ನಂತರ ಆ ಜಮೀನಿನನ್ನು ತೋರಿಸಿದಾಗ "ರಾಜೀವಪ್ಪ ಇದೇನು ಬೆಲೆ ಬೆಳೆಯೋಕೆ ಜಮೀನು ಕೊಂಡ್ರಾ .. ಇಲ್ಲ ರೈಲ್ ರಸ್ತೆಗೆ ಜಲ್ಲಿ ಮಾಡೋಕೆ ತಗೊಂಡ್ರ.. ಆಗದು ಆಗದು" ಎಂದಾಗ  ಕಿರಿಯರಾಗಿದ್ದ ರಾಜೀವ "ಆಗದು ಎಂದು ಕೈಕಟ್ಟಿ ಕುಳಿತರೆ" ಹಾಡು ಹೇಳುತ್ತಾ ನೀತಿ ಪಾಠ ಹೇಳಿದಾಗ ದೊಡ್ಡವರಾಗಿದ್ದರೂ ಅದನ್ನು ಸಾವಧಾನವಾಗಿ ಕೇಳಿ.. ಆ ಜಮೀನಿನಲ್ಲಿ ಬಂಗಾರದ ಬೆಲೆ ಬೆಳೆದು.. ಮಾಡಿದ ಸಾಲ ತೀರಿಸಿ.. ಮನೆಯನ್ನು ಕಟ್ಟಿ.. ಕಾರನ್ನು ಕೊಂಡಾಗ ರಾಜೀವನನ್ನು ಬೆನ್ನು ತಟ್ಟಿ ಪ್ರಶಂಸೆ ಮಾಡುವ ಗುಣ ಹೊಂದಿರುತ್ತಾರೆ 

ರಾಜೀವನ ಜೀವನದ ಪ್ರತಿಹಂತದಲ್ಲಿಯೂ.. ಅವರ ಮದುವೆಯ ವಿಚಾರದಲ್ಲಿಯೂ ಮುಂದುವರೆದು ಕಣ್ಣಲ್ಲಿ ಕಾಯುವ ರಾಚೂಟಪ್ಪ, ರಾಜೀವನ ಹೆಂಡತಿ ಲಕ್ಷ್ಮಿಅನೀರೀಕ್ಷಿತ ಆಘಾತದಲ್ಲಿ ಸಾವನ್ನಪ್ಪಿದಾಗ "ಸತಾಯಿಸಿ ಸತಾಯಿಸಿ ಮದುವೆ ಆದ್ರಿ ಆದರೆ .. ಎಲ್ಲಾ ಶಿವನ ಸಂಕಲ್ಪ.." ಎನ್ನುತ್ತಾ ಭರವಸೆ ತುಂಬುತ್ತಾರೆ.. 

ಇಡೀ ಚಿತ್ರದಲ್ಲಿ ಆವರಿಸಿರುವ ರಾಚೂಟಪ್ಪನವರ ಒಳ್ಳೆಯತನ, ಅವರ ಸಂಭಾಷಣೆಯ ಶೈಲಿ, ನಗು ಉಕ್ಕುವಂಥಹ ಮಾತುಗಳು, ಮಗನನ್ನು ದಾರಿಗೆ ತರಲು ರಾಜೀವನನ್ನು ಉಪಯೋಗಿಸಿಕೊಳ್ಳುವ ದಾರಿ, ಎಲ್ಲವೂ ಹೊಂದಾಣಿಕೆಯಾಗಿ ರಾಚೂಟಪ್ಪ ಎನ್ನುವ ಒಂದು ಜೀವಿ ಈ ಪ್ರಪಂಚದಲ್ಲಿ ಇದೆ ಎನ್ನುವಷ್ಟು ಸಹಜವಾಗಿ ಅಭಿನಯಿಸಿದ್ದಾರೆ... 
ಬಂಗಾರದ ಮನುಷ್ಯ ಚಿತ್ರದಲ್ಲಿ ರಾಜೀವನ ತ್ಯಾಗ, ಪರಿಶ್ರಮ, ಬುದ್ದಿವಂತಿಕೆ ಎಲ್ಲವೂ ಎಷ್ಟು ಮುಖ್ಯವಾಗಿ ನಿಲ್ಲುತ್ತದೆಯೋ, ಆ ಪಾತ್ರಕ್ಕೆ ಸರಿಸಮನಾಗಿ ಸಾಗುವ ರಾಚೂಟಪ್ಪನ ಪಾತ್ರ.. ಸಹಾಯ ಮನೋಭಾವ, ಇತರರ ಕಷ್ಟದಲ್ಲಿ ತನ್ನನ್ನು ತೊಡಗಿಸಿಕೊಂಡು ಮಾರ್ಗದರ್ಶನ ನೀಡುವ ರೀತಿ, ಊರು ನನ್ನದು, ಎಲ್ಲರೂ ನನ್ನವರು ಎನ್ನುತ್ತಾ ಎಲ್ಲರೊಡನೆ ಬಾಳುವ ಈ ಪಾತ್ರ ನಿಜಕ್ಕೂ ಅದ್ಭುತವಾಗಿ ಮೂಡಿಬಂದಿದೆ.. 

ಅದಕ್ಕೆ ಬಾಲಣ್ಣ ಅವರು ಆ ಪಾತ್ರವೇ ಆಗಿ ಹೋಗಿದ್ದಾರೆ.. ಶ್ರೀ ಟಿ ಕೆ ರಾಮರಾವ್ ಅವರ ಕಾದಂಬರಿಯನ್ನು ಓದಿಲ್ಲ.. ಆದರೆ ಅವರ ಕಣ್ಣಿನಲ್ಲಿ ಮೂಡಿಬಂದ ಪಾತ್ರವನ್ನು ಸ್ವಲ್ಪವೂ ಹೆಚ್ಚುಕಮ್ಮಿಯಾಗದಂತೆ ನೋಡಿಕೊಂಡಿದ್ದಾರೆ ಬಾಲಣ್ಣ ಅವರು ಅನ್ನೊದು ನನ್ನ ಅಭಿಪ್ರಾಯ.. 

ರಾಜ್ಯ ಸರಕಾರ ಕೊಡುವ ಪೋಷಕ ನಟ ಪ್ರಶಸ್ತಿ ಈ ಪಾತ್ರಕ್ಕೆ ಕೊಟ್ಟಿದ್ದು ಆ ಪ್ರಶಸ್ತಿಗೆ ಒಂದು ಗೌರವ ಎನ್ನುವ ಮಾತು ನನ್ನದು.. 

ಬಾಲಣ್ಣ ರಾಚೂಟಪ್ಪ ಒಂದೇ ನಾಣ್ಯದ ಎರಡು ಮುಖವಾಗಿ ಬಿಟ್ಟಿದೆ.. !

ಇಂದು ಬಾಲಕೃಷ್ಣ ಅವರ ಜನುಮದಿನ.. ಹುಟ್ಟಿದ್ದು ಆದ ಮೇಲೆ ಭುವಿಯಲ್ಲಿ ಗುರುತಾಗುವಂತೆ ಬದುಕಿದ ಬಾಲಣ್ಣ ಅವರ ಸುಂದರ ಬದುಕಿಗೆ ಒಂದು ನಮನ ಈ ಲೇಖನದ ಮೂಲಕ ಸಲ್ಲಿಸುತ್ತೇನೆ.. !!!

Sunday, October 28, 2018

ಕಾದಂಬರಿ ಮತ್ತು ಸಿನಿಮಾ ಒಂದು ಜುಗಲ್ ಬಂಧಿ - ನಾಗರಹಾವು (1972)

ಇದು ನಾಗರಹಾವಲ್ಲ.. ಕೇರೇ ಹಾವು.!!!

ಈ ಮಾತನ್ನು ಶ್ರೀ ತ ರಾ ಸುಬ್ಬರಾಯರು ಹೇಳಿದ್ದಾರೆ ಅಂತ ನನ್ನ ಬಾಲ್ಯದ ದಿನಗಳಲ್ಲಿ ಓದಿದ್ದ ನನೆಪು.. ನಂತರ ಅವಕಾಶ ಸಿಕ್ಕಾಗ ಟಿವಿಯಲ್ಲಿ ಬಂದಾಗ ನಾಗರಹಾವು ಚಿತ್ರ ನೋಡಿದ್ದೆ.. ಯಾಕೆ ತ ರಾ ಸುಬ್ಬರಾಯರು ಹಾಗೆ ಹೇಳಿದ್ರು ಅನ್ನುವ ಪ್ರಶ್ನೆ ಕಾಡುತ್ತಿತ್ತು..

ಅದರಲ್ಲೂ ನಾಗರಹಾವು ಚಿತ್ರವನ್ನು ಹಲವಾರು ಬಾರಿ ನೋಡಿದಾಗಲೂ ಲೇಖಕರ ಪ್ರತಿಕ್ರಿಯೆ ಮನಸ್ಸಿಗೆ ನಾಟಲಿಲ್ಲ..
ಶ್ರೀ ಪುಟ್ಟಣ್ಣ ಕಣಗಾಲ್ ಒಬ್ಬ ಅದ್ಭುತ ನಿರ್ದೇಶಕ, ಕನ್ನಡದಲ್ಲಿ ಅವರು ನಿರ್ದೇಶಿಸಿದ ೨೪ ಚಿತ್ರಗಳನ್ನು ನೋಡಿದ್ದೇನೆ ಮತ್ತು ಆ ಸಿನೆಮಾಗಳು ನನ್ನ ಮನಸ್ಸಿಗೆ ಯಾಕೆ ಇಷ್ಟವಾಯಿತು, ಆ ಚಿತ್ರದ ವಿಶೇಷವೇನು ಅನ್ನುವ ಕೆಲವು ವಿಷಯಗಳನ್ನು ಬರೆದಿದ್ದೆ.. ನಾಗರಹಾವು  ಚಿತ್ರ ನಿರ್ದೇಶನ ಮಾಡಿದ ಮೇಲೆ ಅವರ ಮುಂದಿನ ಎಲ್ಲಾ ಚಿತ್ರಗಳು ವಿಶೇಷವಾಗಿದ್ದವು.. ಹಾಗಾಗಿ ನಾಗರಹಾವು ಒಂದು ರೀತಿಯಲ್ಲಿ ಅವರ ಚಿತ್ರಗಳಿಗೆ ಒಂದು ತಿರುವು ಕೊಟ್ಟ ಚಿತ್ರವಾಗಿತ್ತು...

ಇದರಿಂದ ನನ್ನ ಕುತೂಹಲದ ದೀಪ ಇನ್ನಷ್ಟು ಜೋರಾಗಿ ಉರಿಯಲು ಶುರುಮಾಡಿತು.. ಸೊ ನನ್ನ ಹುಡುಕಾಟ ತ್ರಿವಳಿ ಕಾದಂಬರಿಗಳಾದ ನಾಗರಹಾವು, ಒಂದು ಗಂಡು ಎರಡು ಹೆಣ್ಣು, ಸರ್ಪಮತ್ಸರ ಪುಸ್ತಕಗಳ ಕಡೆಗೆ ಇಳಿಯಿತು..   ಹುಡುಕಲು ಶುರುಮಾಡಿದೆ.. ಫೇಸ್ಬುಕ್ ಸಹೋದರಿಯಾದ ಡಿಟಿಪಿ ಅಲಿಯಾಸ್ ಲಕ್ಷ್ಮಿಪ್ರಿಯ ನನಗೆ ಸಹಾಯ ಮಾಡಿ.. ಆ ಪುಸ್ತಕವನ್ನು ಕಳಿಸಿಕೊಟ್ಟರು..ಮೂರು ಕಾದಂಬರಿಗಳ ಒಂದು ಸಮಗ್ರ ರೂಪವನ್ನು ಪುಸ್ತಕ ಮಾಡಿ ಪ್ರಕಟಿಸಿದ್ದರು.. ಹುಚ್ಚು ಹಿಡಿದ ಹಾಗೆ ಓದಿ ಮುಗಿಸಿದೆ. ೫೪೩ ಪುಟಗಳಿರುವ ಕಾದಂಬರಿಯನ್ನು ಒಂದು ವಾರದಲ್ಲಿ ಓದಿ ಮುಗಿಸಿದೆ.. ಆ ಓದು ಮುಗಿದ ಮೇಲೆ ನನಗೆ ಅನಿಸಿದ ಕೆಲವು ವಿಷಯವನ್ನು ನನಗೆ ತೋಚಿದ ರೀತಿಯಲ್ಲಿ ಬರೆದಿದ್ದೇನೆ..

ಓದಿ.. ನಿಮಗೆ ಅನಿಸಿದ ಮಾತನ್ನು ಹೇಳಿ..

*****************************

ಸ್ವರ್ಗದಲ್ಲಿದ್ದ ಅಶ್ವಥ್ ಕಟ್ಟೆಯಲ್ಲಿ ಸಂಧ್ಯಾವಂದನೆ ಮುಗಿಸಿ ಪುಟ್ಟಣ್ಣ ಅವರು ಧ್ಯಾನ ಮಾಡುತ್ತಾ ಕೂತಿದ್ದರು.. ಸುಬ್ಬರಾಯರು ಬೆಳಗಿನ ವಾಕಿಂಗ್ ಮುಗಿಸಿ ಸುಧಾರಿಸಿಕೊಳ್ಳಲು ಅದೇ ಅಶ್ವಥ್ ಕಟ್ಟೆಯಲ್ಲಿ ಕುಳಿತರು. ಆ ಬದಿಯಲ್ಲಿ ಪುಟ್ಟನವರು.. ಈ ಬದಿಯಲ್ಲಿ ಸುಬ್ಬರಾಯರು.. 

ಇಬ್ಬರೂ ಒಬ್ಬರ ಮುಖವನ್ನು ಇನ್ನೊಬ್ಬರು ನೋಡಿ ಮಂದಹಾಸ ಬೀರಿದರು.. ಪುಟ್ಟಣ್ಣನವರ ಧ್ಯಾನ ಮುಗಿದಿತ್ತು.. ಸುಬ್ಬರಾಯರಿಗೂ ಆಯಾಸ ಪರಿಹಾರವಾಗಿತ್ತು.. ಹಾಗೆ ಇಬ್ಬರೂ ಎದ್ದು ತಮ್ಮ ಮನೆಯ ಕಡೆ ಹೆಜ್ಜೆ ಹಾಕುತ್ತಾ ಹೋದರು.. ಇಬ್ಬರ ಮನೆಯೂ ಒಂದೇ ಬೀದಿಯಲ್ಲಿತ್ತು.. ಹಾಗಾಗಿ ಇಬ್ಬರೂ ಜೊತೆಯಾಗಿ ಹೆಜ್ಜೆ ಹಾಕುತ್ತಿದ್ದರು. 


"ಪುಟ್ಟಣ್ಣನವರೇ .. ನೀವು ಚಿತ್ರಿಸಿದ ನಾಗರಹಾವು ಚಿತ್ರವನ್ನು ನಾನು ಕೇರೇ ಹಾವು ಎಂದರೂ ನೀವು ಕೋಪಗೊಳ್ಳಲಿಲ್ಲ.. ನನ್ನ ವಿರುದ್ಧ ಹೇಳಿಕೆ ಕೊಡಲಿಲ್ಲ.. ನನ್ನನ್ನು ಗೌರವಿಸಿದಿರಿ.. ನಾ ಏನು ಹೇಳಬೇಕು ಗೊತ್ತಾಗ್ತಾ ಇಲ್ಲ. .. ಹೇಗಿದ್ದರೂ ಕರುನಾಡಿನ ಚಿತ್ರರಸಿಕರು ನನ್ನ ಕಾದಂಬರಿಯನ್ನು.. ಹಾಗೂ ನಿಮ್ಮ ಕಣ್ಣಿನಲ್ಲಿ ರೂಪುಗೊಂಡ ಚಿತ್ರವನ್ನು ನೋಡಿ ಮೆಚ್ಚಿದ್ದಾರೆ.. ನೂತನ ತಂತ್ರಜ್ಞಾನದಲ್ಲಿ ತಂದ ಅದರ ಹೊಸ ರೂಪವನ್ನು ಮೆಚ್ಚಿದ್ದಾರೆ.. ಇದರ ಬಗ್ಗೆ ಒಂದು ಚರ್ಚೆ ಮಾಡೋಣವೇ.. ನನ್ನ ಅನಿಸಿಕೆ ನಾ ಹೇಳುವೆ.. ನಿಮ್ಮ ಅನಿಸಿಕೆ ನೀವು ಹೇಳಿ

"ಸುಬ್ಬರಾಯರೇ ಧನ್ಯವಾದಗಳು ನಿಮ್ಮ ಮಾತಿಗೆ.. ಖಂಡಿತ ಮಾತಾಡೋಣ.. ಚರ್ಚಿಸೋಣ.. ಆಗಬಹುದು.. ನಿಮ್ಮಿಂದಲೇ ಶುರುಮಾಡಿ.. ಯಾಕೆಂದರೆ ಅದು ನಿಮ್ಮ ಸೃಷ್ಟಿ, ನೀವು ಜನುಮ ಕೊಟ್ಟ ಕೂಸು ಈ ಕಾದಂಬರಿ.. ನಿಮ್ಮ ಮನದಲ್ಲಿ ರೂಪುಗೊಂಡ ಆ ಕಾದಂಬರಿಗೂ.. ಅದನ್ನು ನನ್ನ ಕಣ್ಣಿನಲ್ಲಿ ತೆರೆಗೆ ತಂದ ರೂಪಕ್ಕೂ ನಿಮ್ಮ ಅನಿಸಿಕೆ ಹೇಳಿ.. ಶುರುವಾಗಲಿ..

******* 

ಇನ್ನು ಮುಂದೆ ನೆಡೆಯುವುದು.. ಸಾಹಿತ್ಯದ ದಿಗ್ಗಜರು ಸುಬ್ಬರಾಯರು.. ಮತ್ತು ನಿರ್ದೇಶನದ ಕುರ್ಚಿಗೆ ತಾರಾಪಟ್ಟ ತಂದುಕೊಟ್ಟ ಪುಟ್ಟಣ್ಣನವರ ಮಾತುಕತೆ....!

*******

ನಾನು ರಾಮಾಚಾರಿ ಪಾತ್ರವನ್ನು ಸಮಾಜದಲ್ಲಿ ನೆಡೆಯುವ ಅಸೂಯೆ, ಹೊಟ್ಟೆಕಿಚ್ಚು, ಸಿಟ್ಟು, ಸೇಡು, ದ್ವೇಷ, ವೈಮನಸ್ಯ, ಅನುಮಾನಗಳು, ತಪ್ಪು ಕಲ್ಪನೆಗಳು, ಪ್ರೀತಿ, ಪ್ರೇಮ, ಸಹಾಯ ಮಾಡುವ ಮನೋಭಾವ, ಕಾಲು ಎಳೆದು ನಗುವ ಮನಸ್ಥಿತಿ, ಹೀಗೆ ಅರಿಷಡ್ವರ್ಗ ಜೊತೆಗೆ ಮಾನವನ ಸಹಜವಾದ ಗುಣಗಳು ಎಲ್ಲವನ್ನು ಕಲಸಿ, ಬೆರೆಸಿ ಮಾಡಿದ್ದೆ.. ಅವನ ಶಾಲಾದಿನಗಳಲ್ಲಿ ಸಾಮಾನ್ಯ ಅನ್ನಿಸುವ ಘಟನೆಯನ್ನು ತುಸು ವಸ್ತುಸಹಜವಾಗಿ ಮೂಡಿಸಿದ್ದೆ..

>ರಾಮಚಾರಿಯ ಹಠದ ಸ್ವಭಾವದ ಬಗ್ಗೆ ವಿವರಿಸುವ ಒಂದಷ್ಟು ಘಟನೆಗಳನ್ನು, ಸೇಡಿನ, ಕಿಚ್ಚಿನ ಸಾಹಸಗಳನ್ನು ಮನ  ಮುಟ್ಟುವಂತೆ ರಚಿಸಿದ್ದೆ.
>ಗುರುಗಳು ಎಂದು ಗೌರವ ಕೊಡುವ ಚಾಮಯ್ಯ ಮೇಷ್ಟ್ರು
>ಪ್ರೀತಿಸುವ ಅಲಮೇಲು, ಮಾರ್ಗರೆಟ್
>ಮೊದಲು ದ್ವೇಷ ಮಾಡಿದರೂ ನಂತರ ಮಗಳಿಗಾಗಿ ಇಷ್ಟಪಡುವ ಮೇರಿಯಮ್ಮ
>ಮಗನನ್ನು ಕಸದಂತೆ ಕಂಡರೂ, ಅವನ ಸಾಹಸವನ್ನು, ಊರಿನ ಜನತೆಗೆ ಸಹಾಯ ಮಾಡಲು ತೋರುವ ಧೈರ್ಯದ ಬಗ್ಗೆ ಊರಿನವರೆಲ್ಲ ಹೊಗಳಿದಾಗ ಮಗನನ್ನು ಆಪ್ತಮಿತ್ರನಂತೆ ಮಾತಾಡಿಸಿ, ತಮ್ಮ ಕಡೆಘಳಿಗೆಯಲ್ಲಿ ಮನೆಗೆ ನೀನೆ ಯಜಮಾನ ಎಂದು ಬಿಂಬಿಸುವ ಅಪ್ಪನ ಪಾತ್ರ ಮಧ್ವರಾಮಚಾರ್ಯರು 
>ಮಗ ತನ್ನ ಜೀವನವನ್ನು  ಬೆಳಗುತ್ತಾನೆ ಎಂದು ಮೊದಲಿಂದಲೂ ತನ್ನ ಪತಿಯೊಡನೆ ವಾದಮಾಡುತ್ತಾ ಕಡೆಯಲ್ಲಿ ಮಾರ್ಗರೆಟ್ ಜೊತೆಯಲ್ಲಿ ತನ್ನ ಮಗನ ಜೊತೆಯಲ್ಲಿದ್ದಾಳೆ ಎಂದು ತಿಳಿದಾಗ, ಪ್ರೀತಿ ಉರಿಯಾಗಿ ರಾಮಾಚಾರಿಯನ್ನು ದಹಿಸುತ್ತಾರೆ ಸೋನಾಬಾಯಿ!
>ಹುಡುಗಾಟದ ಹುಡುಗ ವರದಯ್ಯಂಗಾರಿ ಈ ಕತೆಗೆ ತಿರುವು ಕೊಡುವ ಪಾತ್ರ,  ಜಲೀಲನ ಜೊತೆಯಲ್ಲಿ ನೆಡೆಯುವ ಪುಟ್ಟ ಜಗಳ ಕತೆಗೆ ದೊಡ್ದ ತಿರುವನ್ನೇ ಕೊಡುತ್ತೆ
>ಪೈಲ್ವಾನ್ ಸಣ್ಣಬಸಪ್ಪ  ರಾಮಚಾರಿಯನ್ನು ತಿದ್ದಿ ತೀಡಿ ಅವನ ಜೀವನಕ್ಕೆ ಒಂದು ದಾರಿ ಮಾಡಿಕೊಡುತ್ತಾರೆ.. ದೇಹವನ್ನು ಹುರಿಗೊಳಿಸಲು ಸಹಾಯ ಮಾಡುತ್ತಾರೆ..
>ಪ್ರಭಣ್ಣ, ಸಣ್ಣರಂಗಪ್ಪ, ಹೈದರ್ ಷರೀಫ್, ಚೆಲುವಚಾರಿ ಈ ನಾಲ್ಕು ಮಂದಿ ಇಡೀ ಕಥೆಯಲ್ಲಿ ರಾಮಚಾರಿಗೆ ಬೆನ್ನೆಲುಬಾಗಿ ನಿಲ್ಲುವುದು ತೋರಿಸಿದ್ದೇನೆ
>ಪ್ಲೇಗ್ ಸಮರ, ಸಿನಿಮಾ ಟೆಂಟ್, ದಲ್ಲಾಳಿ ವಹಿವಾಟು
>ಚಾಮಯ್ಯನವರ ಸಮಾಜ ಸೇವೆ, ಅವರ ಕೆಲಸ ಉಳಿಸಿಕೊಳ್ಳಲು ತೋರುವ ಚಾಲಾಕಿತನ
>ವರದರಾಜುವಿನ ದುಂಡಾವರ್ತಿ, ಜೊತೆಗೆ  ಮಾರ್ಗರೆಟ್ ರಾಮಾಚಾರಿಯ ಅಪ್ಪನ ಕೆಲಸ ಮಾಡಲು ಹಣಕ್ಕೆ ಒದ್ದಾಡುತ್ತಿದ್ದ ವಿಷಯ ಕೇಳಿ, ವರದರಾಜುವನ್ನು ಸಹಾಯ ಕೇಳಿದಾಗ ಹಿಂದೆ ಮುಂದೆ ನೋಡದೆ ಸಹಾಯ ಮಾಡುವುದು
>ಫಕೀರಪ್ಪ ಹೆಣ್ಣಿನ ಚಪಲದಿಂದಾಗಿ ಅಲಮೇಲುವಿನ ನಿಜಸ್ಥಿತಿ ತಿಳಿಸಿ ಕಾದಂಬರಿಗೆ ಮುಕ್ತಾಯದ ಹಾದಿ ತೋರಿಸೋದು..
>ಶಾಲೆಯ ಮಾಸ್ಟರನ್ನು ರಾಮಾಚಾರಿ ಗೋಳುಹುಯ್ಕೊಳೋದು
>ಅಲಮೇಲು, ಮಾರ್ಗರೆಟ್ ಮತ್ತು ರಾಮಾಚಾರಿಯ ಪ್ರೀತಿಯನ್ನು ತೋರಿಸುವ ಆ ಪುಟಗಳು
>ಚಾಮಯ್ಯ ಮೇಷ್ಟ್ರ ಅಂತ್ಯ
>ರಾಮಾಚಾರಿ ಮಾರ್ಗರೆಟ್ ಅಂತ್ಯ
>ಕಡೆಯಲ್ಲಿ ಫಕೀರಪ್ಪ ಹೇಳುವ ಮಾತು

ಪುಟ್ಟಣ್ಣನವರೇ ನಾ ಕಾದಂಬರಿಯಲ್ಲಿ ಚಿತ್ರಿಸಲು ಪ್ರಯತ್ನ ಪಟ್ಟ ಈ ಮೇಲಿನ ವಿವರಣೆಗಳು, ನನಗೆ ಚಿತ್ರದಲ್ಲಿ ಅಲ್ಲಲ್ಲಿ ಕಂಡವೇ ಹೊರತು, ಪೂರ್ಣ ಪ್ರಮಾಣದಲ್ಲಿ ಕಾಣಲಿಲ್ಲ.. ನಾ ನಿಮ್ಮ ಹಿಂದಿನ ಚಿತ್ರದ ಬಗ್ಗೆ ಕೇಳಿದ್ದೆ.. ನೋಡಿದ್ದೇ.. ನಿಮ್ಮ ತಂತ್ರಜ್ಞಾನದ ಪ್ರತಿಭೆ ಎಲ್ಲದರ ಬಗ್ಗೆ ತಿಳಿದಿದ್ದೆ. ನನ್ನ ಕಾದಂಬರಿಯನ್ನು ಸಿನಿಮಾ ಮಾಡಲು ಹಕ್ಕುಗಳನ್ನು ಕೇಳಿದಾಗ, ನೀವೇ ಚಿತ್ರ ನಿರ್ದೇಶಿಸುವುದು ಎಂದು ತಿಳಿದಾಗ ಕುತೂಹಲ, ಆಸಕ್ತಿ ಗರಿಗೆದರಿತ್ತು.. ಚಿತ್ರವನ್ನು ನೋಡಿದಾಗ ನೀವು ತೋರಿದ ಚಿತ್ರದುರ್ಗದ ತಾಣಗಳು, ಕೋಟೆಗಳು, ಬೆಟ್ಟ ಗುಡ್ಡಗಳು, ವಾಣಿವಿಲಾಸ ಸಾಗರ ಎಲ್ಲವೂ ಖುಷಿ ಕೊಟ್ಟಿತು.. ಚಿತ್ರದುರ್ಗವನ್ನು ಅದ್ಭುತವಾಗಿ ತೋರಿಸಿದ ನಿಮಗೆ ಅಭಿನಂದನೆಗಳು.. ಆದರೆ ಕತೆಯಲ್ಲಿ ನಾ ಕಂಡ ದೃಶ್ಯಗಳು.. ಸಿನಿಮಾದಲ್ಲಿ ನಾ ಕಂಡ ಕತೆಗೂ ಹೊಂದಿಸಿಕೊಳ್ಳೋಕೆ ಕಷ್ಟವಾಯಿತು.. ಪ್ರತಿ ಕ್ಷಣದಲ್ಲಿಯೂ ನಾ ಕಾದಂಬರಿಯಲ್ಲಿ ಚಿತ್ರಿಸಿದ್ದ ದೃಶ್ಯಗಳು ಸಿನಿಮಾದಲ್ಲಿ ಆಗ ಬರುತ್ತೆ ಈಗ ಬರುತ್ತೆ ಅಂತ ಕಾದಿದ್ದೆ ಆಯಿತು... ಆದರೆ ನಿಮ್ಮ ಬುದ್ಧಿಮತ್ತೆಗೆ ಮತ್ತು ಸಂಭಾಷಣೆ ಬರೆದವರಿಗೆ ಸಲಾಂ ಹೇಳಬೇಕು. ಕಾರಣ ಎಲ್ಲಾ ಪಂಚ್ ಸಂಭಾಷಣೆಯನ್ನು ಹಾಗೆ ಉಳಿಸಿಕೊಂಡಿದ್ದೀರಾ.. ಅದಕ್ಕೆ ಧನ್ಯವಾದಗಳು ಪುಟ್ಟಣ್ಣನವರೇ.. ಹಾಡುಗಳನ್ನು ಚಿತ್ರಿಸಿದ ರೀತಿ, ನನ್ನ ಕಾದಂಬರಿಯಲ್ಲಿಲ್ಲದ ಒನಕೆ ಓಬವ್ವನ ಕತೆಯನ್ನು ಹಾಡಿನಲ್ಲಿ ಅದ್ಭುತವಾಗಿ ಚಿತ್ರಿಸಿದ ರೀತಿ, ಹೆಸರು ತೋರಿಸುವಾಗ ರಾಮಾಚಾರಿಯ ಗುಣ ವಿಶೇಷಣಗಳನ್ನು ಹೇಳುತ್ತಾ, ಚಾಮಯ್ಯ ಮೇಷ್ಟ್ರು ಮತ್ತು ರಾಮಾಚಾರಿಯ ಅನುಬಂಧವನ್ನು ತೋರಿಸಿದ ರೀತಿಗೆ ಖುಷಿಯಾಯಿತು..

"ಪುಟ್ಟಣ್ಣನವರೇ ಮೇಲೆ ಹೇಳಿದ ಮಾತುಗಳು ನನ್ನ ಮನದಾಳದ ಮಾತುಗಳು.. ಇದಕ್ಕೆ ನಿಮ್ಮ ಪ್ರತಿಕ್ರಿಯೆ ಕೇಳಲು ಇಷ್ಟಪಡುತ್ತೇನೆ.. !!!"

"ಸುಬ್ಬರಾಯರೇ ಧನ್ಯವಾದಗಳು. ನಿಮ್ಮ ಮನದಾಳದ ಮಾತುಗಳನ್ನು ಎಷ್ಟು ವಿವರವಾಗಿ ಹೇಳಿದ್ದೀರ.. ನೀವು ಸರಸ್ವತಿ ಪುತ್ರರು.. ನಿಮಗೆ ಅರಿಯದ ವಿಷಯವೇನಿದೆ.. ತಾನು ಹೆತ್ತ ಸುಂದರ ಮಗುವಿನ ಮುಂದಿನ ಹಾದಿ ನಿರೀಕ್ಷೆಗೆ ತಕ್ಕ ಹಾಗೆ ಇಲ್ಲದೆ ಇದ್ದಾಗ ಆಗುವ ಬೇಸರವೇ ನಿಮಗೂ ಆಗಿದ್ದು.. ಅದರಲ್ಲಿ ನಿಮ್ಮ ತಪ್ಪೇನು ಇಲ್ಲ.. ದಯವಿಟ್ಟು ನೊಂದುಕೊಳ್ಳಬೇಡಿ. ನಾಗರಹಾವು ಚಿತ್ರೀಕರಣ ಮುಗಿದು ಸಿನಿಮಾ ಅದ್ಭುತ ಯಶಸ್ಸು ಕಂಡಾಗ.. ನನ್ನನ್ನು ಯಾರೋ ಕೇಳಿದ್ದರು.. ಸುಬ್ಬರಾಯರು ಇದನ್ನು ಕೇರೇ ಹಾವು ಎಂದಿದ್ದಾರೆ ಇದಕ್ಕೆ ನಿಮ್ಮ ಪ್ರತಿಕ್ರಿಯೆ  ಏನೂ.. ನಾ ಅವಾಗ ಹೇಳಿದ್ದು ಒಂದೇ ಮಾತು..

"ಮೂರು ಕಾದಂಬರಿಗಳನ್ನು ಓದಿದೆ.. ಪಕ್ಕಕ್ಕಿಟ್ಟೆ.. ಚಿತ್ರಕಥೆ ಬರೆದೆ.. ಅದೇ ನಾಗರಹಾವು"

"ಸುಬ್ಬರಾಯರೇ.. ಒಂದು ಮಾತು.. ಬ್ರಾಹ್ಮಣರ ಮನೆಯ ಊಟ ನೋಡಿದ್ದೀರಾ.. ಊಟ ಮಾಡಿದೀರಾ.. ನಿಮಗೆ ಅರಿವಾಗದ ವಿಷಯವೇನಿದೆ ಹೇಳಿ... ಬಾಳೆ ಎಲೆ ಹಾಕಿ ಅಭ್ಗಾರ ಮಾಡಿದ ಮೇಲೆ.. ಒಂದೊಂದೇ ತಿನಿಸುಗಳನ್ನು ಬಡಿಸುತ್ತಾ ಹೋಗುತ್ತಾರೆ, ಪಾಯಸ, ಕೋಸಂಬರಿ, ಪಲ್ಯ ಉಪ್ಪು, ಉಪ್ಪಿನಕಾಯಿ, ಕಲಸಿದ ಅನ್ನ, ಹಪ್ಪಳ, ಸಂಡಿಗೆ, ಬರಿ ಅನ್ನ, ಅದರ ಮೇಲೆ ತೊವ್ವೆ, ಆಮೇಲೆ ತುಪ್ಪ.. ನಂತರ ಪರಿಶಿಂಚನ ಮಾಡಿ, ಚಿತ್ರಾಹುತಿ ಇಟ್ಟು, ಆಪೋಶನ ತೆಗೆದುಕೊಂಡು ನಂತರ ಊಟ ಶುರುಮಾಡುತ್ತೇವೆ.. ಇಡೀ ಬಾಳೆ ಎಳೆಯಲ್ಲಿ ಅಡಿಗೆ ಪದಾರ್ಥಗಳು ಇದ್ದರೂ, ನಮಗೆ ಇಷ್ಟವಾದದ್ದನ್ನು ತಿನ್ನುತ್ತಾ ಹೋಗುತ್ತೇವೆ.. ನಂತರ ಬರುವ ಸಾರು, ಹುಳಿ, ಮಜ್ಜಿಗೆ ಹುಳಿ, ತೊವ್ವೆ, ಮಜ್ಜಿಗೆ.. ಇದರ ಜೊತೆಯಲ್ಲಿ ಬರುವ ಸಿಹಿ ಖಾದ್ಯಗಳು, ಖಾರದ ಪದಾರ್ಥಗಳು ನಮಗೆ ಏನು ಬೇಕು ಅದು ತಿನ್ನುತ್ತೇವೆ.. ಯಾವುದು ಬೇಡವೋ ಅದನ್ನು ಬಿಡುತ್ತೇವೆ.. ಬೇಕಾದ್ದ ಪದಾರ್ಥಗಳನ್ನು ಕೇಳಿ ಹಾಕಿಸಿಕೊಳ್ಳುತ್ತೇವೆ.. ಬೇಡವಾದದ್ದು ಬಂದಾಗ ಕೈ ಅಡ್ಡ ಇತ್ತು ಬೇಡ ಅನ್ನುತ್ತೇವೆ.."

ಇದೆ ರೀತಿ ನಾನು ನಿಮ್ಮ ಕಾದಂಬರಿಗಳನ್ನು ಓದಿದ ಮೇಲೆ ಮಾಡಿದ್ದು.. ನಿಮ್ಮ ಕಾದಂಬರಿಗಳಲ್ಲಿ ನಾ ಆಯ್ದುಕೊಂಡ ಪಾತ್ರಗಳು.. ರಾಮಾಚಾರಿ, ಅವರ ಅಪ್ಪ, ಅಮ್ಮ.. ಚಾಮಯ್ಯ ಮೇಷ್ಟ್ರು ಅವರ ಹೆಂಡತಿ.. ಅಲಮೇಲು, ಅವರ ಅಪ್ಪ ಅಮ್ಮ, ವರದ, ತುಕಾರಾಂ, ಮೇರಿಯಮ್ಮ, ಮಾರ್ಗರೆಟ್, ವರದರಾಜು, ಪೈಲ್ವಾನ್ ಮತ್ತು ಜಲೀಲ   ಇವಿಷ್ಟು ನನ್ನ ಮನಸ್ಸಿನಲ್ಲಿ ಮೂಡಿದ ಪಾತ್ರಗಳು.. ಅದಕ್ಕೆ ಕೆಲವು ಪಾತ್ರಗಳನ್ನು ಸೇರಿಸಿಕೊಂಡೆ ಮತ್ತು ಕೆಲವು ಪಾತ್ರಗಳನ್ನು ಬದಲಿಸಿಕೊಂಡೆ. ಸಿದ್ಧಬಸಪ್ಪನ ಪಾತ್ರದ ಜೊತೆಗೆ ಇನ್ನು ಎರಡು ಪಾತ್ರಗಳಾಗಿ ಅವನ ಗೆಳೆಯರನ್ನು ಆರಿಸಿಕೊಂಡಿದ್ದೇನೆ, ಫಕೀರಪ್ಪನ ಪಾತ್ರಕ್ಕೆ ಬದಲಾಗಿ ನಾಜೂಕಯ್ಯನ ಪಾತ್ರ ಸೇರಿಸಿದೆ, ಶಾಲೆಯ ಮಾಸ್ತರಿಗೆ ಬದಲು ಪ್ರಿನ್ಸಿಪಾಲ ಶಾಮರಾಯರನ್ನು ಕರೆತಂದೆ.. ಶಾಲೆಯ ಬದಲಿಗೆ ಕಾಲೇಜು ತಂದೆ..  ಪ್ರೀತಿ ಪ್ರೇಮ ಎಂದು ಮಾರ್ಗರೆಟ್ ಮತ್ತು ಅಲಮೇಲು ಜೊತೆಯಲ್ಲಿ ನೆಡೆವ ಪ್ರಸಂಗಗಳನ್ನು ಒಳಗೆ ತರಲಿಲ್ಲ.. ವರದರಾಜುವಿನ ಇತಿಹಾಸ, ಮೇರಿಯಮ್ಮನ ಇತಿಹಾಸ, ಚಾಮಯ್ಯ ಮೇಷ್ಟ್ರ ಇತಿಹಾಸ, ಪ್ಲೇಗ್, ಸಿನಿಮಾ ಟೆಂಟ್ ಇವುಗಳನ್ನು ಬೇಡವೆಂದು ಬಿಟ್ಟೆ. ಶಾಲೆಯ ದಿನಗಳಲ್ಲಿ ರಾಮಚಾರಿ ಮತ್ತು ಸಂಗಡಿಗರ ತುಂಟತನ ವನ್ನು ಟೈಟಲ್ ಕಾರ್ಡ್ ತೋರಿಸುವಾಗ ಬರಿ ರಾಮಚಾರಿಯನ್ನಷ್ಟೇ ಮುಖ್ಯವಾಗಿಟ್ಟುಕೊಂಡು.. ಅವನ ಒಂದೆರಡು ಚೇಷ್ಟೆಗಳನ್ನು ಮಾತ್ರ ತೋರಿಸಿದೆ..ಮಿಕ್ಕಂತೆ ಹಾಡುಗಳು ನಮ್ಮ ಭಾರತದ ಸಿನಿಜಗತ್ತಿನ ಮುಖ್ಯ ಭಾಗಗಳು .. ಹಾಗಾಗಿ ರಾಮಾಚಾರಿಯ ಗುಣ ವಿಶೇಷತೆ ತಿಳಿಸಲು "ಹಾವಿನ ದ್ವೇಷ ಹನ್ನೆರಡು ವರುಷ" ಹಾಡು ಬಂತು.. ರಾಮಾಚಾರಿ ಮತ್ತು ಅಲಮೇಲುವಿನ ಪ್ರೀತಿ ಗುರುತಿಸಲು "ಕರ್ಪೂರದ ಗೊಂಬೆ ನಾನು" ಹಾಡು ಬರಬೇಕಾಯಿತು.. ಒಂದು ಗಂಡು ಎರಡು ಹೆಣ್ಣು .. ಇದರಲ್ಲಿ ಆಯ್ಕೆ ಎನ್ನುವ ಪ್ರಶ್ನೆ ಬಂದಾಗ.. ರಾಮಾಚಾರಿಗೆ ಸ್ಪಷ್ಟತೆ ಸಿಕ್ಕಿ ಅಲಮೇಲುವನ್ನು ಆಯ್ಕೆ ಮಾಡಿಕೊಳ್ಳುತ್ತಾನೆ ಆ ಸಂದರ್ಭಕ್ಕೆ "ಬಾರೆ ಬಾರೆ ಚಂದದ ಚೆಲುವಿನ  ತಾರೆ" ಹಾಡು ತೋರಿಸಿದೆ..

ಮಧ್ಯದಲ್ಲಿಯೇ ಸುಬ್ಬರಾಯರು "ಪುಟ್ಟಣ್ಣನವರೇ ಒಂದು ಮಾತು.. ನಿಮ್ಮನ್ನು ಮೆಚ್ಚಿದ್ದು ಬಾರೆ ಬಾರೆ ಹಾಡಿನ ಚಿತ್ರೀಕರಣ.. ಸ್ಲೋ ಮೋಷನ್ ನಲ್ಲಿ ಹಾಡನ್ನು ಚಿತ್ರೀಕರಿಸಿರುವುದು ಭಾರತದ ಚಿತ್ರರಂಗದ ಇತಿಹಾಸದಲ್ಲಿಯೇ ಮೊದಲು.. ನಿಮ್ಮ ಮಾತಿಗೆ ಕೊಂಚ ತಡೆ ಮಾಡುತ್ತಿದ್ದೇನೆ .. ಈ ಹಾಡಿನ ಬಗ್ಗೆ ಹೇಳಿ.. ಅಲಮೇಲುವನ್ನು ಸ್ಲೋ ಮೋಷನ್ ನಲ್ಲಿ.. ರಾಮಾಚಾರಿಯನ್ನು ಸಹಜ ವೇಗದಲ್ಲಿ ಚಿತ್ರೀಕರಿಸಿದ್ದರ ಬಗ್ಗೆ ಹೇಳಿ.. ಆಮೇಲೆ ನಿಮ್ಮ ಪ್ರತಿಕ್ರಿಯೆ ಮುಂದುವರೆಸಿ .. ಆಗಬಹುದೇ"

"ಆಗಬಹುದು ಸುಬ್ಬರಾಯರೇ.. ಕಾದಂಬರಿ ಬರೆದು ಇಂತಹ ಅದ್ಭುತ ಚಿತ್ರ ಮಾಡುವ ಅನುಕೂಲ ಮಾಡಿಕೊಟ್ಟಿದ್ದೀರಾ. .ಖಂಡಿತ ಹೇಳುವೆ.. ರಾಮಚಾರಿ ಆವೇಗಕ್ಕೆ ಸದಾ ಒಳಗಾಗುವ ವ್ಯಕ್ತಿತ್ವ . ಅವನು ಯಾರ ಮಾತಿಗೂ ಬಗ್ಗುವವನಲ್ಲ.. ಹರಿವ ನೀರಿದ್ದ ಹಾಗೆ.. ನೀರಿಗೆ ತಡೆ ಮಾಡೋಕೆ ಆಗುತ್ತಾ.. ಖಂಡಿತ ಇಲ್ಲ.. ಆ ದೃಷ್ಠಿ ಇಟ್ಟುಕೊಂಡು ರಾಮಾಚಾರಿಯ ದೃಶ್ಯವು ಸಹಜವಾದ ವೇಗದಲ್ಲಿದೆ.. ಅದೇ ಅಲುಮೇಲು ಸಮಾಜದ ಕಟ್ಟುಪಾಡಿಗೆ ಬಾಗಬೇಕಾದವಳು, ಅಪ್ಪ, ಅಮ್ಮ, ವರದ ಹದ್ದು ಕಾಯ್ದಂತೆ ಅವಳನ್ನು ಕಾಯುತ್ತಿದ್ದವರು.. ಹಾಗಾಗಿ ಅವಳು ತಗ್ಗಿ ಬಗ್ಗಿ ನಿಧಾನಕ್ಕೆ ನೆಡೆಯಬೇಕು ಎನ್ನುವುದನ್ನು ಸ್ಲೋ ಮೋಷನಿನಲ್ಲಿ ಚಿತ್ರಿಸಿದ್ದೇವೆ.. "

"ಭಲೇ ಭಲೇ.. ಅದ್ಭುತ ವಿವರಣೆ. ಹಾ ಸರಿ ಮುಂದುವರೆಸಿ"

"ರಾಮಚಾರಿಯ ಸಂಸಾರದಲ್ಲಿ ಹೆಚ್ಚು ಮಂದಿಯನ್ನು ಸೇರಿಸದೆ, ಅಪ್ಪ ಅಮ್ಮ ಇವನು ಮೂವರನ್ನೇ ಉಳಿಸಿಕೊಂಡೇ.. ಮನೆಗೆ ಸಹಾಯ ಮಾಡದವನು ಮಗನಲ್ಲ ಎಂದು ದೂರುವ ಅಪ್ಪ ಅಮ್ಮನಿಗೆ ಸ್ವಲ್ಪ ಆಧಾರವಾಗಿರಲು ಗೈಡ್ ಕೆಲಸ ಮಾಡುತ್ತಾ ಚಿತ್ರದುರ್ಗದ ಒನಕೆ ಓಬವ್ವನ ಕತೆಯನ್ನು ಸೇರಿಸಿ ದುರ್ಗ ಎಂದರೇನು ಹೇಗಿರುತ್ತೆ ಎಂದು ಕರುನಾಡಿಗೆ ತಿಳಿಸಬೇಕಿತ್ತು ಅದಕ್ಕೆ "ಕನ್ನಡ ನಾಡಿನ ವೀರರಮಣೀಯ" ಹಾಡು ಬಂತು.. ಅಲಮೇಲು ಮದುವೆಯಾಯಿತು.. ಬೇರೆ ದಾರಿ ಕಾಣದೆ ರಾಮಾಚಾರಿ ನಿಧಾನವಾಗಿ ಮಾರ್ಗರೇಟ್ ಪ್ರೇಮಕ್ಕೆ ಮಣಿಯುತ್ತಾನೆ.. ಎರಡು ಬೇರೆ ಬೇರೆ ಧರ್ಮ ಅದರ ಸಂಗಮವಾಗುತ್ತಿದೆ ಎಂದು "ಸಂಗಮ ಸಂಗಮ" ಹಾಡು ಚಿತ್ರೀಕರಿಸಿದೆ.. ಅಲಮೇಲುವಿನ ಮದುವೆ ಬಲವಂತದ ಮದುವೆ ಜೊತೆಯಲ್ಲಿ ಒಲ್ಲದ ಗಂಡ ತನ್ನ ಆಸೆ ಪೂರೈಸಿಕೊಂಡ ಮೇಲೆ ಅವಳನ್ನು ವ್ಯಾಪಾರದ ಸರಕಾಗಿ ಬಳಸಿಕೊಳ್ಳುವುದು ಮತ್ತು ಅವಳ ದುರಂತ ಕತೆಯನ್ನು "ಕತೆ ಹೇಳುವೆ ನನ್ನ ಕತೆ ಹೇಳುವೆ" ಎಂದು ತೋರಿಸಿದ್ದೇನೆ.. ಅಲಮೇಲು ರಾಮಚಾರಿಯನ್ನು ಪ್ರೀತಿಸುತ್ತಿದ್ದಾಳೆ ಎಂದು ಹೇಳಲು "ರಾಮಚಾರಿ ನೀ ಅಣ್ಣ ಅಂತ ಹೇಳಿದೆ.. ಆದರೆ ನಿನಗೆ ಆ ಸ್ಥಾನ ಕೊಟ್ಟಿಲ್ಲ.. ಈಗಲೂ ನನ್ನ ಜೊತೆ ಬಾಳುವೆ ಎಂದು ಹೇಳು.. ಇದನ್ನೆಲ್ಲಾ ಬಿಟ್ಟು ನಿನ್ನ ಜೊತೆ ಬಂದು ಬಿಡುತ್ತೇನೆ.. " ಎನ್ನುವ ಮಾತಿನಲ್ಲಿ ತೋರಿಸಿದ್ದೇನೆ.. ರಾಮಚಾರಿ ಈಗ ಮಾರ್ಗರೇಟ್ ಜೊತೆಯಲ್ಲಿ ಪ್ರೀತಿಸುತ್ತಿದ್ದಾನೆ ಎಂದು ತಿಳಿದ ಅವಳು "ಎಂಥಹ ;ಪರಿಸ್ಥಿತಿಯಲ್ಲಿಯೂ ಅವಳನ್ನು ಕೈಬಿಡಬೇಡ ಎಂಬ ಮಾತೆ ಚಾಮಯ್ಯ ಮೇಷ್ಟರ ಅವಸಾನಕ್ಕೆ ಕಾರಣವಾಗುತ್ತೆ.. ನಿಮ್ಮ ತ್ರಿವಳಿ ಕಾದಂಬರಿ ಓದಿ ನನಗೆ ಮೂಡಿಬಂದ ಕತೆಯ ಎಳೆ ಇದು.. ಅದನ್ನೇ ಜೋಪಾನವಾಗಿ ಹರಡಿ... ಶಾಲೆಯ ಬದಲಿಗೆ ಕಾಲೇಜು ತಂದೆ.. ರಾಮಾಚಾರಿಯ ತುಂಟತನ, ಹಠ ತೋರಿಸಲು ಶಾಮರಾಯರನ್ನು ಕಂಬಕ್ಕೆ ಕಟ್ಟುವ ದೃಶ್ಯ. ಜಲೀಲನ ಜೊತೆ ಗುದ್ದಾಟ.. ಇವುಗಳನ್ನು ಸೇರಿಸಿದೆ.. ಮಂಡಿ ಸಾಹುಕಾರನ ಬಳಿ ಕೆಲಸ ಕೊಡಿಸಲು ಪೈಲ್ವಾನ್ ಅವರ ಶಿಫಾರಸ್ಸಿನ ದೃಶ್ಯ ಹಾಗೆ ಇದೆ.. ಜೊತೆಯಲ್ಲಿ ಮಂಡಿ ಸಾಹುಕಾರನ ಗೆಳೆಯರನ್ನು ಸೇರಿಸಿದೆ.. ಇನ್ನೂ ತುಕಾರಾಂ ಮಾಡುವ ಗದ್ದಲಗಳು.. ಅವನು ಚಾಮಯ್ಯ ಮೇಷ್ಟ್ರಿಗೆ ರಾಮಾಚಾರಿಯ ಬಗ್ಗೆ ಹೇಳುವ ಚಾಡಿಮಾತು.. ಇವೆಲ್ಲಾ ಎಷ್ಟು ಬೇಕೋ ಅಷ್ಟು ತೆಗೆದುಕೊಂಡಿದ್ದೀನಿ.. ರಾಮಾಚಾರಿಯ ಪಾತ್ರವನ್ನು ಆರಂಭದಿಂದ ಕಡೆಯ ತನಕ ಯಾರಿಗೂ ಬಾಗದ ಅಸಾಮಿಯಾಗಿ ಚಿತ್ರಿಸಬೇಕೆಂದುಕೊಂಡಿದ್ದೆ.. ಸಾಮಾನ್ಯ ಚಿತ್ರದ್ ಅವಧಿ ಎರಡೂವರೆ ಅಥವಾ ಎರಡೂ ಮುಕ್ಕಾಲು ಘಂಟೆಯಲ್ಲಿ ಸಿನಿಮಾ ಮಾಡಬೇಕು... ತುಸು ಹೆಚ್ಚಾದರೂ ಜನರಿಗೆ ಬೋರ್ ಆಗಬಾರದು ನಿಮ್ಮ ಕತೆಯಲ್ಲಿ ಬರುತ ಹಲವಾರು ದೃಶ್ಯಗಳನ್ನು ಬಿಟ್ಟಿದ್ದೇನೆ.. ಶಾಲೆಯಿಂದ ಕಾಲೇಜಿಗೆ ವರ್ಗ ಮಾಡಿದ್ದು ಕೂಡ ಇದೆ ಕಾರಣಕ್ಕೆ.. ಶಾಲೆಯಲ್ಲಿ ಪ್ರೀತಿ ಪ್ರೇಮ ಈ ವಿಷಯಗಳು ಆಗಿನ ಕಾಲಕ್ಕೆ ಸರಿ ಹೊಂದುತ್ತಿರಲಿಲ್ಲ ಎನ್ನುವ ಭಾವ ಹೊತ್ತು ಕಾಲೇಜಿನಿಂದ ಕತೆ ಆರಂಭಿಸಿದೆ.. ಎಂದು ಇದು ನನ್ನ ವಿವರಣೆ ಸುಬ್ಬರಾಯರೇ.. "

"ಬೇಕಾದಷ್ಟು ಆಯ್ತು ಬಿಡಿ.. ಸುಂದರವಾಗಿದೆ ನಿಮ್ಮ ವಿವರಣೆ.. ಇರಲಿ ಬಿಡಿ. ನಾನು ಬರೆದದ್ದು ಲಕ್ಷ ಜನರಿಗೆ ತಲುಪಿತ್ತು.. ನೀವು ಚಿತ್ರೀಕರಿಸಿದ ಚಿತ್ರ ಕೋಟ್ಯಾಂತರ ಜನರಿಗೆ ತಲುಪಿದೆ.. ಹೋಗಲಿ ಬಿಡಿ ಆದದ್ದು ಆಯ್ತು.. ಅಂದ ಹಾಗೆ ನಾಗರಹಾವು ಹೊಸ ರೂಪದಲ್ಲಿ, ಹೊಸ ತಂತ್ರಜ್ಞಾನದಲ್ಲಿ ಮೂಡಿ ಬಂದಿದೆಯಂತೆ.. ಬನ್ನಿ ಇಬ್ಬರೂ ನೋಡಿ ಬರೋಣ.. "

"ಧನ್ಯವಾದಗಳು ಸುಬ್ಬರಾಯರೇ.. ಹೇಗೋ ನಿಮ್ಮ  ಮನಸ್ಸಿಗೆ ಸಂತಸ ಉಂಟು ಮಾಡಿತು ಅಂದರೆ ಅದಕ್ಕಿಂತ ಭಾಗ್ಯವೇನಿದೆ ಹೇಳಿ.. ನೆಡೆಯಿರಿ.. ನಾಗರಹಾವು ಕತೃವಿನ ಜೊತೆಯಲ್ಲಿ ಸಿನಿಮಾ ನೋಡುವ ಸದವಕಾಶ ನನಗೆ ಒದಗಿಸಿಕೊಟ್ಟ ನಿಮಗೆ ಅನಂತ ಧನ್ಯವಾದಗಳು!!!

(ಹೇಳಬೇಕಿಲ್ಲ... ಆದರೂ ಹೇಳುತ್ತೇನೆ.. ಇದೊಂದು ಕಾಲ್ಪನಿಕ ಬರಹ.. ಸುಬ್ಬರಾಯರ ಮಸಣದ ಹೂವು, ಚಂದವಳ್ಳಿಯ ತೋಟ ನಾಗರಹಾವು, ಒಂದು ಗಂಡು ಎರಡು ಹೆಣ್ಣು, ಸರ್ಪ ಮತ್ಸರ, ಚಂದನದ ಗೊಂಬೆ ಹೀಗೆ ಹತ್ತು ಹಲವಾರು ಸಿನೆಮಾಗಳಾಗಿರುವ ಅವರ ಕಾದಂಬರಿ ಆಧಾರಿತ ಚಿತ್ರಗಳನ್ನು ನೋಡಿದ್ದೇನೆ.. ಅಪಾರ ಗೌರವವಿದೆ ತ ರಾ ಸು ಅವರಲ್ಲಿ ಮತ್ತು ಅವರ ಬರವಣಿಗೆಯಲ್ಲಿ.. ಅದೇ ರೀತಿ ಹೆಮ್ಮೆಯ ನಿರ್ದೇಶಕ ಪುಟ್ಟಣ್ಣ ಕಣಗಾಲ್ ಅವರ ಅದ್ಭುತ ಚಿತ್ರಗಳು ಅವರ ತಾಂತ್ರಿಕ ಅಂಶಗಳಿಗೆ ಕೊಡುವ ಪ್ರಾಮುಖ್ಯತೆ, ಹಾಡುಗಳು ಸಂಭಾಷಣೆ, ದೃಶ್ಯವನ್ನು ಕಟ್ಟಿ ಕೊಡುವ ಅವರ ಪ್ರಬುದ್ಧತೆ ಇವುಗಳನ್ನು ಕಂಡು ಅವರ ಅಭಿಮಾನಿಯಾಗಿದ್ದೇನೆ.. ಈ ಇಬ್ಬರು ಕಲಾ ದಿಗ್ಗಜರು ಮಾತಾಡಿರಬಹುದು ಎನ್ನುವ ಒಂದು ಕಾಲ್ಪನಿಕ ಯೋಚನೆ ಮೂಡಲು ಕಾರಣ ಇವರಿಬ್ಬರು.. ಇವರ ಕೊಟ್ಟ ಶಕ್ತಿ ಮತ್ತು ಪ್ರೋತ್ಸಾಹವೇ ಈ ಬರವಣಿಗೆಗೆ ಮೂಲ ಪ್ರೇರಕ ಅಂತ ನಾ ನಿಸ್ಸಂಕೋಚವಾಗಿ ಹೇಳುವೆ. .. ಮತ್ತು ಈ ಲೇಖನ ಶ್ರೀಯುತ ತ ರಾ ಸುಬ್ಬರಾಯರಿಗೆ ಮತ್ತು ಶ್ರೀಯುತ ಪುಟ್ಟಣ್ಣ ಕಣಗಾಲ್   ಅವರ ಚರಣಕಮಲಗಳಿಗೆ ಸಮರ್ಪಿತ!!!)

Sunday, October 21, 2018

ನಾದ ನಮನ ಸುಂದರ ಸಂಜೆ !!!

ಮೈಸೂರು ಜಿಲ್ಲೆಯ ಪಿರಿಯಾಪಟ್ಟಣದ ತಾಲೂಕಿನ ಬಳಿಯ ಕಣಗಾಲ್  ಎಂಬ ಪುಟ್ಟ ಗ್ರಾಮದ ಒಂದು ಹಳ್ಳಿಯ ಮನೆಯ  ಜಗಲಿಯ ಮೇಲೆ ಮೂರು ಬಾಲಕರು ಚೌಕಾಭಾರ ಆಟವಾಡುತ್ತಿದ್ದರು.. 

ಕಣಗಾಲ್ ಸಹೋದರರು ಆಡಿ ಬೆಳೆದ ಮನೆ!
"ಹೋಗ್ರೋ ಆಟವಾಡಿದ್ದು ಸಾಕು.. ಸ್ವಲ್ಪ ಗುಡಿಯ ಕಸಗುಡಿಸಿ ಬನ್ರೋ" ಎಂದು ಅವರ ಅಪ್ಪ ಹೇಳಿದ್ದು ಕೇಳಿ.. ಮೂವರು ಪರಕೆಯನ್ನು ಹಿಡಿದು.. ಆ ಊರಿನ ಮುಖ್ಯ  ದೇಗುಲದ ಅಂಗಳವನ್ನು ಶ್ರದ್ದೆಯಿಂದ ಸ್ವಚ್ಛಗೊಳಿಸಿ ಮತ್ತೆ ಆಡಲು ಜಗಲಿಗೆ ಬಂದರು.. 
ಆ ಊರಿನ ಜನತೆ ಹೇಳುವ ಪ್ರಕಾರ ಕಣಗಾಲ್ ಸಹೋದರರು ಸದಾ ಈ ಗುಡಿಗೆ ಬರುತ್ತಿದ್ದರು 

ಆಟ ಕುತೂಹಲಕಾರಿಯಾಗಿತ್ತು.. ಅಷ್ಟರಲ್ಲಿ ಟುರ್ ಟುರ್ ಟ್ರಾ ಎನ್ನುತ್ತಾ ಜೋಗಿ ಸಿದ್ದರು ಮನೆಯ ಮುಂದೆ ಬಂದು.. "ಏನ್ರಪ್ಪ ಹೇಗೆ ನೆಡಿತಿದೆ ಆಟ" ಎಂದಾಗ.. ಅವರಲ್ಲಿ ದೊಡ್ಡ ಬಾಲಕ.. 
ನೆಡೆದಾಡಿ ಹೆಜ್ಜೆ ಗುರುತು ಮೂಡಿಸಿದ ಹಾದಿ 
"ಚೆನ್ನಾಗಿ ನೆಡಿತಿದೆ ಸ್ವಾಮ್ಗಳೇ .. ನೀವು ಭವಿಷ್ಯ ಹೇಳ್ತಿರಂತೆ.. ಯಾರೂ ಗೆಲ್ತಾರೆ ಅಂತ ಹೇಳಿ ಸ್ವಾಮ್ಗಳೇ"

ಆ ಜೋಗಿ ಸಿದ್ಧರು ನಗುತ್ತಾ.. 

"ಮಕ್ಕಳೆ . ನಿಮಗೆ ಈ ಆಟದ ಭವಿಷ್ಯ ಬೇಡ .ನಿಮ್ಮ ಭವಿಷ್ಯ ಹೇಳುತ್ತೇನೆ ಕೇಳಿ.. ದೊಡ್ಡವ ನೀನು...  ನಿನ್ನ ಹೆಸರು ಪ್ರಭಾಕರ ಶಾಸ್ತ್ರಿ ಅಲ್ಲವೇ.. ?..

ಚಕಿತನಾದ ಹುಡುಗ "ಹೌದು.. ನಿಮಗೆ ಹೇ.. " ಮಾತಿನ್ನೂ ಮುಗಿದಿರಲಿಲ್ಲ.. 

"ಇವನು ಪುಟ್ಟಣ್ಣ.. ಇವನು ನರಸಿಂಹ" ಎಂದು ಎರಡನೇ ಮತ್ತು ಮೂರನೇ ಬಾಲಕರ ಹೆಸರು ಹೇಳಿದಾಗ ..ಆಡುತ್ತಿದ್ದ ಕವಡೆಯನ್ನು ಹಾಗೆ ಇಟ್ಟು ಮೂವರು ಜಗಲಿಯಿಂದ ರಸ್ತೆಗೆ ನೆಗೆದರು .. ಮಳೆ ಬಂದು ತೊಪ್ಪೆಯಾಗಿದ್ದ ಮಣ್ಣಿನ ರಸ್ತೆ.. ಮಕ್ಕಳಿಗೆ ಬಟ್ಟೆ ಕೊಚ್ಚೆಯಾಗುತ್ತೆ ಎಂಬ ಅರಿವಿರಲಿಲ್ಲ.. ಅವರಿಗಿದ್ದದ್ದು ಕುತೂಹಲ... 

ದೊಡ್ಡವ "ಹೇಳಿ ಸ್ವಾಮಿಗಳೇ.. ನಮ್ಮ ಪರಿಚಯ ನಿಮಗೆ ಹೇಗೆ.. ನೀವು ಯಾರು.. ಎಲ್ಲಿಂದ ಬಂದಿರಿ.. ಹೇಗೆ ಬಂದಿರಿ.. ? ಹೀಗೆ ಪ್ರಶ್ನೆಗಳ ಸುರಿಮಳೆಯನ್ನೇ ಸುರಿಸಿದಾಗ.. 

ನಗುತ್ತ "ಬಾಲಕ.. ಆ ಪ್ರಶ್ನೆಗಳಿಗೆಲ್ಲ ಉತ್ತರ ಬೇಡ. .. ನಿಮಗೊಂದು ಭವಿಷ್ಯದಲ್ಲಿ ನೆಡೆಯುವ ಘಟನೆಯನ್ನು ಪೋಣಿಸಿ.. ಒಂದು ಘಟನೆಯನ್ನು ಹೇಳುತ್ತೇನೆ ಕೇಳಿ.. "

ಮೂವರು ಮೈಯೆಲ್ಲಾ ಕಿವಿಯಾಗಿ ಕೇಳುತ್ತಾ ಕುಳಿತರು.. ಪ್ರಪಂಚವೇ ಅವರಿಗೆ ಈ ಜೋಗಿ ಸಿದ್ಧರಾಗಿದ್ದರು.. ಅದು ಬಿಟ್ಟು ಮಿಕ್ಕಿದ್ದೆನು ಅವರ ಕಿವಿಗೆ ಕಣ್ಣಿಗೆ ಬೀಳುತ್ತಿರಲಿಲ್ಲ.. 

"ಬೆಂಗಳೂರಿನ ಸಾಂಸ್ಕತಿಕ ತಾಣ ರವೀಂದ್ರ ಕಲಾಕ್ಷೇತ್ರ.. ಅಲ್ಲಿ ಶ್ರೀ ವಿಳಂಬಿ ನಾಮ ಸಂವತ್ಸರ ದಕ್ಷಿಣಾಯಣ ಶರಧೃತು ಆಶ್ವಯುಜ ಮಾಸ ಶುಕ್ಲ ಪಕ್ಷದ ದಶಮಿಯಂದು ಒಂದು ಸುಂದರ ಸಮಾರಂಭ.. ಪ್ರಭಾಕರ ನಿನ್ನ "ಸಾವಿ"ರದ ಗೀತೆಗಳನ್ನು ಸಕಿ ಸಮೂಹ ಸಂಸ್ಥೆಗಳು "ನಾದ ನಮನ" ಎಂಬ ಸುಂದರ ಕಾರ್ಯಕ್ರಮದಲ್ಲಿ ಆಯೋಜಿಸುತ್ತಾರೆ.. ಅಲ್ಲಿ ನಿನ್ನ ಬಗ್ಗೆ ಮಾತಾಡುವುದಷ್ಟೇ ಅಲ್ಲದೆ.. ನಿನ್ನ ಗೀತೆಗಳ ಗಾಯನ ಇರುತ್ತದೆ ಮತ್ತು ನಿನ್ನ ಜೀವನದ ಸ್ಮರಣೀಯ ಕ್ಷಣಗಳ ಶ್ಲಾಘನೆ ನೆಡೆಯುತ್ತದೆ.. ನೆರೆದಿರುವ ನಿನ್ನ ಅಭಿಮಾನಿಗಳು ನಿನ್ನ ನೆನಪನ್ನು ಹೃದಯದಲ್ಲಿ ಹೊತ್ತು ಮನೆಗೆ ಹೋಗುತ್ತಾರೆ..ಆ ಒಲವಿನ ನೆನಪೇ ಹೃದಯಕೆ ಮಧುರ ಒಲವೇ ದೈವದ ಸಾಕ್ಷಾತ್ಕಾರ ಎನ್ನುತ್ತಾ ನಿನ್ನ ಗುಣಗಾನ ಮಾಡುತ್ತಾರೆ" ಎನ್ನುತ್ತಾ ಮುಂದಿನ ಮನೆಯ ಕಡೆ ಹೆಜ್ಜೆ ಇಟ್ಟರು.. 

ಬಾಲಕನಿಗೆ ಅರ್ಥವಾಗಲಿಲ್ಲ.. ಮೂರು ಘಂಟೆಯ ಸಿನೆಮಾವನ್ನು ಒಂದು ಹತ್ತು ಕ್ಷಣದಲ್ಲಿ ಹೇಳಿದಂತೆ ಭಾಸವಾಯಿತು.. ಆರಂಭ ಮಧ್ಯಭಾಗ ಅಂತ್ಯ ಎಲ್ಲವೂ ಗೊಂದಲಮಯ.. ಅವರನ್ನೇ ಹಿಂಬಾಲಿಸಿ  "ಸ್ವಾಮಿಗಳೇ ಅದೇನು ಸರಿಯಾಗಿ ಹೇಳಿ.. ಭವಿಷ್ಯ ಹೇಳುತ್ತೀನಿ ಅಂದ್ರಿ .. ಭವಿಷ್ಯ ಹೇಳಲಿಲ್ಲ ..ಘಟನೆ ಹೇಳುತ್ತೀನಿ ಅಂದ್ರಿ.. ಘಟನೆಯನ್ನು ಪೂರ್ತಿ ಹೇಳಲಿಲ್ಲ.. ಏನು ವಿಷಯ ಹೇಳಿ.. "

ಟುರ್ ಟುರ್ ಟ್ರಾ ಎಂದು ಸದ್ದು ಮಾಡುತ್ತಾ "ಮಗೂ ನೀನು ಪ್ರಭಾಕರ.. ಕಣಗಾಲ್ ಪ್ರಭಾಕರ ಶಾಸ್ತ್ರೀ ಎಂದು ಕನ್ನಡದ ಚಿತ್ರ ಜಗತ್ತಿನಲ್ಲಿ ಬರಹಗಾರ, ನಟ, ನಿರ್ದೇಶಕ, ನಿರ್ಮಾಪಕ, ಅದ್ಭುತ ಸಾಹಿತಿ ಎಂದು ಹೆಸರು ಮಾಡುತ್ತೀಯ.. ನಿನ್ನ ಬರವಣಿಗೆ ನಿನಗೆ ಉತ್ಸಾಹ ತುಂಬುತ್ತದೆ, ಶಕ್ತಿ ಕೊಡುತ್ತದೆ.. ಕನ್ನಡ ಚಿತ್ರ ಜಗತ್ತಿನಲ್ಲಿ ಅಪರೂಪದ ವ್ಯಕ್ತಿಯಾಗುತ್ತೀಯ.. ಅಂದಿನ ಕಾರ್ಯಕ್ರಮದ ಬಗ್ಗೆ ತುಸು ಮಾತು..ಪುಟ್ಟದಾಗಿ ಹೇಳುವೆ.. ಕೇಳು.. "

                                                                    ****
ಪರದೆ ಸರಿಯುತ್ತದೆ.. ನಿನ್ನ ಭಾವಚಿತ್ರಕ್ಕೆ ಪುಷ್ಪ ಮಾಲಾರ್ಪಣೆಯಾಗುತ್ತದೆ.. ನಿನ್ನ ಬಂಧುಗಳು ಅದನ್ನು ನೋಡಿ ಭಾವುಕರಾಗುತ್ತಾರೆ.. ನಿನ್ನ ಪುಟ್ಟ ಪರಿಚಯವಾಗುತ್ತದೆ.. ನಂತರ ಕಾರ್ಯಕ್ರಮ ಶುರು.. 

"ಶ್ರೀ ಚಾಮುಂಡೇಶ್ವರಿ ಅಮ್ಮ ಶ್ರೀ ಚಾಮುಂಡೇಶ್ವರಿ"  ಹಾಡಿಗೆ ಅದ್ಭುತ ನೃತ್ಯ ಮಾಡುವ ಮಕ್ಕಳು.. 
"ಆಡೋಣ ಒಲವಿನ ರಾಗಮಾಲೆ" ಎನ್ನುತ್ತಾ ಜೀವನದ ಉತ್ಸಾಹಕ್ಕೆ ತುಂಬುವ "ಶುಭ ಮಂಗಳ ಸುಮುಹೂರ್ತವೇ"  ಎಂದು ಜೀವನದಲ್ಲಿ ಸಂತಸ ತುಂಬಿಕೊಳ್ಳುತ್ತಾ ಪ್ರೇಮವಿಲ್ಲದೇ ಇರಲು ಸಾಧ್ಯವೇ.. ಅಸಾಧ್ಯ ಎಂದು "ಪ್ರೇಮ ಮಧುರಾಕ್ಷರ ಪ್ರೇಮ ಅಜರಾಮರ" ಎನ್ನುತ್ತಾ ಪ್ರೇಮದ ಅದ್ಭುತ ಶಕ್ತಿಯನ್ನು ಹೊಗಳಬೇಕಾದರೆ ತಿರುಪತಿ ಗಿರಿವಾಸನ ಕೃಪೆ ಸದಾ ಇರಬೇಕು ಕಣಯ್ಯಾ ಎಂದು "ತಿರುಪತಿ ಗಿರಿವಾಸ ಶ್ರೀ ವೆಂಕಟೇಶ.. ನೀ ಒಲಿದ ಮನೆ ಮನೆಯೂ ಲಕ್ಷ್ಮಿ ನಿವಾಸ" ಎಂದ ಮೇಲೆ.. ಇನ್ನೇನೂ "ಅತಿ  ಮಧುರ ಅನುರಾಗ ಜೀವನ ಸಂಧ್ಯಾರಾಗ" ಆಗಲೇ ಬೇಕಲ್ಲವೇ.. ಜೀವನದಲ್ಲಿ ಆನಂದ ತುಂಬಿ ಹರಿಯುವಾಗ ಕರುನಾಡಿನ ಜೀವನದಿ ಕಾವೇರಿಯ ಬಣ್ಣನೆ ಮಾಡುತ್ತಾ "ಕೊಡಗಿನ ಕಾವೇರಿ.. ಕಾವೇರಿ ನೀ ಬೆಡಗಿನ ವೈಯ್ಯಾರಿ" ಎನ್ನುತ್ತಾ ಸಂಗಾತಿಯನ್ನು ಮತ್ತು ಜೀವನದಿಯನ್ನು ಬಣ್ಣಿಸುತ್ತಾ ಸಾಗುವ ಹಾಡು ಬರೆದ ನೀನು . ದೇಶದ ಸ್ಥಿತಿಯನ್ನು ಕಂಡು ಯುವ ಪೀಳಿಗೆಗೆ ಸಂದೇಶ ನೀಡುವ "ಇಂದಿನ ಹಿಂದೂ ದೇಶದ ನವ ಯುವಕರೇ ನವ ಯುವತಿಯರೇ" ಎಂದು ಬರೆದ ಹಾಡು ಅಮರವಾಗುತ್ತೆ.. ಈ ಪೀಳಿಗೆಗೆ ಸರಿದಾರಿಯಲ್ಲಿ ನೆಡೆಸುವ ಮೊದಲ ಗುರುಗಳು ತಂದೆ ತಾಯಿಯರು.. ಅವರ ಮಹತ್ವವನ್ನು "ತಾಯಿಯ ತಂದೆಯ ಮಮತೆ ವಾತ್ಸಲ್ಯ"  ಎಂದು ಹೃದಯದಲ್ಲಿ ಮಮತೆಯ ಝೇಂಕಾರ ಹುಟ್ಟಿಸುತ್ತಾ "ನಾನು ನೀನು ಜೋಡಿ.. ಒಲವೇ ನಮ್ಮಯ ಒಡನಾಡಿ" ಎಂದು ಆ ಮಧುರ ಪ್ರೇಮಕ್ಕೆ ನಮನ ಹೇಳುತ್ತಾ .. ಆ ನಾದ ಸರಸ್ವತಿಗೆ ತಲೆಬಾಗುತ್ತಾ ನಟರಾಜನನ್ನು ಹೊಗಳುತ್ತಾ "ನಟನ ವಿಶಾರದ ನಟಶೇಖರ" ಎನ್ನುವ ನಿನ್ನ ಮನಸ್ಸು ಸದಾ ಹೇಳುವುದು ಕನ್ನಡ ಭಾಷೆಯ ಬಗ್ಗೆ "ಒಲವಿನ ಪ್ರಿಯಲತೆ ಅವಳದೇ ಚಿಂತೆ.. ಅವಳ ಮಾತೆ ಮಧುರ ಗೀತೆ.. ಅವಳೇ ಎನ್ನ ದೇವತೆ" ಎನ್ನುವ ನಿನ್ನ ಕರುನಾಡ ಅಭಿಮಾನ ಸದಾ ಅಮರ ಮಧುರ.. ಅಮರ ಪ್ರೇಮಿಗಳನ್ನು ಸದಾ ಉಲ್ಲಸಿತವಾಗಿಡುವ "ಸುವ್ವಿ ಸುವ್ವಿ ಸುವ್ವಾಲೆ" .. ಪ್ರೇಮ ಒಂದು ದೇವರು ಅದಕ್ಕೆ ಕೈ ಮುಗಿಯುವ "ಶರಣೆಂಬೆನಾ ಶಶಿ ಭೂಷಣ".. ಈ ನಾಡಿನ ಮಣ್ಣಲ್ಲಿ ಹುಟ್ಟಿದ್ದೇ ನನ್ನ "ಬಹುಜನ್ಮದ ಪೂಜಾಫಲ" ಎನ್ನುವ ನಿನ್ನ ಮಾತು ಸದಾ ಗುನುಗುನಿಸುತ್ತದೆ..ಹರನಿಗೆ ಸಮನಾರು ಇಲ್ಲ ಅಲ್ಲವೇ ಅಂದರೆ ಅದಕ್ಕೆ ನೀ ಹೇಳುವುದು "ಶರಣು ವಿರುಪಾಕ್ಷ ಶಶಿಶೇಖರ ಪಂಪಾವತಿ ಪ್ರಣಯ ಪರಮೇಶ್ವರಾ".. ಹೀಗೆ ನಿನ್ನ ಪ್ರತಿಭೆಗೆ ನಮಸ್ಕರಿಸಲೇ.. ಅಥವಾ ಬೆನ್ನು ತಟ್ಟಲೇ ಎಂದ ಕೂಡಲೇ "ಇದೆ ಹೊಸ ಹಾಡು ಹೃದಯ ಸಾಕ್ಷಿ ಹಾಡು" ಎನ್ನುತ್ತೀಯಾ.. ಅಕ್ಷರಗಳಲ್ಲೇ ಮಜ್ಜನ ಮಾಡಿಸುವ ನೀನು ಅಕ್ಷರಗಳಿಗೆ ಕೈಮುಗಿಯುತ್ತ ಹೇಳುವುದು "ನಾ ಕಂಡೆ ನಿನ್ನಲ್ಲೇ ಮನೆ ದೇವರ" ಅಬ್ಬಾ ಎಂಥಹ ಧೈರ್ಯ ನಿನದು .. ಅದು ಹೇಗೆ ಬಂತು ಈ ಧೈರ್ಯ ಎಂದು ನನ್ನ ಹುಬ್ಬು ಮೇಲೆ ಏರಿದಾಗ ನೀ ನನಗೆ ಸಮಾಧಾನ ಮಾಡುತ್ತಾ ಉತ್ತರ ಕೊಡುವೆ "ಮಾತೆಗೆ ಮಿಗಿಲಾದ ದೇವರಿಲ್ಲ ಭೀತಿಗೆ ಹಿರಿದಾದ ಭೂತವಿಲ್ಲ" ಎಂದು ಎಲ್ಲವೂ ಮಾತೃದೇವೋಭವ ಎನ್ನುವೆ.. ಈ ಪೀಳಿಗೆ ಜನತೆ ನಿನ್ನ ಬಗ್ಗೆ ತಿಳಿಯದೆ ಯಾರಪ್ಪಾ ಈ ಮಹಾನುಭಾವ ಎಂದೊಡನೆ ನಿನ್ನ ಲೇಖನೀ ಬರೆದೇ ಬಿಡುತ್ತೆ "ಯಾವೂರವ್ವ ಏನ್ ಚಂದ ಕಾಣಿಸ್ತೌನೇ" ಎಂದು ನಿನ್ನ ಪರಿಚಯ ಮಾಡಿಕೊಡುತ್ತೀಯ.. ನೀ ಕರುನಾಡಿನ ಜನಮಾನಸದಲ್ಲಿ ಸದಾ ಹಸಿರಾಗಿರುತ್ತೀಯ ಎಂಬ ನನ್ನ ಮಾತಿಗೆ ನೀ ಒಮ್ಮೆ ನಕ್ಕರು ನೀ ಬರೆದ ಹಾಡು "ಕನ್ನಡ ನಾಡಿನ ರಸಿಕರ ಮಾನವ ಸೂರೆಗೊಂಡ" ನಾಯಕಿ ಅಂತ ಹೇಳಲೇ ನಾಯಕ ಅಂತ ಹೇಳಲೇ ಎನ್ನುವ ಗೊಂದಲ ಮೂಡಿಸುತ್ತದೆ.. ಇದೆಲ್ಲ ನಿನಗೆ ಹೇಗೆ ಸಾಧ್ಯವಾಯಿತು ಎಂದು ನಾನು ಅಚ್ಚರಿಗೊಂಡೆ.. ಆದರೆ ಅದು ನಿನಗೆ ಒಲಿದ ಅಕ್ಷರಗಳ ಸಾಕ್ಷಾತ್ಕಾರ.. ತಮಾಷೆ ಗೊತ್ತಾ ನಿನ್ನ ಪ್ರೀತಿಯ ತಮ್ಮ ನಿರ್ದೇಶಿಸುವ ಚಿತ್ರದಲ್ಲಿ ನೀ ಬರೆದ ಹಾಡು ಅಮರವಾಗಿ ಉಳಿಯುತ್ತೆ ಮತ್ತು ಆ ಹಾಡನ್ನು ನಿನ್ನ ತಮ್ಮ ಅಷ್ಟೇ ಸ್ಮರಣೀಯವಾಗಿ ಚಿತ್ರೀಕರಿಸುತ್ತಾನೆ.. ಏಕೆ ಗೊತ್ತೇ ನಿಮ್ಮ ಪ್ರತಿಭೆ ಆ ದೇವಾ ಕೊಟ್ಟ ವರ ಅದಕ್ಕೆ ನಾ ಹೇಳೋದು "ಒಲವೇ ಜೀವನ ಸಾಕ್ಷಾತ್ಕಾರ.. ಒಲವೇ ಮರೆಯದ ಮಮಕಾರ.. " ಶುಭವಾಗಲಿ ಕಂದ.. 

ಕಾರ್ಯಕ್ರಮದ ಕೆಲವು ದೃಶ್ಯಗಳನ್ನು ನಿನ್ನ ಕಣ್ಣ ಮುಂದೆ ತಂದಿಡುತ್ತೇನೆ.. ನೋಡು ಆನಂದಿಸು.. ಸೊಗಸಾದ ವಿವರಣೆ.. ಸೊಗಸಾದ ಸಂಗೀತ ... ಅಚ್ಚುಕಟ್ಟಾದ ಗಾಯನ.. ವಾದ್ಯವೃಂದ.. ನೃತ್ಯ.. ಎಲ್ಲವೂ ಸೊಗಸು.. !

















ಟುರ್ ಟುರ್ ಟ್ರ್ರಾ ಎಂದು ಸದ್ದು ಮಾಡುತ್ತಾ ಮತ್ತೆ ಹಿಂದೆ ತಿರುಗಿ ನೋಡದೆ ಜೋಗಿ ಸಿದ್ಧರು ಆ ಊರಿನ ಬೀದಿ ಹಾದು ಹೋದರು.. 

****
"ಮಗು ಪ್ರಭಾಕರ.. ಪ್ರಭಾಕರ ಏಳಪ್ಪ.. ಬೇಗ ಎದ್ದು ಸ್ನಾನ ಮಾಡಿ.. ಸಂಧ್ಯಾವಂದನೆ ಮಾಡಿ.. ಆ ಗುಡಿಯಲ್ಲಿ ಲಲಿತಾ ಸಹಸ್ರ ನಾಮ ಹೇಳಿ ಬಾರಪ್ಪ"

ಕಣ್ಣುಜ್ಜುತ್ತಾ ಎದ್ದ ಮುದ್ದು ಪ್ರಭಾಕರ ... ಸುತ್ತ ನೋಡಿದ.. ತಮ್ಮ ಪುಟ್ಟಣ್ಣ, ನರಸಿಂಹ ಶಾಸ್ತ್ರಿ ತನ್ನ ಹೊದ್ದಿಕೆಯನ್ನೇ ಹಂಚಿಕೊಂಡು ಇನ್ನೂ ಮಲಗಿದ್ದಾರೆ.. ಅವರ ಮುದ್ದು ಮುಖ ನೋಡುತ್ತಾ.. ಇಬ್ಬರ ಕೆನ್ನೆಯನ್ನೊಮ್ಮೆ ಸವರಿ.. ಪ್ರಾತಃಕರ್ಮ ಮುಗಿಸಲು ಹೊರಟ. ಮನಸ್ಸು ಹಗುರಾಗಿತ್ತು.. ತಾನು ಕಂಡದ್ದು ಕನಸೋ ನನಸೋ ಅರಿವಾಗಲಿಲ್ಲ.... 

ಆದರೆ ಕನ್ನಡ ಕುಲಕೋಟಿಗೆ ಅದ್ಭುತ ಸಾಹಿತಿ ಸಿಗುತ್ತಾರೆ.. ತಾಯಿ ಭುವನೇಶ್ವರಿಗೆ ಅಕ್ಷರಗಳ ಪೂಜೆ ಸಲ್ಲಿಸಲು ಅದ್ಭುತ ಬರಹಗಾರ ಬೆಳ್ಳಿ ಪರದೆಯನ್ನು ಬೆಳಗುತ್ತಾರೆ ಎನ್ನುವ ಸೂಚನೆ ಸಿಕ್ಕ ಕನಸು ಮುಂದೆ ನನಸಾಗಿದ್ದು ಇತಿಹಾಸ.. 

*****

ಕಣಗಾಲ್ ಊರಿನ ಸುಂದರ ದೃಶ್ಯ 

ಆಡಿ ಬೆಳೆದ ಮನೆ ಹಲವಾರು ಕನಸಿನ ತಾಣವಿದು 

ಕನಸು ಹೊತ್ತು ಓಡಾಡಿದ ಬೀದಿ 

ಆ ಶಕ್ತಿಗಳು ಬೆಳೆದ ಮನೆಯಂಗಳದಲ್ಲಿ ಈ ಜೀವಿಯೂ ಕೂತಿತ್ತು ಎನ್ನುವ ಹೆಮ್ಮೆ 

ಹೌದು ಸರ್ ನಾನೇ ನರಸಿಂಹ ಶಾಸ್ತ್ರಿ ಕಣಗಾಲ್ ಸಹೋದರರಲ್ಲಿ ನಾನು ಒಬ್ಬ 

ಶ್ರೀ ನರಸಿಂಹ ಶಾಸ್ತ್ರಿಗಳ ಜೊತೆಯಲ್ಲಿ ನಮ್ಮ ಸ್ನೇಹಿತರು 

ಆ ದಿವ್ಯಶಕ್ತಿಯ ಜೊತೆಯಲ್ಲಿ 
(ವಿಜಯದಶಮಿಯಂದು ಅಕ್ಟೋಬರ್ ೧೯ ೨೦೧೮ ರವೀಂದ್ರ ಕಲಾಕ್ಷೇತ್ರದಲ್ಲಿ ನಾದ ನಮನ ಎಂದು ಶ್ರೀ ಕಣಗಾಲ್ ಪ್ರಭಾಕರ್ ಶಾಸ್ತ್ರೀ ಅವರ ಅಮರ ಗೀತೆಗಳನ್ನು ಹಾಡಿ ರಂಜಿಸಿದ ಸಕಿ ಸಮೂಹ ಸಂಸ್ಥೆಗಳ ಅದ್ಭುತ ಕಾರ್ಯಕ್ರಮವನ್ನು ನೋಡುತ್ತಾ ಹೋದ ಹಾಗೆ ಸುಮಾರು ನಾಲ್ಕು ವರ್ಷಗಳ ಹಿಂದೆ.. ಶ್ರೀ ಪುಟ್ಟಣ್ಣ ಕಣಗಾಲ್ ಅವರ ಮನೆಯನ್ನು ಹುಡುಕುತ್ತಾ ಹೋಗಿ ಅವರು ಓಡಾಡಿದ ಮನೆ.. ದೇವಸ್ಥಾನ.. ಅವರು ಹೆಜ್ಜೆ ಇಟ್ಟು .. ಚಿತ್ರ ಜಗತ್ತಿನಲ್ಲಿ ಹೆಜ್ಜೆ ಗುರುತು ಮೂಡಿಸಿದ ಆ ರಸ್ತೆ.. ಅವರ ತಮ್ಮ ಶ್ರೀ ನರಸಿಂಹ ಶಾಸ್ತ್ರೀ ಅವರನ್ನು ರಾಮನಾಥಪುರದ ಅವರ ಮನೆಯಲ್ಲಿ ಭೇಟಿ ಮಾಡಿ ಬೆಳ್ಳಿಮೋಡ ಚಿತ್ರ ರೂಪುಗೊಂಡ ಅದ್ಭುತ ಕತೆಯನ್ನು ಅವರ  ಬಾಯಲ್ಲಿ ಸುಮಾರು ಒಂದೂವರೆ ಘಂಟೆ ಕೇಳಿದ್ದು .. ಅವರಿಗೆ ಪ್ರವರ ಹೇಳುತ್ತಾ ನಮಸ್ಕರಿಸಿದ್ದು ಹಾಗೆ ಕಣ್ಣ ಮುಂದೆ ಬಂತು.. ಅದೇ ಗುಂಗಿನಲ್ಲಿ ಮೂಡಿದ ಲೇಖನವಿದು ..ಓದಿರಿ ನಲಿಯಿರಿ..ಆಶೀರ್ವದಿಸಿ!!!)

Tuesday, September 18, 2018

ಧರ್ಮ ಯಾವಾಗಲೂ ಜಯವನ್ನೇ ನೋಡುತ್ತವೆ ಎನ್ನುವ ಧರ್ಮ ವಿಜಯ (1959) (ಅಣ್ಣಾವ್ರ ಚಿತ್ರ ೧೨ / ೨೦೭)

ಪೂರ್ವಾಗ್ರಹ ಪೀಡಿತರಾಗಿ ಸಿನಿಮಾಗಳನ್ನು ನೋಡಬಾರದು.. ಅನೇಕ ಬಾರಿ ಈ ರೀತಿಯ ಅನುಭವಗಳಾಗಿದ್ದರೂ ಮತ್ತೆ ಮತ್ತೆ ಅದೇ ಕೂಪಕ್ಕೆ ಜಾರುತ್ತೇನೆ.. ಮತ್ತೆ ಖುಷಿ ಪಡುತ್ತೇನೆ.. ಮತ್ತೆ ಹೀಗೆ ಪುನರಪಿ ಜಾರಂ ಪುನರಪಿ ಏಳುಂ..

ಬಲು ದಿನಗಳೇ.. ಅಲ್ಲ ಬಹಳ ವಾರಗಳಾದ ಮೇಲೆ ಮತ್ತೆ ಅಣ್ಣಾವ್ರ ಜೈತ್ರ ಯಾತ್ರೆ ಮುಂದುವರೆಸಬೇಕೆಂಬ ಹಠ ಹೊತ್ತು ಧರ್ಮ ವಿಜಯ ಚಿತ್ರ ನೋಡಿದೆ.. ಕಳೆದ ಹನ್ನೊಂದು ಸಿನೆಮಾಗಳು ನೋಡಿದ್ದ ನನಗೆ ಇದು ಹೀಗೆ ಇರಬಹುದು ಎನ್ನುವ ಒಂದು ಸೂತ್ರ ಹೊಳೆದಿತ್ತು...

ಈ ಚಿತ್ರ ಬಿಚ್ಚಿಕೊಳ್ಳುತ್ತಾ ಹೋದ ಹಾಗೆ ಒಂದು ರೀತಿಯ ವಿಭಿನ್ನ ಅನುಭವ.. ಕಾಲದ ಚಕ್ರದಲ್ಲಿ ಹೇಗೆ ಬದಲಾವಣೆಗಳಾಗುತ್ತವೆ ಎನ್ನುವ ಒಂದು ನೋಟ ಇಲ್ಲಿ ಸಿಗುತ್ತದೆ..

ಆರಂಭಿಕ ದೃಶ್ಯದಲ್ಲಿ ಆ ರಾಜ್ಯದ ಸೇನಾಧಿಪತಿ ರೋಗಗ್ರಸ್ತನಾಗಿ ಮಲಗಿರುತ್ತಾನೆ ..ಅವನಿಗೆ ಸ್ವಪ್ನ ಅಂದರೂ ಸರಿ ಅಥವಾ ಹಿಂದಿನ ಜನ್ಮದ ನೆನಪು ಅಂದರೂ ಸರಿ.. ಒಂದು ಘಟನೆಯನ್ನು ಬಿಂಬಿಸುತ್ತದೆ.

ಒಂದು ಹೆಂಗಸು.. ಎಂಜಲು ಕೈಯಲ್ಲಿಯೂ ಕಾಗೆ ಓಡಿಸದಂತಹವಳು.. ಅವಳನ್ನು ಪರೀಕ್ಷಿಸಲು ಯಮಧರ್ಮ ಸನ್ಯಾಸಿಯಾಗಿ ಬಂದು.. ಭವತಿ ಭಿಕ್ಷಾಂದೇಹಿ ಎನ್ನುತ್ತಾನೆ .. ಹೆಂಗಸು ಹೊಟ್ಟೆ ತುಂಬಾ ತಾ ಊಟ ಮಾಡುತ್ತಾಳೆಯೇ ವಿನಃ.. ಹೊರಗೆ ಬಂದು ನೋಡುವುದಿಲ್ಲ.. ಆ ಬಿಕ್ಷು ಸಂಜೆಯ ತನಕ ಅಲ್ಲಿಯೇ ನಿಂತಿರುತ್ತಾನೆ.. ಕಡೆಗೆ ಕುಪಿತನಾಗಿ ಬೆಳಗಿನಿಂದ ಸಂಜೆ ತನಕ ನಿಲ್ಲಿಸಿದ್ದೀಯಾ.. ಭಿಕ್ಷೆ ನೀಡಬಾರದೇ ಎಂದಾಗ.. ತೊಗರಿಯ ಸಿಪ್ಪೆಯನ್ನು ಭಿಕ್ಷೆ ಎಂದು ಹಾಕಿ ಬಯ್ದು ಕಳಿಸುತ್ತಾಳೆ.  ನರಕಲೋಕಕ್ಕೆ ಬರುವ ಯಮ.. ಆ ತೊಗರಿಯ ಹೊಟ್ಟನ್ನು ಚೆಲ್ಲುತ್ತಾನೆ.. ಅಲ್ಲಿ ತೊಗರಿಯ ಗಿಡ ಬೆಳೆಯುತ್ತದೆ..

 ಆಯಸ್ಸು ತುಂಬಿದ ಅವಳನ್ನು ನರಕಲೋಕಕ್ಕೆ ಕರೆದೊಯ್ದಾಗ ಹೊಟ್ಟೆ ಹಸಿವು ಎನ್ನುತ್ತಾಳೆ.. ಆಗ ಆ ಯಮಧರ್ಮರಾಜ ಅವಳಿಗೆ ಅದೇ ತೊಗರಿಯ ಗಿಡವನ್ನು ತೋರಿಸಿ. ಹೋಗು ಅದನ್ನು ತಿನ್ನು ಎಂದು ಕಳಿಸುತ್ತಾನೆ.. ಆದರೆ ಅವಳು ತೊಗರಿ ಕಾಯಿಯನ್ನು ಸುಳಿದಾಗ ಒಳಗೆ ಖಾಲಿ ಇರುತ್ತದೆ.. ನನಗೆ ನೀ ಸಿಪ್ಪೆಯನ್ನು ಕೊಟ್ಟೆ ಅದೇ ನಿನಗೂ ಸಿಕ್ಕಿದೆ.. ಎನ್ನುತ್ತಾನೇ ಯಮ..

ಈ ದೃಶ್ಯ ಸೇನಾಧಿಪತಿಯ ಸ್ಮೃತಿಪಟಲದಲ್ಲಿ ಬಂದು.. ತನ್ನ ಹೆಂಡತಿಗೆ. ಇದ್ದದ್ದನ್ನೆಲ್ಲ ದಾನ ಮಾಡಿ ಬಿಡು ಎಂದು ಹೇಳಿ ಇಹಲೋಕ ತ್ಯಜಿಸುತ್ತಾನೆ.. ಇದ್ದ ಸಂಪತ್ತೆಲ್ಲವನ್ನು ದಾನ ಮಾಡಿ ತನ್ನ ಮಗನೊಂದಿಗೆ ಊರು ಬಿಟ್ಟು ಹೋಗುತ್ತಾಳೆ ಆತನ ಹೆಂಡತಿ..

ಇತ್ತ ಆ ಊರಿನ ರಾಜ. ಋಷಿಮುನಿಗಳ ಜೊತೆಯಲ್ಲಿ ಚರ್ಚಿಸಿ.. ದಾನ  ಧರ್ಮ ಮಾಡಿದೆ.. ಜನರಿಗೆ ಉಪಕಾರವಾಗಲಿ ಎಂದು ಕೆರೆ ಕಟ್ಟಿಸಿದೆ ಆದರೆ.. ನೀರು ಬರಲಿಲ್ಲ ಅಂದಾಗ.. ಆ ಮುನಿಪುಂಗವ "ಮಾಡಿದ್ದಕ್ಕೆ ಮನವೇ ಸಾಕ್ಷಿ.. ತೋಡಿದ್ದಕ್ಕೆ ಜಲವೇ ಸಾಕ್ಷಿ" ಎನ್ನುತ್ತಾ ದಾನ ಧರ್ಮ ಮಾಡಿದ್ದು ಸಾಲದು.. ಹೆಚ್ಚು ಮಾಡು.. ಮಳೆ ಬರುತ್ತದೆ.. ಕೆರೆ ತುಂಬುತ್ತದೆ ಎನ್ನುತ್ತಾರೆ.. ಆದ್ರೆ ರೀತಿಯಲ್ಲಿ ಮಾಡಿದ ಮೇಲೆ ಕೆರೆ ತುಂಬುತ್ತದೆ..

ಊರಿನ  ಪ್ರಮುಖ ಶ್ರೀಮಂತರು ದಾನ ಮಾಡಿ ಹೆಸರುಮಾಡಬಹುದು .. ಬಿರುದುಗಳನ್ನು ಕೊಡುತ್ತೇವೆ ಎಂದು ಸಾರಿಸುತ್ತಾನೆ . ಜೊತೆಯಲ್ಲಿ ಅಗಲಿದ ಸೇನಾಧಿಪತಿಯ ಮಗನನ್ನು ಕರೆಸಿ ಸರದಾರನನ್ನಾಗಿ ಮಾಡುತ್ತಾರೆ.. ಬಾಲ್ಯದಲ್ಲಿಯೇ ಬಡತನದಿಂದ ರೋಸಿ ಹೋಗಿದ್ದ  ಆ ಹುಡುಗ.. ದಾನ ಧರ್ಮ, ಅತಿಥಿ ಸತ್ಕಾರ ಎನ್ನುವುದೆಲ್ಲ ಸುಳ್ಳು ಎನ್ನುತ್ತಾ.. ಆ ರೀತಿ ಮಾಡುತ್ತಿದ್ದ ತನ್ನ ತಾಯಿಯನ್ನು ಬಹುವಾಗಿ ತಡೆಯಲು ಪ್ರಯತ್ನ ಪಡುತ್ತಾನೆ.. ಆದರೆ ಫಲಕಾರಿಯಾಗುವುದಿಲ್ಲ.. ಜೊತೆಯಲ್ಲಿ ಆತನ ಹೆಂಡತಿ ಕೂಡ ತನ್ನ ಅತ್ತೆಯ ಮಾರ್ಗದರ್ಶನದಲ್ಲಿಯೇ ನೆಡೆಯುತ್ತಾ.. ಪತಿಗೆ ಬುದ್ದಿ ಹೇಳಲು ಪ್ರಯತ್ನ ಪಡುತ್ತಾಳೆ..

ರಾಜ್ಯದಲ್ಲಿ ನೆಡೆಯುತ್ತಿದ್ದ ಈ ಸುಳ್ಳು ಸುಳ್ಳು ದಾನ ಧರ್ಮಗಳ ಬಗ್ಗೆ ಕುಪಿತನಾಗಿ ರಾಜ ಸಭೆಯಲ್ಲಿ ಪುರ ಪ್ರಮುಖರ ವಿರುದ್ಧ ಮಾತಾಡಿ ರಾಜ ಅವಕೃಪೆ ಪಾತ್ರನಾಗಿ ಮಾತಾಡಿದ್ದಕ್ಕಾಗಿ ರಾಜ್ಯದಿಂದ ಗಡೀಪಾರಾಗುತ್ತಾನೆ.. ಇತ್ತ ತನ್ನ ತಾಯಿ ಮತ್ತು ಹೆಂಡತಿ.. ದಾನ ಧರ್ಮ ಮಾಡುವ ಕೆಲಸದಿಂದ ವಿಮುಖರಾಗದೆ ಇದ್ದದ್ದನ್ನು ಕಂಡು.. ಕೋಪಗೊಂಡು ಮನೆಯನ್ನು ಬಿಟ್ಟು ಪಕ್ಕದ ಊರಿಗೆ ಹೋಗುತ್ತಾನೆ..

ಹಸಿವು, ಕೋಪ, ಆತಂಕ.. ಎಲ್ಲವೂ ಸೇರಿಕೊಂಡು..ದಾರಿ ಕಾಣದಂತಾಗುತ್ತಾನೆ.. ಊರಿನ ಜನರ ಮೌಢ್ಯವನ್ನು ಹೋಗಲಾಡಿಸಿ .. ಪ್ರಾಣಿ ಬಲಿಯನ್ನು ತಪ್ಪಿಸುತ್ತಾನೆ. .. ಆದರೆ ದಾರಿಗಳ್ಳರ ದಾಳಿಗೆ ಸಿಲುಕಿದ ಜನರನ್ನು ರಕ್ಷಿಸಲು ಹೋಗಿ ತನ್ನ ಕೈಯನ್ನು ಕಳೆದುಕೊಳ್ಳುತ್ತಾನೆ.. ತನ್ನ ತಾಯಿ ಮಡದಿಯನ್ನು ಭೇಟಿ ಮಾಡಲು ತನ್ನ ರಾಜ್ಯಕ್ಕೆ ಬರುವ ಇವನನ್ನು ಹಿಡಿದು ರಾಜಸಭೆಗೆ ಕರೆತಂದು.. ಗಲ್ಲಿಗೆ ಹಾಕುವ ಶಿಕ್ಷೆಗೆ ಗುರಿಯಾಗುತ್ತಾನೆ.. ಆದರೆ ದೇವರ ಅನುಗ್ರಹ.. ಇವನದೇನು ತಪ್ಪಿಲ್ಲ.. ಪುರಪ್ರಮುಖರ ಲಂಚಗುಳಿತನ.. ಹೆಸರು ಮಾಡಲು ಅಡ್ಡ ದಾರಿ ಹಿಡಿದು ರಾಜ ಬೊಕ್ಕಸವನ್ನು ಬರಿದು ಮಾಡುವ ಕೋಶಾಧಿಕಾರಿ..  ಹೆಣ್ಣಿನ ಸಹವಾಸಕ್ಕೆ ಹಾತೊರೆದು ತಪ್ಪು ದಾರಿ ಹಿಡಿವ ಸಿರಿವಂತ.. ಹೀಗೆ ಅವಿವೇಕಭಾವ ಹೊತ್ತ ರಾಜ..ಇದರಿಂದ ಪ್ರಕೃತಿ ಮಾತೆ ಕುಪಿತಗೊಂಡು ಕೆರೆ ತೂತು ಬಿದ್ದು.. ಊರು ಕೊಚ್ಚಿ ಹೋಗುವ ಪರಿಸ್ಥಿತಿ ನಿರ್ಮಾಣವಾದಾಗ ಮತ್ತೆ ಸನ್ಯಾಸಿ ಬಂದು.. ಇಲ್ಲಿ ಆದ ಅಚಾತುರ್ಯ ಹೇಳುತ್ತಾ.. ಸಾಧ್ವಿಯೊಬ್ಬಳು ಭಕ್ತಿಯಿಂದ ನಮಸ್ಕರಿಸಿದರೆ ಕೆರೆ ತೂತು ಮುಚ್ಚುವುದೆಂದು ಹೇಳಿ.. ಸರದಾರನ ಹೆಂಡತಿಯನ್ನು ಕರೆದು ನಮಸ್ಕರಿಸಲು ಹೇಳುತ್ತಾರೆ.. ಅದರಂತೆ ಎಲ್ಲವೂ ಸರಿ ಹೋಗುತ್ತದೆ.. ಸರದಾರನ ನೇಣು ಶಿಕ್ಷೆ ತಪ್ಪಿಸುತ್ತದೆ.. ಮತ್ತೆ ತಪ್ಪಿತಸ್ಥರಿಗೆ ಶಿಕ್ಷೆಯಾಗುತ್ತದೆ..

ಹೀಗೆ ಒಂದು ಸರಳ ಕಥೆಯನ್ನು ಅಚ್ಚುಕಟ್ಟಾಗಿ ಹೇಳುವ ವಿಶಿಷ್ಟ ಪ್ರಯತ್ನ ಈ ಚಿತ್ರದ್ದಾಗಿದೆ.. ಎಲ್ಲೂ ವೈಭವೀಕರಣವಿಲ್ಲ.. ಕತೆಯನ್ನು ಹೇಳುವ ಪ್ರಯತ್ನ ಮಾತ್ರ ಮಾಡಿದ್ದಾರೆ.. ಆದರೆ ಈ ಕತೆಯೊಳಗೆ ನುಗ್ಗಿ ಬರುವ ಅನೇಕ ದೃಶ್ಯಗಳು, ಸಂಭಾಷಣೆಗಳು , ಪಾತ್ರಧಾರಿಗಳ ಅಭಿನಯ ಈ ಚಿತ್ರವನ್ನು ಮೇಲೆತ್ತಿದೆ..

ಸರದಾರನ ಪಾತ್ರದಲ್ಲಿ ಅಚ್ಚುಕಟ್ಟಾಗಿ ಮಾಡಿರುವ ರಾಜ್.. ಭಾಷ ಪ್ರಯೋಗ.. ಮುಖಾಭಿನಯ.. ಇಷ್ಟವಾಗುತ್ತದೆ.. ನರಸಿಂಹರಾಜು ಅವರ ಜೊತೆಯಲ್ಲಿನ ಕೆಲವು ಹಾಸ್ಯ ದೃಶ್ಯಗಳು ಸೊಗಸಾಗಿವೆ.. ಚಿತ್ರದಿಂದ ಚಿತ್ರಕ್ಕೆ ಅವರ ಅಭಿನಯ ನೋಡುವುದೇ ಒಂದು ಖುಷಿ.. ಪಾತ್ರಕ್ಕೆ ಬೇಕಾಗುವಷ್ಟು ಅಭಿನಯ ಕೊಡುವ ಕಲೆ ಸಿದ್ಧಿಯಾಗುತ್ತಿರುವ ಲಕ್ಷಣಗಳು ಈ ಚಿತ್ರದಲ್ಲಿ ಕಾಣುತ್ತದೆ.. ಕುದುರೆ ಸವರಿ.. ಕತ್ತಿಯಲ್ಲಿ ಹೊಡೆದಾಟ.. ಕೋಲಿನಲ್ಲಿ ಹೊಡೆದಾಟ.. ಕೋಪ ಬಂದಾಗ ನಿಯಂತ್ರಣದ ಅಭಿನಯ.. ರಾಜ್ ಬೆಳೆಯುತ್ತಿರುವ ಸಂಕೇತ ಸಿಗುತ್ತದೆ..
ಸರದಾರನಾಗಿ ರಾಜ್ 

ಇದು ರಾಜ್ ಚಿತ್ರ ಅನ್ನೋದಕ್ಕಿಂತ ಎಲ್ಲರ ಚಿತ್ರ ಎನ್ನಬಹುದು..ಕಾರಣ ಎಲ್ಲರಿಗೂ ಸಮಾನ ಅಭಿನಯಕ್ಕೆ ಅವಕಾಶವಿದೆ.. ರಾಜನ ಪಾತ್ರಧಾರಿ.. ಜಂಗಮ ಪಾತ್ರಧಾರಿಯಾಗಿ ರಾಮಚಂದ್ರ ಶಾಸ್ತ್ರಿ.. ರಾಜ್ ಹೆಂಡತಿಯಾಗಿ ಹರಿಣಿ.. ಆತನ ಅಮ್ಮನ ಪಾತ್ರಧಾರಿ.. ಇಷ್ಟವಾಗುತ್ತಾರೆ..
ಸೋರಟ್ ಅಶ್ವತ್, ವಾದಿರಾಜ್ ಮತ್ತು ಹರಿಣಿ 
ರಾಜ್ ಅವರ ಮಾವನ ಪಾತ್ರದಲ್ಲಿ ಸೋರಟ್ ಅಶ್ವಥ್ ಉತ್ತಮ ಅಭಿನಯ ನೀಡಿದ್ದಾರೆ.. ಜಿಪುಣಾಗ್ರೇಸರನಾದ ಈತ.. ಹೆಣ್ಣಿನ  ಒನಪು ವಯ್ಯಾರ ನೋಡುವುದಕ್ಕೆ  ಆ ಊರಿನಲ್ಲಿದ್ದ ಚಂಚಲೆಯನ್ನು ಆತನ ಸಂಗಡಿಗರ ಜೊತೆಯಲ್ಲಿ ಕರೆದು ನೃತ್ಯವನ್ನು ನೋಡುತ್ತಾನೆ.. ಅವರು ಸಂಭಾವನೆ ಕೊಡಿ ಎಂದಾಗ ಚಿನ್ನದ ನಾಣ್ಯದ ಥೈಲಿಯನ್ನು ತಂದು.. ಅಲ್ಲಾಡಿಸಿ ಶಬ್ದ ಕೇಳಿಸಿ.. ಅದನ್ನು ನೆಲದ ಮೇಲೆ ಸುರಿದು ತೋರಿಸುತ್ತಾನೆ..
ತನ್ನ ಮಗಳು ನಿರ್ಗತಿಕಳಾಗಿ ತನ್ನ ಅಪ್ಪನ ಹತ್ತಿರ ಸಹಾಯ ಕೇಳಲು ಬಂದಾಗ.. ಅಯ್ಯ್ಯೋ ಸುಮ್ಮನೆ ನನ್ನ ನೋಡೋಕೆ ಏಕೆ ಬಂದೆ.. ನಾ ಚೆನ್ನಾಗಿದ್ದೀನಿ ..ಸಹಾಯ ಬಿಟ್ಟು ಬೇರೆ ಏನೇ ಕೇಳು.. ಕೊಡುತ್ತೇನೆ.. ಸರಿ ಮಗಳೇ ಹೋಗಿ ಬಾ.. ಆಶೀರ್ವಾದ ನಿನಗೆ ಎನ್ನುತ್ತಾ ಅವಳನ್ನು ಕಳಿಸಿ ಲಕ್ಷ್ಮಿಯ ಫೋಟೋ ಮುಂದೆ ನಿಂತು.. ನಿನ್ನ ಮೇಲಿನ ಅಭಿಮಾನ.. ಮನುಷ್ಯರನ್ನು ಪಿಶಾಚಿಯನ್ನಾಗಿ ಮಾಡುತ್ತದೆ.. ಮಗಳಿಗೆ ಸಹಾಯ ಮಾಡಲಾಗಲಿಲ್ಲ ಎಂದು ಗೋಳಾಡುವ ಪುಟ್ಟ ದೃಶ್ಯ ಮನಸ್ಸೆಳೆಯುತ್ತದೆ.. 

ಅಷ್ಟೇನೆ ಎಂದಾಗ.. ನೀವು ನೃತ್ಯವಾದಿ ಕಣ್ಣಿಗೆ ಮತ್ತು ಸಂಗೀತದಿಂದ ಕಿವಿಗೆ ಖುಷಿಪಡಿಸಿದಿರಿ.. ನಾನು ನಾಣ್ಯ ತೋರಿಸಿ ಮತ್ತು ಸಡ್ಡು ಕೇಳಿಸಿ ನಿಮಗೆ ಖುಷಿ ಪಡಿಸಿದ್ದೇನೆ.. ಸರಿ ಹೋಯ್ತು ಅಲ್ವೇ.. ಎನ್ನುತ್ತಾನೆ. .. ಸರಳ ಮಾತುಗಳು ಆದರೆ ಅದನ್ನು ಹೇಳುವ ಶೈಲಿ ಸೊಗಸಾಗಿದೆ..

ವಂಚಕರನ್ನು ಬಯಲಿಗೆ ಎಳೆಯುವ ಪಾತ್ರದಲ್ಲಿ ನರಸಿಂಹರಾಜು ಚಿತ್ರದುದ್ದಕ್ಕೂ ಆವರಿಸಿಕೊಳ್ಳುತ್ತಾರೆ.. ಮುದ್ದಾದ ಅಭಿನಯ... ತಂತ್ರಕ್ಕೆ ಪ್ರತಿತಂತ್ರ ಹೂಡುತ್ತಾ.. ಸಾಗುವ ಅವರ ಪಾತ್ರದ ಅಭಿನಯ ಸೊಗಸಾಗಿದೆ..
ನರಸಿಂಹರಾಜು 
ಪುಟ್ಟ ಪಾತ್ರವಾದರೂ ಗಮನ ಸೆಳೆಯುವ ಪಾತ್ರದಲ್ಲಿ ಲೀಲಾವತಿ ಅಭಿನಯ ಸೊಗಸಾಗಿದೆ.. ರಾಜ್ ಅವರ ಪತ್ನಿಯಾಗಿ ಹರಿಣಿ ಮುಗ್ಧವಾಗಿ ಅಭಿನಯಿಸಿದ್ದಾರೆ..

ಮತ್ತೊಂದು ಪುಟ್ಟ ಪಾತ್ರದಲ್ಲಿ ವಾದಿರಾಜ್ ಹೇಳುವ ಮಾತು "ಏನು ಶ್ರೀಮಂತರೇ ನಿಮ್ಮ ಕುದುರೆಗೆ ನೀರು ಕುಡಿಸೋಲ್ಲವೇ.. ಕೂತವರಿಗೆ ಕುಡಿಸುತ್ತದೆ" ಆ ದೃಶ್ಯವನ್ನು ನೋಡಬೇಕು ಖುಷಿ ಪಡಬೇಕು..

ಚಿತ್ರದ ಕೆಲವು ಮುಖ್ಯ ಸನ್ನಿವೇಶಗಳು ಕೆಳಗಿವೆ
ಸಿರಿವಂತರ ಅವಗುಣಗಳನ್ನು ಬಯಲಿಗೆ ಎಳೆಯುವ ದೃಶ್ಯ 

ಜಿಪುಣಾಗ್ರೇಸರನ ಬುದ್ದಿವಂತಿಕೆ 

ನರಸಿಂಹರಾಜು ಬುದ್ದಿವಂತಿಕೆ 

ರಾಜ್ ಮತ್ತು ರಾಜು 

ಮನಸೆಳೆಯುವ ಪುಟ್ಟ ಪಾಠದಲ್ಲಿ ರತ್ನಾಕರ್ ಜೊತೆ ರಾಜ್ 

ಸುಂದರ ಜೋಡಿಯಾಗಿ ರಾಜ್ ಮತ್ತು ಹರಿಣಿ ಈ ಚಿತ್ರದಲ್ಲಿ 

ಜಿಕೆ ವೆಂಕಟೇಶ್ ಅವರ ಸಂಗೀತವಿರುವ, ಎಸ ಏನ್ ವರ್ಮಾ ಅವರ ಛಾಯಾಗ್ರಹಣವಿರುವ ಈ ಚಿತ್ರವನ್ನು ಎಚ್ ಎಂ ಬಾಬಾ ಪ್ರೊಡಕ್ಷನ್ಸ್ ನಲ್ಲಿ ಏನ್ ಜಗನ್ನಾಥ್ ನಿರ್ದೇಶಿಸಿದ್ದಾರೆ.. ೧೯೫೯ರಲ್ಲಿ ತೆರೀಕಂಡ ಈ ಚಿತ್ರ ತನ್ನ ಸರಳ ಕಥೆಯನ್ನು ಅಚ್ಚುಕಟ್ಟಾಗಿ ತೆರೆಗೆ ತಂದಿದ್ದಾರೆ...

ಧರೆಯಲ್ಲಿ ಧರ್ಮವಿರಬೇಕು. ಧರ್ಮವೇ ನಮ್ಮನ್ನು ಕಾಪಾಡುತ್ತದೆ ಎನ್ನುವ  ಸಂದೇಶವನ್ನು ಸಾರುವ ಚಿತ್ರ ರಾಜ್ ಅವರ ಹನ್ನೆರಡನೆಯ ಚಿತ್ರವಾಗಿ ಬಂದಿದೆ.